ಮತ್ತೊಂದು ನವೆಂಬರ್ 1 ಬಂದಿದೆ. ಕನ್ನಡ ರಾಜ್ಯೋತ್ಸವ ರಾಜಧಾನಿಯಲ್ಲಿ ಸಂಭ್ರಮಿಸುತ್ತಿದೆ. ಒಂದಲ್ಲಾ ಎರಡಲ್ಲಾ ಕರ್ನಾಟಕ ಏಕೀಕರಣಗೊಂಡು ಭರ್ತಿ ಅರವತ್ತು ವರ್ಷಗಳಾದವು. ವರ್ಷದಿಂದ ವರ್ಷಕ್ಕೆ ರಾಜ್ಯೋತ್ಸವದ ಸಂಭ್ರಮ ಹೆಚ್ಚುತ್ತಲೇ ಇದೆ. ಬೆಂಗಳೂರಿನಲ್ಲಂತೂ ಸಂಘ ಸಂಸ್ಥೆಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನವೆಂಬರ್ ತಿಂಗಳಿನಾದ್ಯಂತ ಅಲ್ಲಲ್ಲಿ ರಾಜ್ಯೋತ್ಸವವನ್ನು ಆಚರಿಸುತ್ತವೆ. ರಾಜ್ಯೋತ್ಸವ ಎನ್ನುವುದು ಗಣೇಶ, ಅಣ್ಣಮ್ಮದೇವಿ ಆಚರಣೆಯಂತೆ ವಾರ್ಷಿಕ ಹಬ್ಬವಾಗಿದೆ.
ಆದರೆ... ವರ್ಷದಿಂದ ವರ್ಷಕ್ಕೆ ಕನ್ನಡ ನಾಡು ಹಾಗೂ ನುಡಿಯ ಮೇಲೆ ಪರಭಾಷಿಕರ ಹಿಡಿತ ಹೆಚ್ಚುತ್ತಲೇ ಇದೆ. ಪರಭಾಷಿಕರ ವಲಸೆಯಂತೂ ಮಿತಿಮೀರುತ್ತಲೇ
ಇದೆ. ರಾಜಧಾನಿ ಬೆಂಗಳೂರಿನಲ್ಲೀಗ ಕನ್ನಡಿಗರ ಜನಸಂಖ್ಯೆ ಶೇಕಡಾ 25 ರಷ್ಟಿದೆ. ಕರ್ನಾಟಕದ ರಾಜಧಾನಿಯಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗಿದ್ದನ್ನು ನೋಡಿದರೆ ಕನ್ನಡದ ಸ್ಥಿತಿ ಗತಿಗಳನ್ನು ಅರಿಯಬಹುದಾಗಿದೆ. ಕನ್ನಡ ಶಾಲೆಗಳು ಅತಂತ್ರವಾಗಿವೆ, ಸರಕಾರಿ ಹಾಗೂ ಖಾಸಗಿ ಕಛೇರಿಗಳಲ್ಲಿ ಈ ನೆಲದ ಭಾಷೆ ವಿರಳವಾಗಿದೆ. ಕಾಪೋರೇಟ್ ಸೆಕ್ಟರಗಳಲ್ಲಂತೂ ಕನ್ನಡ ಕಾಣದಾಗಿದೆ. ಕನ್ನಡ ಬರದವರ ಮಾತು ಬಿಡಿ, ಕನ್ನಡಿಗರೇ ಬೇರೆಯವರೊಂದಿಗೆ ಇಂಗ್ಲಿಷ್ ಹಿಂದಿಗಳಲ್ಲಿ ಸಂವಹನ ಮಾಡತೊಡಗಿದ್ದಾರೆ. ಮುಂದಿನ ತಲೆಮಾರಿನ ಕನ್ನಡದ ಕುಡಿಗಳು ಈಗಾಗಲೇ ಆಂಗ್ಲಶಾಲೆಗಳಲ್ಲಿ ಇಂಗ್ಲೀಷನಲ್ಲಿ ಪರಣಿತರಾಗಲು ತರಬೇತಿ ಪಡೆಯುತ್ತಿದ್ದಾರೆ. ಅಂದರೆ... ಇನ್ನು ಮೂವತ್ತು ವರ್ಷಗಳಲ್ಲಿ ಕನ್ನಡ ಮಾತಾಡುವವರು ರಾಜಧಾನಿಯಲ್ಲಿ ಕೀಳರಮೆಯಿಂದ ನರಳುವಂತಹ ವಾತಾವರಣವೊಂದು ಸೃಷ್ಟಿಸಲಾಗುತ್ತಿದೆ. ಜಾಗತೀಕರಣದ ಭರಾಟೆಯಲ್ಲಿ
ಪಾರಂಪರಿಕ ಕನ್ನಡ ಭಾಷೆ ಕುಂಟಿತಗೊಳ್ಳುತ್ತಿದೆ. ಸಾವಕಾಶವಾಗಿ ಅವನತಿಯತ್ತ ಸಾಗುತ್ತಿದೆ.
ಇಂತಹ ಅತ್ಯಂತ ಆತಂಕಕಾರಿಯಾದ ಸಂದರ್ಭದಲ್ಲಿ ರಾಜ್ಯೋತ್ಸವದ ಆಚರಣೆ ಮಾತ್ರ ಸಂಭ್ರಮಿಸುತ್ತಿದೆ. ಈಗಾಗಲೇ ಬೆಂಗಳೂರಿನ ಸಾರ್ವಜನಿಕ ಸ್ಥಳಗಳಿಂದ ಎತ್ತಂಗಡಿಯಾಗಿ ಕನ್ನಡಿಗರ ಮನೆಗಳಿಗೆ ಮಾತ್ರ ಸೀಮಿತವಾಗಿರುವ ಕನ್ನಡ ಭಾಷೆಯನ್ನು ಟಿವಿ ಮಾಧ್ಯಮಗಳು ಅಲ್ಲಿಂದಲೂ ಒಕ್ಕಲೆಬ್ಬಿಸುವ ಪ್ರಯತ್ನ ಮಾಡುತ್ತಿವೆ. ಕನ್ನಡಿಗರೆನ್ನುವವರ ಮನಸ್ಸಿನಲ್ಲಿ ಬೇರೆಲ್ಲಾ ಭಾಷೆಯನ್ನು
ಬಿತ್ತುತ್ತಿವೆ. ಕನ್ನಡಪರ ಸಂಘಟನೆಗಳು ವರ್ಷಕ್ಕೊಮ್ಮೆ ಕನ್ನಡವನ್ನು ನೆನಪಿಸಿಕೊಂಡು ಬೀದಿಬೀದಿಯಲ್ಲಿ ಅರಿಸಿನ ಕುಂಕುಮ ಬಾವುಟ ಹಾರಿಸಿ ಆತ್ಮತೃಪ್ತಿ ಮಾಡಿಕೊಳ್ಳುತ್ತವೆ. ಇದಕ್ಕಾಗಿಯೇ ಕನ್ನಡಿಗರನ್ನು ನವೆಂಬರ್ ಕನ್ನಡಿಗರು ಎಂದು ಲೇವಡಿ ಮಾಡಲಾಗುತ್ತದೆ. ಇನ್ನೂ ಕೆಲವು ಕನ್ನಡ ಹೆಸರಿನ ಸಂಘದವರು ರಾಜ್ಯೋತ್ಸವದ ನೆಪದಲ್ಲಿ ಹಣ ವಸೂಲಿಗೂ ಇಳಿಯುವುದರಿಂದ ರೋಲ್ಕಾಲ್ ಕನ್ನಡಿಗರೆಂದೂ ಕರೆಯಲ್ಪಡುತ್ತಿದ್ದಾರೆ.
ಕನ್ನಡ ರಾಜ್ಯೊತ್ಸವ ಎನ್ನುವುದು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವುದನ್ನು ಅಲ್ಲಗಳಿಯಲಾಗದು. ಕರ್ನಾಟಕದ ರಾಜಧಾನಿಯಲ್ಲೇ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರು ತಮ್ಮ ಅಸ್ಮಿತೆ ಕಾಪಾಡಿಕೊಳ್ಳಲು ರಾಜ್ಯೋತ್ಸವವನ್ನು ಆಚರಿಸುವುದರಲ್ಲೂ ತಪ್ಪಿಲ್ಲ. ಆದರೆ ಕನ್ನಡಾಭಿಮಾನ ಎನ್ನುವುದು ಕೇವಲ ನವೆಂಬರ ಆಚರಣೆಗೆ ಮಾತ್ರ ಸೀಮಿತವಾಗಿರುವುದು ಕನ್ನಡಪರ ಸಂಘ ಸಂಸ್ಥೆಗಳ ಇತಿಮಿತಿಯನ್ನು ತೋರಿಸುತ್ತದೆ. ರಾಜ್ಯೊತ್ಸವದ ಆಚರಣೆಯ ಜೊತೆಗೆ ಅದನ್ನು ವರ್ಷ ಪೂರ್ತಿ ವಿಸ್ತರಿಸುವ ಅಗತ್ಯವಿದೆ. ಕನ್ನಡದ ಹೆಸರು ಹೇಳುವ ಪ್ರತಿ ಸಂಸ್ಥೆಗಳು ತಮ್ಮ ಬಡಾವಣೆಗಳಲ್ಲಿ ಕನ್ನಡದ ಸಾಹಿತ್ಯಕ ಕಾರ್ಯಕ್ರಮಗಳನ್ನು ತಿಂಗಳಿಗೊಮ್ಮೆಯಾದರೂ ಮಾಡುತ್ತಾ, ಕನ್ನಡ ನಾಟಕಗಳನ್ನು ಕರೆಸಿ ಪ್ರದರ್ಶಿಸುತ್ತಾ, ಕನ್ನಡಿಗರ ಕಲೆ ಸಂಸ್ಕೃತಿ ಬಿಂಬಿಸುವಂತಹ ಕಾರ್ಯಕ್ರಮಗಳನ್ನು ನಿಯಮಿತವಾಗಿ ಏರ್ಪಡಿಸುವ ಮೂಲಕ ಇರುವ ಕನ್ನಡಿಗರನ್ನು ಕಲೆ ಸಾಹಿತ್ಯದ ಹೆಸರಲ್ಲಿ ಒಂದು ಗೂಡಿಸಬೇಕಿದೆ. ಕಲೆ ಸಾಹಿತ್ಯಗಳಿಗೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಾಮರ್ಥ್ಯವಿದೆ ಎಂಬುದನ್ನು ಅರಿಯಬೇಕಿದೆ.
ಕನ್ನಡದ ಕಲೆ ಸಂಸ್ಕೃತಿ ಹಾಗೂ ಭಾಷೆಯನ್ನು ಮುಂದಿನ ತಲೆಮಾರಿಗೆ ವಿಸ್ತರಿಸುವ ಕೆಲಸ ಮೊದಲಾಗಬೇಕಿದೆ. ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಿ ಎಂದು ಅದೆಷ್ಟೇ ಒತ್ತಾಯಿಸಿದರೂ ಅದು ಕಾರ್ಯಸಾಧುವಾದ ಕೆಲಸವಾಗುತ್ತಿಲ್ಲ. ಯಾರು ಎಷ್ಟೇ ಹೇಳಲಿ ಉಳ್ಳವರು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸುತ್ತಾರೆ. ಕನ್ನಡಪರ ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡವರೂ ಇದಕ್ಕೆ ಹೊರತಲ್ಲ. ಆದ್ದರಿಂದ ಯಾವುದೇ ಶಾಲೆಗೆ ಸೇರಿಸಲಿ.. ಕನ್ನಡಿಗರ ಮನೆಗಳಲ್ಲಿಯಾದರೂ ಕನ್ನಡ ಭಾಷೆ ಪ್ರಧಾನವಾಗಿರಲಿ ಎಂದು ಪೊಷಕರನ್ನು ವಿನಂತಿಸಿಕೊಳ್ಳಬೇಕಿದೆ. ತಮ್ಮ ಮಕ್ಕಳಿಗೆ ಕನ್ನಡ ಪತ್ರಿಕೆಗಳನ್ನು ಓದಲು, ಕನ್ನಡ ನಾಟಕಗಳನ್ನು ನೋಡಲು ಪೋಷಕರು ಪ್ರೋತ್ಸಾಹಿಸುವಂತಾ ವಾತಾವರಣವನ್ನಾದರೂ ಸೃಷ್ಟಿಸಬೇಕಿದೆ.
ರಾಜ್ಯ ಸರಕಾರ 1994ರಲ್ಲೇ ಕನ್ನಡಿಗರ ಒತ್ತಾಯಕ್ಕೆ ಮಣಿದು
ಮಾತೃಭಾಷೆಯಲ್ಲಿ ಶಿಕ್ಷಣ ಮಾಧ್ಯಮ ನೀತಿಯನ್ನು ಘೋಷಿಸಿತ್ತು. ಆದರೆ ಅದನ್ನು ಅನುದಾನ ರಹಿತ ಶಾಲೆಗಳು
ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರಿಂದಾಗಿ 2014 ರ ಮೇ ತಿಂಗಳಲ್ಲಿ ‘ಶಿಕ್ಷಣ ಮಾಧ್ಯಮ ಪೋಷಕರ ವಿವೇಚನೆಗೆ
ಬಿಟ್ಟಿದ್ದು’ ಎಂದು ಸುಪ್ರಿಂ ಕೋರ್ಟ ತೀರ್ಪು ನೀಡಿ ಕನ್ನಡಿಗರಿಗೆ ಆಘಾತ ನೀಡಿತು. ಅದರ ವಿರುದ್ದ
ಕರ್ನಾಟಕ ಸರಕಾರ ಮೇಲ್ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಆದರೂ ಕೆಲವು ಸಂಘ ಸಂಸ್ಥೆ ಹಾಗೂ ಪ್ರಜ್ಞಾವಂತರ
ಒತ್ತಡದಿಂದಾಗಿ ರಾಜ್ಯ ಸರಕಾರವು ಮಾತೃಭಾಷೆಯಲ್ಲೇ ಶಿಕ್ಷಣ ಬೋಧಿಸುವ ಕ್ರಮಕ್ಕೆ ಒತ್ತಾಯಿಸಿ ಪ್ರಧಾನಿಗೆ
ಹಲವು ಬಾರಿ ಪತ್ರ ಬರೆದರೂ ಉತ್ತರ ಮಾತ್ರ ನಿರುತ್ತರ. ಸಂವಿಧಾನ ಪೀಠದ ತೀರ್ಪಿನ ಆದೇಶವನ್ನು ಬದಲಿಸಲು
ಸಂಸತ್ತಿನಿಂದ ಮಾತ್ರ ಸಾಧ್ಯ. ಸಂವಿಧಾನದ ತಿದ್ದುಪಡಿಗಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿಯನ್ನು
ಒತ್ತಾಯಿಸಬೇಕಿದೆ. ಆದರೆ.. ನವೆಂಬರ್ ಬಂದಾಗ ಮಾತ್ರ ಕನ್ನಡಿಗರಿಗೆ ಹಾಗೂ ಸರಕಾರದ ಮುಖ್ಯಸ್ಥರಿಗೆ
ಮಾತೃ ಭಾಷಾ ಮಾದ್ಯಮದ ಕುರಿತು ನೆನಪಾಗುತ್ತದೆ. ರಾಜ್ಯೋತ್ಸವ ಮುಗಿಯುತ್ತಿದ್ದಂತೆಯೇ ಅದು ಹಿನ್ನೆಲೆಗೆ
ಸರಿಯುತ್ತದೆ. ಆದ್ದರಿಂದ ಮೊದಲು ರಾಜ್ಯೋತ್ಸವದಾಚರಣೆ ಮಾಡುತ್ತಿರುವ ಪ್ರತಿಯೊಂದು ಕನ್ನಡ ಸಂಘಟನೆಗಳೂ ಮಾತೃಭಾಷಾ ಮಾಧ್ಯಮ ನೀತಿಯ
ಅನುಷ್ಠಾನಕ್ಕೆ ತಮ್ಮ ವೇದಿಕೆಗಳ ಮೂಲಕ, ಹಾಗೂ ಆಹ್ವಾನಿತರಾದ ರಾಜಕೀಯ ಅತಿಥಿಗಳ ಮೂಲಕ ಸರಕಾರಕ್ಕೆ
ಒತ್ತಡ ತರುವ ಪ್ರಯತ್ನ ಮಾಡಬೇಕಿದೆ. ಜನಪ್ರತಿನಿಧಿಗಳ ಮೇಲೆ ನಿರಂತರವಾಗಿ ಒತ್ತಾಯ ತಂದು ಮುಖ್ಯಮಂತ್ರಿಗಳಾದವರು
ಕೇಂದ್ರ ಸರಕಾರದ ಮೇಲೆ ವಿಪರೀತ ಒತ್ತಡ ತರುವಂತೆ ಮಾಡಬೇಕಿದೆ. ಬೇಕಾದರೆ ಇದಕ್ಕಾಗಿಯೇ ರಾಜ್ಯಾದ್ಯಂತ
ಹೋರಾಟವನ್ನು ರೂಪಿಸಿ ರಾಜ್ಯ ಕೇಂದ್ರ ಸರಕಾರಗಳನ್ನು ನೆಮ್ಮದಿಯಾಗಿರಲು ಬಿಡದಂತೆ ನೋಡಿಕೊಳ್ಳಬೇಕಿದೆ.
ರಾಜ್ಯೋತ್ಸವದ ಆಚರಣೆಗಳು ಬರೀ ಸಂತೋಷ ಕೂಟಗಳಾಗದೇ ಹೋರಾಟದ ವೇದಿಕೆಗಳಾಗಬೇಕಿದೆ. ಮಾತೃಭಾಷಾ ಮಾಧ್ಯಮ
ಶಿಕ್ಷಣ ಹಾಗೂ ಸಮಾನ ಶಿಕ್ಷಣದ ಅನುಷ್ಟಾನದ ನಿಟ್ಟಿನಲ್ಲಿ ಚಳುವಳಿಯನ್ನು ಹುಟ್ಟುಹಾಕಬೇಕಿದೆ.
.ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯ ಜೊತೆಗೆ ಅನ್ನದ ಭಾಷೆಯಾಗಿ ಮಾಡುವಂತೆ ಎಲ್ಲಾ ಕನ್ನಡಪರ ಸಂಘಗಳು ಆಳುವ ವರ್ಗಗಳ ಮೇಲೆ ನಿರಂತರ ಹೋರಾಟಗಳ ಮೂಲಕ ಒತ್ತಡ ತರಬೇಕಿದೆ. ಅದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಾನೂನನ್ನು ಬದಲಿಸಬೇಕೆಂದು ಸಂಘಟಿತರಾಗಿ ಒತ್ತಾಯಿಸಬೇಕಿದೆ. ರಾಜ್ಯ ಸರಕಾರದ ನೌಕರಿಗಳಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವರಿಗೆ ಗರಿಷ್ಟ ಮೀಸಲಾತಿಯನ್ನು ತರಲು ಸರಕಾರ ಮುಂದಾಗಬೇಕಿದೆ. ಹಾಗೂ ಕರ್ನಾಟಕದ ನೆಲ ಜಲ ಜನರನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಿರುವ ಅಷ್ಟೂ ಖಾಸಗಿ ಕಂಪನಿಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಖಡ್ಡಾಯ ಮೀಸಲಾತಿಯನ್ನು ಸರಕಾರ ಜಾರಿಗೆ ತರಬೇಕಿದೆ. ಅದಕ್ಕಾಗಿ ಸೂಕ್ತ ಕಾನೂನುಗಳನ್ನು
ತರಬೇಕಿದೆ. ಕಾರ್ಪೋರೇಟ್ ಕಂಪನಿಗಳ ಕೃಪಾ ಪೋಷಣೆಯಲ್ಲಿರುವ ಆಳುವ ವರ್ಗಗಳು ಈ ಕೆಲಸ ಮಾಡಲು ಸಾಧ್ಯವಿಲ್ಲವಾದ್ದರಿಂದ ರಾಜ್ಯಾದ್ಯಂತ ಕನ್ನಡಿಗರು ಹೋರಾಟಗಳ ಮೂಲಕ ಸರಕಾರವನ್ನು ಮಣಿಸಬೇಕಿದೆ. ಚುನಾವಣೆಯಲ್ಲಿ ಓಟು ಕೇಳಲು ಬಂದ ಎಲ್ಲಾ ನಮೂನಿ ಪಕ್ಷದವರಿಗೂ ಕನ್ನಡಿಗರಿಗೆ ಮೀಸಲಾತಿಯನ್ನು ಕೊಡುವಂತಿದ್ದರೆ, ಸಮಾನ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತಿದ್ದರೆ
ಮಾತ್ರ ಓಟು ಎಂದು ಆಗ್ರಹಿಸಬೇಕಿದೆ. ಯಾವಾಗ ಕನ್ನಡ ಮಾಧ್ಯಮದಲ್ಲಿ ಶಾಲೆ ಕಲಿತರೆ ಸರಕಾರಿ ಇಲ್ಲವೇ ಖಾಸಗಿ ಕ್ಷೇತ್ರಗಳಲ್ಲಿ ಬದುಕಿಗಾಗಿ ಕೆಲಸ ಸಿಗುತ್ತದೆ ಎಂದು ಖಾತ್ರಿಯಾಗುತ್ತದೋ ಆಗ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಆದ್ದರಿಂದ ಕನ್ನಡವೆನ್ನುವುದು ಬರೀ ಮಾತಿನ ಭಾಷೆಯಾಗುವ ಜೊತೆಗೆ ಬದುಕಿಗೆ ಕೆಲಸದ ಭದ್ರತೆ ಒದಗಿಸುವ ಅನ್ನದ ಭಾಷೆಯಾದರೆ ಕನ್ನಡವೆನ್ನುವುದು ಮುಂದಿನ ತಲೆಮಾರಿಗೆ ಉಳಿದು ಬೆಳೆಯುತ್ತದೆ. ಇಲ್ಲವಾದರೆ ಯಾವ ಭಾಷೆ ಬದುಕಿಗೆ ಬೇಕಾದ ಕೆಲಸ ಕೊಡುತ್ತದೋ ಆ ಭಾಷೆಯತ್ತ ಜನ ಆಕರ್ಷಿತರಾಗುತ್ತಾರೆ. ಹಾಗಾದರೆ ಮುಂದಿನ ಜನಾಂಗ ಕನ್ನಡ ಭಾಷೆಯಿಂದ ವಿಮುಖರಾಗುತ್ತಾರೆ. ಹೀಗೇ ಆದರೆ ಕರ್ನಾಟಕದಲ್ಲಿ ಕನ್ನಡವೆನ್ನುವುದು ಇನ್ನೊಂದು ಶತಮಾನದೊಳಗೆ ನಾಶವಾಗುತ್ತದೆ. ಕನ್ನಡಿಗರು ತಮ್ಮ ಭಾಷೆ ಸಂಸ್ಕೃತಿ ಎಲ್ಲವನ್ನೂ ಕಳೆದುಕೊಂಡು ಅತಂತ್ರರಾಗುವುದರಲ್ಲಿ ಸಂದೇಹವಿಲ್ಲ.
ಬೆಂಗಳೂರಿನಲ್ಲಿ 25 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬ್ರಹತ್
ಕನ್ನಡ ತಾಯಿ ಭುವನೇಶ್ವರಿಯ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ. ಆದರೆ..
ಕೇವಲ ಪ್ರತಿಮೆಗಳನ್ನು ಬೆಂಗಳೂರಿನಲ್ಲಷ್ಟೇ ಅಲ್ಲಾ, ರಾಜ್ಯಾದ್ಯಂತ ಪ್ರತಿಷ್ಠಾಪಿಸಿದರೆ, ರಾಜ್ಯೋತ್ಸವವನ್ನು
ಅದ್ದೂರಿಯಾಗಿ ಆಚರಿಸಿದರೆ ಕನ್ನಡ ಭಾಷೆ ಉಳಿಯವುದಿಲ್ಲ. ಯಡಿಯೂರಪ್ಪನವರಿಗೆ ನಿಜವಾಗಿಯೂ ಕನ್ನಡಪರ
ಕಾಳಜಿ ಇದ್ದರೆ ಮೊದಲು ಮಾತೃಭಾಷಾ ಮಾಧ್ಯಮ ನೀತಿಗೆ ಸಂಸತ್ತಿನಲ್ಲಿ ತಿದ್ದುಪಡಿ ತರಲು ಕೇಂದ್ರ ಸರಕಾರವನ್ನು
ಆಗ್ರಹಿಸಬೇಕಿದೆ. ಈ ರಾಜಕಾರಣಿಗಳೂ ಸಹ ನವೆಂಬರ್ ಕನ್ನಡಿಗರಾಗಿ ಘೋಷಣೆಗಳನ್ನು ಮಾಡುವುದನ್ನು ಬಿಟ್ಟು
ಮೊದಲು ರಾಜಕೀಯವಾಗಿ ಹೇಗೆ ಕನ್ನಡಭಾಷೆಯನ್ನು ಸಶಕ್ತಗೊಳಿಸಬೇಕು ಎನ್ನುವುದನ್ನು ಸಾಬೀತುಪಡಿಸಬೇಕಿದೆ.
.ಕನ್ನಡ ಭಾಷೆ ಉಳಿಯಬೇಕಾದರೆ ಕರ್ನಾಟಕದ ಆಳುವ ವರ್ಗಗಳು ಅನೇಕ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಯಲ್ಲಿ ಸರಕಾರ ನಿರ್ಲಕ್ಷ ವಹಿಸಿದರೆ ಕನ್ನಡ ಸಂಘ ಸಂಸ್ಥೆಗಳು ತಮ್ಮ ಜಡತ್ವ ಬಿಟ್ಟು ಕನ್ನಡಿಗರನ್ನು ಒಂದು ಗೂಡಿಸಿ ಜನಹೋರಾಟವನ್ನು ರೂಪಿಸಬೇಕು. ಸಾಧ್ಯವಾದರೆ ಕನ್ನಡಿಗರ ನೆಲ ಜಲ ನುಡಿಯ ಹಿತ ಕಾಪಾಡಲು ಬದ್ದವಾದ ಪ್ರಾದೇಶಿಕ ಪಕ್ಷವೊಂದು ಅಸ್ತಿತ್ವಕ್ಕೆ ಬಂದು ಸ್ವಂತ ಬಲದ ಮೇಲೆ ಸರಕಾರ ರಚಿಸುವಂತಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರು ಸದಾ ಜಾಗ್ರತರಾಗಿ ಕನ್ನಡದ ಸ್ವಾಭಿಮಾನವನ್ನು ತಮ್ಮ ಮನ ಮನೆಯಲ್ಲಿ ಸದಾ ಉಳಿಸಿಕೊಳ್ಳಬೇಕು. ಹೀಗಾದಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆಗೆ ನಿಜವಾದ ಅರ್ಥ ಪ್ರಾಪ್ತಿಯಾಗುತ್ತದೆ. ಇಲ್ಲವಾದರೆ ನವೆಂಬರ್ ಕನ್ನಡಾಭಿಮಾನವು ಕನ್ನಡತನ ಉಳಿಸಲು ಸಾಲದೇ ಕೇವಲ ತೋರುಂಬ ಲಾಭವಾಗುತ್ತದೆ. ಯಾವಾಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಕನ್ನಡಿಗರು ಕನ್ನಡದ ಮೂಲಕವೇ ಮುಂಚೂಣಿಗೆ ಬರುತ್ತಾರೋ ಆಗ ಕನ್ನಡ ಉಳಿಯುತ್ತದೆ. ಕೇವಲ ಅನ್ಯ ಭಾಷಿಕರನ್ನು ದೂಷಿಸುವುದರ ಬದಲು ಕನ್ನಡಿಗರು ಮೊದಲು ಕನ್ನಡವನ್ನು ತಮ್ಮ ಮನೆ ಒಳಗೂ ಹಾಗೂ ಹೊರಗೂ ಬಳಸಿ, ಕನ್ನಡತನವನ್ನು ಬೆಳಸಬೇಕಿದೆ. ಇದು ಒಬ್ಬರು ಇಬ್ಬರಿಂದಾಗುವ ಕೆಲಸವಲ್ಲ. ಒಂದಿಡಿ ಸಮುದಾಯ ಮಾಡಬೇಕಾದ ಕೆಲಸ. ಈ ಕನ್ನಡಿಗರ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಕನ್ನಡ ಸಂಘ ಸಂಸ್ಥೆಗಳು ತಮ್ಮ ನಿಜವಾದ ಕನ್ನಡ ಪ್ರೇಮವನ್ನು ರಾಜ್ಯೋತ್ಸವದಾಚರಣೆಯ ಆಚೆಗೂ ವಿಸ್ತರಿಸಬೇಕಿದೆ. ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸುವಂತಹ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಿ ಕನ್ನಡಿಗರನ್ನು ಒಂದು ಗೂಡಿಸಬೇಕಿದೆ. ಹಾಗೂ ಕನ್ನಡವನ್ನು ಅನ್ನದ ಭಾಷೆಯಾಗಿ ಮಾಡಬೇಕು. ಸಮಾನ ಶಿಕ್ಷಣವಾಧಾರಿತ ಮಾತೃಭಾಷಾ
ಮಾಧ್ಯಮ ನೀತಿಯನ್ನು ಅನುಷ್ಟಾನಕ್ಕೆ ತರಬೇಕು ಹಾಗೂ ಕನ್ನಡಿಗರಿಗೆ ಎಲ್ಲಾ ರೀತಿಯ ನೌಕರಿಗಳಲ್ಲೂ ಖಡ್ಡಾಯ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಸರಕಾರವನ್ನು ಒತ್ತಾಯಿಸುತ್ತಲೇ ಇರಬೇಕಿದೆ. ಅದಕ್ಕಾಗಿ ತೀವ್ರವಾಗಿ ಹೋರಾಡಬೇಕಿದೆ. ಹಾಗೂ ಇದು ಕನ್ನಡದ ಉಳಿವಿಗೆ ಹಾಗೂ ಬೆಳವಣಿಗೆಗೆ ಅಗತ್ಯವಾಗಿದೆ.
(2016, ನವೆಂವರ್ 1 ರಂದು ವಿನಾಯಕನಗರದ ಕನ್ನಡ ಸಂಘದ ಆತ್ಮೀಯ ಆಹ್ವಾನದ ಮೇರೆಗೆ ಅತಿಥಿಯಾಗಿ ಹೋಗಿದ್ದಾಗ ಮಾತಾಡಿದ ಮಾತುಗಳ ಅಕ್ಷರಗಳ ರೂಪವೇ ಈ ಲೇಖನ)
(2016, ನವೆಂವರ್ 1 ರಂದು ವಿನಾಯಕನಗರದ ಕನ್ನಡ ಸಂಘದ ಆತ್ಮೀಯ ಆಹ್ವಾನದ ಮೇರೆಗೆ ಅತಿಥಿಯಾಗಿ ಹೋಗಿದ್ದಾಗ ಮಾತಾಡಿದ ಮಾತುಗಳ ಅಕ್ಷರಗಳ ರೂಪವೇ ಈ ಲೇಖನ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ