ಅದೊಂದು ಮಳೆ ಬಂದು ನಿಂತ ದಿನ. ಕೆರೆಯಲ್ಲಿನ ಕಪ್ಪೆಗಳೆಲ್ಲಾ ದಡಕ್ಕೆ ಬಂದು ಸಿಕ್ಕಾಪಟ್ಟೆ ಸಂತಸದಿಂದ ವಟಗುಟ್ಟುತ್ತಿದ್ದವು. ಯಾಕೆಂದರೆ ಗುಂಪಿನ ಹಿರಿಯ ಕಪ್ಪೆಗೆ ವಯಸ್ಸಾಗಿತ್ತು. ಹೊಸ ನಾಯಕನ ಆಯ್ಕೆ ನಡೆಯಬೇಕಿತ್ತು. ಹೇಗೆ ಆಯ್ಕೆ ಮಾಡಬೇಕು ಎಂಬುದೇ ಸವಾಲಿನ ಕೆಲಸವಾಗಿತ್ತು.
ಆಗ ಹಿರಿಯ ಕಪ್ಪೆಗೊಂದು ಐಡಿಯಾ ಹೊಳೆದಿದ್ದೇ ತಡ ಎತ್ತರದ ಕರಿ ಕಲ್ಲನ್ನು ಏರಿ ನಿಂತು “ನೋಡಿ ಕಪ್ಪೆ ಬಾಂಧವರೇ.. ಹೀಗೆ ವಟಗುಟುವ ಬದಲಾಗಿ ಸ್ಪರ್ಧೆಯೊಂದನ್ನು ಶುರುಮಾಡೋಣ. ಯಾರು ಮೊದಲು ಗುರಿ ಮುಟ್ಟುತ್ತಾರೋ ಆವರನ್ನು ನಮ್ಮ ಗುಂಪಿನ ನಾಯಕ ಎಂದು ಒಪ್ಪಿಕೊಳ್ಳೋಣ, ಬಹುಮಾನವನ್ನೂ ಕೊಟ್ಟು ಸನ್ಮಾನಿಸೋಣ ” ಎಂದು ಗಟ್ಟಿ ದ್ವನಿಯಲ್ಲಿ ಘೋಷಿಸಿತು.
ಕಿರಿ ಮರಿ ಯುವ ಮುದಿ ಕಪ್ಪೆಗಳೆಲ್ಲಾ ಸಂತಸದಿಂದ ಹತ್ತು ನಿಮಿಷಗಳ ಕಾಲ ಜೋರಾಗಿ ಒಟಗುಟ್ಟಿ ನಂತರ ಮೌನವಹಿಸಿ ಹಿರಿ ಕಪ್ಪೆಯತ್ತ ಕುತೂಹಲದಿಂದ ನೋಡಿದವು. “ನೋಡಿ.. ಲಕ್ಷವಿಟ್ಟು ಕೇಳಿ.. ಈ ದಪ್ಪನೆಯ ಎತ್ತರದ ಮರ ಇದೆಯಲ್ಲಾ ಇದನ್ನು ಯಾರು ಮೊದಲು ಏರಿ ತುದಿ ಮುಟ್ಟುತ್ತಾರೋ ಅವರೇ ಗೆದ್ದಂತೆ. ಗೆದ್ದವರು ನಮ್ಮ ಗುಂಪಿನ ನಾಯಕರಾಗುತ್ತಾರೆ ಹಾಗೂ ಬಹುಮಾನವನ್ನೂ ಗೆದ್ದು ಸನ್ಮಾನಕ್ಕೂ ಪಾತ್ರರಾಗುತ್ತಾರೆ “ ಎಂದಿತು ಹಿರಿಕಪ್ಪೆ.
ಆ ಬ್ರಹತ್ ಗಾತ್ರದ ಮರವನ್ನು ಕಣ್ಣಳತೆ ಮಾಡಿ ನೋಡಿ ಹೆದರಿದ ಮುದಿ ಕಪ್ಪೆಗಳು ಮೂಗು ಮುರಿದವು. ಮರಿ ಕಪ್ಪೆಗಳು ಹಿಂದೆ ಸರಿದವು. ಕೆಲವು ಯುವ ಕಪ್ಪೆಗಳು ಸಾಹಸಕ್ಕೆ ಸಿದ್ದವಾಗಿ ಹಿರಿ ಕಪ್ಪೆಯ ಅನುಮತಿಗಾಗಿ ಕಾಯ್ದವು. ಹಿರಿ ಕಪ್ಪೆ ಕೆಂಪು ಬಾವುಟವೊಂದನ್ನು ಬೀಸುವುದರ ಮೂಲಕ ಸ್ಪರ್ಧೆ ಆರಂಭಿಸಲು ಸೂಚಿಸಿತು.
ಯುವ ಕಪ್ಪೆಗಳು ಮರ ಹತ್ತಲು ಆರಂಭಿಸಿದವು. ಕೆಲವು ಕಪ್ಪೆಗಳು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆದು ಬೀಳಿಸಿ ತಾವು ಮೇಲೆ ಹತ್ತಲು ನೋಡಿದವು. ಏರಲಾರದೇ ಏದುಸಿರು ಬಿಟ್ಟು ಕೆಲವು ಕಪ್ಪೆಗಳು ಕೆಳಕ್ಕೆ ಬಿದ್ದವು. ಬಿದ್ದ ಕಪ್ಪೆಗಳು ಮತ್ತೆ ಮೇಲೆದ್ದು ತಮ್ಮ ಪ್ರಯತ್ನ ಮುಂದುವರೆಸಿದವು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಒಂದಡಿಗಿಂತ ಮೇಲೆ ಹತ್ತಲು ಯಾವ ಕಪ್ಪೆಗೂ ಸಾಧ್ಯವಾಗಲೇ ಇಲ್ಲ. ಅದು ಅಷ್ಟು ಸುಲಭಕ್ಕೆ ಸಾದ್ಯವೂ ಇರಲಿಲ್ಲ.
ಆದರೆ.. ಅದೊಂದು ಕಪ್ಪೆ ಸಾವಕಾಶವಾಗಿ ಸಾವದಾನದಿಂದ ಒಂದೊಂದೇ
ಹೆಜ್ಜೆ ಇಡುತ್ತಾ ಮುಂಗಾಲಿನಿಂದ ಮರವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾ ಮರ ಹತ್ತಲು ಆರಂಭಿಸಿತು.
ಅದನ್ನು ನೋಡಿ ಬೇರೆ ಕಪ್ಪೆಗಳು ಅಚ್ಚರಿಯಿಂದ ಅರಚತೊಡಗಿದವು. “ಬೇಡ ಮುಂದೆ ಹೋಗಬೇಡ. ಕೆಳಗೆ ಬಿದ್ದು
ಕೈಕಾಲು ಮುರಿದುಕೊಳ್ಳುತ್ತೀಯಾ. ಇನ್ನೂ ಮೇಲೆ ಹೋದರೆ ಜಾರಿ ಬಿದ್ದು ಸತ್ತೇ ಹೋಗುತ್ತೀ.. ಇಳಿದು ಬಿಡು.
ಮರ ಹತ್ತುವುದಕ್ಕೆ ನಾವು ಮಂಗಗಳಲ್ಲಿ ಕಪ್ಪೆಗಳು. ಇಳಿ.. ಕೆಳಗೆ ಇಳಿ.. ಬೇಡಾ ಮುಂದೆ ಹೋಗಬೇಡ” ಎಂದು
ಅಲ್ಲಿ ಸೇರಿದ್ದ ಕಪ್ಪೆಗಳ ಸಂಕುಲ ಜೋರಾಗಿ ವಟಗುಟ್ಟತೊಡಗಿದವು.
ಮುಂಗಾಲಿನಿಂದ ಸನ್ನೆ ಮಾಡಿ ಹೆದರಿಸಲು ಪ್ರಯತ್ನಿಸಿದವು. ಇಳಿಯಲು ಪ್ರಚೋದಿಸತೊಡಗಿದವು.
ಆದರೆ ಆ ಕಪ್ಪೆ ಕೆಳಗೆ ನೋಡುತ್ತಿತ್ತು ನಾಲ್ಕು ಹೆಜ್ಜೆ ಮುಂದಕ್ಕೆ ಏರುತ್ತಿತ್ತು. ಅಂತೂ ಇಂತೂ ಹಾಗೂ ಹೀಗೂ ಪ್ರಯತ್ನ ಮಾಡಿ ಮರವನ್ನು ಏರಿಯೇ ಬಿಟ್ಟಿತು. ಇಷ್ಟೊತ್ತು ಬೇಡವೆಂದು ಅರಚುತ್ತಿದ್ದ ಕಪ್ಪೆಗಳೆಲ್ಲಾ ವಿಸ್ಮಯಗೊಂಡು ಕಪ್ಪೆಯ ಸಾಹಸಕ್ಕೆ ಮರದ ಸುತ್ತ ಸೇರಿದವರು ಚಪ್ಪಾಳೆ ತಟ್ಟಿದವರು. ಇಳಿದು ಬಂದ ಕಪ್ಪೆಯ ಮರೆವಣಿಗೆ ಮಾಡಿದರು. ಅದಕ್ಕೆ ಸನ್ಮಾನ ಮಾಡಿ ನಾಯಕನ ಪಟ್ಟ ಕಟ್ಟಿದರು.
ಕೊನೆಗೆ ಹಿರಿಯ ಕಪ್ಪೆ ಅಚ್ಚರಿಗೊಂಡು ಗೆದ್ದ ಕಪ್ಪೆಯನ್ನು ಜೋರಾಗಿ ಕೇಳಿತು “ ಕಪ್ಪೆಗಳೆಲ್ಲಾ ಬೇಡವೆಂದರೂ, ಇಳಿದು ಬರಲು ಎಷ್ಟೇ ಒತ್ತಾಯಿಸಿದರು, ಅದೆಷ್ಟು ಹೆದರಿಸಿದರೂ ನೀನು ಅದು ಹೇಗೆ ಅಷ್ಟು ಎತ್ತರಕ್ಕೆ ಏರಿದೆ? ಭಯವಾಗಲಿಲ್ಲವೇ?
ಗೆದ್ದ ಕಪ್ಪೆಯೂ ಆತಂಕಗೊಂಡು ಹೇಳಿತು “ ಏನು ಇವರೆಲ್ಲಾ ಇಳಿದು ಬರಲು ಹೇಳಿದರಾ? ಹೆದರಿಸಲು ನೋಡಿದರಾ? ಅದೆಲ್ಲಾ ನನಗೆ ಗೊತ್ತಾಗಲೇ ಇಲ್ಲವಲ್ಲಾ. ನನಗೆ ತಲುಪುವ ಗುರಿ ಮಾತ್ರ ಕಾಣುತ್ತಿತ್ತು ಹಾಗೂ ಕೆಳಗಿನ ಕಪ್ಪೆ ಬಾಂಧವರೆಲ್ಲಾ ನನ್ನನ್ನು ಮೇಲಕ್ಕೆ ಏರಲು ಹುರಿದುಂಬಿಸುತ್ತಿದ್ದಾರೆ ಎಂದೇ ಅನ್ನಿಸಿತು. ಆಗುವುದಿಲ್ಲವೆಂದು ಹೆದರಿದ ಹನುಮಂತನೇ ಕಪಿಸೈನ್ಯದ ಪ್ರೋತ್ಸಾಹದಿಂದ ಸಮುದ್ರ ಲಂಘಿಸಿದ ಕಥೆ ನನಗೆ ಗೊತ್ತಿತ್ತು. ಆದ್ದರಿಂದ ಇವರೆಲ್ಲಾ ನನಗೆ ಪ್ರೋತ್ಸಾಹ ಕೊಡುತ್ತಿದ್ದಾರೆಂದುಕೊಂಡು ನನ್ನ ಶಕ್ತಿಯನ್ನೆಲ್ಲಾ ಒಂದುಗೂಡಿಸಿಕೊಂಡು ಮೇಲೆ ಮೇಲಕ್ಕೆ ಏರತೊಡಗಿದೆ.”
ಮುದಿ ಕಪ್ಪೆಯೊಂದು ನಡುವೆ ಬಾಯಿ ಹಾಕಿ “ಅಂದರೆ ನಾವು ಇಷ್ಟೊಂದು ಜನ ಕೆಳಗೆ ಇಳಿ, ಅಪಾಯ ತಂದುಕೊಳ್ಳಬೇಡ, ನಮ್ಮ ಕುಲದಲ್ಲೆ ಯಾರೂ ಮರ ಏರಿಲ್ಲ, ಸಾಹಸ ಮಾಡಿ ಸಾಯಬೇಡ” ಎಂದು ಕೂಗಿ ಹೇಳಿದ್ದು ನಿನಗೆ ಕೇಳಿಸಲಿಲ್ಲವೇ?”
“ಅದು ಹೇಗೆ ತಾತಾ ಕೇಳಿಸುತ್ತೇ. ನನಗೆ ಕಿವಿ ಮಂದ ಎನ್ನುವುದು ನಿಮಗೆ ಗೊತ್ತಿಲ್ಲವೇ. ಮೇಲೆ ಮೇಲಕ್ಕೆ ಏರಿದಂತೆ ನನಗೆ ಯಾವ ಶಬ್ಗವೂ ಕೇಳಲಿಲ್ಲ. ಆದರೆ ನೀವು ಕೈ ಎತ್ತಿ ಹೇಳುತ್ತಿದ್ದಿದ್ದನ್ನೇ ನನಗೆ ಪ್ರೋತ್ಸಾಹ ಕೊಡುತ್ತಿದ್ದೀರಿ ಎಂದುಕೊಂಡು ಏರುವ ಸಾಹಸ ಮಾಡಿ ಗುರಿ ಮುಟ್ಟಿದೆ, ನಾಯಕನ ಪಟ್ಟ ಗಿಟ್ಟಿಸಿದೆ?” ಎಂದು ಹೇಳಿದಾಗ ಅಲ್ಲಿ ನೆರೆದಿರುವ ಎಲ್ಲರಿಗೂ ಅಚ್ಚರಿಯ ಮೇಲೆ ಅಚ್ಚರಿ.
ಇಲ್ಲಿ ಈ ಕಪ್ಪೆಗಳ ಕಥೆ ಕೇವಲ ನೆಪ ಮಾತ್ರ. ಸಾಧನೆಯ ಹಾದಿಯಲ್ಲಿ ಕಾಲೆಳೆಯುವವರೇ ಹೆಚ್ಚಿರುತ್ತಾರೆ. ಮುಂದೆ ಹೋಗ ಬಯಸುವವರ ನಿಂದಿಸಿ ಹಿಂದಕ್ಕೆಳೆಯುವವರು ನಮ್ಮದೇ ಕುಟುಂಬದವರಿಂದ ಹಿಡಿದು ಊರ ತುಂಬಾ ಇದ್ದೇ ಇರುತ್ತಾರೆ. ಈ ನಕಾರಾತ್ಮಕ ಮಾತುಗಳಿಗೆ ಮನ್ನಣೆ ನೀಡದೇ ಜಾಣ ಕಿವುಡುತನ ತೋರಿ ಇಟ್ಟ ಗುರಿ ಮುಟ್ಟಲು ಮುಂದೆ ಮುಂದೆ ಸಾಗಿದಾಗ ಮಾತ್ರ ಸಾಧನೆ ಸಾಧ್ಯ. ಕಾಲೆಳೆದವರು, ನಿಂದಿಸಿದವರು, ಹೀಯಾಳಿಸಿದವರು, ನಿರುತ್ಸಾಹಿಯನ್ನಾಗಿಸುವವರೇ ಸಾಧನೆ ಮಾಡಿದಾಗ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಾರೆ ಹೊಗಳುತ್ತಾರೆ ಸನ್ಮಾನಿಸುತ್ತಾರೆ. ಎತ್ತರಕ್ಕೆ ಹತ್ತಿ ನಿಂತವನನ್ನು ಕೆಳಗೆ ನಿಂತಲ್ಲೆ ನಿಂತು ನೋಡುವವರು ಮೆಚ್ಚಿ ಮಾತಾಡುತ್ತಾರೆ. ಸಾಧಕನಿಗೆ ಬೇಕಿರುವುದು ಗುರಿಯತ್ತ ಲಕ್ಷ್ಯ, ಸತತ ಪರಿಶ್ರಮಗಳು ಮಾತ್ರ. ಸೂಕ್ತ ದಾರಿಯನ್ನು ಆರಿಸಿಕೊಂಡು, ಆಡಿಕೊಳ್ಳುವವರ ಮಾತುಗಳನ್ನು ನಿರ್ಲಕ್ಷಿಸಿ, ನಕಾರಾತ್ಮಕ ಸಲಹೆ ಉಪದೇಶಗಳನ್ನು ಉಪೇಕ್ಷಿಸಿ ಮುಂದೆ ಮುಂದಕ್ಕೆ ಸಾಗಿದರೆ ಗುರಿ ಮುಟ್ಟಬಹುದು. ಸಕಾರಾತ್ಮಕ ಮನೋಭಾವನೆ ಸಾಧನೆಗೆ ಮೆಟ್ಟಲಾಗಬಹುದು.
-ಶಶಿಕಾಂತ ಯಡಹಳ್ಳಿ.
25-4-2023