ಜೈ ಜವಾನ್ ಆಯ್ತು.. ಜೈ ಕಿಸಾನ್
ಯಾವಾಗ..?
ಇಂಡೋಚೀನಾದ ಗಡಿಗೆ ಹೋದ ನಮ್ಮ
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರ ಜೊತೆಗೆ ಸೇರಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿ
ಸಂಭ್ರಮಿಸಿದ್ದು ನಿಜಕ್ಕೂ ಅಭಿನಂದನೀಯ. ಅಕ್ಟೋಬರ್ 30 ರಂದು ಹಿಮಾಚಲ ಪ್ರದೇಶದ ಕಿನ್ನೋರ್ ಜಿಲ್ಲೆಯ
ಚೀನಾಕ್ಕೆ ಹೊಂದಿಕೊಂಡ ಕಿನ್ನೋರ್ ಮತ್ತು ಸ್ಪೈಟಿ ಗಡಿಯಲ್ಲಿ ಬರುವ ಸುಮ್ಡೋ ಪ್ರದೇಶದಲ್ಲಿರುವ ಯೋಧರ
ಜೊತೆಗೆ ಸಿಹಿ ಹಂಚಿ ಸಂಭ್ರಮಿಸಿ ಯೋಧರಿಗೆ ಸಮಾನ ಶ್ರೇಣಿ ಸಮಾನ ವೇತನ ಯೋಜನೆಯನ್ನು ಘೋಷಿಸಿದ ಪ್ರಧಾನಿಗಳನ್ನು
ಮೋದಿ ಭಕ್ತರಷ್ಟೇ ಅಲ್ಲಾ ಇಡೀ ದೇಶದ ಜನ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಅಭಿನಂದಿಸಲೇಬೇಕಿದೆ.
2014 ರಲ್ಲಿ ಸಿಯಾಚಿನ್ ಯುದ್ಧಭೂಮಿಗೆ ತೆರಳಿ ಅಲ್ಲಿಯ ಯೋಧರ ಜೊತೆಗೆ ದೀಪಾವಳಿ ಆಚರಿಸಿದ್ದ ಮೋದಿಯವರು,
2015 ರಲ್ಲಿ ಪಂಜಾಬಿನ ಭಾರತ-ಪಾಕ್ ಗಡಿಗೆ ತೆರಳಿ ದೀಪಾವಳಿ ಆಚರಿಸುವ ಮೂಲಕ ಸೈನಿಕರಿಗೆ ನೈತಿಕ ಸ್ತೈರ್ಯವನ್ನು
ತುಂಬುವಲ್ಲಿ ಯಶಸ್ವಿಯಾದರು. ದೇಶದ ಪ್ರಧಾನಿಯೊಬ್ಬರು ಈ ರೀತಿ ದೇಶರಕ್ಷಕರಿಗೆ ದೈರ್ಯ ತುಂಬುವ ಕೆಲಸವನ್ನು
ಮಾಡಿದ್ದು ಮಾದರಿಯಾಗಿದೆ.
ಜೈ ಜವಾನ್ ಎಂದಿರುವ ಮೋದಿ
ಸಾಹೇಬರು ಒಂದಿಷ್ಟು ಜೈ ಕಿಸಾನ್ ಎಂದಿದ್ದರೂ ಅವರನ್ನು ಹೆಗಲಮೇಲೆ ಹೊತ್ತು ಮೆರೆಸಬಹುದಾಗಿತ್ತು. ಒಂದು
ದೇಶದ ರಕ್ಷಣೆಗೆ ಯೋಧರು ಅದೆಷ್ಟು ಮುಖ್ಯರೋ ಅದೇ ರೀತಿ ಯೋಧರ ಸಮೇತ ದೇಶವಾಸಿಗಳು ಜೀವಂತವಾಗಿರಲು ಅನ್ನಾಹಾರಗಳನ್ನು
ಉತ್ಪಾದಿಸುವವರೂ ಅತೀ ಮುಖ್ಯ. ಗಡಿಗಳ ರಗಳೆ ಸರಿಪಡಿಸಿ ಸೈನಿಕರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಬಹುದಾದರೂ,
ಅನ್ನ ಬೆಳೆಯುವ ರೈತರೇ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂದರೆ ಸೈನಿಕರಿಗಿಂತಲೂ
ಅನ್ನದಾತರು ಒಂದು ಪಾಲು ಮೇಲೆ ಎನ್ನುವುದು ಅನ್ನ ತಿನ್ನುವವರಿಗೆಲ್ಲರಿಗೂ ಆರಿವಾಗುವಂತಹುದೇ ಆಗಿದೆ.
ಲೇಸರ್ ಬೇಲಿಗಳನ್ನು ಹಾಕಿಯೋ, ಮುಂದೆ ರೊಬೋಟ್ ಸೈನಿಕರನ್ನು ಸೃಷ್ಟಿಸಿಯೋ ಗಡಿಗಳ ರಕ್ಷಣೆ ಮಾಡಿಕೊಳ್ಳಬಹುದಾಗಿದೆ.
ಆದರೆ ಯಂತ್ರಮಾನವರನ್ನು ಬಳಸಿ ಬೆಳೆ ಬೆಳೆಯುವುದು ಅಸಾಧ್ಯದ ಮಾತು. ಮನುಷ್ಯರಿಗೆ ಎಲ್ಲಕ್ಕಿಂತಲೂ ಅಗತ್ಯವಾದದ್ದು
ಅನ್ನ, ನೀರು ಮತ್ತು ಗಾಳಿ. ಸೈನಿಕರೊಂದಿಗೆ ದೀಪಾವಳಿ ಆಚರಿಸಿ ಸಮಾನ ವೇತನ ಕೊಡುವ ಪ್ರಧಾನಿಗಳು ದೇಶದ ಜೀವನಾಡಿಯಾದ ರೈತಸಮುದಾಯದ ಜೊತೆ ಯುಗಾದಿ ಆಚರಿಸಿ
ಅವರ ಕಷ್ಟ ನಷ್ಟಗಳನ್ನೇಕೆ ಕೇಳಬಾರದು? ಅನ್ನ ಬೆಳೆಯುವ ರೈತ, ಕೂಲಿಜನರಿಗೆ ಯಾಕೆ ಆರ್ಥಿಕ ಸಹಾಯ ಘೋಷಿಸಬಾರದು?
ಯುದ್ಧ ಇರಲಿ ಬಿಡಲಿ ಯೋಧರಿಗೆ ಸಕಾಲದಲ್ಲಿ ಸಂಬಳ ಹಾಗೂ ಸವಲತ್ತುಗಳು ಸಿಕ್ಕೇ ಸಿಗುತ್ತವೆ. ಅದೇ ರೀತಿ
ಮಳೆ ಬರಲಿ ಬಿಡಲಿ, ಬೆಳೆ ಬರಲಿ ಇಲ್ಲವೇ ಬಿಡಲಿ.. ರೈತಾಪಿ ಜನರಿಗೆ ಯಾಕೆ ಸವಲತ್ತುಗಳು ದೊರೆಯುವುದಿಲ್ಲ?
ಕೂಲಿ ಜನರಿಗೆ ಕೆಲಸವಿಲ್ಲದಿದ್ದಾಗಳು ಯಾಕೆ ಕನಿಷ್ಟ ಸಂಬಳ ಸಿಗುವುದಿಲ್ಲ? ಸೈನಿಕನಿಗೆ ದೇಶ ಕಾಯುವುದು
ಹಾಗೂ ಶತ್ರುಗಳನ್ನು ಕೊಲ್ಲುವುದು ಗೊತ್ತಿದ್ದರೆ ರೈತನಿಗೆ ಅನ್ನ ಬೆಳೆದು ಜನರ ಜೀವ ಉಳಿಸುವುದು ಗೊತ್ತು. ಸೈನಿಕರಿಲ್ಲದ ನಾಡು ಕಟ್ಟಬಹುದೇ ಹೊರತು ರೈತ ಕೂಲಿ ಜನರಿಲ್ಲದ
ನಾಡನ್ನು ಕಟ್ಟಲು ಸಾಧ್ಯವೇ ಇಲ್ಲಾ.
ಆದ್ದರಿಂದ.. ಆಳುವವರ ಮೊದಲ
ಆಧ್ಯತೆ ಅನ್ನದಾತರ ಶ್ರೇಯೋಭಿವೃದ್ದಿಯಾಗಬೇಕು. ದೇಶಕ್ಕೆ ಅನ್ನ ಕೊಡುವ ರೈತ ಕೂಲಿಗಳು ಉಪವಾಸ ಮಲಗುವಂತಾಗಬಾರದು.
ಸೈನಿಕರು ಮಕ್ಕಳು ಓದುವಂತಹ ಸುಸಜ್ಜಿತ ಶಾಲೆಗಳಲ್ಲಿ ರೈತ ಹಾಗೂ ಕೂಲಿಗಳ ಮಕ್ಕಳು ಓದುವಂತಾಗಬೇಕು.
ಸೈನಿಕರ ಕುಟುಂಬಕ್ಕೆ ಸಿಗುವ ಕಡಿಮೆ ಬೆಲೆಯ ದಿನಸಿ ಇತ್ಯಾದಿ ಸಾಮಾನುಗಳು ರೈತ ಕೂಲಿ ಕುಟುಂಬಗಳಿಗೂ
ಸಿಗುವಂತಾಗಬೇಕು. ದುಡಿಯುವ ಜನರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳು ಖಡ್ಡಾಯವಾಗಿ ದಕ್ಕುವಂತಾಗಬೇಕು.
ಆದರೆ ನಮ್ಮ ನಾಡಿನ ಜೀವನಾಡಿಯಾದ ರೈತರು ಬೆಳೆಗೆ ಬೆಲೆ ಸಿಗದೇ, ಉತ್ತಿ ಬಿತ್ತಿದ ಬೆಳೆ ಕೈಗೆ ದಕ್ಕದೇ,
ಸಾಲಮಾಡಿದ್ದನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಡುತ್ತಿದ್ದಾರೆ. ರೈತರ ಆತ್ಮಹತ್ಯೆಯ
ಪ್ರಮಾಣಕ್ಕೆ ಹೋಲಿಸಿದರೆ ಸೈನಿಕರ ಆತ್ಮಹತ್ಯೆ ಪ್ರಕರಣಗಳು ನಗಣ್ಯವೆಂದೇ ಹೇಳಬೇಕು. ದೇಶದ ಪ್ರಧಾನಿಯಾದವರು
ಮೊಟ್ಟ ಮೊದಲು ಮಾಡಬೇಕಾದ ಕೆಲಸವೇನೆಂದರೆ ಅತಿವೃಷ್ಟಿ ಅನಾವೃಷ್ಟಿಯಿಂದ ತಲ್ಲಣಿಸಿದ ರೈತಾಪಿಜನರ ಸಹಾಯಕ್ಕೆ
ನಿಲ್ಲಬೇಕಿದೆ. ಮಳೆ ಬೆಳೆ ಹಾಗೂ ಬೆಲೆಗಳು ಕೈಕೊಟ್ಟರೂ ರೈತರು ನೆಮ್ಮದಿಯಿಂದ ಬದುಕುವಂತಹ ಆರ್ಥಿಕ ವ್ಯವಸ್ಥೆಯನ್ನು ಹುಟ್ಟುಹಾಕಬೇಕಿದೆ. ದುಡಿಯುವ
ವರ್ಗದವರ ಮಕ್ಕಳು ಇಷ್ಟಾ ಬಂದಷ್ಟು ಓದಲು ಉಚಿತ ವ್ಯವಸ್ಥೆ ಮಾಡಬೇಕಿದೆ. ಉತ್ಪಾದಕರು ಹಾಗೂ ಗ್ರಾಹಕರ
ನಡುವೆ ಇರುವ ದಲ್ಲಾಳಿ ವರ್ಗವನ್ನು ನಾಶಮಾಡಿ ಸರಕಾರವೇ ಸರಕು ಹಂಚಿಕೆಗೆ ಸಮಾನ ಅವಕಾಶ ಮಾಡಿಕೊಡಬೇಕಿದೆ.
ಉತ್ಪಾದಿಸುವುದಷ್ಟೇ ರೈತರ ಕೆಲಸವಾದರೆ ಅದರ ಬಟವಾಟೆ ಸರಕಾರದ ಆಧ್ಯ ಕೆಲಸವಾಗಬೇಕಿದೆ.
ಸೈನಿಕರಿಗೆ ಕೊಟ್ಟಷ್ಟೇ ಕಾಳಜಿ
ಮಹತ್ವವನ್ನು ರೈತಾಪಿಕೂಲಿ ಜನರಿಗೆ ಪ್ರಧಾನಿಗಳು ಕೊಟ್ಟು ಸಮರ್ಥ ಯೋಜನೆಗಳನ್ನು ರೂಪಿಸಿದರೆ ಸಾಕು
ಇಡೀ ದೇಶದ ದುಡಿಯುವ ವರ್ಗ ಪ್ರಧಾನಿಯನ್ನು ಬೆಂಬಲಿಸುತ್ತದೆ. ಇಲ್ಲವಾದರೆ.. ಒಂದು ಕಣ್ಣಿಗೆ ಸುಣ್ಣ
ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿದಂತಾಗುತ್ತದೆ. ಆದರೆ.. ಸೈನಿಕರ ಜೊತೆಗೆ ದೀಪಾವಳಿ ಆಚರಿಸಿದರೆ,
ಸೈನಿಕರು ಮಾಡಿದ ಸರ್ಜಿಕಲ್ ದಾಳಿಯನ್ನು ತಮ್ಮದೇ ಪ್ರಯತ್ನವೆಂದು ಹೊಗಳಿಸಿಕೊಂಡರೆ ಅದೆಲ್ಲಾ ರಾಜಕೀಯದ
ಗಿಮಿಕ್ ಎನಿಸಿಕೊಳ್ಳುತ್ತದೆ. ದೇಶವಾಸಿಗಳಲ್ಲಿ ದೇಶಭಕ್ತಿಯ ಉನ್ಮಾದವನ್ನು ಹೆಚ್ಚಿಸಲು ಸೈನಿಕರನ್ನು
ಹಾಗೂ ಸೈನ್ಯದ ಕಾರ್ಯಾಚರಣೆಗಳನ್ನು ಬಳಸಿಕೊಳ್ಳುವುದು ನಿಜಕ್ಕೂ ಅಕ್ಷಮ್ಯ. ಸೈನಿಕರಿಗೆ ಕೊಡುವ ನೈತಿಕ
ಬೆಂಬಲವಾಗಲೀ ಇಲ್ಲವೇ ಸೈನಿಕರು ಮಾಡುವ ಯುದ್ದ ನೀತಿಗಳೇ ಆಗಲಿ ಎಂದೂ ರಾಜಕೀಕರಣಗೊಳ್ಳಬಾರದು. ಸೈನಿಕರು
ಯಾವುದೇ ಪಕ್ಷ ಇಲ್ಲವೆ ಸರಕಾರದವರಲ್ಲ. ಅವರು ದೇಶಕ್ಕೆ ಸೇರಿದ ಪಕ್ಷಾತೀತ ಯೋಧರು. ಯಾವುದೇ ಯೋಧ ಒಂದು
ಪಕ್ಷ ಇಲ್ಲವೇ ಸರಕಾರದ ಪರವಾಗಿರೋದಿಲ್ಲ. ಇದ್ದರೆ ಆತ ಪಕ್ಷದ ಕಾರ್ಯಕರ್ತನಾಗುತ್ತಾನೆಯೇ ಹೊರತು ಯೋಧನಂತೂ
ಅಲ್ಲವೇ ಅಲ್ಲ. ಹೀಗಾಗಿ ಮೋದಿ ಹಾಗೂ ಅವರ ಪರವಾಗಿರುವ ಮಾಧ್ಯಮಗಳು ದೇಶಭಕ್ತಿಯ ಉನ್ಮಾದವನ್ನು ಜನರಲ್ಲಿ
ಹುಟ್ಟಿಸುವ ಪ್ರಯತ್ನವನ್ನು ಸತತವಾಗಿ ಮಾಡುತ್ತಿದ್ದಾರೆ ಹಾಗೂ ಅದಕ್ಕಾಗಿ ಯೋಧರನ್ನು ಹಾಗೂ ಗಡಿಕದನವನ್ನು
ಬಳಸಿಕೊಳ್ಳುತ್ತಿದ್ದಾರೆಂಬುದು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುತ್ತದೆ.
ಒಂದು ದೇಶದ ಪ್ರಧಾನಿಯಾದವರು
ಎಲ್ಲರನ್ನೂ ಸಮಾನವಾಗಿ ಕಾಣಬೇಕು. ರಾಜಕೀಯದ ಉದ್ದೇಶಗಳನ್ನು ಪಕ್ಕಕ್ಕಿಟ್ಟು ಬಹುಸಂಖ್ಯಾತ ದುಡಿಯುವ
ವರ್ಗಗಳ ಪರವಾಗಿ ನಿಲ್ಲಬೇಕು. ಇಡೀ ದೇಶದಲ್ಲಿ ಯಾರೂ ಹಸಿವೆಯಿಂದ ಬಳಲದಂತೆ, ಯಾವ ರೈತಾಪಿ ಜನರೂ ಆರ್ಥಿಕ
ಸಂಕಷ್ಟಕ್ಕೊಳಗಾಗಿ ಸಾಯದಂತೆ ವ್ಯವಸ್ಥೆಯನ್ನು ರೂಪಿಸಿಬೇಕು. ಯಾವುದೇ ಜಾತಿ ಧರ್ಮ ಮತ ಕುಲಗಳ ಹಂಗನ್ನು
ತೊರೆದು ಸರ್ವ ಜನರ ಸುಖಕ್ಕಾಗಿ ದುಡಿಯಬೇಕು. ಅಂತಹ ಮೇಧಾವಿತನವನ್ನು ಮೋದಿಯವರು ತೋರಿಸಿದ್ದೇ ಅದರೆ
ದೇಶದ ಇತಿಹಾಸದಲ್ಲಿ ಅಮರರಾಗುತ್ತಾರೆ. ಮುಂಬರುವ ನಾಯಕರುಗಳಿಗೆ ಮಾದರಿಯಾಗುತ್ತಾರೆ. ಬಹುಸಂಖ್ಯಾತ
ರೈತಾಪಿ ಕೂಲಿ ಜನರ ಪಾಲಿಗೆ ದೇವರಾಗುತ್ತಾರೆ. ಅದು ಬಿಟ್ಟು ದೇಶವಾಸಿಗಳಲ್ಲಿ ಮತಾಂಧತೆಯನ್ನು ಪ್ರೋತ್ಸಾಹಿಸಿದರೆ,
ಉನ್ಮಾದವನ್ನು ಪ್ರೇರೇಪಿಸಿದರೆ, ಮತಬ್ಯಾಂಕ್ ರಾಜಕೀಯವನ್ನು ಮಾಡತೊಡಗಿದರೆ, ಪ್ಯಾಸಿಸ್ಟ್ ಆಡಳಿತ ಸ್ಥಾಪನೆಗೆ
ಪ್ರಯತ್ನಿಸಿದರೆ... ಅಂತಹ ಪ್ರಧಾನಿಯನ್ನು ಈ ದೇಶ ಎಂದೂ ಕ್ಷಮಿಸದು.
ಕೇವಲ ಭಕ್ತರ ಉನ್ಮಾದಗಳು ಪ್ರಧಾನಿಯ
ಕುರಿತು ಜನರಲ್ಲಿ ಸಕಾರಾತ್ಮಕ ಮನೋಭಾವವನ್ನು ಹುಟ್ಟಿ ಹಾಕಲು ಸಾಧ್ಯವಿಲ್ಲ. ಶ್ರೇಣಿಕೃತ ವ್ಯವಸ್ಥೆಯಲ್ಲಿ
ಮೇಲಿನಿಂದಾ ಕೆಳಗೆ ಬರುವ ಪ್ರಯತ್ನವನ್ನು ಕೈಬಿಟ್ಟು ಕೆಳಗಿನಿಂದಾ ಮೇಲಕ್ಕೆ ಬದಲಾವಣೆಯನ್ನು ತರುವ
ನಿಟ್ಟಿನಲ್ಲಿ ಪ್ರಧಾನಿ ಶ್ರಮಿಸಿದರೆ ಈ ಸಕಾರಾತ್ಮಕ ದೇಶದಲ್ಲಿ ಪರಿವರ್ತನೆ ಸಾಧ್ಯವಾದೀತು. ಆದರೆ..
ಮೋದಿಯವರು ಹೋಗುತ್ತಿರುವ ದಾರಿ ಹಾಗೂ ಅವರ ಪಥವನ್ನು ನಿರ್ದರಿಸುತ್ತಿರುವ ಸಂಘಪರಿವಾರಗಳ ನೀತಿಗಳನ್ನು
ಗಮನಿಸಿದರೆ ಮೋದಿ ಸರ್ವ ಜನರ ಪ್ರಧಾನಿಯಾಗುವ ಯೋಗ್ಯತೆಯ ಕುರಿತು ಸಂದೇಹಗಳಿವೆ. ಕೇವಲ ಕಾಪೋರೇಟ್ ಕಂಪನಿಗಳ
ಹಿತಾಸಕ್ತಿಯ ಹಿನ್ನೆಲೆಯ ಅಭಿವೃದ್ದಿಯನ್ನೇ ದೇಶದ ಅಭಿವೃದ್ದಿ ಎಂದು ಬಿಂಬಿಸುತ್ತಿರುವ ಮೋದಿಯವರು
ಈ ದೇಶದ ತಳ ಸಮುದಾಯದ ಶಕ್ತಿಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಜೈ ಜವಾನ್ ಎಂದಿದ್ದಾಯ್ತು..
ಇನ್ನು ಮೇಲೆ ಸ್ವಲ್ಪ ಜೈ ಕಿಸಾನ್ ಎನ್ನುವ ಮೂಲಕ ರೈತಕೂಲಿ ಜನರ ಬದುಕಿಗೆ ಕನಿಷ್ಟ ಬದ್ರತೆಯನ್ನಾದರೂ
ತರುವ ಪ್ರಯತ್ನವನ್ನು ಪ್ರಧಾನಿ ಮಾಡಲಿ ಎನ್ನುವುದೇ ದೇಶದ ಪ್ರಜ್ಞಾವಂತರ ಆಶಯವಾಗಿದೆ. ಬರೀ ಮಾತಿನಲ್ಲಿ
ಹೇಳುವುದನ್ನು ಬಿಟ್ಟು ಮೋದಿಯವರು ಕೃತಿಯಲ್ಲೂ ಸಹ ದೀನ ದಲಿತರ ಪರವಾಗಿ ಕೆಲಸಮಾಡಲಿ ಹಾಗೂ ಅಸಮಾನತೆಯನ್ನು
ತೊಲಗಿಸಿ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗಲಿ ಎಂದು ಆಶಿಸೋಣ.
-ಶಶಿಕಾಂತ ಯಡಹಳ್ಳಿ