ಶುಕ್ರವಾರ, ನವೆಂಬರ್ 25, 2016

ತಹ ತಹ.....63 ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣ ಮತ್ತು ಸಂಘಿಗಳ ಉನ್ಮಾದ ರಾಜಕಾರಣ :


ಇಪ್ಪತ್ತು ತಿಂಗಳ ಹಿಂದೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾಹೇಬರು ಪ್ರೇಮ ವೈಫಲ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದನ್ನು ಸರಕಾರ ಹಾಗೂ ಪೊಲೀಸ್ ಇಲಾಖೆ ಸ್ಪಷ್ಟವಾಗಿ ಹೇಳಿತ್ತು. ಆದರೂ ಬಿಜೆಪಿ ಪಕ್ಷದ ತಲೆಯಾಳುಗಳು ಹಾಗೂ ಅವರ ಸಮರ್ಥಕರಾದ ಭಕ್ತರುಗಳು ರವಿಯವರದ್ದು ಕೊಲೆ ಎಂದು ನಾಡಿನಾದ್ಯಂತ ಬೀದಿ ಬೀದಿಗಳಲ್ಲಿ ನಿಂತು ಬಾಯಿಬಡಿದುಕೊಂಡಿದ್ದರುಬೆಂಗಳೂರಿನ ವೃತ್ತಗಳಲ್ಲಿ ಡಿ.ಕೆ.ರವಿಯ ಪೋಟೋಗಳಿಟ್ಟು ಹೂಹಾರ ಹಾಕಿ ಮತ್ತೆ ಹುಟ್ಟಿ ಬಾ ಎಂದು ಬರೆಯಲಾಗಿತ್ತು. ಟಿವಿ ವಾಹಿನಿಗಳಂತೂ ತಾವೇ ವಿಚಾರಣೆ ಮಾಡಿ ತೀರ್ಪನ್ನೂ ಕೊಟ್ಟು ಡಿ.ಕೆ.ರವಿಯವರನ್ನು ಕೇಡಿಗಳು ಕೊಲೆ ಮಾಡಿ ಬಿಟ್ಟಿದ್ದಾರೆಂಬ ನಿರ್ಣಯವನ್ನು ವಾರಗಳ ಕಾಲ ಬಿತ್ತರಿಸತೊಡಗಿದರು. ಟಿವಿಯಲ್ಲಿ ಪದೇ ಪದೇ ತೋರಿಸಲಾದ ಕಪೋಲ ಕಲ್ಪಿತ ಸುದ್ದಿಯನ್ನೇ ನಂಬಿದ ಭಕ್ತರಲ್ಲದ ಸಾಮಾನ್ಯ ಜನತೆಗೆ ಸಹ ಅದೊಂದು ಕೊಲೆ ಎಂಬ ನಂಬಿಕೆ ಬಂದುಬಿಟ್ಟಿತ್ತು. ಜನರ ನಂಬಿಕೆಯನ್ನು ಆಳುವ ಸರಕಾರದ ವಿರುದ್ಧ ತಿರುಗಿಸಲು ಸಂಘಿಗಳು ಶಕ್ತಿ ಮೀರಿ ಪ್ರಯತ್ನಿಸಿದರು. ಸಿಬಿಐ ತನಿಖೆ ನಡೆಸಬೇಕೆಂದು ಹಾದಿ ಬೀದಿ ರಂಪ ಮಾಡಿದ್ರು.

 ನಮ್ಮದೇ ರಾಜ್ಯದ ಪೋಲೀಸ್ ವಿಚಾರಣೆ ಮೇಲೆ ಅಪನಂಬಿಕೆ ತೋರಿ ಕೇಂದ್ರ ಸರಕಾರದ ಆಧೀನದಲ್ಲಿರುವ ಸಿಬಿಐ ಮೇಲೆ ಅಪಾರ ನಂಬಿಕೆಯನ್ನು ವ್ಯಕ್ತಪಡಿಸಿದ ಪ್ರತಿ ಪಕ್ಷಗಳು ಹಾಗೂ ಪರಿವಾರದ ಭಕ್ತಗಣಗಳು ರಾಜ್ಯ ಸರಕಾರದ ಮೇಲೆ ವಿಪರೀತ ಒತ್ತಡ ತಂದವು. ಒಂದು ವಾರಗಳ ಕಾಲ ಇವರೆಲ್ಲರ ಆಟಾಟೋಪ ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿದ್ದಿಗೆ ಬಿದ್ದು ಜನರ ವಿಶ್ವಾಸ ಕಳೆದುಕೊಳ್ಳುವುದ್ಯಾಕೆಂದು  ಸಿಬಿಐ ತನಿಖೆಗೆ ಮನವಿ ಮಾಡಿದರು. ನಂತರ ಜನರೂ ಇದೆಲ್ಲವನ್ನೂ ಮರೆತು ಮತ್ಯಾವುದೋ ಪ್ರಹಸನದತ್ತ ಚಿತ್ತಕೊಟ್ಟರು.

ಡಿಸಿ ಸಾಹೇಬರದ್ದು ಆತ್ಮಹತ್ಯೆಯೋ ಕೊಲೆಯೋ ಎಂದು ನಿರ್ಧಾರಕ್ಕೆ ಬರಲು ಸಿಬಿಐ ಎನ್ನುವ ಬ್ರಹಸ್ಪತಿಗಳಿಗೆ ಪುಟ್ಟಾಪೂರಾ ಇಪ್ಪತ್ತು ತಿಂಗಳು ಬೇಕಾಯಿತುಇಷ್ಟು ಸುದೀರ್ಘ ಕಾಲ ಬೆಟ್ಟವನ್ನಗೆದು ಕೊನೆಗೊಂದು ಇಲಿಯನ್ನೂ ಹಿಡಿಯಲಾಗದೇ ರವಿಯವರ ಸಾವು ಕೊಲೆ ಅಲ್ಲಾ ಅದೊಂದು ಆತ್ಮಹತ್ಯೆ ಎಂದು ತೀರ್ಮಾನಕ್ಕೆ ಬಂದು ಅಂತಿಮ ರಿಪೋರ್ಟ್ ಕೊಟ್ಟಿತು. ಇದೇ ರೀತಿಯ ರಿಪೋರ್ಟನ್ನೇ ಕರ್ನಾಟಕದ ಸಿಐಡಿ ಸಂಸ್ಥೆ ಒಂದೇ ವಾರದಲ್ಲಿ ಕೊಟ್ಟಿತ್ತು. ಆದರೆ.. ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿಲ್ಲದ ವಿಕ್ಷಿಪ್ತ ಮನಸ್ಸುಗಳು ಅದೇ ವರದಿಯನ್ನು ಸಿಬಿಐ ಕೊಟ್ಟಾಗ ಮೌನಕ್ಕೆ ಶರಣಾಗಿವೆ. ರಾಜ್ಯದ ಪೊಲೀಸ್ ಹಾಗೂ ಸಿಐಡಿ ಇಲಾಖೆಯ ಮೇಲೆ ರಾಜ್ಯದ ಜನತೆ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದ್ದು ಅಕ್ಷಮ್ಯ.

 ರವಿಯವರ ಸಾವು ಆತ್ಮಹತ್ಯೆ ಎಂದು ಸಾವಿನ ಮನೆಯಲ್ಲಿರುವ ಸಾಕ್ಷಿಗಳು ಸಾರುತ್ತಿದ್ದರೂ ಇಲ್ಲದ ವದಂತಿಗಳನ್ನು ಹಬ್ಬಿಸಿ ಜನತೆಯ ತಲೆಗೆ ಅನುಮಾನದ ಹುಳವನ್ನು ಬಿತ್ತಿ ರಾಜಕೀಯ ಲಾಭ ಪಡೆಯಲು ಬಯಸಿದ ಬಿಜೆಪಿ ಹಾಗೂ ಅದರ ಸಮರ್ಥಕ ಭಕ್ತಾದಿಗಳನ್ನೇನು ಮಾಡಬೇಕು? ಆತ್ಮಹತ್ಯೆಯನ್ನು ಕೊಲೆ ಎಂದು ಬಿಂಬಿಸಿ ಸಮಾಜದಲ್ಲಿ ಇಲ್ಲ ಸಲ್ಲದ ನಕಾರಾತ್ಮಕ ಸಂಚಲನ ಮೂಡಿಸಿದ ಟಿವಿ ವಾಹಿನಿಗಳನ್ನು ಯಾತರಿಂದ ಬಾರಿಸಬೇಕು? ಇಪ್ಪತ್ತು ತಿಂಗಳಗಳ ಕಾಲ ಅನೇಕಾನೇಕ ಸಿಬಿಐ ಅಧಿಕಾರಿಗಳ ಸಮಯ ಹಾಗೂ ಸರಕಾರದ ಹಣ ವ್ಯರ್ಥವಾಯಿತಲ್ಲ ಅದನ್ನು ಯಾರಿಂದ ವಸೂಲಿ ಮಾಡಬೇಕುವ್ಯಯಕ್ತಿಕ ಕಾರಣಕ್ಕೆ ನೇಣಿಗೆ ಕತ್ತುಕೊಟ್ಟವನ ವಿಷಯವನ್ನು ಸಾರ್ವತ್ರಿಕಗೊಳಿಸಿ ಜನರಲ್ಲಿ ಉನ್ಮಾದವನ್ನು ತುಂಬಿದ ನಕಲಿ ದೇಶಭಕ್ತರನ್ನು  ಎಲ್ಲಿಗೆ ಗಡಿಪಾರು ಮಾಡಬೇಕು?

ಇದೊಂದೇ ವಿಷಯವಲ್ಲ... ಯಾವ ಸಂಗತಿ ಸಿಕ್ಕರೂ ಅದನ್ನು ದೇಶದ ದೊಡ್ಡ ದುರಂತ ಎಂದು ಮೇನಿಯಾ ಹುಟ್ಟುಸುವಲ್ಲಿ ಭಕ್ತರು ಸಿದ್ದಹಸ್ತರು. ಮಡಕೇರಿಯಲ್ಲಿ ದೊಂಬಿ ಹಬ್ಬಿಸುವ ಪ್ರಯತ್ನದಲ್ಲಿದ್ದಾಗ ಪೋಲೀಸರಿಂದ  ತಪ್ಪಿಸಿಕೊಳ್ಲು ಹೋಗಿ ಕೆಳಕ್ಕೆ ಬಿದ್ದು ಸತ್ತ ಸಂಘಪರಿವಾರದ ವ್ಯಕ್ತಿಯನ್ನು ಕೊಲೆ ಮಾಡಲಾಯಿತೆಂದು ಹುಯಿಲೆಬ್ಬಿಸಿದರು. ಮೊನ್ನೆ ಶಿವಾಜಿನಗರದಲ್ಲಿ  ಬಡ್ಡಿ ಮಾಫಿಯಾದ ಆರೆಸ್ಸಿಸಿಗ ಕೊಲೆಯಾದಾಗ ಯಡಿಯೂರಪ್ಪಾದಿಯಾಗಿ ಬಿಜೆಪಿಗಳು ದೊಡ್ಡದಾಗಿ ಬಾಯಿಬಡಿದುಕೊಂಡರುಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಬೀದಿಗಿಳಿಯದ ಸಂಘಿಗಳು... ಕಲಬುರ್ಗಿಯವರನ್ನು ಹಾಡು ಹಗಲೇ ಹತ್ಯೆ ಮಾಡಿದಾಗ ಬಾಯ್ಬಿಡದ ಬಿಜೆಪಿಗಳು ಆರೆಸ್ಸೆಸ್ಸ ಕಾರ್ಯಕರ್ತರಾದ ರುದ್ರೇಶ, ರಾಜು, ರವಿ ಹತ್ಯೆಯನ್ನು ರಾಷ್ಟ್ರೀಯ ದುರಂತ ಎನ್ನುವಂತೆ ಬಿಂಬಿಸಿ ಸಾವಿನಲ್ಲೂ ತಾರತಮ್ಯ ರಾಜಕೀಯ ಮಾಡುತ್ತಿರುವುದು ಖಂಡನೀಯ.


ಹೀಗೆ ಸಾವಿನ ಮನೆಯಲ್ಲಿ ರಾಜಕಾರಣ ಮಾಡಿ ಜನರನ್ನು ದಿಕ್ಕುತಪ್ಪಿಸಿ ಉನ್ಮಾದ ಹುಟ್ಟಿಸುವ ಕೆಲಸವನ್ನು ಸಂಘ ಪರಿವಾರ ಮೊದಲಿನಿಂದಲೂ ಮಾಡಿಕೊಂಡೇ ಬಂದಿದೆ. ಸತ್ಯವನ್ನು ತಿರುಚುವುದು, ಇಲ್ಲದ ವದಂತಿ ಹಬ್ಬಿಸುವುದು ಹಾಗೂ ಸುಳ್ಳನ್ನು ಸಾವಿರ ಸಲ ಹೇಳಿ ಸತ್ಯವೆನ್ನುವ ಭ್ರಮೆಯನ್ನು ಸೃಷ್ಟಿಸುವುದು ಸಂಘ ಪರಿವಾರದ ಬ್ರೇನ್ ಹಾಗೂ ಕೈಕಾಲಾದ ಭಕ್ತರಿಗೆ ನಿತ್ಯ ಕಾಯಕವಾಗಿದೆ. ಇದಕ್ಕೆ ಡಿ.ಕೆ.ರವಿ ಸಾವೂ ಹೊರತಲ್ಲ.

ಈಗ ಭಕ್ತರ ಕೇಂದ್ರ ಸರಕಾರದ ಸಿಬಿಐ ಪಡೆ ರವಿಯವರ ಸಾವು ಕೊಲೆಯಲ್ಲ ಆತ್ಮಹತ್ಯೆ ಎಂದು ತನಿಖಾ ವರದಿಯಲ್ಲಿ ಹೇಳಿದೆಯಲ್ಲಾ... ಇದಕ್ಕೆ ಬಿಜೆಪಿಗರು ಹೇಗೆ ಸ್ಪಷ್ಟನೆ ಕೊಡುತ್ತಾರೆ? ಎಲ್ಲದಕ್ಕೂ ಬಾಯಿ ಬಡಿದುಕೊಳ್ಳುವ ದೇಶಭಕ್ತರು ಈಗ್ಯಾಕೆ ಮೂರೂ ಮುಚ್ಚಿಕೊಂಡು ಕೂತಿದ್ದಾರೆ. ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರ ಇದ್ದಲ್ಲಿ ಈಗಾಗಲೇ ಇಡೀ ತನಿಖೆಯೆ ಪೊಳ್ಳು ಎಂದು ಇದೇ ಭಕ್ತಗಣ ಬಾಯಿಬಡಿದುಕೊಳ್ಳುತ್ತಿತ್ತು. ಆದರೆ ಈಗ ಬಾಯಿ ಬಂದ್ ಆಗಿದೆ. ಇಲ್ಲವೇ ವಿತಂಡವಾದಕ್ಕೆ ಇನ್ನೇನೊ ನೆಪ ಹುಡುಕಲು ಪ್ರಯತ್ನಿಸುವ ಹುನ್ನಾರವಂತೂ ಮಾಡಲಾಗುತ್ತದೆ. ತಲೆಯಲ್ಲಿ ತಾರ್ಕಿಕ ಆಲೋಚನೆಯ ಬದಲು ಮತಾಂಧತೆ ಹಾಗೂ ಹುಸಿ ದೇಶಭಕ್ತಿಯ ಅಮಲನ್ನು ತುಂಬಿಕೊಂಡೇ ಅಂಡಲೆಯುತ್ತಿರುವ ಭಕ್ತಾದಿಗಳಿಗೆ ಸ್ವಂತ ಆಲೋಚನೆಯ ಶಕ್ತಿಯಾದರೂ ಎಲ್ಲಿದೆ. ಸರಸಂಘಿಗಳು ಕಿಡಿ ಹಚ್ಚಿದರೆ ಅದರ ಅನುಯಾಯಿಗಳು ಬೆಂಕಿ ಹಚ್ಚುತ್ತವೆ. ಇದರಿಂದಾಗಿ ಇಡೀ ದೇಶ ಅಸಹನೆ ಹಾಗೂ ಅಸಹಿಷ್ಣುತತೆಯಲ್ಲಿ ಬೇಯುತ್ತಿದೆ. ಇನ್ನೆಷ್ಟು ಸೂತಕದ ಮನೆಯ ಸುದ್ದಿಗಳು ಕಿಡಿ ಹಚ್ಚುವ ಕಿಡಿಗೇಡಿಗಳಿಗೆ ಪ್ರೇರಕವಾಗುತ್ತವೋ  ಕಾಲವೇ ಉತ್ತರಿಸುತ್ತದೆ. ನಕಲಿ ದೇಶಭಕ್ತರ ಶಡ್ಯಂತ್ರಗಳ ವಿರುದ್ಧ ಪ್ರಜ್ಞಾವಂತ ಅಸಲಿ ದೇಶಪ್ರೇಮಿಗಳು ಸಂಘಟಿತರಾಗಿ ತಿರುಗಿ ಬೀಳುವವರೆಗೂ ಭಕ್ತರಾಟಕ್ಕೆ ಕೊನೆಯೆಂಬುದಿಲ್ಲ. 

               - ಶಶಿಕಾಂತ ಯಡಹಳ್ಳಿ