“ಕನ್ನಡ ಮಧ್ಯಮದ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷನ್ನು
ಎಷ್ಟನೇ ತರಗತಿಯಿಂದ ಕಲಿಸಬೇಕು?’ ಎಂಬುದು ವಾದವಿವಾದವಾಗಿ ರೂಪಗೊಂಡಿದೆ. ಪ್ರಗತಿಪರರು, ಬುದ್ದಿಜೀವಿಗಳು, ಜನಪರ ಸಂಘಟನೆಗಳು ಪರ ವಿರೋಧವೆಂಬ ಎರಡು ಗುಂಪುಗಳಾಗಿ ಆಳುವ ವರ್ಗದ ಒಡೆದು ಆಳುವ ಕುತಂತ್ರದ ದಾಳಕ್ಕೆ ಬಲಿಯಗಿ ಪರಸ್ಪರ ವಾದವಿವಾದಗಳಲ್ಲಿ ಮಗ್ನರಾಗಿದ್ದಾರೆ. ಯಾಕೆ ಅವರೆಲ್ಲರೂ ಒಂದಾಗಿ ಸಮನ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸಿ ಹೋರಾಡಬಾರದು? ಇಂಗ್ಲೀಷ ಮಧ್ಯಮದ ಪಿಡುಗನ್ನು ನಾಶ ಮಾಡಿ ಮತೃಭಾಷಾ ಮಧ್ಯಮದಲ್ಲಿ ಕಡ್ಡಾಯ
ಶಿಕ್ಷಣ ಜಾರಿಗಾಗಿ ಪ್ರತಿಭಟಿಸಬಾರದು? ಅದ್ಯಾಕೆ ಶಿಕ್ಷಣದ ತಾರತಮ್ಯ ನೀತಿಯ ವಿರುದ್ಧ ಬೀದಿಗಿಳಿಯಬಾರದು? ಇಂತವೇ ಹಲವಾರು ಪ್ರಶ್ನೆಗಳು ಪ್ರಜ್ಞಾವಂತ ಜನರ ಮುಂದಿವೆ.
ಕನ್ನಡ
ಭಾಷೆಯ ಉಳಿವಿನ ದೃಷ್ಟಿಯಿಂದ ಮೊದಲು ಮಾತೃಭಾಷೆಯಲ್ಲಿ ಶಿಕ್ಷಣ
ಜಾರಿಯಾಗಲೇಬೇಕಿದೆ ಇಂಗ್ಲೀಷನ್ನು ಒಂದು ಭಾಷೆಯಾಗಿ ಮಾತ್ರ ಕಲಿಸಬೇಕಾಗಿದೆ. ಎಲ್ಲಕ್ಕಿಂತ ಮೊದಲು
ಇಂಗ್ಲೀಷ ದಬ್ಬಾಳಿಕೆ ನಿಲ್ಲಲೇಬೇಕಾಗಿದೆ. ಅದಕ್ಕಾಗಿ ಮಾತೃಭಾಷಾ ಶಿಕ್ಷಣದ ಅಗತ್ಯತೆ ಮತ್ತು ಅನಿವಾರ್ಯತೆ ಕುರಿತು ಈ ಲೇಖನ.
ಮಾನವ ಜೀವನಕ್ಕೂ-ಭಾಷೆಗೂ ಬಿಡಿಸಲಾರದ ಸಂಬಂಧವಿದೆ.
ಮಾನವನ
ಶ್ರಮ ಮತ್ತು ಮಾತು ಈ ಎರಡೇ ಭಾಷೆಯ
ಬೆಳವಣಿಗೆಗೆ ಮೂಲ. ಮಾನವನ
ನಾಗರೀಕತೆ ಬೆಳೆದಂತೆಲ್ಲ ಅದಕ್ಕನುಗುಣವಾಗಿ ಭಾಷೆ
ಬೆಳೆಯುತ್ತಲೇ ಬಂದಿದೆ.
ಒಂದು ಜನಾಂಗದ ಇರುವನ್ನು ಗುರಿತಿಸಲು
ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಜಾತಿ, ಧರ್ಮ,
ರಕ್ತ ಸಂಬಂಧಗಳಿಗೆ ಪ್ರಜಾತಾಂತ್ರಿಕ ಮೌಲ್ಯಗಳಿಲ್ಲದೇ ಹೋದರೂ, ಭಾಷೆಯಲ್ಲಿ ಮಾತ್ರ
ಈ ಮೌಲ್ಯಗಳು ಅಡಗಿವೆ. ಭಾಷೆಯನ್ನು ಕಳೆದುಕೊಳ್ಳುವುದು ಎಂದರೆ ಒಂದು ಜನಾಂಗದ ಗುರುತಿಸುವಿಕೆಯನ್ನೇ ನಾಶಮಾಡಿಕೊಂಡಂತೆ. ಅಂದರೆ ಸ್ವಂತಿಕೆಯನ್ನೇ ಕಳೆದುಕೊಂಡಂತೆ. ಒಂದು ಭಾಷೆ ನಾಶವಾಗುವುದೆಂದರೆ ಸಾವಿರಾರು ವರ್ಷಗಳ ಕೋಟ್ಯಾನುಕೋಟಿ ಮಾನವರ ಶ್ರಮವು ನಾಶವಾದಂತೆ. ಆದ್ದರಿಂದಲೇ ಭಾಷೆ
ಎಂಬುದು ಒಂದು ಜನಾಂಗದ ಬದುಕಿನ ಪ್ರಶ್ನೆಯಾಗಿದೆ. ಅವರ ಅಸ್ಥಿತ್ವದ ಪ್ರಶ್ನೆಯಾಗಿದೆ. ಆದ್ದರಿಂದಲೇ ಭಾಷೆಯ ಪ್ರಶ್ನೆ ಬಂದಾಗ ಎಲ್ಲಾ ಧರ್ಮಗಳು, ಎಲ್ಲಾ ಜಾತಿಗಳು, ರಕ್ತ ಸಂಬಂಧಗಳು, ವರ್ಣ ಬೇಧ, ಗಡಿಗಳ ಮಿತಿ ಇಲ್ಲದೇ ಒಂದಾಗಲು ಜನ ಮುಂದಾಗುತ್ತಾರೆ. ಹಾಗಾದರೆ ಒಂದು ಜನಾಂಗದ ಬದುಕು ಮತ್ತು ಭವಿಷ್ಯವನ್ನು ನಿರ್ಧರಿಸುವಂತಹ
ಭಾಷಾ ಕಲಿಕೆಯು ಯಾವ ಮಧ್ಯಮದಲ್ಲಿರಬೇಕು ?
ಜನ ಸಮೂಹವನ್ನು ಸಂಪರ್ಕಿಸಲು, ಸಮುದಾಯದಲ್ಲಿ ಸಕ್ರಿಯವಾಗಿ
ಪಾಲ್ಗೊಳ್ಳಲು, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ, ಒಂದು ಪೀಳಿಗೆಯಿಂದ
ಇನ್ನೊಂದು ಪೀಳಿಗೆಗೆ ವಿಷಯಗಳನ್ನು ತಲುಪಿಸುವಲ್ಲಿ
ಮಾತೃಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆ ಕೇವಲ ಪದಗಳ ವಾಕ್ಯಗಳ ಮೊತ್ತವಾಗಿರದೇ, ಮಾನವನ ಆಲೋಚನಾ ವಿಧಾನವನ್ನು ವ್ಯವಸ್ಥಿತವಾಗಿ ರಚಿಸುವಂತಹುದಾಗಿದೆ. ಯಾವುದೇ ದೇಶ ಅಭಿವೃದ್ದಿ ಹೊಂದುವಲ್ಲಿ ಶಿಕ್ಷಣ ಸಾರ್ಥಕವಾಗಬೇಕಾದರೆ ಶಿಕ್ಷಣದ
ಕಲಿಸುವಿಕೆಯು ಮತೃಭಾಷೆಯಲ್ಲಿ ಇರಬೇಕು. ಪ್ರಪಂಚದ ಯಾವುದೇ
ಅಭಿವೃದ್ಧಿಶೀಲ ದೇಶಗಳನ್ನು ತೆಗೆದುಕೊಂಡರೂ ಅಲ್ಲಿಯ ಶಿಕ್ಷಣ ಮಾತೃಭಾಷೆಯಲ್ಲಿಯೇ ನಡೆಯುತ್ತದೆ.
ಮಾತೃ
ಭಾಷಾ ಶಿಕ್ಷಣ :
ಶಿಕ್ಷಣದಲ್ಲಿ ಮಾತೃಭಾಷೆಯ
ಮಹತ್ವವನ್ನು ಕುರಿತು ಆಂಗ್ಲ ಸಾಹಿತಿ ಬ್ರೈಲ್ಸ್ಫೆರ್ಟ ಈ
ರೀತಿ ಹೇಳಿದ್ದಾರೆ. “ ನಮ್ಮ ಭಾವನೆಗಳ ಬೀಗದ ಕೈ ಇರುವುದು ಮಾತೃ ಭಾಷೆಯಲ್ಲಿ. ಸೂಕ್ಷಾತಿಸೂಕ್ಷ ಸಂವೇದನೆಗಳನ್ನೂ ಸಹಜವಾಗಿ
ಅಂತಃಕರಣ ಪ್ರೇರಣೆಯಿಂದ ಮನವರಿಕೆ ಮಾಡಿಕೊಡುವ ಶಕ್ತಿ ಮಾತೃ ಭಾಷೆಗಿದೆ. ತಾಯಿಯ ತೊಡೆಯ ಮೇಲೆ ಕಲಿತ ಭಾಷೆ ಅದು. ನಮ್ಮ
ದುಃಖ ಮತ್ತು ಸಂತೋಷಗಳ ಸುಲಭ ಅಭಿವ್ಯಕ್ತಿ ಮಧ್ಯಮವದು.
ಅನ್ಯ
ಭಾಷೆಯನ್ನು ಶಿಕ್ಷಣ ಮಧ್ಯಮವಾಗಿ ಅಂಗೀಕರಿಸುವುದರಿಂದ ವಿದ್ಯಾರ್ಥಿಗಳು
ಅನೂಹ್ಯವಾದ ಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಅವರ ಮನಸ್ಸು ಮತ್ತು ಬುದ್ದಿ ಚಲನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತವೆ.”
ಹೌದು. ಮಗು ಪ್ರಪಂಚವನ್ನು ಅರಿಯುವುದು
ತನ್ನ ಇಂದ್ರಿಯಗಳ ಮೂಲಕ. ಅದರ ಕಲಿಕೆಯಲ್ಲಿ ಓದು, ಬರಹ, ದೃಶ್ಯ, ಸ್ವರ್ಶ,
ತರ್ಕ, ಚಿಂತನೆ,
ಗ್ರಹಿಕೆ, ಅಭಿವ್ಯಕ್ತಿ, ನೆನಪು. ಈ ಎಲ್ಲ ವಿಚಾರಗಳಲ್ಲಿ
ಆ ಮಗುವಿನ ಮಾತೃಭಾಷೆ ಅತ್ಯಂತ ಮಹತ್ವದ ನಿರ್ಣಾಯಕ ಪಾತ್ರ ವಹಿಸುತ್ತದೆ. ಐದನೇ ವರ್ಷದ ನಂತರ ಮಗು ತನ್ನ ಶಿಕ್ಷಣ, ಸಂಸ್ಕೃತಿ ಮತ್ತು ಬೌದ್ಧಿಕ
ವಿಕಾಸಕ್ಕಾಗಿ ಶಾಲೆ
ಸೇರಬೇಕಾಗುತ್ತದೆ. ಈ
ಸಂದರ್ಭದಲ್ಲಿ ಕಲಿಕೆ, ಭೋಧನೆ ಇವುಗಳನ್ನು ಮಾತೃಭಾಷೆಯಲ್ಲಿ
ಕೊಡಿಸಬೇಕೆ ಹೊರತು ಅಪರಿಚಿತವಾದ ಅನ್ಯಭಾಷೆಗಳಲ್ಲಲ್ಲ. ತನ್ನ ಪರಿಸರದಲ್ಲಿ, ತನ್ನ ಪರಿವಾರ, ಆಟದ ಮೈದಾನ, ಸ್ನೇಹಿತರೊಂದಿಗೆ ಮಾತೃಭಾಷೆಯಲ್ಲಿ ವ್ಯವಹರಿಸುವ
ಮಗುವಿಗೆ ತಾಯಿ ಭಾಷೆಯಲ್ಲಿ ಶಿಕ್ಷಣ ಕೊಟ್ಟಲ್ಲಿ ಯಾವುದೇ ಮನಸಿಕ ಒತ್ತಡಕ್ಕೂ ಒಳಗಾಗದೆ ಎಲ್ಲವನ್ನೂ ಸರಾಗವಾಗಿ ಕಲಿಯಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲದೇ ಮಕ್ಕಳು ಶಿಕ್ಷಣವನ್ನು ಮತೃಭಾಷೆಯ ಮೂಲಕ ಸುಲಭವಾಗಿ ಗ್ರಹಿಸಬಲ್ಲರು.
ಭಾಷೆಯ ಮಧ್ಯಮದ ಮೂಲಕವೇ ಮನುಷ್ಯ ಹೊರಗಣ ಪ್ರಭಾವಗಳಿಗೆ ತುತ್ತಾಗುತ್ತಾನೆ. ಅಂತೆಯೇ ಭಾಷೆಯ ಮೂಲಕವೇ ತನ್ನ ಅಂತರ್ಭಾವಗಳನ್ನು ಅಭಿವ್ಯಕ್ತಿ ಪಡಿಸುತ್ತಾನೆ. ಪ್ರಸ್ತುತ ಅನುಭವವು ಭಾಷೆಯಲ್ಲಿ ಸೆರೆಯಾಗಿರುತ್ತದೆ. ಭಾಷೆಯ ಮೂಲಕವೇ ವ್ಯಕ್ತಿಯ ಮತ್ತು ಸಮೂಹ ಅಭೀಷ್ಠೆಗಳು ರೂಪಗೊಂಡು ಸ್ಥಾಯಿಯಗುತ್ತವೆ. ವ್ಯಕ್ತಿಯ
ವ್ಯಕ್ತಿತ್ವದ ಸೃಜನತೆಯಲ್ಲಿ ಭಾಷೆ ಮಹತ್ವದ
ಪಾತ್ರ ವಹಿಸುತ್ತದೆ. ಅಪರಿಚಿತ ಭಾಷೆಯಿಂದ ಅತ್ಯಂತ ಬುದ್ದಿಮತಿಯ ವ್ಯಕ್ತಿಯೂ ಕಂಪನ ಪೀಡಿತನಾಗುತ್ತಾನೆ.
ಆದ್ದರಿಂದ ಯಾವ ಭಾಷೆ ತನ್ನ ಸುತ್ತಮುತ್ತಲಿನ ಪರಿಸರ, ಸ್ಥಳೀಯ
ಸಂಸ್ಕೃತಿ,
ಬದಲಾಗುತ್ತಿರುವ ಸಾಮಾಜಿಕ
ಗತಿಯನ್ನು ಹಾಗೂ ಸಾಮಾಜಿಕ ಉತ್ಪಾದನೆ ಹಾಗೂ ಅದರ ಸಂಬಂಧಗಳನ್ನು ಅರ್ಥೈಸುವಂತೆ
ಮಾಡುತ್ತದೋ, ಯಾವ ಭಾಷೆ
ವಿದ್ಯಾರ್ಥಿಗಳಲ್ಲಿ ವಿಮರ್ಶಿಸುವ, ಪ್ರಶ್ನಿಸುವ, ಸ್ವತಂತ್ರವಾಗಿ ಆಲೋಚಿಸುವ ಅವಕಾಶವನ್ನು ಒದಗಿಸುತ್ತದೋ.. ಅಂತಹ ಭಾಷೆಯನ್ನು ಶಿಕ್ಷಣ
ಮಧ್ಯಮವನ್ನಾಗಿ ಮಾಡಬೇಕು. ಇದು ಪರಕೀಯ ಭಾಷೆಗಳಿಂದ ಸಾಧ್ಯವಿಲ್ಲ. ಅದು
ಮತೃಭಾಷೆಯಿಂದ ಮಾತ್ರ ಸಾಧ್ಯ. ಕನ್ನಡ ಭಾಷಿಕರಿಗೆ ಕನ್ನಡದಲ್ಲೇ ಶಿಕ್ಷಣ ಕೊಡುವುದು ವೈಜ್ಞಾನಿಕ ದೃಷ್ಟಿಕೋನವಾಗಿದೆ.
ಇಂಗ್ಲೀಷ್ ಭಾಷಾ ಅಧಿಪತ್ಯ
:
ಭಾರತವನ್ನು ಆಕ್ರಮಿಸಿಕೊಂಡು ವಸಾಹತನ್ನಾಗಿಸಿದ
ಬ್ರಿಟಿಷರು ತಮ್ಮ ಹಿತಾಸಕ್ತಿಗನುಗುಣವಾಗಿ ಇಂಗ್ಲೀಷನ್ನು ಭಾರತದ ಆಡಳಿತ ಭಾಷೆಯನ್ನಾಗಿ ಜಾರಿಗೆ ತಂದರು. ತಮ್ಮ ಖರ್ಚು- ವೆಚ್ಚಗಳನ್ನು ಮಿತಗೊಳಿಸಲು ತಮಗೆ
ಬೇಕಾದ ಸರಕಾರಿ ನೌಕರರನ್ನು ತಯರಿಸಲು ಅಭಿವೃದ್ದಿ ಪತದಲ್ಲಿದ್ದ
ಪ್ರಾದೇಶಿಕ ಭಾಷೆಗಳನ್ನು ಮೊಟಕುಗೊಳಿಸಿ
ಆ ಸ್ಥಾನದಲ್ಲಿ ಇಂಗ್ಲೀಷನ್ನು ಶಿಕ್ಷಣದ
ಮಾಧ್ಯಮವಾಗಿ ಬಲವಂತದಿಂದ
ಜಾರಿಗೆ ತಂದರು. ಅದರ ಮೂಲಕ
ತಮ್ಮ ಸಂಸ್ಕೃತಿಯನ್ನು ಸಹ ಒತ್ತಾಯವಾಗಿ ಹೇರುವ ಮೂಲಕ ತನ್ನದೇ ಆದ ಒಂದು ವಿದೇಶಿ ಅನುಕರಣಾಶೀಲ ವರ್ಗವನ್ನು ಭಾರತದಲ್ಲಿ ಬೆಳೆಸಲು ಪ್ರಾರಂಭಿಸಿದರು. ದಿನನಿತ್ಯದ ಆಡಳಿತದ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕೆ ಇಂತಹ ವಿಧೇಯ ಸೇವಕರ ಅಗತ್ಯ ಬ್ರಿಟೀಷರಿಗಿದ್ದುದರಿಂದ ಅವರು ಒಂದು ವಿದ್ಯಾವಂತ ಪ್ರತಿಷ್ಟಿತ ವರ್ಗವನ್ನು ಸೃಷ್ಟಿಸಿದರು. ಅವರೆಂತವರಾಗಿರಬೇಕೆಂದರೆ, “ರಕ್ತದಿಂದ ಭಾರತೀಯರಾಗಿದ್ದು, ಆಸಕ್ತಿ, ಅಭಿರುಚಿ, ಅಭ್ಯಾಸ, ನಡವಳಿಕೆ ಮತ್ತು ಸಂಪ್ರದಾಯಗಳಿಂದ ಬ್ರಿಟೀಷರಾಗಿರಬೇಕು” ಎಂದು ಇಂಗ್ಲೀಷ್ ಅಧಿಕಾರಿ ಮೆಕಾಲೆ ಹೇಳಿದ್ದನು. ಇದರಿಂದಾಗಿ ಬ್ರಿಟೀಷ್ ಆಳ್ವಿಕೆ ಉದ್ದಕ್ಕೂ ಇಂಗ್ಲೀಷ್ ಶಿಕ್ಷಣ ಮಧ್ಯಮವಾಗಿದ್ದು, ವಸಾಹತು
ಮೌಲ್ಯಗಳಿಗೆ ಒತ್ತು ನೀಡುತ್ತಿತ್ತು.
1916
ರಲ್ಲಿ ಇಂಗ್ಲೀಷ್ ಕುರಿತು ಗಾಂಧೀಜಿ, “ ವಿದೇಶಿಯರ ಆಡಳಿತದಿಂದ ಬಂದೊದಗಿದ ಪೀಡನೆ ಎಂದರೆ ಈ ಆಂಗ್ಲ ಶಿಕ್ಷಣ ಮಧ್ಯಮ. ಇದು ರಾಷ್ಟ್ರದ
ಶಕ್ತಿಯನ್ನು ಕುಂದಿಸಿ, ಮಕ್ಕಳ ಆಯುಷ್ಯವನ್ನು
ಮೊಟಕುಗೊಳಿಸಿದೆ. ಮಕ್ಕಳನ್ನು ಸಾರ್ನಜನಿಕರೊಂದಿಗೆ ಬೇರ್ಪಡಿಸಿದೆಯಲ್ಲದೆ ಶಿಕ್ಷಣ ವೆಚ್ಚವನ್ನು ಹೆಚ್ಚಿಸಿದೆ. ಈ ಶಿಕ್ಷಣ ಮಧ್ಯಮ
ಹೀಗೇಯೇ ಮುಂದುವರಿದರೆ, ಇದು ರಾಷ್ಟ್ರದ ಆತ್ಮ ವಿನಾಶಕ್ಕೆ ಕಾರಣವಾಗುತ್ತದೆ. ಅನಿಷ್ಟವಾದ ಇಂಗ್ಲೀಷ್ ತೊಲಗಿಸಲು ಸೂಕ್ತ ವಿಧಾನವನ್ನು ಕಂಡುಕೊಳ್ಳಬೇಕಾಗಿದೆ” ಎಂದು ಹೇಳಿದ್ದರು.
ಆದರೆ....
ಭಾರತದ ಬೂಟಕದ
ಸ್ವಾತಂತ್ರ್ಯವು ಬ್ರಿಟೀಷರಿಂದ
ಭಾರತದ ಬಂಡವಾಳಿಗರಿಗೆ ಹಸ್ತಾಂತರಗೊಂಡ (1947) ನಂತರ ಅಧಿಕಾರ ವಹಿಸಿಕೊಂಡ ದಲ್ಲಾಳಿ ಬಂಡವಾಳಶಾಹಿ ಆಡಳಿತ ವರ್ಗವು ಬ್ರಿಟೀಷರ ಶಿಕ್ಷಣ ನೀತಿ ಮತ್ತು ಸಂಸ್ಕೃತಿಯನ್ನೇ ಮುಂದುವರಿಸಿದವು. ಅದೇ ಇಂಗ್ಲೀಷೆ ಇಂದೂ ಸಹ ಆಡಳಿತದಲ್ಲಿ, ಕೋರ್ಟು ಕಛೇರಿಗಳಲ್ಲಿ, ಶಿಕ್ಷಣದಲ್ಲಿ
ರಾಜಾರೋಷವಾಗಿ ಮೆರೆಯುತ್ತಿದೆ. ಉಳ್ಳವರ ಸೇವೆಗೆಂದೇ ಇರುವ ಈ ಭಾಷೆಗೆ ಸಿಕ್ಕುವ
ಪ್ರೋತ್ಸಾಹವು ಸಾಮ್ರಾಜ್ಯಶಾಹಿ ಹಿತಾಸಕ್ತಿಗನುಗುಣವಾಗಿದ್ದು, ಜನತೆಯ ಮೇಲೆ ಇಂಗ್ಲೀಷ್ ಬಾಷೆಯ ಮೂಲಕ ಪರಕೀಯ ಸಂಸ್ಕೃತಿಯನ್ನು ಹೇರಿ, ಇಡೀ ಭಾರತವನ್ನು ಪರಕೀಯರಿಗೆ ಅಡವಿಡಲು ಇಂಗ್ಲೀಷ್ ಸಹಕಾರಿಯಾಗಿದೆ. ಕನ್ನಡಿಗರ ಮೇಲಂತೂ ಇಂಗ್ಲೀಷ್ ಭಾಷೆಯ ದಮನ ತೀವ್ರವಾಗಿದೆ.
ಕರ್ನಾಟಕದ ಆಳುವ ವರ್ಗಗಳು ಕನ್ನಡದ ಬಗ್ಗೆ ವಿಪರೀತ ಕಾಳಜಿ ತೋರಿಸುತ್ತಲೇ ಒಳಗೊಳಗೆ ಅಸಂಖ್ಯಾತ ಇಂಗ್ಲೀಷ್ ಶಾಲೆಗಳನ್ನು ಸ್ಥಾಪಿಸುವ ಮೂಲಕ ಕನ್ನಡ ಶಾಲೆಗಳನ್ನು ಕಡೆಗಣಿಸಿ
ಜನತೆಯಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಮೂಡಿಸಿದ್ದಾರೆ. ನಮ್ಮ ನಾಡಿನ ಆಡಳಿತ, ಉದ್ಯಮ, ವ್ಯವಹಾರವೆಲ್ಲ ಇಂಗ್ಲೀಷಿನಲ್ಲೆ ನಡೆಯುವಂತೆ
ನೋಡಿಕೊಳ್ಳುತ್ತಾ, ಸಾಮ್ರಾಜ್ಯಶಾಹಿ ಹಿತಾಸಕ್ತಿಗಳನ್ನು ಕಾಪಾಡುತ್ತಾ, ವ್ಯವಸ್ಥಿತವಾಗಿ ಜನರಲ್ಲಿ ಗುಲಾಮಿ ಭಾವನೆ
ಬೆಳೆಸುತ್ತಿದ್ದಾರೆ. ಇನ್ನು ಇಂಗ್ಲಿಷ್ ಕಲಿಯುವ ಕನ್ನಡ ನಾಡಿನ ಮಕ್ಕಳ ಸ್ಥಿತಿಯಂತೂ ನೀರಿಳಿಯದ ಗಂಟಲಿಗೆ ಕಡುಬು ತುರುಕಿದಂತಾಗಿದೆ. ಇಂಗ್ಲೀಷ್ ಪರಬಾಷೆಯಾಗಿದ್ದರಿಂದ ಅದರ ಧ್ವನಿ,
ಪದ, ವಾಕ್ಯ ರಚನೆ, ಸಂಸ್ಕೃತಿ ಯಾವುದಕ್ಕೂ ಸಹಜವಾಗಿ ಹೊಂದಿಕೊಳ್ಳದ
ಮಕ್ಕಳು ಏನನ್ನೂ ಕಲಿಯಲಾರದೇ, ಬಾಯಿಪಾಠ ಮಾಡುವ ಗಿಳಿಗಳನ್ನಾಗಿ ಮಾಡಿ ಮಕ್ಕಳ ಸಹಜ ಪ್ರತಿಭೆ ಅರಳಿ ವಿಕಾಸವಾಗದಂತೆ ತಡೆಯುವಲ್ಲಿ ಇಂಗ್ಲೀಷ್
ಯಶಸ್ಸು ಸಾಧಿಸಿದೆ.
ಇಂಗ್ಲೀಷ್ನಲ್ಲಿ ಮಾಡುವ ಪಾಠ ಮಕ್ಕಳಿಗೆ ಅರ್ಥವಾಗದೇ, ಮಕ್ಕಳು ಅದನ್ನು ಮತ್ತೊಮ್ಮೆ ಮನಸ್ಸಿನಲ್ಲಿ ತಮ್ಮ ಮತೃಭಾಷೆಯಲ್ಲಿ ಅನುವಾದ ಮಾಡಿಕೊಂಡು ಆಲೋಚಿಸಿ ನಂತರ ಇಂಗ್ಲೀಷಿನಲ್ಲಿ ಪ್ರತಿಕ್ರಯಿಸಬೇಕಾಗುತ್ತದೆ. ಇಂಗ್ಲೀಷ್ನಲ್ಲಿ ಕೇಳಿದ್ದನ್ನು ಅರ್ಥ ಮಾಡಿಕೊಳ್ಳುವ, ಕಲಿತದ್ದನ್ನು ನೆನಪಿಟ್ಟುಕೊಳ್ಳುವ
ಮತ್ತು ಅದನ್ನು ತನ್ನ ಮಾತಲ್ಲಿ ಹೇಳುವ ಸಾಮರ್ಥ್ಯದ ಕೊರತೆಯುಂಟಾಗಿ, ಮಕ್ಕಳ ಗ್ರಹಿಕೆಯ ಮಿತಿಯರಿಯದೆ ಅದನ್ನು ದಡ್ಡತನವೆಂದು ತಿಳಿದು
ಮಕ್ಕಳನ್ನು ಟ್ಯೂಷನ್ ಹಾಗೂ ಹೋಂವರ್ಕ್ಗಳ ಬಲೆಯಲ್ಲಿ ಸಿಕ್ಕಿಸಿ
ಹಿಂಸಿಸಲಾಗುತ್ತಿದೆ. ಈ ಕಾರಣಗಳಿಂದಾಗಿ ಮಗು ತನ್ನ ಮತೃಭಾಷೆಯಲ್ಲಿ ಸರಿಯಾಗಿ
ಕಲಿಯದೇ, ಅತ್ತ ಇಂಗ್ಲೀಷನ್ನೂ ಅರಗಿಸಿಕೊಳ್ಳದೇ ತ್ರಿಶಂಕು ಸ್ಥಿತಿಯಲ್ಲಿ ನರಳಬೇಕಾಗಿದೆ. ಆಳುವ ವರ್ಗದ ಹಿತಾಸಕ್ತಿಗಾಗಿ, ಪೋಷಕರ ಪ್ರತಿಷ್ಟೆ ಮತ್ತು ಇಂಗ್ಲೀಷ್
ವ್ಯಾಮೋಹಕ್ಕಾಗಿ ಮಗುವಿನ ಸಹಜ
ಜೀವನದ ವಿಕಾಸವನ್ನೇ ಬಲಿಕೊಡಬೇಕಾಗುತ್ತದೆ. ಇದರ ಮೂಲಕ ನಾಡಿನ ಪ್ರಗತಿಗೂ ತಡೆಯುಂಟಾಗುತ್ತದೆ.
ನರಕವೋ- ಇಂಗ್ಲೀಷ್ ಶಾಲೆಯೋ ?
ಇಂದಿನ ಇಂಗ್ಲೀಷ್ ಶಾಲೆಗಳು ಮಕ್ಕಳ ಪಾಲಿಗೆ ನರಕಗಳಾಗಿವೆ, ಶಾಲಾ
ಕೊಠಡಿಗೆ ಒಂದು ಭಾಷೆ, ಬಾಹ್ಯ ಪ್ರಪಂಚಕ್ಕೆ
ಮತ್ತೊಂದು ಭಾಷೆ, ಈ ರೀತಿ
ಎರಡು ಭಾಷೆಗಳ ವಾತಾವರಣದಲ್ಲಿ ಬೆಳೆಯುತ್ತಿರುವ ಮಕ್ಕಳು ತೀವ್ರ ಗೊಂದಲಕ್ಕೊಳಗಾಗುತ್ತಾರೆ. ಇಂಗ್ಲೀಷ್ ಕಲಿತರೆ ಒಳ್ಳೆ ಘನತೆ ಗೌರವ ಸಿಗುತ್ತದೆಂದೂ, ಒಳ್ಳೆಯ ಉದ್ಯೋಗ ಸಿಗುತ್ತದೆಂದೋ, ಮಕ್ಕಳು ಬುದ್ದಿವಂತರಾಗುತ್ತಾರೆಂದೊ,.. ವ್ಯವಸ್ಥೆ ಮೂಡಿಸಿರುವ ಭ್ರಮೆಗೆ ಒಳಗಾಗಿ ಇಂದಿನ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಇಂಗ್ಲೀಷ ಶಾಲೆಗಳಿಗೆ
ಸೇರಿಸಲು ಮುನ್ನಗ್ಗುತ್ತಿದ್ದಾರೆ. ಪಾಪ! ಅವರಿಗೆ ಗೊತ್ತಿಲ್ಲವೆಂದು
ಕಾಣುತ್ತದೆ. ಇಂಗ್ಲೀಷ್ ಶಾಲೆಗಳಲ್ಲಿ ಓದಿ ಬಂದ
ಎಷ್ಟು ಮಕ್ಕಳು ಬುದ್ದಿವಂತರಾಗಿದ್ದಾರೆ?, ಎಷ್ಟು ಮಕ್ಕಳು ವಿಚಾರಶೀಲರಾಗಿ , ಅರ್ಥಶಾಸ್ತ್ರಜ್ಞರಾಗಿ, ವಿಜ್ಞಾನಿಗಳಾಗಿ ಈ ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆ? ಮತ್ತು ಕನ್ನಡ
ಶಾಲೆಗಳಿಂದ ಬಂದ ಅದೆಷ್ಟು ಮಂದಿ ಇಂದು ವಿಜ್ಞಾನಿಗಳಾಗಿಯೂ, ಪ್ರಗತಿಶೀಲರಾಗಿಯೂ ಮುಂದೆ ಬಂದಿದ್ದಾರೆಂದು.
ಶಿಕ್ಷಣ ಯಶಸ್ವಿಯಾಗಬೇಕಾದರೆ ಅದರ ಮಾಧ್ಯಮ
ಉಪಧ್ಯಾಯರಿಗೂ ಹಾಗೂ ಮಕ್ಕಳಿಗೂ ಗೊತ್ತಿರಬೇಕು. ಆಗ ಮಾತ್ರ ಇವರಿಬ್ಬರ ನಡುವೆ ಅನನ್ಯ ಸಂಬಂಧ ಬೆಳೆಯುತ್ತದೆ. ಉಪಧ್ಯಾಯರು ಹೇಳುವ ವಿಚಾರ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವುದಷ್ಟೇ ಅಲ್ಲದೇ, ಯಕ್ಷ ಪ್ರಶ್ನೆಗಳನ್ನು ಹಾಕುವ
ಮೂಲಕ ವಿದ್ಯಾರ್ಥಿಗಳು ಸಂತೋಷವನ್ನು ಜ್ಞಾನವನ್ನೂ
ಪಡೆಯುತ್ತಾರೆ. (ಉತ್ಸಾಹ ಭರಿತರಾಗುತ್ತಾರೆ,) ಆಗ ಜ್ಞಾನವು ಸಹ ಹೇರಿಕೆಯಾಗದೆ, ಸಂತೋಷದ ಪ್ರಕ್ರಿಯೆ ಆಗುತ್ತದೆ. ಇಂತಹ ಯಾವುದೇ
ಸಂತೋಷದ ಪ್ರಕ್ರಿಯೆ
ಇಂಗ್ಲೀಷ್
ಶಾಲೆಗಳಲ್ಲಿ ಕಾಣುವುದಿಲ್ಲ. ಬದಲು ಬಲವಂತವಾಗಿ ಹೇರುವ ಪ್ರಕ್ರಿಯೆ ಹೆಚ್ಚಾಗಿದೆ. ಮಾತೃಭಾಷೆಯಲ್ಲಿ ಒಂದು ವರ್ಷದಲ್ಲಿ ಕಲಿಯಬೇಕಾದ ಜ್ಞಾನವನ್ನು, ಇಂಗ್ಲೀಷ್ನಲ್ಲಿ ಪಡೆಯಲು ಐದಾರು
ವರ್ಷಗಳೇ ಬೇಕಾಗುತ್ತದೆ. ಈ ರೀತಿ ಮಕ್ಕಳು ತಮ್ಮ ಬಾಲ್ಯದ ಅತ್ಯಮೂಲ್ಯವಾದ ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಒಂದು ಅಂದಾಜು ಲೆಕ್ಕ ಮಾಡಿದರೆ, ಇಡೀ ದೇಶದಲ್ಲಿನ
ಕೋಟ್ಯಾನುಕೋಟಿ ಮಕ್ಕಳು ತಮ್ಮ ಬಾಲ್ಯದ ಅತ್ಯಮೂಲ್ಯವಾದ ಹಲವಾರು ವರ್ಷಗಳನ್ನು ಕಳೆದುಕೊಳ್ಳುತ್ತಾರೆ. ಆ ಮೂಲಕ ದೇಶದ ಉನ್ನತಿಗೆ ಎಷ್ಟು ನಷ್ಟ ಉಂಟಾಗಬಹುದೆಂದು ಯೋಚಿಸಿದರೆ. ಅಪಾರ
! !
ಉಪಾಧ್ಯಾಯರು ಭೋದಿಸುವ
ವಿಚಾರವು ಅರ್ಥವಾಗದ ಕಾರಣ ಮಕ್ಕಳು ಬೇರೆ ಮಾರ್ಗವಿಲ್ಲದೆ. ಕಂಠಪಾಠ
ಮಾಡುವ ಅಭ್ಯಾಸಕ್ಕೆ ಒಳಗಾಗುತ್ತಾರೆ. ಅದಕ್ಕನುಗುಣವಾಗಿ ಇಂದಿನ ಪಠ್ಯಗಳು, ಪರೀಕ್ಷೆಗಳು ಇವೆ. ಇಂದಿನ ಪರೀಕ್ಷೆಗಳೊ.......! ಜ್ಞಾಪಕ
ಶಕ್ತಿಯನ್ನು ಪರೀಕ್ಷೆ ಮಾಡುವುದೇ ಆಗಿದೆಯೇ ಹೊರತು, ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ
ಸೃಜನಶೀಲತೆಯನ್ನು ತುಂಬುವಂತಹುದಲ್ಲ. ಮಾತೃ
ಭಾಷೆಯಲ್ಲಿ ಆಡಳಿತ, ಶಿಕ್ಷಣ ನೀಡಲಾರದ
ದೇಶವು ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಲು ಸಾಧ್ಯವೇ
ಇಲ್ಲ. ಪರಕೀಯ ಭಾಷೆಯನ್ನು ಆಡಳಿತ ಭಾಷೆಯಾಗಿ ಹಾಗೂ ಶಿಕ್ಷಣ ಮಾಧ್ಯಮವಾಗಿ ಮಂದುವರೆಸಿದರೆ ಅದು
ಜನರಿಂದ ಸರ್ಕಾರವನ್ನು, ಮಕ್ಕಳಿಂದ ತಂದೆ-ತಾಯಂದಿರನ್ನು ಬೇರ್ಪಡಿಸಿದಂತಾಗುತ್ತದೆ.
ಪ್ರತಿ ವರ್ಷವೂ ಇಂಗ್ಲೀಷ್ ಬಲಿಪೀಠಕ್ಕೆ ಲಕ್ಷಾಂತರ ಮಕ್ಕಳ ಕೊರಳೊಡ್ಡಿ ಬಲಿ ತೆಗೆದುಕೊಳ್ಳುತ್ತಿರುವ ಆಳುವ ವರ್ಗಗಳು, ಇಂಗ್ಲೀಷ್ ಶ್ರೇಷ್ಠ
ಹಾಗೂ ಅನಿವಾರ್ಯವೆಂಬ
ಭ್ರಮೆ ಮೂಡಿಸಿವೆ. ವೈಜ್ಞಾನಿಕ ಹಾಗೂ
ಅತ್ಯಾಧುನಿಕ ಶಿಕ್ಷಣವು
ಇಂಗ್ಲೀಷ್ ನಲ್ಲಿ
ಮಾತ್ರ
ಸಾಧ್ಯವೆಂದು ಸುಳ್ಳು
ಹೇಳಲಾಗುತ್ತಿದೆ. ಮಕ್ಕಳ ಶಿಕ್ಷಣದ ಬಗ್ಗೆ ದೂರದೃಷ್ಟಿ, ಪ್ರಾಮಾಣಿಕ ಕಾಳಜಿ
ಇಲ್ಲದ ಅಪ್ಪ-ಅಮ್ಮಂದಿರು ತಮ್ಮ ಮಕ್ಕಳನ್ನು
‘ಮಮ್ಮಿ-ಡ್ಯಾಡಿ’ ಸಂಸ್ಕೃತಿಗೆ ದೂಡಿ
ವಿಕ್ಷಿಪ್ತ ಸಂತೋಷ ಪಡುತ್ತಿದ್ದಾರೆ.
ಸಾಮಾನ್ಯ ಜನರಿಗೆ ಇಂಗ್ಲೀಷ್ ಭಾಷೆ ಗೊತ್ತಿಲ್ಲದಿರುವುದನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿರುವ ಸರಕಾರ
ಹಾಗೂ ಅದರ ಪಾಲಕರು ಮತ್ತು ನೌಕರಶಾಹಿಗಳಿಗೆ ಜನರನ್ನು ಮೋಸ ಮಾಡಿ ಶೋಷಣೆ ಮಾಡವಲ್ಲಿಲ ಇಂಗ್ಲೀಷ ಒಂದು ಅಸ್ತ್ರವಾಗಿ ಉಪಯೋಗವಾಗುತ್ತಿದೆ. ಆದ್ದರಿಂದ
ಇಂಗ್ಲೀಷಿನ ದಬ್ಬಾಳಿಕೆಯನ್ನು, ಆಳುವ ವರ್ಗದವರ ಕುತಂತ್ರವನ್ನು ಶತಾಯ ಗತಾಯ ಕೊನೆಗೊಳಿಸದಿದ್ದಲ್ಲಿ ನಾವು ನಮ್ಮ ಮಕ್ಕಳನ್ನು ಆ ಮೂಲಕ ಈ ನಾಡನ್ನು ಸಾಮ್ರಾಜ್ಯಶಾಹಿಗಳ ಬಲಿಪೀಠಕ್ಕೆ ಬಲಿಪಶುವನ್ನಾಗಿಸಬೇಕಾಗುತ್ತದೆ
ಎನ್ನುವುದು ನಿಸ್ಸಂದೇಹ.
ನಾಡು ನುಡಿಯ ಬಗ್ಗೆ ಪ್ರೀತಿ ಕಳಕಳಿ ಇರುವಂತಹ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ಹೋರಾಟಗಳನ್ನು ರೂಪಿಸುವ ಮೂಲಕವೇ ಮಾತೃಭಾಷಾ ಮಾಧ್ಯಮ ಶಿಕ್ಷಣ ನೀತಿಯ ಜಾರಿಗಾಗಿ ಪ್ರಯತ್ನಿಸಬೇಕಾಗಿದೆ. 1994 ರಲ್ಲಿ ಕರ್ನಾಟಕ ಸರಕಾರವು ಮಾತೃಭಾಷಾ ಶಿಕ್ಷಣ ಮಾಧ್ಯಮ ನೀತಿ ಘೋಷಿಸಿದ್ದನ್ನು 2014ರಲ್ಲಿ ಸುಪ್ರೀಂ ಕೋರ್ಟ ತಿರಸ್ಕರಿಸಿತು. ‘ಶಿಕ್ಷಣ
ಮಾಧ್ಯಮ ಪೋಷಕರ ವಿವೇಚನೆಗೆ ಬಿಟ್ಟಿದ್ದು’ ಎಂಬ ಅವೈಜ್ಞಾನಿಕ ತೀರ್ಪನ್ನು ಕೊಟ್ಟಿತು. ಎಷ್ಟೇ ಆಗಲೀ
ಶಾಸಕಾಂಗ, ಕಾರ್ಯಾಂಗದಂತೆಯೇ ನ್ಯಾಯಾಂಗವೂ ಕೂಡಾ
ಕಾರ್ಪೋರೇಟ್ ಸಂಸ್ಕೃತಿಯ ಪ್ರತಿಪಾದನೆ ಮಾಡುತ್ತಿರುವುದು ಹಲವಾರು ಸಲ ಸಾಬೀತಾಗಿದೆ. ಇವತ್ತಿನವರೆಗೂ ಕೋರ್ಟು ವ್ಯವಹಾರಗಳಲ್ಲಿ ಇಂಗ್ಲೀಷ್ ಭಾಷೆಯೇ ಪ್ರಭುತ್ವ ಹೊಂದಿರುವುದನ್ನು ಗಮನಿಸಬೇಕಾಗಿದೆ. ಭಾರತದ ಮುಂದಿನ ಜನಾಂಗವನ್ನು ಜಾಗತೀಕರಣದ ಭಾಗವಾಗಿ ಸಿದ್ದಗೊಳಿಸುವ ಬದ್ಧತೆಯನ್ನು ಬಂಡವಾಳಶಾಹಿ ಪ್ರಜಾಪ್ರಭುತ್ವದ ಈ ಅಂಗಗಳು ಹೊಂದಿವೆ.
ಹೀಗಾಗಿ ಈ ಪ್ರಾದೇಶಿಕ ಭಾಷಾವಿರೋಧಿ
ಹಾಗೂ ದೇಸಿ ಸಂಸ್ಕೃತಿಯ ವಿರೋಧಿಯಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಬದಲಾಯಿಸಲು ಜನಾಲೋಂದನದಿಂದ ಮಾತ್ರ ಸಾಧ್ಯವಾಗುವಂತಹುದು. ಕನ್ನಡಿಗರು ಜಾಗೃತರಾಗಿ ಮಾತೃಭಾಷೆಯಲ್ಲಿ ಸಮಾನ ಶಿಕ್ಷಣ ಜಾರಿಯಾಗಬೇಕೆಂದು ಪಟ್ಟು ಹಿಡಿದು ಆಳುವ ವರ್ಗಗಳ ಮೇಲೆ ಒತ್ತಡ ತರಬೇಕಿದೆ. ಮಾತೃಭಾಷಾ ಶಿಕ್ಷಣ
ನೀತಿಗೆ ಮಾರಕವಾಗಿರುವ ಸುಪ್ರೀಂ ಕೋರ್ಟಿನ ನಿರ್ಣಯವನ್ನು ಬದಲಾಯಿಸಲು ಸಂಸತ್ತಿನಿಂದ ಮಾತ್ರ ಸಾಧ್ಯ. ಹೀಗಾಗಿ ರಾಜ್ಯ
ಸರಕಾರವನ್ನು ಕನ್ನಡಿಗರು ಎಚ್ಚರಿಸಬೇಕಿದೆ. ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಮೇಲೆ ಅತೀವ ಒತ್ತಡ ಹೇರಬೇಕಿದೆ. ಕನ್ನಡಿಗರ ಭಾಷಾ
ಹೋರಾಟದ ಪರವಾಗಿ ನಿಲ್ಲದಿದ್ದರೆ ಕನ್ನಡಿಗರ ಓಟು ಇಲ್ಲವೆಂದು ರಾಷ್ಟ್ರೀಯ ಪಕ್ಷಗಳಿಗೆ ಬಿಸಿಮುಟ್ಟಿಸಬೇಕಿದೆ. ಬಿಡಿ ಬಿಡಿಯಾದ ದ್ವನಿಗಳು ಹಾಗೂ ಹೋರಾಟಗಳು ಕೇಂದ್ರ ಸರಕಾರವನ್ನು ಮಣಿಸಲು ಸಾಧ್ಯವಿಲ್ಲ. ರಾಜಕೀಯೇತರ ಸಮಸ್ತ ಕನ್ನಡ ಸಂಘಟನೆಗಳು ಒಂದಾಗಿ ರಾಜೀರಹಿತ ಐಕ್ಯ ಹೋರಾಟವನ್ನು ರೂಪಿಸಬೇಕಿದೆ. ಸಮಾನ ಮಾತೃಭಾಷಾ ಮಾಧ್ಯಮ ಶಿಕ್ಷಣ ಜಾರಿಯಾಗುವವರೆಗೂ ಜನಾಂದೋಲನವು ನಿರಂತರವಾಗಬೇಕಿದೆ. ಆಗ ಮಾತ್ರ ಕನ್ನಡ ಭಾಷೆ ಮತ್ತು ಸಂಸ್ಕೃತಿ ಮುಂದಿನ ತಲೆಮಾರಿಗೆ ಉಳಿಯಲು ಸಾಧ್ಯ. ಇಲ್ಲವಾದರೆ ಕನ್ನಡ
ಕನ್ನಡಿಗರ ಮನೆಯಲ್ಲೇ ಅನಾಥವಾಗುವುದರಲ್ಲಿ ಸಂದೇಹವೇ
ಇಲ್ಲ. ಜೈ ಕರ್ನಾಟಕ
ಮಾತೆ ಬರಿ ಮಾತಲ್ಲಿ ಘೋಷಣೆಯಲ್ಲಿ ಮಾತ್ರ ಇರದೇ ಆ ಮಾತೆಯನ್ನು ಸಂರಕ್ಷಿಸುವತ್ತ, ಉಳಿಸಿ ಬೆಳೆಸುವತ್ತ ಸಮಸ್ತ ಕನ್ನಡಿಗರೂ ಪ್ರಯತ್ನಿಸಬೇಕಿದೆ. ಮೂರುಸಾವಿರ ವರ್ಷಗಳಿಂದ ಕನ್ನಡಿಗರನ್ನು ಒಂದು ಗೂಡಿಸಿದ ಭಾಷೆ ಇನ್ನೂ ಸಾವಿರಾರು ವರ್ಷಗಳ ಕಾಲ ಕನ್ನಡ ನಾಡಿನಲ್ಲಿ ನೆಲೆಯಾಗಬೇಕಿದೆ. ರಾಷ್ಟ್ರಕವಿ ಕುವೆಂಪುರವರ ಈ ಕವಿತೆಯಾದರೂ ಕನ್ನಡಿಗರಲ್ಲಿ
ಜಾಗೃತಿ ಮೂಡಿಸಬೇಕಿದೆ.
ಇಂಗಿ ಹೋಗುತ್ತಿದೆ ಇಂಗ್ಲೀಷಿನ ಮರುಭೂಮಿಯಲಿ,
ನಿನ್ನ ಮಕ್ಕಳ ಶಕ್ತಿ-ಬುದ್ಧಿ-ಪ್ರತಿಭೆ
ಕಲ್ಲ ಕುಂಡದಿ ನೆಟ್ಟ ಅಶ್ವತ್ಥ ಸಸಿಯಂತೆ
ಕಿಮುಳ್ಷಿ ಗುಜ್ಜಾಗುತ್ತಿದೆ ಮೊಳೆವ ಚೈತನ್ಯ.
ಕನ್ನಡದ ಕ್ರಿಸ್ತನದೋ, ಇಂಗ್ಲೀಷರ ಶಿಲುಬೆಯಲಿ
ಸಿಲುಕಿ ಬಾಯ್ಬಿಡುತಿಹನು ನೀರಡಿಸಿ ಪ್ರಾಣ
ಇಂಗ್ಲೀಷಿನ ಜೀಲೋಟಿನ್ನಿ ನಡಿ ನಿಮ್ಮ ಕೊರಳೊಡ್ಡಿ
ವರುಷ ವರುಷವು ಕೋಟಿ ಕೊಲೆಯಪ್ಪಿರೇಕೆ ?
ಏಳು ಎಚ್ಚರಗೊಳ್ಳು ಓ ಭಾರತೀಯ ಕಂದ
ನಿನ್ನ ಸ್ವಾತಂತ್ರ ವನ್ನು ನೀನೇ ರಕ್ಷಿಸಿಕೋ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ