“ನಾವೆಲ್ಲ ಹಿಂದು, ನಾವೆಲ್ಲಾ
ಒಂದು”
ಎನ್ನುವ ಮಾತು ಬಹುಜನರನ್ನು ಮರಳು ಮಾಡಿ ತಮ್ಮ ಪ್ಯಾಸಿಸ್ಟ್ ಸಾಮ್ರಾಜ್ಯ ಸ್ಥಾಪಿಸುವುದು ಸಂಘಪರಿವಾರದ
ಹಿಡನ್ ಅಜೆಂಡಾ ಅನ್ನುವುದು ಬೇಕಾದಷ್ಟು ಸಲ ಸಾಬೀತಾಗಿದೆ. ಜಾತಿ ಧರ್ಮಗಳ ಜೊತೆಗೆ ವರ್ಣಬೇಧ ನೀತಿಯನ್ನು
ತನ್ನ ಆಂತರ್ಯದಲ್ಲಿ ಕಾಪಿಟ್ಟುಕೊಂಡಿರುವ ಈ ವೈದಿಕ ಪುರೋಹಿತಶಾಹಿ ಪಡೆ ಇಡೀ ಸಮಾಜವನ್ನು ಒಡೆದಾಳುತ್ತಲೇ
ಮನುಶಾಸ್ತ್ರ ಪ್ರಣೀತ ಆಳ್ವಿಕೆಯನ್ನು ಸ್ಥಾಪಿಸಲು ಏನೇನು ಬೇಕೋ ಅದನ್ನು ಮಾಡುತ್ತಲೇ ಬಂದಿದ್ದಾರೆ.
ಇದಕ್ಕೆ ಲೇಟೆಸ್ಟ್ ಉದಾಹರಣೆ ಈ ದೇಶದ ಜನರನ್ನು ಚರ್ಮದ ಬಣ್ಣದ ಮೇಲೆ ವಿಭಾಗೀಕರಣ ಮಾಡಲು ಪ್ರಯತ್ನಿಸುತ್ತಿರುವುದು.
ಇದು ಈಗಿನದು ಮಾತ್ರವಲ್ಲ.. ಮೊದಲಿನಿಂದಲೂ ಆರ್ಯ ದ್ವಾವಿಡ ಬೇಧವನ್ನು ವರ್ಣದ ಆಧಾರದ ಮೇಲೆ ಹುಟ್ಟುಹಾಕಿದ
ಈ ಆರ್ಯಸಂತಾನ ಕಪ್ಪು ವರ್ಣೀಯರನ್ನು ಎರಡನೇ ದರ್ಜೆಯ ಪ್ರಜೆಗಳೆಂದೇ ಭಾವಿಸುತ್ತಾ ಬಂದಿದ್ದಾರೆ.
ಆರೆಸ್ಸೆಸ್ಸಿನ ಕೊಳೆತ ಮೆದುಳೊಂದು
ಈಗ ಈ ವರ್ಣ ತಾರತಮ್ಯವನ್ನು ಬಹಿರಂಗವಾಗಿಯೇ ಹೇಳಿಕೊಂಡಿದೆ. ತರುಣ್ ವಿಜಯ್ ಎನ್ನುವ ಈ ವ್ಯಕ್ತಿ ಆರೆಸ್ಸೆಸ್ಸ್
ಮುಖವಾಣಿ ಪತ್ರಿಕೆಯಾದ “ಪಾಂಚಜನ್ಯ”ದ ಸಂಪಾದಕನಾಗಿದ್ದವ. ತನ್ನ
ಕೋಮುದ್ವೇಷದ ವಿಕಾರತೆಗಳಿಂದಾಗಿಯೇ ಬಿಜೆಪಿಯಿಂದಾ ರಾಜ್ಯಸಭೆಯ ಸದಸ್ಯರೂ ಆಗಿದ್ದವ. ಈಗಲೂ ಆರೆಸ್ಸೆಸ್
ಕೃಪಾಶೀರ್ವಾದದಿಂದ “ಆಪ್ರಿಕಾ ಪಾರ್ಲಿಮೆಂಟರಿ ಪ್ರೆಂಡ್ಶಿಪ್ ಗ್ರುಪ್” ನ ಅಧ್ಯಕ್ಷರಾಗಿರುವವ. ಆಗಿದ್ದೇನಪ್ಪಾ
ಅಂತಂದ್ರೆ..
ಕತಾರ್ ಮೂಲದ ಅಲ್ ಜಝೀರಾ ಎನ್ನುವ
ಸುದ್ದಿ ವಾಹಿನಿ ಕಾರ್ಯಕ್ರಮವೊಂದರಲ್ಲಿ ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ತರುಣ್ ಮಹಾಶಯ ಪ್ರಶ್ನೆಯೊಂದಕ್ಕೆ
ಉತ್ತರಿಸುತ್ತಾ “ಭಾರತೀಯರು ಜನಾಂಗೀಯ ದ್ವೇಷಿಗಳಲ್ಲ. ಜನಾಂಗೀಯ ದ್ವೇಷಿಗಳಾಗಿದ್ದರೆ
ದಕ್ಷಿಣ ಭಾರತದವರ ಜತೆ ಹೇಗೆ ಬದುಕುತ್ತಿದ್ದೆವು. ನಿಮಗೆ ಗೊತ್ತಲ್ಲಾ ತಮಿಳರು, ಕೇರಳಿಗರು, ಕರ್ನಾಟಕ
ಮತ್ತು ಆಂದ್ರದವರ ಜತೆ ನಾವೇಕೆ ಬದುಕುತ್ತಿದ್ದೆವು?” ಎಂದು ಮರುಪ್ರಶ್ನಿಸುತ್ತಾ
ತನ್ನ ಮನದಾಳದ ಜನಾಂಗೀಯ ದ್ವೇಷವನ್ನು ಕಾರಿಕೊಂಡ. ಇದು ಈ ತರುಣ್ ವಿಜಯ್ ಎನ್ನುವ ಸಂಘಪರಿವಾರದ ಬುದ್ದಿಜೀವಿಯೊಬ್ಬನ
ವ್ಯಯಕ್ತಿಕ ಅಭಿಪ್ರಾಯವಲ್ಲಾ.. ತಮ್ಮ ಬಿಳಿ ಬಣ್ಣದ ಬಗ್ಗೆ ಶೇಷ್ಟತೆಯ ವ್ಯಸನ ಹೊಂದಿರುವ ಉತ್ತರ ಭಾರತದ
ಆರ್ಯ ಮೂಲದವರ ಒಟ್ಟಾರೆ ಅಭಿಪ್ರಾಯವಾಗಿದೆ. ಸಮಾಜವನ್ನು ಜಾತಿ ಧರ್ಮ ಹಾಗೂ ವರ್ಣದ ಆಧಾರದ ಮೇಲೆ ಶತಮಾನಗಳಿಂದ
ಒಡೆದು ಆಳುತ್ತಲೇ ಬಂದಿರುವ ಈ ಮನುವಾದಿ ಸಂತಾನಗಳಿಂದ ಇದಕ್ಕಿಂತಾ ಹೆಚ್ಚಿಗೆ ಇನ್ನೇನು ತಾನೇ ನಿರೀಕ್ಷಿಸಲು
ಸಾಧ್ಯ?
ಇವತ್ತೂ ಸಹ ಉತ್ತರ ಭಾರತದವರಲ್ಲಿ
ಅದರಲ್ಲೂ ಈ ವರ್ಣ ಶ್ರೇಷ್ಠತೆಯ ವ್ಯಸನಪೀಡಿತರಲ್ಲಿ ದಕ್ಷಿಣ ಭಾರತದವರ ಬಗ್ಗೆ ಒಂದು ರೀತಿಯ ಅಸಡ್ಡೆ
ಮಡುಗಟ್ಟಿದೆ. ದಕ್ಷಿಣ ಭಾರತೀಯರನ್ನು ಅಣಕಿಸಲು ಮದ್ರಾಸಿಗಳೆಂದು ಕರೆದು ಮೂದಲಿಸಲಾಗುತ್ತಿದೆ. ತಮ್ಮ
ಹಾಗೆ ಹಿಂದಿ ಭಾಷೆ ಮಾತಾಡದವರನ್ನು, ತಮ್ಮ ಹಾಗೆ ಬಿಳಿ ಚರ್ಮ ಹೊಂದಿಲ್ಲದವರನ್ನು ಮದ್ರಾಸಿ ಎಂದು ಅವಹೇಳನ
ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಉತ್ತರದ ಉತ್ತಮರೆಂದುಕೊಂಡವರು ತೋರಿಸುತ್ತಾರೆ. ಅಂದರೆ ಈ ಉತ್ತರಭಾರತದ
ಆರ್ಯೊತ್ತಮರ(?) ಕಣ್ಣಲ್ಲಿ ದಕ್ಷಿಣದವರು ಅಧಮರು, ಅನಾಗರಿಕರಾಗಿ ಕಾಣಿಸುತ್ತಾರೆ. ಅದಕ್ಕಾಗಿಯೇ ಆರ್ಯ
ರಾಮನನ್ನು ಆರಾಧಿಸುತ್ತಲೇ ದ್ವಾವಿಢ ರಾವಣನನ್ನು ರಾಕ್ಷಸ ಎಂದು ಕಥೆ ಕಟ್ಟಿದವರು ಇದೇ ಆರ್ಯಜನಾಂಗದವರು.
ಎಲ್ಲೆಲ್ಲಿಂದಲೋ ಒಲಸೆ ಬಂದ ಈ ಆರ್ಯ ಜನಾಂಗದವರು, ಕಾಡುವಾಸಿಗಳಾಗಿದ್ದ ಶ್ರಮಿಕರಾದ ದ್ರಾವಿಡ ಜನಾಂಗದವರನ್ನು
ರಾಕ್ಷಸರು, ಹಿಂಸಕರು, ಅನಾಗರಿಕರು ಎಂದು ಆರೋಪಿಸಿ ಹಿಂಸೆ ಆಕ್ರಮಣಗಳ ಮೂಲಕ ಸಂವಾರ ಮಾಡಲು ಪ್ರಯತ್ನಿಸಿದವರು
ಇದೇ ಆರ್ಯಪುತ್ರರು. ದೇವತೆಗಳು ಹಾಗೂ ರಾಕ್ಷಸರ ಕಥೆಗಳನ್ನು ರೋಚಕವಾಗಿ ಕಟ್ಟಿ ಆರ್ಯವಿರೋಧಿ ರಕ್ಕಸ
ರಾಜರ ಸಂವಾರಕ್ಕಾಗಿ ಅವತಾರಗಳನ್ನು ಹುಟ್ಟುಹಾಕಿದರು. ಆರ್ಯರು ಉತ್ತಮರು ಹಾಗೂ ಶಿಷ್ಟ ರಕ್ಷಕರು ಮತ್ತು
ದ್ರಾವಿಡರು ಅಧಮರು ಹಾಗೂ ದುಷ್ಟರು ಎಂದು ಸಾಬೀತು ಪಡಿಸಲು ಶಾಸ್ತ್ರ ಪುರಾಣ ಮಹಾಕಾವ್ಯಗಳನ್ನು ಹುಟ್ಟುಹಾಕಿದವರು.
ಇಂತದೇ ಉತ್ತಮರೆನಿಸಿಕೊಂಡವರ ಸಂತಾನಗಳು ಇಂದು ಮತ್ತೆ
ಚರ್ಮದ ಬಣ್ಣದ ಆಧಾರದ ಮೇಲೆ ಮನುಷ್ಯರನ್ನು ಒಡೆದಾಳಲು ಪ್ರಯತ್ನಿಸುತ್ತಿವೆ. ಅಂತಹ ಶ್ರೇಷ್ಟತೆ ವ್ಯಸನದ
ವ್ಯಾಧಿಪೀಡಿತ ಸಂಘಪರಿವಾರದ ಕುಡಿಯೇ ಈ ತರುಣ್ ವಿಜಯ್.
ಇದು ತರುಣ್ ಒಬ್ಬನ ಅನಿಸಿಕೆಯಾಗಿದ್ದರೆ
ನಿರ್ಲಕ್ಷಿಸಬಹುದಾಗಿತ್ತು. ಆದರೆ.. ಆರ್ಯಕುಲತಿಲಕರೆಂಬ ಭ್ರಮೆಯಲ್ಲಿರುವ ವೈದಿಕಶಾಹಿಗಳ ಒಟ್ಟಾರೆ
ಅಭಿಪ್ರಾಯವಾಗಿದ್ದು ಅಪಾಯಕಾರಿಯಾಗಿದೆ. ದಕ್ಷಿಣ ಭಾರತೀಯ ಸಂಘಪರಿವಾರದ ಸಮರ್ಥಕರುಗಳು ಸಂಘಿಗಳ ಹಿಡನ್
ಅಜೆಂಡಾ ಆಗಿರುವ ಈ ವರ್ಣಬೇಧ ನೀತಿಯನ್ನು ಮೊದಲು ತಿಳಿದುಕೊಳ್ಳಬೇಕಿದೆ. ಈ ದೇಶದ ಮತಿಕೆಟ್ಟು ಮುಂದೊಮ್ಮೆ
ಈ ಸಂಘಿಗಳ ಪ್ಯಾಸಿಸ್ಟ್ ಸರ್ವಾಧಿಕಾರ ಈ ದೇಶದಲ್ಲಿ ಜಾರಿಯಾಗಿ ಮನುಸ್ಮೃತಿ ಸಂವಿಧಾನವಾದಲ್ಲಿ ದಕ್ಷಿಣ
ಭಾರತದ ದ್ರಾವಿಡರೆಲ್ಲಾ ಎರಡನೇ ದರ್ಜೆಯ ಪ್ರಜೆಗಳಾಗುತ್ತಾರೆ. ಅವರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದರೂ
ಕರಿ ಬ್ರಾಹ್ಮಣರೆಂದು ಕರೆಯಲ್ಪಟ್ಟು ಶೋಷಣೆಗೆ ಹಾಗೂ ದೂಷಣೆಗೆ ಒಳಗಾಗುವುದರಲ್ಲಿ ಸಂದೇಹವಿಲ್ಲ. ಬಹತೇಕರು
ಸಂಘಪರಿವಾರದ ದೇಶಭಕ್ತಿ, ದೇಶಪ್ರೇಮ, ಹಿಂದುತ್ವಗಳೆಂಬೋ ಘೋಷಣೆ ಹಾಗೂ ಭಾಷಣಗಳಿಗೆ ಮರುಳಾಗಿ ಆರೆಸ್ಸೆಸ್,
ಬಿಜೆಪಿ ಹಾಗೂ ಅವುಗಳ ಅಂಗ ಉಪಾಂಗಗಳನ್ನು ಬೆಂಬಲಿಸುತ್ತಿದ್ದಾರೆ. ಸಂಘಪರಿವಾರವು ಹಿಂದೂ ದೇಶವನ್ನು
ಕಟ್ಟುತ್ತದೆ, ಆಗ ಹಿಂದೂಗಳೆಲ್ಲ ಅಣ್ಣತಮ್ಮಂದಿರಂತೆ ಸುಖವಾಗಿ ಬದುಕಬಹುದು ಎಂದು ನಂಬಿಕೊಂಡಿದ್ದಾರೆ.
ಆದರೆ ಅಸಂಖ್ಯಾತ ಅಸ್ಪೃಶ್ಯರನ್ನು ಮನುಷ್ಯರನ್ನು ಮುಟ್ಟಿಸಿಕೊಳ್ಳದ, ಅಗಣಿತ ಶೂದ್ರರನ್ನು ಸಾಮಾಜಿಕವಾಗಿ
ಸಮಾನರೆಂದು ಎಂದೂ ಒಪ್ಪಿಕೊಳ್ಳದ ಈ ವೈದಿಕ ಧರ್ಮಿಯ ಸಂಘಾಧಿಪತಿಗಳು ಅದು ಹೇಗೆ ಹಿಂದೂ ಸಾಮ್ರಾಜ್ಯ
ಕಟ್ಟುತ್ತಾರೆ. ವರ್ಣಾಶ್ರಮ ಧರ್ಮಕ್ಕೆ ಬದ್ದರಾಗಿರುವ ಈ ಕಟ್ಟರ್ ಮನುವಾದಿಗಳು ಮತ್ತೆ ಗರ್ಭಗುಡಿಯಲ್ಲಿ
ತಾವು ಕುಳಿತು ಶೂದ್ರರನ್ನು ದೇವಸ್ಥಾನದ ಹೊಸ್ತಿಲಿನಾಚೆಯೇ ಇಟ್ಟು ಅಸ್ಪೃಶ್ಯರನ್ನು ಹೊಲಗೇರಿಯಲ್ಲಿರಿಸಿ
“ನೋಡಿ
ನಾವು ಹಿಂದೂ ದೇಶ ಕಟ್ಟಿದ್ದೇವೆ.. ಇನ್ನು ಮೇಲೆ ಮನುಸ್ಮೃತಿಯ ವರ್ಣಾಶ್ರಮ ಪದ್ದತಿಯಂತೆ ನಾವೆಲ್ಲಾ
ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತಾ ಸುಖವಾಗಿದ್ದುಬಿಡೋಣ” ಎಂದು ಆದೇಶಿಸುತ್ತಾರೆ.
ಸಂಘಪರಿವಾರದ ಮೆದುಳಿನಲ್ಲಿರುವ
ಈ ಒಳಹುನ್ನಾರಗಳನ್ನು ಎಲ್ಲಿಯವರೆಗೂ ಅಹಿಂದ ಸಮುದಾಯದಲ್ಲಿರುವ ಸಂಘಪರಿವಾರದ ಸಮರ್ಥಕರು ಅರ್ಥಮಾಡಿಕೊಳ್ಳುವುದಿಲ್ಲವೋ
ಅಲ್ಲಿವರೆಗೂ ಈ ಬಿಳಿ ತೊಗಲಿನ ಶ್ರೇಷ್ಟತೆಯ ವ್ಯಸನಪೀಡಿತ
ಮನುವಾದಿಗಳ ಒಡೆದಾಳುವ ಶಡ್ಯಂತ್ರ ನಿಲ್ಲುವುದಿಲ್ಲಾ. ದಕ್ಷಿಣ ಭಾರತದ ಬ್ರಾಹ್ಮಣ ಸಮುದಾಯವೂ ಉತ್ತರ
ಭಾರತದ ವೈದಿಕರ ವರ್ಣ-ಬೇಧದ ಹುನ್ನಾರಗಳನ್ನು ಅರಿಯಬೇಕಿದೆ. ಇಲ್ಲವಾದರೆ ಹಿಂದೂ ರಾಷ್ಟ್ರದ ಹೆಸರಲ್ಲಿ
ಎಲ್ಲಾ ಸಮುದಾಯವನ್ನು ತಮ್ಮ ಹಿತಾಸಕ್ತಿಗಾಗಿ ಬಳಸಿಕೊಂಡು,
ತಮ್ಮ ಗುರಿ ಮುಟ್ಟಿದ ಮೇಲೆ ಎಲ್ಲರನ್ನೂ ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿ ಇಡೀ ದೇಶವನ್ನು ತಮ್ಮಿಚ್ಚೆಗನುಗುಣವಾಗಿ
ಆಳುವುದರಲ್ಲಿ ಸಂದೇಹವೇ ಇಲ್ಲಾ. ತರುಣ್ನಂತಹ ಕಟ್ಟರ್ ಸಂಘಿಯ ಬಾಯಲ್ಲಿ ಅದರ ಮುನ್ಸೂಚನೆ ಮೂಡಿಬಂದಿದೆ.
ಈಗಲಾದರೂ ಸಂಘಪರಿವಾರದ ಬಗ್ಗೆ ಸಾಪ್ಟ್ಕಾರ್ನರ್ ಹೊಂದಿರುವವರು, ಆರೆಸ್ಸೆಸ್ಸ ಬಿಜೆಪಿಯ ಮೇನಿಯಾಗೆ
ಒಳಗಾಗಿ ಸ್ವಂತಿಕೆಯನ್ನೇ ಕಳೆದುಕೊಂಡವರು ಹಾಗೂ ದಕ್ಷಿಣ ಭಾರತದ ಕಪ್ಪುವರ್ಣೀಯರು ಎಚ್ಚರಗೊಳ್ಳಬೇಕಿದೆ.
ಜಾತಿ ಧರ್ಮ ಹಾಗೂ ಚರ್ಮದ ಬಣ್ಣದ ಮೇಲರಿಮೆಯಿಂದಾ ದುರಹಂಕಾರ ತೋರಿ ಮನುಷ್ಯರನ್ನು ಒಡೆದಾಳುತ್ತಿರುವ
ಮನುವಾದಿ ಮನಸ್ಥಿತಿಯ ಜೀವವಿರೋಧಿಗಳನ್ನು ಶತಾಯ ಗತಾಯ ವಿರೋಧಿಸಬೇಕಿದೆ. ಕಪ್ಪುವರ್ಣೀಯ ದ್ರಾವಿಡರೊಂದಿಗೆ
ಹೊಂದಿಕೊಂಡು ಹೋಗುತ್ತಾ ದ್ರಾವಿಡರ ಮೇಲೆ ಉಪಕಾರ ಮಾಡಿದ್ದೇವೆಂದು ಹೇಳಿಕೊಳ್ಳುವ ದುರಹಂಕಾರಿ ಆರ್ಯಪುತ್ರರನ್ನು
ದಿಕ್ಕರಿಸಬೇಕಿದೆ. ಜಾತಿ ಧರ್ಮ ಹಾಗೂ ವರ್ಣದ ಆಧಾರದ ಮೇಲೆ ಯಾರೇ ಆಗಲಿ ಮನುಷ್ಯರಲ್ಲಿ ಬಿನ್ನಬೇಧ ಮಾಡಿದರೆ
ಅಂತವರನ್ನು ಹಾಗೂ ಅಂತವರ ಹಿಂದಿರುವ ಶಕ್ತಿಗಳನ್ನು ಜನವಿರೋಧಿಗಳು ಎಂದು ಗುರುತಿಸಿ ನಿರಾಕರಿಸಬೇಕಿದೆ.
ಇಲ್ಲವಾದರೆ ಈ ದೇಶವನ್ನು ಉತ್ತರದ ಮನುವಾದಿ ಪ್ಯಾಸಿಸ್ಟ್ಗಳು ಆಳುವುದರಿಂದ ತಪ್ಪಿಸಲಂತೂ ಸಾಧ್ಯವಿಲ್ಲಾ.
ಈ ಪ್ಯಾಸಿಸ್ಟ್ ಆಡಳಿತದಲ್ಲಿ ಕಪ್ಪುವರ್ಣೀಯ ದ್ರಾವಿಡರು ಗುಲಾಮರಾಗಿ ಬದುಕು ಸವೆಸುವುದನ್ನು ನಿಲ್ಲಿಸಲೂ
ಸಾಧ್ಯವಿಲ್ಲಾ..
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ