ಸೋಮವಾರ, ಡಿಸೆಂಬರ್ 2, 2013

ಮನದೊಳಗಿನ ಮಿನಿ ಕವಿತೆಗಳು :






ಚಿಕ್ಕವನಾಗಿದ್ದಾಗ ನನಗೆ
ಗುರಿ ಇತ್ತು ದಾರಿ ಗೊತ್ತಿರಲಿಲ್ಲ.

ಈಗ ದೊಡ್ಡವನಾಗಿದ್ದೇನೆ
ದಾರಿ ಸಿಕ್ಕಿದೆ ಗುರಿ ಮರೆತಿದೆ.

*        *        *


ಪರಿಚಿತ ಸ್ನೇಹಿತರ                                                        


ಅಪರಿಚಿತ ಮುಖಗಳು


ಒಟ್ಟಿಗೆ ಕಾಣುವುದಿಲ್ಲ.

ಕಾಲನ ಓಟದಲ್ಲಿ  ಮುಖವಾಡ
ಕಳಚಿ ಬಿದ್ದಂತೆಲ್ಲಾ
ಸಂಬಂಧಗಳು ಉಳಿಯುವುದಿಲ್ಲ.

*        *        *

ಇತ್ತೀಚೆಗೆ ಮೆಟ್ರೋ ಸಿಟಿಯಲ್ಲಿ
ಸಂಬಂಧಗಳ ಸಾಚಾತನದ ಬಗ್ಗೆ ಗುಮಾನಿಯಿದೆ.

ಹಣದ ಹಿಂದೆ ಬಿದ್ದ ಸ್ವಾರ್ಥಿಗಳ
ನೀಚತನ ನಿರಂತರವಾಗಿ ಸಾಗಿದೆ.

*        *        *

ಪ್ರೀತಿಯ ಬಲೆಯಲಿ ಸಿಕ್ಕ ಮೇಲೆ
ಅದರ ನೆಲೆಯನರಸಿ ಹೋಗದಿರು....

ಶೋಧಿಸುವ ಕಯಾಲಿಗೆ ಬಿದ್ದವರು
ಪ್ರೀತಿಯನ್ನೇ ಕಳೆದುಕೊಂಡರು....

*        *        *

ಯಾಕೀ ನಿರಾಶೆ, ಯಾತಕೀ ಹತಾಶೆ
ನನ್ನ ನಿರೀಕ್ಷೆ ಅತಿಯಾಯಿತೇನೋ?

ಯಾಕೆ ಈ ವ್ಯವಸ್ಥೆ ಇಷ್ಟೊಂದು ದುರಾವಸ್ತೆ
ದುರಸ್ತಿ ಮಾಡಲು ಸಾಧ್ಯವೇ ಇಲ್ಲವೇನೋ?

*        *        *

ಬದುಕು ಬಲು ರೋಚಕ  ಎಂದುಕೊಂಡು
ಸೂಚನೆಗಳನ್ನು ಮೀರಿ ಮೆರೆದವನ
ಮನೆಯಲ್ಲೀಗ ಸೂತಕ.....

*        *        *

ಪರಿಚಿತ ಲೋಕದ ಅಪರಿಚಿತ ಮಜಲುಗಳು ಕಾಣುವುದಿಲ್ಲ ಕಣ್ಣಿಗೆ
ಒಟ್ಟಿಗಿದ್ದೂ ನೆಟ್ಟಗಿದ್ದರೂ ಮುಚ್ಚುಮರೆ ನಿಗೂಢಗಳು ಚುಚ್ಚುತ್ತವೆ ತಣ್ಣಗೆ.

*        *        *

ಬದುಕಿನ ದ್ವಂದ್ವ-ವೈರುಧ್ಯ  ಅಸಾಂಗತ್ಯಗಳನ್ನು
ಯಾವ ತತ್ವ-ಸಿದ್ದಾಂತಗಳೂ ಪರಿಪೂರ್ಣವಾಗಿ ವಿವರಿಸಲಾರವು...

ನಾವು ಮನುಷ್ಯರು ಇರೋದೇ ಹೀಗೆ
ಯಾವ ಧರ್ಮ-ಕರ್ಮಗಳೂ ಅಪೂರ್ಣತೆಯನ್ನು ಪರಿಹರಿಸಲಾರವು...

*        *        *

ಆಗ ತ್ರಿಕರಣ ಶುದ್ದೀಕರಣ
ಮುಂದೆ ಗುರಿಯಿತ್ತು
ಹಿಂದೆ ಗುರುವಿದ್ದ.

ಈಗ ಜಾಗತೀಕರಣ
ಗುರಿಯೂ ಇಲ್ಲಾ, ಗುರುವೂ ಇಲ್ಲಾ
ಯಾಕೆಂದರೆ ಗುರುವಿಗೆ ಗುರಿ ಗೊತ್ತಿಲ್ಲ.

*        *        *

ಗಂಡು ಹೆಣ್ಣಿನ ನಡುವಿನ ಮಜಲುಗಳು
ಯಾವ ಕಾಲವಾದರೂ ಗೋಜಲುಗಳೇ...

ಪ್ರೀತಿ ಪ್ರೇಮದ ಪರಾಕಾಷ್ಟೆಯಲ್ಲಿ ಎಲ್ಲಾ ಗೋಜಲುಗಳೂ
ಗಮ್ಯ ತಲುಪುವ ಮಜಲುಗಳೇ.....

*        *        *

ಗಂಡು ಹೆಣ್ಣುಗಳು ಅರ್ಥೈಸಿಕೊಳ್ಳುವ
ವ್ಯರ್ಥ ಪ್ರಯತ್ನ ನಿರಂತರ..

ಮೊದಲು ಒಬ್ಬರಿಗೊಬ್ಬರು
ಮಾನಸಿಕವಾಗಿ ಆಗಲೇಬೇಕು ರೂಪಾಂತರ.....

*        *        *

ಇನ್ನೂ ಎಷ್ಟೂಂತ ಹುಡುಕಲಿ, ಎಲ್ಲೀಂತ ಹುಡುಕಲಿ
ಕಳೆದುಕೊಂಡ ನೆಮ್ಮದಿಯನ್ನ....

ಪ್ರೀತಿ ಆಯ್ತು..ಮದುವೆ ಆಯ್ತು.. ಮಕ್ಕಳೂ ಆಯ್ತು
ನೆಮ್ಮದಿಯ ನೆಲೆ ಎಂದುಕೊಂಡಿದ್ದೆಲ್ಲಾ ಕೊಟ್ಟಿದ್ದು ಬರೀ ನಿರಾಶೆಯನ್ನ......

*        *        *

ಯಾವುದೇ ಕೋಮುದಳ್ಳುರಿ ಬರೀ-
ಸಂತ್ರಸ್ತರನ್ನು ಮಾತ್ರ ಸುಡುವುದಿಲ್ಲ...

ಮನುಷ್ಯತ್ವ ಇರುವವರ ಎದೆಗೆ
ಕೊಳ್ಳಿ ಇಡದೇ ಬಿಡುವುದಿಲ್ಲ.

*        *        *

ಈ ಜಾತಿವಾದ ಯಾರನ್ನೂ ಬಿಟ್ಟಿಲ್ಲ
ಸತ್ತವರನ್ನೂ ಸಹ..

ಹುಟ್ಟದವರನ್ನು ಇನ್ನೂ ತಟ್ಟಿಲ್ಲ
ಯಾಕೆಂದರೆ ಅವರಿನ್ನೂ ಹುಟ್ಟಿಲ್ಲ.....

*        *        *

ಸಂಕಟ ಸಂಕೋಲೆಗಳೊಳಗೂ
ಕ್ಷೀಣವಾಗದು ಬದುಕುವ  ಆಸೆ..
ಕಾರಣ......
ನೆಮ್ಮದಿಯ ನಾಳೆಯತ್ತ  ಇರುವ
ಅದಮ್ಯ ಭರವಸೆ...

*        *        *

ರಾಗ ತಾಳಬದ್ದವಾಗಿ
ಹಾಡುತ್ತಾರೆ ಗಾಯಕರು
ಅವರದು ಕೊರಳಿನ ದ್ವನಿ....

ಗಾರ್ದಭ ರಾಗದಲ್ಲಿ
ಕರ್ಕಶವಾಗಿ ಹಾಡುತ್ತಾರೆ ಭಿಕ್ಷುಕರು
ಅವರದು ಕರುಳಿನ ದ್ವನಿ....

*        *        *

ದೇಶದ ಆರ್ಥಿಕತೆ ಛಿದ್ರಗೊಂಡಿದೆ
ಸಾಮಾಜಿಕ ಭದ್ರತೆ ಭಗ್ನಗೊಂಡಿದೆ
ಆದರೂ  ಆಳುವವರ ಹೇಳುತ್ತಾರೆ
ಭಾರತ ಬೆಳಗುತ್ತಿದೆ.

*        *        *

                                                                   -ಶಶಿಕಾಂತ ಯಡಹಳ್ಳಿ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ