ಶುಕ್ರವಾರ, ಏಪ್ರಿಲ್ 28, 2017

ತಹ ತಹ... 87 ಭಾಷಾಂಧತೆ ಬಿಟ್ಟು.. ಸ್ವಾಭಿಮಾನದ ಬದುಕು ಕಟ್ಟು...






ನೆರೆಹೊರೆಯ ರಾಜ್ಯಗಳಲ್ಲಿ ಒಮ್ಮೆ ಹೋಗಿ ಕೇಳಿ " ಕನ್ನಡಿಗರು ಜಗಳಗಂಟರು" ಎಂದೇ ಹೇಳುತ್ತಾರೆ. ಆದರೆ ಕನ್ನಡಿಗರನ್ನು ಕೇಳಿದರೆ " ನಾವು ಕನ್ನಡಿಗರು ಸಹಿಷ್ಣುತತೆ ಹೊಂದಿದವರು" ಎಂದು ಹೇಳುತ್ತಾ 'ನೋಡಿ ಎಲ್ಲಾ ಭಾಷಿಕರಿಗೂ ಬೆಂಗಳೂರನ್ನೇ ಬಿಟ್ಟುಕೊಟ್ಟಿದ್ದೇವೆ' ಎಂದು ಸಮರ್ಥನೆಗಳನ್ನು ಕೊಡುತ್ತಾರೆ. ಎರಡೂ ರೀತಿಯ ಅನಿಸಿಕೆಗಳಲ್ಲಿ ಅರ್ಧ ಸತ್ಯವಿದೆ. ಕನ್ನಡಿಗರೆಲ್ಲರೂ ಜಗಳಗಂಟರಲ್ಲದಿದ್ದರೂ ಕನ್ನಡಿಗರ ಸ್ವಾಭಿಮಾನದ ಪ್ರತಿನಿಧಿಗಳೆಂದು ಹೇಳಿಕೊಳ್ಳುತ್ತಿರುವ ಕೆಲವು ಕನ್ನಡ ಪರ ಸಂಘಟನೆಗಳು ಕೆಲವು ಸಲ ಅನಗತ್ಯ ಸಂಗತಿಗಳನ್ನು ದೊಡ್ಡದು ಮಾಡಿ ಅಸಹಿಷ್ಣುತತೆಯ ವಾತಾವರಣ ಸೃಷ್ಟಿಸಿ ಕನ್ನಡಿಗರೆಲ್ಲರ ಮೇಲೆ ಜಗಳಗಂಟತನದ ಆರೋಪವನ್ನು ಹೊರೆಸಿದ್ದಂತೂ ಸತ್ಯ


ಉದಾಹರಣೆಗೆ ಬಾಹುಬಲಿ ಚಿತ್ರದ ಬ್ಯಾನ್ ಹಾಗೂ ಬೆಂಗಳೂರು ಬಂಧ್ ವಿಚಾರ. ಸತ್ಯರಾಜ್ ಎನ್ನುವ ತಮಿಳು ಚಿತ್ರರಂಗದ ನಟ 9 ವರ್ಷದ ಹಿಂದೆ ಕಾವೇರಿ ವಿಚಾರದಲ್ಲಿ ಕನ್ನಡ, ಕನ್ನಡಿಗರ ಕುರಿತು ಅವಮಾನಕಾರಿಯಾಗಿ ಮಾತಾಡಿದ್ದನ್ನೇ ಈಗ ಕನ್ನಡಿಗರ ಸ್ವಾಭಿಮಾನದ ಹೋರಾಟವಾಗಿಸುವ ಪ್ರಯತ್ನ ಮಾಡಲಾಗುತ್ತಿದ್ದು ಬಾಹುಬಲಿ ಬಿಡುಗಡೆಯಾಗುತ್ತಿರುವ ಎಪ್ರಿಲ್ 28 ರಂದು ಬೆಂಗಳೂರು ಬಂಧ್ ಗೆ ಕರೆಕೊಡಲಾಗಿದೆ. 9 ವರ್ಷದಲ್ಲಿ ಸತ್ಯರಾಜ್ ನಟಿಸಿದ ಕೆಲವಾರು ತಮಿಳು ಸಿನೆಮಾಗಳು ಕರ್ನಾಟಕದಲ್ಲೂ ಪ್ರದರ್ಶನ ಕಂಡಿವೆ. ಬಾಹುಬಲಿ 1 ನೇ ಅವತರಣಿಕೆಯಲ್ಲಿ ಸತ್ಯರಾಜ್ ಮಾಡಿದ ಕಟ್ಟಪ್ಪನ ಪಾತ್ರವನ್ನೂ ಕನ್ನಡಿಗರು ತಮ್ಮ ನೆಲದಲ್ಲೇ ತಮಿಳು ಹಿಂದಿ ಭಾಷೆಯಲ್ಲೂ ನೋಡಿದ್ದಾರೆ. ಆಗ ಇಲ್ಲದ ವಿರೋಧ ಬಾಹುಬಲಿಯ 2 ನೇ ಅವತರಣಿಕೆಯ ಬಿಡುಗಡೆ ಸಂದರ್ಭದಲ್ಲಿ ಯಾಕೆ ದೊಡ್ಡದಾಯಿತು? ಇದರ ಹಿಂದೆ ಕೆಲವು ಕನ್ನಡಪರ ಸಂಘಟನೆಗಳ ನಾಯಕರ ಹಿತಾಸಕ್ತಿಯಾದರೂ ಏನು

 ಸತ್ಯರಾಜ್ ಕನ್ನಡಿಗರನ್ನು ಅವಮಾನಿಸಿದ್ದೇ ನಿಜವಾದರೆ ಅವರನ್ನು ವಿರೋಧಿಸಲಿ. ಆದರೆ ಬಾಹುಬಲಿಯಲ್ಲಿ ಸಂಭಾವನೆ ಪಡೆದು ಅಭಿನಯಿಸಿದ್ದನ್ನು ಬಿಟ್ಟು ಸತ್ಯರಾಜಗೂ ಬಾಹುಬಲಿ ನಿರ್ಮಾಣಕ್ಕೂ ಬೇರೆ ಯಾವ ಸಂಬಂಧವೂ ಇಲ್ಲಾ. "ಬಾಹುಬಲಿಗೆ ತೊಂದರೆ ಆಗುವುದರಿಂದ ಸತ್ಯರಾಜ್ ಗೆ ಆಗುವ ನಷ್ಟವೇನೂ ಇಲ್ಲಾ. ಆದರೆ ಐದು ವರ್ಷ ತಪಸ್ಸಿನಂತೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ಮತ್ತು ಕರ್ನಾಟಕದ ಹಂಚಿಕೆದಾರರಿಗೆ ತೊಂದರೆಯಾಗುತ್ತದೆ. ಸತ್ಯರಾಜ್ ಮೇಲಿನ ಸಿಟ್ಟನ್ನು ಬಾಹುಬಲಿಯ ಮೇಲೆ ತೋರಿಸಬಾರದು" ಎಂದು ಬಾಹುಬಲಿ ನಿರ್ದೇಶಕ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಯಾವುದೋ ಒಬ್ಬ ನಟ ತನ್ನ ವ್ಯಕ್ತಿಗತ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಒಂದು ಸಿನೆಮಾವನ್ನೇ ನಿಷೇಧಿಸುವುದು ಅಪೇಕ್ಷಣೀಯವಲ್ಲ. ಅನಗತ್ಯವಾಗಿ ಕನ್ನಡಿಗರ ಭಾವನೆಗಳನ್ನು ಬಡಿದೆಬ್ಬಿಸಿ ಭಾಷಾ ದ್ವೇಷ ಹೆಚ್ಚಿಸುವುದು ಅಕ್ಷಮ್ಯ. ಹಾಗೆ ನೋಡಿದರೆ ಕಾವೇರಿ ನೀರು ಹಂಚಿಕೆಯ ವಿವಾದದ ಹೋರಾಟ ತೀವ್ರಗೊಂಡಾಗ ಟೌನ್ ಹಾಲ್ ಮುಂದೆ ಇದೇ ವಾಟಾಳ್ ನಾಗರಾಜ್ ಸೇರಿದಂತೆ ಕೆಲವು ಕನ್ನಡದ ಕಟ್ಟಾಳುಗಳು ಎಂದೆನಿಸಿಕೊಂಡವರು ಜಯಲಲಿತಾ ಬಗ್ಗೆ ಅತೀ ಕೆಟ್ಟದಾಗಿ ಮಾತಾಡಿದರು. ತಮಿಳರ ಬಗ್ಗೆ ತುಚ್ಚವಾಗಿ ಗೇಲಿಮಾಡಿದರು. ಜಯಲಲಿತಾರ ಅಣಕು ಶ್ರಾದ್ಧವನ್ನೂ ಮಾಡಿದರು. ಇದೆಲ್ಲವೂ ಮಾಧ್ಯಮಗಳಲ್ಲಿ ಪ್ರಚಾರಗೊಂಡಿತು. ಇದನ್ನೇ ಮುಂದಿಟ್ಟುಕೊಂಡು ತಮಿಳಿಗರು ಕನ್ನಡ ಸಿನೆಮಾಗಳನ್ನು ತಮಿಳುನಾಡಿನಲ್ಲಿ ನಿಷೇಧಿಸಬೇಕಾಗಿತ್ತು.. ಕನ್ನಡ ಸಿನೆಮಾಗಳ ನಿರ್ಮಾಣದಲ್ಲಿ ಯಾವ ತಮಿಳಿಗನೂ ಭಾಗ ವಹಿಸದಂತೆ ನಿರ್ಬಂಧಿಸಬಹುದಿತ್ತು. ಆದರೆ ಹಾಗೇನೂ ಆಗಲಿಲ್ಲ. ಎಂದೋ ಒಬ್ಬ ತಮಿಳು ಭಾಷಾ ನಟ ಭಾಷಾಂಧತೆಯಿಂದಾ ಕನ್ನಡಿಗರ ವಿರುದ್ಧ ಮಾತಾಡಿದನೆಂಬ ನೆಪದಲ್ಲಿ ಪ್ರತಿಭಟನೆ, ಬಂದ್ ಗಳನ್ನು ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಭಾಷಾಭಿಮಾನದ ಹೆಸರಲ್ಲಿ ಕನ್ನಡಿಗರಿಗೆ ಕೊಡುವ ಅನಗತ್ಯ ಕಿರುಕುಳವಾಗಿದೆ. ಇಂತಹ ಅಕಾರಣಗಳಿಂದಲೇ ಕನ್ನಡಿಗರು ಜಗಳಗಂಟರು ಎನ್ನುವ ಆರೋಪಕ್ಕೆ ಈಡಾಗಬೇಕಿದೆ

ನಮ್ಮ ಕನ್ನಡ ಸಂಘಟನೆಗಳ ಉಟ್ಟು ಓರಾಟಗಾರರಿಗೆ ನಿಜಕ್ಕೂ ಕನ್ನಡಪರ ಕಾಳಜಿ ಇದ್ದರೆ ಬರದಿಂದ ಕಂಗೆಟ್ಟ ಕನ್ನಡಿಗರ ಸಹಾಯಕ್ಕೆ ಧಾವಿಸಲಿ. ಜನರಿಗೆ ನೀರು , ಜಾನುವಾರುಗಳಿಗೆ ಮೇವು ಕೇಂದ್ರಗಳನ್ನು ಸ್ಥಾಪಿಸಲಿ. ಕೇಂದ್ರ ಸರಕಾರ ಹಿಂಬಾಗಿಲಿನಿಂದ ಹಿಂದಿ ಭಾಷೆ ಹೇರಲು ಪ್ರಯತ್ನಿಸುತ್ತಿದೆಯಲ್ಲಾ ಅದನ್ನು ವಿರೋಧಿಸಲಿ. ಕೇಂದ್ರ ಸರಕಾರದ ಇಲಾಖೆಗಳಲ್ಲಿಯ ನೌಕರಿಗಳಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸಲಾಗುತ್ತಿದೆಯಲ್ಲಾ ಅದರ ಬಗ್ಗೆ ಇವರ ಸ್ವಾಭಿಮಾನದ ಕಿಚ್ಚು ಹೆಚ್ಚಲಿ. ಸಮಾನ ಶಿಕ್ಷಣ ನೀತಿಗಾಗಿ ಒತ್ತಾಯಿಸಲಿ, ಕರ್ನಾಟಕದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಕನಿಷ್ಟ ಶೇಕಡಾ 50 ರಷ್ಟು ಖಡ್ಡಾಯ ನೌಕರಿ ಕೊಡಬೇಕೆಂದು ಪಟ್ಟು ಹಿಡಿಯಲಿ... ಕನಿಷ್ಟ ಸವಲತ್ತು ಹಾಗೂ ಬೆಳೆದ ಬೆಳೆಗೆ ಬೆಲೆ ಇಲ್ಲದೇ ದಲ್ಲಾಳಿಗಳ ಹಾವಳಿಯಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಅನ್ನದಾತನ ಸಮಸ್ಯೆಗೆ ಖಾಯಂ ಪರಿಹಾರ ದೊರಕಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ದ ಸ್ವಾಭಿಮಾನದ ಸಿಟ್ಟು ಸ್ಪೋಟಗೊಳ್ಳಲಿ. ಇವೆಲ್ಲಾ ಮೂಲಭೂತ ಆತಂಕಗಳನ್ನು ನಿರ್ಲಕ್ಷಿಸಿ ಯಾವುದೊ ಭಾಷೆಯ ನಟ ತರಲೆ ಮಾತಾಡಿದ್ದಕ್ಕೆ ಬೆಂಗಳೂರನ್ನೇ ಬಂದ್ ಮಾಡುವುದರಲ್ಲಿ ಯಾವುದೇ ತಾತ್ವಿಕತೆ ಇಲ್ಲಾ. ಅಗತ್ಯತೆ ಇರುವುದನ್ನು ಬಿಟ್ಟು ಇಲ್ಲದಿರುವುದನ್ನೇ ದೊಡ್ಡದು ಮಾಡುವ ಅಗತ್ಯವೂ ಇಲ್ಲಾ. ಹೀಗೆ ಮಾಡಿದಾಗಲೆಲ್ಲಾ ಕನ್ನಡಿಗರಿಗೆ ಇಂತಹ ಕನ್ನಡ ಸಂಘಟನೆಗಳ ಮೇಲೆ ಸಂದೇಹಗಳು ಕಾಡುತ್ತವೆ. ಬಾಹುಬಲಿ ನಿರ್ಮಾಪಕರು ಹಾಗೂ ಹಂಚಿಕೆದಾರರ ಜೊತೆಗೆ ಡೀಲ್ ಕುದುರಿಸಲು ರೀತಿ ಒತ್ತಡ ಸೃಷ್ಟಿಸಲಾಗುತ್ತದೆ ಎನ್ನುವ ಆರೋಪಕ್ಕೆ ರೆಕ್ಕೆ ಪುಕ್ಕಗಳು ಬೆಳೆಯುತ್ತವೆ. ಕನ್ನಡಿಗರು ಜಗಳಗಂಟರು ಎನ್ನುವ ಅನ್ಯಭಾಷೀಯರ ದೂಷಣೆಗೆ ನಾವೇ ಸಾಕ್ಷಗಳನ್ನು ಒದಗಿಸಿದಂತಾಗುತ್ತದೆ.
ಹೀಗೆ ಬಂದ್ ಮಾಡುವುದರಿಂದ ಸತ್ಯರಾಜ್ ಹಾಗೂ ತಮಿಳರಿಗೆ ಏನೇನೂ ನಷ್ಟವೆಂಬುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಸತ್ಯರಾಜನಂತಹ ಅಪ್ರಭುದ್ದ ಭಾಷಾಂಧ ವ್ಯಕ್ತಿ ತಮಿಳುನಾಡಿನ ಸ್ವಾಭಿಮಾನದ ಸಂಕೇತವಾಗಿಬಿಡುತ್ತಾನೆ. ಜಗತ್ತಿನಾದ್ಯಂತ ಸಾವಿರ ಕೋಟಿ ವ್ಯವಹಾರ ಮಾಡುವ ಬಾಹುಬಲಿ ನಿರ್ಮಾಪಕರಿಗೂ ಕರ್ನಾಟಕದಿಂದ ಬರಬಹುದಾದ ಮೂವತ್ತು ಕೋಟಿ ಲಾಭ ಬರದೇ ಹೋದರೂ ಅಂತಹ ನಷ್ಟವೇನಿಲ್ಲಾ. ಆದರೆ ಹರತಾಳ ಬಂಧ್ ಗಳಿಂದಾಗಿ ಕನ್ನಡಿಗರ ಒಂದು ದಿನದ ಬದುಕು ಅಸ್ತವ್ಯಸ್ತವಾಗುತ್ತದೆ. ಜಗತ್ತೇ ನೋಡಬಹುದಾದ ಬಾಹುಬಲಿ ನೋಡಬಯಸುವ ಕರ್ನಾಟಕದ ಜನರಿಗೆ ಸಿನೆಮಾ ನೋಡಲು ಸಾಧ್ಯವಾಗದೇ ಹೋಗುತ್ತದೆ. ಇಂತಹ ಸಣ್ಣ ಸಣ್ಣ ವಿಚಾರಗಳು ಗೊತ್ತಿದ್ದರೂ ಅನಗತ್ಯ ಬಂದ್ ಗೆ ಕರೆಕೊಡುವ ವಾಟಾಳ್ ನಾಗರಾಜರಂತಹ ವೃತ್ತಿಪರ ಹೋರಾಟಗಾರರು ತಮ್ಮ ಗಮನವನ್ನು ಕನ್ನಡಿಗರ ಬೇರೆ ಅಗತ್ಯ ಸಮಸ್ಯೆಗಳತ್ತ ತಿರುಗಿಸಿದರೆ ಕನ್ನಡಿಗರ ಹಿತರಕ್ಷಣೆಗೆ ಸಹಾಯವಾಗುತ್ತದೆ

ಅಂತೂ ಇಂತೂ ಸತ್ಯರಾಜ್ ಬಾಹುಬಲಿ ನಿರ್ಮಾಪಕರು ಹಾಗೂ ನಿರ್ದೇಶಕರ ಮನವಿಯನ್ನು ಪರಿಗಣಿಸಿ ಕ್ಷಮಾಪಣೆಯನ್ನು ಕೇಳಿದ್ದಾರೆ. ಕನ್ನಡ ಪರ ಹೋರಾಟದ ಗುತ್ತಿಗೆದಾರರಾದ  ವಾಟಾಳ್ ನಾಗರಾಜ್ ಮತ್ತು ಇತರರು ತಮ್ಮ ಒಂದಂಶದ ಬ್ಲಾಕ್ಮೇಲ್ ಅಜೆಂಡಾ ಯಶಸ್ವಿಯಾಗಿದ್ದಕ್ಕೆ ಬಂದ್ ಪ್ರಹಸನವನ್ನು ನಿಲ್ಲಿಸಿ ಬಾಹುಬಲಿ ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ. ಜೊತೆಗೆ ತಮ್ಮ 9 ವರ್ಷದ ಹಿಂದಿನ ವ್ಯಯಕ್ತಿಕ ದ್ವೇಷಕ್ಕೆ  ವಾಟಾಳ್ ಈಗ ಸೇಡು ತೀರಿಸಿಕೊಂಡು ಸಂತೃಪ್ತರಾಗಿದ್ದಾರೆ. ಈ ನಡುವೆ ಯಾವ್ಯಾವ ಹಿಡನ್ ಡೀಲ್ ಗಳು ನಡೆದವೋ ಗೊತ್ತಿಲ್ಲಾ. ಆದರೆ.. ಈ ಕನ್ನಡಪರ ಸ್ವಘೋಷಿತ ನಾಯಕರಿಂದಾಗಿ ಕನ್ನಡಿಗರು ಜಗಳಗಂಟರು ಎನ್ನುವ ಆರೋಪವಂತೂ ಮತ್ತೊಮ್ಮೆ ಸಾಬೀತಾಯಿತು ಹಾಗೂ ಕೆಲವು ಕನ್ನಡಪರ ಸಂಘಟನೆಗಳು ರೋಲ್ ಕಾಲ್ ಗಾಗಿಯೇ ಹೋರಾಟ ಮಾಡುತ್ತವೆ ಎನ್ನುವ ಸಂದೇಹ ಮತ್ತೊಮ್ಮೆ ಬಲಯುತವಾಯಿತು.     

ಇಷ್ಟಕ್ಕೂ ಕನ್ನಡದ ಸ್ವಾಭಿಮಾನ ಕೇವಲ ಭಾಷೆಯಲ್ಲಿರದೇ ಕನ್ನಡಿಗ ಸ್ವಾವಲಂಬಿಯಾಗಿ ಬದುಕುವುದರಲ್ಲಿದೆ ಎಂಬ ಸತ್ಯ ಅರಿವಾದ ದಿನ ಕನ್ನಡಪರ ಸಂಘಟನೆಗಳ ಅಸ್ತಿತ್ವ ಸಾರ್ಥಕವಾಗುತ್ತದೆ..  ಜೈ ಕರ್ನಾಟಕ...

- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ