ಕ್ಷಮಿಸಿ, ನನ್ನಿಂದ ಹೆಚ್ಚಿಗೇನೂ ಬಯಸಬೇಡಿ,
ಅತಿವೃಷ್ಟಿಯಲ್ಲಿ ಊರಿಗೆಲ್ಲಾ ಕೊಡೆ
ಹಿಡಿಯಲಾರೆ
ಹಾಗಂತ ನನ್ನ ಸೂರಲ್ಲಿ ಒಂದಿಷ್ಟು ನಿರಾಶ್ರಿತರಿಗಾಶ್ರಯ
ಕೊಡದೇ ಇರಲಾರೆ.
ಕ್ಷಮಿಸಿ, ನನ್ನಿಂದ ಹೆಚ್ಚಿನದೇನನ್ನೂ
ನಿರೀಕ್ಷಿಸಬೇಡಿ
ಅನಾವೃಷ್ಟಿಯಲ್ಲಿ ಹಸಿದವರಿಗೆಲ್ಲಾ ಊಟ ನೀಡಿ ಸಾಕಲಾರೆ
ಹಾಗಂತ ನನ್ನ ಊಟದಲ್ಲೊಂದಿಷ್ಟು ಪಾಲು
ಹಸಿದವರಿಗೆ ಕೊಡದೇ ಇರಲಾರೆ.
ಕ್ಷಮಿಸಿ, ನನ್ನಿಂದ ಯಾವುದೇ ಕ್ರಾಂತಿ
ಅಪೇಕ್ಷಿಸಬೇಡಿ
ಕೆಟ್ಟು ಕೊಳಕಾದ ದುಷ್ಟ ವ್ಯವಸ್ಥೆಯನ್ನು
ಬದಲಾಯಿಸಲಾರೆ
ಆದರೆ ದಮನಿತರ ಕಣ್ಣೀರು ವರೆಸಿ ಸಂತೈಸದೇ
ಇರಲಾರೆ.
ಹಾಗಂತ ನಾನೇನು ತ್ಯಾಗಿಯೂ ಅಲ್ಲ, ಅವಧೂತನೂ
ಅಲ್ಲ
ನೊಂದವರ ಅಪೇಕ್ಷೆ ಈಡೇರಿಸುವ ಸರ್ವಶಕ್ತನೂ ಅಲ್ಲ.
ಕೇವಲ ನಾನೊಬ್ಬ ಮನುಷ್ಯ, ಮಾನವೀಯತೆ
ಮರೆತು ಇರಲಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ