ಬುಧವಾರ, ಡಿಸೆಂಬರ್ 4, 2013

ಪಶ್ಚಾತ್ತಾಪ (ಕವಿತೆ)





ನನ್ನ ಮಗಳು ನಡುರಾತ್ರಿ ಬೆಚ್ಚಿಬಿದ್ದು ಕೇಳುತ್ತಾಳೆ,
ಅಪ್ಪಾ..... ಏಳು ಅಪ್ಪಾ.... ಅಪ್ಪಾ
ನಾನು ಮುಸ್ಲಿಂ ಅಲ್ಲಾ ಆದರೂ ಪರವಾಗಿಲ್ಲ
ಬುರ್ಖಾ ಹಾಕಿಕೊಳ್ಳಲು ಅವಕಾಶ ಕೊಡಿ.

ಶಾಲೆ ಕಾಲೇಜು, ರಸ್ತೆ-ಕಛೇರಿ, ಬಸ್ಸು ಬಜಾರು
ಎಲ್ಲೇ ಹೋದರು ಕಾಮಗಣ್ಣಿಗರ ಕಾಟ ಬಲು ಬೇಜಾರು.
ಮುಜುಗರದಿಂದ ಹೇಗಾದರೂ ಪಾರಾಗಬೇಕಿದೆ
ಬುರ್ಖಾ ಹಾಕಿಕೊಳ್ಳಲು ಅವಕಾಶ ಮಾಡಿಕೊಡಿ.

ಧರ್ಮಸ್ಥಳದಲ್ಲೇ ಹುಡುಗಿ ಮೇಲೆ ಬಲಾತ್ಕಾರ
ದೆಲ್ಲಿಯಲ್ಲಿ ಓಡುವ ಬಸ್ಸಿನಲ್ಲಿ ಅತ್ಯಾಚಾರ.
ದಿನಪತ್ರಿಕೆಗಳ ತುಂಬಾ ಇಂತವೇ ಸುದ್ದಿಗಳು ಭಯವಾಗ್ತಿದೆ
ಕಾಮುಕರ ಕಣ್ಣಿಗೆ ಬೀಳದಂತಿರಲು ಬೂರ್ಖಾ ತಂದುಕೊಡಿ.

ಹೋದಲ್ಲೆಲ್ಲಾ ಸಿಗುತ್ತಾರೆ ಮೋಜಣಿದಾರರು
ದೇಹದೊಂದೊಂದು ಅಂಗುಲ ಕಣ್ಣಲ್ಲೆ ಅಳೆಯುತ್ತಾರೆ.
ಹುಟ್ಟುವ ಮೊದಲೇ ನನ್ನನ್ನು ಕೊಲ್ಲಬಾರದಿತ್ತಾ ಅಪ್ಪಾ
ಹುಟ್ಟಿಸಿದ ತಪ್ಪಿಗೆ ಈಗ ಬೂರ್ಖಾ ತಂದು ಕೊಡು.

ಕೊಂದುಕೊಳ್ಳಬೇಕೆನಿಸಿತು ನನಗೆ, ಮನತುಂಬಾ ಪಶ್ಚಾತ್ತಾಪ

ಮಗಳ ಸಂಕಟಕ್ಕಲ್ಲ, ಹೆಣ್ಣಿಗೆ ತಂದೆಯಾಗಿದ್ದಕ್ಕೂ ಅಲ್ಲಾ.
ನಾನೆಷ್ಟು ಹೆಣ್ಣುಗಳ ಮೈಮಾಟ ಮೋಜಣಿ ಮಾಡಿದ್ದೇನೆ
ಎಂದು ನೆನಪಿಸಿಕೊಂಡು ನಾಚಿಕೆಯಿಂದ ಮಗಳ ಮುಂದೆ ತಲೆ ತಗ್ಗಿಸಿದೆ. 



                                                    -ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ