ಶುಕ್ರವಾರ, ಏಪ್ರಿಲ್ 28, 2017

ತಹ ತಹ…. 89 ಬಸವ ಜಯಂತಿಗೊಂದೇ ವಚನ ಸಾಕು; ಎಲ್ಲರೂ ಮನುಷ್ಯರಾಗಬೇಕು :





ಮತ್ತೊಂದು ಬಸವ ಜಯಂತಿ ಬಂದಿದೆ. ಪ್ರತಿಸಲದಂತೆ ಬಸವ ಜಯಂತಿ ಎನ್ನುವುದು ವಾರ್ಷಿಕ ಧಾರ್ಮಿಕ ಆಚರಣೆಯಂತಾಗಿದೆ. ಎಲ್ಲಾ ಸರಕಾರಿ ಕಛೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕಲು ಸರಕಾರದ ಆದೇಶವಾಗಿದೆ.  ಬಸವಣ್ಣನವರ ಹೆಸರಲ್ಲಿ ಭಜನೆ ಭಾಷಣಗಳು ನಾಡಿನಾದ್ಯಂತ ಪ್ರತಿದ್ವನಿಸುತ್ತಿವೆ. ಪರಸ್ಪರ ಶುಭಾಷಯಗಳು ವಿನಿಮಯವಾಗುತ್ತಿವೆ. ಆದರೆ.. ಬಸವಣ್ಣನವರ ತತ್ವಾದರ್ಶಗಳು ವ್ಯಕ್ತಿಯ ಅಂತರಂಗದ ಅರಿವಿಗೆ ಮುಟ್ಟದೇ ಕೇವಲ ಬಹಿರಂಗಾಚರಣೆಗಳಿಗೆ ಸೀಮಿತವಾಗಿರುವುದು ವಿಪರ್ಯಾಸಕರವಾಗಿದೆ.   

ಶರಣರ ಸಿದ್ದಾಂತದ ಮೇಲೆ ನಿಜವಾಗಿಯೂ ಒಲವಿದ್ದರೆ.. ಯಾರಾದರೂ ಬಸವಾನುಯಾಯಿ ಎಂದು ಹೇಳಿಕೊಳ್ಳುತ್ತಿದ್ದರೆ .. ಅಂತವರು ಬಸವಣ್ಣನವರ ಸಾವಿರಾರು ವಚನಗಳನ್ನು ಅರಗಿಸಿಕೊಳ್ಳುವುದೇನೂ ಬೇಕಾಗಿಲ್ಲಾ, ಶರಣರ ಸಹಸ್ರಾರು ವಚನಗಳ ಅಧ್ಯಯನದ ಅಗತ್ಯವೂ ಇಲ್ಲಾ.. ನಿಜವಾಗಿ ಮನುಷ್ಯನಾಗಲು ಬಸವಣ್ಣನವರ ಒಂದೇ ಒಂದು ವಚನವನ್ನು ಬಸವಾನುಯಾಯಿಗಳಾದ ಎಲ್ಲರೂ ತಮ್ಮ ಬದುಕಲ್ಲಿ ಅಳವಡಿಸಿಕೊಂಡರೆ ಸಾಕು ಪರಸ್ಪರ ಶಾಂತಿ ಸೌಹಾರ್ಧತೆ ನೆಮ್ಮದಿಯಿಂದಾ ಸಾಮುದಾಯಿಕ ಬದುಕು ಕಟ್ಟಿಕೊಳ್ಳಲು ಸಾಧ್ಯ.

ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ದಿ,
ಇದೇ ನಮ್ಮ ಕೂಡಲಸಂಗಮ ದೇವನೊಲಿಸುವ ಪರಿ

ಎನ್ನುವ ಅತ್ಯಂತ ಸರಳವಾದ ವಚನ ಬಹುತೇಕರಿಗೆ ಕಂಠಗತವಾಗಿದೆ. ಬಸವಾನುಯಾಯಿಗಳು ತಮ್ಮ ಎಲ್ಲಾ ಸಭೆ ಸಮಾರಂಭ ಕೂಟಗಳಲ್ಲಿ ಇದನ್ನು ಹೇಳುತ್ತಾ ಕೇಳುತ್ತಾ ಇರುತ್ತಾರೆ. ಆದರೆ.. ಈ ವಚನ ಹೇಳಿದಂತೆ ಯಾರೆಂದರೆ ಯಾರೂ ನಡೆದುಕೊಳ್ಳಲು ಹೋಗುತ್ತಿಲ್ಲಾ.. ಈ ಮಾತಿಗೆ ಬಸವ ತತ್ವ ಪ್ರಚಾರಕರು ಎಂದುಕೊಂಡ ಶರಣ ಮಠ ಪೀಠಗಳ ಜಗದ್ಗುರುಗಳೂ ಹೊರತಾಗಿಲ್ಲಾ.

ಈಗ ಈ ವಚನವೇ ನೇತ್ಯಾತ್ಮಕವಾಗಿ ಬದಲಾಗಿದೆ. ಬದಲಾಗುತ್ತಿರುವ ಕಾಲದ ಆವೇಗದಲ್ಲಿ ತನ್ನ ಚಹರೆಯನ್ನು ಬದಲಿಸಿಕೊಂಡಿದೆ.

ಕಳಬೇಕು ಕೊಲಬೇಕು, ಹುಸಿಯ ನುಡಿಯಲು ಬೇಕು,
ಮುನಿಯಬೇಕು, ಅನ್ಯರಿಗೆ ಅಸಹ್ಯಪಡಬೇಕು,
ತನ್ನ ಬಣ್ಣಿಸಬೇಕು, ಇದಿರ ಹಳಿಯಲುಬೇಕು,
ಹೀಗೆ ಅಂತರಂಗವ ತಿದ್ದಿ,  ಬಹಿರಂಗಶುದ್ದಿ ಎಂದು ತೋರಿ,
ಇದೇ ನಮ್ಮ ದುರಾಸೆಗಳ ವಲಸಿಕೊಳ್ಳುವ ಪರಿ


ಎಂಬುದು ಬಹುತೇಕ ವ್ಯಕ್ತಿಯ ಅಂತರಂಗದ ಅಭೀಷ್ಟೆಯಾಗಿದೆ. ಅಕಸ್ಮಾತ್ ಯಾರಾದರೂ ಈ ವಚನವನ್ನು ಅಕ್ಷರಶಃ ಪಾಲಿಸಲು ಆರಂಭಿಸಿದರೆ ಆಗ ಸಹಜೀವಿಗಳಿಂದ ಅಪಹಾಸ್ಯಕ್ಕೊಳಗಾಗುವ ಹಾಗೂ ಬದುಕಿನಲ್ಲಿ ಏನನ್ನೂ ಸಾಧಿಸದ ಅಪ್ರಯೋಜಕ ವ್ಯಕ್ತಿ ಎಂದು ಸಮಾಜ ನಿಂದಿಸುತ್ತದೆ. ಕಳ್ಳತನ, ಸುಳ್ಳುತನ, ಸಿಟ್ಟು ಅಸಹನೆ, ಶ್ರೇಷ್ಠತೆಯ ವ್ಯಸನ ಹಾಗೂ ಅಸಹಿಷ್ಣುತತೆಗಳೇ ಮನುಷ್ಯನ ಬದುಕಿನ ಭಾಗವಾಗಿರುವಾಗ ಹಾಗೂ ಬಂಡವಾಳಶಾಹಿ ಪ್ರಭುತ್ವ ಎನ್ನುವುದು ಅಂತಹ ಭ್ರಷ್ಟ ವ್ಯವಸ್ಥೆಯೊಂದನ್ನು ಕಟ್ಟಿಕೊಟ್ಟಿರುವಾಗ ವ್ಯಕ್ತಿ ಬಸವತತ್ವಕ್ಕೆ ಬದ್ದನಾಗಿರಬೇಕು ಎನ್ನುವುದೇ ಅತೀ ಆದರ್ಶವಾದವೆನಿಸುತ್ತದೆ. ಹೀಗಾಗಿ ಬಸವಾದಿ ಶಿವಶರಣರ ವಚನಗಳು ಹಾಗೂ ವಸವತತ್ವ ಶರಣ ಸಿದ್ದಾಂತಗಳು ಕೇವಲ ಹೇಳಲಿಕ್ಕೆ ಕೇಳಲಿಕ್ಕೆ ಹಾಗೂ ತಮಗನುಕೂಲಕರವಾದ ರೀತಿಯಲ್ಲಿ ಬಳಸಲಿಕ್ಕೆ ಮಾತ್ರ ಬಳಕೆಯಾಗುತ್ತಿವೆಯೇ ಹೊರತು ಅಂತರಂಗಶುದ್ದಿಗಾಗಿ ಅಲ್ಲ ಎನ್ನುವುದೇ ಈ ಕಾಲದ ಬಹು ದೊಡ್ಡ ದುರಂತ. ಯಾರು ಲಿಂಗಾಯತರು ಎಂದು ಹೇಳಿಕೊಳ್ಳುತ್ತಾರೋ, ಯಾರು ಬಸವಣ್ಣನವರನ್ನು ತಮ್ಮ ಆದರ್ಶ ಎಂದು ನಂಬಿಕೊಂಡಿದ್ದಾರೋ.. ಯಾರು ನಿಜವಾದ ಅರ್ಥದಲ್ಲಿ ಮನುಷ್ಯರಾಗಬೇಕು ಎಂದುಕೊಂಡಿದ್ದಾರೋ ಅಂತವರೆಲ್ಲಾ ಬದುಕಿನಾದ್ಯಂತ ರೂಢಿಸಿಕೊಳ್ಳಬೇಕಾದದ್ದು ಬಸವಣ್ಣನವರ ಕಳಬೇಡ ಕೊಲಬೇಡ.. ವಚನವೊಂದನ್ನೇ. ಈ ವಚನದ ಆಶಯವನ್ನು ಮರೆತು ಅಂತರಂಗವ ಶುದ್ದಿಗೊಳಿಸಿಕೊಳ್ಳದೇ ಬಹಿರಂಗದ ಆಚರಣೆಗಿಳಿದರೆ ಅದು ಬಸವಣ್ಣನವರಿಗೆ ಮಾಡಿದ ಅವಮಾನವಾಗಿದೆ. ಬಸವ ಜಯಂತ ಆಚರಣೆಯೇ ವ್ಯರ್ಥವೆನಿಸುತ್ತದೆ. ಬಸವಾದಿ ಶರಣರ ಕನಿಷ್ಟ ತತ್ವ ಸಿದ್ದಾಂತ ಆದರ್ಶಗಳನ್ನು ದಿನನಿತ್ಯದ ಬದುಕಲ್ಲಿ ಅಳವಡಿಸಿಕೊಳ್ಳದೇ ಹೋದರೆ ಅಂತವರು ಬಸವಣ್ಣನವರ ಹೆಸರನ್ನು ಹೇಳುವುದು ಕೇವಲ ತೋರುಂಭ ಲಾಭವಾಗುತ್ತದೆ.ಮನುಷ್ಯ ಮೂಲಭೂತವಾಗಿ ಮೃಗ. ಅಂತರ್ಗತವಾದ ತನ್ನ ಮೃಗೀಯ ಸ್ವಭಾವವನ್ನು ಬಿಟ್ಟು ನಿಜವಾದ ಮನುಷ್ಯನಾಗಬೇಕು ಎಂದರೆ ಕೆಲವೊಂದು ಆದರ್ಶಗಳನ್ನು ಅಳವಡಿಸಿಕೊಳ್ಳಲೇಬೇಕು. ಅದರಲ್ಲಿ ಬಸವಣ್ಣನವರ ಈ ಒಂದೇ ಒಂದು ವಚನ ಪ್ರಾಕೃತಿಕವಾಗಿ ಬಂದ  ಮೃಗೀಯ ಸ್ವಭಾವವನ್ನು ಬದಲಾಯಿಸಿ ಮನುಷ್ಯರನ್ನಾಗಿಸಲು ಬಲು ದೊಡ್ಡ ಪ್ರೇರಣೆಯನ್ನು ನೀಡುತ್ತದೆ.  ಮನುಕುಲದ ಒಳಿತಿಗೆ.. ಅಂತರಂಗದ ಪರಿವರ್ತನೆಗೆ ಇದೊಂದು ವಚನ ಬೇಕಾದಷ್ಟಾಯಿತು. 


ಬುದ್ದನ ಅಷ್ಟಾಂಗ ಮಾರ್ಗವೂ ಸಹ ಇಂತಹುದೇ ಆದರ್ಶವನ್ನು ಹೇಳುತ್ತದೆ.  ಪೂರ್ಣವಾದ ದೃಷ್ಟಿ, ಆಲೋಚನೆ, ನುಡಿ, ನಡೆ, ಬದುಕು, ಕ್ರಿಯೆ, ಶ್ರದ್ಧೆ ಹಾಗೂ ಏಕಾಗ್ರತೆಗಳೆಂಬ ಅಷ್ಟಮ ಮಾರ್ಗಗಳು ಮನುಷ್ಯನ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಅಗತ್ಯವಾದವುಗಳು ಎಂದು ಬುದ್ಧ ಪ್ರತಿಪಾದಿಸಿದ್ದಾರೆ. ಬದುಕನ್ನು ನೋಡುವ ದೃಷ್ಟಿಯನ್ನು ಬದಲಾಯಿಸಿಕೊಂಡು, ಎಲ್ಲರ ಒಳಿತಿನ ಕುರಿತು ಆಲೋಚಿಸಿ, ನುಡಿ ನಡೆಯಲ್ಲಿ ಸಾಮ್ಯತೆಯನ್ನು ತಂದುಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು.  ಹಾಗೂ ಹೀಗೆ ಬದುಕನ್ನು ರೂಪಿಸಿಕೊಳ್ಳಲು ಅಪಾರವಾದ ಶ್ರದ್ಧೆ ಹಾಗೂ ಏಕಾಗ್ರತೆ ಬೇಕಾಗುತ್ತದೆ.. ಇದರಿಂದಾಗಿ ನಿರ್ವಾಣದ ಹಾದಿ ಸುಗಮವಾಗುತ್ತದೆ ಎನ್ನುವುದು ಬುದ್ದ ಮನುಕುಲಕೆ ತೋರಿದ ಬೆಳಕಾಗಿದೆ. ಬಸವಣ್ಣನವರೂ ಸಹ ಅದನ್ನೇ ತಮ್ಮ ಕಳಬೇಡ ವಚನದಲ್ಲಿ ಪ್ರತಿಪಾದಿಸಿದ್ದಾರೆ. ಅಂತರಂಗ ಹಾಗೂ ಬಹಿರಂಗ ಶುದ್ಧಿಯನ್ನು ಪಡೆದು ದೇವನನ್ನು ಮೆಚ್ಚಿಸಲು ಏನನ್ನು ಮಾಡಬಾರದು ಎಂಬುದನ್ನು ಸರಳವಾದ ವಚನದ ಮೂಲಕ ಹೇಳಿ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಸಾಕ್ಷಾತ್ಕಾರದ ಮಾರ್ಗವನ್ನು ತೋರಿದ್ದಾರೆ. ಬುದ್ಧ ಮತ್ತು ಬಸವ ಮನುಕುಲದ ಮಹಾ ಬೆಳಕು. ಅವರು ತೋರಿದ ಅರಿವಿನ ಮಾರ್ಗದಲ್ಲಿ ನಡೆದವರ ಬದುಕು ಸಾರ್ಥಕವಾಗಲು ಸಾಧ್ಯ. ಇಲ್ಲವಾದರೆ ಈ ಸಂಕೀರ್ಣ ಬದುಕಿನ ಸಂಕಷ್ಟ ಸಂಕೋಲೆಗಳು ಅಭೇದ್ಯ..


ಇಡೀ ಕಳಬೇಡ ಕೊಲಬೇಡ.. ವಚನವನ್ನು ಬದುಕಲ್ಲಿ ರೂಢಿಸಿಕೊಳ್ಳುವುದು ಅಷ್ಟು ಕಷ್ಟಕರಾವಾದರೆ ಪ್ರತಿ ಸಲದ ಬಸವ ಜಯಂತಿಯಂದು ಈ ವಚನದ ಒಂದೊಂದು ಸಾಲನ್ನಾದರೂ ಅಳವಡಿಸಿಕೊಳ್ಳೋಣ. ಈ ವರ್ಷ ಯಾವುದೇ ರೀತಿಯ ಕಳ್ಳತನವನ್ನು ಮಾಡದೇ ನಮ್ಮದಲ್ಲದ ವಸ್ತುಗಳನ್ನು ಹೇಗಾದರೂ ಮಾಡಿ ಪಡೆಯಲೇ ಬೇಕೆಂಬ ವಾಮಮಾರ್ಗಗಳನ್ನು ಅನುಸರಿಸದೇ, ಮತ್ತೊಬ್ಬರ ಶ್ರಮದ ಫಲವನ್ನು ಕದ್ದು ನಮ್ಮ ಬದುಕನ್ನು ರೂಪಿಸಿಕೊಳ್ಳದೇ ಕಾಯಕ ಮಾಡಿ ಬದುಕುವ ಕೆಲಸವನ್ನು ಮೊದಲು ಅನುಷ್ಟಾನಕ್ಕೆ ತರಬೇಕಿದೆ. ಹೀಗೆ ಪ್ರತಿ ವರ್ಷದ ಬಸವ ಜಯಂತಿಯಂದು ಈ ವಚನದ ಒಂದೊಂದು ವಾಕ್ಯವನ್ನು ಪರಿಪಾಲಿಸುವ ಪ್ರತಿಜ್ಞೆ ಮಾಡಿ ಅದನ್ನು ಆಚರಣೆಯಲ್ಲಿ ತಂದರೆ ಬಸವಣ್ಣನವರ ಹೆಸರು ಹೇಳಲು ನಾವು ಯೋಗ್ಯರಾಗುತ್ತೇವೆ. ಲಿಂಗಾಯತರು ಎಂದು ಹೇಳಿಕೊಳ್ಳುವ ಅರ್ಹತೆ ಪಡೆಯುತ್ತೇವೆ. ಮನುಷ್ಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾಗ್ಯದಾತರಾಗುತ್ತೇವೆ. ಒಂದೇ ಒಂದು ವಚನವನ್ನು ಪಾಲನೆ ಮಾಡದ ಮೇಲೆ ಯಾಕೆ ಬಸವಣ್ಣನವರ ಜಯಂತಿ ಆಚರಿಸಬೇಕು? ಒಂದು ವಚನದ ಒಂದು ಸಾಲನ್ನಾದರೂ ಬದುಕಲ್ಲಿ ಅಳವಡಿಸಿಕೊಳ್ಳದಿದ್ದರೆ ಯಾಕೆ ಲಿಂಗಾಯತ ಎಂದು ಹೇಳಿಕೊಳ್ಳಬೇಕು? ನಡೆ ನುಡಿ ಸಿದ್ದಾಂತವಾಗದೇ ಹೋದಲ್ಲಿ ಯಾಕೆ ಮನುಷ್ಯರು ಎಂದು ಅಂದುಕೊಳ್ಳಬೇಕು. ಅರಿವಿನ ಬೆಳಕು ಮೂಡದೇ ಅಂತರಂಗ ಶುದ್ಧಿ ಅಸಾಧ್ಯ. ಅಂತರಂಗ ಶುದ್ಧಿಯಾಗದೇ ಬಹಿರಂಗಶುದ್ಧಿಯಾಗದು, ಅಂತರಂಗ ಹಾಗೂ ಬಹಿರಂಗ ಶುದ್ಧಿಗಳಾಗದೇ ಮನುಷ್ಯ ಮನುಷ್ಯನಾಗಲು ಸಾಧ್ಯವಿಲ್ಲಾ. ಅಲ್ಲಿವರೆಗೂ ಬಸವ ಜಯಂತಿಗೆ ನಿಜವಾದ ಅರ್ಥವೆಂಬುದಿಲ್ಲಾ..  ತೋರುಂಭ ಲಾಭವೇ ಎಲ್ಲಾ....

- ಶಶಿಕಾಂತ ಯಡಹಳ್ಳಿ







 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ