ಮತಾಂಧ
ಶಕ್ತಿಗಳು ಕೇಂದ್ರದಲ್ಲಿ ಅಧಿಕಾರವನ್ನು ವಹಿಸಿಕೊಂಡ ನಂತರ ದೇಶಾದ್ಯಂತ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡಿವೆ.
ಮನುವಾದಿ ಪ್ಯಾಸಿಸ್ಟ್ ಪ್ರಭುತ್ವ ಸ್ಥಾಪನೆಯ ನಿಟ್ಟಿನಲ್ಲಿ ಸಂಘಪರಿವಾರವು ಜನರ ಮೆದುಳಲ್ಲಿ ದೇಶಭಕ್ತಿ,
ಧರ್ಮನಿಷ್ಟೆಗಳನ್ನು ತುಂಬಿ ಕೋಮುದ್ವೇಷವನ್ನು ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬರುತ್ತಿವೆ.
ಇಂತಹ ಜನವಿರೋಧಿ ನಕಾರಾತ್ಮಕ ಬೆಳವಣಿಗೆಯನ್ನು ದೇಶದ
ಎಲ್ಲಾ ಪ್ರಗತಿಪರ ಮನಸುಗಳು ವೈಯಕ್ತಿಕ ನೆಲೆಯಲ್ಲಿ ವಿರೋಧಿಸುತ್ತಿವೆ. ಹಾಗೂ ಬಿಡಿ ಬಿಡಿಯಾಗಿ ಸಂಘಟಿತ
ಹೋರಾಟಗಳೂ ವ್ಯಕ್ತಪಡಿಸುತ್ತವೆ. ಆದರೆ.. ಸಂಘಪರಿವಾರದ ಸಂಘಟಿತ ಹುನ್ನಾರಗಳ ಮುಂದೆ ಈ ಬಿಡಿ ಹೋರಾಟಗಳು
ಯಾವುದಕ್ಕೂ ಸಾಲದಾಗಿವೆ. ಎಪ್ಪತ್ತರ ದಶಕದಲ್ಲಿ ಕೋಮುವಾದಿ ಶಕ್ತಿಗಳಿಗೆ ತೀವ್ರವಾದ ಪ್ರತಿರೋಧವನ್ನು
ಒಡ್ಡಿ ನಿಯಂತ್ರಿಸುತ್ತಿದ್ದ ಹೋರಾಟಗಳು ಬರುಬರುತ್ತಾ ತಮ್ಮೊಳಗಿನ ಅವಕಾಶವಾದಿ ನಾಯಕತ್ವದಿಂದಾಗಿ ವಿಘಟನೆ
ಹೊಂದುತ್ತಾ ಬಲಹೀನವಾಗಿದ್ದಂತೂ ಚಾರಿತ್ರಿಕ ವಿಪರ್ಯಾಸ. ಆಳುವ ಎಲ್ಲಾ ನಮೂನಿಯ ಬಂಡವಾಳಶಾಹಿ ಪರ ಸರಕಾರಗಳೂ
ಸಹ ಜನಪರವಾಗಿದ್ದ ರೈತ, ದಲಿತ, ಬಂಡಾಯ ಹಾಗೂ ಕಮ್ಯೂನಿಸ್ಟ್ ಹೋರಾಟಗಳ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ
ಯಶಸ್ವಿಯಾದವು. ಆಗ ಸರಕಾರಗಳನ್ನೇ ಅಲ್ಲಾಡಿಸುತ್ತಿದ್ದ ಜನಹೋರಾಟಗಳು ಈಗ ನಗಣ್ಯವಾಗಿವೆ. ತತ್ವನಿಷ್ಟ
ನಾಯಕತ್ವ ಮರೆಯಾಗಿ ಅವಕಾಶವಾದಿ ನಾಯಕತ್ವ ಮುಂಚೂಣಿಯಲ್ಲಿದೆ. ಇನ್ನೂ ಕೆಲವಾರು ಸಿದ್ದಾಂತ ಬದ್ದ ಪ್ರಗತಿಪರರು
ಇದ್ದಾರಾದರೂ ಅವರೆಲ್ಲಾ ಅಸಹಾಯಕರಾಗಿದ್ದಾರೆ.
ಇಂತಹ
ಸಂದರ್ಭದಲ್ಲಿ ಮತಾಂಧ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಅಳಿದುಳಿದ ಹೋರಾಟನಿರತ ಸಕ್ರೀಯ ಸಂಘಟನೆಗಳನ್ನು
ಒಂದುಗೂಡಿಸುವ ಅನಿವಾರ್ಯತೆ ಇದೆ. ಹಾಗೂ ಜನಪರವಾಗಿರುವ ಮನಸ್ಸುಗಳನ್ನೆಲ್ಲಾ ಒಂದು ವೇದಿಕೆಯಲ್ಲಿ ಒಗ್ಗೂಡಿಸಿ
ಐಕ್ಯ ಹೋರಾಟವನ್ನು ರೂಪಿಸುವ ಅಗತ್ಯತೆಯೊಂದೇ ಪ್ಯಾಸಿಸ್ಟ್ ಮಾದರಿ ವ್ಯವಸ್ಥೆಯ ನಾಶಕ್ಕೆ ಪರ್ಯಾಯವಾಗಿದೆ.
ಐಕ್ಯ ಹೋರಾಟಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಹಿಂದೆಯೂ ಹಲವಾರು ಪ್ರಯತ್ನಗಳಾಗಿವೆಯಾದರೂ ನಾಯಕತ್ವದಲ್ಲಿರುವ
ಭಿನ್ನಾಭಿಪ್ರಾಯಗಳಿಂದಾಗಿ ಉದ್ದೇಶಿತ ಯಶಸ್ಸು ಸಿಗಲಿಲ್ಲ. ಈಗ ಅಂತಹದೊಂದು ಪ್ರಯತ್ನ ಆರಂಭಗೊಂಡಿದ್ದೊಂದು
ಅಂಧಕಾರದಲ್ಲಿ ಆಶಾಕಿರಣವೊಂದು ಮೂಡಿದಂತಾಗಿದೆ. ಅಸಹಾಯಕರಾಗಿ ನಿರ್ಲಿಪ್ತವಾಗಿರುವ ಹಲವಾರು ಪ್ರಗತಿಪರ
ವ್ಯಕ್ತಿಗಳಿಗೆ ಹೊಸ ಹುಮ್ಮಸ್ಸನ್ನು ತುಂಬುವಂತಾಗಿದೆ. ಯಾವುದೇ ಒಂದು ಅಥವಾ ಎರಡು ಸಂಘಟನೆಗಳಿಂದ ಅಥವಾ
ಕೆಲವೇ ಪ್ರಗತಿಪರ ವ್ಯಕ್ತಿಗಳಿಂದ ಜನವಿರೋಧಿ ಶೋಷಕ ವ್ಯವಸ್ಥೆಯನ್ನು ಎದುರಿಸಲು ಸಾಧ್ಯವಿಲ್ಲ. ಅದಕ್ಕೆ
ಜನಪರ ಸಂಘಟನೆಗಳ ಮಹಾಐಕ್ಯತೆ ಬೇಕಾಗಿದೆ. ಅಂತಹ ಪ್ರಯತ್ನವೊಂದು ಈಗ ಆರಂಭಗೊಂಡಿದೆ.
ಹೌದು..
ಕೆಲವಾರು ಜನಹೋರಾಟಪರ ಸಂಘಟನೆಗಳು ಸೇರಿಕೊಂಡು ಜನಾಂದೋಲನಗಳ ಮಹಾಮೈತ್ರಿಗೆ ವೇದಿಕೆಯನ್ನು ಸಿದ್ದಪಡಿಸಿವೆ.
ಜನಪರವಾದ ಐಕ್ಯ ಚಳುವಳಿಯನ್ನು ಕಟ್ಟುವ ಆಶಯದೊಂದಿಗೆ ಅಕ್ಟೋಬರ್ ೬ ರಂದು ಮೈಸೂರಿನಲ್ಲಿ ಮಹಾಮೈತ್ರಿಗೆ
ಚಾಲನೆ ದೊರಕಿತು. ಕರ್ನಾಟಕದ ಸಮಾನ ಮನಸ್ಕ ವ್ಯಕ್ತಿಗಳು ಹಾಗೂ ಶಕ್ತಿಗಳನ್ನು ಒಂದುಗೂಡಿಸಿ ಸಶಕ್ತ
ಹೋರಾಟವನ್ನು ಕಟ್ಟುವ ನಿಟ್ಟಿನಲ್ಲಿ ಜನಾಲೋಂದನ ಮಹಾಮೈತ್ರಿ ಘೋಷಣಾ ಸಮಾವೇಶ ಆರಂಭಗೊಂಡಿದ್ದು ನಿಜಕ್ಕೂ
ಆಶಾದಾಯಕವಾದ ಬೆಳವಣಿಗೆ. ಭ್ರಷ್ಟತೆಯ ಆಗರವಾಗಿರುವ ಹಾಗೂ ಜನವಿರೋಧಿಯಾದ ಆಳುವ ವ್ಯವಸ್ಥೆಗಳ ವಿರುದ್ಧ
ಜನಹೋರಾಟವನ್ನು ಗಟ್ಟಿಗೊಳಿಸುವ ಪ್ರಯತ್ನವೊಂದು ಆರಂಭವಾಯಿತು. ಜನವಿರೋಧಿಯಾದ ಆಳುವ ವರ್ಗಗಳು ಹಾಗೂ
ಜೀವವಿರೋಧಿಯಾದ ಸಂಘಪರಿವಾರದ ವಿರುದ್ಧ ಜನರನ್ನು ಜಾಗೃತಗೊಳಿಸಿ ಜನಾಂದೋಲನಕ್ಕೆ ಸಿದ್ದಗೊಳಿಸಬೇಕಾದ
ಅನಿವಾರ್ಯತೆ ಇದೆ. ಛಿದ್ರಗೊಂಡ ಜನಪರ ಸಂಘಟನೆಗಳನ್ನು ಹಾಗೂ ಪ್ರಗತಿಪರ ಆಶಯಗಳುಳ್ಳ ನಾಯಕರನ್ನು ಒಂದುಗೂಡಿಸುವ
ಪ್ರಯತ್ನವೊಂದು ಜನಾಲೋಂದನ ಮೈತ್ರಿಕೂಟ ಆರಂಭಿಸಿದ್ದು ಕಾಲದ ಅಗತ್ಯತೆಯಾಗಿದೆ. ಜನಾಲೊಂದನಗಳೇ ಸುಸ್ತಾಗಿ
ಸುಧಾರಿಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಮತ್ತೆ ಮಹಾಮೈತ್ರಿಯನ್ನು ಹುಟ್ಟುಹಾಕುವ ಮೂಲಕ ಶೋಷಿತ
ಜನತೆಯನ್ನು ಒಗ್ಗೂಡಿಸಬೇಕಾಗಿದೆ. ಸಂಘಟಿತ ಹೋರಾಟವೊಂದು ಪ್ರಭಲಗೊಳ್ಳಲೇಬೇಕಿದೆ.
“ಬಹುತೇಕ ಜನಾಲೋಂದನಗಳು ಟ್ರೇಡ್ ಯುನಿಯನ್ ಸ್ವಬಾವ ಪಡೆದು ಬಾವಿಕಪ್ಪೆಗಳಾಗಿವೆ.
ಇಡಿಯಾಗಿ ನೋಡುವ ಕಣ್ಣೋಟ ಹಾಗೂ ಗ್ರಹಿಕೆಯನ್ನು ಜನಾಲೋಂದನಗಳೂ ಪಡೆದುಕೊಳ್ಳಬೇಕಿದೆ. ದಾಯಾದಿಯಂತಿರುವ
ಜನಾಂದೋಲನಗಳು ಸೋದರತೆ ಪಡೆದುಕೊಂಡಾಗ ಖಾಸಗಿ ಮಿಥ್ಯ ರಾಜಕಾರಣಕ್ಕೆ ಮುಖಾಮುಖಿಯಾಗುವ ತ್ರಾಣ ಜನಾಲೋಂದನಕ್ಕೆ
ದಕ್ಕಬಹುದು ” ಎಂದು ದೇವನೂರ ಮಹಾದೇವರವರು
ಈ ಮಹಾಮೈತ್ರಿ ಸಮಾವೇಶದ ಆಶಯ ಭಾಷಣದಲ್ಲಿ ಹೇಳಿದ್ದು ಪ್ರಸ್ತುತ ಹೋರಾಟಗಳಿಗೆ ಕನ್ನಡಿ ಹಿಡಿದಂತಿದೆ.
ವ್ಯಕ್ತಿಕೇಂದ್ರಿತವಾಗಿರುವ
ಬಹುತೇಕ ಜನಪರ ಸಂಘಟನೆಗಳು ಮೊದಲು ಜನಶಕ್ತಿಕೇಂದ್ರಗಳಾಗಬೇಕಿವೆ. ತಮ್ಮ ವ್ಯಯಕ್ತಿಕ ರಾಗದ್ವೇಷ ಮಹತ್ವಾಂಕಾಂಕ್ಷೆ ಹಾಗೂ ಅಹಮಿಕೆಗಳನ್ನು ಬಿಟ್ಟು ಐಕ್ಯ ಹೋರಾಟವನ್ನು
ಕಟ್ಟಿ ಮುನ್ನಡೆಸುವ ಆಶಯವನ್ನು ಬೆಳೆಸಿಕೊಳ್ಳಬೇಕಿದೆ. ಸಂಘಟನೆಗಳ ನಾಯಕರುಗಳು ತಮ್ಮ ಅಧಿಕಾರದಾಹ ಹಾಗೂ
ಪದವಿ ಪುರಸ್ಕಾರ ಪ್ರಶಸ್ತಿಗಳ ಮೋಹಗಳನ್ನು ತೊರೆದು ಒಕ್ಕೂಟ ಮಾದರಿಯ ಜನಾಲೋಂದನವನ್ನು ಹುಟ್ಟು ಹಾಕುವ ಮಹತ್ತರವಾದ
ಕಾರ್ಯಕ್ಕೆ ಬದ್ದರಾದಾಗ ಮಾತ್ರ ಐಕ್ಯ ಹೋರಾಟಕ್ಕೆ ಅರ್ಥ ಬರುತ್ತದೆ. ಕರ್ನಾಟಕದಲ್ಲಿ ರಾಜಕೀಯ
ಪ್ರಾತಿನಿದ್ಯತೆಗಳೇ ಇಲ್ಲದೇ ಸೋತು ಸುಸ್ತಾಗಿ ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಕಮ್ಯೂನಿಸ್ಟ್
ಪಕ್ಷಗಳು ಸಹ ಈ ಮಹಾಮೈತ್ರಿ ಕೂಟದ ಭಾಗವಾಗಿ ಜನಾಲೋಂದನ ಮುನ್ನಡೆಯಲು ಸಹಕರಿಸಬೇಕಿದೆ. ಶತ್ರುಗಳು ದೈತ್ಯಶಕ್ತಿಯನ್ನು
ಪಡೆದುಕೊಂಡು ವಿಜ್ರಂಬಿಸುತ್ತಿರುವಾಗ ಜನಸಂಘಟನೆಗಳು ಹಾಗೂ ಪ್ರಗತಿಪರರು ಇನ್ನೊಬ್ಬರ ಕಾಲುಗಳನ್ನು
ಎಳೆದುಕೊಂಡು, ತಮ್ಮವರನ್ನು ತಾವೇ ಟೀಕಿಸುತ್ತಾ ಶಕ್ತಿಹೀನರಾಗುವುದು
ಜನರಿಗೆ ಮಾಡಿದ ದ್ರೋಹವೇ ಆಗಿದೆ. ತಾತ್ವಿಕ ಭಿನ್ನಾಭಿಪ್ರಾಯಗಳನ್ನು ನೇರ ಮಾತುಕತೆಗಳಿಂದ ಬಗೆಹರಿಸಿಕೊಳ್ಳುತ್ತಾ..
ಬಗೆಹರಿಯದ ಅಭಿಪ್ರಾಯಬೇದಗಳನ್ನು ಪಕ್ಕಕ್ಕಿಟ್ಟು ಆಶಯಕ್ಕೆ ಬದ್ದವಾದ ಹೋರಾಟವನ್ನು ಕಟ್ಟಬೇಕಾಗಿದೆ.
ಆದರೆ..
ಅವಕಾಶವಾದಿ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ, ರಾಜೀಕೋರತನವನ್ನೇ ಮೈಗೂಡಿಸಿಕೊಂಡ ಜನಪರ ಮುಖವಾಡದ
ಕೆಲವು ನಾಯಕರುಗಳು ಇಂತಹ ಮಹಾಮೈತ್ರಿಗೆ ಬಲು ಅಪಾಯಕಾರಿಗಳಾಗುವ ಸಾಧ್ಯತೆಗಳಿವೆ. ರಾಜಾಶ್ರಿತವಾಗಿ ಬೆಳೆದಿರುವ ಸಂಘಟನೆಗಳೂ ಸಹ ಮಗ್ಗುಲು ಮುಳ್ಳಾಗುವುದರಲ್ಲಿ
ಸಂದೇಹವಿಲ್ಲ. ಆಳುವ ಸರಕಾರಗಳಿಂದ ಸಕಲ ಸವಲತ್ತುಗಳನ್ನು ಪಡೆದೂ ಜನಪರವಾಗಿದ್ದೇವೆಂದು ತಮ್ಮನ್ನು ಸಮರ್ಥಿಸಿಕೊಳ್ಳುವವರೂ
ಸಹ ಪ್ರಸ್ತುತ ಮಹಾಮೈತ್ರಿಯ ಜೊತೆಗಿದ್ದಾರೆ. ಇಂತಹ ರಾಜೀಕೋರರನ್ನು ದೂರವಿಟ್ಟೂ ಸಂಘಟನೆ ಕಟುವಂತಿಲ್ಲಾ..
ಜೊತೆಗಿಟ್ಟುಕೊಂಡಷ್ಟೂ ಅಪಾಯ ತಪ್ಪಿದ್ದಲ್ಲ. ಇಂತಹ ಸಿಕ್ಕುಗಳನ್ನು ಜನಾಂದೋಲನ ಮಹಾಮೈತ್ರಿ ಅದು ಹೇಗೆ
ನಿರ್ವಹಿಸುತ್ತದೆ ಎನ್ನುವುದರಲ್ಲಿ ಅದರ ಯಶಸ್ಸು ಇಲ್ಲವೇ ವಿಫಲತೆ ಇದೆ. ಅವಕಾಶವಾದಿತನವೆಂಬುದೇ ಎಲ್ಲಾ
ಸಂಘಟನೆಗಳ ವಿಘಟನೆಗೆ ಕಾರಣವಾಗಿದ್ದು ಸ್ಪಷ್ಟವಾಗಿದೆ. ಬದ್ದತೆ ಇರುವವರ ಜೊತೆಗೆ ಈ ರಾಜೀಕೋರರೂ ಸೇರಿಕೊಂಡರೆ
ಅದೆಷ್ಟೇ ಮುತುವರ್ಜಿವಹಿಸಿ ಕಟ್ಟಿದ ಐಕ್ಯ ಹೋರಾಟಗಳೂ ಹಳ್ಳಹಿಡಿದು ಹೋಗುವುದರಲ್ಲಿ ಸಂದೇಹವೇ ಇಲ್ಲ.
ಈ ಪ್ರಜ್ಞಾವಂತರೆನಿಸಿಕೊಂಡ ಪ್ರಗತಿಪರ ಸಂಘಟನೆಗಳ ನಾಯಕರುಗಳ
ಸಮಸ್ಯೆ ಏನೆಂದರೆ ಎಲ್ಲರೂ ತಮ್ಮ ವಾದವೇ ಸರಿ ಮತ್ತೊಬ್ಬರದು ತಪ್ಪು ಎನ್ನುವ ದೋರಣೆಯನ್ನು ಬೆಳೆಸಿಕೊಂಡಿರುವುದು. ಉದಾಹರಣೆಗೆ.. ಕಮ್ಯೂನಿಸ್ಟ ಪಕ್ಷಗಳಿಗೆ ಸಂಬಂಧಿಸಿದ ಎಲ್ಲಾ
ಸಂಘಟನೆಗಳೂ ಸಹ ಪರಸ್ಪರ ತಮ್ಮ ತಮ್ಮಲ್ಲೇ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಂಡು ಐಕ್ಯತೆಯನ್ನು ಬೆಳೆಸಿಕೊಳ್ಳದೇ
ಬಿಡಿ ಬಿಡಿ ಹೋರಾಟಗಳನ್ನು ಮಾಡುತ್ತಿವೆ. ಒಂದೇ ಸಿದ್ದಾಂತದ ಈ ಕೆಂಬಾವುಟದ ಜನರಲ್ಲೇ ಐಕ್ಯಮತ್ಯ ಇಲ್ಲದಿರುವಾಗ ಐಕ್ಯ ಹೋರಾಟವನ್ನು
ರೂಪಿಸುವುದಾದರೂ ಹೇಗೆ ಸಾಧ್ಯ? ಜೊತೆಗೆ ಅಂಬೇಡ್ಕರರನ್ನೇ ಕೇಂದ್ರವಾಗಿಟ್ಟುಕೊಂಡು ಅವರ ಸಿದ್ದಾಂತಗಳನ್ನೇ
ನಂಬಿರುವ ಅನೇಕಾನೇಕ ದಲಿತಪರ ಸಂಘಟನೆಗಳ ನಾಯಕರುಗಳಲ್ಲಿರುವ ಭಿನ್ನಾಭಿಪ್ರಾಯಗಳಿಂದಾಗಿ ಇಲ್ಲಿವರೆಗೂ
ದಲಿತ ಸಂಘಟನೆಗಳು ಒಂದಾಗಲು ಸಾಧ್ಯವಾಗಿಲ್ಲ. ದಲಿತ ಸಂಘರ್ಷ ಸಮಿತಿ ಎನ್ನುವ ಒಂದೇ ಒಂದು ಸಂಘಟನೆ ಇದ್ದದ್ದು
ಈಗ ದಲಿತರ ಹೆಸರಲ್ಲಿ ನೋಂದನಿಯಾದ ಸಂಘಟನೆಗಳೇ ಮೂರು ಸಾವಿರದಷ್ಟಿವೆ. ವರ್ಗಸಂಘರ್ಷದಿಂದ ಸಮಾನತೆ ಸಾಧಿಸುವುದು
ಎಲ್ಲಾ ಕಮ್ಯೂನಿಸ್ಟರ ಪ್ರಮುಖ ಗುರಿಯಾದರೆ.. ಜಾತಿಸಂಘರ್ಷದಿಂದ ದೇಶಾಧಿಕಾರ ಹಿಡಿದು ಜಾತಿವಿನಾಶ ಮಾಡುವುದು
ನೀಲಿ ಬಾವುಟದ ಅಂಬೇಡ್ಕರ್ವಾದಿಗಳ ಗುರಿಯಾಗಿದೆ. ಜಾತಿನಾಶ ಮತ್ತು ವರ್ಗನಾಶ ಎರಡೂ ಸಂಭವಿಸಿ ಸಮಾನತೆ
ಬರಬೇಕು ಎನ್ನುವುದು ಈ ಎಲ್ಲರ ಗುರಿಯಾಗಿದೆ. ಆದರೆ
ಅದಕ್ಕಾಗಿ ಹುಡುಕಿಕೊಂಡ ದಾರಿಗಳು ಬಿನ್ನವಾಗಿವೆ. ಹೋರಾಟದ ದಾರಿಯ ದಿಕ್ಕು ತೋರಿಸುವ ನಾಯಕತ್ವದ ಸ್ವಾರ್ಥತನದಿಂದಾಗಿಯೇ
ಐಕ್ಯತೆ ಸಾಧಿಸುವುದು ಅಸಾಧ್ಯವಾಗಿದೆ. ಕೊನೆಗೆ ಕಮ್ಯೂನಿಸ್ಟರನ್ನು ದಲಿತ ಚಿಂತಕರು ಅನುಮಾನದಿಂದಲೇ
ನೋಡುತ್ತಾ ನಿಂದಿಸುವುದು ಹಾಗೂ ದಲಿತ ನಾಯಕರ ನಡೆಗಳನ್ನು ಕಮ್ಯೂನಿಸ್ಟರು ವಿಮರ್ಶಿಸುವುದು ನಿರಂತರವಾಗಿ
ನಡೆದೇ ಇದೆ. ಇಂತಹ ಅನುಮಾನಗಳು ಹಾಗೂ ವಿಪರೀತ ಸಂದೇಹಗಳನ್ನು ಇಟ್ಟುಕೊಂಡು ಜನಾಂದೋಲನಗಳ ಮಹಾಮೈತ್ರಿಯನ್ನು
ಕಟ್ಟುವುದು ಅಂದುಕೊಂಡಷ್ಟು ಸುಲಭಸಾಧ್ಯವಲ್ಲ. ರೈತ ಸಂಘಟನೆಗಳೂ ಸಹ ವಿಭಜನೆಗೊಂಡು ತಮ್ಮ ಪಾಡಿಗೆ ತಾವು
ಬಿಡಿ ಹೋರಾಟಗಳನ್ನು ಮಾಡುತ್ತಲೇ ಇವೆ. ಹೀಗೆ ಪರಸ್ಪರ ಅಪನಂಬಿಕೆಯನ್ನು ಹೊಂದಿರುವ ವ್ಯಕ್ತಿ ಹಾಗೂ
ಸಂಘಟನೆಗಳನ್ನು ಒಂದು ವೇದಿಕೆಯಲ್ಲಿ ತಂದು ಐಕ್ಯ ಜನಹೋರಾಟವನ್ನು ಕಟ್ಟುವುದು ಪ್ರಯಾಸದಾಯಕ ಕೆಲಸವಾಗಿದೆ.
ಆದರೂ
ಅಂತಹ ಪ್ರಯತ್ನವನ್ನಂತೂ ಮಾಡಲೇಬೇಕಿದೆ. ಸಮಾನಾಸಕ್ತ ಸಂಘಟನೆಗಳು ಹಾಗೂ ವ್ಯಕ್ತಿಗಳಾದರೂ ಜೊತೆಗೂಡಬೇಕಿದೆ.
ಜಂಟಿ ಹೋರಾಟಗಳು ಸಶಕ್ತಗೊಂಡು ತೀವ್ರಗೊಂಡಷ್ಟೂ ಬಾಕಿ ಸಮಾನಾಸಕ್ತ ಸಂಘಟನೆಗಳೂ ಜೊತೆಗೂಡುತ್ತವೆ. ಪ್ರಸ್ತುತವಾಗಿ
ಜನಸಂಗ್ರಾಮ ಪರಿಷತ್ತು, ಕರ್ನಾಟಕ ರಾಜ್ಯ ರೈತ ಸಂಘ, ಸವೋದಯ ಕರ್ನಾಟಕ ಪಕ್ಷ,, ದಲಿತ ಸಂಘರ್ಷ ಸಮಿತಿ,
ಕರ್ನಾಟಕ ಜನಶಕ್ತಿ... ಹೀ॒ಗೆ 28 ಸಂಘಟನೆಗಳ ಮುಖಂಡರುಗಳು ಸೇರಿ ಜನಾಲೋಂದನದ
ಮಹಾಮೈತ್ರಿಗೆ ಚಾಲನೆ ಕೊಟ್ಟಿದ್ದಾರೆ. ಮೊದಲು ಈ ಸಂಘಟನೆಗಳ ಮುಖಂಡರುಗಳು ಸೇರಿ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳ
ಬಗ್ಗೆ ಹಾಗೂ ಒಟ್ಟಾಭಿಪ್ರಾಯಗಳು ಇರಬಹುದಾದ ವಿಷಯಗಳ ಕುರಿತು ಚರ್ಚಿಸಬೇಕಾಗಿದೆ. ಸಮಾನ ಆಶಯದ ಕುರಿತು
ಒಮ್ಮತದ ನಿರ್ಣಯಗಳನ್ನು ತೆಗೆದುಕೊಂಡು ಇರುವ ತಮ್ಮ ಸಂಘಟನೆಗಳ ಒಟ್ಟು ಶಕ್ತಿಯನ್ನು ಜೊತೆಗೂಡಿಸಿಕೊಂಡು
ಜಂಟಿ ಹೋರಾಟಗಳನ್ನು ರೂಪಿಸುವ ಮೂಲಕ ಜನಾಲೋಂದನ ಮಹಾಮೈತ್ರಿಯ
ಅಗತ್ಯತೆ ಹಾಗೂ ಸಾಧ್ಯತೆಗಳನ್ನು ಸಾಬೀತುಪಡಿಸಬೇಕಿದೆ. ಈಗ ಒಂದಾಗಿ ತದನಂತರ ಪರಸ್ಪರ ಕಾಲೆಳೆದುಕೊಳ್ಳುವ
ಸಂಕುಚಿತತೆಯಿಂದ ಪ್ರಗತಿಪರರು ಎಂದು ಹೇಳಿಕೊಳ್ಳುವವರು ಮುಕ್ತವಾಗಬೇಕಿದೆ. ಶೋಷಕ ಸರಕಾರಗಳು ಹಾಗೂ
ಮತಾಂಧ ಸಂಘಟನೆಗಳ ವಿರುದ್ದ ಜನರನ್ನು ಜಾಗೃತಗೊಳಿಸಿ ಜನಾಲೋಂದನವನ್ನು ತೀವ್ರಗೊಳಿಸುವುದೊಂದೇ ಈ ಮಹಾಮೈತ್ರಿಯ
ಮಹಾಉದ್ದೇಶವಾಗಬೇಕಿದೆ. ಹಾಗೂ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಸೋಷಿಯಲ್ ಮೀಡಿಯಾಗಳಲ್ಲಿ ಸಾರ್ವತ್ರಿಕಗೊಳಿಸಿ
ವಿರೋಧಿಗಳ ಕೈಗೆ ಅಸ್ತ್ರಗಳನ್ನು ಕೊಡುವ ಇಲ್ಲವೇ ಸಹವರ್ತಿಗಳಲ್ಲಿ ಅಸಹನೆ ಹುಟ್ಟಿಸುವ ಕೆಲಸವನ್ನು
ಕೈಬಿಟ್ಟು ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಸಭೆಗಳಲ್ಲಿ ಬಗೆಹರಿಸಿಕೊಳ್ಳುವುದುತ್ತಮ. ಇಲ್ಲವಾದರೆ
ಒಗ್ಗಟ್ಟಾಗಿ ಉಡುಪಿ ಚಲೋ ಮಾಡಿದ ಕೆಂಪು ನೀಲಿ ಬಾವುಟಗಳ ಜನರು ಆ ನಂತರ ಪರಸ್ಪರ ಭಿನ್ನಾಭಿಪ್ರಾಯಗಳನ್ನು
ವಾಟ್ಸಾಪ್ ಫೇಸ್ಬುಕ್ಗಳಲ್ಲಿ ಪರವಿರೋಧವಾಗಿ ಚರ್ಚಿಸಿದ್ದು ಅನುಕರಣೀಯವಲ್ಲ.
ಇದು ಜಂಟಿ ಹೋರಾಟದ ಆಶಯವನ್ನೇ ದಿಕ್ಕೆಡಿಸುವಂತಹುದಾಗಿದೆ. ಬಾವುಟದ ಬಣ್ಣ ಹಾಗೂ ಸಂಘಟನೆಗಳ ಆಶಯಗಳು
ಯಾವುದೇ ಆಗಿರಲಿ.. ಆದರೆ ಮೈತ್ರಿಕೂಟದಲ್ಲಿದ್ದಾಗ ಒಗ್ಗಟ್ಟಿಗೆ ಬದ್ದರಾಗಿರಬೇಕಾದ ಅಗತ್ಯತೆ ಇದೆ.
ಇಲ್ಲವಾದರೆ ಬಾಹ್ಯದ ದುಷ್ಟ ಶಕ್ತಿಗಳ ವಿರುದ್ಧದ ಹೋರಾಟಗಳಿಗಿಂತಾ ಆಂತರಿಕ ಭಿನ್ನಾಭಿಪ್ರಾಯಗಳ ವಿರುದ್ದ
ಬಡಿದಾಡುವುದೇ ಮಹಾಮೈತ್ರಿಯ ಕೆಲಸವಾಗುವ ಅಪಾಯವೂ ಇದೆ.
ಸಧ್ಯ..
ಒಂದಿಷ್ಟು ಪ್ರಜ್ಞಾವಂತರಾದರು ಒಂದು ಕಡೆ ಸೇರಿ ಜನಾಲೋಂದನಗಳ ಮಹಾಕೂಟವನ್ನು ಸ್ಥಾಪಿಸುವ ಪ್ರಯತ್ನವನ್ನಾದರೂ
ಮಾಡಿದ್ದು ನಿರಾಶೆಯ ವಾತಾವರಣದಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ. ಒಂದು ಕರಡು ಪ್ರತಿಯನ್ನು ತಯಾರಿಸಿ
ಅದಕ್ಕೆ ಬದ್ದವಾಗಿ ನಡೆಯುವ ನಿರ್ಣಯವನ್ನು ಈ ಸಮಾವೇಶದಲ್ಲಿ ತೆಗೆದುಕೊಂಡಿದ್ದು ಸರಿಯಾಗಿದೆ. ಕರಡು
ಪ್ರತಿಯ ಮುಖ್ಯಾಂಶಗಳು ಹೀಗಿವೆ.
1. ಸಮಾಜದ ನಾನಾ ಕ್ಷೇತ್ರಗಳನ್ನು ಪ್ರಭಾವಿಸುವ ರೀತಿಯಲ್ಲಿ
ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
2. ಜನಪರ ಕೆಲಸಗಳನ್ನು ಮಾಡುತ್ತಿರುವ ಸಂಘಟನೆಗಳ ಮಹಾಮೈತ್ರಿಯ
ಸಹಯೋಗವನ್ನು ಗಟ್ಟಿಗೊಳಿಸುವುದು.
3. ಜನವಿರೋಧಿ ರಾಜಕೀಯ ಶಕ್ತಿಗಳ ವಿರುದ್ದದ ಜನಪರ್ಯಾಯದ
ಸಮಾವೇಶಗಳನ್ನು ಮಾಡುವುದು.
4. ಜನತೆಯ ಪ್ರಣಾಳಿಕೆಯೊಂದನ್ನು ಸಿದ್ದಗೊಳಿಸಿ ಬಿಡುಗಡೆ
ಮಾಡುವುದು.
5. ರಾಜ್ಯಾದ್ಯಂತ ಜನರನ್ನು ತಲುಪುವುದಕ್ಕೆ ಜಾಥಾಗಳನ್ನು
ಆಯೋಜಿಸುವುದು.
6. ರಾಜ್ಯ ಮತ್ತು ಕೇಂದ್ರ ಸರಕಾರಗಳ ಮೇಲೆ ಒತ್ತಡ ತರುವ
ಆಂದೋಲನಗಳನ್ನು ಶುರುಮಾಡುವುದು.
7. ಭ್ರಷ್ಟ ಹಾಗೂ ಜನವಿರೋಧಿ ರಾಜಕೀಯ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾಯಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವುದು...
ಹೀಗೆ..
ಕೆಲವಾರು ಪ್ರಮುಖವಾದ ನಿರ್ಣಯಗಳನ್ನು ಕರಡು ಪ್ರತಿಯಲ್ಲಿ ಘೋಷಿಸಲಾಗಿದೆ. ಆದರೆ.. ಆ ನಿರ್ಣಯಗಳ ಆಶಯಗಳಿಗೆ
ಎಲ್ಲಾ ಸಹ ಸಂಘಟನೆಗಳು ಬದ್ದವಾಗಿದ್ದರೆ ಸಾಕು ಜನಾಲೋಂದನ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಇದಕ್ಕಿಂತಾ
ಹೆಚ್ಚಾಗಿ ಈ ಮಹಾಮೈತ್ರಿಯನ್ನು ಒಡೆಯಲು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸರ್ವರೀತಿಯ ಪ್ರಯತ್ನಗಳನ್ನು
ಮಾಡುತ್ತವೆ. ಸಂಘಟನೆಗಳ ನಾಯಕರುಗಳಿಗೆ ಪ್ರಲೋಭನೆಗಳನ್ನು ಒಡ್ಡುತ್ತವೆ. ಒಪ್ಪದಿದ್ದರೆ ಹೆದರಿಸುತ್ತವೆ.
ಅದೂ ಆಗದಿದ್ದರೆ ಮತಾಂಧ ಶಕ್ತಿಗಳು ಹಲ್ಲೆ ಮಾಡುತ್ತವೆ. ಇಂತಹ ಎಲ್ಲಾ ಸಂಭವನೀಯ ಅಪಾಯಗಳನ್ನು ಒಗ್ಗಟ್ಟಿನಿಂದ
ಎದುರಿಸುವ ತಾಕತ್ತನ್ನು ಈ ಮೈತ್ರಿಕೂಟ ಉಪಾಯವಾಗಿ ನಿರ್ವಹಿಸಬೇಕಾಗಿದೆ. ಏನೇ ಆದರೂ ದೈತ್ಯಶಕ್ತಿಯಾಗಿರುವ
ಶೋಷಕ ವ್ಯವಸ್ಥೆಯನ್ನು ಎದುರಿಸಲು ಈಗಿರುವ ಮೈತ್ರಿಕೂಟದ ಶಕ್ತಿ ಸಾಲದು. ನಾಡಿನಲ್ಲಿರುವ ನಿರ್ಲಿಪ್ತ
ಹಾಗೂ ಅಲಿಪ್ತ ಪ್ರಗತಿಪರರನ್ನು ಜೊತೆಗೆ ಸೇರಿಸಿಕೊಳ್ಳಬೇಕಾಗಿದೆ. ವೈಯಕ್ತಿಕ ನೆಲೆಯಲ್ಲಿ ತಮ್ಮದೇ
ಆದ ರೀತಿಯಲ್ಲಿ ವ್ಯವಸ್ಥೆಯನ್ನು ವಿರೋಧಿಸುತ್ತಿರುವ ಕಲಾವಿದರುಗಳು, ಸಾಹಿತಿಗಳ ಸಹಕಾರವನ್ನು ಪಡೆದುಕೊಳ್ಳಬೇಕಿದೆ.
ಕೋಮುಬಣ್ಣವಿಲ್ಲದ ಜನಪರ ಸಂಘಟನೆಗಳ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜೊತೆಗಾರರನ್ನಾಗಿಸಿಕೊಳ್ಳಬೇಕಿದೆ.
ಶೋಷಣೆ ಹಾಗೂ ಮತಾಂಧತೆಯ ವಿರುದ್ದ ರೋಸಿ ಹೋಗಿರುವ ಎಲ್ಲರನ್ನೂ ಎಲ್ಲವನ್ನೂ ಒಳಗೊಂಡು ಈ ಜನಾಲೋಂದನ ಮಹಾಮೈತ್ರಿ ಸಹನೆ, ವಿವೇಚನೆ
ಹಾಗೂ ಮಾನವೀಯತೆಯಿಂದ ಕೆಲಸ ಮಾಡಿದರೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬಹು ದೊಡ್ಡ ಜನಶಕ್ತಿಯಾಗಬಹುದಾಗಿದೆ.
ಎಲ್ಲಾ ಜಾತಿ ಕೋಮು ವರ್ಗದ ದಮನಿತ ಜನರು ಒಂದಾಗಿ ಮಾನವೀಯ ಹಕ್ಕುಗಳು ಹಾಗೂ ಸಮಾನತೆಗಾಗಿ ಹೋರಾಡಿ ಗೆಲ್ಲಬೇಕಾಗಿದೆ.
ಮತಾಂಧ ಶಕ್ತಿಗಳು ಹಾಗೂ ಶೋಷಕ ಆಳುವ ವರ್ಗಗಳು ಸರ್ವನಾಶವಾಗಿ ಜನಸ್ನೇಹಿ ವ್ಯವಸ್ಥೆಯೊಂದು ಈ ದೇಶದಲ್ಲಿ
ನಿರ್ಮಾಣವಾಗಬೇಕಾಗಿದೆ. ಅದು ಸಾಧ್ಯವಾಗುವುದು ತಾರ್ಕಿಕ ಮುನ್ನೋಟದ ಜನಾಲೋಂದಲನಗಳಿಂದ ಮಾತ್ರ ಸಾಧ್ಯ.
ಅಂತಹ ಸಾಧ್ಯತೆಯ ಹಾದಿಯಲ್ಲಿ ಪಯಣ ಆರಂಭಿಸಿದ ಜನಾಲೋಂದನದ ಮಹಾಮೈತ್ರಿ ಕಟ್ಟುತ್ತಿರುವ ಎಲ್ಲಾ ಜನಪರ
ವ್ಯಕ್ತಿ ಹಾಗೂ ಶಕ್ತಿಗಳಿಗೆ ಅಭಿನಂದನೆಗಳು.
-ಶಶಿಕಾಂತ
ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ