ಹತ್ತು ಮಹಿಳಾ ಸಾಧಕರಿಗೆ ಸನ್ಮಾನ;
ಹಲವಾರು ಸಾಧಕಿಯರಿಗೆ ಅವಮಾನ : ಹರಾಜಾಯ್ತು ಸುವರ್ಣ ವಾಹಿನಿಯ ಮಾನ..
ಸುವರ್ಣ ಸುದ್ದಿ ವಾಹಿನಿ ಮತ್ತು
ಕನ್ನಡಪ್ರಭ ಪತ್ರಿಕೆಗಳು ಕರ್ನಾಟಕದಲ್ಲಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ಕೊಡುವ ಉತ್ತಮ
ಯೋಜನೆಯೊಂದನ್ನು ಹಮ್ಮಿಕೊಂಡಿದ್ದವು. ಅದಕ್ಕಾಗಿ ತಿಂಗಳುಗಳ
ಕಾಲ ಪ್ರತಿ ದಿನ ತಮ್ಮ ವಾಹಿನಿಯಲ್ಲಿ ಸಾಧಕಿಯರಿಂದ
ಅರ್ಜಿಗಳನ್ನು ಆಹ್ವಾನಿಸುತ್ತಲೇ ಇದ್ದವು. ನಾಡಿನಾದ್ಯಂತ ಆರು ನೂರಕ್ಕೂ ಹೆಚ್ಚು ಪ್ರಶಸ್ತಿ ಆಕಾಂಕ್ಷಿ ಮಹಿಳೆಯರುಗಳು ತಮ್ಮ ಸಾಧನೆಯ ವಿವರಗಳೊಂದಿಗೆ
ಅರ್ಜಿ ಹಾಕಿದ್ದರು. ನಟಿ ರಾಜಕಾರಣಿ ಮಾಳವಿಕಾ, ಕಲಾವಿದೆ
ಜಯಂತಿ ಹಾಗೂ ಸುಧಾರಾಣಿಯವರು ತೀರ್ಪುಗಾರರಾಗಿದ್ದು ಹತ್ತು ಜನ ಸಾಧಕರನ್ನು ವಿವಿಧ ಕ್ಷೇತ್ರಗಳಿಂದ
ಆಯ್ಕೆ ಮಾಡುವ ಕಸರತ್ತಿನಲ್ಲಿ ಯಶಸ್ವಿಯಾಗಿದ್ದರು. ಎಪ್ರೀಲ್ ೨೯ರಂದು ವಿಜಯನಗರದಲ್ಲಿರುವ “ಕಾಸಿಯಾ ಉದ್ಯೋಗ ಭವನ”ದಲ್ಲಿ ಪ್ರಶಸ್ತಿ ಪ್ರಧಾನ
ಸಮಾರಂಭದ ಪೂರ್ವಭಾವಿ ಶೂಟಿಂಗ್ ಮಾಡಲಾಯಿತು. ವಿಶೇಷ ಜ್ಯೂರಿ ಅವಾರ್ಡ ಸೇರಿ ಒಟ್ಟು ಹನ್ನೊಂದು ಮಹಿಳೆಯರಿಗೆ
ಪ್ರಶಸ್ತಿಯನ್ನು ಅತಿಥಿಗಳಾದ ಸಾಲುಮರದ ತಿಮ್ಮಕ್ಕ, ಆರುಂಧತಿ ನಾಗ್, ಸಿನೆಮಾ ನಟಿಯರಾದ ತಾರಾ ಮತ್ತು
ಹರ್ಷಿತಾ ಪೂಣಚ್ಚರವರು ಕೊಡಮಾಡಿದರು.
ಇಡೀ ಕಾರ್ಯಕ್ರಮ ಚೆನ್ನಾಗಿಯೇ
ನಡೆಯುತ್ತಿತ್ತು. ಸುವರ್ಣ ವಾಹಿನಿ ಮೊದಲ ಬಾರಿಗೆ ಮಹಿಳಾ ಸಾಧಕಿಯರನ್ನು ಗುರುತಿಸಿ ಉತ್ತಮ ಕೆಲಸವನ್ನು
ಮಾಡುತ್ತಿದೆ ಎಂದೇ ಎಲ್ಲರೂ ನಂಬಿದ್ದರು. ಆದರೆ..
ಐದಾರು ಸಾಧಕಿಯರಿಗೆ ಪ್ರಶಸ್ತಿ ಪ್ರಧಾನ ಮಾಡಿದ ನಂತರ ವೇದಿಕೆಯ ಬಲಬಾಗದ ಪ್ರವೇಶದ್ವಾರದಿಂದ ಅಪಸ್ವರಗಳು
ಕೇಳ ಬರತೊಡಗಿದವು. ಮೊದಲು ಕೇವಲ ಒಂದಿಬ್ಬರ ಗೊಣಗುವಿಕೆಯಾಗಿದ್ದ ದ್ವನಿಗಳು ಬರುಬರುತ್ತಾ ತಮ್ಮ ಸಂಖ್ಯೆಯನ್ನು
ಹೆಚ್ಚಿಸಿಕೊಂಡು ಗಟ್ಟಿಗೊಳ್ಳತೊಡಗಿದವು. ಏನಾಯಿತು ಎಂದು ವಿಚಾರಿಸಿದರೆ ದಿಗಿಲು ಬೀಳುವ ಸಂಗತಿಗಳು
ಹೊರಬೀಳತೊಡಗಿದವು.
ಈ ವಾಹಿನಿಗಳ ಹಣೇಬರಹವೇ ಇಷ್ಟೇ.
ಎಲ್ಲಿ ತಮಗೆ ಲಾಭ ಇಲ್ಲವೋ ಅಂತಹ ಕೆಲಸವನ್ನು ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಲಾಭಬಡುಕಗಳಾಗಿವೆ.
ಟಿಆರ್ಪಿ ಹಾಗೂ ಪ್ರಚಾರಕ್ಕಾಗಿ ಏನು ಬೇಕಾದರೂ ಮಾಡುತ್ತವೆ ಎನ್ನುವುದಕ್ಕೆ ಈ ಪ್ರಶಸ್ತಿ ಪ್ರಧಾನ
ಪ್ರಹಸನ ಸಾಕ್ಷಿಯಾಯಿತು. ಈ ಸಲ ಮಹಿಳಾ ಸಾಧಕರ ಭಾವನೆಗಳ ಜೊತೆಗೆ ಆಟವಾಡಿ ಅನೇಕ ಸಾಧಕರಿಗೆ ಅವಮಾನವಾಗುವಂತೆ
ಮಾಡಿದ್ದಂತೂ ಅಕ್ಷಮ್ಯ. ಕಲಾವಿದರು ಸಾಧಕರು ಎಂದರೆ ಈ ವಾಹಿನಿಗಳು ಆಟದ ಕಾಯಿಗಳು ಎಂದುಕೊಂಡಂತಿವೆ.
ಹೀಗೆ ಪ್ರಶಸ್ತಿ ಕೊಡುತ್ತೇವೆ ಎಂದು ಕರೆಯಿಸಿ ಕೊಡದೇ ಅವಮಾನ ಮಾಡಬಾರದಿತ್ತು. ಮಾಡಿಯಾಗಿತ್ತು.
ಅಸಲಿಗೆ ಆಗಿದ್ದೇನಪ್ಪಾ ಅಂತಂದ್ರೆ..
ಖಾಸಿಯ ಭವನದಲ್ಲಿ ಇರೋದೇ ಮುನ್ನೂರು ಚಿಲ್ಲರೆ ಖುರ್ಚಿಗಳು. ಇಷ್ಟು ಜನ ಪ್ರೇಕ್ಷಕರನ್ನು ಈ ಟ್ರಾಫಿಕ್
ಸಿಟಿಯಲ್ಲಿ ಎಲ್ಲಿಂದ ತರುವುದು? ದೊಡ್ಡ ಸ್ಟಾರ್ ನಟ ನಟಿಯರಿಗೆ ಪ್ರಶಸ್ತಿಗಳನ್ನು ಕೊಟ್ಟಿದ್ದರೆ ಇಲ್ಲವೇ
ಪ್ರಶಸ್ತಿ ಕೊಡಲು ಕರೆಯಿಸಿದ್ದರೆ ಅಭಿಮಾನಿಗಳು ಕರೆಯದೇ ಬರುತ್ತಿದ್ದರು. ಆದರೆ.. ಅದೂ ಇಲ್ಲಿ ಪ್ರಶಸ್ತಿ
ಪಡೆದವರ್ಯಾರೂ ಸೆಲಿಬ್ರಿಟಿಗಳಾಗಿರಲಿಲ್ಲಾ. ಪ್ರಶಸ್ತಿ
ಕೊಡಲು ಬಂದವರಿಗೆ ಅಭಿಮಾನಿಗಳ ಬಳಗವಿಲ್ಲಾ.
ಹೀಗಾಗಿ ಇಡೀ ಸಭಾಂಗಣ ಖಾಲಿ ಹೊಡೆಯುವುದಂತೂ
ಗ್ಯಾರಂಟಿ ಎಂದು ಈ ವಾಹಿನಿಯ ಸಂಘಟಕರಿಗೆ ಮೊದಲೆ ಗೊತ್ತಿತ್ತೆಂದು ಕಾಣುತ್ತದೆ. ಅದಕ್ಕಾಗಿ ಉಚಿತ ಪಾಸ್
ಕೊಡುತ್ತೇವೆಂದು ತಮ್ಮ ಚಾನೆಲ್ಲನಲ್ಲಿ ಬಿತ್ತಿರಿಸಿದರೂ ಯಾರೂ ಪಾಸ್ಗೆ ಕ್ಯಾರೇ ಎನ್ನಲಿಲ್ಲಾ. ಅದಕ್ಕೆ
ಆತಂಕಗೊಂಡ ಆಯೋಜಕರು ಪ್ರೇಕ್ಷಕರನ್ನು ಹೆಚ್ಚಿಸಲು ಒಂದು ಐಡಿಯಾ ಕತರ್ನಾಕ್ ಮಾಡಿದ್ದರು. ಪ್ರಶಸ್ತಿಗೆ
ಅರ್ಜಿ ಹಾಕಿಕೊಂಡ ಬೆಂಗಳೂರು ಮೂಲದ ಸುಮಾರು ಐವತ್ತು ಜನರಿಗೆ ಪೋನ್ ಮಾಡಿ ನೀವು ಸುವರ್ಣ ಮಹಿಳಾ ಸಾಧಕಿಯರು
ಪ್ರಶಸ್ತಿಗೆ ಆಯ್ಕೆ ಆಗಿದ್ದೀರಿ, ಎಪ್ರಿಲ್ 29 ರಂದು ನಿಮ್ಮ ಕುಟುಂಬ ಪರಿವಾರ ಸಮೇತ ಬನ್ನಿ ಎಂದು
ಕರೆಯ ಮೇಲೆ ಕರೆ ಮಾಡಿ ಕರೆಯತೊಡಗಿದರು.
ಈ ಕರೆಗಳಿಂದ ಪುಲ್ ಖುಷಿಯಾದ
ಸಾಧಕ ಮಹಿಳೆಯರು ತಮ್ಮ ಸ್ನೇಹಿತರು ಆಪ್ತರು ಹಾಗೂ ಬಂಧು ಬಳಗಕ್ಕೆಲ್ಲಾ ಸಂತಸದ ವಿಚಾರ ತಿಳಿಸಿ ಸಂಭ್ರಮಿಸಿದರು.
ಪ್ರಶಸ್ತಿ ಸಮಾರಂಭಕ್ಕೆ ಬರಲೇಬೇಕೆಂದು ಒತ್ತಾಯಿಸಿದರು. ಸಮಾರಂಭ ನಡೆದಾಗ ಪ್ರೇಕ್ಷಕರನ್ನೂ ಸಹ ಟಿವಿಯಲ್ಲಿ
ತೋರಿಸುತ್ತಾರೆಂಬ ಗೊತ್ತಿದ್ದ ಆಪ್ತರೂ ಬಂದರು. ಅಂತೂ ಇಂತೂ ಒಬ್ಬೊಬ್ಬ ಮಹಿಳೆಯರೂ ಕನಿಷ್ಟ ನಾಲ್ವರಿಂದ
ಹತ್ತು ಜನರವರೆಗೂ ಪ್ರೇಕ್ಷಕರನ್ನು ಕರೆದುಕೊಂಡು ಬಂದಿದ್ದರು. ಅಂತೂ ಇಂತೂ ಮುಕ್ಕಾಲು ಭಾಗ ಸಭಾಂಗಣ
ತುಂಬಿ ಹೋಯಿತು. ಆಯೋಜಕರ ಮುಖಗಳು ಒಂಚೂರು ಅರಳಿದವು.
ಆದರೆ.. ಪ್ರಶಸ್ತಿಗಳನ್ನು
ಯಾರಿಗೆ ಕೊಡಬೇಕೆಂದು ಪೂರ್ವ ನಿರ್ಧಾರಿತವಾಗಿತ್ತೆಂದು ಪ್ರಶಸ್ತಿ ಪಡೆದವರ ವಿಡಿಯೋ ಕ್ಲಿಪ್ಪಿಂಗ್
ಗಳು ಎಲ್ಸಿಡಿ ಸ್ಕ್ರೀನ್ ಮೇಲೆ ಡಿಸ್ಪ್ಲೇ ಆಗತೊಡಗಿದವೋ ಉಳಿದ ಆಹ್ವಾನಿತ ಸಾಧಕಿಯರಿಗೆಲ್ಲಾ ಅನುಮಾನ
ಶುರುವಾಯಿತು. ಯಾಕೆಂದರೆ ಅವರ್ಯಾರ ಸಾಧನೆಯ ವಿಡಿಯೋವನ್ನು ಪೂರ್ವಭಾವಿಯಾಗಿ ಚಿತ್ರೀಕರಿಸಿರಲಿಲ್ಲಾ. ಯಾವಾಗ ತಮಗೆ ಮೋಸವಾಗಿದೆ ಎಂದು ಗೊತ್ತಾಯಿತೋ ಆಗ ಕೆಲವರ
ಅಸಮಾಧಾನ ಹೆಚ್ಚಾಗತೊಡಗಿತು. ತಮ್ಮ ಅಸಹನೆಯನ್ನು ವ್ಯಕ್ತ ಪಡಿಸುತ್ತಾ ಒಂದು ದೊಡ್ಡ ಗುಂಪು ಪ್ರವೇಶದ್ವಾರದ
ಹೊರಗೆ ನಿಂತು ಮಾತಿನ ಚಕಮುಖಿ ನಡೆಸಿತು. ಹನುಮಕ್ಕನವರ್ ಎನ್ನುವ ನಿರೂಪಕ ಓಡಿ ಬಂದು ಸಮಾಧಾನ ಮಾಡಲು ಪ್ರಯತ್ನಿಸಿದರೂ ಆಗಲಿಲ್ಲಾ. ಇನ್ನೂ ಕೆಲವಾರು ಜನ ಆಯೋಜಕರು ಬಂದು ಎಲ್ಲೋ ಏನೋ ತಪ್ಪಾಗಿದೆ ಕ್ಷಮಿಸಿ
ಬಿಡಿ ಎಂದು ಕೇಳಿದರೂ ನೊಂದವರು ಕೇಳಲಿಲ್ಲಾ. ಯಾಕೆಂದರೆ ಅವರಿಗೆಲ್ಲಾ ಪ್ರಶಸ್ತಿ ಕೊಟ್ಟಿಲ್ಲಾ ಎನ್ನುವುದಕ್ಕಿಂತಲೂ
ಪ್ರಶಸ್ತಿ ಕೊಟ್ಟಿದ್ದಾರೆಂದು ಊರೆಲ್ಲಾ ಹೇಳಿಕೊಂಡು ಬಂದಿದ್ದು ಹುಸಿಯಾಯಿತಲ್ಲಾ ಎನ್ನುವ ವೇದನೆ ಮಡುಗಟ್ಟಿತ್ತು.
ಜೊತೆಗೆ ಕರೆದುಕೊಂಡು ಬಂದ ಬಂಧುಬಾಧವರ ಮುಂದೆ ಹೀಗೆ ಪ್ರಶಸ್ತಿ ಕೊಡದೇ ಅವಮಾನಿಸಲಾಯಿತಲ್ಲಾ ಎನ್ನುವ
ನೋವು ಅವರೆದೆಯಲ್ಲಿ ಇರಿಯತೊಡಗಿತ್ತು.
ಹಾಗೆ ಅವಮಾನಿತರಾದವರಲ್ಲಿ
ಬಲು ದೊಡ್ಡ ಕಲಾವಿದೆಯರು, ಸಾಧಕಿಯರು ಇದ್ದರು. ಓಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟು ಸರೋಜಾರವರಿಗೆ
ಈಗ 79 ವರ್ಷ. ಅವರು ತಮ್ಮ ಬಂಗಾರ ಬೆಳ್ಳಿ ತಾಮ್ರದ ಪದಕಗಳ ಒಂದು ಗುಚ್ವವನ್ನೇ ಪ್ರದರ್ಶಿಸುತ್ತಾ ತಮ್ಮ
ಇಂತಹ ಜೀವನ ಸಾಧನೆಗೆ ಈ ವಾಹಿನಿ ಎಂತಾ ಅವಮಾನ ಮಾಡಿತೆಂದು ಅವಲತ್ತುಕೊಳ್ಳುತ್ತಿದ್ದರು. ಫೈನ್ ಆರ್ಟಲ್ಲಿ
ಸಾಧನೆ ಮಾಡಿದ ಡಾ.ಪ್ರಭಾ ಶಂಕರ್ ರವರಿಗೆ 77 ವರ್ಷ ವಯೋಮಾನ. ಅವಮಾನದಿಂದ ಅವರ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಪಂಕಜಾಕ್ಷಿ ಯವರು ಹರಿಕಥಾ ಕಲಾವಿದೆ.
ಅವರ ಇಡೀ ಕುಟುಂಬವೇ ಕಲೆಗಾಗಿ ಬದುಕನ್ನು ಮೀಸಲಿಟ್ಟಿದೆ. ಪಂಕಜಾಕ್ಷಿ ತಮ್ಮ ಜೊತೆಗೆ ಹತ್ತಾರು ಜನರನ್ನು
ಕರೆತಂದಿದ್ದರು. ಪ್ರಶಸ್ತಿ ಕೊಡದೇ ವಂಚಿತರಾಗಿದ್ದಕ್ಕೆ ಅವರ ಆತ್ಮವಿಶ್ವಾಸವೇ ಕುಸಿದುಹೋಗಿತ್ತು. ಶಿಲ್ಪಕಲೆಯಲ್ಲಿ ಸಾಧನೆ ಮಾಡಿದ ಅನುಪಮಾ, ಸಮಾಜಸೇವೆ ಮಾಡುತ್ತಿರುವ
ಮಂಗಲಾ ಪಾಟೀಲ್.. ಹೀಗೆ ಹಲವಾರು ಮಹಿಳೆಯರು ತಮಗಾದ ಅವಮಾನದಿಂದ ಅತ್ಯಂತ ಆತಂಕಕ್ಕೊಳಗಾಗಿದ್ದರು. ಇವರೆಲ್ಲರಿಗಿಂತಾ
ನೋವನ್ನು ಮೌನವಾಗಿ ಸಹಿಸಿಕೊಂಡು ಅಸಹಾಯಕತೆಯಿಂದಾ ಮೂಲೆಯಲ್ಲಿ ನಿಂತಿದ್ದವರು ಮೂರ್ನಾಲ್ಕು ಜನ ವಿಕಲಚೇತನರು.
ಹೀಗೆ ಕಲಾವಿದರನ್ನು, ಅದರಲ್ಲೂ ಮಹಿಳಾ ಸಾಧಕಿಯರನ್ನು, ವೃದ್ದರನ್ನು, ಅಂಗವಿಕಲಚೇತನರನ್ನು ಪ್ರಶಸ್ತಿ
ಕೊಡುತ್ತೇವೆ ಕುಟುಂಬ ಪರಿವಾರ ಸಮೇತರಾಗಿ ಬನ್ನಿ ಎಂದು ಕರೆದು ಪ್ರಶಸ್ತಿ ಕೊಡದೇ ಅವಮಾನಿಸಿದ್ದಕ್ಕೆ
ಇಡೀ ಸುವರ್ಣ ವಾಹಿನಿ ಹಾಗೂ ಕನ್ನಡ ಪ್ರಭ ಬಳಗ ತಲೆತಗ್ಗಿಸಬೇಕಿದೆ. ಆದರೆ.. ಮನುಷ್ಯ
ಸಂಬಂಧದ ಸೂಕ್ಷ್ಮತೆಗಳನ್ನೇ ಕಳೆದುಕೊಂಡ, ಭಾವನೆಗಳನ್ನು ವ್ಯಾಪಾರದ ಸರಕಾಗಿಸಿಕೊಂಡ ಈ ಮೀಡಿಯಾಂಗದ
ಉದ್ಯಮಿಗಳಿಗೆ ಹಾಗೂ ನೌಕರರಿಗೆ ಸೂಕ್ಷ್ಮ ಮನಸ್ಸಿನ ತಲ್ಲಣ ತಳಮಳಗಳು ಅದು ಹೇಗೆ ತಾನೇ ಅರಿವಾಗಬೇಕು.
ಇಷ್ಟಕ್ಕೂ ಸುವರ್ಣ ವಾಹಿನಿ
ಕೊಡಮಾಡುವ ಸಾಧಕಿಯರ ಅವಾರ್ಡ ಲಕ್ಷಾಂತರ ಹೋಗಲಿ ಸಾವಿರಾರು ರೂಪಾಯಿಗಳನ್ನು ಒಳಗೊಂಡಿದೆಯಾ ಎಂದರೆ ಅದೂ
ಇಲ್ಲಾ. ಕೇವಲ ಒಂದು ಸ್ಮರಣ ಫಲಕದ ಜೊತೆಗೊಂದು ಮೊಮೆಂಟೋ
ಕೊಟ್ಟು ಕೈಗೊಂದು ಹೂಗುಚ್ಚ ಇಟ್ಟು ಒಂದು ನಿಮಿಷದಲ್ಲಿ ಸನ್ಮಾನ ಎನ್ನುವ ಶಾಸ್ತ್ರ ಮುಗಿಸಿ ಪ್ರಶಸ್ತಿಗೆ
ಆಯ್ಕೆಗೊಂಡವರನ್ನು ಕಳುಹಿಸಲಾಗುತ್ತಿತ್ತು. ಬೇರೆ ಬೇರೆ ದೂರದ ಊರುಗಳಿಂದ ಸ್ವಂತ ಖರ್ಚು ಮಾಡಿಕೊಂಡು
ಬಂದಿದ್ದ ಸಾಧಕಿಯರ ಕೈಗೆ ಹೂಗುಚ್ಚದ ಜೊತೆಗೆ ಒಂದಿಷ್ಟು
ಕ್ಯಾಶ್ ಅವಾರ್ಡ್ ಕೊಡಬಹುದಾಗಿತ್ತು. ಆದರೆ.. ಹೆಚ್ಚು ಹಣ ಖರ್ಚು ಮಾಡದೇ ಟಿಆರ್ಪಿ ಪಡೆದು ಪ್ರಚಾರವನ್ನು
ಪಡೆಯುವುದು ಈ ವಾಹಿನಿಯ ಉದ್ದೇಶವಾಗಿತ್ತು. ಅದಕ್ಕೆ ಮಹಿಳಾ ಸಾಧಕಿಯರು ಬೇಕಾಗಿತ್ತು. ಕೆಲವರು ಸಿಕ್ಕಷ್ಟೇ ಸಾಕು ಟಿವಿಯಲ್ಲಿ ಬರುತ್ತೇವಲ್ಲಾ ಎಂಬ
ಅಲ್ಪತೃಪ್ತಿಯಿಂದಾ ಊರಿನ ದಾರಿ ಹಿಡಿದರೆ, ಪ್ರಶಸ್ತಿ ಪಡೆಯಲು ಆಹ್ವಾನಿತರಾಗಿ ಬಂದ ಹಲವಾರು ಮಹಿಳಾ
ಸಾಧಕಿಯರು ಅತೃಪ್ತಿಯಿಂದಾ ಆಯೋಜಕರನ್ನು ಶಪಿಸುತ್ತಾ ಮನೆಗೆ ಹೊರಟರು.
ಕೊನೆಗೂ ಅರ್ಧದಷ್ಟು ಜನರು
ವಾಹಿನಿಯ ಆವಾಂತರವನ್ನು ಬೈದುಕೊಳ್ಳುತ್ತಲೇ ನಿರಾಸೆಯಿಂದಾ ಮನೆಯ ದಾರಿ ಹಿಡಿದರು. ಇನ್ನು ಕೆಲವರು ಗಟ್ಟಿದ್ವನಿಯಲ್ಲಿ ತಮ್ಮ ಪ್ರತಿರೋಧವನ್ನು
ವ್ಯಕ್ತಪಡಿಸಿ ಕೋಣನ ಮುಂದೆ ಕಿನ್ನುರಿ ಬಾರಿಸಿದರೆ ಏನೂ ಪ್ರಯೋಜನವಿಲ್ಲವೆಂದು ತಿಳಿದುಕೊಂಡು ಬಂದ
ದಾರಿಗೆ ಸುಂಕವಿಲ್ಲವೆಂದು ಸುರಿಯುತ್ತಿರುವ ಮಳೆನೀರಲ್ಲಿ ಅಕ್ಕಪಕ್ಕದವರಿಗೆ ಕಾಣದಂತೆ ನಮ್ಮ ಕಣ್ಣೀರನ್ನು
ಒರೆಸಿಕೊಳ್ಳುತ್ತಲೇ ಮನೆ ದಾರಿ ಹಿಡಿದರು. ಆಗ ಕನ್ನಡಪ್ರಭದ ಸಂಪಾದಕರಾದ ರವಿ ಹೆಗಡೆಯವರು ಓಡಿ ಬಂದವರು
ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.
ಪ್ರಶಸ್ತಿ ವಂಚಿತರೆಲ್ಲಾ ಮನೆಗೆ ಹೋಗಿ ನಾಲ್ಕಾರು ಜನರು ಮಾತ್ರ ಉಳಿದದ್ದನ್ನು ನೋಡಿ ಡ್ಯಾಮೇಜ್
ಕಂಟ್ರೋಲ್ ಮಾಡಲು ಮುಂದಾದರು. ಇದ್ದಕ್ಕಿದ್ದಂತೆ ವಿಶೇಷ ಜ್ಯೂರಿ ಅವಾರ್ಡ ಕೊಡುತ್ತೇವೆಂದು ಘೋಷಿಸಿದರು. ಆದರೆ ಆ ನಾಲ್ಕು
ಜನಕ್ಕೆ ಕೊಡಲು ಪ್ರಶಸ್ತಿ ಫಲಕಗಳೆಲ್ಲಿವೆ. ಮಾಡಿಸಿದ್ದೇ ಹನ್ನೊಂದು. ಹನ್ನೊಂದು ಜನಕ್ಕೆ ಕೊಟ್ಟಾಗಿದೆ.
ಇನ್ನೂ ಕೊಡಬೇಕೆಂದರೂ ಅಲ್ಲಿ ಫಲಕಗಳಿಲ್ಲಾ. ಸರಿ ಯಾರದೋ ಒಂದು ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು
ಪಡೆದುಕೊಂಡು ಅದನ್ನೇ ನಾಲ್ಕೂ ಜನರಿಗೆ ಒಬ್ಬರಾದ ಮೇಲೆ ಒಬ್ಬರಂತೆ ಕೊಟ್ಟು, ಕಿವಿಗಿಡುವ ಬದಲು ಕೈಗೊಂದು
ಹೂಗುಚ್ಚ ಕೊಟ್ಟು ಸಮಾಧಾನ ಮಾಡಿ ಕಳುಹಿಸಿದರು. ಆದರೆ.. ನಾಲ್ಕು ಜನರಿಗೆ ಸಮಾಧಾನ ಮಾಡಿ ಪಾಪ ಪರಿಹಾರ
ಮಾಡಿಕೊಂಡಂತೆ ಈ ವಾಹಿನಿಯವರು ನಡೆದುಕೊಂಡರಾದರೂ ಅವಮಾನಿತರಾಗಿ ನೋವು ಹಾಗೂ ಮುಜುಗರವನ್ನು ಅನುಭವಿಸಿ
ತಲ್ಲಣಗೊಂಡು ಮನೆಗೆ ತೆರಳಲಿದ ಆ ನಲವತ್ತಕ್ಕೂ ಮಿಕ್ಕಿದ ತಾಯಂದಿರ ಮಾನಸಿಕ ಸಂಕಟಕ್ಕೆ ಪರಿಹಾರವಾದರೂ
ಏನು? ವಾಹಿನಿಯ ಟಿಆರ್ಪಿ ಆಟಕ್ಕೆ, ಪ್ರಚಾರದ ಹುಚ್ಚಾಟಕ್ಕೆ ಕಲಾವಿದೆಯರು ಹಾಗೂ ಮಹಿಳಾ ಸಾಧಕಿಯರು
ಅವಮಾನಿತರಾಗಬೇಕೆ? ರವಿ ಹೆಗಡೆ, ಜೋಗಿ ಯವರಂತಹ ಸೂಕ್ಷ್ಮ ಮನಸ್ಸಿನ ಪ್ರತಿಭಾವಂತ ಬರಹಗಾರ ಪತ್ರಕರ್ತರು
ಇರುವಾಗಲೂ ಈ ರೀತಿಯ ಅನ್ಯಾಯ ಅದೂ ಮಹಿಳೆಯರ ಮೇಲೆ ನಡೆಯಬೇಕಿತ್ತೇ? ಕಲಾವಿದರು ಸಾಧಕರು ಅಂದರೆ ಈ ಟಿವಿ
ವಾಹಿನಿಗಳ ಪ್ರಚಾರಕ್ಕೆ ಬಳಕೆಯಾಗಬಹುದಾದ ಸರಕುಗಳೇ? ನಾಡಿನ ಪ್ರಜ್ಞಾವಂತರು ಮಹಿಳಾ ಸಾಧಕಿಯರಿಗಾದ
ಈ ಅನ್ಯಾಯವನ್ನು ಖಂಡಿಸಬೇಕಿದೆ. ವಾಹಿನಿಗಳ ಬೇಜವಾಬ್ದಾರಿತನವನ್ನು ಪ್ರತಿಭಟಿಸಬೇಕಿದೆ. ಹಾಗೂ ಅವಮಾನಿತರಾಗಿ
ನೊಂದುಕೊಂಡು ಹೋದ ಆ ಮಹಿಳಾ ಸಾಧಕಿಯರಿಗೆ ಸಾಂತ್ವನವನ್ನು ಹೇಳಬೇಕಿದೆ. ವಾಹಿನಿಗಳು ಕರೆದರೆಂದು ಹಿಂದು
ಮುಂದು ನೋಡದೇ ಕುಟುಂಬ ಪರಿವಾರ ಸಮೇತರಾಗಿ ಪ್ರಶಸ್ತಿ ಪಡೆಯಲು ಹೋಗುವ ಮುಂಚೆ ವಾಹಿನಿಗಳು ತಮ್ಮ ಲೆಟರ್ಹೆಡ್ನಲ್ಲಿ ಬರವಣಿಗೆ ರೂಪದಲ್ಲಿ ಆಹ್ವಾನ ಮಾಡಬೇಕೆಂದು ಡಿಮಾಂಡ್ ಮಾಡಬೇಕಿದೆ.
ಅದಕ್ಕಿಂತ ಮುಖ್ಯವಾಗಿ ಪ್ರಶಸ್ತಿಗಳನ್ನು ಕೊಡಿ ಎಂದು ಅರ್ಜಿ ಹಾಕಿ ಈ ವಾಹಿನಿಗಳ ಮರ್ಜಿ ಕಾಯುವುದನ್ನು
ಬಿಡಬೇಕಿದೆ. ಬೇಕಾದರೆ ಅವರೇ ಸಾಧನೆಯನ್ನು ಗುರುತಿಸಿ ಅಧಿಕೃತವಾಗಿ ತಿಳಿಸಿ ಪ್ರಶಸ್ತಿಗಳನ್ನು ಕೊಡಲಿ.
ಇಲ್ಲವಾದರೆ ಕಳೆದುಕೊಳ್ಳುವಂತಹುದೇನೂ ಇಲ್ಲಾ.. ಮಾಧ್ಯಮೋಧ್ಯಮದ ವ್ಯಾಪಾರದ ಸರಕಾಗುವ ಬದಲು ತಮ್ಮ ಕ್ಷೇತ್ರಗಳಲ್ಲಿ
ಸಾಧನೆಯನ್ನು ಮುಂದುವರೆಸುವುದು ಉತ್ತಮ.
ಇಷ್ಟೆಲ್ಲಾ ರಾದ್ದಾಂತದ ನಡುವೆಯೂ
ರಂಗಭೂಮಿ ಕ್ಷೇತ್ರದಿಂದ ಯುವ ಕಲಾವಿದೆ ನಯನ ಸೂಡರಿಗೆ ಸುವರ್ಣ ಸಾಧಕಿಯರ ಪ್ರಶಸ್ತಿ ದೊರಕಿದ್ದು ಸಮಾಧಾನಕರ.
ಬಾಲ ಕಲಾವಿದೆಯಾದ ಈ ಯುವತಿ ರಂಗಭೂಮಿಯಲ್ಲಿ ಪೂರ್ಣಾವಧಿಯಾಗಿ ತೊಡಗಿಕೊಂಡಿದ್ದು ಚಂದ್ರಗಿರಿ ತೀರದಲ್ಲಿ
ನಾಟಕವನ್ನು ನಿರ್ದೇಶನ ಮಾಡಿ ಯಶಸ್ವಿಯಾಗಿದ್ದಾರೆ. ನಯನ ಸೂಡ ಹಾಗೂ ಅವರ ಪತಿ ರಾಜು ಹೊಸಕೋಟೆ ದಂಪತಿಗಳ ರಂಗಬದ್ಧತೆ ಪ್ರಶ್ನಾತೀತ. ರಂಗಪಯಣ ಎನ್ನುವ ರಂಗತಂಡವನ್ನು
ಕಟ್ಟಿಕೊಂಡು ನಿರಂತರವಾಗಿ ನಾಟಕಗಳನ್ನು ಮಾಡುತ್ತಲೇ ಇದ್ದಾರೆ. ಅಪಾರ ಸಿದ್ಧತೆ ಹಾಗೂ ರಂಗಬದ್ದತೆಯಿಂದಾ
ರಂಗಕಾರ್ಯ ಮಾಡುತ್ತಿರುವ ನಟಿ ನಿರ್ದೇಶಕಿ ರಂಗಸಂಘಟಕಿ ನಯನ ಸೂಡರವರಿಗೆ ಸುವರ್ಣ ಮಹಿಳಾ ಸಾಧಕಿಯರ
ಪ್ರಶಸ್ತಿ ಬಂದಿದ್ದು ರಂಗಭೂಮಿಗೆ ಹೆಮ್ಮೆ ತರುವಂತಹ ವಿಚಾರ ಹಾಗೂ ಪ್ರಶಸ್ತಿಗೂ ಒಂದು ಗೌರವ ತರುವ
ಸಂಗತಿಯಾಗಿದ್ದು ಪ್ರಶಸ್ತಿ ಪಡೆದ ನಯನಾಳಿಗೆ ಅಭಿನಂದನೆಗಳು.
- ಶಶಿಕಾಂತ ಯಡಹಳ್ಳಿ