ಶುಕ್ರವಾರ, ಏಪ್ರಿಲ್ 14, 2017

ತಹ ತಹ.... 83 ಮನುವ್ಯಾಧಿಗಳ ಕುತಂತ್ರದ ವಿರುದ್ಧ ಅಂಬೇಡ್ಕರರ ಸಮಾನತಾ ಮಂತ್ರ :



ಕೇಸರಿ ದಾಳಿಗೆ ಆರದಿರಲಿ  ಬಾಬಾಸಾಹೇಬ ಹಚ್ಚಿಟ್ಟ ನೀಲಿ ಬೆಳಕು:
 

ಮನುವಾದ ಎನ್ನುವ ಜೀವವಿರೋಧಿ ವ್ಯಾಧಿ ಇಡೀ ದೇಶಾದ್ಯಂತ ಶತಮಾನಗಳಿಂದ ಪಸರಿಸಿ ಬಹುಸಂಖ್ಯಾತ ದಲಿತ ಶೂದ್ರರನ್ನು ದಮನಿಸಿ ಇಡೀ ದೇಶವನ್ನೇ ರೋಗಗ್ರಸ್ತವಾಗಿರುವಾಗ ಸಾಮಾಜಿಕ ಚಿಕಿತ್ಸಕರಾಗಿ ಬಂದಿದ್ದು ಬಾಬಾ ಸಾಹೇಬ ಅಂಬೇಡ್ಕರ್. ಅವರು ಇದ್ದಿದ್ದರೆ ಎಪ್ರಿಲ್ 14 ಕ್ಕೆ ಸರಿಯಾಗಿ 126 ವರ್ಷಗಳು ತುಂಬುತ್ತಿದ್ದವು. ಇಷ್ಟು ವರ್ಷಗಳ ಕಾಲ ಅವರು ಭೌತಿಕವಾಗಿ ಬದುಕಿರಲು ಸಾಧ್ಯವಿಲ್ಲದೇ ಹೋದರೂ ಅವರು ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು ಹಾಗೂ ಸಮಾನತೆಯ ಸಿದ್ದಾಂತಗಳು ಮನುಕುಲ ಇರುವವರೆಗೂ ಶಾಶ್ವತ.

ಅಂಬೇಡ್ಕರರವರನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿ ಅವರ ಪ್ರಭಾವವನ್ನು ಮಿತಿಗೊಳಿಸಲು ಮನುವಾದಿ ಪಡೆ ಪ್ರಯತ್ನಿಸುತ್ತಲೇ ಇದೆ. ಜೊತೆಗೆ ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರರನ್ನು ದಲಿತ ಸಮುದಾಯದ ಆಸ್ತಿಯನ್ನಾಗಿಸಿಕೊಳ್ಳುವ ಸೀಮಿತ ಪ್ರಯತ್ನಗಳೂ ನಡೆಯುತ್ತಿವೆ. ಆದರೆ.. ಅಂಬೇಡ್ಕರ್ ಕೇವಲ ಒಂದು ನಿರ್ದಿಷ್ಟ ಸಮುದಾಯವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ತಮ್ಮ ಸಿದ್ದಾಂತವನ್ನು ಪ್ರತಿಪಾದಿಸಲಿಲ್ಲಾ. ಈ ದೇಶದ ಎಲ್ಲಾ ದಲಿತರು, ದಮನಿತರು, ಬಡವರು, ಶ್ರಮಿಕರು ಹಾಗೂ ಮಹಿಳೆಯರು ಸ್ವಾಭಿಮಾನದಿಂದ ಬದುಕುವಂತಹ ವ್ಯವಸ್ಥೆಯೊಂದನ್ನು ರೂಪಿಸಬೇಕೆಂಬ ಮಹತ್ವಾಕಾಂಕ್ಷೆಯಿಂದಾ ತಮ್ಮ  ಬದುಕನ್ನೇ ದೀಪದಂತೆ ಉರಿಸಿ ಮನುಕುಲಕೆ ಬೆಳಕಾದರು. ಆದರೆ ಅವರು ಇದ್ದಾಗಲೂ ಹಾಗೂ ಅವರು ಇಲ್ಲವಾದಾಗಲೂ ಬಾಬಾಸಾಹೇಬರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಹುನ್ನಾರಗಳ ಬಗ್ಗೆ ಎಚ್ಚರವಹಿಸಬೇಕಾಗಿದೆ.

ಅಂಬೇಡ್ಕರರವರ ವಿಶಾಲವಾದ ಜನಮುಖಿ ಸಮಗ್ರ ದೃಷ್ಟಿಕೋನ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಭಾರತದ ಸಂವಿಧಾನದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಯಾವುದೇ ಜಾತಿ ಧರ್ಮ ವರ್ಣಗಳ ಬೇಧಭಾವವಿಲ್ಲದೇ ಎಲ್ಲರಿಗೂ ಸಮಾನವಾಗಿ ರಚಿತವಾದ ಕಾನೂನುಗಳು ಹಾಗೂ ಸಮಾಜದಲ್ಲಿ ಕೆಳಸ್ತರದಲ್ಲಿರುವ ತಳಸಮುದಾಯದ ದಮನಿತ ವರ್ಗದವರಿಗೂ ಸಮಾನತೆ ಸಾಧಿಸಲು ಒದಗಿಸಿದ ಮೀಸಲಾತಿಗಳು ಅಂಬೇಡ್ಕರರವರ ಸಾಮಾಜಿಕ ಸಮಾನತೆಯ ಆಶಯವನ್ನು ಪ್ರತಿನಿಧಿಸುತ್ತವೆ.

ಇವತ್ತು ಕೆಳ ಹಾಗೂ ತಳಸಮುದಾಯಗಳನ್ನು ಪ್ರತಿನಿಧಿಸುವ ಕೆಲವರಾದರೂ ಸರಕಾರದ ಆಡಳಿತದಲ್ಲಿ ಪ್ರಾತಿನಿದ್ಯತೆಯನ್ನು ಪಡೆದಿದ್ದರೆ ಅದಕ್ಕೆ ಅಂಬೇಡ್ಕರರವರೇ ಕಾರಣ. ದಲಿತ ಶೂದ್ರ ಸಮುದಾಯದ ಹಲವಾರು ಜನ ಸರಕಾರಿ ನೌಕರಿಗಳನ್ನು ಪಡೆದು ಆರ್ಥಿಕವಾಗಿ ಮುಂದುವರೆದಿದ್ದರೆ ಅದಕ್ಕೆ ಬಾಬಾಸಾಹೇಬರ ನೀತಿ ನಿರೂಪಣೆಯೆ ಕಾರಣ. ಈ  ಮೀಸಲಾತಿ ಎನ್ನುವುದು ಇಲ್ಲದೇ ಹೋಗಿದ್ದರೆ ಉಳ್ಳವರೇ ಈಡೀ ವ್ಯವಸ್ಥೆಯ ಫಲಾನುಭವಿಗಳಾಗಿ ದಲಿತ ಶೂದ್ರ ಸಮುದಾಯ ಈಗಲೂ ಜೀತ ಮಾಡಿಕೊಂಡೇ ಬದುಕುವಂತಹ ವ್ಯವಸ್ಥೆ ಜಾರಿಯಲ್ಲಿರುತ್ತಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಕೂಲಿಯವನ ಮಗ ಕೂಲಿಯವನೇ ಆಗಿರುತ್ತಿದ್ದಾ. ಬಂಗಿಯವನ ಮಗ ಉಳ್ಳವರ ಅಮೇಧ್ಯವನ್ನು ತಲೆಯ ಮೇಲೆ ಹೊರುತ್ತಿದ್ದ. ಆದರೆ ಮೀಸಲಾತಿ ಹಾಗೂ ಶಿಕ್ಷಣ ಎನ್ನುವುದು ಇವತ್ತು ಅನೇಕಾನೇಕ ಜನ ದಲಿತ ಶೂದ್ರರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಲು ಕಾರಣವಾಗಿದೆ. ಇದಕ್ಕಾಗಿ ಎಲ್ಲರೂ ಅಂಬೇಡ್ಕರ್‌ರವರನ್ನು ನಿತ್ಯ ಸ್ಮರಿಸಬೇಕಿದೆ.

ಹಾಗೆಯೇ ಪುರೋಹಿತಶಾಹಿ ಪ್ರಣೀತ ವ್ಯವಸ್ಥೆಯಲ್ಲಿ ಎರಡನೇ ದರ್ಜೆಯ ಪ್ರಜೆಗಳಂತೆ ಯಾವುದೇ ಹಕ್ಕುಗಳಿಲ್ಲದೇ ಅತಂತ್ರತೆಯಲ್ಲೇ ಪರಾವಲಂಬಿಯಾಗಿ ಬದುಕುತ್ತಿದ್ದ ಮಹಿಳೆಯರಿಗೆ ಕಾನೂನಿನ ರಕ್ಷಣೆ ಕೊಟ್ಟು ಕಾಪಾಡಿದ್ದೂ ಸಹ ಅಂಬೇಡ್ಕರರ ಸಮಾನತಾ ಸಿದ್ದಾಂತವೇ ಆಗಿದೆ. ಇಲ್ಲವಾಗಿದ್ದರೆ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಗುಲಾಮರಾಗಿ ಬದುಕು ಸವೆಸುವುದನ್ನು ಯಾರಿಂದಲೂ ತಡೆಯಲು ಸಾಧ್ಯವೇ ಇರಲಿಲ್ಲಾ.  ಹಠಕ್ಕೆ ಬಿದ್ದು ಬಹುಪತ್ನಿತ್ವ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಅಂಬೇಡ್ಕರರವರು ನಿಷೇಧಿಸದೇ ಹೋಗಿದ್ದರೆ ಈಗಲೂ ಮಹಿಳೆಯರು ಪುರುಷರ ಭೋಗದ ವಸ್ತುವಾಗಿ ಸದಾ ಆತಂಕದಲ್ಲೇ ಜೀವಿಸುತ್ತಿದ್ದರು. ಅದೇ ರೀತಿ ಮಹಿಳೆಯರಿಗೆ ಆಸ್ತಿಯಲ್ಲೂ ಹಕ್ಕನ್ನು ಅಂಬೇಡ್ಕರರು ಪ್ರತಿಪಾದಿಸದೇ ಹೋಗಿದ್ದರೆ ಮಹಿಳೆಯ ಬದುಕು ಅಸಹನೀಯವಾಗುತ್ತಿತ್ತು.

ಈ ದೇಶದ ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗಕ್ಕಿಂತಲೂ ಹೆಚ್ಚು ದುಡಿಯುವ ವರ್ಗದ ದಲಿತ ಶೂದ್ರ ಸಮುದಾಯದವರಿದ್ದಾರೆ. ಹಾಗೂ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದಾರೆ.  ಅವರೆಲ್ಲರಿಗೂ ಮೀಸಲಾಗಿ, ಶಿಕ್ಷಣ ಹಾಗೂ ಸಮಾನ ಕಾನೂನುಗಳನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ಕೊಡದೇ ಹೋಗಿದ್ದರೆ ನಮ್ಮ ಇಡೀ ದೇಶ ವೈದಿಕಶಾಹಿಯ ಕರ್ಮಸಿದ್ದಾಂತದ ವರ್ಣಾಶ್ರಮದ ವ್ಯಾಧಿಯಲ್ಲಿ ನರಳಬೇಕಿತ್ತು. ಎಲ್ಲಾ ಜಾತಿ ಧರ್ಮದಲ್ಲಿರುವ ಪುರುಷ ಪ್ರಧಾನ ಪುರೋಹಿತಶಾಹಿಗಳ ಹಿಡಿತದಲ್ಲಿ ಸಿಕ್ಕು ಮಹಿಳೆಯರು ಗುಲಾಮಗಿರಿಯ ಬದುಕು ಸವೆಸಬೇಕಾಗುತ್ತಿತ್ತು. ಆದರೆ.. ಅಂಬೇಡ್ಕರರವರ ದೂರದೃಷ್ಟಿ ಹಾಗೂ ಸಮಾನತಾ ಸಿದ್ದಾಂತಗಳು ಇಂದು ಬಹುಸಂಖ್ಯಾತ ದಮನಿತ ಜನರಿಗೆ ಕನಿಷ್ಟ ಸ್ವಾಭಿಮಾನದ ಬದುಕನ್ನು ರೂಪಿಸಿ ಕೊಟ್ಟಿವೆ. ಮನುಸ್ಮೃತಿಯ ಅಸಮಾನತೆಯ ರೋಗಪೀಡಣೆಯಿಂದ ಸಾಧ್ಯವಾದಷ್ಟೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿವೆ. ಇದಕ್ಕಾಗಿಯಾದರೂ ಎಲ್ಲರೂ ಬಾಬಾಸಾಹೇಬರನ್ನು ನೆನಪಿಸಿಕೊಳ್ಳಬೇಕಾಗಿದೆ. ಅವರು ಹಾಕಿ ಕೊಟ್ಟ ಸ್ವಾತಂತ್ರ್ಯ ಸಮಾನತೆ  ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ದಾರಿಯಲ್ಲಿ ಮುನ್ನಡೆಯಬೇಕಾಗಿದೆ.

ಆದರೆ.. ಈಗ ಬಹುಸಂಖ್ಯಾತ ದುಡಿಯುವ ವರ್ಗಗಳ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರರವರ ಹೆಸರನ್ನು ಮನುವಾದಿಗಳು ಬಳಸಿಕೊಂಡು ದಲಿತ ಶೂದ್ರ ಸಮುದಾಯಗಳ ದಿಕ್ಕು ತಪ್ಪಿಸುತ್ತಿದ್ದಾರೆ. ಸಮಾನತೆ ಬರುವವರೆಗೂ ಮೀಸಲಾತಿ ಇರಬೇಕೆಂದು ಬಯಸಿದ ಅಂಬೇಡ್ಕರರ ಆಶಯವನ್ನೇ ಸಾವಕಾಶವಾಗಿ ಇಲ್ಲವಾಗಿಸುವ ಹುನ್ನಾರಗಳು ನಡೆಯುತ್ತಿವೆ. ಉತ್ತರ ಪ್ರದೇಶದಲ್ಲಿ ಜನರಲ್ಲಿ  ಭ್ರಮೆಗಳನ್ನು ಬಿತ್ತಿ ಬಹುಮತ ಪಡೆದು ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ ಮೀಸಲಾತಿಯನ್ನು ರದ್ದು ಮಾಡುವ ಆದೇಶವನ್ನು ಹೊರಡಿಸಿದೆ. ಈ  ಪ್ಯಾಸಿಸ್ಟ್ ಪ್ರಭುತ್ವ ಇಡೀ ದೇಶವನ್ನು ಓಟ್ ರಾಜಕಾರಣದ ಮೂಲಕವೇ ಆಕ್ರಮಿಸಿಕೊಂಡು ಮೀಸಲಾತಿಯನ್ನೇ ತೆಗೆದುಹಾಕಿ ಮತ್ತೆ ದಲಿತ ದಮನಿತರನ್ನು ವಂಚಿತರನ್ನಾಗಿಸುವ ಶಡ್ಯಂತ್ರಗಳನ್ನು ಅಲ್ಲಗಳೆಯುವಂತಿಲ್ಲ. ಹೀಗೇನಾದರೂ ಆದರೆ.. ಅಂಬೇಡ್ಕರವರ ಸಮಾಜದಲ್ಲಿ  ಸಮಾನತೆಯನ್ನು ತರುವ ಉದ್ದೇಶವೇ ಸರ್ವನಾಶವಾಗುತ್ತದೆ. ಜೊತೆಗೆ ಪ್ಯಾಸಿಸ್ಟ್ ಪ್ರಭುತ್ವ ಶಕ್ತಿಯುತವಾದಂತೆ ಭಾರತದ ಸಂವಿಧಾನವೇ ಅವರ ಮನುವ್ಯಾಧಿಗೆ ತಕ್ಕಂತೆ ಬದಲಾವಣೆಗೊಳಗಾಗುತ್ತಾ ಕೊನೆಗೆ ಮನುಸ್ಮೃತಿಯೇ ಸಂವಿಧಾನವಾಗುವ ಅಪಾಯವನ್ನೂ ನಿರ್ಲಕ್ಷಿಸುವ ಹಾಗಿಲ್ಲಾ.

ಈಗ ಮನುವಾದಿ ಸಂಘಪರಿವಾರದ ಸಂತಾನಗಳಿಗೆ ಕಮ್ಯೂನಿಸ್ಟರಿಗಿಂತಾ ಅಂಬೇಡ್ಕರ್‌ವಾದಿಗಳೇ ಬಹಳ ಮುಖ್ಯ ಅಡತಡೆಯಾಗಿದ್ದಾರೆ. ಯಾಕೆಂದರೆ ಅಂಬೇಡ್ಕರರವನ್ನು ತಮ್ಮ ವಿಮೋಚನೆಯ ಹರಿಕಾರ ಎಂದು ನಂಬಿದವರ ಬಲು ದೊಡ್ಡ ಜನಸಂಖ್ಯೆ ಭಾರತದಲ್ಲಿದೆ. ಅಂಬೇಡ್ಕರರ ನೀಲಿ ಬಾವುಟದಡಿಯಲ್ಲಿ ಈ ದಮನಿತ ದಲಿತ ಶಕ್ತಿ ಒಂದಾಗಿ ನಿಂತರೆ ಮನುವಾದಿಗಳು ಮೂಲೆಗುಂಪಾಗುತ್ತಾರೆ. ಈ ಸತ್ಯದ ಅರಿವಿದ್ದ ಮೋದಿ ನೇತೃತ್ವದ ಬಿಜೆಪಿ ಪಕ್ಷ ಈಗ ಅಂಬೇಡ್ಕರ್ ಭಜನೆಯನ್ನು ಆರಂಭಿಸಿದೆ. ಅಂಬೇಡ್ಕರ್ ಹೆಸರಲ್ಲಿಯೇ ಬಹುಜನರನ್ನು ಒಡೆದು ಆಳುವ ಹುನ್ನಾರಗಳು ನಡೆಯುತ್ತಿವೆ. ದಲಿತರನ್ನು ದಿಕ್ಕುತಪ್ಪಿಸಿ ಇಲ್ಲದ ಭರವಸೆಗಳನ್ನು ತೋರಿಸಿ ಮತಗಳನ್ನು ಪಡೆದು ಇಡೀ ದೇಶದ ಮೇಲೆ ಪ್ರಭುತ್ವವನ್ನು ಸ್ಥಾಪಿಸಿ ವರ್ಣಬೇಧ ನೀತಿಯನ್ನು ಸಾವಕಾಶವಾಗಿ ಹೇರುವುದು ಸಂಘಪರಿವಾರದ ಹಿಡನ್ ಅಜೆಂಡಾ ಆಗಿದೆ. ಈ ಕುತಂತ್ರವನ್ನು ಮೊದಲು ದಲಿತ ಶೂದ್ರ ಸಮುದಾಯ ಅರಿಯಬೇಕಿದೆ.

ದಲಿತ ಸಮುದಾಯದ ನಾಯಕರುಗಳು ತಮ್ಮ ಅವಕಾಶವಾದಿತನವನ್ನು ಬದಿಗಿಟ್ಟು ಎಲ್ಲಾ ದಲಿತ ಸಂಘಟನೆಗಳನ್ನು ಒಂದು ಸಂಯುಕ್ತ ವೇದಿಕೆಯಡಿ ತಂದು ಮನುವಾದಿ ಮನಸ್ಥಿತಿಯ ಸಂಘಪರಿವಾರದ ಕೇಸರಿ ಪಡೆಯ ವಿರುದ್ದ  ನೀಲಿ ಪಡೆಯನ್ನು ಸಿದ್ದಗೊಳಿಸಬೇಕಿದೆ. ಚಿಕ್ಕ ಪುಟ್ಟ ರಾಜಕೀಯ ಅವಕಾಶಗಳ ಮೋಹಕ್ಕೊಳಗಾಗಿ ಅವರವರ ಕಾಲುಗಳನ್ನು ಅವರವರೇ ಎಳೆದುಕೊಳ್ಳುತ್ತಾ ಅಂಬೇಡ್ಕರ್ ರವರ ಹೆಸರಲ್ಲಿ ದಲಿತ ಸಂಘಗಳೆಂಬ ದ್ವೀಪಗಳನ್ನು ಕಟ್ಟಿ ಸರಕಾರಿ ಸವಲತ್ತುಗಳ ಫಲಾನುಭವಿಯಾಗುವಂತಹ ರಾಜೀಕೋರತನವನ್ನು ಈ ಎಲ್ಲಾ ನಾಯಕರುಗಳು ತೊರೆಯಬೇಕಿದೆ. ಅಂಬೇಡ್ಕರರವರು ಇದ್ದಿದ್ದರೆ ಅವರೂ ಸಹ ಇದನ್ನೇ ಬಯಸುತ್ತಿದ್ದರು.

ಅಂಬೇಡ್ಕರ್ ಈಗ ಕೇವಲ ತೋರುಂಬ ಲಾಭವಾಗದೇ ಅಸಮಾನತೆಯ ವಿರುದ್ದದ ಸಶಕ್ತ ಆಯುಧವಾಗಬೇಕಿದೆ. ಬಾಬಾಸಾಹೇಬರು ದಲಿತ ಸಮುದಾಯದವರ ವಿಜ್ರಂಭಣೆಗೆ ಕೇವಲ ಉತ್ಸವ ಮೂರ್ತಿಯಾಗದೇ ವಿಚಾರವಾದಕ್ಕೆ ಪ್ರೇರಣೆಯಾಗಬೇಕಿದೆ. ಅಂಬೇಡ್ಕರರವರನ್ನು ನಿಜಕ್ಕೂ ಒಪ್ಪಿಕೊಂಡು ಅಂಬೇಡ್ಕರ್ ವಾದವನ್ನು ಪ್ರತಿನಿಧಿಸುವ ಪ್ರತಿಯೊಬ್ಬರೂ ವೈದಿಕಶಾಹಿಯ ವಿರುದ್ಧ ಸಮರವನ್ನೇ ಸಾರಬೇಕಿದೆ. ಇಲ್ಲವಾದರೆ ಮನುವಾದಿ ಪ್ಯಾಸಿಸ್ಟ್‌ರು ಪ್ರಭಲಗೊಂಡು ಮತ್ತೆ ಇನ್ನೂರು ವರ್ಷಗಳ ಕಾಲ ಈ ದೇಶ ವೈದಿಕಶಾಹಿಯ ಆಡಳಿತದಲ್ಲಿ ನಲುಗುತ್ತದೆ. ಮತ್ತೆ ಇನ್ನೊಬ್ಬ ಸಮಾನತಾವಾದಿ ಅಂಬೇಡ್ಕರ್ ಹುಟ್ಟಿ ಬಂದು ಹೋರಾಟದ ಮುಂದಾಳತ್ವವಹಿಸಿಕೊಳ್ಳುವವರೆಗೂ ಇಡೀ ದಲಿತ ಶೂದ್ರ ಮಹಿಳಾ ಸಮುದಾಯ ವರ್ಣಾಶ್ರಮದ ಬಚ್ಚಲಿನಲ್ಲಿ ಹುಳುಗಳಂತೆ ಕೊಳೆಯಬೇಕಾಗುತ್ತದೆ. ಮುಂದಿನ ತಲೆಮಾರು ಸ್ವಾತಂತ್ರ್ಯ ಹಾಗೂ ಸ್ವಾಭಿಮಾನವನ್ನು ಕಳೆದುಕೊಂಡು ವೈದಿಕಶಾಹಿಯ ಅಡಿಯಾಳಾಗಿ, ಮನುವಾದಿಗಳ ಜೀತದಾರರಾಗಿ ಬದುಕನ್ನು ಸವೆಸಬೇಕಾಗುತ್ತದೆ. ಅಕಸ್ಮಾತ್ ಈಗಿನ ತಲೆಮಾರಿನವರ ಅವಕಾಶವಾದಿತನದಿಂದಾಗಿ ಮನುವ್ಯಾಧಿ ದೇಶಾದ್ಯಂತ ವ್ಯಾಪಿಸಿ ಬಹುಜನರನ್ನು ಬಲಿತೆಗೆದುಕೊಂಡರೆ ಅದನ್ನು ಮುಂದಿನ ಹಲವಾರು ತಲೆಮಾರು ಅನುಭವಿಸಬೇಕಾಗುತ್ತದೆ. ರಾಜೀತನವನ್ನು ಬಿಸಾಕಿ, ವ್ಯಯಕ್ತಿಕ ಅಹಂ ಪಕ್ಕಕ್ಕಿಟ್ಟು ಅಂಬೇಡ್ಕರರವರ ಆಶಯಗಳ ಸಾಕಾರಕ್ಕಾಗಿ ಅಂಬೇಡ್ಕರ್‌ವಾದಿಗಳು, ಅಂಬೇಡ್ಕರರ ಅನುಯಾಯಿಗಳು ಹಾಗೂ ಎಲ್ಲಾ ಪ್ರಗತಿಪರರು ಒಂದಾಗಿ ವೈದಿಕಶಾಹಿಗಳ ಹುನ್ನಾರಗಳ ವಿರುದ್ದ ನಿಲ್ಲಬೇಕಾದದ್ದು ಈಗಿನ ತುರ್ತು ಅಗತ್ಯವಾಗಿದೆ. ಅದು ಸಾಧ್ಯವಾಗದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎನ್ನುವ ಅರಿವಾದರೂ ಇರಬೇಕಾಗಿದೆ. ಅಂಬೇಡ್ಕರ್ ಪ್ರತಿಯೊಬ್ಬರಲ್ಲೂ ಜಾಗೃತಗೊಳ್ಳಬೇಕು ಹಾಗೂ ಮನುವಾದಿಗಳ ವಿರುದ್ದ ಮಾನವೀಯತಾವಾದ ಗೆಲ್ಲಬೇಕು ಎಂಬುದೇ ಈ ಲೇಖನದ ಆಶಯವಾಗಿದೆ. 

                         -ಶಶಿಕಾಂತ ಯಡಹಳ್ಳಿ
 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ