ಆ ಹೆಣ್ಣು ಮಗುವಿಗೆ ಇನ್ನೂ
ಎರಡು ವರ್ಷವಾಗಿತ್ತಷ್ಟೇ. ಕಾರ್ಗಿಲ್ ಯುದ್ದದಲ್ಲಿ ತನ್ನ ತಂದೆ ಕ್ಯಾಪ್ಟನ್ ಮನ್ದೀಪ್ ಸಿಂಗ್ರವರನ್ನು
ಕಳೆದುಕೊಂಡು ಅನಾಥಳಾಗಿದ್ದಳು. ಆಕೆ ಬೆಳೆದಂತೆಲ್ಲಾ ಯುದ್ಧದ ಬಗ್ಗೆ ಅಸಹ್ಯ ಮತ್ತು ಅಸಹನೆಯನ್ನು ಬೆಳೆಸಿಕೊಂಡಳು.
ತನ್ನ ತಂದೆಯನ್ನು ಕೊಂದ ಯುದ್ದ ಆಕೆಯ ಮನಸ್ಸನ್ನು ಘಾಸಿಮಾಡಿ ಮಾಯದ ಗಾಯವನ್ನು ಮೂಡಿಸಿದ್ದಂತೂ ಸತ್ಯ.
ಮುಂದೆ ಬೆಳೆದು ದೊಡ್ಡವಳಾದಂತೆ ಯುದ್ದವನ್ನು ದ್ವೇಷಿಸಿದಳು, ಶಾಂತಿಯನ್ನು ಬಯಸಿದಳು. ಯುದ್ದದ ಮಾರಿಗೆ
ಬಲಿಯಾಗಿ ತನ್ನಂತೆ ಅನಾಥವಾಗಿರುವ ಅಸಂಖ್ಯಾತ ಮಕ್ಕಳ ಬಗ್ಗೆ ಮರುಕಪಟ್ಟಳು. ಕಾಲೇಜು ಸೇರಿದ ನಂತರವೂ
ಯುದ್ಧ ವಿರೋಧಿ ಚಳುವಳಿಗಳಲ್ಲಿ ಭಾಗವಹಿಸಿದಳು. ಯುದ್ಧದಾಹದ ಬಗ್ಗೆ ಪ್ರತಿಫಟಿಸಿದಳು. ಆಕೆ.. ಗುರ್ಮೆಹರ್
ಕೌರ್. ದೆಹಲಿಯ ಲೇಡಿ ಶ್ರೀರಾಮ ಕಾಲೇಜಿನ ಇಂಗ್ಲೀಷ್ ಸಾಹಿತ್ಯದ ವಿದ್ಯಾರ್ಥಿನಿ.
ಹೀಗೆಯೇ “ಯುದ್ಧದಾಹಿಗಳ ವಿರುದ್ಧ ಕ್ರಮ
ಕೈಗೊಳ್ಳಿ” ಎಂಬ ವಿಷಯದ ಮೇಲೆ ನಡೆದ ಯುದ್ಧವಿರೋಧಿ ಸುದ್ದಿಗೋಷ್ಟಿಯಲ್ಲಿ
ತಾನು ಭಾಗವಹಿಸಿದ್ದನ್ನು 2016 ನವೆಂಬರ್ 6 ರಂದು ಗುರ್ಮೆಹರ್ ತನ್ನ ಪೇಸ್ಬುಕ್ಕಿನಲ್ಲಿ ಹಾಕಿಕೊಂಡಿದ್ದಳು.
ಅದೇ ರೀತಿ 2017 ಫೆ.21 ರಂದು ದೆಹಲಿಯ ರಾಮಜಸ್ ಕಾಲೇಜಿನಲ್ಲಿ “ಪ್ರತಿಭಟನೆಯ ಸಂಸ್ಕೃತಿ” ಎನ್ನುವ ವಿಷಯದ ಬಗ್ಗೆ ವಿಚಾರಸಂಕಿರಣವೊಂದನ್ನು
ಆಯೋಜಿಸಿತ್ತು. ಇದರಲ್ಲಿ ದೆಹಲಿಯ ಜೆಎನ್ಯು ಕಾಲೇಜಿನಲ್ಲಿ ಕನ್ಹಯ್ಯನವರ ಹೋರಾಟದ ಸಹಭಾಗಿಗಳಾಗಿದ್ದ
ವಿದ್ಯಾರ್ಥಿ ನಾಯಕರಾದ ಶೆಹ್ಲಾ ರಶೀದ್ ಮತ್ತು ಉಮರ್ ಖಾಲಿದ್ ಅವರು ಭಾಗವಹಿಸಬೇಕಿತ್ತು. ಆದರೆ.. ಈ
ಇಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ಸಂಘಪರಿವಾರದ ಅಂಗಸಂಸ್ಥೆ ಎಬಿವಿಪಿ ವಿರೋಧಿಸಿ ಗದ್ದಲ
ಆರಂಭಿಸಿ ಹಲ್ಲೆ ಮಾಡಿ ಕಾರ್ಯಕ್ರಮ ರದ್ದಾಗುವಂತೆ ನೋಡಿಕೊಂಡಿತು. ಕೆಲವಾರು ವಿದ್ಯಾರ್ಥಿಗಳು ಹಾಗೂ
ಶಿಕ್ಷಕರೂ ಗಾಯಗೊಂಡರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಲ್ಲೆಗಳ ಮೂಲಕ ಹತ್ತಿಕ್ಕುವ ಎಬಿವಿಪಿಯ
ಬಗ್ಗೆ ಗುರ್ಮೆಹರ್ಗೆ ಅಸಾಧ್ಯವಾದ ಅಸಹನೆಯುಂಟಾಗಿದ್ದರಲ್ಲಿ ಅತಿಶಯವೇನಿಲ್ಲಾ. ಒಂದು ಭಿತ್ತಿಚಿತ್ರ್ರದಲ್ಲಿ
“ನಾನು
ಎಬಿವಿಪಿಗೆ ಹೆದರುವುದಿಲ್ಲಾ” ಎಂದು ಬರೆದು ಹಿಡಿದುಕೊಂಡು ಪೇಸ್ಬುಕ್ಕಿನಲ್ಲಿ ಪ್ರಕಟಿಸುವ
ಮೂಲಕ ತನ್ನ ಅಸಹನೆಯನ್ನು ಹಾಗೂ ಪ್ರತಿಭಟನೆಯನ್ನು ಸಾತ್ವಿಕವಾಗಿಯೇ ಕೌರ್ ಹೊರಹಾಕಿದರು. ಎಬಿವಿಪಿಯ
ಗೂಂಡಾಗಿರಿಯಿಂದಾ ರೋಸಿಹೋದ ಬೇರೆಲ್ಲಾ ವಿದ್ಯಾರ್ಥಿಗಳಿಗೆ ಈ ಬಿತ್ತಿಚಿತ್ರ ಪ್ರೇರಣೆಯನ್ನು ನೀಡಿತು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಬಿತ್ತಿಚಿತ್ರವು ಎಬಿವಿಪಿ ವಿರುದ್ಧ ವಿದ್ಯಾರ್ಥಿ ಚಳುವಳಿಯನ್ನು
ತೀವ್ರಗೊಳಿಸಿತು.
ಇದರಿಂದ ಬೆಚ್ಚಿಬಿದ್ದಿತು
ಸಂಘ ಪರಿವಾರ. ರೊಚ್ಚಿಗೆದ್ದ ಎಬಿವಿಪಿ ಎಂಬ ವಟುಗಳ ಪಡೆ ಕೌರಳ ಪೇಸ್ಬುಕ್ಕನ್ನು ಜಾಲಾಡ ತೊಡಗಿತು.
ಒಂದು ವರ್ಷದ ಹಿಂದೆ ಚಿತ್ರೀಕರಿಸಿದ್ದ “ರಾಮನ ದನಿ” ಎನ್ನುವ ವಿಡಿಯೋದ ಭಿತ್ತಿಚಿತ್ರವನ್ನು
ಹುಡುಕಿ ಕೈಗೆತ್ತಿಕೊಂಡಿತು. ಆ ವಿಡಿಯೋದಲ್ಲಿ ಕೆಲವಾರು ಸ್ಟಿಲ್ ಚಿತ್ರಿಕೆಗಳಿದ್ದವು. ಕಾರ್ಗಿಲ್
ಯುದ್ಧದಲ್ಲಿ ತನ್ನ ತಂದೆ ಕ್ಯಾಪ್ಟನ್ ಮನ್ದೀಪ್ ಸಿಂಗ್ ಹುತಾತ್ಮರಾದ ನಂತರ ತಾನು ಅನುಭವಿಸಿದ ನೋವು
ಹಾಗೂ ಅದಕ್ಕೆ ಕಂಡುಕೊಂಡ ಪರಿಹಾರಗಳನ್ನು ಬಿತ್ತಿಚಿತ್ರದಲ್ಲಿ ಬರೆಯುವ ಮೂಲಕ ಈ ಹೆಣ್ಣುಮಗು ತನ್ನ
ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ಅಂತಹ ಹಲವು ಬಿತ್ತಿಚಿತ್ರಗಳಲ್ಲಿ ಒಂದು ಮಾತ್ರ ಎಬಿವಿಪಿ ವಟುಗಳಿಗೆ
ಆಕರ್ಷನೀಯವಾಗಿ ಕಂಡಿತು. ಯಾಕೆಂದರೆ ಅದರಲ್ಲಿ ಪಾಕಿಸ್ತಾನದ ಹೆಸರಿತ್ತು. ಪಾಕಿಸ್ಥಾನದ ಹೆಸರು ಎಲ್ಲಿಯೇ
ಕಂಡರೂ ದೇಶಭಕ್ತಿಯ ಉನ್ಮಾದ ಕೆರಳುವ ಹಾಗೆ ಸಂಘಪರಿವಾರವು ತನ್ನ ಎಲ್ಲಾ ಅಂಗ ಉಪಾಂಗಗಳಿಗೂ ಬ್ರೇನ್ವಾಷ್
ಮಾಡಿರುವುದು ಬಹಿರಂಗ ಸತ್ಯ. “ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ, ಯುದ್ಧ ಕೊಂದಿತು” ಎನ್ನುವ ಕೌರಳ ಪ್ಲೇಕಾರ್ಡ
ಒಂದನ್ನು ಹೆಕ್ಕಿಕೊಂಡು ಎಬಿವಿಪಿಗೆ ಹೆದರುವುದಿಲ್ಲವೆಂದ ವಿದ್ಯಾರ್ಥಿನಿಯನ್ನು ಭಾರತವಿರೋಧಿ ದೇಶದ್ರೋಹಿ
ಎಂದು ಬಿಂಬಿಸುವ ಪ್ರಯತ್ನವನ್ನು ಸಂಘಿಗಳು ಶುರುವಿಟ್ಟುಕೊಂಡವು. ಎಬಿವಿಪಿಗೆ ಹೆದರಲ್ಲ ಎನ್ನುವ ಪ್ಲೇಕಾರ್ಡ
ಜೊತೆಗೆ ...ಪಾಕಿಸ್ತಾನ ಕೊಂದಿಲ್ಲಾ ಎನ್ನುವ ಪ್ಲೇಕಾರ್ಡನ್ನೂ ಸಾಮಾಜಿಕ ಜಾಲತಾಣಗಳಲ್ಲಿ ತೇಲಿಸಿ ಕೌರಳನ್ನು
ಮುಳುಗಿಸಲು ಶಡ್ಯಂತ್ರ ರಚಿಸಲಾಯಿತು. ಈ ಎರಡೂ ಪ್ಲೇಕಾರ್ಡ ನೋಡಿದವರು ಆಕೆಯನ್ನು ‘ದೇಶದ್ರೋಹಿ ಎಂದು ತೀರ್ಮಾನಿಸಬೇಕು
ಹಾಗೂ ಯಾರೆಲ್ಲಾ ಸಂಘಪರಿವಾರದ ಅಂಗಗಳನ್ನು ವಿರೋಧಿಸುತ್ತಾರೋ ಅವರೆಲ್ಲಾ ದೇಶದ್ರೋಹಿಗಳು ಎಂಬುದು ಜನರ
ಮನಸ್ಸಲ್ಲಿ ಉಳಿಯಬೇಕು’ ಎನ್ನುವುದು ಈ ಶಡ್ಯಂತ್ರದ ಹಿಂದಿರುವ ಹುನ್ನಾರವಾಗಿತ್ತು.
ಆದರೆ ಅಸಲಿಯತ್ತೇನೆಂದರೆ ರಾಮನ
ದನಿ ವಿಡಿಯೋದಲ್ಲಿ ಕೌರ್ ಹಿಡಿದ ಪ್ಲೇಕಾರ್ಡ ಬರಹಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿವೆ. ಅಲ್ಲಿ
ಎಲ್ಲೂ ಪಾಕಿಸ್ತಾನ ಇಲ್ಲವೇ ಹಿಂದುಸ್ತಾನದ ಪರ ಅಥವಾ ವಿರೋಧಿ ಭಾವನೆಗಳು ಇಲ್ಲವೇ ಇಲ್ಲ. ಆದರೆ.. ಹಿಂದೆ
ಮುಂದಿನ ಪ್ಲೇಕಾರ್ಡಗಳನ್ನು ಬಿಟ್ಟು ಪಾಕಿಸ್ತಾನದ ಹೆಸರಿರುವ ಭಿತ್ತಿಚಿತ್ರವನ್ನು ಮಾತ್ರ ತೆಗೆದುಕೊಂಡು
ಕೌರಳನ್ನು ದೇಶದ್ರೋಹಿ ಎಂದು ಸಾಬೀತುಪಡಿಸಲು ಪ್ರಯತ್ನಿಸಲಾಯಿತು.
ಹಿಂದೆ ಮುಂದೆ ಏನೂ ಗೊತ್ತಿಲ್ಲದವರು ಇದನ್ನು ಸತ್ಯವೆಂದೇ ನಂಬಿದರು. ಹೀಗೆ ನಂಬಿಸುವುದೇ ಈ ಕೋಮುಪಡೆಯ
ಹುನ್ನಾರವೂ ಆಗಿತ್ತು. ಇಷ್ಟಕ್ಕೂ ಗುರ್ಮೇಹರ್ “ನನ್ನ ತಂದೆಯನ್ನು ಪಾಕಿಸ್ತಾನ
ಕೊಂದಿಲ್ಲ, ಯುದ್ಧ ಕೊಂದಿತು” ಎಂದು ಹೇಳಿದ್ದರಲ್ಲಿ ತಪ್ಪೇನಿದೆ. ಇದರಲ್ಲಿ ಪಾಕಿಸ್ತಾನದ
ಪರವಾದ ಹೇಳಿಕೆಯೂ ಇಲ್ಲಾ.. ಹಿಂದುಸ್ತಾನದ ವಿರೋಧಿ ನಿಲುವೂ ಇಲ್ಲಾ. ಯುದ್ದ ವಿರೋಧಿ ಭಾವನೆ ಸ್ಪೋಟಗೊಂಡಿದೆ.
ಹೌದು ಯುದ್ಧ ಎನ್ನುವುದು ಎರಡೂ ದೇಶದ ಯುದ್ಧದಾಹಿಗಳ ಹಿಂಸಾಪಾತದ ಕೃತ್ಯವಾಗಿದೆ. ಮಹಾಭಾರತದ ಕೌರವ
ಪಾಂಡವರ ಕುರುಕ್ಷೇತ್ರದಲ್ಲಿ ಯಾರು ಯಾರನ್ನೇ ಕೊಂದರೂ ಅದು ಯುದ್ಧದ ಪರಿಣಾಮವೇ ಆಗಿದೆ. ಅದೇ ರೀತಿ
ಭಾರತ ಪಾಕ್ ಯುದ್ಧಗಳಲ್ಲಿ ಯಾವ ದೇಶದ ಸೈನಿಕರು ಇಲ್ಲವೇ ಜನರು ಹತ್ಯೆಯಾದರೂ ಅದಕ್ಕೆ ಯುದ್ಧದಾಹವೇ
ಕಾರಣವಾಗಿದೆ. ಹಾಗೂ ಎಲ್ಲಾ ಯುದ್ದಕ್ಕೂ ಯಾವ ದೇಶದ ಜನಸಾಮಾನ್ಯರು ಕಾರಣೀಕರ್ತರಾಗಿರದೇ ಆಯಾ ದೇಶದ
ಆಳುವ ವರ್ಗಗಳೇ ಕಾರಣವಾಗಿರುತ್ತವೆ. ಇಲ್ಲಿ ಯಾವುದೇ ದೇಶದ ಹೆಸರು ರೂಪಕವಾಗಿ ಆಗಿ ಪ್ರಸ್ತಾವನೆಗೊಂಡಂತಿದ್ದು
ಯುದ್ಧದಾಹವೇ ಎಲ್ಲಾ ಅನಾಹುತಕ್ಕೆ ಮೂಲಕಾರಣ. ಈ ರೀತಿಯ ಯುದ್ಧದ ಸಮರ್ಥನೆಗಾಗಿ ಎಲ್ಲಾ ಯುದ್ಧಕೋರ ಮನಸ್ಥಿತಿಯ
ನಾಯಕರುಗಳು ದೇಶಭಕ್ತಿಯನ್ನು ಆರೋಪಿಸುತ್ತಾರೆ ಹಾಗೂ ತಮ್ಮ ಸೈನಿಕರಲ್ಲಿ ಹಾಗೂ ದೇಶವಾಸಿಗಳಲ್ಲಿ ದೇಶಭಕ್ತಿಯ
ಉನ್ಮಾದವನ್ನು ಹುಟ್ಟಿಸುತ್ತಾರೆ. ಆದರೆ.. ಈ ಉನ್ಮಾದಕ್ಕೊಳಗಾಗಿ ಸಾವು ನೋವು ಅನುಭವಿಸುವವರು ಮಾತ್ರ
ಸೈನಿಕರು ಹಾಗೂ ಜನಸಾಮಾನ್ಯರು. ಹೀಗಾದಾಗ ಈ ಎಲ್ಲಾ ಸಾವು ನೋವುಗಳಿಗೆ ಯುದ್ಧ ಹಾಗೂ ಯುದ್ಧದಾಹ ಮಾತ್ರ
ಹೊಣೆಗಾರರಾಗಿದ್ದು ಯಾವುದೇ ದೇಶ ಕಾರಣವಲ್ಲ. ಯಾಕೆಂದರೆ ಪಾಕಿಸ್ತಾನದಲ್ಲಿರುವವರೆಲ್ಲರೂ ಯುದ್ದದಾಹಿಗಳಲ್ಲಾ..
ಭಾರತದಲ್ಲಿರುವವರೆಲ್ಲರೂ ಶಾಂತಿಪ್ರೀಯರೂ ಅಲ್ಲಾ. ಎರಡೂ ದೇಶದಲ್ಲೂ ಯುದ್ದದಾಹಿಗಳಿದ್ದಂತೆ ಶಾಂತಿಪ್ರೇಮಿಗಳೂ
ಇದ್ದೇ ಇರುತ್ತಾರೆ. ಹೀಗಾಗಿ ಯುದ್ದೋನ್ಮಾದವೇ ಎಲ್ಲಾ ಸಾವು ನೋವುಗಳಿಗೂ ಕಾರಣವಾಗಿದ್ದು ಗುರ್ ಮೇಹರ್
ತಂದೆಯ ಸಾವಿಗೂ ಯುದ್ಧವೇ ಕಾರಣ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲಾ. ಕಾರ್ಗಿಲ್ನಂತಹ ಯುದ್ಧವಾಗದೇ
ಇದ್ದಿದ್ದರೆ ಗುರ್ಮೇಹರ್ ಹಾಗೂ ಅವರಂತಹ ಹಲವಾರು ಮಕ್ಕಳು ಅನಾಥರಾಗುತ್ತಿರಲಿಲ್ಲ. ಯುದ್ಧವೇ ತನ್ನ
ತಂದೆಯ ಸಾವಿಗೆ ಕಾರಣವೆಂದು ಸಾಂದರ್ಭಿಕವಾಗಿ ಹೇಳಿದ್ದನ್ನೇ ಈ ದೇಶಭಕ್ತರು ಇಷ್ಟೊಂದು ದೊಡ್ಡದು ಮಾಡಲು
ಸಾಧ್ಯವಿರಲಿಲ್ಲ.
ಈ ನಕಲಿ ದೇಶಭಕ್ತ ಫೇಕುಗಳ
ಮಾತನ್ನು ನಂಬಿ ಅವಿವೇಕದಿಂದ ಪ್ರತಿಕ್ರಿಯಿಸಿದವರಲ್ಲಿ ಕೆಲವು ಸೆಲಿಬ್ರಿಟಿಗಳೂ ಇದ್ದರೆಂಬುದು ವಿಷಾದಕರ
ಸಂಗತಿ. ಕ್ರಿಕೆಟಿಗ ವಿರೇಂದ್ರ ಸಹ್ವಾಗ್ “ಕ್ರಿಕೆಟಿನಲ್ಲಿ ಎರಡು ಬಾರಿ
ತ್ರೀಶತಕ ಬಾರಿಸಿದ್ದು ನಾನಲ್ಲಾ ನನ್ನ ಬ್ಯಾಟ್” ಎಂದು ಟ್ವೀಟರಲ್ಲಿ ಹೇಳುವ
ಮೂಲಕ ಕೌರಳನ್ನು ಲೇವಡಿ ಮಾಡಿ ತನ್ನ ಅಜ್ಞಾನವನ್ನು ಹೇಳಿಕೊಂಡ.. ಬಾಲಿವುಡ್ ನಟ ರಣದೀಪ್ ಹೂಡ ಸಹ ತೀರಾ
ಅಗ್ಗದ ತಮಾಷೆ ಮಾಡಿ ತಾನೇ ತಮಾಷೆಯ ವಸ್ತುವಾದ. ಯಹೂದಿಗಳನ್ನು ಸಾಯಿಸಿದ್ದು ಹಿಟ್ಲರಲ್ಲಾ ‘ವಿಷಾನಿಲ’ ಎಂದು ಮೂರ್ಖತನದ ಪ್ರತಿಕ್ರಿಯೆಯನ್ನು
ಕುಸ್ತಿಪಟು ಯೋಗೇಶ್ವರ್ ದತ್ತ ಕೊಟ್ಟಿದ್ದಾರೆ. ಕೋಮುವಿಷವನ್ನು ಮೈಯೆಲ್ಲಾ ಮೆತ್ತಿಕೊಂಡ ಸಂಸದ ಪ್ರತಾಪಸಿಂಹನಂತೂ ಕೌರಳನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿ ತನ್ನ ದೇಶಭಕ್ತಿಯ
ಉನ್ಮಾದವನ್ನು ಕಾರಿಕೊಂಡ. “ಗುರ್ಮೇಹರ್ ಕೌರಳ ದಾರಿಗೆಡಿಸಿದವರು ಯಾರು? ಎಂದು ಕೇಂದ್ರ
ಸಚಿವ ಕಿರುಣ್ ರಿಜಿಜು ಪ್ರಶ್ನಿಸಿದರು. ಇಷ್ಟೇ ಅಲ್ಲದೇ ಇನ್ನೂ ನೀಚತನದ ಪರಮಾವಧಿಗೆ ಇಳಿದ ನಕಲಿ ದೇಶಭಕ್ತರು
ಅತ್ಯಾಚಾರದ ಬೆದರಿಕೆಯನ್ನೂ ಹಾಕಿ ತಮ್ಮ ಅಸಲಿ ಮುಖವಾಡವನ್ನು ತೋರಿಸಿಕೊಂಡರು. ಇಷ್ಟಕ್ಕೆ ಸುಮ್ಮನಾಗದ
ಈ ಸಂಘದ ಕಮಂಗಿಗಳು ಯಾವದೋ ಹುಡುಗಿ ಕಾರಿನಲ್ಲಿ ಹಾಡೊಂದಕ್ಕೆ ಡಾನ್ಸ್ ಮಾಡುತ್ತಿದ್ದ ವಿಡಿಯೋವೊಂದನ್ನು
ಹಾಕಿ ಇದೋ ನೋಡಿ ಗುರ್ಮೇಹರ್ಳ ಅಸಲಿತನ ಎಂದು ತಮ್ಮ ನೀಚತನವನ್ನು ಮುಂದುವರೆಸಿದ್ದಾರೆ.
“ದೇಶದ ವಿಚಾರ ಬಂದರೆ ನಾನು
ನನ್ನ ತಂದೆಯ ಹಾಗೆ ಬುಲೆಟ್ ಹಿಡಿಯಲೂ ಹಿಂಜರೆಯುವುದಿಲ್ಲಾ. ನನಗೆ ಯಾರ ಭಯವೂ ಇಲ್ಲ. ನಾನು ಯಾರಿಗೂ
ತಲೆಬಾಗುವುದಿಲ್ಲ. ಹಿಂಸಾಚಾರದ ವಿರುದ್ಧ ವಿದ್ಯಾರ್ಥಿಗಳು ದನಿಯೆತ್ತಬೇಕಿದೆ. ಹಿಂಸಾಚಾರವನ್ನು ಸಹಿಸಲು
ಸಾಧ್ಯವಿಲ್ಲ ಎಂದು ಘೋಷಣೆ ಕೂಗಬೇಕಿದೆ. ಎಬಿವಿಪಿ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ನನಗೆ ಸಾಕಷ್ಟು
ಬೆದರಿಕೆ ಕರೆಗಳು ಬಂದಿವೆ. ಇದಕ್ಕೆಲ್ಲಾ ನಾನು ಹೆದರುವುದಿಲ್ಲ. ನಾನು ಸರಿಯಾದ ನಿಲುವಿನಲ್ಲಿ ನಿಂತಿದ್ದೇನೆಂಬ
ನಂಬಿಕೆ ನನಗಿದೆ. ನೀವು ಯಾವ ಸಂಘಟನೆ, ಎಷ್ಟು ಪ್ರಮಾಣದಲ್ಲಿ ಶಕ್ತಿಶಾಲಿಯಾಗಿದ್ದೀರಿ ಎಂಬುದು ನನಗೆ
ಬೇಕಿಲ್ಲ. ನಾನು ಹೆದರಬೇಕಂದು ಯಾರೊಬ್ಬರೂ ಹೇಳುವಂತಿಲ್ಲ. ದೆಹಲಿಯ ರಾಮಾಸ್ ಕಾಲೇಜಿನಲ್ಲಿ ನಡೆದ ಪ್ರತಿಭಟನೆಯಲ್ಲಿ
ಕೆಲ ಯುವತಿಯರ ಮೇಲೆ ದೌರ್ಜನ್ಯವೆಸಗಲಾಗಿದೆ. ಇದಲ್ಲದೆ ಒಬ್ಬ ಮಹಿಳೆಗೆ ಅತ್ಯಾಚಾರ ಬೆದರಿಕೆ ಹಾಕಿರುವ
ವಿಚಾರವೂ ತಿಳಿಯಿತು. ನನ್ನ ಪ್ರಕಾರ ಎಬಿವಿಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ವಿದ್ಯಾರ್ಥಿ
ಸಂಘಟನೆಗಳು ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ತರುವುದು, ಕೆಟ್ಟದಾಗಿ ವರ್ತಿಸುವುದು ಸರಿಯಲ್ಲ.
ಹೀಗಾಗಿಯೇ ನಾವು ಎಬಿವಿಪಿ ವಿರುದ್ಧ ಅಭಿಯಾನವನ್ನು ಆರಂಭಿಸಿದೆವು. ಈ ಮೂಲಕ ನಾನು ದೌರ್ಜನ್ಯ, ಹಿಂಸಾಚಾರವನ್ನು
ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸುತ್ತಿದ್ದೇವೆ. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಹಾಗೂ
ಎಲ್ಲಾ ವಿದ್ಯಾರ್ಥಿಗಳನ್ನೂ ಪ್ರೀತಿಸುತ್ತೇನೆ. ವಿದ್ಯಾರ್ಥಿಗಳ ವಾಕ್ ಸ್ವಾತಂತ್ರ್ಯವನ್ನು ನಾನು ಬೆಂಬಲಿಸುತ್ತೇನೆ.
ಎಬಿವಿಪಿ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ನನಗೆ ದೇಶವಿರೋಧಿ ಎಂಬ ಪಟ್ಟ ಕಟ್ಟಲಾಗುತ್ತಿದೆ. ನನ್ನ
ದೇಶಭಕ್ತಿಯನ್ನು ನಾನು ಸಾಬೀತು ಪಡಿಸುವ ಅಗತ್ಯವಿಲ್ಲ. ಈ ಸಂದರ್ಭದಲ್ಲಿ ಪ್ರಶ್ನೆ ಹಾಕುತ್ತಿರುವವರು
ದೇಶಭಕ್ತರಾಗಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ..” ಎಂದು ಧೈರ್ಯದಿಂದ ಪ್ರತಿಕ್ರಿಯಿಸುವ
ಮೂಲಕ ನಕಲಿ ದೇಶಭಕ್ತರ ಅಸಲಿ ದೇಶದ್ರೋಹವನ್ನು ಗುರ್ಮೆಹರ್
ಕೌರ್ ಬಯಲಿಗೆಳೆದಿದ್ದಾರೆ.
ಇಷ್ಟಕ್ಕೂ ಸನಾತನವಾದಿ ಸಂತಾನಗಳಾದ
ಈ ಸಂಘಿಗಳ ಈ ಕುತಂತ್ರ ಯಾವಾಗಲೂ ಜಾರಿಯಲ್ಲಿರುತ್ತದೆ. ದಶಕದಿಂದ ಇತ್ತೀಚೆಗೆ ಅದು ತಾರಕಕ್ಕೇರಿದೆ.
ಯಾರಾದರೂ ಸಂಘಪರಿವಾರದ ಜನವಿರೋಧಿತನದ ವಿರುದ್ಧ ದ್ವನಿಯೆತ್ತಿದರೆ ಅವರನ್ನು ಧರ್ಮದ್ರೋಹಿಗಳು, ದೇಶದ್ರೋಹಿಗಳು
ಎಂದು ತೀರ್ಮಾನಿಸಿ ಅವಮಾನಿಸುವುದು ಅವರ ಹಿಡನ್ ಅಜೆಂಡಾದ ಭಾಗವೇ ಆಗಿದೆ. ಅದರಲ್ಲೂ ಮಹಿಳೆಯರೇನಾದರೂ
ಪ್ರಶ್ನಿಸಿದರೆ ಮುಗಿಯಿತು ಪುರೋಹಿತಶಾಹಿ ಮನಸ್ಥಿತಿಯ ಈ ಉನ್ಮಾದಿಗಳು ಮಹಿಳೆಯ ಚಾರಿತ್ರ್ಯವದೆಗೆ ಸಂಘಟಿತರಾಗಿ
ಎದ್ದು ನಿಲ್ಲುತ್ತಾರೆ. ಹೆಣ್ಣನ್ನು ನಿಯಂತ್ರಿಸಲು ದಮನ, ನಿಂದನೆ, ಹಲ್ಲೆ, ಅತ್ಯಾಚಾರಗಳನ್ನು ಅಸ್ತ್ರವನ್ನಾಗಿಸಿಕೊಂಡು
ಮಹಿಳೆಯನ್ನು ಸದಾ ಗುಲಾಮಳನ್ನಾಗಿಯೇ ಇರುವಂತೆ ನೋಡಿಕೊಳ್ಳುವುದು ಮನುವಾದದ ಅಜೆಂಡಾ ಮತ್ತು ಕೋಮುವಾದಿಗಳ
ಜಂಡಾ ಆಗಿದೆ.
ಕೇವಲ ಒಂದು ಪ್ಲೇಕಾರ್ಡ ಬರಹ
ಸಂಘಪರಿವಾರದವರನ್ನು ಇಷ್ಟೊಂದು ಹೆದರಿಸಲು ಸಾಧ್ಯವಾ? ಒಬ್ಬ ವಿದ್ಯಾರ್ಥಿನಿ ‘ಎಬಿವಿಪಿ’ಗೆ ಹೆದರುವುದಿಲ್ಲ ಎಂದು ಬರೆದು
ಪೇಸ್ಬುಕ್ಕಿನ ತನ್ನ ಮುಖಪುಟದಲ್ಲಿ ಹಾಕಿದ್ದಕ್ಕೆ ಈ ವಟುಗಳೂ ಅದ್ಯಾಕೆ ತರಗುಟ್ಟಿ ಹೋದರು? ಯಾಕೆಂದರೆ
ಅದು ಬರೀ ಪ್ಲೇಕಾರ್ಡ ಆಗಿರದೇ ಎಬಿವಿಪಿಯ ದಮನದಿಂದ ರೋಸಿಹೋಗಿದ್ದ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರೇಪಣೆಯನ್ನು
ಕೊಟ್ಟಿತ್ತು. ಎಬಿವಿಪಿ ವಿರುದ್ದ ವಿದ್ಯಾರ್ಥಿಗಳೆಲ್ಲಾ ಸಂಘಟಿತರಾಗಿ ಪ್ರತಿಭಟಿಸಲು ಸ್ಪೂರ್ತಿಯಾಗಿತ್ತು.
ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಐಎಸ್ ಎ)ವು ಎಬಿವಿಪಿಯ ಗೂಂಡಾಗಿರಿಯ ವಿರುದ್ಧ
ಪ್ರತಿಭಟಿಸಲು ಕರೆಕೊಡುವಂತೆ ಮಾಡಿತ್ತು. ಇದರಿಂದ ಬೆಚ್ಚಿಬಿದ್ದ ಈ ಎಬಿವಿಪಿ ಹಾಗೂ ಅದರ ಪೋಷಕರಾದ
ಸಂಘಪರಿವಾರದವರು ಹೇಗಾದರೂ ಮಾಡಿ ಪ್ಲೇಕಾರ್ಡ ಹಿಡಿದ ಹುಡುಗಿಯ ಚಾರಿತ್ರ್ಯದ ಮೇಲೆ ಕಳಂಕ ತರಲು ಪ್ರಯತ್ನಿಸಿದರು. ಅದಕ್ಕೂ ಆಕೆ ಬೆದರದೇ ದಿಟ್ಟತನದಿಂದ ಉತ್ತರಿಸಿದಾಗ
ಅತ್ಯಾಚಾರದ ಬೆದರಿಕೆ ಹಾಕಿದರು. ಇದರ ವಿರುದ್ಧ ದೆಹಲಿ ಮಹಿಳಾ ಆಯೋಗಕ್ಕೆ ಕೌರ್ ದೂರು ನೀಡಿ ರಕ್ಷಣೆ
ಕೋರಿದರು. ಆದರೂ ಕೇಂದ್ರ ಸರಕಾರವೇ ಎಬಿವಿಪಿ ಪರವಾಗಿರುವುದರಿಂದ ಹಾಗೂ ದೆಹಲಿಯಲ್ಲಿರುವ ಪೊಲೀಸ್ ವ್ಯವಸ್ಥೆ
ಕೇಂದ್ರ ಸರಕಾರದ ಹಿಡಿತದಲ್ಲಿರುವುದರಿಂದ ಗುರುಮೆಹರ್ಗೆ ಸಂಪೂರ್ಣ ರಕ್ಷಣೆ ಸಿಗುವ ಸಾಧ್ಯತೆಗಳಿಲ್ಲವಾಯಿತು.
ಜೊತೆಗೆ ಎಂತಹ ನೀಚ ಕೆಲಸಕ್ಕೂ ಹೇಸದವರೊಂದಿಗೆ ಕದನಕ್ಕಿಳಿಯುವ ದೊಡ್ಡ ತಾಕತ್ತೂ ಆ ಪುಟ್ಟ ಯುವತಿಗೆ
ಇಲ್ಲವಾಯಿತು. ಕೊನೆಗೂ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ
ಹಾಗೂ ಎಬಿವಿಪಿ ವಿರುದ್ದದ ಅಭಿಯಾನದಿಂದ ಹಿಂದೆ ಸರಿಯುತ್ತೇನೆ ಹಾಗೂ ಎಐಎಸ್ ಎ ಪ್ರತಿಭಟನೆಯಲ್ಲಿ ಹೆಚ್ಚು
ವಿದ್ಯಾರ್ಥಿಗಳು ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಲಿ” ಎಂದು ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ ಕೌರ್ ಹೋರಾಟದ ಕಣದಿಂದ
ಒತ್ತಾಯಪೂರ್ವಕವಾಗಿ ಹಿಂದೆ ಸರಿದರು. ಇದು ಎಬಿವಿಪಿಗೆ ದಕ್ಕಿದ ಜಯವೆಂದು ನಕಲಿ ದೇಶಭಕ್ತ ವಟುಗಳು
ಕುಣಿದಾಡಿದವು. ಆದರೆ.. ಒಬ್ಬ ಹೆಣ್ಣು ಮಗುವಿಗೆ ಕೊಡಬಾರದ ಕಷ್ಟ ಕೊಟ್ಟು ಚಾರಿತ್ರ್ಯವಧೆ ಮಾಡಿ ತಮ್ಮ
ಮುಖವಾಡವನ್ನು ಬಯಲುಮಾಡಿಕೊಂಡವು.
‘ಪಾಕ್ ನರಕವಲ್ಲಾ’ ಎಂದು ಹೇಳಿದ ಸಂಸದೆ ರಮ್ಯಾರವರನ್ನು
ಅಶ್ಲೀಲ ಭಾಷೆ ಬಳಸಿ ನಿಂದಿಸಿದವರೂ ಇದೇ ಮನುವಾದಿಗಳು. ಇತ್ತೀಚೆಗೆ ಸಾಮಾಜಿಕ ಹೋರಾಟಗಾರ್ತಿ ಪ್ರ್ರಭಾ
ಬೆಳವಂಗಲ ಅವರು ಫೇಸ್ಬುಕಲ್ಲಿ ಹಂಚಿಕೊಂಡ ಬರಹವೊಂದನ್ನು ಆಕ್ಷೇಪಿಸಿ “ಆಕೆಯ ಜುಟ್ಟು ಹಿಡಿದು ಅತ್ಯಾಚಾರ
ನಡೆಸಬೇಕು” ಎಂದು ಪ್ರತಿಕ್ರಿಯಿಸಿದ ವಿ.ಆರ್.ಭಟ್ ಎನ್ನುವ ದೇಶಭಕ್ತ
ಅಶಿಕ್ಷಿತನಂತೂ ಅಲ್ಲವೇ ಅಲ್ಲ. ಎಲ್ಲೇ ಯಾವುದೇ ಸಂದರ್ಭದಲ್ಲಿ ಮಹಿಳೆ ಪ್ರಶ್ನಿಸಿದರೆ ಅವಳನ್ನು ಬಗ್ಗು
ಬಡಿಯಲು ಆಕೆಯ ಮನಸ್ಸು ಹಾಗೂ ದೇಹವನ್ನು ಘಾಸಿಗೊಳಿಸುವ ಹಾಗೂ ಸಮಾಜದಲ್ಲಿ ತಲೆತಗ್ಗಿಸುವಂತೆ ಮಾಡುವ
ಹುನ್ನಾರಗಳು ಪುರುಷಪ್ರಧಾನ ವ್ಯವಸ್ಥೆಯೊಳಗಿರುವ ಪುರೋಹಿತಶಾಹಿ ಮನಸ್ಸುಗಳು ಮಾಡುತ್ತಲೇ ಬಂದಿವೆ.
ಸಂಘಪರಿವಾರ ದೇಶಾಧಿಕಾರ ಹಿಡಿದ ನಂತರ ಮಹಿಳೆಯರ ಮೇಲೆ ಇಂತಹ ನಿಬಂಧನೆಗಳು ಹೆಚ್ಚುತ್ತಲೇ ಇವೆ. ನಕಲಿ
ದೇಶಭಕ್ತರ ಜೀವವಿರೋಧಿತನವನ್ನು ಪ್ರಶ್ನಿಸಿದ ಮಹಿಳೆಯರ ಶೀಲಹರಣ ಮಾಡಬೇಕೆಂಬ ನೀಚತನದ ಮಾತುಗಳು ಕೇಳಿಬರುತ್ತವೆ.
ಇದು ನಾಗರೀಕ ಸಮಾಜದ ಅನಾಗರೀಕ ವರ್ತನೆಯಾಗಿದ್ದು ಇಂತಹುದಕ್ಕೆ ಗುರ್ ಮೇಹರ್ ಕೌರನಂತಹ ಗಟ್ಟಿ ಮಹಿಳೆಯರು
ದಿಟ್ಟ ಉತ್ತರವನ್ನು ಕೊಡಬೇಕಾಗಿದೆ. ಮಹಿಳೆಯರ ಮೇಲೆ ನಿಂದನೆ, ಹಲ್ಲೆ ಮಾಡುವವರ ಮೇಲೆ, ಅತ್ಯಾಚಾರದ
ಬೆದರಿಕೆ ಹಾಕುವವರ ಮೇಲೆ ಗೂಂಡಾ ಕಾಯಿದೆಯನ್ನು ಹಾಕಿ ಜೈಲಿಗಟ್ಟಬೇಕು ಎಂದು ಎಲ್ಲಾ ಪ್ರಗತಿಪರ ಸಂಘಟನೆಗಳು
ಸಂಘಟಿತವಾಗಿ ಹೋರಾಟ ಮಾಡಬೇಕಿದೆ. ಸಕಾರಾತ್ಮಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ದಮನಿಸುವ ದುಷ್ಟ
ಶಕ್ತಿಗಳ ವಿರುದ್ಧ ಪ್ರಜ್ಞಾವಂತರು ತಿರುಗಿ ಬೀಳಬೇಕಿದೆ. ಇಲ್ಲವಾದರೆ ಈ ದೇಶದಲ್ಲಿ ಬಲಪಂಥೀಯರನ್ನು ಹೊರತು ಪಡಿಸಿ ಬೇರೆ ಯಾರಿಗೂ
ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲದಂತೆ ಮಾಡುವಂತಹ ದಮನಕಾರಿ ಕರಾಳ ಪ್ಯಾಸಿಸ್ಟ್ ವ್ಯವಸ್ಥೆ ಬರುವುದರಲ್ಲಿ
ಸಂದೇಹವೇ ಇಲ್ಲಾ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ