ಗುರುವಾರ, ಡಿಸೆಂಬರ್ 19, 2013

ಬಾಪು ಮತ್ತು ನಾವು :












ಬಾಪು ನೀನು ಇದ್ದೀಯಾ
ಅನ್ಯಾಯದ ವಿರುದ್ಧ
ಉಪವಾಸ ಸೆರೆವಾಸ ಎಂದೆಲ್ಲಾ
ಹೋರಾಡಿ ಎಗರಾಡಿದೆ
ಸಿಕ್ಕಿದ್ದೇನು? ಬರೀ ಬೊಕ್ಕು ತಲೆ.

ನೋಡು... ನಾವೂ ಇದ್ದೇವೆ
ಅನ್ಯಾಯದ ಜೊತೆ ರಾಜಿ ಮಾಡಿಕೊಂಡು
ಅದನ್ನೇ ಪರಮ ಸುಖ ಎಂದುಕೊಂಡು
ಮನಸ್ಸು ಕೊಂದುಕೊಂಡು
ದಕ್ಕಿಸಿಕೊಂಡಿದ್ದೇವೆ ಬದಕುವ ಕಲೆ.

ಬಾಪೂ ನೀನೂ ಇದ್ದೀಯಾ
ಬದುಕಿನಾದ್ಯಂತ  ಒಂದೇ ಒಂದು
ಈಸ್ಟ್ ಇಂಡಿಯಾ ಕಂಪನಿ ಒದ್ದೊಡಿಸಲು
ಆಫ್ರಿಕಾದಿಂದ ಬಂದೆ ಸಂಗ್ರಾಮ ಎಂದೆ...
ಸಿಕ್ಕಿದ್ದೇನು? ಎದೆಗೆ ಗೋಡ್ಸೆ ಗುಂಡು.

ನೋಡು ನಾವು ಇದ್ದೇವೆ
ದಿನ ನಿತ್ಯ ವಿದೇಶಿ ಕಂಪನಿಗಳಿಗೆ
ರತ್ನಗಂಬಳಿ ಹಾಕಿ ಸ್ವಾಗತಿಸಿ
ಐಟಿ ಬಿಟಿಗಳಲ್ಲಿ ನಮ್ಮ ಮಕ್ಕಳನ್ನು ಜೀತಕ್ಕಿರಿಸಿ
ಚೆನ್ನಾಗಿದ್ದೇವೆ ಶೋಷಕರೊಂದಿಗೆ ಸಂಧಾನ ಮಾಡಿಕೊಂಡು.

ಅದಕ್ಕೆ ನೀನು ಹುತಾತ್ಮನಾದೆ
ಲೋಕಕ್ಕೆ ಮಹಾತ್ಮನಾದೆ..
ನಿನ್ನ ಪಥವರಿಯದ ನಾವು
ಪಾಪಾತ್ಮರಾದೆವು ನಮ್ಮನ್ನು ನಾವೇ ಮಾರಿಕೊಂಡೆವು...
ಕ್ಷಮಿಸಿಬಿಡು ತಾತಾ... ನಿನ್ನಯ ಮಕ್ಕಳ ಮಹಾಪರಾಧವನ್ನು...

ಆಗ ಮುಂದೆ ಗುರಿಯಿತ್ತು
ಹಿಂದೆ ನಿನ್ನಂತ ಗುರುವಿದ್ದ.
ಈಗ ನಮಗೆ ಗೊತ್ತೂ ಇಲ್ಲಾ ಗುರಿಯೂ ಇಲ್ಲ.
ಚಿತ್ತ ಬಂದತ್ತ ಸಾಗಿದೆ ಬದುಕು ಮತ್ತೆ ಗುಲಾಮಗಿರಿಯತ್ತ
ನೀನು ಮತ್ತೆ ಹುಟ್ಟಿಬರುವ ಕಾಲ ಸನ್ನಿಹಿತವಾಗಿದೆ ತಯಾರಾಗಿರು.




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ