ಶುಕ್ರವಾರ, ನವೆಂಬರ್ 25, 2016

ತಹ ತಹ.... 62 ಮೋದಿಪಡೆ ಗೆದ್ದಿತು.... ಜನತೆ ಖೆಡ್ಡಾಕೆ ಬಿದ್ದಿತು...




ದೇಶಾದ್ಯಂತ ದಲಿತರು ತಮ್ಮ ಮೇಲಿನ ದಮನದ ವಿರುದ್ದ ಸಾವಕಾಶವಾಗಿ ಜಾಗ್ರತರಾಗಿ ಆಹಾರದ ಆಯ್ಕೆ ಹಾಗೂ ಭೂಮಿಯ ಹಕ್ಕಿಗಾಗಿ ಆಗ್ರಹಿಸಿ ಸಂಘಟಿತ ಪ್ರತಿಭಟನೆಗೆ ತೊಡಗಿಸಿಕೊಂಡಿದ್ದರು. ವೇಮುಲ ಆತ್ಮಹತ್ಯೆ ಹಾಗೂ ಕನ್ಹಯ್ಯಲಾಲ್ ಬಂಧನದ ಪ್ರಕರಣಗಳು ಸಂಘ ಪರಿವಾರದ ಮುಖವಾಡಗಳನ್ನು ಬಯಲಿಗೆಳೆದಿದ್ದವು. ಸಂಘಿಗಳ ಅಂಗಗಳು ಗೋರಕ್ಷಣೆಯ ಹೆಸರಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆ ಹಾಗೂ ಹತ್ಯೆ ನಡೆಸಿದ್ದು   ಭಕ್ತೇತರ ದೇಶವಾಸಿಗಳಲ್ಲಿ ಅಸಹನೆಯನ್ನು ಹುಟ್ಟಿಸಿತ್ತು. ಚುಣಾವಣಾ ಪೂರ್ವದಲ್ಲಿ  ವಿದೇಶಿ ಬ್ಯಾಂಕಿನಿಂದ ಭಾರತೀಯರ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್ ಅಕೌಂಟಲ್ಲಿ ಹದಿನೈದು ಲಕ್ಷ ಹಣ ಜಮಾ ಮಾಡುತ್ತೇನೆಂಬ ಮೋದಿಯವರ ಭರವಸೆ ಈಡೇರದೇ ಬಿಜೆಪಿಗೆ ಓಟು ಹಾಕಿದ ಬಹುಜನರು ಭ್ರಮನಿರಸನ ಗೊಂಡಿದ್ದರು. ಬೆಲೆ ಏರಿಕೆ ನಿಯಂತ್ರಣಕ್ಕೆ ಬರದಂತಾಗಿತ್ತು. ಮೋದಿ ಸೃಷ್ಟಿಸಿದ ಹಾಗೂ ಅವರ ಭಕ್ತರು ಹುಟ್ಟಿಸಿದ ದೇಶಭಕ್ತಿಯ ಉನ್ಮಾದ ಮೇಲಿನ ಎಲ್ಲಾ ತಾಪತ್ರಯಗಳನ್ನು ಪರಿಹರಿಸಲು ಸಾಲದಾಯಿತು. 

ಇಂತಾ ಸಂದರ್ಭದಲ್ಲಿ ಮೋದಿ ಮಹಾತ್ಮರು ಬಿಟ್ಟ ನೋಟು ನಿಷೇಧದ ಬ್ರಹ್ಮಾಸ್ತ್ರ ಮೇಲಿನ ಎಲ್ಲವನ್ನೂ ಜನರ ತಲೆಯಿಂದ ಅಳಿಸಿಹಾಕಿತು. ಜನ ತಮ್ಮ ಅಸಮಾಧಾನವನ್ನೆಲ್ಲಾ ಬದಿಗಿಟ್ಟು ಇದ್ದ ಬದ್ದ ಹಳೆ ನೋಟುಗಳನ್ನು ಹೊಸದಕ್ಕೆ ಬದಲಾಯಿಸಲು ಸರತಿ ಸಾಲಲ್ಲಿ ನಿಂತು ತಮ್ಮ ಶಕ್ತಿ ಸಮಯವನ್ನು ವ್ಯಯಿಸತೊಡಗಿದರು. ಇನ್ನೇನು ಕಪ್ಪು ಹಣವರಲ್ಲಾ ಹೊರಗೆ ಬಂದು ಸುಲಿಗೆ ಮಾಡಿ ಶ್ರೀಮಂತರಾದವರೆಲ್ಲಾ ಬೀದಿಗೆ ಬರುತ್ತಾರೆ.. ಭವ್ಯ ಭಾರತ ನಿರ್ಮಾಣವಾಗುತ್ತದೆ ಎಂದು ಮೋದಿ ಭಕ್ತರು ನಿತ್ಯ ಭಜನೆ ಶುರುಮಾಡಿಕೊಂಡರು. ಯಾರು ಏನೇ ಮಾಡಿದರು ಶೇಕಡ ಮೂರರಷ್ಟು ಕಪ್ಪು ಹಣ ಹೊರಬರಬಹುದು ಎಂದು ಆರೆಸ್ಸೆಸ್ಸಿನ ನಾಯಕ ಗೋವಿಂದಾಚಾರ್ಯಾರೇ ಖುದ್ದಾಗಿ ಹೇಳಿದರೂ ಭಕ್ತಗಣ ನಂಬಲು ತಯಾರಿಲ್ಲ. ಪಾಕಿಸ್ತಾನದಿಂದ ಪ್ರಿಂಟಾಗಿ ಬರುವ ನಕಲಿ ನೋಟುಗಳು ನಾಶವಾದವು ಎಂದು  ಪೇಕುಗಳು ಪುಂಗುತ್ತಿದ್ದಾರೆ. ಆದರೆ  ಹಳೇ ನೋಟುಗಳನ್ನೇ ನಕಲಿ ಮಾಡುವ ಪಾಕಿಗಳು ಹೊಸ ನೋಟು ಮಾಡದಿರುತ್ತಾರೆಯೆ?

ಲಂಚ ರುಶುವತ್ತಿಲ್ಲದೇ ಈ ದೇಶದ ಸರಕಾರಿ ಯಂತ್ರಾಂಗ ಒಂದಿಂಚೂ ಕದಲದು. ಇಂತಾ ಭ್ರಷ್ಟ ವ್ಯವಸ್ಥೆಯಲ್ಲಿ ಲಂಚ ಪಡೆದದ್ದೆಲ್ಲಾ ಕಪ್ಪು ಹಣವಾಗಿಯೇ ಮತ್ತೆ ಶೇಖರಣೆಯಾಗುವ ಸಮಾಜದಲ್ಲಿ ಕಪ್ಪು ಹಣ ನಿರ್ಮೂಲನ ಎನ್ನುವುದು ಕನಸಿನ ಮಾತು. 

ಯಾರು ಏನೇ ಭಜನೆ ಮಾಡಲಿ. ಆದರೆ ಈ ನೋಟು ರದ್ದತಿಯಿಂದಾ ಜನಸಾಮಾನ್ಯರಿಗೆ, ಮಧ್ಯಮ ವರ್ಗದವರಿಗೆ, ಬಹುಸಂಖ್ಯಾತ ದುಡಿಯುವ ವರ್ಗದವರಿಗೆ, ಚಿಕ್ಕ ಪುಟ್ಟ ವ್ಯಾಪಾರಸ್ತರಿಗೆ ಲಾಭಕ್ಕಿಂತಾ ನಷ್ಟವೇ ಹೆಚ್ಚು. ಇನ್ನು ಸರಕಾರದ ಬೊಕ್ಕಸಕ್ಕೆ ಕಪ್ಪು ಹಣ ತೆರಿಗೆ ರೂಪದಲ್ಲಿ ಹರಿದು ಬರುತ್ತದೆಂಬುದೂ ಶತಮಾನದ ಸುಳ್ಳು. ಮೋದಿಯವರ ಈ ಬ್ರಹ್ಮಾಸ್ರ್ತದಿಂದ ಲಾಭ ಆಗುವುದೇನಿದ್ದರೂ ಸ್ವತಃ ಮೋದಿ ಮತ್ತು ಅವರ ಸಂಘ ಪರಿವಾರಿಗಳಿಗೆ. ಮೋದಿ ಕಿಂಕರರಂತಿರುವ ಅಂಬಾನಿ, ಆದಾನಿ, ರಾಂದೇವ್ ಬಾಬಾ ಮುಂತಾದ ಬ್ರಹತ್ ಬಂಡವಾಳಗಾರರಿಗೆ ಹಾಗೂ ಭಾರತವನ್ನು ತಮ್ಮ ಸರಕು ಮಾರಾಟದ ಮಾರುಕಟ್ಟೆಯನ್ನಾಗಿಸಿಕೊಂಡ ಸಮಸ್ತ ಕಾರ್ಪೋರೇಟ್ ಸಂಸ್ಥೆಗಳಿಗೆ. 

ಈಗ  ಎಲ್ಲೂ ಯಾರೂ  ಗೋರಕ್ಷಕರೆಂಬ ನರಹಂತಕರ ಕುರಿತು ಮಾತಾಡುತ್ತಿಲ್ಲ. ದಲಿತರ ಆಹಾರದ ಆಯ್ಕೆ ಹಾಗೂ ಭೂಮಿಯ ಹಕ್ಕು ಕುರಿತು ಉಸಿರೆತ್ತುತ್ತಿಲ್ಲ. ಅಲ್ಪಸಂಖ್ಯಾತರ ಸಮಾನ ನಾಗರಿಕ ಸಂಹಿತೆಯ ಬಗ್ಗೆಯೂ ಚರ್ಚಿಸುತ್ತಿಲ್ಲ. ರೈತರ ಆತ್ಮಹತ್ಯೆ ಕುರಿತು, ಕಾರ್ಮಿಕರ ಅತಂತ್ರತೆಯ ಕುರಿತು, ಮಹಿಳೆಯರ ಸಮಾನತೆ ಕುರಿತು ಅಷ್ಟೇ ಯಾಕೆ ಕಾವೇರಿ ಹಾಗೂ ಮಹದಾಯಿ ಸಮಸ್ಯೆಗಳ ಕುರಿತು ಯಾರೆಂದರೆ ಯಾರೂ ಮಾತಾಡುತ್ತಿಲ್ಲ. ಈಗ ನೋಡಿ ಎಲ್ಲರೂ ನೋಟು ಹಾಗೂ ಕಪ್ಪು ಹಣದ ಬಗ್ಗೆಯೇ ಮಾತಾಡುತ್ತಿದ್ದಾರೆ. ಎಲ್ಲಾ ಜನಸಾಮಾನ್ಯರ ಗಮನ ಸರದಿಯಲ್ಲಿ ನಿಂತು ನೋಟು ಬದಲಾಯಿಸುವುದರತ್ತಲೇ ಇದೆ. 

ಮೋದಿ ಮಹಾತ್ಮರಿಗೆ ಬೇಕಾದದ್ದೇ ಇದು. ಜನರ ತಲೆಗಿಂತ ದೇಹಕ್ಕೆ ಕೆಲಸ ಕೊಟ್ಟರೆ ಪ್ರತಿರೋಧ ನಿಯಂತ್ರಿಸಬಹುದು ಎನ್ನುವ ಮೋದಿ ಲೆಕ್ಕಾಚಾರ ತಾತ್ಕಾಲಿಕವಾಗಿ ಭಾರೀ ಯಶಸ್ಸನ್ನು ತಂದು ಕೊಟ್ಟಿದೆ. ಬ್ರಮನಿರಸನಗೊಳ್ಳುತ್ತಿರುವ ಜನರ ಗಮನವನ್ನು ಬೇರೆಡೆ ತಿರುಗಿಸುವಲ್ಲಿ ಕೇಂದ್ರ ಸರಕಾರ ಯಶಸ್ಸು ಗಳಿಸಿದೆ.  ಕಪ್ಪು ಹಣ ಹೊರತರಲು ಜನಸಾಮಾನ್ಯರು ಐವತ್ತು ದಿನಗಳ ಕಾಲ ಕಷ್ಟ ನಷ್ಟಗಳನ್ನು ಅನುಭವಿಸಿದರೆ ಮುಂಬರುವ ದಿನಗಳಲ್ಲಿ ಅಚ್ಚೇ ದಿನ್ ಬರುತ್ತದೆಂದು ಮೋದಿ ಹಾಗೂ ಅವರ ಸಮರ್ಥಕರು ನಿರಂತರ ಪ್ರಚಾರ ಮಾಡುತ್ತಲಿದ್ದಾರೆ.

ಆದರೆ... ಕಪ್ಪು ಹಣವೆಲ್ಲಾ ಹೊರಗೆ ಬರದಿದ್ದರೆ.... ಜನಸಾಮಾನ್ಯರ ವ್ಯಾಪಾರಗಳನ್ನೆಲ್ಲಾ ಕಾರ್ಪೋರೇಟ್ ಕಂಪನಿಗಳು ಆಕ್ರಮಿಸಿ ಸುಲಿಗೆಯನ್ನು ಆರಂಭಿಸಿದರೆ... ಈ ಮೋದಿ ಕಟ್ಟಿಕೊಡುತ್ತಿರುವ ಹುಸಿ ಕನಸಿನ ಬಲೂನು ಇಂದಲ್ಲ ನಾಳೆ ಒಡೆದು ಅಸಲಿಯತ್ತು ಜನರಿಗೆ ತಿಳಿದರೆ.... ಮತ್ತೆ ರೈತರ ಆತ್ಮಹತ್ಯಾ ಸರಣಿ ದೇಶಾದ್ಯಂತ ಮುಂದುವರೆದರೆ... ಉಳ್ಳವರು ಹಾಗೂ ಇಲ್ಲದವರ ನಡುವೆ ಅಸಮಾನತೆಯ ಅಂತರ ಹೆಚ್ಚಾಗತೊಡಗಿದರೆ...ಸುಶಿಕ್ಷಿತ ಯುವ ಜನಾಂಗ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದರೆ.... ದೇಶಕ್ಕೆ ದೇಶವೇ ಈ ಮೋದಿ ವಿರುದ್ದ ತಿರುಗಿ ಬೀಳುವುದರಲ್ಲಿ ಸಂದೇಹವಿಲ್ಲ. ಈ ಮೋದಿ ಮಹಾತ್ಮರು ಸೃಷ್ಟಿಸುವ ಸರಣಿ ಉನ್ಮಾದಗಳು ನಿರಂತರ ಫಲ ಕೊಡುವುದಿಲ್ಲ. ಇಡೀ ದೇಶವಾಸಿಗಳನ್ನು ಬಹುಕಾಲದವರೆಗೂ ಮೂರ್ಖರನ್ನಾಗಿಸಲು ಸಾಧ್ಯವೂ ಇಲ್ಲ. ಮೋದಿ ಮೇನಿಯಾ ಆದಷ್ಟು ಬೇಗ ಮುಖವಾಡ ಕಳಚಿಕೊಳ್ಳುವುದರಲ್ಲಿ ಸಂದೇಹವಿಲ್ಲ. 

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ