ಭಾನುವಾರ, ಡಿಸೆಂಬರ್ 22, 2013

ಕವಿತಾವತಾರ :









(ಕವಿತೆ ಕುರಿತು ಗಂಡ ಹೆಂಡಿರ ಜುಗಲಬಂಧಿ )

ಹೂವೊಳಗಿನ ಚೆಲುವು, ಚೆಲುವೊಳಗಿನ ಒಲವು
ಒಲವೊಳಗಿನ ಸೆಳೆತ ನನ್ನ ಕವಿತಾ.....

ಪೂಸಿ ಮಾತು ಬಿಡ್ರಿ, ತಿಂಗಳ ಸಂತಿ ಎಲ್ರಿ
ಅಡುಗೆ ಏನು ಮಾಡ್ಲಿ, ಯಾರಿಗೆ ಬೇಕ್ರಿ ನಿಮ್ಮ ಕವಿತಾ?
*        *        *

ಹಾಲೊಳಗಿನ ಮೊಸರು, ಮೊಸರೊಳಗಿನ ಬೆಣ್ಣೆ
ಬೆಣ್ಣೆಲಿರುವ ತುಪ್ಪಾ ನನ್ನ ಕವಿತಾ....

ಬೆಣ್ಣೆ ತಾ ಜೊತೆಗೆ ಬ್ರೆಡ್ಡು ತಾ, ಜಾಮ್ ಹಾಕಿ ತಿನ್ನುನಂತಾ-
ಟಿವಿ ಸಿನೆಮಾ ನೋಡ್ತಾ, ಯಾರಿಗೆ ಬೇಕ್ರಿ ನಿಮ್ಮ ಕವಿತಾ?
*        *        *

ಮನಸೊಳಗಿನ ಕನಸು, ಕನಸೊಳಗಿನ ಸೊಗಸು
ಸೊಗಸೊಳಗಿನ ಸವಿನೆನಪು  ನನ್ನ ಕವಿತಾ....

ನೈಟಿ ತಾ, ರೇಷ್ಮೇ ಸೀರೆ ತಾ, ಮಿಡ್ಡಿ ಬೇಡಾ ಚೂಡಿದಾರ ತಾ
ತರೂದಿದ್ರ ಹಬ್ಬಕ್ಕೆರಡು ಡ್ರೆಸ್ಸು ತಾ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಸುರೆಯೊಳಗಿನ ನಶೆ, ನಶೆಯೊಳಗಿನ ಉಷೆ
ಉಷೆಯೊಳಗಿನ  ಬೆಳಕು ನನ್ನ ಕವಿತಾ....

ಮಿರಿಮಿರಿ ಮಿಂಚುವ ಓಲೆ ತಾ, ಚಿನ್ನದ ಮಾಲೆ ತಾ
ಬಳೆ ತಾ, ಸೊಂಟಕ್ಕ ಡಾಬು ತಾ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ನೀರೊಳಗಿನ ಮೀನು, ಮೀನೊಳಗಿನ ಚಲನೆ
ಚಲನೆಯೊಳಗಿನ ಜೀವ ನನ್ನ ಕವಿತಾ.....

ಹಾಂ! ಮೀನು ತಾ, ಚಿಕನ್ ಟಿಕ್ಕಾ ಮಟನ್ ಕರಿ ತಾ
ಡೊನ್ನೆ ಬಿರಿಯಾನಿ ತಾ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಸ್ಥಾವರವಿಲ್ಲದ ಜಂಗಮ, ಜಂಗಮನೊಳಗಿನ ಸಂಗಮ
ಸಂಗಮನೊಳಗಿನ ಬಸವ ನನ್ನ ಕವಿತಾ.

ಲೇಔಟ್ ಬೇಡಾ ಸೈಟು ತಾ, ಅರಮನೆ ಬೇಡಾ ಸ್ವಂತ ಮನೆ ತಾ
ರಾಜಾರಾಣಿ ತರಾ ಇರೂನಂತಾ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಒಲುವೆಯ ಹೆಣ್ಣು, ಪ್ರೀತಿಸುವ ಗಂಡು
ಗಂಡು ಹೆಣ್ಣಿನ ಸರಸ ಸಲ್ಲಾಪ ನನ್ನ ಕವಿತಾ....

ವಾಶಿಂಗ್ ಮಶಿನ್, ಮಿಕ್ಸಿ ಗ್ರೈಂಡರ್ ಕೇಳಾಂಗಿಲ್ಲ
ಆ ಕೆಲಸಕ್ಕೆ ನೀವೆ ಇದ್ದೀರಲ್ಲಾ ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಉದರದೊಳಗಿನ ಹಸಿವು, ಹಸಿವಿನೊಳಗಿನ ರೋಷ
ರೋಷದೊಳಗಿನ  ಆವೇಶ ನನ್ನ ಕವಿತಾ.

ಸಿಟ್ಟು ಸೆಡವು ಪಕ್ಕಕ್ಕಿಡಿ, ಸಂಬಳಾ ಬಂತಾ ಮೊದಲು ಹೇಳಿ
ಬದುಕೋದು ಮುಖ್ಯ ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಭೂಮಿಗೆ ಬಿದ್ದ ಬೀಜ, ಬೀಜದೊಳಗಿನ ಮರ
ಮರದೊಳಗಿನ ಫಲ ನನ್ನ ಕವಿತಾ....

ಬೀಜಾ ಬಿತ್ತಿ, ಹೊಲಾ ಉತ್ತಿ ಬೆಳಿ ಬೆಳೆದು ಮನಿಗೆ ತನ್ರಿ
ಸಂಸಾರ ಸಾಗಿಸೋಣಂತ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಎದೆಗೆ ಬಿದ್ದ  ಅಕ್ಷರ,  ಅಕ್ಷರದೊಳಗಿನ ಸಾಕ್ಷರ
ಸಾಕ್ಷರತೆಯ ಸಾಕ್ಷಾತ್ಕಾರ ನನ್ನ ಕವಿತಾ...

ಮಗನಿಗೆ ಕಾನ್ಮೆಂಟು, ಮಗಳಿಗೆ ನರ್ಸರಿಗೆ ಸೇರಿಸಬೇಕು
ಡೋನೇಶನ್ ಹೊಂದಿಸ್ಕೊಳ್ರಿ ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಕತ್ತಲೊಳಗಿನ ಬೆತ್ತಲು, ಬೆತ್ತಲೊಳಗಿನ ಬಯಲು
ಬಯಲೊಳಗಿನ ಶೂನ್ಯ ನನ್ನ ಕವಿತಾ....

ಬೆಣ್ಣೆ ಹಚ್ಚಿ ತಿನ್ನಾಕಾಗೊಲ್ಲಾ, ಚಿನ್ನ ಹಾಕಿ ಮೆರೆಯೋಕಾಗೊಲ್ಲ
ಉಂಡುಟ್ಟು ಸುಖವಾಗಿರೋಕಾಗೊಲ್ಲ, ಯಾರಿಗೆ ಬೇಕರಿ ನಿಮ್ಮ ಕವಿತಾ?
*        *        *

ಯೋಗಿಯ ದ್ಯಾನ, ದ್ಯಾನದೊಳಗಿನ ಜ್ಞಾನ
ಜ್ಞಾನದೊಳಗಿನ  ಅರಿವು ನನ್ನ ಕವಿತಾ.....

ಧ್ಯಾನಾ ಮಾಡ್ತಾ ಕೂತ್ಕೊಂಡು ಬಿಡಿ, ಹೊಟ್ಟೆಗೆ ತಣ್ಣೀರ ಬಟ್ಟೆ ಕಟ್ಕೊಂಡ್ ಬಿಡಿ
ಇಗೋ ಹೊರಟೆ ತವರಿಗೆ ತಬ್ಕೊಂಡ್ ಮಲಕೊಳ್ರಿ ನಿಮ್ಮ ಕವಿತಾ...
*        *        *

ನೀನಿಲ್ಲದೆ ಇರಲಾರೆ, ಇದ್ದರೂ ನೆಮ್ಮದಿಯಾಗಿ ಬದುಕಲಾರೆ 
ಬದುಕಿದರೂ ವಿರಹ ತಾಳಲಾರೆ, ಹೋಗದಿರು ಬಾ ಬಾರೆ ನನ್ನ ಕವಿತಾ.....

 

                                                   -ಶಶಿಕಾಂತ ಯಡಹಳ್ಳಿ







ಶನಿವಾರ, ಡಿಸೆಂಬರ್ 21, 2013

ಸಾಕ್ಷಾತ್ಕಾರ :















ನಂಬಿದವರು ನನಗೆ ಮೋಸ ಮಾಡಿದ
ತಾಪ  ಅಷ್ಟೇನೂ ದೊಡ್ಡದಲ್ಲ.
ಸಂಬಂಧವೊಂದು ಕಳಚಿಬಿದ್ದ
ಪರಿತಾಪ ಸಹಿಸಲಾಗುತ್ತಿಲ್ಲ.

ಮನೋರಂಗದಲ್ಲಿ ನೆನಪುಗಳ
ಹಾವಳಿ ಹೊಸದೇನಲ್ಲ.
ಅಯೋಗ್ಯರ ಸಂಗ ಮಾಡಿದ
ಪಶ್ಚಾತ್ತಾಪ  ಕಾಡುತ್ತಿದೆಯಲ್ಲಾ.

ಮಾಡಿದ ನೂರೆಂಟು ಉಪಕಾರಗಳ ಬಿಟ್ಟು
ತಪ್ಪೊಂದೇ ದೊಡ್ಡದಾಯ್ತಲ್ಲಾ.
ಎಷ್ಟೇ ಮಾಡಿದರೂ ಅಷ್ಟೇ ಅನ್ನುವ
ಸತ್ಯ ಸಾಕ್ಷಾತ್ಕಾರವಾಯ್ತಲ್ಲ.



ಹೆಣ್ಣಿನ ಆಕ್ರಂದನ :











ನನಗೆ ತಿಳಿಯುತ್ತಿಲ್ಲ ನಾನ್ಯಾಕಾದರೂ ಹೆಣ್ಣಾದೆ
ಅಪ್ಪ ಗೆಳೆಯ ಗಂಡ ಮಗ ಎಲ್ಲರ ದಬ್ಬಾಳಿಕೆಯಲ್ಲಿ ಹಣ್ಣಾದೆ.
ಅಂಡದಿಂದ ಪಿಂಡಬಿಡುವವರೆಗೂ ಪುರುಷಲೋಕಕ್ಕೆ ಹೊರೆಯಾದೆ
ಎಂದೂ ಎಲ್ಲೂ ನನ್ನ ಅಸ್ತಿತ್ವ ಉಳಿಸಿಕೊಳ್ಳಲಾಗದೇ ಮರೆಯಾದೆ.

ತುಂಡುಡುಗೆ ತೊಟ್ಟರೆ ಬಲಾತ್ಕಾರಕ್ಕೆ ಪ್ರಚೋದನೆಯಂತೆ
ಮೈತುಂಬಾ ಮುಚ್ಚಿಕೊಂಡರೆ ಕುತೂಹಲಕ್ಕೆ ಅತ್ಯಾಚಾರವಂತೆ
ಹೊರಗೆ ಹೊರಟರೆ ಸಹಸ್ರ ಕಣ್ಣುಗಳ ವಿಚಿತ್ರ ನೋಟ.
ದೇಹದ ಉಬ್ಬು ತಗ್ಗುಗಳ ಮೋಜಣಿ ಮಾಡುವ ಕಾಮುಕರಾಟ.

ಹೆಣ್ಣು ಮನೆಯ ಕಣ್ಣೆಂದು ಕರೆದು ಕಪ್ಪು ಕನ್ನಡಕ ಹಾಕಿದರು
ಮನೆಬೆಳಗುವ ಬೆಳಕೆಂದರು, ಸುತ್ತಲೂ ಬೇಲಿ ಸುತ್ತಿದರು
ಹೆಣ್ಣು ದೇವತೆಯೆಂದರು ಗೋಡೆಗಳ ಕಟ್ಟಿ ಕಾವಲಿಗೆ ನಿಂತರು
ಹೀಗೇಕೆ ಎಂದು ಪ್ರಶ್ನಿಸಿದರೆ ನಾರಿಯಲ್ಲಾ ಮಾರಿ ಎಂದು ಹೀಗಳೆದರು.

ಹೆಣ್ಣು ಬಿಟ್ಟಿರಲಾರದ, ಕಟ್ಟಿಕೊಂಡು ಸಮಾನವಾಗಿ ನೋಡಿಕೊಳ್ಳಲಾಗದ-
ಗಂಡಸರು, ಹೆಣ್ಣೆಂದರೆ ಬಿಟ್ಟಿ ಬಿದ್ದವಳೆಂದ್ಯಾಕೆ ತಿಳೀತಾರೆ?
ಹೆಣ್ಣೆಂದರೆ ಬರೀ ದೇಹ, ತೀರಿದರಾಯಿತು ದಾಹ, ಅವಳಿಗೆ ಮನಸ್ಸಿದೆ-
ಮನುಷ್ಯ ಸೃಷ್ಟಿಯ ಮೂಲ ಹೆಣ್ಣೆಂಬುದನ್ಯಾಕೆ ಮರೀತಾರೆ?

ನನಗೆ ತಿಳಿಯುತ್ತಿಲ್ಲ ನಾನ್ಯಾಕಾದರೂ ಹೆಣ್ಣಾದೆ..
ಪುರುಷ ಪ್ರಪಂಚದ ದಬ್ಬಾಳಿಕೆಯಲ್ಲಿ ಹಣ್ಣಾದೆ....


ಶೋಷಕರ ನುಡಿಸಿರಿಗೆ ಪರ್ಯಾಯ, ಪ್ರಜ್ಞಾವಂತರ 'ಜನನುಡಿ" :




"ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್-2013" ಎನ್ನುವ ಸಾಹಿತ್ಯ ಮತ್ತು ಸಂಸ್ಕೃತಿ ಹೆಸರಿನಲ್ಲಿ ವೈಭವೀಕರಣದ ಜಾತ್ರೆಯೊಂದು 20 ಕೋಟಿ ವೆಚ್ಚದಲ್ಲೂ ಅದ್ದೂರಿಯಾಗಿ ಮೂಡಬಿದಿರೆಯಲ್ಲಿ ಡಿಸೆಂಬರ್ 19 ರಿಂದ 22ರ ವರೆಗಿನ ನಾಲ್ಕು ದಿನಗಳ ಕಾಲ ನಡೆಯುತ್ತಿದೆ. ಆಳ್ವಾ ಎಜುಕೇಶನ್ ಪೌಂಡೇಶನ್ನಿನ ಡಾ.ಎಂ.ಮೋಹನ್ ಆಳ್ವಾರವರ ವಿಧ್ಯೆ ವ್ಯಾಪಾರದ ಕುರುಡು ಕಾಂಚಾನದ ವಿರಾಟ ಪ್ರದರ್ಶನ ಮೂಡುಬಿದಿರೆಯಲ್ಲಿ ಕುಣಿಯುತ್ತಿದೆ. ಏನೂ ತಿಳಿಯದ ಜನತೆ ಬೆಕ್ಕಸ ಬೆರಗಾಗಿ ನೋಡುತ್ತಿದ್ದಾರೆ. ವಿರಾಸತ್ ನ ಹಿಂದಿರುವ ವ್ಯಾಪಾರಿ ಮರ್ಮ  ಅರಿತವರು ಸಕಾರಣವಾಗಿ ವಿರೋಧಿಸುತ್ತಿದ್ದಾರೆ.

ಇದು ನಿಜವಾದ ಜನಪರವಾದ ಸಾಹಿತ್ಯ-ಸಂಸ್ಕೃತಿಯ  ಉತ್ಸವವಾಗಿದ್ದರೆ ಸ್ವಾಗತಿಸಬಹುದಾಗಿತ್ತು. ಆದರೆ ಯಾವಾಗ ಜನರ ನಾಡಿಮಿಡಿತವಾದ ಸಾಹಿತ್ಯ-ಸಂಸ್ಕೃತಿಗಳನ್ನು ತಮ್ಮ ಯಜಮಾನಿಕೆಯ ವಿಜ್ರಂಭನೆಗಾಗಿ ಶಿಕ್ಷಣ ಮಾರಾಟದ ಧನಿಗಳು ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸಿದರೋ ಆಗ ಪ್ರಗತಿಪರರು ಪ್ರತಿಭಟಿಸತೊಡಗಿದರು.

ಈ ನುಡಿಸಿರಿ ವಿರಾಸತ್ ಎನ್ನುವ ದಶಮಾನೋತ್ಸವವನ್ನು ಉದ್ಘಾಟಿಸಿದ್ದು ರಾಜ್ಯದ (ಕು)ಪ್ರಸಿದ್ಧ ಧರ್ಮ ರಾಜಕಾರಣಿ ಡಾ.ವಿರೇಂದ್ರ ಹೆಗ್ಗಡೆ.  ದಕ್ಷಿಣ ಕನ್ನಡದ  ಈ ಅನಧೀಕೃತ  ಅನಭಿಶಕ್ತ ಧರ್ಮದೊರೆ ಹೆಗ್ಗಡೆ ತಮ್ಮ ಆಶೀರ್ವಚನದಲ್ಲಿ ಹೇಳಿದ್ದೇನೆಂದರೆ "ಧರ್ಮವನ್ನು ಸಂಸ್ಕೃತಿಯಲ್ಲಿ ಬೆರೆಸಬಾರದು...." ಎಂದು. ಆದರೆ ಇದೇ ಹೆಗ್ಗಡೆಗಳು ತಮ್ಮ ಧರ್ಮಪ್ರಚಾರಕ್ಕೆ ಯಕ್ಷಗಾನದಂತಹ ಜಾನಪದ ಪ್ರದರ್ಶನ ಕಲೆಯನ್ನು ಹಾಗೂ ಇನ್ನಿತರ ಸಾಂಸ್ಕೃತಿಕ ಆಯಾಮಗಳನ್ನು ನಿರಂತರವಾಗಿ ಬಳಸಿಕೊಂಡೇ ಜನರಲ್ಲಿ ಇಲ್ಲದ ಭಯ ಮತ್ತು ಭ್ರಮೆಗಳನ್ನು ಹುಟ್ಟಿಸಿ ತಮ್ಮ ಪಾಳೆಗಾರಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಲೇ ಬಂದಿರುವುದು.

ಈ ಆಳ್ವರಂತಹ ಶಿಕ್ಷಣ ಕ್ಷೇತ್ರದ ಪಾಳೇಗಾರರ, ಹೆಗ್ಗಡೆಯಂತಹ ಧಾರ್ಮಿಕ ಕ್ಷೇತ್ರದ ಯಜಮಾನರುಗಳ ಸ್ವಯಂ ವೈಭವೀಕರಣದ  ಅದ್ದೂರಿ ಸಮಾವೇಶಗಳಿಗೆ ಮಾರುಹೋಗುವ ಜನಸಾಮಾನ್ಯರಂತೆಯೇ, ಅಲ್ಲಿ ಸಿಗುವ ಸನ್ಮಾನ-ಕಾಣಿಕೆಗಳಿಗೆ  ಹಲವು ಸಾಹಿತಿಗಳು, ಕೆಲವು ಪ್ರಗತಿಪರರು ಹಾಗೂ ಬಂಡಾಯಗಾರರೂ ಮಾರುಹೋಗಿದ್ದು ಸೋಜಿಗ. ಪ್ರಮುಖವಾಗಿ ಈ ಸಲ ಬರಗೂರು ರಾಮಚಂದ್ರಪ್ಪನವರ ಬಂಡಾಯದ ಮುಖವಾಡ ಕಳಚಿಬಿದ್ದಿದೆ. ನುಡಿಸಿರಿಯ ಯಜಮಾನರುಗಳ ಸನ್ಮಾನ ಸುಖವರಸಿ ಮೂಡಬಿದಿರೆಗೆ ಹೋದ ಬರಗೂರು ವಿರಾಸತ್ ಉದ್ಘಾಟನೆಯ ದಿನ ಧರ್ಮರಾಜಕಾರಣಿಗಳಿಂದ, ಬಂಡವಾಳವಾದಿಗಳಿಂದ  ಅದ್ದೂರಿ ಸನ್ಮಾನ ಹೊಂದಿ, ಹಾರ ಶಾಲು ಹಾಲು ಹಣ್ಣುಗಳನ್ನು ಆನಂದದಿಂದ ಸ್ವೀಕರಿಸಿ, ನೆನಪಿನ ಕಾಣಿಕೆಗಳನ್ನು ಮಡಿಲಲ್ಲಿರಿಸಿಕೊಂಡು ಆನಂದತುಲಿತರಾದರು. ಇದನ್ನು ನೋಡಿದ ಕೆಲವು ಪ್ರಗತಿಪರರು "ಬರಗೂರು ಬಂಡಾಯ ಸಂಘಟನೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದರು" ಎಂದು ಲೇವಡಿ ಮಾಡಿದರು. 
  
ಆದರೆ ಯಾವಾಗ ಮಂಗಳೂರಿನ ಪತ್ರಿಕೆಗಳು ಬರಗೂರರ ಸನ್ಮಾನವನ್ನು  ಖಂಡಿಸಿ ಬರೆದವೋ, ಯಾವಾಗ ಬರಗೂರು ಬಂಡಾಯ ಸಾಹಿತ್ಯಕ್ಕೆ  ಎಳ್ಳು ನೀರು ಬಿಟ್ಟು ಸಮಾಧಿ ಮಾಡಿದರೆಂದು ಪ್ರಗತಿಪರರೇ ಛೇಡಿಸಿದರೋ, ಯಾವಾಗ ಕೆಲವು ಜನಪರ ಯುವಕರು ಬರಗೂರರಿಗೆ ಮೊಬೈಲ್ ಸಂದೇಶ ಕಳುಹಿಸುವ ಅಭಿಯಾನ ಶುರುಮಾಡಿದರೋ ಆಗ ಬೆಂಕಿ ಬರಗೂರು ಕಕ್ಕಾಬಿಕ್ಕಿಯಾದರು. ಈ ಸಾರ್ವತ್ರಿಕ ಖಂಡನೆಯ ವಿಚಾರ ತಿಳಿಯುತ್ತಿದ್ದಂತೆ ಮರುದಿನ ತಮ್ಮ ಪ್ರಬಂಧ ಮಂಡನೆಯ ವಿಚಾರವನ್ನು ಬದಿಗಿಟ್ಟು ಮೂಡಬಿದಿರೆಯಿಂದ ಜಾಗ ಖಾಲಿ ಮಾಡಿದರು.  ಇದ್ದಕ್ಕಿದ್ದಂತೆ ತಮ್ಮ ಮಾತಿನ  ಒರಸೆ ಬದಲಾಯಿಸಿದರು. "ಆಳ್ವಾಸ್ ವಿಶ್ವ ನುಡಿಸಿರಿಯಲ್ಲಿ ಕೋಟಿಗಟ್ಟಲೆ ಸಂಪತ್ತಿನ ವೈಭವೀಕರಣ ನನ್ನ ಮನಸ್ಸಿಗೆ ತೀರಾ ಕಿರಿಕಿರಿಯನ್ನುಂಟು ಮಾಡಿದೆ. ಸಂಪತ್ತಿನ ವಿಜ್ರಂಭನೆಯಿಂದ ವಿವೇಕ ನಾಶವಾಗಿ ವಿಕಾರತೆಯೇ ಮುನ್ನಲೆಗೆ ಬರುತ್ತದೆ. ಆದ್ದರಿಂದ ಉಪನ್ಯಾಸ ಕಾರ್ಯಕ್ರಮದಲ್ಲಿ  ನಾನು ಭಾಗವಹಿಸುವುದಿಲ್ಲ" ಎಂದು ಅವಲತ್ತುಕೊಂಡ ಬರಗೂರು "ಈ ಬಾರಿ ಸಾಹಿತ್ಯದ ಮೂಲ ಶಯಕ್ಕೆ ದಕ್ಕೆ ಬಂದಿದೆ, ಈ ವರ್ಷದ ಕಾರ್ಯಕ್ರಮದಲ್ಲಿ ಜನಪರ ವಿಚಾರಗಳಿಗೆ ಅವಕಾಶವಿಲ್ಲ, ಆದ್ದರಿಂದ ನಾನು ಮೂಡಬಿದಿರೆ ತ್ಯಜಿಸುತ್ತಿದ್ದೇನೆ" ಎಂದು ಯಥಾಪ್ರಕಾರ ವೈಚಾರಿಕ ನೆಲೆಗಟ್ಟಿನಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಂಡರು.

ಸಂಪತ್ತಿನ ವಿಜ್ರಂಭನೆ, ವಿಕಾರತೆಯ ಸಂಚಲನವಾಗುತ್ತದೆಂದು ಮೊದಲೇ ಬರಗೂರರಿಗೆ ತಿಳಿದಿರಲಿಲ್ಲವೇ?, ಸನ್ಮಾನಿಸುವವರು ಕ್ಯಾಪಿಟೇಶನ್ ಕುಳಗಳು, ಶಿಕ್ಷಣ ವ್ಯಾಪಾರದ ಧನಿಗಳು, ಧರ್ಮರಾಜಕಾರಣದ ಧುರೀಣರು ಎನ್ನುವುದು ಆಹ್ವಾನಪತ್ರಿಕೆಯಲ್ಲಿರುವುದರ  ಅರಿವೂ ಬರಗೂರರಿಗೆ ಇರಲಿಲ್ಲವೆ? ಇದೇನು ಆಳ್ವಾರರ ಮೊದಲ ಸಮಾವೇಶವೇನಲ್ಲವಲ್ಲಾ, ಕಳೆದ ಹತ್ತು ಸಮಾವೇಶಗಳೂ ಹೀಗೇ ಅದ್ದೂರಿಯಾಗೇ ನಡೆದಿವೆಯಲ್ಲಾ, ಇದೂ ಸಹ ಬರಗೂರರಿಗೆ ಗೊತ್ತಿರಲಿಲ್ಲವೆ?.... ಎಲ್ಲಾ ಗೊತ್ತಿತ್ತು ಆದರೆ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದು  ವಿವೇಕ ಕೈಕೊಟ್ಟಿತ್ತು. ಹೀಗಾಗಿ ಬೆಂಕಿ ಬರಗೂರು ಸನ್ಮಾನದ ತಂಗಾಳಿಯಲ್ಲಿ ತಣ್ಣಗಾದರು. ಪ್ರಗತಿಪರರ ಕಣ್ಣಲ್ಲಿ ಬೆತ್ತಲಾದರು. ತಾವೇ ನಂಬಿದ್ದ ಹಾಗೂ ಹಲವರನ್ನು ನಂಬಿಸಿದ್ದ ಬಂಡಾಯ ಮನೋಧರ್ಮಕ್ಕೆ ತಿಲಾಂಜಲಿಯನ್ನಿತ್ತರು.

ಶೋಷಕರ ಜೊತೆಗೆ ಬರಗೂರರ ಈ ರಾಜಿ ಮನೋಭಾವವನ್ನು ವಿರೋಧಿಸಿದ ಕೆಲವು ಪ್ರಜ್ಞಾವಂತ ಯುವಕರು ಸತತವಾಗಿ ಮೊಬೈಲ್ ಸಂದೇಶಗಳನ್ನು ಕಳುಹಿಸಿತೊಡಗಿದಾಗ, ಅದಕ್ಕೆ ಪ್ರತಿಯಾಗಿ ಬರಗೂರರು ಎಸ್ ಎಂ ಎಸ್ ಮೂಲಕ  ಈ ಪ್ರತಿಕ್ರಿಯಿಸಿದ್ದು ಹೀಗೆ "ನಾನು ಆಳ್ವಾಸ್ ನುಡಿಸಿರಿ ಸಮ್ಮೇಳನದ ಮೊದಲ ಅಧ್ಯಕ್ಷನಾದಾಗಿನಿಂದ   ಒಬ್ಬರೇ ಒಬ್ಬ ಪ್ರಗತಿಪರರು ಆಕ್ಷೇಪ ವ್ಯಕ್ತಪಡಿಸಲಿಲ್ಲ.  ಈ ಸಾರಿ ಹೋಗಬೇಡಿ ಎಂದು ಯಾರೊಬ್ಬರೂ ನನಗೆ ಹೇಳಲಿಲ್ಲ. ನುಡಿಸಿರಿಯ ವಿರೋಧದ ಕುರಿತು ಯಾರೂ ಮಾಹಿತಿ ನೀಡಿರಲಿಲ್ಲ. ನನಗೆ ಮನವರಿಕೆ ಮಾಡಿದ್ದರೆ ಖಂಡಿತಾ ಹೋಗುತ್ತಿರಲಿಲ್ಲ. ಹಾಗಂತ ನನ್ನ ವಿಚಾರಗಳನ್ನು ಬಿಟ್ಟು ಕೊಟ್ಟಿಲ್ಲ. ಮುಂದೆಯೂ ಇದೇ ಬದ್ಧತೆ ಇರುತ್ತದೆ. ನಿಮ್ಮ ಮನಸ್ಸಿಗೆ ಬೇಸರವಾಗಿದ್ದರೆ ತೀವ್ರವಾಗಿ ವಿಷಾದಿಸುತ್ತೇನೆ". ಇದರರ್ಥ ಇಷ್ಟೇ. ಬೇರೆಯವರು ಹೇಳದಿದ್ದರೆ ಬರಗೂರರಿಗೆ ತಿಳಿಯುವುದಿಲ್ಲ. ಸಾಧಕ ಬಾಧಕಗಳ ಕುರಿತು ಸ್ವಂತ  ಆಲೋಚನಗಳು ಇಲ್ಲವೇ ಇಲ್ಲ  ಎನ್ನುವುದು ಅವರ  ಈ ಸಮಜಾಯಸಿಯಿಂದ  ಸ್ವಷ್ಟವಾಗಿ ಅರ್ಥವಾಗುತ್ತದೆ.

ಬರಗೂರರ ರೀತಿಯಲ್ಲಿ ಜ್ಞಾನೋದಯವಾಗಿ  ವಿರಾಸತ್ ಸಮ್ಮೇಳನದಿಂದ ದೂರವುಳಿದ ಕೆಲವು ವಿಚಾರವಂತರು, ಸಾಹಿತಿಗಳೂ ಇದ್ದಾರೆ. ಲೇಖಕಿ ಷರೀಫಾ, ಅರುಣ ಜೋದ ಕೂಡ್ಲಗಿ, ಡಾ.ಕಲಬುರ್ಗಿ, ರಂಗಾಯಣದ ನಿರ್ದೇಶಕ ಡಾ.ಜನ್ನಿ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ, ಸುಧಾಕರ್ ಚತುರ್ವೇದಿ ಮುಂತಾದವರು ಹಿಂದೆ ಸರಿದಿದ್ದಾರೆ. ರವಿ ಬೆಳಗೆರೆ ಕೂಡಾ ನಾಪತ್ತೆಯಾಗಿದ್ದಾರೆ. ಈ ಧರ್ಮರಾಜಕಾರಣಿಗಳ ಹಾಗೂ ಶಿಕ್ಷಣ ಮಾರಾಟಗಾರರ  ವಿರಾಟ ರೂಪವನ್ನು ಪ್ರತಿಭಟಿಸಿ ದೂರವಾದವರು ಇನ್ನೂ ಹಲವರಿದ್ದಾರೆ. ಆದರೆ ಸೋಜಿಗದ ವಿಷಯವೆಂದರೆ, ಆಹ್ವಾನವನ್ನು ಒಪ್ಪಿಕೊಳ್ಳುವಾಗ  ಇವರಿಗೆ ಆಯೋಜಕರ ಹಿನ್ನಲೆಯ ಅರಿವಿರಲಿಲ್ಲವೇ? ಆಹ್ವಾನ ಪತ್ರಿಕೆಗಳಲ್ಲಿ ಹೆಸರು ಮುದ್ರಿಸಿ ಹಂಚಿದಾಗ  ಇವರ ವಿರೋಧ ಯಾಕಿರಲಿಲ್ಲ? ಯಾವಾಗ ಕೆಲವು ಪ್ರಗತಿಪರ ವಲಯಗಳಿಂದ ಪ್ರತಿರೋಧ ವ್ಯಕ್ತವಾಯಿತೋ ಆಗ ಇವರೆಲ್ಲಾ ಎಚ್ಚೆತ್ತುಕೊಳ್ಳಬೇಕಾಯಿತ್ತಾ? ಇವರನ್ನು ಎಚ್ಚರಿಸಲು 'ಜನನುಡಿ' ಎನ್ನುವ ಪರ್ಯಾಯ ಕಾರ್ಯಕ್ರಮವೇ ಬೇಕಾಗಿತ್ತಾ? 



ಹೌದು! "ಅಭಿಮತ"  ಎನ್ನುವ ಜನಪರ ಸಂಘಟನೆ ಮಂಗಳೂರಿನಲ್ಲಿ ಡಿಸೆಂಬರ್ 14 ಮತ್ತು 15 ರಂದು ಆಳ್ವಾಸ್ ನುಡಿಸಿರಿ ವಿರಾಸತ್ ಗೆ ಪ್ರತಿರೋಧವಾಗಿ  "ನುಡಿಯು ಸಿರಿಯಲ್ಲ ಬದುಕು" ಎನ್ನುವ ಘೋಷವಾಕ್ಯದೊಂದಿಗೆ "ಜನನುಡಿ" ಎನ್ನುವು ವೈಚಾರಿಕ ಸಾಹಿತ್ಯಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ ಈ ಧರ್ಮರಾಜಕಾರಣಿಗಳಿಗೆ ಹಾಗೂ ಶಿಕ್ಷಣದ ವ್ಯಾಪಾರಸ್ತ ಬಂಡವಾಳವಾದಿಗಳಿಗೆ ಮರ್ಮಾಘಾತವನ್ನು ನೀಡಿತು.

ಜನ ಶೋಷಣೆಯಿಂದ ಬಂದ ಹಣಬಲ, ಹಾಗೂ ಅದೇ ಹಣಬಲದಿಂದ  ನಡೆದ ಸಮ್ಮೇಳನದಿಂದ ಆಕರ್ಷಿತರಾದ ಜನಬಲದಿಂದ 'ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್'' ಯಶಸ್ವಿಯಾದರೆ, ಅದಕ್ಕೆ ಪರ್ಯಾಯವಾಗಿ ಪ್ರಗತಿಪರರು ಆಯೋಜಿಸಿದ 'ಜನನುಡಿ' ಸಮಾವೇಶ ಪ್ರಖರ ವೈಚಾರಿಕ ಬಲದಿಂದ ಹಾಗೂ ಜನಪರ ನಿಲುವಿನಿಂದ ಸಫಲವಾಯಿತು. ಕೇವಲ ಹಣಬಲದಿಂದ ಹಾಗೂ ಸನ್ಮಾನ -ಕಾಣಿಕೆಗಳ ಭ್ರಮೆಯಿಂದ  ಎಲ್ಲರನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ಬರಗೂರು ಅಲ್ಲಾ ಎನ್ನುವ ಸಕಾರಾತ್ಮಕ ಸಂದೇಶವನ್ನು "ಜನನುಡಿ" ಸಮಾವೇಶ ಸಾಬೀತುಪಡಿಸಿತು. ಜೊತೆಗೆ  ಈ ಶೋಷಕರ  ಒಳ ಹುನ್ನಾರಗಳ ಮರ್ಮಗಳನ್ನರಿಯದೇ ಅವರ ಸಾಂಸ್ಕೃತಿಕ ಮುಖವಾಡಕ್ಕೆ ಮರುಳಾಗಿ ನುಡಿಸಿರಿಯಲ್ಲಿ ಭಾಗವಹಿಸಲು ಒಪ್ಪಿಕೊಂಡ ಕೆಲವಾರು ಪ್ರಗತಿಪರರಿಗೆ ನಿಜವನ್ನು ತೋರಿಸಿಕೊಡುವಲ್ಲಿ "ಜನನುಡಿ" ಯಶಸ್ವಿಯಾಯಿತು. 



ಈ ಸೊಕ್ಕಿದ ಶೋಷಕರ ಸಾಂಸ್ಕೃತಿಕ ಜಾತ್ರೆ ನುಡಿಸಿರಿಗೆ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದು 'ಸಮುದಾಯ' ಸಂಘಟನೆ. ಡಿಸೆಂಬರ್ 21 ರಂದು ಡಾ.ಗಿರೀಶ್ ಕಾರ್ನಾಡರ "ತುಘಲಕ್" ನಾಟಕವನ್ನು ಸಮುದಾಯ ಆಳ್ವಾರ ನುಡಿಸಿರಿಯಲ್ಲಿ ಪ್ರದರ್ಶಿಸಬೇಕಿತ್ತು. ಯಾವಾಗ ರಾಜ್ಯಾದ್ಯಂತ ಪ್ರಗತಿಪರ ವಿಚಾರವಂತರು ವಿರಾಸತಗೆ ವಿರೋಧ ವ್ಯಕ್ತಪಡಿಸಿದರೋ ಆಗ 'ಸಮುದಾಯ' ತಮ್ಮ ನಾಟಕ ಪ್ರದರ್ಶನವನ್ನೇ ರದ್ದುಗೊಳಿಸಿ ತನ್ನ ಸಾಮಾಜಿಕ ಬದ್ಧತೆಯನ್ನು ಮೆರೆಯಿತು. ಅಷ್ಟೇ ಅಲ್ಲ,  ಅದೇ ದಿನ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ 'ತುಘಲಕ್' ನಾಟಕವನ್ನು ಪ್ರದರ್ಶಿಸುವ ಮೂಲಕ ಶಿಕ್ಷಣ ಕ್ಷೇತ್ರದ ಡಾನಗಳಿಗೆ ಶಾಕ್ ನೀಡಿತು. ಈ ನಾಟಕವನ್ನು ತ್ವರಿತಗತಿಯಲ್ಲಿ ಪ್ರದರ್ಶನಕ್ಕೆ ಏರ್ಪಾಡು ಮಾಡಿದ್ದು "ಜನನುಡಿ' ಸಮಾವೇಶ ಆಯೋಜಿಸಿದ ' ಅಭಿಮತ' ದ ಗೆಳೆಯರು. ಬಹುಷಃ ಸಮುದಾಯವಲ್ಲದೇ ಬೇರೆ ಯಾವುದೇ ತಂಡಗಳಾಗಿದ್ದರೆ ತಮ್ಮ ನಾಟಕವನ್ನು ಯಾವ ಕಾರಣಕ್ಕೂ ರದ್ದು ಮಾಡುತ್ತಿರಲಿಲ್ಲ. ಯಾಕೆಂದರೆ ಬಹುತೇಕ ರಂಗತಂಡಗಳಿಗೆ ತಮ್ಮ ನಾಟಕ ಪ್ರದರ್ಶನ ಮುಖ್ಯವಾಗುತ್ತದೆಯೇ ಹೊರತು ಸಾಮಾಜಿಕ ಬದ್ಧತೆಯಲ್ಲ. ಸಮುದಾಯ,  ಇಪ್ಟಾ, ಅವಿಷ್ಕಾರ.... ಇಂತಹ ರಾಜಕೀಯ  ಹಾಗೂ ಸಾಮಾಜಿಕ ಪ್ರಜ್ಞೆ ಇರುವ ಸಂಘಟನೆಗಳು ಮಾತ್ರ ಇಂತಹ ಶೋಷಕ ವಿರೋಧಿ ನಿಲುವು ತಳೆಯಲು ಸಾಧ್ಯ. ರಂಗಬದ್ಧತೆಯನ್ನು ತೋರಲು ಸಾಧ್ಯ.  ಈ ನಿಟ್ಟಿನಲ್ಲಿ  ಸಮುದಾಯದ ನಿರ್ಧಾರ ಅಭಿನಂದನೀಯ.  



'ಭಾಷಣಕ್ಕೊಂದು ವೇದಿಕೆ ಒದಗಿಸಿ, ಕೊರಳಿಗೆ ಹಾರ ಶಾಲು ಹಾಕಿ ಕೈಗೆ ಕಾಣಿಕೆ ಕೊಟ್ಟು ಬಹಿರಂಗವಾಗಿ ಸನ್ಮಾನ ಮಾಡಿದರೆ ಈ ಸಾಹಿತಿಗಳು-ಹೋರಾಟಗಾರರು  ಓಡೋಡಿ ಬಂದು ಭಾಗವಹಿಸುತ್ತಾರೆ, ಇಂತಹ ಮೇಧಾವಿಗಳು ಸಮ್ಮೇಶನಕ್ಕೆ ಬಂದರೆ ಜನಸಾಮಾನ್ಯರು ಬೆಕ್ಕಸ ಬೆರಗಾಗುತ್ತಾರೆ. ಹಾಗೂ ಈ ಯಜಮಾನರುಗಳು ಮಾಡಿದ ಪಾಪಕೃತ್ಯಗಳನ್ನು ವಿಜ್ರಂಭನೆಯ ವಿರಾಟತೆಯಲ್ಲಿ ಜನ ಮರೆತುಬಿಡುತ್ತಾರೆ' ಎಂದುಕೊಂಡೇ ಈ ಆಳ್ವಾರಂತವರು, ಹೆಗ್ಗಡೆಯಂತವರು ಇಂತಹ ವಿರಾಸತ್ ಗಳನ್ನು ಹಮ್ಮಿಕೊಳ್ಳುತ್ತಾರೆ. ಜನತೆಯನ್ನು ಯಾವಾಗಲೂ ಯಾವುದಾದರೊಂದು ಭ್ರಮೆಯಲ್ಲಿಟ್ಟು ತಮ್ಮ ಪಾಳೆಗಾರಿಕೆಗೆ ಪರ್ಮಿಶನ್ ಪಡೆಯಲು ಹವಣಿಸುತ್ತಾರೆ. ಅದಕ್ಕಾಗಿ ಈ ರೀತಿಯ ಸಾಂಸ್ಕೃತಿಕ ಮುಖವಾಡವನ್ನು ಕಾಲಕಾಲಕ್ಕೆ ತೊಡುತ್ತಾರೆ. ತಮ್ಮ ಪ್ರಜ್ಞಾವಂತಿಕೆಯನ್ನು ಈ ಆಳ್ವಾರಂತವರಿಗೆ ಅಡವಿಡುವ ಸಾಹಿತಿಗಳಿಗೇನೂ ಕೊರತೆ ಇಲ್ಲಾ. ಆದರೆ ಎಲ್ಲರೂ ಹಾಗೆ ಅಲ್ಲಾ ಎನ್ನುವುದನ್ನು ಈ ಭಾರಿಯ ಪ್ರಭಲ ಪ್ರತಿರೋಧ ತೋರಿಸಿಕೊಟ್ಟಿದೆ. ಸಾಂಸ್ಕೃತಿಕ ಮುಖವಾಡ ಹಾಕಿಕೊಂಡು ಶಿಕ್ಷಣದ ವ್ಯಾಪಾರೀಕರಣ ಮಾಡುತ್ತಿರುವ  ಈ ಆಧುನಿಕ ಪಾಳೇಗಾರರನ್ನು  ಪ್ರಜ್ಞಾವಂತರು ಬಹಳ ಸೂಕ್ತವಾಗಿಯೇ ವಿರೋಧಿಸಿದ್ದಾರೆ. ರಾಜೀಕೋರ ಸಾಹಿತಿಗಳಿಗೂ ಪಾಠ ಕಲಿಸಿದ್ದಾರೆ. ನಾಡಿನ ಜನತೆಯ ಮುಂದೆ  ಈ ಶೋಷಕರ ಸಾಂಸ್ಕೃತಿಕ  ಅಟ್ಟಹಾಸವನ್ನು ಬಯಲುಗೊಳಿಸಿದ್ದಾರೆ.  


                                    -ಶಶಿಕಾಂತ ಯಡಹಳ್ಳಿ