ಆರ್ಥಿಕ ಕ್ಷೇತ್ರದಲ್ಲಿ 104
ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಮೈಸೂರು ಬ್ಯಾಂಕ್ (ಎಸ್ಬಿಎಂ) ಮಾರ್ಚ 31 ರಂದು ಎಸ್ಬಿಐ ಜೊತೆಗೆ
ವಿಲೀನಗೊಂಡು ಖಾಯಂ ಆಗಿ ನೇಪತ್ಯಕ್ಕೆ ಸೇರಲಿದೆ. ಮೈಸೂರಿನ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು
ಮೆಜೆಸ್ಟಿಕ್ನಲ್ಲಿ (ಕೆಜಿ ರಸ್ತೆ) ಕೊಡಮಾಡಿದ ಭೂಮಿ ಹಾಗೂ ಇಪ್ಪತ್ತು ಲಕ್ಷ ರೂಪಾಯಿಗಳ ಇಡಿಗಂಟಿನೊಂದಿಗೆ
1913 ಅಕ್ಟೋಬರ್ 2 ರಂದು ಬೆಂಗಳೂರಿನಲ್ಲಿ ಆರಂಭಗೊಂಡ ಎಸ್ಬಿಎಂ ಹೆಸರು ಇನ್ನು ಬರೀ ನೆನಪು ಮಾತ್ರ.
ಈ ಬ್ಯಾಂಕ್ ಕರ್ನಾಟಕ ರಾಜ್ಯದ
ಆರ್ಥಿಕ ವಹಿವಾಟಿಗೆ ಕೊಟ್ಟ ಕೊಡುಗೆ ಅಪಾರವಾದದ್ದು. ಒಟ್ಟಾರೆ ಇರುವ 1075 ಶಾಖೆಗಳಲ್ಲಲಿ ಶೆ.90 ರಷ್ಟು
ಶಾಖೆಗಳು ಕರ್ನಾಟಕದಲ್ಲೇ ಇವೆ. ಹನ್ನೊಂದು ಸಾವಿರದಷ್ಟು ಉದ್ಯೋಗಿಗಳು ಕೆಲಸ ಮಾಡುವ ಕರ್ನಾಟಕದ ಬ್ರಹತ್
ಬ್ಯಾಂಕ್ ಇದು. ಎಂದೂ ನಷ್ಟವನ್ನೇ ಅನುಭವಿಸದೆ ಕೊಟ್ಯಾಂತರ ರೂಪಾಯಿ ಲಾಭದಲ್ಲಿದ್ದ ಈ ಬ್ಯಾಂಕಿನ ಅಸಲಿ
ಅಸ್ತಿತ್ವವನ್ನೇ ಅಳಿಸಿ ಹಾಕಲು ಕೇಂದ್ರ ಸರಕಾರ ಭಾರೀ ಪ್ಲಾನ್ ಮಾಡಿದ್ದಂತೂ ಸತ್ಯ.
ಇಷ್ಟಕ್ಕೂ ಲಾಭದಾಯಕವಾಗಿ ಯಶಸ್ವಿಯಾಗಿ
ಮುನ್ನಡೆಯುತ್ತಿದ್ದ ಎಸ್ಬಿಎಂನ್ನು ಯಾಕೆ ವಿಲೀನಗೊಳಿಸಲಾಯ್ತು? ಯಾಕೆಂದರೆ ದೇಶದಲ್ಲೇ ಅತೀ ದೊಡ್ಡ
ಬ್ಯಾಂಕನ್ನಾಗಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ (ಎಸ್ಬಿಐ) ವನ್ನು ಮಾಡಬೇಕು ಎನ್ನುವ ಉದ್ದೇಶ ಕೇಂದ್ರ
ಸರಕಾರದ್ದು. ಇದಕ್ಕಾಗಿ ಎಸ್ಬಿಐ ಬ್ಯಾಂಕ್ ಜೊತೆಗೆ ಅಸೋಸಿಯೇಟ್ ಆಗಿದ್ದ ಉಳಿದೆಲ್ಲಾ ಬ್ಯಾಂಕಗಳನ್ನು
ಮುಖ್ಯ ಬ್ಯಾಂಕ್ ಜೊತೆಗೆ ವಿಲೀನಗೊಳಿಸಿ ಬ್ರಹತ್ ಬ್ಯಾಂಕೊಂದನ್ನು ಅಸ್ತಿತ್ವಕ್ಕೆ ತರುವ ಯೋಚನೆ ಕೇಂದ್ರ
ಸರಕಾರದ್ದು. ಅಂತರಾಷ್ಟ್ರೀಯ ಬಹುರಾಷ್ಟ್ರೀಯ ಬ್ಯಾಂಕುಗಳನ್ನು ಎದುರಿಸಲು, ಖಾಸಗಿ ಬ್ಯಾಂಕುಗಳ ಜೊತೆ
ಸ್ಪರ್ದಿಸಲು ಏಕೀಕೃತ ಬ್ರಹತ್ ಬ್ಯಾಂಕನ್ನಾಗಿ ಎಸ್ಬಿಐ ಬ್ಯಾಂಕನ್ನು ರೂಪಿಸುವುದು ಸರಕಾರದ ಆಶಯವೆಂದು
ಕೇಂದ್ರ ಸರಕಾರ ಹೇಳಿಕೊಳ್ಳುತ್ತಿದೆ. ಬಹುರಾಷ್ಟ್ರೀಯ ಬ್ಯಾಂಕುಗಳಿಗೆ ದೇಶದೊಳಗೆ ಬಿಟ್ಟುಕೊಂಡು ಲೂಟಿಗೆ
ಅವಕಾಶ ಕೊಟ್ಟವರೂ ಇದೇ ಕೇಂದ್ರ ಸರಕಾರದವರು. ಈಗ ಅವರ ಜೊತೆಗೆ ಸ್ಪರ್ದಿಸಲಾಗದೆ ಬ್ಯಾಂಕ್ ವಿಲೀನದಂತಹ
ಪರ್ಯಾಯಗಳನ್ನು ಹುಡುಕುತ್ತಿರುವುದೂ ಸಹ ಕೇಂದ್ರ ಸರಕಾರದ ಆರ್ಥಿಕ ನೀತಿ ನಿರೂಪಕರು. ಆಳುವ ಸರಕಾರ
ಯಾವುದೇ ಪಕ್ಷದ್ದಾಗಿರಲಿ ಯಾವುದೇ ಬಣ್ಣದ್ದಾಗಿರಲಿ ಎಲ್ಲವೂ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿಯನ್ನು
ಕಾಪಾಡುತ್ತಾ ಫಲಾನುಭವಿಗಳಾಗಿರುವುದು ಬಹಿರಂಗ ಸತ್ಯ.
ಆದರೆ.. ಬ್ಯಾಂಕ್ ವಿಲೀನದ ಹಿಂದಿರುವ ಅಸಲಿ ವಿಷಯ ಬೇರೆಯದೇ ಇದೆ.
2008 ರಲ್ಲಿ ಇಡೀ ಜಗತ್ತೇ
ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಅಮೇರಿಕದ ಬಹುತೇಕ ಬ್ಯಾಂಕುಗಳು ದಿವಾಳಿ ಎದ್ದಾಗ ಭಾರತದ
ಬ್ಯಾಂಕಿಂಗ್ ಕ್ಷೇತ್ರ ಆರ್ಥಿಕ ಸುರಕ್ಷತೆಯನ್ನು ಕಾಪಾಡಿಕೊಂಡು ಬಂದಿತ್ತು. ಆದರೆ ಬರುಬರುತ್ತಾ ದೊಡ್ಡ ದೊಡ್ಡ ಬಂಡವಾಳಶಾಹಿಗಳಿಗೆ ಬೇಕಾಬಿಟ್ಟಿ ಸಾಲಗಳನ್ನು
ಕೊಟ್ಟ ಎಸ್ಬಿಐ ಕೊಟ್ಯಾಂತರ ರೂಪಾಯಿ ಮರಳಿ ಬಾರದ ಸಾಲವನ್ನು ತನ್ನ ಮೇಲೆ ಹೇರಿಕೊಂಡಿತು. ಸಾರ್ವಜನಿಕ
ಲೆಕ್ಕಪತ್ರಗಳ ಸಂಸದೀಯ ಸಮಿತಿಯ ಪ್ರಕಾರ ಸದ್ಯ ಸಾರ್ವಜನಿಕ
ವಲಯದ ಬ್ಯಾಂಕುಗಳು ನೀರಿರುವ ತೀರಿಸಲಾಗದ ಸಾಲದ ಮೊತ್ತವೇ ಸುಮಾರು 6.7 ಲಕ್ಷ ಕೋಟಿಗಳಷ್ಟಿದೆ. ಇದರಲ್ಲಿ
ಮುಕ್ಕಾಲು ಪಾಲು ಸಾಲವನ್ನು ಪಡೆದಿರುವುದು ಕಾರ್ಪೋರೇಟ್ ಕಂಪನಿಗಳು ಹಾಗೂ ಅವರ ಕುಟುಂಬದವರು. ಮುಖ್ಯ
ಹಣಕಾಸು ಸಲಹೆಗಾರರಾದ ಅರವಿಂದ್ ಸುಬ್ರಮಣಿಯನ್ ಈಗಾಗಲೇ ಕಾರ್ಪೋರೆಟ್ ಕ್ಷೇತ್ರಕ್ಕೆ ನೀಡಿರುವ ಸಾಲವನ್ನು
ಮನ್ನಾ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ ನಾವು ಒಪ್ಪಿಕೊಂಡಿರುವ ‘ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ’ಯಲ್ಲಿ ಕೆಟ್ಟ ಸಾಲಗಳನ್ನು
ಮನ್ನಾ ಮಾಡುವುದಷ್ಟೇ ಈಗ ಸರಕಾರದ ಮುಂದೆ ಉಳಿದಿರುವ ದಾರಿ ಅಂತೆ. ಇನ್ನೊಂದು ಕಡೆ ಶೇಕಡಾ 1 ರಷ್ಟಿರುವ
ರೈತರ ತೀರಿಸಲಾಗದ ಸಾಲವನ್ನು ಮನ್ನಾ ಮಾಡುವುದು “ಕೆಟ್ಟ ಆರ್ಥಿಕತೆ” ಎಂದು ಸ್ಟೇಟ್ ಬ್ಯಾಂಕ್ ಆಪ್
ಇಂಡಿಯಾದ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳುತ್ತಿದ್ದಾರೆ. ಇದರರ್ಥ ಇಷ್ಟೇ ಜನರ ಹಣದ ವಹಿವಾಟಿನಿಂದಾ
ನಡೆಯುತ್ತಿರುವ ಬ್ಯಾಂಕಿನ ಬಹುತೇಕ ಹಣ ಬಂಡವಾಳಶಾಹಿಗಳಿಗಾಗಿ ವಿನಿಯೋಗವಾಗಿದೆ. ಕೊಟ್ಟ ಸಾಲವನ್ನು
ಮನ್ನಾ ಮಾಡುವ ಮೂಲಕ ಕಾರ್ಪೋರೇಟ್ ಸೆಕ್ಟರ್ಗಳ ಹಿತಾಸಕ್ತಿಯನ್ನು ಕಾಪಾಡಲು ಬ್ಯಾಂಕುಗಳು ಬಳಕೆಯಾಗುತ್ತಿವೆ.
ಇದೇ ಕಾಪೋರೇಟ್ ಕಂಪನಿಗಳು ಆಳುವ ಸರಕಾರವನ್ನು ಸಾಕಿ ಸಲಹುತ್ತವೆ. ಆಳುವ ಸರಕಾರಗಳು ಕಾಪೋರೇಟ್ ಕಂಪನಿಗಳಿಗೆ
ಲಾಭ ಮಾಡಿಕೊಡುವ ದೃಷ್ಟಿಯಿಂದಾ ಈ ದೇಶದ ಆರ್ಥಿಕತೆಯನ್ನು ರೂಪಿಸುತ್ತವೆ.
ಹೀಗಾಗಿ.. ಕಾರ್ಪೋರೇಟ್ ಕಂಪನಿಗಳು
ತೀರಿಸಲಾಗದ ಸಾಲವನ್ನು ಮನ್ನಾ ಮಾಡುವ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅದರಲ್ಲೂ ಎಸ್ಬಿಐ ಬ್ಯಾಂಕಿಗೆ
ತಡೆದುಕೊಳ್ಳಲಾದ ನಷ್ಟ ಉಂಟಾಗುತ್ತದೆ. ಎಲ್ಲಾ ಸಾಲವನ್ನು ಮನ್ನಾ ಮಾಡಿದರೆ ಈ ಬ್ಯಾಂಕೇ ದಿವಾಳಿಯಾಗುತ್ತದೆ.
ಅತ್ತ ಕಾರ್ಪೊರೇಟ್ ಕಂಪನಿಗಳ ಸಾಲವೂ ಮನ್ನಾ ಆಗಬೇಕು ಹಾಗು ಇತ್ತ ಎಸ್ಬಿಐ ಬ್ಯಾಂಕ್ ಆರ್ಥಿಕ ನಷ್ಟದಿಂದ
ಪಾರಾಗಬೇಕು ಎನ್ನುವ ಕೇಂದ್ರ ಸರಕಾರದ ಹುನ್ನಾರದ ಭಾಗವೇ ಈ ಎಸ್ಬಿಐ ಅಸೋಸಿಯೇಟ್ ಬ್ಯಾಂಕುಗಳ ವಿಲೀನ.
ಅದರಲ್ಲೂ ಎಸ್ಬಿಎಂ ಬ್ಯಾಂಕ್ ಗಳಿಕೆಯಲ್ಲಿ ಮುಂದಿದೆ. ಈ ಬ್ಯಾಂಕು 2016 ನವೆಂಬರ ತಿಂಗಳವರೆಗೆ 1,33,000
ಕೋಟಿಯಷ್ಟು ವಹಿವಾಟನ್ನು ಮಾಡಿದೆ. ಇಂತಹ ಲಾಭದಾಯಕ
ಬ್ಯಾಂಕನ್ನು ವಸೂಲಾಗದ ಸಾಲದಿಂದಾಗಿ ಸಂಕಷ್ಟದಲ್ಲಿರುವ ಎಸ್ಬಿಐ ಬ್ಯಾಂಕಿನ ಜೊತೆಗೆ ಸೇರಿಸಿದರೆ ಆ
ಬ್ಯಾಂಕನ್ನು ಆರ್ಥಿಕ ದಿವಾಳಿತನದಿಂದ ರಕ್ಷಿಸಬಹುದು
ಎನ್ನುವುದು ಈ ವಿಲೀನ ಪ್ರಕ್ರಿಯೆಯ ಹಿಂದಿರುವ ಮುಖ್ಯ ತಂತ್ರಗಾರಿಕೆಯಾಗಿದೆ.
ಈ ಬ್ಯಾಂಕುಗಳ ವಿಲೀನವಾದರೆ
ಆಡಳಿತ ವೆಚ್ಚವನ್ನು ಕಡಿತಗೊಳಿಸಬಹುದು. ಕೇಂದ್ರಿಕೃತವಾಗಿ ಒಂದೇ ಕಛೇರಿಯ ಮೂಲಕ ಎಲ್ಲವನ್ನು ನಿಯಂತ್ರಿಸಬಹುದು.
ಹಾಗೂ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿ ಆಡಳಿತಾತ್ಮಕವಾಗಿ ವ್ಯಯವಾಗುವ ಹಣವನ್ನು ಉಳಿತಾಯ ಮಾಡಬಹುದು
ಎನ್ನುವುದೂ ಸಹ ಈ ಮಹಾ ವಿಲೀನದ ಹಿಂದಿರುವ ಉದ್ದೇಶ. ಆದರೆ ಈ ಎಸ್ ಬಿ ಎಂ ಬ್ಯಾಂಕಿನ ಉದ್ಯೋಗವನ್ನು
ನಂಬಿಕೊಂಡಿದ್ದ ಸಾವಿರಾರು ಜನರು ಕೆಲಸವನ್ನು ಕಳೆದುಕೊಂಡು ಸಂಕಷ್ಟಕ್ಕೊಳಗಾಗುವುದನ್ನು ತಪ್ಪಿಸಲು
ಸಾದ್ಯವೇ ಇಲ್ಲಾ. ಇದಕ್ಕಿಂತಲೂ ಹೆಚ್ಚಾಗಿ ಈ ಬ್ಯಾಂಕಿನ ಜೊತೆಗೆ ಅಲ್ಲಿರುವ ಉದ್ಯೋಗಿಗಳು ಭಾವನಾತ್ಮಕ
ಸಂಬಂಧವನ್ನು ಹೊಂದಿರುತ್ತಾರೆ. ಈಗ ಬ್ಯಾಂಕೇ ಅಸ್ತಿತ್ವ ಕಳೆದುಕೊಂಡಿದ್ದರಿಂದ ಅವರಿಗೆಲ್ಲ ಅನಾಥ ಭಾವ
ಕಾಡುವುದರಲ್ಲಿ ಸಂದೇಹವೇ ಇಲ್ಲಾ. ಈ ಎಸ್ಬಿಐ ಎನ್ನುವುದು ಇಡೀ ಇಂಡಿಯಾಕ್ಕೆ ಸಂಬಂಧಿಸಿದ ಬ್ಯಾಂಕ್
ಆದರೆ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕವಾಗಿ ವಹಿವಾಟು ನಡೆಸುವ ಅಸೋಸಿಯೇಟ್ ಬ್ಯಾಂಕ್ ಗಳಿವೆ. ಕರ್ನಾಟಕದಲ್ಲಿ
ಸ್ಟೇಟ್ ಬ್ಯಾಂಕ್ ಆಪ್ ಮೈಸೂರು ಇದ್ದಂತೆ ಆಂದ್ರದಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಹೈದರಾಬಾದ್ ಹೀಗೆಯೇ
ಪಟಿಯಾಲಾ, ಜೈಪೂರ್, ಟ್ರವಂಕೂರು.. ಇಂಡೋರ್ ಮುಂತಾದವುಗಳು. ಈಗ ಮೈಸೂರು ಬ್ಯಾಂಕ್ ಜೊತೆಗೆ ಜೈಪೂರ್,
ಪಟಿಯಾಲಾ, ಹೈದರಾಬಾದ್ ಹಾಗೂ ಮಹಿಳಾ ಬ್ಯಾಂಕ್.. ಒಟ್ಟು ೫ ಬ್ಯಾಂಕ್ಗಳನ್ನು ಎಸ್ಬಿಐ ಜೊತೆಗೆ ಆರ್ಬಿಐ
ಆದೇಶದಂತೆ ವಿಲೀನಗೊಳಿಸಲಾಗಿದೆ. ಇವುಗಳೆಲ್ಲಾ ಆಯಾ ರಾಜ್ಯಗಳಲ್ಲಿ ಲಾಭದಾಯಕವಾಗಿ ನಡೆಯುವ ಬ್ಯಾಂಕುಗಳು.
ಎಲ್ಲವನ್ನೂ ಕೇಂದ್ರದ ಆಡಳಿತಕ್ಕೆ ತರಬೇಕು ಎನ್ನುವುದೇ ಕೇಂದ್ರ ಸರಕಾರದ ಅಜೆಂಡಾ ಆಗಿದ್ದರಿಂದಾ ಈ
ಎಲ್ಲಾ ಪ್ರಾದೇಶಿಕ ವಹಿವಾಟಿನ ಬ್ಯಾಂಕುಗಳ ಅಸ್ತಿತ್ವವನ್ನೇ ಕೊನೆಗಾಣಿಸಿ ಕೇಂದ್ರೀಕೃತವಾಗಿ ಒಂದೇ
ಬ್ಯಾಂಕ್ ಮಾಡುವ ಹಿಡನ್ ಅಜೆಂಡಾ ಸಹ ಕೇಂದ್ರ ಸರಕಾರದ್ದಾಗಿದೆ. ಈ ವಿಲೀನದಿಂದಾಗಿ ಎಸ್ ಬಿಐ ಜಾಗತಿಕವಾಗಿ
ದೊಡ್ಡ ಬ್ಯಾಂಕ್ ಆಗಲಿದ್ದು ಅದರ ಅಸೆಟ್ 37 ಟ್ರಿಲಿಯನ್ ಅಂದರೆ 37 ಲಕ್ಷ ಕೋಟಿಯಾಗಲಿದೆ. ಒಟ್ಟು 50
ಕೋಟಿ ಗ್ರಾಹಕರ ಸಮೂಹವನ್ನು ಹೊಂದುತ್ತದೆ. ಈಗಾಗಲೇ
2008 ರಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಸೌರಾಷ್ಟ್ರ ಮತ್ತು 2010 ರಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಇಂಡೋರ್
ಎಸ್ಬಿಐ ಜೊತೆಗೆ ವಿಲೀನಗೊಂಡಿವೆ. ಈಗ ಇನೈದು ಬ್ಯಾಂಕುಗಳು ವಿಲೀನಗೊಂಡಿವೆ. ಈ ಮಹಾ ವಿಲೀನವನ್ನು ತಡೆಯುವ ಶಕ್ತಿ ಬ್ಯಾಂಕ್ ಯುನಿಯನ್ ಗಳಿಗೆ ಇತ್ತು. ಆದರೆ ಆ ಯೂನಿಯನ್ ಗಳೇ ಈಗ ಅಶಕ್ತವಾಗಿ ಕೇವಲ ಸಾಂಕೇತಿಕ ಪ್ರತಿಭಟನೆಗಳಿಗೆ ಸೀಮಿತವಾದವು. ಉಗ್ರ ಹೋರಾಟದ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ವಿಲೀನವನ್ನು ತಡೆಯಬಹುದಾದ ಪ್ರಾಮಾಣಿಕ ಪ್ರಯತ್ನಗಳೂ ಸಹ ಈ ಬ್ಯಾಂಕುಗಳ ಕಾರ್ಮಿಕ ಸಂಘಟನೆಗಳಿಂದಾ ಆಗಲಿಲ್ಲಾ. ಹೋಗಲಿ ಪ್ರತಿಪಕ್ಷಗಳಾದರೂ ಆರ್ ಬಿ ಐ ಆದೇಶದ ಮೂಲಕ ಬ್ಯಾಂಕ್ ವಿಲೀನಗೊಳಿಸಲು ನಿರ್ಣಯಿಸಿದ ಕೇಂದ್ರ ಸರಕಾರವನ್ನು ಐಕ್ಯ ಹೋರಾಟದ ಮೂಲಕ ವಿರೋಧಿಸಬಹುದಾಗಿತ್ತು. ಆದರೆ ಎಲ್ಲಾ ರಾಷ್ಟ್ರೀಯ ಪಕ್ಷಗಳೂ ಸಹ ಕಾರ್ಪೋರೇಟ್ ಕಂಪನಿಗಳಿಂದ ಫಲಾನುಭವಿಗಳಾಗಿದ್ದರಿಂದಾ ಹಾಗೂ ಬಂಡವಾಳಶಾಹಿಗಳ ಕೃಪಾಕಟಾಕ್ಷದಲ್ಲಿ ಇರುವುದರಿಂದಾ ವಿರೋಧಿಸುವ ತಾಕತ್ತನ್ನು ಕಳೆದುಕೊಂಡಿದ್ದವು. ಹೀಗಾಗಿ ಈ ಮಹಾವಿಲೀನ ನಡೆದೇ ಹೋಯಿತು.
ಮೈಸೂರು ಬ್ಯಾಂಕ್ ಮೊದಲಿನಿಂದಲೂ
ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿದೆ. ಅನೇಕ ಬ್ಯಾಂಕೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಲೇ ಬಂದಿದೆ.
ಕನ್ನಡದ ಸಾಂಸ್ಕೃತಿಕ ಲೋಕಕ್ಕೆ ಕೊಡುಗೆಯನ್ನಿತ್ತಿದೆ. ನಾಟಕೋತ್ಸವಗಳನ್ನು ಆಯೋಜಿಸಿದೆ ಹಾಗೂ ಪ್ರಾಯೋಜಿಸಿದೆ.
ಕರ್ನಾಟಕದ ಆರ್ಥಿಕ ಸಂಪನ್ಮೂಲಗಳಿಂದ ಪಡೆದ ಲಾಭದ ಒಂದು ಪಾಲನ್ನು ನಾಡು ನುಡಿ ಸಂಸ್ಕೃತಿಗಾಗಿ ಬಳಕೆ
ಮಾಡುತ್ತಾ ಬಂದಿದೆ. ಆದರೆ.. ಈಗ ವಿಲೀನ ಪ್ರಕ್ರಿಯೆಯಿಂದಾಗಿ ಕನ್ನಡದ ಘಮಲು ಕಡಿತಗೊಂಡು ಬೇರೆ ಭಾಷೆಯ
ಅಧಿಕಾರಿಗಳು ಹಾಗೂ ನೌಕರರು ಬ್ಯಾಂಕಿನಲ್ಲಿ ತುಂಬಿಕೊಳ್ಳುತ್ತಾರೆ. ಇಲ್ಲಿಯ ಭಾಷೆ ಹಾಗೂ ಸಂಸ್ಕೃತಿಯ
ಗಂಧ ಗಾಳಿ ಗೊತ್ತಿಲ್ಲದ ಅವರಿಂದಾ ಸಾಂಸ್ಕೃತಿಕ ಸಹಕಾರವನ್ನು ನಿರೀಕ್ಷಿಸುವುದೂ ವ್ಯರ್ಥ. ಹೀಗಾಗಿ
ಎಸ್ಬಿಎಂ ಎನ್ನುವ ಕರ್ನಾಟಕದ ಆರ್ಥಿಕ ಕ್ಷೇತ್ರದ ಹೆಮ್ಮೆಯ ಬ್ಯಾಂಕ್ ತನ್ನ ಅಸಲಿ ಅಸ್ತಿತ್ವವನ್ನು
ಕಳೆದುಕೊಳ್ಳುವುದು ಎಂದರೆ ಪ್ರಾದೇಶಿಕ ಸೊಗಡನ್ನು ಕಳೆದುಕೊಂಡಂತೆ. ಇಲ್ಲಿವರೆಗೂ ಬೆಂಗಳೂರಿನ ಹೆಡ್
ಕ್ವಾರ್ಟರ್ ಮೂಲಕ ಎಸ್ಬಿಎಂ ಬ್ಯಾಂಕ್ ಕಾರ್ಯನಿರ್ವಹಿಸುತ್ತಿತ್ತು. ಕರ್ನಾಟಕದ ನಾಡು ನುಡಿಗೆ ಪೂರಕವಾಗಿ
ಸ್ಪಂದಿಸುತ್ತಿತ್ತು. ಆದರೆ ವಿಲೀನದ ನಂತರ ಎಲ್ಲಾ ನಿಯಂತ್ರಣವೂ ಸಹ ಮುಂಬೈನಲ್ಲಿರುವ ಎಸ್ಬಿಐ ಹೆಡ್
ಕ್ವಾರ್ಟರ್ ಮೂಲಕವೇ ನಡೆಯುತ್ತದೆ. ಪ್ರಾದೇಶಿಕ ಸಂವಹನ ಕಡಿತಗೊಳ್ಳುತ್ತದೆ. ಏನೇ ಆಗಲಿ ಕಳೆದೊಂದು
ಶತಮಾನದಿಂದ ಕರ್ನಾಟಕದ ಆರ್ಥಿಕತೆಯ ಪ್ರಮುಖ ಕೊಂಡಿಯೊಂದು ಕಳಚಿಕೊಂಡಂತಾಯಿತು. ಬಂಡವಾಳಶಾಹಿಗಳ ಹಿತಾಸಕ್ತಿ
ಕಾಪಾಡುವ ಕೇಂದ್ರ ಸರಕಾರಗಳ ಅರಾಜಕ ಆರ್ಥಿಕ ವಹಿವಾಟುಗಳ ಆಟಕ್ಕೆ ಕರ್ನಾಟಕದ ಹೆಮ್ಮೆಯ ಬ್ಯಾಂಕೊಂದು
ಬಲಿಯಾಯಿತು.
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ