ತಹ ತಹ
ಅಂಬೇಡ್ಕರ್ ಆಶಯದ ಸಂವಿಧಾನ ರಕ್ಷಣೆ ತಕ್ಷಣದ ಆದ್ಯತೆ
ಇವತ್ತು ಎಪ್ರಿಲ್ 14, ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ 132 ನೇ ಜಯಂತಿ. ಜನಸಾಮಾನ್ಯರಿಂದ ಹಿಡಿದು ಸರಕಾರದವರೆಗೆ ಈ ದಿನವನ್ನು ಸಂಭ್ರಮದಿಂದ ಮಹಾಪರಿನಿರ್ವಾಣ ದಿನವನ್ನಾಗಿ ಆಚರಿಸಲಾಗುತ್ತದೆ. ಇನ್ನು ಕೆಲವರಿದ್ದಾರೆ ಮೇಲ್ಜಾತಿಯ ಜಾತಿವಾದಿಗಳು, ಹಿಂದುತ್ವವಾದಿಗಳು, ಸಮಾನತೆಯ ವಿರೋಧಿಗಳು, ಅಂಬೇಡ್ಕರ್ ರವರನ್ನು ದ್ವೇಷಿಸುತ್ತಲೇ ಬಂದಿದ್ದಾರೆ. ಇಂತವರು ಅಲ್ಪಸಂಖ್ಯಾತರಾದರೂ ಬಹುಸಂಖ್ಯಾತರ ಮೇಲೆ ಪ್ರಭಾವಬೀರಬಲ್ಲ ಆಳುವ ವರ್ಗದವರಾಗಿದ್ದಾರೆ. ಜಾತಿ ತಾರತಮ್ಯ ಹಾಗೂ ಅಸಮಾನತೆಯ ಪೋಷಕರಾಗಿದ್ದಾರೆ. ಅವರ ಯಜಮಾನಿಕೆಗೆ ಅಂಬೇಡ್ಕರ್ ಹಾಗೂ ಸಂವಿಧಾನ ಅಡೆತಡೆಯನ್ನುಂಟು ಮಾಡುತ್ತಿದೆ. ಹಾಗಾಗಿ ಸಂವಿಧಾನವನ್ನೇ ಬದಲಾಯಿಸುವ ಹುನ್ನಾರ ಹಿಂದುತ್ವವಾದಿ ಸಂಘದವರಿಂದ ನಡೆಯುತ್ತಿದೆ. ಅಂಬೇಡ್ಕರ್ ರವರನ್ನು ಅಪ್ರಸ್ತುತಗೊಳಿಸುವ ಪ್ರಯತ್ನವೂ ಜಾರಿಯಲ್ಲಿದೆ. ಈ ದೇಶದ ಪ್ರಜಾತ್ರಂತ್ರದ ಉಳಿವು ಮತ್ತು ಅಳಿವು ಸಂವಿಧಾನದ ರಕ್ಷಣೆ ಹಾಗೂ ಅಂಬೇಡ್ಕರ್ ರವರ ಸಮಾನತಾವಾದದ ಆಚರಣೆಯಲ್ಲಿದೆ.
ಸಮಾನತೆ ಸಾರುವ ಬಾಬಾಸಾಹೇಬರ ನಾಯಕತ್ವದಲ್ಲಿ ರಚಿತ ಭಾರತದ ಸಂವಿಧಾನ ನಿಜಕ್ಕೂ ಅಪಾಯದಲ್ಲಿದೆ. ಯಾರಿಂದ ಎಂದು ವಿಶೇಷವಾಗಿ ವಿವರಿಸಬೇಕಿಲ್ಲ. ಅಂಬೇಡ್ಕರರ ಸಂವಿಧಾನವನ್ನು ಮನುಸ್ಮೃತಿ ಆಧಾರದಲ್ಲಿ ಮರುನಿರ್ಮಾಣ ಮಾಡಿ ಮತ್ತೆ ಚತುರ್ವರ್ಣ ವ್ಯವಸ್ಥೆಯನ್ನು ಜಾರಿಗೆ ತರುವುದು ಮನುವಾದಿ ಪ್ಯಾಸಿಸ್ಟ್ ಸಂಘಿಗಳ ಅಂತಿಮ ಗುರಿಯಾಗಿದೆ. ಅದಕ್ಕಾಗಿ ಹಿಂದೂರಾಷ್ಟ್ರ, ರಾಷ್ಟ್ರೀಯವಾದ, ಒಂದು ದೇಶ, ಒಂದು ಧರ್ಮ, ಒಂದು ಸಂಸ್ಕೃತಿಯಂತಹ ತರಹೇವಾರಿ ಸಮೂಹ ಸನ್ನಿ ಹತಾರಗಳ ಪ್ರಯೋಗವನ್ನು ನಿರಂತರವಾಗಿ ಮಾಡಲಾಗುತ್ತಿದೆ. ದೇಶಾದ್ಯಂತ ಅನ್ಯ ಧರ್ಮದ್ವೇಷವನ್ನು ಹುಟ್ಟಿಸಿ ಕೋಮುದೃವೀಕರಣದ ಮೂಲಕ ಪ್ರಭುತ್ವದ ಅಧಿಕಾರವನ್ನು ಗಟ್ಟಿಗೊಳಿಸಿಕೊಳ್ಳುತ್ತಲೇ ಈಗಿರುವ ಸಂವಿಧಾನವನ್ನು ದುರ್ಬಲಗೊಳಿಸುವುದು ಹಾಗೂ ಹಿಂದೂರಾಷ್ಟ್ರ ಸ್ಥಾಪನೆಯ ಮೂಲಕ ಹಿಂದುತ್ವವಾದ ಪ್ರಣೀತ ಸಂವಿಧಾನವನ್ನು ಜಾರಿಗೆ ತರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಉದ್ದೇಶವಾಗಿದೆ.
ಅವರ ಈ ಗುರಿ ಸಾಧನೆಗೆ ಮೊದಲಿನಿಂದಲೂ ಅಡ್ಡಿಯಾಗಿದ್ದು ಅಂಬೇಡ್ಕರ್ ಹಾಗೂ ಅವರ ಸಮಸಮಾಜ ಪರಿಕಲ್ಪನೆಯ ಸಂವಿಧಾನ ಮತ್ತು ಬಾಬಾಸಾಹೇಬರ ಅಸಂಖ್ಯಾತ ಅಭಿಮಾನಿ ಜನಸಮೂಹ. ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಮೊದಲು ಪ್ರಭುತ್ವಾಧಿಕಾರವನ್ನು ಪಡೆಯಬೇಕಿತ್ತು, ಭಾರತದಾದ್ಯಂತ ದೇವರು ಧರ್ಮದ ಹೆಸರಲ್ಲಿ ಭಾವತೀವ್ರತೆಯನ್ನು ಪ್ರಚೋದಿಸಿ, ಕೋಮುದಳ್ಳುರಿ ಹೆಚ್ಚಿಸಿ ಪ್ರಜಾಪ್ರಭುತ್ವದ ದಾರಿಯನ್ನೇ ಬಳಸಿಕೊಂಡು ದೇಶದ ಆಡಳಿತಾಧಿಕಾರದ ಚುಕ್ಕಾಣಿಯನ್ನು ಸಂಘದ ರಾಜಕೀಯ ಅಂಗವಾದ ಬಿಜೆಪಿ ಪಕ್ಷದ ಮೂಲಕ ಹಿಡಿದಿದ್ದಾಯ್ತು.
“ತಾವು ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಾಯಿಸಲು” ಎಂದು ಬಿಜೆಪಿಗರು ಬಹಿರಂಗವಾಗಿ ಸಾರಿದ್ದಾಯ್ತು. ಸಂವಿಧಾನದ ಪ್ರತಿಯನ್ನೇ ಕೆಲವು ಸಂಘಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸುಟ್ಟಿದ್ದಾಯ್ತು. ಹಲವಾರು ಸ್ಥಳಗಳಲ್ಲಿ ಅಂಬೇಡ್ಕರರ ಪ್ರತಿಮೆಗೆ ಹಾನಿ ಮಾಡಿದ್ದಾಯ್ತು. ಇವರು ಏನೇ ಮಾಡಿದರೂ ಅದಕ್ಕೆ ಪ್ರತಿರೋಧವೂ ಅಷ್ಟೇ ತೀಕ್ಷ್ಣವಾಗಿ ಬರತೊಡಗಿತು. ಬಹುಸಂಖ್ಯಾತ ಸ್ವಾಭಿಮಾನಿ ಅಂಬೇಡ್ಕರ್ ವಾದಿಗಳು ಹಾಗೂ ಪ್ರಜಾತಂತ್ರ ರಕ್ಷಣೆಗೆ ಬದ್ದರಾಗಿರುವವರು ಸಂಘ ಪರಿವಾರದ ಸಂವಿಧಾನ ವಿರೋಧಿತನವನ್ನು ವಿರೋಧಿಸಿದರು. ಇದು ಸಂಘ ಪರಿವಾರದ ಗುರಿ ಸಾಧನೆಗೆ ತೀವ್ರ ಅಡತಡೆಯನ್ನುಂಟುಮಾಡಿತು.
ಹಾಗಂತ ನಾಗಾಪುರದವರೇನೂ ಸುಮ್ಮನಾಗಲಿಲ್ಲ. ಸಂಘ ಪರಿವಾರದ ಅಂಗಗಳ ಮೂಲಕ ಸಮೂಹ ಮಾಧ್ಯಮಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರು, ಕಾರ್ಯಾಂಗದ ಆಯಕಟ್ಟು ಜಾಗಗಳಿಗೆ ಸಂಘೀವಾದಿಗಳನ್ನು ನಿಯಮಿಸಿಕೊಂಡರು. ಸಂಸತ್ತನ್ನು ತಮ್ಮಿಚ್ಚೆಯಂತೆ ನಡೆಸಲು ಕಾರ್ಯಪ್ರವೃತ್ತರಾದರು. ಅನೇಕ ರಾಜ್ಯಗಳಲ್ಲಿ ಆಪರೇಶನ್ ಕಮಲದ ಮೂಲಕ ರಾಜ್ಯಾಧಿಕಾರವನ್ನು ದಕ್ಕಿಸಿಕೊಂಡರು. ನ್ಯಾಯಾಂಗದ ಮೇಲೆಯೂ ಒತ್ತಡ ಹೇರುವ ಪ್ರಯತ್ನಮಾಡಿ ಕೆಲವೊಮ್ಮೆ ತಮ್ಮ ಸಿದ್ದಾಂತಕ್ಕೆ ಪೂರಕವಾದ ನ್ಯಾಯನಿರ್ಣಯವಾಗುವಂತೆ ನೋಡಿಕೊಂಡರು. ಪ್ರತಿರೋಧಿಸಿದವರನ್ನು ದೇಶದ್ರೋಹಿಗಳೆಂದು ಆರೋಪಿಸಿ ಕಾನೂನಾತ್ಮಕ ಚಿತ್ರಹಿಂಸೆ ಕೊಟ್ಟರು. ಹೀಗೆ ಪ್ರಜಾತಂತ್ರದ ನಾಲ್ಕೂ ಅಂಗಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಾದ ಮೇಲೆ ಇನ್ನೇನುಳಿದಿದೆ? ಮುಂದಿನ ಹಂತವೇ ಸಂವಿಧಾನವನ್ನು ಸಂಘದ ಆಶಯಕ್ಕೆ ಪೂರಕವಾಗಿ ಸಾವಕಾಶವಾಗಿ ಬದಲಾಯಿಸುವುದು ಅಷ್ಟೇ ಬಾಕಿ ಇದೆ. ಮುಂದಿನ ಸಲ ಕೇಂದ್ರದಲ್ಲಿ ಮತ್ತೆ ಬಹುಮತದಿಂದ ಅಧಿಕಾರಕ್ಕೆ ಬಂದು ಸಂವಿಧಾನವನ್ನು ಬದಲಾಯಿಸುವ ಹಾಗೂ ಮನುಸ್ಮೃತಿ ಆಧಾರಿತ ಮನುವಾದಿ ಪ್ರೇರಿತ ಸಂವಿಧಾನವನ್ನು ಜಾರಿಗೆ ತರಲಾಗುತ್ತದೆ ಎಂಬ ಆತಂಕ ಕಾಡುತ್ತಿದೆ.
ಈ ಹಾರ್ಡಕೋರ್ ಹಿಂದಿತ್ವವಾದಿ ಸಂಘವು ಭಾರತದ ಬಾವುಟವನ್ನು ಸಹ ಒಪ್ಪಿಕೊಳ್ಳದೇ ಮೊದಲಿನಿಂದಲೂ ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿದೆ. ಈಗಿರುವ ಸಂವಿಧಾನವನ್ನು ಬದಲಾಯಿಸಬೇಕೆಂದರೆ ಮೊದಲು ಅಂಬೇಡ್ಕರ್ ರವರ ಪ್ರಭಾವವನ್ನು ಕಡಿಮೆ ಮಾಡಬೇಕಾಗಿತ್ತು. ಅದಕ್ಕಾಗಿಯೇ ಬಾಬರಿ ಮಸೀದಿ ದ್ವಂದಕ್ಕೆ ಸಂಘಿಗಳು ಆಯ್ಕೆ ಮಾಡಿಕೊಂಡ ದಿನಾಂಕ ಯಾವುದು ಗೊತ್ತಾ? ಅದು ಅಂಬೇಡ್ಕರ್ ರವರು ತೀರಿಕೊಂಡ ಮಹಾಪರಿನಿರ್ವಾಣದ ದಿನಾಂಕ.
ಕೊಟ್ಯಾಂತರ ದೀನ ದಲಿತ ಸಮುದಾಯ ಡಿಸೆಂಬರ್ 6 ರಂದು ಬಾಬಾಸಾಹೇಬರ ಪುಣ್ಯತಿಥಿಯನ್ನು ಆಚರಿಸಿ ಅವರನ್ನು ನೆನಪಿಸಿಕೊಳ್ಳುತ್ತಾರೆ. ಹೇಗಾದರೂ ಮಾಡಿ ಆ ದಿನದ ನೆನಪನ್ನು ಜನಸಮೂಹದಿಂದ ಅಳಿಸಿಹಾಕಿ ಹೊಸದೊಂದು ಘಟನೆಯನ್ನು ಅಚ್ಚೊತ್ತಬೇಕು ಎನ್ನುವುದು ಸಂಘದ ರೂವಾರಿಗಳ ತಂತ್ರಗಾರಿಕೆಯ ಭಾಗವಾಗಿತ್ತು. ಅದಕ್ಕಾಗಿ ರಾಮಮಂದಿರ ಆಂದೋಲನದ ಭಾಗವಾಗಿ ಡಿಸೆಂಬರ್ 6 ರಂದೇ ಬಾಬರಿ ಮಸೀದಿ ದ್ವಂಸವನ್ನು ಮಾಡಿ ಇಡೀ ದೇಶದ ಕೋಮು ಸೌಹಾರ್ಧತೆಗೆ ರಣಗಾಯವನ್ನು ಸಂಘ ಪರಿವಾರದವರು ಮಾಡಿದ್ದಾಯ್ತು. ಈಗ ಡಿಸೆಂಬರ್ 6 ಎಂದ ಕೂಡಲೇ ಅಂಬೇಡ್ಕರರವರ ಪುಣ್ಯತಿಥಿಗಿಂತಲೂ ಮೊದಲು ಬಹುತೇಕ ದೇಶವಾಸಿಗಳ ನೆನಪಿಗೆ ಬರುವುದು ಬಾಬರಿ ಮಸೀದಿ ಧ್ವಂಸ ಪ್ರಕರಣ ಮಾತ್ರ. ಇದು ಅಂಬೇಡ್ಕರ್ ರವರ ನೆನಪನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಮಾಡಲಾದ ವ್ಯವಸ್ಥಿತ ಪಿತೂರಿಯಾಗಿತ್ತು. ಹಾಗೂ ಸಮೂಹ ಸನ್ನಿಯನ್ನು ಹುಟ್ಟು ಹಾಕುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯನ್ನು ಮುರಿದು ಸಂವಿಧಾನವನ್ನೂ ಉಲ್ಲಂಘಿಸಿ ಪ್ರಜಾತಂತ್ರಕ್ಕೆ ಅಪಮಾನ ಮಾಡಲಾಯಿತು. ಇಷ್ಟಕ್ಕೆ ಸುಮ್ಮನಾಗದೇ ಬಹುಜನರು ಆಚರಿಸುವ ಅಂಬೇಡ್ಕರ್ ರವರ ಮಹಾನಿರ್ವಾಣದ ದಿನಾಚರಣೆಯನ್ನು ಮರೆಮಾಚಲು ಪ್ರತಿ ವರ್ಷ ಬಿಜೆಪಿ, ವಿಶ್ವಹಿಂದೂ ಪರಿಷತ್ತು, ಬಜರಂಗದಳ ಮುಂತಾದ ಸಂಘಪರಿವಾರದವರು ಡಿಸೆಂಬರ್ 6 ರಂದು ಶೌರ್ಯ ದಿವಸ್ ಅಥವಾ ವಿಜಯ್ ದಿವಸ್ ಆಚರಿಸುವ ಪರಂಪರೆಯನ್ನು ಜಾರಿಗೆ ತಂದಿತು.
1949ರಲ್ಲಿ ಸಂವಿಧಾನ ಸಿದ್ದವಾದಾಗ ಆರೆಸ್ಸೆಸ್ಸ್ ಅದನ್ನು ತೀವ್ರವಾಗಿ ವಿರೋಧಿಸಿತು. 30-11-1949 ರಂದು ತನ್ನ ಮುಖವಾಣಿಯಾದ ಆರ್ಗನೈಸರ್ ಪತ್ರಿಕೆಯಲ್ಲಿ “ಭಾರತದ ಹೊಸ ಸಂವಿಧಾನದ ಕೆಟ್ಟ ವಿಷಯವೇನೆಂದರೆ ಅದರಲ್ಲಿ ಭಾರತೀಯತೆ ಇಲ್ಲ. ಪ್ರಾಚೀನ ಭಾರತೀಯತೆಯ ಕುರುಹುಗಳಿಲ್ಲ. ಮನುವಿನ ಕಾನೂನುಗಳು ಬಹಳ ಹಿಂದೆಯೇ ಬರೆಯಲ್ಪಟ್ಟಿವೆ…. ಇಂದಿಗೂ ಮನುಸ್ಮೃತಿಯಲ್ಲಿ ವಿವರಿಸಿರುವ ಕಾನೂನುಗಳು ಪ್ರಪಂಚದ ಮೆಚ್ಚುಗೆಯನ್ನು ಗಳಿಸಿವೆ ಮತ್ತು ಸ್ವಯಂಪ್ರೇರಿತ ವಿಧೇಯತೆ ಮತ್ತು ಅನುಸರಣೆಯನ್ನು ಹೊರಹೊಮ್ಮಿಸುತ್ತವೆ..” ಎಂದು ತನ್ನ ಸಂವಿಧಾನ ವಿರೋಧಿ ಹಾಗೂ ಮನುಸ್ಮೃತಿ ಪರ ನಿಲುವನ್ನು ಆರೆಸ್ಸೆಸ್ಸ್ ಸ್ಪಷ್ಟಪಡಿಸಲಾಗಿತ್ತು.
ಅವತ್ತಿನಿಂದ ಇವತ್ತಿನ ತನಕ ಸಂಘ ಪರಿವಾರವು ಭಾರತದ ಸಂವಿದಾನವನ್ನು ಒಪ್ಪಲೆ ಇಲ್ಲ, ಮನುವಾದಿ ಸಂವಿಧಾನವನ್ನು ಜಾರಿಗೆ ತರುವ ತನ್ನ ಹಿಡನ್ ಅಜೆಂಡಾವನ್ನು ಬಿಡುತ್ತಿಲ್ಲ. ಅಸಮಾನತೆಯ ಅತಿರೇಕವಾದ ಮನುಸ್ಮೃತಿಯನ್ನು ಸಂವಿಧಾನ ರಚಿಸುವ ಹಲವು ವರ್ಷಗಳ ಮೊದಲೇ ಅಂಬೇಡ್ಕರ್ ರವರು ಸಾರ್ವಜನಿಕವಾಗಿ ಸುಟ್ಟುಹಾಕಿದ್ದರು. ಸಂವಿಧಾನದಲ್ಲಿ ಮನುಸ್ಮೃತಿಯ ನೆರಳೂ ಬೀಳದಂತೆ ನೋಡಿಕೊಂಡಿದ್ದರು. ಇದು ಈ ಮನುವಾದಿಗಳಿಗೆ ಅಪತ್ಯವಾಗಿದ್ದು ಇಂದಲ್ಲ ನಾಳೆ ಮನುಸ್ಮೃತಿಯನ್ನು ಶತಾಯ ಗತಾಯ ಜಾರಿಗೆ ತಂದೇ ತರುತ್ತೇವೆಂದು ಆರೆಸ್ಸೆಸ್ ನಿರ್ಧರಿಸಿಯಾಗಿದೆ. ಅದಕ್ಕಾಗಿ ಪ್ರಯತ್ನ ತೀವ್ರತರವಾಗಿ ಜಾರಿಯಲ್ಲಿದೆ.
ಅದರ ಭಾಗವಾಗಿಯೇ ಈಗಿರುವ ಸಂವಿಧಾನದ ಮೂಲಭೂತ ಅಂಶಗಳನ್ನು ಬದಲಾಯಿಸಲು ಬಿಜೆಪಿ ಮೂಲಕ ಸಂಘವು ಹಲವಾರು ಬಾರಿ ಪ್ರಯತ್ನಿಸಿದೆ. ಸಂವಿಧಾನ ಪರಿಶೀಲನಾ ಸಮಿತಿಯೊಂದನ್ನು ಆಗಿನ ಪ್ರದಾನ ಮಂತ್ರಿ ವಾಜಪೇಯಿಯವರು ರಚಿಸಿದ್ದನ್ನು ಮರೆಯಲಾಗದು. ಅನಂತ ಹೆಗಡೆಯವರಂತಹ ಸಂಸದರ ಬಾಯಲ್ಲಿ “ನಾವು ಬಂದಿರೋದೇ ಸಂವಿಧಾನ ಬದಲಾಯಿಸೋಕೆ” ಎಂದು ಹೇಳಿಸಲಾಗುತ್ತದೆ. ಸಂವಿಧಾನದ ಪ್ರತಿಯನ್ನು ಬೀದಿಯಲ್ಲಿ ಸುಡಲಾಗುತ್ತದೆ.
ಅಂಬೇಡ್ಕರ್ ರವರ ಜನ್ಮದಿನವನ್ನು ಆಚರಿಸುವ ಸಂದರ್ಭದಲ್ಲಿ ಎಲ್ಲಾ ಅಂಬೇಡ್ಕರ್ ಅಭಿಮಾನಿಗಳೂ ಹಾಗೂ ಸಂವಿಧಾನ ಪರ ಬೆಂಬಲಿಗರು ಮೊದಲು ಸಂವಿಧಾನ ಉಳಿಸಿ ಚಳುವಳಿಯನ್ನು ತೀವ್ರಗೊಳಿಸಬೇಕಿದೆ. ಸಂವಿಧಾನ ಉಳಿದರೆ ಅಂಬೇಡ್ಕರ್ ರವರೂ ಜನಮಾನಸದಲ್ಲಿ ಉಳಿಯುತ್ತಾರೆ. ಅಂಬೇಡ್ಕರ್ ರವರು ಉಳಿದರೆ ದೀನ ದಲಿತ ಶೂದ್ರರಾದಿಯಾಗಿ ಬಹುಜನರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುತ್ತಾರೆ. ಮನುವಾದಿಗಳ ಹುನ್ನಾರಕ್ಕೆ ಮುಂದೊಮ್ಮೆ ಸಮಾನತೆ ಸಾರುವ ಸಂವಿಧಾನ ಬದಲಾಗಿ ಮನುಧರ್ಮಶಾಸ್ತ್ರ ಆಧಾರಿತ ಸಂವಿಧಾನವೇನಾದರೂ ಅಸ್ತಿತ್ವಕ್ಕೆ ಬಂದಿದ್ದೇ ಆದರೆ ವೈದಿಕಶಾಹಿಗಳು ಹಾಗೂ ಮೇಲ್ವರ್ಗದವರನ್ನು ಹೊರತು ಪಡಿಸಿ ಅಸಂಖ್ಯಾತ ವರ್ಗ ತಮ್ಮ ಅಸ್ತಿತ್ವ ಹಾಗೂ ಅಸ್ಮಿತೆಯನ್ನು ಕಳೆದುಕೊಂಡು ದಾಸ್ಯದಲ್ಲಿ ಬದುಕಬೇಕಾಗುತ್ತದೆ. ಸಂವಿಧಾನದ ಉಳಿವಿನಲ್ಲಿ ಬಹುಜನರ ಉಸಿರಿದೆ. ಅಂಬೇಡ್ಕರ್ ರವರ ಹೆಸರಿದೆ.
ಅಂಬೇಡ್ಕರ್ ರವರವರಿಗೆ ಈ ಹಿಂದುತ್ವವಾದಿ ಶಕ್ತಿಗಳ ಬಗ್ಗೆ ಮೊದಲಿನಿಂದಲೂ ಆತಂಕ ಇದ್ದೇ ಇತ್ತು. ಅವರು 1949 ನವೆಂಬರ್ 17 ರಂದು ಸಂವಿಧಾನದ ಸಭೆಯಲ್ಲಿ ಅಂತಕದಿಂದ ಹೇಳಿದ ಈ ಮಾತುಗಳು ಅಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿವೆ. ಎಚ್ಚರದ ದ್ವನಿಯಾಗಿದೆ.
“ಚರಿತ್ರೆ ಮತ್ತೆ ಮರುಕಳಿಸುತ್ತದೆಯೆ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತಿದೆ. ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ ಮತ ಪಂಗಡಗಳ ಜೊತೆಗೆ ಇನ್ನು ಮುಂದೆ ವಿಭಿನ್ನ ಮತ್ತು ವಿರೋಧಿ ರಾಜಕೀಯ ಸಿದ್ದಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೇ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ತಮ್ಮ ಜಾತಿ ಮತ ಪಂಗಡಗಳಿಗಿಂತ ದೇಶವನ್ನು ಮುಖ್ಯವೆಂದು ಭಾವಿಸುತ್ತಾರೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಜಾತಿ ಮತ ಪಂಗಡಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ. ಆದರೆ ಇಷ್ಟಂತೂ ಖಚಿತ. ರಾಜಕೀಯ ಪಕ್ಷಗಳು, ಜಾತಿ ಮತ ಪಂಗಡಗಳನ್ನು ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೇವೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೂ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು..”
ಅಂಬೇಡ್ಕರ್ ರವರ ಈ ಆತಂಕವನ್ನು ಪ್ರಜ್ಞಾಪೂರ್ವಕ ಹೋರಾಟದ ಮೂಲಕ ನಿವಾರಿಸಿಕೊಳ್ಳಬೇಕೋ ಅಥವಾ ಹಿಂದುತ್ವವಾದಿಗಳ ಹುನ್ನಾರಕ್ಕೆ ಬಲಿಯಾಗಿ ಶಾಶ್ವತವಾಗಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕೋ ಎಂದು ಬಹುಸಂಖ್ಯಾತ ಶ್ರಮಿಕ ವರ್ಗ ಯೋಚಿಸಬೇಕಿದೆ. ನಮ್ಮನ್ನು ಭಾವತೀವ್ರತೆಗೆ ಈಡುಮಾಡಿ ಸಮೂಹ ಸನ್ನಿ ಹುಟ್ಟಿಸುವ ಪ್ಯಾಸಿಸ್ಟ್ ಶಕ್ತಿಗಳನ್ನು ಜನಾಲೋಂದನಗಳ ಮೂಲಕ ಪ್ರತಿರೋಧಿಸುವ ಮೂಲಕ ಸಮತಾವಾದಿ ಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಜನುಮ ದಿನವನ್ನು ಸ್ಮರಿಸಿಕೊಳ್ಳೋಣ. ಸಂವಿಧಾನದ ರಕ್ಷಣೆಗೆ ಪಣತೊಡೋಣ.
-ಶಶಿಕಾಂತ ಯಡಹಳ್ಳಿ
14-04-2023
ಉತ್ತಮ ಲೇಖನ
ಪ್ರತ್ಯುತ್ತರಅಳಿಸಿ