ಸರಕಾರಕ್ಕೆ ಸರಾಯಿಯ ಚೆಲ್ಲಾಟ, ಗ್ರಾಮೀಣ ಮಹಿಳೆಯರಿಗೆ ಪ್ರಾಣಸಂಕಟ :
ಅತ್ತ ರಾಯಚೂರಿನಲ್ಲಿ ಕಳೆದ ತಿಂಗಳು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಹತ್ತಾರು
ಸಾವಿರ ಗ್ರಾಮೀಣ ಮಹಿಳೆಯರು ಸ್ವಯಂಪ್ರೇರಣೆಯಿಂದ ಮಧ್ಯ ಮಾರಾಟ ನಿಷೇಧಿಸಿ ಎಂದು ಬೀದಿಗಿಳಿದು ಸಮಾವೇಶ
ಮಾಡಿ ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅದು ನಡೆದು ಇನ್ನೂ ಒಂದು ತಿಂಗಳು ಕಳೆದಿದೆಯಷ್ಟೇ.
ಆದರೆ.. ಇತ್ತ ಸರಕಾರ ಮದ್ಯ ಮಾರಾಟದ ಮಳಿಗೆಗಳನ್ನು ನಾಡಿನಾದ್ಯಂತ ತೆರೆಯಲು ಯೋಜನೆ ಹಮ್ಮಿಕೊಂಡು
ಕಾರ್ಯಗತ ಮಾಡಿದೆ. ಎಂಎಸ್ಐಎಲ್ ಎನ್ನುವ ಸರಕಾರಿ ಕೃಪಾಪೋಷಿತ ಸಗಟು ಸರಾಯಿ ಮಾರಾಟದ ಅಂಗಡಿಗಳ ಸಂಖ್ಯೆಯನ್ನು
402 ರಿಂದ 1302ಕ್ಕೆ ಏರಿಸಲು ರಾಜ್ಯ ಸರಕಾರ ಮುಂದಾಗಿದೆ. ಇದು ನಿನ್ನೆ ಮೊನ್ನೆಯದಲ್ಲ.
ಈ ಕಾಂಗ್ರೆಸ್ ಸರಕಾರ ಬಂದಾಗಿನಿಂದಲೂ ಜನಸಂಖ್ಯೆಗೆ ಅನುಗುಣವಾಗಿ ಹೊಸ ಮದ್ಯ ಮಾರಾಟ ಮಳಿಗೆಗಳನ್ನು
ನಡೆಸಲು ಲೈಸನ್ಸ್ ನೀಡಬೇಕೆನ್ನುವ ಬೇಡಿಕೆಗಳು ಮಂತ್ರಿಗಳಿಂದಲೇ ಬಂದಿತ್ತು. ಆಗ ಅಬಕಾರಿ ಸಚಿವರಾಗಿದ್ದ
ಸತೀಶ್ ಜಾರಕಿಹೊಳಿಯವರು ರಾಜ್ಯದಲ್ಲಿ 1750 ಮದ್ಯದ ಅಂಗಡಿಗಳನ್ನು ಹೊಸದಾಗಿ
ತೆರೆಯುವ ಪ್ರಸ್ತಾಪ ಮಂಡಿಸಿದ್ದರು. ಸರಕಾರಕ್ಕೆ
ಕೆಟ್ಟ ಹೆಸರು ಬಂದೀತೆಂದು ಕೆಲವು ಹಿರಿಯ ಮಂತ್ರಿಗಳು ಹೇಳಿದ್ದರಿಂದ ಹಾಗೂ ಸಾರ್ವಜನಿಕರಿಂದ ಪ್ರತಿರೋಧ
ಬಂದಿದ್ದರಿಂದ ಯಾವುದೇ ಅಧೀಕೃತ ತೀರ್ಮಾಣ ತೆಗೆದುಕೊಳ್ಳದೇ ಸರಕಾರ ತೆಪ್ಪಗಿತ್ತು. ಆದರೆ.. ಈಗ ಅಧಿಕೃತವಾಗಿಯೇ
ಮದ್ಯದಂಗಡಿಗಳನ್ನು ಹೆಚ್ಚಿಸುವ ನಿರ್ಧಾರಕ್ಕೆ ಸರಕಾರ ಬದ್ದವಾಗಿದೆ. ಬಡಜನರ ಬದುಕು ಹಾಗೂ ಕುಟುಂಬಗಳ
ನೆಮ್ಮದಿಯ ಜೊತೆಗೆ ಸಾವಿನಾಟವಾಡಲು ಶುರುಮಾಡಿಕೊಂಡಿದೆ.
ಒಂದೆರಡು ಮಳಿಗೆಗಳಲ್ಲಾ.. ಈಗಿರುವ ಸರಾಯಿ ಮಳಿಗೆಗಳನ್ನು ದುಪ್ಪಟ್ಟಿಗಿಂತಾ ಹೆಚ್ಚು
ಮಾಡುವ ಪ್ರಯತ್ನವು ಬಡವರ ಪರ ಎಂದು ಹೇಳುತ್ತಿರುವ ಈ ಸರಕಾರದ ಜನವಿರೋಧಿ ದೋರಣೆಗೆ ಪೂರಕವಾಗಿದೆ. ಕರ್ನಾಟಕದ
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 900 ಹೆಚ್ಚುವರಿ ಎಂಎಸ್ಐಎಲ್ (ಮೈಸೂರು ಸೇಲ್ಸ್ ಇಂಟರನ್ಯಾಷನಲ್
ಲಿಮಿಟೆಡ್) ಸಗಟು ಮಳಿಗೆಗಳಿಗೆ ಸರಕಾರ ಅನುಮೋದನೆ ನೀಡಿದ್ದು, ಆದರ ಜಾರಿಗಾಗಿ ಈಗಾಗಲೇ ಅಬಕಾರಿ ಆಯುಕ್ತರು
ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಎಸ್.ಎಂ.ಕೃಷ್ಣ
ಮುಖ್ಯ ಮಂತ್ರಿಗಳಾಗಿದ್ದಾಗ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಬಹುದಾದ ಪ್ರಯತ್ನ ನಡೆದಿತ್ತು.
ಆದರೆ ಜನರ ತೀವ್ರ ವಿರೋಧದಿಂದಾಗಿ ಅದು ಆಚರಣೆಗೆ ಬರಲಿಲ್ಲ. ಯಾವುದೇ ಸರಕಾರಗಳು ಬಂದರೂ ಮಧ್ಯ ಮಾರಾಟವನ್ನು
ಈ ರೀತಿ ದೊಡ್ಡ ಮಟ್ಟದಲ್ಲಿ ಶುರುಮಾಡಿರಲಿಲ್ಲ. ಜನರ ವಿರೋಧವನ್ನು ಕಟ್ಟಿಕೊಳ್ಳ ಬಯಸಲಿಲ್ಲ. ಒಂದೆರಡಲ್ಲ
ಕಳೆದ 24 ವರ್ಷಗಳಿಂದ ಹೊಸದಾಗಿ ಮದ್ಯದಂಗಡಿಗಳ ಪರವಾಣಿಗೆಯನ್ನು ಯಾವ ಸರಕಾರಗಳೂ ನೀಡಿಲ್ಲ. ಹಿಂದಿದ್ದ
ಬಿಜೆಪಿ ಸರಕಾರವೂ ಹೊಸದಾಗಿ ಯಾರಿಗೂ ಲೈಸನ್ಸ್ ಕೊಡದಿದ್ದರೂ ನವೀಕರಣವಾಗದ 4೦೦ ಕ್ಕೂ ಹೆಚ್ಚು ಮದ್ಯದ
ಅಂಗಡಿಗಳ ಲೈಸನ್ಸನ್ನು ಸರಕಾರಿ ಸಾಮ್ಯದ ಎಂಎಸ್ಐಎಲ್ ಗೆ ನೀಡಿ ಅವುಗಳ ಮೂಲಕ ಮಾರಾಟ ಮಾಡಲು ಅವಕಾಶ
ಮಾಡಿಕೊಟ್ಟಿತ್ತು. ಖಾಸಗಿಯವರಿಗೆ ಮದ್ಯ ಮಾರಾಟದ ಲೈಸೆನ್ಸ್ ನೀಡಿದರೆ ವಿರೋಧ ಪಕ್ಷಗಳು ವಿರೋಧಿಸುತ್ತಾರೆಂದುಕೊಂಡು
ಸರಕಾರಿ ಸಾಮ್ಯದ ಎಂಎಸ್ಐಎಲ್ ಮಾರಾಟ ಮಳಿಗೆಗಳ ಮೂಲಕ ಮದ್ಯ ಮಾರಾಟ ಮಾಡಲು ಸಿ.ಎಂ. ಸಿದ್ದರಾಮಯ್ಯನವರು ಒಪ್ಪಿಗೆ ಕೊಟ್ಟಿದ್ದಾರೆ.
ಮಧ್ಯ ಮಾರಾಟವನ್ನು ಖಾಸಗಿಯವರು ಮಾಡಲಿ ಇಲ್ಲವೇ ಸರಕಾರೀ ಸಂಸ್ಥೆಯೇ ಮಾಡಲಿ ಆದರೆ
ಅದರಿಂದಾಗುವ ದುಷ್ಪರಿಣಾಮಕ್ಕೆ ಬಲಿಯಾಗುವವರು ದುಡಿಯುವ ವರ್ಗದ ಜನರೇ ಆಗಿದ್ದಾರೆ. ಈಗಾಗಲೇ ರಾಜ್ಯದಲ್ಲಿ
10,051 ಮದ್ಯದ ಅಂಗಡಿಗಳು ಕಾರ್ಯಗತವಾಗಿವೆ. ನಾಲ್ಕು ಸಾವಿರದಷ್ಟು ರಿಟೇಲ್ ಅಂಗಡಿಗಳು, ಮೂರುವರೆ
ಸಾವಿರದಷ್ಟು ಬಾರ್ ರೆಸ್ಟೋರೆಂಟಗಳು ಹಾಗೂ 402 ಎಂಎಸ್ಐಎಲ್ ಮಾರಾಟ ಮಳಿಗೆಗಳು ಕರ್ನಾಟಕದ ಜನರಿಗೆ ಅಮಲನ್ನು ಹಂಚುತ್ತಿವೆ.
ಇದರ ಜೊತೆಗೆ ಮತ್ತೆ 900 ಹೆಚ್ಚುವರಿ ಮಳಿಗೆಗಳು ಶುರುವಾಗಿ ಹೆಂಡದ ಹೊಳೆ ರಾಜ್ಯಾದ್ಯಂತ ಹರಿಯುತ್ತದೆ.
ಅದೆಷ್ಟೋ ಕುಟುಂಬಗಳ ಬದುಕು ಮೂರಾಬಟ್ಟೆ ಆಗುವುದಕ್ಕೆ ಸರಕಾರವೇ ಪ್ರೇರೇಪಿಸುತ್ತಿದೆ.
ಬಿಹಾರದಂತಹ ಹಿಂದುಳಿದ ರಾಜ್ಯ ಸರಕಾರ ಸಹ ಮದ್ಯಮಾರಾಟ ಹಾಗೂ ಸೇವನೆಯಿಂದಾಗುವ ಸಾಮಾಜಿಕ
ಹಾಗೂ ಆರ್ಥಿಕ ಅಪಾಯಗಳನ್ನು ಮನಗಂಡು ರಾಜ್ಯಾದ್ಯಂತ ಸರಾಯಿ ಮಾರಾಟ ಹಾಗೂ ಕುಡಿತವನ್ನು ನಿಷೇಧಿಸಿತ್ತು.
“ಪಾನ ನಿಷೇಧವು
ಗ್ರಾಮಸ್ವರಾಜ್ಯದ ಅಡಿಪಾಯ” ಎಂದು ಮಹಾತ್ಮಾ ಗಾಂಧಿಯವರು ಹೇಳಿದ್ದರು. ಆದರೆ.. ಗಾಂಧೀಜಿಯ ಅಧೀಕೃತ ವಾರಸುದಾರರು
ಎಂದು ಹೇಳಿಕೊಳ್ಳುವ ಈ ಕಾಂಗ್ರೆಸ್ಸಿಗರು ರಾಜ್ಯಾದ್ಯಂತ ಮದ್ಯ ಮಾರಾಟವನ್ನು ಹೆಚ್ಚಿಸುತ್ತಿರುವುದು
ಆ ಪಕ್ಷದ ನೈತಿಕ ದಿವಾಳಿತನವನ್ನು ತೋರಿಸುತ್ತದೆ. ಮೂರುವರೆ ವರ್ಷಗಳ ಕಾಲ ಸುಮ್ಮನಿದ್ದು ಈಗ ಯಾಕೆ
ಸರಕಾರ ಈ ಸಾಹಸಕ್ಕೆ ಮುಂದಾಯಿತು? ಎನ್ನುವುದಕ್ಕೆ ಉತ್ತರ ಮುಂಬರುವ ಚುನಾವಣೆ ಎಂಬುದು ಸ್ಪಷ್ಟವಾಗಿದೆ.
ಇನ್ನೊಂದು ವರ್ಷಕಳೆಯುವುದರೊಳಗೆ ಕರ್ನಾಟಕದಲ್ಲಿ ಅಸೆಂಬ್ಲಿ ಚುನಾವಣೆಗಳು ಶುರುವಾಗುತ್ತವೆ.
ಈಗ ಮೊದಲಿನಂತೆ ಕೇವಲ ತತ್ವ ಸಿದ್ದಾಂತ ಹಾಗೂ ಜನಪರ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣೆಗಳಲ್ಲಿ
ಗೆಲ್ಲಬಹುದೆಂಬ ಆಸೆ ಯಾವುದೇ ಪಕ್ಷಗಳಲಿಲ್ಲ. ಚುನಾವಣೆ ಗೆಲ್ಲಬೇಕಾದರೆ ಹಣ ಹೆಂಡಗಳ ಹೊಳೆ ಹರಿಸಲೇಬೇಕು
ಎನ್ನುವ ತೀರ್ಮಾನಕ್ಕೆ ಎಲ್ಲಾ ಪ್ರಮುಖ ಪಕ್ಷಗಳೂ ಬಂದಿವೆ. ಬಿಜೆಪಿಗಾದರೆ ಕೇಂದ್ರ ಸರಕಾರದಿಂದ ಹಣ
ಬರುತ್ತದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಎನ್ನುವುದೂ
ಕೂಡಾ ಎಲ್ಲಾ ಕಡೆ ಸೋತು ಕರ್ನಾಟಕ ಸರಕಾರದ ಮೇಲೆಯೇ ಅವಲಂಬಿತವಾಗಿ ಕುಳಿತಿದೆ. ಈಗ ಮುಂದಿನ
ಚುನಾವಣೆಗೆ ಬೇಕಾದ ಹಣವನ್ನು ಹೊಂದಿಸಿಕೊಳ್ಳುವ ಮಹತ್ತರ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅದಕ್ಕಾಗಿಯೇ
ಸ್ಟೀಲ್ ಬ್ರಿಜ್ ಎನ್ನುವ ಪರಿಸರ ವಿರೋಧಿ ಯೋಜನೆಯನ್ನು ಬೆಂಗಳೂರಿನಲ್ಲಿ ರೂಪಿಸಿ ಅದರಲ್ಲಿ ಐನೂರು
ಕೋಟು ರೂಪಾಯಿಗಳ ಕಿಕ್ಬ್ಯಾಕ್ ಪಡೆಯಲು ಸರಕಾರ ಪ್ರಯತ್ನಿಸಿದೆ. ಈಗ ಇನ್ನೂ ಹೆಚ್ಚು ಹಣವನ್ನು ರಾಜ್ಯ ಕಾಂಗ್ರೆಸ್ಸಿಗರಿಗೆ ತರಬಹುದಾದದ್ದು ಈ ಮದ್ಯ ದಂದೆ.
ಈಗಾಗಲೇ ಕಾಂಗ್ರೆಸ್ ಚುನಾವಣೆಗೆ ಸಿದ್ದತೆ ಆರಂಭಗೊಳಿಸಿದೆ. ಅದರ ಭಾಗವಾಗಿ ಹಣಸಂಗ್ರಹಣೆಯ
ಮೂಲಗಳಿಗೆ ಕೈಹಾಕಿದೆ. ಸರಕಾರವೇ ಅಬಕಾರಿ ಇಲಾಖೆಯಿಂದ ಸರಾಯಿ ಮಾರಾಟ ಮಾಡಬಹುದೇ ಹೊರತು ಮದ್ಯ ತಯಾರಿಯನ್ನು
ಮಾಡುತ್ತಿಲ್ಲ. ಮದ್ಯ ತಯಾರಿ ಮಾಡುವ ಉದ್ಯಮಿಗಳೊಂದಿಗೆ
ಸರಕಾರ ಶಾಮೀಲಾಗಿದೆ. ಅದೆಷ್ಟು ಕೋಟಿ ಕಿಕ್ಬ್ಯಾಕ್ ಯಾರ್ಯಾರಿಂದ ಪಡೆಯುತ್ತದೋ ಎನ್ನುವ ಲೆಕ್ಕಾಚಾರ
ಊಹೆಗೂ ನಿಲುಕದ್ದು ಹಾಗೂ ಅನಧೀಕೃತ ಅವ್ಯವಹಾರ ಲೆಕ್ಕಕ್ಕೆ ಸಿಗಲಾರದ್ದು. ಮದ್ಯೋದ್ಯಮಿಗಳಿಂದ ಕೋಟಿ
ಕೋಟಿಗಳನ್ನು ತೆಗೆದುಕೊಂಡು ಸರಾಯಿ ಮಾರಾಟವನ್ನು ಹೆಚ್ಚಳಮಾಡುವ ಕೈಂಕರ್ಯವನ್ನು ಸರಕಾರ ಮಾಡುತ್ತಿದೆ.
ಹೆಚ್ಚೆಚ್ಚು ಮದ್ಯದ ಮಳಿಗೆಗಳನ್ನು ತೆರೆದಷ್ಟು ಹೆಚ್ಚು ಸರಾಯಿ ಮಾರಾಟವಾಗುತ್ತದೆ. ಹೆಚ್ಚೆಚ್ಚು ಮಾರಾಟವಾದಷ್ಟೂ
ತೆರಿಗೆ ರೂಪದಲ್ಲಿ ಸರಕಾರಕ್ಕೆ ಹಣ ಬರುತ್ತದೆ. ಹಾಗೆ ಬಂದ ಹಣವನ್ನು ಅಭಿವೃದ್ದಿ ಕಾರ್ಯಗಳಿಗೆ ಬಳಸಲಾಗುತ್ತದೆ..
ಎನ್ನುವುದು ಅಬಕಾರಿ ಇಲಾಖೆಯ ಸಾರ್ವಕಾಲಿಕ ಘೋಷಣೆಯಾಗಿದೆ. ಆದರೆ.. ಅಭಿವೃದ್ದಿಗೋ ಇಲ್ಲವೇ ಪಕ್ಷದ
ಚುನಾವಣೆಗೋ ಹಣ ಸಂಗ್ರಹಿಸುವ ಸರಕಾರದ ಮಹತ್ಕಾರ್ಯದ ಹಿಂದೆ ಹಾಳಾಗುವ ಕುಟುಂಬಗಳೆಷ್ಟೋ.. ತೊಂದರೆಗೊಳಗಾಗುವ
ಮಹಿಳೆಯರೆಷ್ಟೋ.. ಇದರ ಲೆಕ್ಕ ಇಟ್ಟವರ್ಯಾರು?
ಇರುವ ಸರಾಯಿ ಅಂಗಡಿಗಳನ್ನು ಮುಚ್ಚಬೇಕೆಂದು ಮಹಿಳೆಯರೇ ಹೋರಾಟಕ್ಕೆ ಇಳಿದಿದ್ದಾರೆ.
ಅದಕ್ಕೆ ರಾಯಚೂರಿನಲ್ಲಿ 2016 ಅಕ್ಟೋಬರ್ ಎರಡರಂದು ನಡೆದ ಸರಾಯಿ ವಿರೋಧಿ ಮಹಿಳಾ ಸಮಾವೇಶವೇ ಸಾಕ್ಷಿಯಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಸರಾಯಿ ಮಾಡುವ ಹಾವಳಿಯನ್ನು ಅಲ್ಲಿಯ ಮಹಿಳೆಯರು ಪ್ರತಿನಿತ್ಯ ಅನುಭವಿಸುತ್ತಿದ್ದಾರೆ.
ಊರಿಗೆ ಊರೆ ವ್ಯಸನಿಗಳ ಸಂತೆಯಾಗಿದೆ. ಇದು ಕೇವಲ ಕುಟುಂಬಗಳ ಮೇಲಷ್ಟೇ ಅಲ್ಲಾ.. ಗ್ರಾಮೀಣ ಆರ್ಥಿಕತೆಯ
ಮೇಲೆ ದೊಡ್ಡ ಹೊಡೆತ ಕೊಡುತ್ತಿದೆ. ಒಂದು ಕಡೆ ಉಚಿತವಾಗಿಯೋ ಇಲ್ಲಾ ಒಂದುರೂಪಾಯಿಗೊಂದು ಕೆಜಿ ಅಕ್ಕಿಯನ್ನೋ
ಕೊಟ್ಟು ಜನರ ಬದುಕಿಗೆ ಆಸರೆಯಾದೆ ಎಂದು ಹೇಳಿಕೊಳ್ಳುವ ಸರಕಾರವು ಇನ್ನೊಂದು ಕಡೆ ಕುಡಿಯಲು ಸರಾಯಿಯನ್ನು
ಸರಬರಾಜು ಮಾಡಿ ಜನರ ಅಲ್ಪಸ್ವಲ್ಪ ಆದಾಯವನ್ನೂ ಕಬಳಿಸುತ್ತಿದೆ ಹಾಗೂ ಜನರನ್ನು ವ್ಯಸನಪೀಡಿತರನ್ನಾಗಿ
ಮಾಡುತ್ತಿದೆ. ಉಳ್ಳವರಿಗೆ ಈ ಕುಡಿತ ಎನ್ನುವುದು ಆರ್ಥಿಕ
ಸಂಕಷ್ಟವನ್ನು ಒಡ್ಡದಿದ್ದರೂ ಬಹುಸಂಖ್ಯಾತ ದುಡಿಯುವ ವರ್ಗಗಳಂತೂ ಕುಡಿತದ ದಾಸ್ಯಕ್ಕೆ ಬಿದ್ದು ತಲ್ಲಣಿಸಿ
ಹೋಗಿವೆ. ಕುಡಿತದಿಂದಾಗುವ ಅನಾರೋಗ್ಯದಿಂದಾಗಿ ಅದೆಷ್ಟೋ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಶಾಪ ಎನ್ನುವುದು ನಿಜಕ್ಕೂ ಕಾರ್ಯಗತವಾಗುವ ಹಾಗಿದ್ದರೆ ಗ್ರಾಮೀಣ ಭಾಗದ ನೊಂದ ಮಹಿಳೆಯರ ಶಾಪದಿಂದ ಎಲ್ಲಾ
ನಮೂನಿಯ ಜನವಿರೋಧಿ ಸರಕಾರಗಳು ಸುಟ್ಟುಹೋಗಬಹುದಾಗಿತ್ತು. ಆದರೆ.. ಆತ್ಮಸಾಕ್ಷಿಯನ್ನೇ ಮಾರಿಕೊಂಡಿರುವ
ಆಳುವ ವರ್ಗಗಳು ಬಡಜನರ ಬದುಕಿಗೆ ಬೆಂಕಿ ಇಟ್ಟು ತಮ್ಮ ಮೈಕಾಯಿಸಿಕೊಳ್ಳುತ್ತಿರುವುದಂತೂ ಅಕ್ಷಮ್ಯ.
ಆಳುವ ವರ್ಗಗಳಿಗೆ ಬೇಕಾಗಿರುವುದು ಜನರ ಕ್ಷೇಮವೂ ಅಲ್ಲಾ, ಸಾಮಾಜಿಕ ಸ್ವಾಸ್ಥ್ಯವೂ
ಅಲ್ಲಾ. ಕೇವಲ ಅಧಿಕಾರದಾಹ. ಜನರ ಗೋರಿಯ ಮೇಲೆ ಗದ್ದುಗೆ ಕಟ್ಟುವ ಇಂತಹ ಲಾಭಕೋರತನದ ಸರಕಾರಗಳು ಇದ್ದರೆಷ್ಟು
ಇರದಿದ್ದರೆಷ್ಟು. ಪಕ್ಷ ಯಾವುದೇ ಆಗಿರಲಿ ಪ್ರಜಾಪ್ರಭುತ್ವ ಎನ್ನುವುದು ಜನರನ್ನು ಯಾಮಾರಿಸಲು ಬೇಕಾದ
ಮುಖವಾಡವಾಗಿದೆ. ಜನರು ಎಚ್ಚೆತ್ತು ತಮ್ಮ ಮೇಲಾಗುವ ಶೋಷಣೆಗಳ ವಿರುದ್ಧ ಪ್ರತಿಭಟಿಸುವುದನ್ನು ತಪ್ಪಿಸಲು
ಅವರನ್ನು ಯಾವಾಗಲೂ ವ್ಯಸನದ ಗುಂಗಲ್ಲಿ ಇಡುವುದು ಹಾಗೂ ದುಡಿಯುವ ಜನರು ದಂಗೆ ಏಳದಂತೆ ಮಾಡಲು ಪುಕ್ಕಟೆ ಭಾಗ್ಯಗಳನ್ನು ಒದಗಿಸುವುದು
ಆಳುವ ವರ್ಗಗಳ ಒಳಹುನ್ನಾರವಾಗಿದೆ. ಈ ವ್ಯಸನ ಪೀಡಿತರು ಹಾಗೂ ಸರಾಯಿ ಪ್ರಾಯೋಜಕರಾದ ಸರಕಾರದವರ ನಡುವೆ
ಅತೀವ ಕಷ್ಟನಷ್ಟಕ್ಕೆ ಸಿಲುಕಿದವರು ಮಹಿಳೆಯರು. ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರ ಗೋಳು ಹೇಳತೀರದಾಗಿದೆ.
ಅಸೆ ಆಮಿಷಗಳನ್ನು ತೋರಿಸಿ ಓಟು ಗಿಟ್ಟಿಸಿಕೊಳ್ಳುವ ಈ
ರಾಜಕೀಯ ಪಕ್ಷಗಳು ಮಹಿಳೆಯರ ತೊಂದರೆಗಳಿಗೆ
ಸ್ಪಂದಿಸುವ ಬದಲು ಅವರ ಮನೆಯ ಗಂಡಸರಿಗೆ ಸರಾಯಿ ಮಾರಾಟ ಮಾಡಿ ಮನೆಯನ್ನೇ ನರಕವನ್ನಾಗಿಸುವ ಜೀವವಿರೋಧಿತನವನ್ನು
ಎಲ್ಲರೂ ಖಂಡಿಸಬೇಕಿದೆ.
ಸರಾಯಿ ಮಾರಾಟ ಮಳಿಗೆಗಳನ್ನು ದುಪ್ಪಟ್ಟುಗೊಳಿಸುವ ಅಬಕಾರಿ ಇಲಾಖೆಯ ಆದೇಶದ ವಿರುದ್ದ
ಜನರು ಸಿಡಿದೇಳಬೇಕಾಗಿತ್ತು. ಆದರೆ.. ಅದ್ಯಾಕೋ ಯಾವುದೇ ಸಂಚಲನವಾಗುತ್ತಿಲ್ಲ. ಮದ್ಯ ಬೇಡವಾಗಿರುವುದು
ಕೇವಲ ಅದರಿಂದ ನೊಂದ ಮಹಿಳೆಯರಿಗೆ ಮಾತ್ರ. ವ್ಯಸನ ಪೀಡಿತ ಬಹುಸಂಖ್ಯಾತರು ಸರಾಯಿಯ ವ್ಯಾಪಕ ಮಾರಾಟದಿಂದ
ಸಂತಸ ಪಡುತ್ತಾರೆಯೇ ಹೊರತು ವಿರೋಧಿಸುವುದಿಲ್ಲ. ಹೀಗಾಗಿ ಅಸಂಘಟಿತ ಗ್ರಾಮೀಣ ಮಹಿಳೆಯರ ನೋವಿಗೆ ಸ್ಪಂದಿಸುವವರು
ಯಾರೂ ಇಲ್ಲವಾಗಿದೆ. ಮಹಿಳಾ ಪರ ಎನ್ಜಿಓ ಗಳು ಮೌನಕ್ಕೆ ಶರಣಾಗಿವೆ. ಮಹಿಳಾ ಸಂಘಟನೆಗಳು ಅದ್ಯಾಕೋ
ಸುಮ್ಮನಾಗಿವೆ. ವಿರೋಧ ಪಕ್ಷಗಳಿಗೆ ಇದು ಸಾಮಾಜಿಕ ಸಮಸ್ಯೆ ಎಂದು ಅನ್ನಿಸುತ್ತಲೇ ಇಲ್ಲ. ಹೀಗಾಗಿ ಯಾವುದೇ
ಪ್ರಭಲ ಪ್ರತಿಭಟನೆ ರೂಪಗೊಳ್ಳದೇ ಇರುವುದರಿಂದ ಸರಕಾರಿ ಕೃಪಾಪೋಷಿತ ಸರಾಯಿ ಮಾರಾಟ ದಂದೆ ದ್ವಿಗುಣಗೊಂಡಿದೆ.
ಸರಾಯಿ ತಯಾರಕರ ಲಾಭ ನಾಲ್ಕಾರು ಪಟ್ಟು ಹೆಚ್ಚುತ್ತದೆ. ಸರಕಾರಕ್ಕೆ ಬೇಕಾದಷ್ಟು ಕಿಕ್ಬ್ಯಾಕ್ ಹಣ
ಸಿಕ್ಕುತ್ತದೆ. ಈ ಸರಾಯಿ ಉತ್ಪಾದಕರು, ಮಾರಾಟಗಾರರು
ಹಾಗೂ ಪ್ರಾಯೋಜಕರ ನಡುವೆ ಸರಾಯಿ ಬಳಕೆದಾರರ ಬದುಕು ಕಂತು ಕಂತಿನಲ್ಲಿ ಮುಗಿದು ಹೋಗುತ್ತದೆ. ಅವರ ಕುಟುಂಬಗಳು
ತಲ್ಲಣಗೊಂಡಿವೆ. ಒಂದು ಕೈಯಿಂದ ಕೊಟ್ಟು ಇನ್ನೊಂದು
ಕೈಯಿಂದ ಕಿತ್ತುಕೊಳ್ಳುವ ಈ ಆಳುವ ವರ್ಗಗಳ ಶಡ್ಯಂತ್ರಕ್ಕೆ ಸಿಕ್ಕು ಇಡೀ ನಾಡಿಗೆನಾಡೇ ವ್ಯಸನಪೀಡಿತರ
ಆಡಂಬೋಲವಾಗುವುದರಲ್ಲಿ ಸಂದೇಹವಿಲ್ಲ.
ರಾಯಚೂರಿನಲ್ಲಿ ಹತ್ತಾರುಸಾವಿರ ಮಹಿಳೆಯರು ಸೇರಿ “ನಮಗೆ ಸರಾಯಿ ಬೇಡ, ಕುಡಿಯಲು ನೀರು
ಕೊಡಿ. ನಮಗೆ ಹೆಂಡ ಬೇಡ ವಸತಿ ಕೊಡಿ. ಹೆಂಡದಂಗಡಿ ಬೇಡ ಶಾಲೆ ಕಾಲೇಜು ತೆರೆಯಿರಿ” ಎಂದು ಬೇಡಿಕೆ ಇಟ್ಟು ಹೋರಾಟ ಮಾಡಿದ್ದನ್ನು
ಮಾದರಿಯಾಗಿಟ್ಟುಕೊಂಡು ಕರ್ನಾಟಕದ ಎಲ್ಲಾ ಮಹಿಳಾ ಸಂಘಟನೆಗಳು ಜನಹೋರಾಟವನ್ನು ಕೈಗೊಳ್ಳಬೇಕಾಗಿದೆ.
ಉಡುಪಿ ಮಠದಲ್ಲಿ ಸಹಪಂಕ್ತಿ ಭೋಜನಕ್ಕೆ ಹೋರಾಟ ರೂಪಿಸುವ ಮನಸ್ಸುಗಳು ಸರಾಯಿ ನಿಷೇಧಕ್ಕೆ ಮೊದಲ ಆದ್ಯತೆ
ಕೊಡಬೇಕಿದೆ. ಸರಾಯಿ ಮಾರಾಟದ ತೀವ್ರತೆಯಿಂದ ಮೊದಲು ತೊಂದರೆಗೊಳಗಾಗುವುದೇ ಹಿಂದುಳಿದವರು ಹಾಗೂ ದಲಿತರು.
ಆದ್ದರಿಂದ ಎಲ್ಲಾ ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಮೊದಲು ನಾಡಿನಾದ್ಯಂತ ಸರಾಯಿ ಬ್ಯಾನ್
ಚಳುವಳಿಯನ್ನು ಆಯೋಜಿಸಿ ಸರಕಾರದ ಮೇಲೆ ಒತ್ತಡ ತಂದು ಮದ್ಯವನ್ನು ನಿಷೇಧಿಸಲು ಒತ್ತಾಯಿಸಬೇಕಿದೆ. ದಲಿತರಿಗೆ
ಭೂಮಿ ಬೇಕು ಎನ್ನುವ ಚಳುವಳಿ ಅಗತ್ಯವಾದದ್ದೇ ಆಗಿದೆ. ಆದರೆ ಮುಂದೊಮ್ಮೆ ಬಹುಜನರ ಬೇಡಿಕೆಗೆ ಸ್ಪಂದಿಸಿದ
ಸರಕಾರ ಭೂಮಿಯನ್ನು ಕೊಟ್ಟರೂ.. ಸರಾಯಿ ದಾಸ್ಯಕ್ಕೊಳಗಾದ ದಮನಿತ ವರ್ಗದವರು ಇರುವ ಭೂಮಿಯನ್ನೂ ಉಳ್ಳವರಿಗೆ
ಮಾರಿಕೊಂಡು ಮತ್ತೆ ಬೀದಿಪಾಲಾಗುತ್ತಾರೆ.
ಜನಾಲೋಂದನಗಳ ಮಹಾಮೈತ್ರಿ ಮಾಡಿ ದೊಡ್ಡ ಪ್ರಮಾಣದ ಜನಹೋರಾಟವನ್ನು ಹುಟ್ಟುಹಾಕುವ
ಹುಮ್ಮಸ್ಸಿನಲ್ಲಿರುವ ಪ್ರಜ್ಞಾವಂತರು ಮೊದಲು ಸರಾಯಿ ನಿಷೇಧದ ಇಸ್ಯೂ ಇಟ್ಟುಕೊಂಡು ಜನಹೋರಾಟ ಮಾಡಿದರೆ
ಗ್ರಾಮೀಣ ಪ್ರದೇಶದ ಮಹಿಳೆಯರ ಬೆಂಬಲವನ್ನು ಗಳಿಸಿಕೊಂಡು ತಮ್ಮ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಬಹುದಾಗಿದೆ.
ವ್ಯಸನ ಮುಕ್ತರಾದ ದುಡಿಯುವ ಜನತೆ ಪ್ರಜ್ಞೆಯನ್ನು ಗಳಿಸಿಕೊಂಡು ತಾತ್ವಿಕ ಜನಾಲೋಂದನಕ್ಕೆ ಜೊತೆಯಾಗುತ್ತಾರೆ.
ಈ ನಿಟ್ಟಿನಲ್ಲಿ ಸಂಘಟನಾತ್ಮಕ ಐಕ್ಯ ಹೋರಾಟಗಳು ನಡೆಯಬೇಕಿದೆ. ನಿಜವಾಗಿಯೂ ದುಡಿಯುವ ಜನರ ಬಗ್ಗೆ,
ಹಿಂದುಳಿದವರು ಹಾಗೂ ದಲಿತರ ಬಗ್ಗೆ ಕಾಳಜಿ ಕಳಕಳಿ ಇದ್ದದ್ದೇ ಆದರೆ ಎಲ್ಲಾ ಜನಪರ ಸಂಘಟನೆಗಳು ಸರಾಯಿ ಮಾರಾಟ ಹೆಚ್ಚಿಸಿರುವ ಸರಕಾರದ
ದೋರಣೆಯ ವಿರುದ್ದ ಹೋರಾಟ ರೂಪಿಸಿ ಮದ್ಯ ಮಾರಾಟವನ್ನೇ ನಿಲ್ಲಿಸುವ ಇಲ್ಲವೇ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ. ಎಲ್ಲಿವರೆಗೂ ಶ್ರಮಜೀವಿ
ಜನರು ನಷೆಯಿಂದ ಹೊರಬಂದು ತಮ್ಮ ಮೇಲಿನ ಶೋಷಣೆಗೆ ಕಾರಣವನ್ನು ಅರಿಯಲಾರರೋ ಅಲ್ಲಿವರೆಗೂ ಯಾವುದೇ ಹೋರಾಟಗಳೂ
ಯಶಸ್ವಿಯಾಗಲಾರವು.. ಕೇವಲ ಧರಣಿ, ಪತ್ರಿಕಾ ಹೇಳಿಕೆ ಇಲ್ಲವೇ ವಾಹಿನಿಗಳ ಪ್ಯಾನಲ್ ಚರ್ಚೆಗಳಿಂದ ದುಡಿಯುವ
ವರ್ಗದವರ ಬದುಕು ಹಸನಾಗದು. ಸಂಪೂರ್ಣ ಸರಾಯಿ ನಿಷೇಧಕ್ಕೆ ಈ ಕೂಡಲೇ ಆಗ್ರಹಿಸುವ ಚಳುವಳಿ ಶುರುವಾಗಬೇಕಿದೆ.
ಅದು ಜನಾಲೋಂದನ ಕಟ್ಟುವ ನಿಟ್ಟಿನಲ್ಲಿ ಮೊದಲ ಮೆಟ್ಟಿಲಾಗಬೇಕಿದೆ.
- - ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ