ಸೋಮವಾರ, ಅಕ್ಟೋಬರ್ 31, 2016

ತಹ ತಹ.....56 ದೇಶಭಕ್ತಿಯ ಉನ್ಮಾದ ಸಾಕು; ದುಡಿಯುವ ಜನತೆಗೆ ಬದ್ರತೆ ಬೇಕು:

ಜೈ ಜವಾನ್ ಆಯ್ತು.. ಜೈ ಕಿಸಾನ್ ಯಾವಾಗ..?




ಇಂಡೋಚೀನಾದ ಗಡಿಗೆ ಹೋದ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರ ಜೊತೆಗೆ ಸೇರಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಿದ್ದು ನಿಜಕ್ಕೂ ಅಭಿನಂದನೀಯ. ಅಕ್ಟೋಬರ್ 30 ರಂದು ಹಿಮಾಚಲ ಪ್ರದೇಶದ ಕಿನ್ನೋರ್ ಜಿಲ್ಲೆಯ ಚೀನಾಕ್ಕೆ ಹೊಂದಿಕೊಂಡ ಕಿನ್ನೋರ್ ಮತ್ತು ಸ್ಪೈಟಿ ಗಡಿಯಲ್ಲಿ ಬರುವ ಸುಮ್ಡೋ ಪ್ರದೇಶದಲ್ಲಿರುವ ಯೋಧರ ಜೊತೆಗೆ ಸಿಹಿ ಹಂಚಿ ಸಂಭ್ರಮಿಸಿ ಯೋಧರಿಗೆ ಸಮಾನ ಶ್ರೇಣಿ ಸಮಾನ ವೇತನ ಯೋಜನೆಯನ್ನು ಘೋಷಿಸಿದ ಪ್ರಧಾನಿಗಳನ್ನು ಮೋದಿ ಭಕ್ತರಷ್ಟೇ ಅಲ್ಲಾ ಇಡೀ ದೇಶದ ಜನ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಅಭಿನಂದಿಸಲೇಬೇಕಿದೆ. 2014 ರಲ್ಲಿ ಸಿಯಾಚಿನ್ ಯುದ್ಧಭೂಮಿಗೆ ತೆರಳಿ ಅಲ್ಲಿಯ ಯೋಧರ ಜೊತೆಗೆ ದೀಪಾವಳಿ ಆಚರಿಸಿದ್ದ ಮೋದಿಯವರು, 2015 ರಲ್ಲಿ ಪಂಜಾಬಿನ ಭಾರತ-ಪಾಕ್ ಗಡಿಗೆ ತೆರಳಿ ದೀಪಾವಳಿ ಆಚರಿಸುವ ಮೂಲಕ ಸೈನಿಕರಿಗೆ ನೈತಿಕ ಸ್ತೈರ್ಯವನ್ನು ತುಂಬುವಲ್ಲಿ ಯಶಸ್ವಿಯಾದರು. ದೇಶದ ಪ್ರಧಾನಿಯೊಬ್ಬರು ಈ ರೀತಿ ದೇಶರಕ್ಷಕರಿಗೆ ದೈರ್ಯ ತುಂಬುವ ಕೆಲಸವನ್ನು ಮಾಡಿದ್ದು ಮಾದರಿಯಾಗಿದೆ.

ಜೈ ಜವಾನ್ ಎಂದಿರುವ ಮೋದಿ ಸಾಹೇಬರು ಒಂದಿಷ್ಟು ಜೈ ಕಿಸಾನ್ ಎಂದಿದ್ದರೂ ಅವರನ್ನು ಹೆಗಲಮೇಲೆ ಹೊತ್ತು ಮೆರೆಸಬಹುದಾಗಿತ್ತು. ಒಂದು ದೇಶದ ರಕ್ಷಣೆಗೆ ಯೋಧರು ಅದೆಷ್ಟು ಮುಖ್ಯರೋ ಅದೇ ರೀತಿ ಯೋಧರ ಸಮೇತ ದೇಶವಾಸಿಗಳು ಜೀವಂತವಾಗಿರಲು ಅನ್ನಾಹಾರಗಳನ್ನು ಉತ್ಪಾದಿಸುವವರೂ ಅತೀ ಮುಖ್ಯ. ಗಡಿಗಳ ರಗಳೆ ಸರಿಪಡಿಸಿ ಸೈನಿಕರಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಬಹುದಾದರೂ, ಅನ್ನ ಬೆಳೆಯುವ ರೈತರೇ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂದರೆ ಸೈನಿಕರಿಗಿಂತಲೂ ಅನ್ನದಾತರು ಒಂದು ಪಾಲು ಮೇಲೆ ಎನ್ನುವುದು ಅನ್ನ ತಿನ್ನುವವರಿಗೆಲ್ಲರಿಗೂ ಆರಿವಾಗುವಂತಹುದೇ ಆಗಿದೆ. ಲೇಸರ್ ಬೇಲಿಗಳನ್ನು ಹಾಕಿಯೋ, ಮುಂದೆ ರೊಬೋಟ್ ಸೈನಿಕರನ್ನು ಸೃಷ್ಟಿಸಿಯೋ ಗಡಿಗಳ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಆದರೆ ಯಂತ್ರಮಾನವರನ್ನು ಬಳಸಿ ಬೆಳೆ ಬೆಳೆಯುವುದು ಅಸಾಧ್ಯದ ಮಾತು. ಮನುಷ್ಯರಿಗೆ ಎಲ್ಲಕ್ಕಿಂತಲೂ ಅಗತ್ಯವಾದದ್ದು ಅನ್ನ, ನೀರು ಮತ್ತು ಗಾಳಿ. ಸೈನಿಕರೊಂದಿಗೆ ದೀಪಾವಳಿ ಆಚರಿಸಿ ಸಮಾನ ವೇತನ ಕೊಡುವ ಪ್ರಧಾನಿಗಳು  ದೇಶದ ಜೀವನಾಡಿಯಾದ ರೈತಸಮುದಾಯದ ಜೊತೆ ಯುಗಾದಿ ಆಚರಿಸಿ ಅವರ ಕಷ್ಟ ನಷ್ಟಗಳನ್ನೇಕೆ ಕೇಳಬಾರದು? ಅನ್ನ ಬೆಳೆಯುವ ರೈತ, ಕೂಲಿಜನರಿಗೆ ಯಾಕೆ ಆರ್ಥಿಕ ಸಹಾಯ ಘೋಷಿಸಬಾರದು? ಯುದ್ಧ ಇರಲಿ ಬಿಡಲಿ ಯೋಧರಿಗೆ ಸಕಾಲದಲ್ಲಿ ಸಂಬಳ ಹಾಗೂ ಸವಲತ್ತುಗಳು ಸಿಕ್ಕೇ ಸಿಗುತ್ತವೆ. ಅದೇ ರೀತಿ ಮಳೆ ಬರಲಿ ಬಿಡಲಿ, ಬೆಳೆ ಬರಲಿ ಇಲ್ಲವೇ ಬಿಡಲಿ.. ರೈತಾಪಿ ಜನರಿಗೆ ಯಾಕೆ ಸವಲತ್ತುಗಳು ದೊರೆಯುವುದಿಲ್ಲ? ಕೂಲಿ ಜನರಿಗೆ ಕೆಲಸವಿಲ್ಲದಿದ್ದಾಗಳು ಯಾಕೆ ಕನಿಷ್ಟ ಸಂಬಳ ಸಿಗುವುದಿಲ್ಲ? ಸೈನಿಕನಿಗೆ ದೇಶ ಕಾಯುವುದು ಹಾಗೂ ಶತ್ರುಗಳನ್ನು ಕೊಲ್ಲುವುದು ಗೊತ್ತಿದ್ದರೆ ರೈತನಿಗೆ ಅನ್ನ ಬೆಳೆದು ಜನರ ಜೀವ ಉಳಿಸುವುದು ಗೊತ್ತು.  ಸೈನಿಕರಿಲ್ಲದ ನಾಡು ಕಟ್ಟಬಹುದೇ ಹೊರತು ರೈತ ಕೂಲಿ ಜನರಿಲ್ಲದ ನಾಡನ್ನು ಕಟ್ಟಲು ಸಾಧ್ಯವೇ ಇಲ್ಲಾ.


ಆದ್ದರಿಂದ.. ಆಳುವವರ ಮೊದಲ ಆಧ್ಯತೆ ಅನ್ನದಾತರ ಶ್ರೇಯೋಭಿವೃದ್ದಿಯಾಗಬೇಕು. ದೇಶಕ್ಕೆ ಅನ್ನ ಕೊಡುವ ರೈತ ಕೂಲಿಗಳು ಉಪವಾಸ ಮಲಗುವಂತಾಗಬಾರದು. ಸೈನಿಕರು ಮಕ್ಕಳು ಓದುವಂತಹ ಸುಸಜ್ಜಿತ ಶಾಲೆಗಳಲ್ಲಿ ರೈತ ಹಾಗೂ ಕೂಲಿಗಳ ಮಕ್ಕಳು ಓದುವಂತಾಗಬೇಕು. ಸೈನಿಕರ ಕುಟುಂಬಕ್ಕೆ ಸಿಗುವ ಕಡಿಮೆ ಬೆಲೆಯ ದಿನಸಿ ಇತ್ಯಾದಿ ಸಾಮಾನುಗಳು ರೈತ ಕೂಲಿ ಕುಟುಂಬಗಳಿಗೂ ಸಿಗುವಂತಾಗಬೇಕು. ದುಡಿಯುವ ಜನರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳು ಖಡ್ಡಾಯವಾಗಿ ದಕ್ಕುವಂತಾಗಬೇಕು. ಆದರೆ ನಮ್ಮ ನಾಡಿನ ಜೀವನಾಡಿಯಾದ ರೈತರು ಬೆಳೆಗೆ ಬೆಲೆ ಸಿಗದೇ, ಉತ್ತಿ ಬಿತ್ತಿದ ಬೆಳೆ ಕೈಗೆ ದಕ್ಕದೇ, ಸಾಲಮಾಡಿದ್ದನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಡುತ್ತಿದ್ದಾರೆ. ರೈತರ ಆತ್ಮಹತ್ಯೆಯ ಪ್ರಮಾಣಕ್ಕೆ ಹೋಲಿಸಿದರೆ ಸೈನಿಕರ ಆತ್ಮಹತ್ಯೆ ಪ್ರಕರಣಗಳು ನಗಣ್ಯವೆಂದೇ ಹೇಳಬೇಕು. ದೇಶದ ಪ್ರಧಾನಿಯಾದವರು ಮೊಟ್ಟ ಮೊದಲು ಮಾಡಬೇಕಾದ ಕೆಲಸವೇನೆಂದರೆ ಅತಿವೃಷ್ಟಿ ಅನಾವೃಷ್ಟಿಯಿಂದ ತಲ್ಲಣಿಸಿದ ರೈತಾಪಿಜನರ ಸಹಾಯಕ್ಕೆ ನಿಲ್ಲಬೇಕಿದೆ. ಮಳೆ ಬೆಳೆ ಹಾಗೂ ಬೆಲೆಗಳು ಕೈಕೊಟ್ಟರೂ ರೈತರು ನೆಮ್ಮದಿಯಿಂದ ಬದುಕುವಂತಹ  ಆರ್ಥಿಕ ವ್ಯವಸ್ಥೆಯನ್ನು ಹುಟ್ಟುಹಾಕಬೇಕಿದೆ. ದುಡಿಯುವ ವರ್ಗದವರ ಮಕ್ಕಳು ಇಷ್ಟಾ ಬಂದಷ್ಟು ಓದಲು ಉಚಿತ ವ್ಯವಸ್ಥೆ ಮಾಡಬೇಕಿದೆ. ಉತ್ಪಾದಕರು ಹಾಗೂ ಗ್ರಾಹಕರ ನಡುವೆ ಇರುವ ದಲ್ಲಾಳಿ ವರ್ಗವನ್ನು ನಾಶಮಾಡಿ ಸರಕಾರವೇ ಸರಕು ಹಂಚಿಕೆಗೆ ಸಮಾನ ಅವಕಾಶ ಮಾಡಿಕೊಡಬೇಕಿದೆ. ಉತ್ಪಾದಿಸುವುದಷ್ಟೇ ರೈತರ ಕೆಲಸವಾದರೆ ಅದರ ಬಟವಾಟೆ ಸರಕಾರದ ಆಧ್ಯ  ಕೆಲಸವಾಗಬೇಕಿದೆ.


ಸೈನಿಕರಿಗೆ ಕೊಟ್ಟಷ್ಟೇ ಕಾಳಜಿ ಮಹತ್ವವನ್ನು ರೈತಾಪಿಕೂಲಿ ಜನರಿಗೆ ಪ್ರಧಾನಿಗಳು ಕೊಟ್ಟು ಸಮರ್ಥ ಯೋಜನೆಗಳನ್ನು ರೂಪಿಸಿದರೆ ಸಾಕು ಇಡೀ ದೇಶದ ದುಡಿಯುವ ವರ್ಗ ಪ್ರಧಾನಿಯನ್ನು ಬೆಂಬಲಿಸುತ್ತದೆ. ಇಲ್ಲವಾದರೆ.. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿದಂತಾಗುತ್ತದೆ. ಆದರೆ.. ಸೈನಿಕರ ಜೊತೆಗೆ ದೀಪಾವಳಿ ಆಚರಿಸಿದರೆ, ಸೈನಿಕರು ಮಾಡಿದ ಸರ್ಜಿಕಲ್ ದಾಳಿಯನ್ನು ತಮ್ಮದೇ ಪ್ರಯತ್ನವೆಂದು ಹೊಗಳಿಸಿಕೊಂಡರೆ ಅದೆಲ್ಲಾ ರಾಜಕೀಯದ ಗಿಮಿಕ್ ಎನಿಸಿಕೊಳ್ಳುತ್ತದೆ. ದೇಶವಾಸಿಗಳಲ್ಲಿ ದೇಶಭಕ್ತಿಯ ಉನ್ಮಾದವನ್ನು ಹೆಚ್ಚಿಸಲು ಸೈನಿಕರನ್ನು ಹಾಗೂ ಸೈನ್ಯದ ಕಾರ್ಯಾಚರಣೆಗಳನ್ನು ಬಳಸಿಕೊಳ್ಳುವುದು ನಿಜಕ್ಕೂ ಅಕ್ಷಮ್ಯ. ಸೈನಿಕರಿಗೆ ಕೊಡುವ ನೈತಿಕ ಬೆಂಬಲವಾಗಲೀ ಇಲ್ಲವೇ ಸೈನಿಕರು ಮಾಡುವ ಯುದ್ದ ನೀತಿಗಳೇ ಆಗಲಿ ಎಂದೂ ರಾಜಕೀಕರಣಗೊಳ್ಳಬಾರದು. ಸೈನಿಕರು ಯಾವುದೇ ಪಕ್ಷ ಇಲ್ಲವೆ ಸರಕಾರದವರಲ್ಲ. ಅವರು ದೇಶಕ್ಕೆ ಸೇರಿದ ಪಕ್ಷಾತೀತ ಯೋಧರು. ಯಾವುದೇ ಯೋಧ ಒಂದು ಪಕ್ಷ ಇಲ್ಲವೇ ಸರಕಾರದ ಪರವಾಗಿರೋದಿಲ್ಲ. ಇದ್ದರೆ ಆತ ಪಕ್ಷದ ಕಾರ್ಯಕರ್ತನಾಗುತ್ತಾನೆಯೇ ಹೊರತು ಯೋಧನಂತೂ ಅಲ್ಲವೇ ಅಲ್ಲ. ಹೀಗಾಗಿ ಮೋದಿ ಹಾಗೂ ಅವರ ಪರವಾಗಿರುವ ಮಾಧ್ಯಮಗಳು ದೇಶಭಕ್ತಿಯ ಉನ್ಮಾದವನ್ನು ಜನರಲ್ಲಿ ಹುಟ್ಟಿಸುವ ಪ್ರಯತ್ನವನ್ನು ಸತತವಾಗಿ ಮಾಡುತ್ತಿದ್ದಾರೆ ಹಾಗೂ ಅದಕ್ಕಾಗಿ ಯೋಧರನ್ನು ಹಾಗೂ ಗಡಿಕದನವನ್ನು ಬಳಸಿಕೊಳ್ಳುತ್ತಿದ್ದಾರೆಂಬುದು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುತ್ತದೆ.


ಒಂದು ದೇಶದ ಪ್ರಧಾನಿಯಾದವರು ಎಲ್ಲರನ್ನೂ ಸಮಾನವಾಗಿ ಕಾಣಬೇಕು. ರಾಜಕೀಯದ ಉದ್ದೇಶಗಳನ್ನು ಪಕ್ಕಕ್ಕಿಟ್ಟು ಬಹುಸಂಖ್ಯಾತ ದುಡಿಯುವ ವರ್ಗಗಳ ಪರವಾಗಿ ನಿಲ್ಲಬೇಕು. ಇಡೀ ದೇಶದಲ್ಲಿ ಯಾರೂ ಹಸಿವೆಯಿಂದ ಬಳಲದಂತೆ, ಯಾವ ರೈತಾಪಿ ಜನರೂ ಆರ್ಥಿಕ ಸಂಕಷ್ಟಕ್ಕೊಳಗಾಗಿ ಸಾಯದಂತೆ ವ್ಯವಸ್ಥೆಯನ್ನು ರೂಪಿಸಿಬೇಕು. ಯಾವುದೇ ಜಾತಿ ಧರ್ಮ ಮತ ಕುಲಗಳ ಹಂಗನ್ನು ತೊರೆದು ಸರ್ವ ಜನರ ಸುಖಕ್ಕಾಗಿ ದುಡಿಯಬೇಕು. ಅಂತಹ ಮೇಧಾವಿತನವನ್ನು ಮೋದಿಯವರು ತೋರಿಸಿದ್ದೇ ಅದರೆ ದೇಶದ ಇತಿಹಾಸದಲ್ಲಿ ಅಮರರಾಗುತ್ತಾರೆ. ಮುಂಬರುವ ನಾಯಕರುಗಳಿಗೆ ಮಾದರಿಯಾಗುತ್ತಾರೆ. ಬಹುಸಂಖ್ಯಾತ ರೈತಾಪಿ ಕೂಲಿ ಜನರ ಪಾಲಿಗೆ ದೇವರಾಗುತ್ತಾರೆ. ಅದು ಬಿಟ್ಟು ದೇಶವಾಸಿಗಳಲ್ಲಿ ಮತಾಂಧತೆಯನ್ನು ಪ್ರೋತ್ಸಾಹಿಸಿದರೆ, ಉನ್ಮಾದವನ್ನು ಪ್ರೇರೇಪಿಸಿದರೆ, ಮತಬ್ಯಾಂಕ್ ರಾಜಕೀಯವನ್ನು ಮಾಡತೊಡಗಿದರೆ, ಪ್ಯಾಸಿಸ್ಟ್ ಆಡಳಿತ ಸ್ಥಾಪನೆಗೆ ಪ್ರಯತ್ನಿಸಿದರೆ... ಅಂತಹ ಪ್ರಧಾನಿಯನ್ನು ಈ ದೇಶ ಎಂದೂ ಕ್ಷಮಿಸದು.

ಕೇವಲ ಭಕ್ತರ ಉನ್ಮಾದಗಳು ಪ್ರಧಾನಿಯ ಕುರಿತು ಜನರಲ್ಲಿ ಸಕಾರಾತ್ಮಕ ಮನೋಭಾವವನ್ನು ಹುಟ್ಟಿ ಹಾಕಲು ಸಾಧ್ಯವಿಲ್ಲ. ಶ್ರೇಣಿಕೃತ ವ್ಯವಸ್ಥೆಯಲ್ಲಿ ಮೇಲಿನಿಂದಾ ಕೆಳಗೆ ಬರುವ ಪ್ರಯತ್ನವನ್ನು ಕೈಬಿಟ್ಟು ಕೆಳಗಿನಿಂದಾ ಮೇಲಕ್ಕೆ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಪ್ರಧಾನಿ ಶ್ರಮಿಸಿದರೆ ಈ ಸಕಾರಾತ್ಮಕ ದೇಶದಲ್ಲಿ ಪರಿವರ್ತನೆ ಸಾಧ್ಯವಾದೀತು. ಆದರೆ.. ಮೋದಿಯವರು ಹೋಗುತ್ತಿರುವ ದಾರಿ ಹಾಗೂ ಅವರ ಪಥವನ್ನು ನಿರ್ದರಿಸುತ್ತಿರುವ ಸಂಘಪರಿವಾರಗಳ ನೀತಿಗಳನ್ನು ಗಮನಿಸಿದರೆ ಮೋದಿ ಸರ್ವ ಜನರ ಪ್ರಧಾನಿಯಾಗುವ ಯೋಗ್ಯತೆಯ ಕುರಿತು ಸಂದೇಹಗಳಿವೆ. ಕೇವಲ ಕಾಪೋರೇಟ್ ಕಂಪನಿಗಳ ಹಿತಾಸಕ್ತಿಯ ಹಿನ್ನೆಲೆಯ ಅಭಿವೃದ್ದಿಯನ್ನೇ ದೇಶದ ಅಭಿವೃದ್ದಿ ಎಂದು ಬಿಂಬಿಸುತ್ತಿರುವ ಮೋದಿಯವರು ಈ ದೇಶದ ತಳ ಸಮುದಾಯದ ಶಕ್ತಿಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಜೈ ಜವಾನ್ ಎಂದಿದ್ದಾಯ್ತು.. ಇನ್ನು ಮೇಲೆ ಸ್ವಲ್ಪ ಜೈ ಕಿಸಾನ್ ಎನ್ನುವ ಮೂಲಕ ರೈತಕೂಲಿ ಜನರ ಬದುಕಿಗೆ ಕನಿಷ್ಟ ಬದ್ರತೆಯನ್ನಾದರೂ ತರುವ ಪ್ರಯತ್ನವನ್ನು ಪ್ರಧಾನಿ ಮಾಡಲಿ ಎನ್ನುವುದೇ ದೇಶದ ಪ್ರಜ್ಞಾವಂತರ ಆಶಯವಾಗಿದೆ. ಬರೀ ಮಾತಿನಲ್ಲಿ ಹೇಳುವುದನ್ನು ಬಿಟ್ಟು ಮೋದಿಯವರು ಕೃತಿಯಲ್ಲೂ ಸಹ ದೀನ ದಲಿತರ ಪರವಾಗಿ ಕೆಲಸಮಾಡಲಿ ಹಾಗೂ ಅಸಮಾನತೆಯನ್ನು ತೊಲಗಿಸಿ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗಲಿ ಎಂದು ಆಶಿಸೋಣ.

         -ಶಶಿಕಾಂತ ಯಡಹಳ್ಳಿ  




ತಹ ತಹ.....55 ದೀಪಾವಳಿಯ ಹಿಂದಿನ ಅಸಲಿ ಕಥೆ ಮತ್ತು ದ್ರಾವಿಡ ಜನಾಂಗದ ವ್ಯಥೆ :

ಬಲಿಯ ಜನರಿಗೆ ಸೂತಕ; ವಾಮನ ಸಂತಾನಗಳಿಗೆ ಸಂಭ್ರಮ :



ದೀಪಗಳ ಹಬ್ಬ ದೀಪಾವಳಿಯ ಮರುದಿನ ಬಲಿಪಾಢ್ಯಮಿ. ದೇಶಾದ್ಯಂತ ಹಿಂದೂಗಳೆನ್ನುವವರು ಶ್ರದ್ದೆ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸುತ್ತಾ ಬಂದಿರುವ ಪ್ರಮುಖ ಹಬ್ಬವಿದು. ದಾನಶೂರ ಬಲಿಚಕ್ರವರ್ತಿಯನ್ನು ವಾಮನರೂಪಿಯಾಗಿ ವೇಷಮರೆಸಿಕೊಂಡು ಬಂದ ವಿಷ್ಣು ಮೂರು ಪಾದ ಭೂಮಿಯನ್ನು ದಾನ ಕೇಳಿ ಒಂದು ಪಾದ ಆಕಾಶದ  ಮೇಲೆ, ಇನ್ನೊಂದು ಪಾದ ಭೂಮಿಯ ಮೇಲಿಟ್ಟು ಮೂರನೇ ಪಾದ ಬಲಿಯ ತಲೆಯ ಮೇಲಿಟ್ಟು ಪಾತಾಳಕ್ಕೆ ತುಳಿದು ಬಲಿಯ ಬಲಿಪಡೆದ ಕಥೆಯನ್ನು ಶತಮಾನಗಳಿಂದ ಕೇಳುತ್ತಾ, ಹೇಳುತ್ತಾ ಬರಲಾಗಿದೆ ಹಾಗೂ ಜನರನ್ನು ನಂಬಿಸಲು ವಾಮನಾವತಾರದ ಕಥೆಯನ್ನು ಕಟ್ಟಲಾಗಿದೆ. ಎಲ್ಲಿ ಈ ಕಟ್ಟುಕಥೆ ಕಾಲನ ಪ್ರವಾಹದಲ್ಲಿ ಕೊಚ್ಚಿಹೋಗುವುದೋ ಎಂಬ ಆತಂಕದಿಂದಾಗಿ ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ಆಚರಿಸುವಂತೆ ಮಾಡುವ ಮೂಲಕ ವಿಷ್ಣುವಿನ ಅವತಾರದ ಮಹತ್ತರ ಕಾರ್ಯವನ್ನು ಜನಮನದಲ್ಲಿ ಜೀವಂತವಿಡಲಾಗಿದೆ.

ಜನರಿಗೆ ಸತ್ಯಕ್ಕಿಂತಲೂ ಸಡಗರಕ್ಕೊಂದು ನೆಪಬೇಕಷ್ಟೇ. ಯಾವ ಹಬ್ಬದ ಹಿನ್ನೆಲೆಗಳನ್ನೂ ವಿಶ್ಲೇಷಿಸಿ ನೋಡುವ ಗೋಜಿಗೆ ಹೋಗದ ಜನಸಾಮಾನ್ಯರು ತಮ್ಮ ಬದುಕಿನ ಬವನೆಗಳನ್ನು ಒಂದೆರಡು ದಿನಗಳ ಮಟ್ಟಿಗಾದರೂ ಕಳೆದುಕೊಂಡು ಉಂಡುಟ್ಟು ಹಬ್ಬವಾಚರಿಸಿ ಖುಷಿಯಾಗಿರಲು ಬಯಸುತ್ತಾರೆ. ಆದರೆ.. ಈ ಸಾಂಪ್ರದಾಯಿಕ ಆಚರಣೆಗಳ ಹಿಂದಿರುವ ಮರಾಮೋಸದ ಕಥೆಯನ್ನು ತಿಳಿದುಕೊಂಡರೆ ದೀಪಾವಳಿ ಹಬ್ಬದ ಹಿಂದಿರುವ ಆರ್ಯರ ಶಡ್ಯಂತ್ರಗಳ ಅರಿವು ಜನರಲ್ಲಿ ಮೂಡಬಹುದಾಗಿದೆ. ಬಲಿಪಾಢ್ಯದ ಹಿಂದಿರುವ ಖಳನಾಯಕರು ಯಾರು ಹಾಗೂ ನಿಜನಾಯಕ ಯಾರು ಎನ್ನುವುದನ್ನು ಕೆಲವರಾದರೂ ಅರ್ಥಮಾಡಿಕೊಳ್ಳಲೇಬೇಕಿದೆ. ಸೂತಕದ ದಿನವನ್ನು ಸಂಭ್ರಮದ ದಿನವನ್ನಾಗಿ ಆಚರಿಸುತ್ತಿರುವುದರ ಹಿಂದಿರುವ ಹುನ್ನಾರಗಳನ್ನು ಜನರಿಗೆ ತಿಳಿಸುವ ಅಗತ್ಯತೆ ಪ್ರಜ್ಞಾವಂತ ಜನರ ಹೊಣೆಗಾರಿಕೆಯಾಗಿದೆ.


ಈಗೇನು ಭಾರತ ಎಂದು ನಾವು ಭೂಪಟದಲ್ಲಿ ನೋಡುತ್ತೇವಲ್ಲಾ. ಇದರ ಉತ್ತರಭಾಗವನ್ನು ಅಂದರೆ ಉತ್ತರ ಭಾರತದ ಭೂಪ್ರದೇಶವನ್ನು ಮಧ್ಯ ಏಷ್ಯಾದಿಂದ ಬಂದ ಆರ್ಯರು ಆಕ್ರಮಿಸಿಕೊಂಡು ಆಳುತ್ತಿದ್ದರು. ಕ್ರಿಪೂ ೧೮೫ ರ ಸುಮಾರಿಗೆ ಆಗಿನ ಭರತ ಖಂಡದ ಮೂಲನಿವಾಸಿಗಳನ್ನು ಪ್ರತಿನಿಧಿಸುತ್ತಿದ್ದ ಮೌರ್ಯ ಸಾಮ್ರಾಜ್ಯವನ್ನು ಸೋಲಿಸಿದ ಆರ್ಯರ ಶುಂಗ ಸಾಮ್ರಾಜ್ಯ ಅಧಿಪತ್ಯಕ್ಕೆ ಬಂದಿತ್ತು. ಭರತಖಂಡದ ದಕ್ಷಿಣಭಾಗದಲ್ಲಿ ಬೌದ್ದ ದರ್ಮಿಯನಾದ ಬಲಾಢ್ಯ ಬಲಿಚಕ್ರವರ್ತಿ ಜನಾನುರಾಗಿಯಾಗಿ ರಾಜ್ಯಭಾರ ಮಾಡುತ್ತಿದ್ದನು. ಈ ಬೌದ್ದದೊರೆ ದಾನಧರ್ಮಗಳಿಗೆ ಹೆಸರಾಗಿದ್ದು ಪ್ರಜೆಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದನು. ಇಡೀ  ರಾಜ್ಯ ಸುಭಿಕ್ಷೆಯಾಗಿತ್ತು. ಜನ ನೆಮ್ಮದಿಯಾಗಿದ್ದರು. ಆರ್ಯರ ವರ್ಣವ್ಯವಸ್ಥೆಯ ಶೋಷಣೆಯಿಂದ ಕಂಗಾಲಾದ ಉತ್ತರ ಭಾರತ ಪ್ರದೇಶದ ಜನತೆ ಬಲಿಚಕ್ರವರ್ತಿಯ ನಾಡಿಗೆ ವಲಸೆಬಂದು ಬದುಕಿಗೆ ಅಗತ್ಯವಾದಷ್ಟು ದಾನ ಪಡೆದು ನೆಮ್ಮದಿಯಿಂದಾ ಬದುಕು ಕಂಡುಕೊಂಡರು. ಆಗಲೇ ಬೌದ್ದ ಹಾಗೂ ವೈದಿಕ ಧರ್ಮಗಳ ನಡುವಿನ ಸೈಂದಾತಿಕ ಸಂಘರ್ಷ ಜೋರಾಗಿತ್ತು. ವರ್ಣೀಯ ವ್ಯವಸ್ಥೆಯ ಪ್ರತಿಪಾದಕರಾದ ವೈದಿಕಶಾಹಿ ಆರ್ಯರಿಗೆ ಬೌದ್ದಧರ್ಮದ ಸಮಾನತೆ ಮತ್ತು ಮಾನವೀಯತೆಯು ತೀವ್ರ ಅಡತಡೆಯನ್ನುಂಟು ಮಾಡಿತ್ತು. ಹೇಗಾದರೂ ಮಾಡಿ ದ್ರಾವಿಡ ದೊರೆ ಬಲಿಚಕ್ರವರ್ತಿಯನ್ನು ಮಟ್ಟಹಾಕುವ ಮೂಲಕ ತಮ್ಮ ಆರ್ಯಧರ್ಮವನ್ನು ಇಡೀ ಭರತಖಂಡದಾದ್ಯಂತ ಪಸರಿಸಿ ಜನರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ಆಲೋಚಿಸಿದರು.

ಈಗೇನು ದೇವತೆಗಳು ಎಂದು ಕಥೆ ಕಟ್ಟಲಾಗಿದೆಯೋ ಅವರು ಅಸಲಿಗೆ ಯಾವ ದೇವತೆಗಳಾಗಿರದೇ ಉತ್ತರ ಭರತಖಂಡದ ಮೇಲೆ ಹಿಡಿತ ಸಾಧಿಸಿದ ವೈದಿಕಶಾಹಿ ಆರ್ಯರೇ ಆಗಿದ್ದರು. ಬಲಿರಾಜನ ಮೇಲೆ ಯುದ್ದಹೂಡಿ ಗೆಲ್ಲುವುದಂತೂ ಅವರಿಗೆ ಸಾಧ್ಯವಿರಲಿಲ್ಲ. ಈ ದೇವಸಂಕುಲದವರೆಂದೂ ಯಾವುದೇ ದ್ರಾವಿಡ ಅರಸರ (ಅಂದರೆ ಅವರ ಕಣ್ಣಲ್ಲಿ ರಾಕ್ಷಸರು) ಮೇಲೆ ಎಂದೂ ನೇರವಾಗಿ  ಯುದ್ದಸಾರಿ ಜಯಸಿದ್ದೇ ಇಲ್ಲಾ. ಬರೀ ಕುತಂತ್ರಗಳಿಂದಲೇ ಗೆಲುವು ಸಾಧಿಸಿದ್ದನ್ನು ಪುರಾಣೇತಿಹಾಸಗಳು ಸಾರುತ್ತವೆ. ಅದೇ ರೀತಿ ಬಲಿಚಕ್ರವರ್ತಿಯನ್ನು ಬಲಿ ಹಾಕಲು ಒಂದು ಶಡ್ಯಂತ್ರವನ್ನು ಈ ದೇವತೆಗಳೆಂದುಕೊಂಡ ಆರ್ಯರು ಹೆಣೆದರು. ಬೌದ್ಧ ಧರ್ಮವನ್ನು ಸರ್ವನಾಶಮಾಡಿ ಇಡೀ ಭರತಖಂಡದಲ್ಲಿ ಮನುಸ್ಮೃತಿ ಪ್ರಣೀತ ವರ್ಣವ್ಯವಸ್ಥೆಯನ್ನು ಸ್ಥಾಪಿಸಲು ಹುನ್ನಾರವನ್ನು ರಚಿಸಿದರು. ಕೇಳಿದ್ದನ್ನು ಇಲ್ಲ ಎನ್ನದೇ ಕೊಡುತ್ತಿದ್ದ ಬಲಿಚಕ್ರವರ್ತಿಯ ಆದರ್ಶವನ್ನೇ ಬಳಸಿಕೊಂಡು ರಾಜನನ್ನು ಮೋಸದಿಂದ ಕೊಲ್ಲುವ ಯೋಜನೆ ರೂಪಿಸಿದರು. ಈಗೇನು ವಿಷ್ಣುವೇ ವಾಮನ ಅವತಾರದಲ್ಲಿ ಬಂದು ಬಲಿಯನ್ನು ಕೊಂದನೆಂದು ಕಥೆ ಕಟ್ಟಿದ್ದಾರೋ.. ಹಾಗೆಯೇ ಬ್ರಾಹ್ಮಣರ ವೇಷಮರೆಸಿಕೊಂಡು ಬಂದ ಈ ವಿಷ್ಣು ಮತ್ತು ಇತರ ಕೆಲವು ಬ್ರಾಹ್ಮಣರು ಬಲಿರಾಜನ ರಾಜಧಾನಿಯ ವಿಶಾಲವಾದ ನೆಲಮಾಳಿಗೆ ಇರುವ ಮನೆಯಲ್ಲಿ ಬೀಡುಬಿಟ್ಟರು.

ನಾವು ಕೆವು ಬ್ರಾಹ್ಮಣರು ಉತ್ತರಭಾಗದ ಆರ್ಯದೊರೆಗಳ ಶೋಷಣೆಯಿಂದ ನೊಂದು ಆಶ್ರಯ ಬಯಸಿ ಬಂದಿದ್ದೇವೆ. ಬ್ರಾಹ್ಮಣರಾದ ನಮ್ಮ ಮೇಲೆ ಇಲ್ಲಿಯ ದ್ವಾವಿಡರು ಹಲ್ಲೆ ಮಾಡುವ ಭಯವಿದ್ದು ನೆಲಮಾಳಿಗೆಯಲ್ಲಿ ಅವಿತುಕೊಂಡಿದ್ದೇವೆ. ದಯವಿಟ್ಟು ಕೇಳಿದ್ದನ್ನು ಕೊಡುವ ರಾಜರು ನಾವಿದ್ದಲ್ಲಿಗೆ ಬಂದು ತಮಗೆ ಬೂಧಾನ ಮಾಡಬೇಕು ಎಂದು ರಾಜನಿಗೊಂದು ಸಂದೇಶ ಕಳುಹಿಸಿದರು. ಬ್ರಾಹ್ಮಣರು ದಾನ ಕೇಳಿ ಬಂದಿದ್ದಾರೆಂದು ನಂಬಿದ ಬಲಿಚಕ್ರವರ್ತಿಯು ದಾನ ಕೊಡುವ ಉಮೇದಿನಿಂದಾ ನಿರಾಯುಧನಾಗಿ ನೆಲಮಾಳಿಗೆಯಲ್ಲಿ ಹೋದಾಗ, ನೆಲಮಾಳಿಗೆಯ ಮೇಲೆ ಜನರು ದೀವಿಟಿಗೆಗಳನ್ನು ಹಿಡಿದು ರಾಜನ ಬರುವಿಕೆಗಾಗಿ ಕಾಯುತ್ತಿದ್ದರು.  ನೆಲಮಾಳಿಗೆಯಲ್ಲಿ ನಿಂತಿದ್ದ ಬ್ರಾಹ್ಮಣ ವೇಷದಾರಿಗಳು ರಾಜನನ್ನು ಭೂದಾನ ಕೊಡಲು ಕೇಳಿಕೊಳ್ಳುತ್ತಾರೆ. ದಾನಕೊಡಲು ಯಾವಾಗ ಬಲಿ ಕಣ್ಣುಮುಚ್ಚಿ ನಿಲ್ಲುತ್ತಾನೋ ಆಗ ಆ ಕುತಂತ್ರಿಗಳು ಬಲಿರಾಜನನ್ನು ಕೊಂದು ಅದೇ ನೆಲಮಾಳಿಗೆಯಲ್ಲಿ ಪೂರ್ವಯೋಜನೆಯಂತೆ ಹೂತು ಅಲ್ಲಿಂದ ಬೇರೆ ಮಾರ್ಗದಲ್ಲಿ ಪರಾರಿಯಾಗುತ್ತಾರೆ.


ಇತ್ತ ದ್ರಾವಿಡ ಮೂಲನಿವಾಸಿಗಳು ತಮ್ಮ ರಾಜ ಇಂದು ಬಂದಾನು ನಾಳೆ ಬಂದಾನು ಎಂದು ದೀವಟಿಕೆಗಳನ್ನು ಉರಿಸಿ ಕಾಯುತ್ತಿದ್ದರೆ ಅತ್ತ ಮೋಸದಿಂದ ಕೊಲೆಮಾಡಿ ಹೋದ ಆರ್ಯರು ಉತ್ತರದಲ್ಲಿ ಸಿಡಿಮದ್ದುಗಳನ್ನು ಸಿಡಿಸಿ, ಸಿಹಿಯನ್ನು ಪರಸ್ಪರ ಹಂಚಿ ಬಲಿಚಕ್ರವರ್ತಿಯ ಸಂಹಾರವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅಕ್ಷರಸ್ತರಾದ ಆರ್ಯರು ತಮ್ಮ ಕಂತೆ ಪುರಾಣಗಳಲ್ಲಿ ವಾಮನಾವತಾರವನ್ನು ಸೃಷ್ಟಿಸಿ ಬಲಿಚಕ್ರವರ್ತಿಯನ್ನು ಖಳನಾಯಕನನ್ನಾಗಿಸಿ ಪುರಾಣೇತಿಹಾಸವನ್ನು ವೈದಿಕಶಾಹಿಯ ವೈಭವಕ್ಕೆ ಅನುಕೂಲವಾಗುವಂತೆ ಬರೆದು ಜನರನ್ನು ನಂಬಿಸುವ ಕೆಲಸವನ್ನು ಬಹಳ ಶದ್ದೆಯಿಂದ ಮಾಡುತ್ತಾರೆ. ಅಂದಿನಿಂದಾ ದ್ರಾವಿಡರು ತಮ್ಮ ಮನೆಯಂಗಳದಲ್ಲಿ ದೀಪಗಳನ್ನು ಬೆಳಗಿಸಿ ಬಲಿರಾಜನ ಸಾವಿನ ಸೂತಕವನ್ನು ಆಚರಿಸಿದರೆ, ಆರ್ಯವಂಶಸ್ತರು ಪಟಾಕಿಗಳನ್ನು ಸುಟ್ಟು, ಸಿಹಿ ಹಂಚಿ ಬಲಿರಾಜನ ಸಾವನ್ನು ಸಂಭ್ರಮಿಸುತ್ತಲೇ ಬಂದಿದ್ದಾರೆ. ಬರುಬರುತ್ತಾ ದೀಪಗಳ ಹಬ್ಬ ದೀಪಾವಳಿಯಾಗಿ ಮರುದಿನದ ಬಲಿಪಾಡ್ಯಮಿಯು ಪಟಾಕಿಗಳನ್ನು ಸುಟ್ಟು ವಿಜ್ರಂಭಿಸುವ ದಿನವಾಗಿ ಆಚರಣೆಗೆ ಬಂದಿತು. ಯಾವಾಗ ಆರ್ಯರು ಬೌದ್ದ ಧರ್ಮವನ್ನು  ದೇಶಾಂತರಗೊಳಿಸಿ ಇಡೀ ದೇಶಾದ್ಯಂತ ತಮ್ಮ ಪ್ರಾಭಲ್ಯವನ್ನು ಹೆಚ್ಚಿಸಿಕೊಂಡರೋ, ಆಗ ತಮ್ಮ ಹುಸಿ ಪುರಾಣೇತಿಹಾಸವನ್ನು ಜನರ ಮನೆಮನದಲ್ಲಿ ತುಂಬಲು ಹಬ್ಬದಾಚರಣೆಗಳನ್ನು ಜಾರಿಗೆ ತಂದು ವಿಜ್ರಭಣೆಯಿಂದ ಆಚರಿಸಲು ಪ್ರೋತ್ಸಾಹಿಸಿದರು. ದುಷ್ಟರಕ್ಷಣೆ ಹಾಗೂ ಶಿಷ್ಟ ರಕ್ಷಣೆಯ ಹೆಸರಲ್ಲಿ ಅವತಾರಗಳನ್ನು ಸೃಷ್ಟಿಸಿ ಇಡೀ ದೇಶದ ಜನರ ಮೆದುಳನ್ನೇ ತೊಳೆದು ತಮಗೆ ಬೇಕಾದ ಆಚರಣೆಗಳನ್ನು ತುಂಬಿದರು. 

ಆದರೆ.. ಈ ದ್ರಾವಿಡ ಸಮುದಾಯ ತಮ್ಮ ಸಾಕ್ಷೀಪ್ರಜ್ಞೆಯ ಸಂಕೇತವಾಗಿದ್ದ ಬಲಿಚಕ್ರವರ್ತಿಯನ್ನು ಮರೆತು ವೈದಿಕಶಾಹಿಯ ಕಟ್ಟುಕತೆಗಳನ್ನೇ ನಂಬಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಹ ಈ ವೈದಿಕಶಾಹಿಗಳು ಆಗಿನಂತೆ ಈಗಲೂ ನಮ್ಮ ದೇಶವನ್ನು ತಮ್ಮ ಕಾಲ್ಪನಿಕ ಕಟ್ಟು ಕಥೆಗಳು, ಅವತಾರ, ಧರ್ಮಗಳೆಂಬ ಹುಸಿ ತತ್ವಸಿದ್ದಾಂತಗಳಲ್ಲಿ ಕಟ್ಟಿಹಾಕಿ, ಬಹುಸಂಖ್ಯಾತ ದುಡಿಯುವ ಜನರ ಮನಸ್ಸು ಹಾಗೂ ಮೆದುಳನ್ನು ಮಲಿನಗೊಳಿಸಿವೆ. ಖಳನನ್ನು ನಾಯಕನನ್ನಾಗಿಸಿ, ನಾಯಕನನ್ನು ಖಳನನ್ನಾಗಿಸಿ ಕಥೆ ಕಟ್ಟಿ ನಂಬಿಸುವ ಮಹತ್ತರ ಕಾರ್ಯಗಳಲ್ಲಿ ಶತಮಾನಗಳಿಂದ ನಿರತರಾದ ಪುರೋಹಿತಶಾಹಿ ಸಂತಾನಗಳು ದುಡಿಯುವ ಜನರ ಆಲೋಚನಾ ಕ್ರಮವನ್ನೇ ತಮ್ಮ ಕರ್ಮಸಿದ್ದಾಂತದ ಮೂಲಕ ನಿರ್ಬಂಧಿಸಿಬಿಟ್ಟಿವೆ. ಹೀಗಾಗಿಯೇ ಎಲ್ಲಾ ಬ್ರಾಹ್ಮಣೇತರರ ಆದರ್ಶ ಪುರುಷನಾಗಬೇಕಾಗಿದ್ದ ಬಲಿಚಕ್ರವರ್ತಿ ರಾಕ್ಷಸನಾಗಿದ್ದು. ದಕ್ಷಿಣ ಭಾರತದ ದ್ರಾವಿಡ ಜನಾಂಗದ ಸ್ವಾಭಿಮಾನದ ಸಂಕೇತವಾಗಬೇಕಾಗಿದ್ದ ಬಲಿರಾಜ ಖಳನಾಯಕನಾಗಿದ್ದು. ಕೇವಲ ಬಲಿಮಾತ್ರವಲ್ಲ.. ದ್ರಾವಿಡ ದೊರೆ ರಾವಣನನ್ನೂ ಸಹ ಕುತಂತ್ರಗಳಿಂದ ಕೊಂದು, ದುಷ್ಟ ರಕ್ಷಣೆ ಎಂದು ಕಥೆ ಕಟ್ಟಿ ರಾಮನನ್ನು ಅವತಾರ ಪುರುಷನನ್ನಾಗಿಸಿದವರು ಇದೇ ಪುರೋಹಿತಶಾಹಿಗಳು. ಪುರಾಣೇತಿಹಾಸದಲ್ಲಿ ಹಿರಣ್ಯಕಶುಪಾದಿಯಾಗಿ ಯಾವುದೇ ಬಲಾಢ್ಯ ದ್ರಾವಿಡ ರಾಜರುಗಳ ಕಥೆಗಳನ್ನು ವಿಶ್ಲೇಷಿಸಿ ನೋಡಿದರೆ ಈ ದೇವತೆಗಳು ಎಂದುಕೊಳ್ಳುವ ಆರ್ಯಜನಾಂಗದ ಕುತಂತ್ರ ಹಾಗೂ ರಕ್ಕಸ ರಾಜರು ಎಂದುಕೊಂಡವರ ಹುಂಬುತನ ಮತ್ತು ನಿಯತ್ತು ಅರ್ಥವಾಗದೇ ಇರದು.

ಇದು ಇಂದು ನಿನ್ನೆಯದಲ್ಲಾ. ಶತಮಾನಗಳ ಶಡ್ಯಂತ್ರ. ಬಲಿಯಂತಹ ಅದೆಷ್ಟೋ ಆರ್ಯವಿರೋಧಿ ರಾಜರುಗಳು ರಕ್ಕಸರಾಜರೆನಿಸಿಕೊಂಡು ಆರ್ಯರ ಶಡ್ಯಂತ್ರಗಳಿಗೆ ಬಲಿಯಾಗಿದ್ದಾರೆ. ಭರತಖಂಡದ ಮನುಕುಲದ ಚರಿತ್ರೆಯ ತುಂಬಾ ಆರ್ಯರ ವೈದಿಕಶಾಹಿ ಶಡ್ಯಂತ್ರಗಳೇ ತುಂಬಿಕೊಂಡಿವೆ. ಪುರೋಹಿತಶಾಹಿಗಳು ಸೃಷ್ಟಿಸಿದ ಪ್ರತಿಯೊಂದು ಅವತಾರಗಳ ಹಿಂದೆಯೂ ಸಹ ನೇರ ಯುದ್ದ ಹೋರಾಟ ವೀರತ್ವಗಳಿಗಿಂತಾ ಆರ್ಯರ ಕುತಂತ್ರಗಳು ಹಾಗೂ ತಿರುಚಲ್ಪಟ್ಟ ಪ್ರಚಾರಗಳೇ ತುಂಬಿವೆ. ಇದಕ್ಕೆ ಬಲಿಚಕ್ರವರ್ತಿ ಹೊರತಲ್ಲ. ಆದ್ದರಿಂದ ಅಕ್ಷರ ಕಲಿತು ವಿದ್ಯಾವಂತರಾಗಿರುವ ದುಡಿಯುವ ಬಹುಜನರು ಈಗಲಾದರೂ ಸಾಂಪ್ರದಾಯಿಕ ಆಚರಣೆಗಳ ಹಿಂದಿರುವ ಚಾರಿತ್ರಿಕ ದ್ರೋಹವನ್ನು ಅರಿತುಕೊಳ್ಳಬೇಕಿದೆ. ದೀಪಾವಳಿಯಂದು ದೀಪಗಳ ಬೆಳಗುವ ಮೂಲಕ ಬಲಿಚಕ್ರವರ್ತಿಯ ಸಾವಿನ ಸೂತಕವನ್ನು ಆಚರಿಸಿಬೇಕಿದೆ. ಕೊಲೆಪಾತಕ ಆರ್ಯರ ಸಂಭ್ರಮದ ಪ್ರತೀಕವಾದ ಸಿಡಿಮದ್ದುಗಳನ್ನು ಸುಟ್ಟು ಸುಖಿಸುವುದನ್ನು ನಿಲ್ಲಿಸಬೇಕಿದೆ. ಹಬ್ಬದ ಸಂಭ್ರಮದ ಉನ್ಮಾದದಲ್ಲಿರುವ  ಯುವಕರಿಗೆ, ಮಕ್ಕಳಿಗೆ ವಾಸ್ತವವನ್ನು ಮನದಟ್ಟುಮಾಡಿಕೊಡುತ್ತಾ ಮುಂದಿನ ತಲೆಮಾರಾದರೂ ಈ ವೈದಿಕಶಾಹಿಗಳ ಕಟ್ಟುಕಥೆಗಳ ಮಾಯಾಜಾಲದಿಂದ ಹೊರಬರುವಂತೆ ಮಾಡಬೇಕಿದೆ. ಭವಿಷ್ಯದ ಭಾರತದಲ್ಲಾದರೂ ಬಲಿಚಕ್ರವರ್ತಿಗೆ ನ್ಯಾಯಸಿಗಬೇಕಿದೆ. ಭಾರತೀಯರ ಮನೆಯಂಗಳದಿ ಬೆಳಗುವ ಪ್ರತಿಯೊಂದು ದೀಪವೂ ಬಲಿಯ ಬಲಿದಾನದ ಸಂಕೇತವಾಗಬೇಕಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಆರ್ಯರ ಶಡ್ಯಂತ್ರದ ಕುರಿತು ಅರಿವು ಮೂಡಬೇಕಿದೆ. ಆಗ ದೀಪಗಳ ಹಬ್ಬ ದೀಪಾವಳಿಗೆ ನಿಜವಾದ ಅರ್ಥ ಪ್ರಾಪ್ತಿಯಾಗುತ್ತದೆ. ಸೂತಕದ ದಿನವನ್ನು ಸಂಭ್ರಮದ ದಿನವನ್ನಾಗಿ ತಪ್ಪಾಗಿ ಆಚರಿಸುವುದು ತಪ್ಪುತ್ತದೆ.

      -ಶಶಿಕಾಂತ ಯಡಹಳ್ಳಿ    



ತಹ ತಹ.....54 'ಅಕ್ಕ' ಅವಕಾಶ ವಂಚಿತ ದಲಿತ ಕಲಾವಿದರು ಸಿಂಗಾಪುರಕ್ಕೆ :


ನಿಜಕ್ಕೂ ಇದೊಂದು ಸಂತಸದ ಸಂಗತಿಯಾಗಿದೆ. ಅಮೇರಿಕದ ಅಕ್ಕ ಸಮ್ಮೇಳನದಲ್ಲಿ ಸೆಪ್ಟಂಬರ್ 2 ರಂದು ಕಲಾ ಪ್ರದರ್ಶನ ನೀಡಲು ಆಯ್ಕೆಯಾಗಿದ್ದ ನೂರು ಜನ ದಲಿತ ಸಮುದಾಯದ ಕಲಾವಿದರುಗಳು ರಾಜಕಾರಣದ ವಿಳಂಬ ನೀತಿಗೆ ಬಲಿಯಾಗಿ ವೀಸಾ ಸಿಗದೇ ಅಮೇರಿಕದ ಆಸೆಗೆ ಎಳ್ಳುನೀರು ಬಿಟ್ಟು ನಿರಾಶೆ ಹೊಂದಿದ್ದರು. ಅದರಲ್ಲಿ ಆಯ್ದ ಅರವತ್ತು ಜನರು ಈಗ ಸಿಂಗಾಪುರಕ್ಕೆ ಹೋಗುತ್ತಿದ್ದಾರೆ. ಅಕ್ಟೋಬರ್ 29 ಮತ್ತು 30 ರಂದು ಸಿಂಗಾಪೂರದಲ್ಲಿ ನಡೆಯುತ್ತಿರುವ 20 ನೇ ವರ್ಷದ ಕನ್ನಡ ಸಮ್ಮೇಳನದಲ್ಲಿ ದಲಿತ ಸಮುದಾಯದ ಕಲಾವಿದರು ಕಲಾ ಪ್ರದರ್ಶನ ನೀಡಲು ಈಗಾಗಲೇ ಸಿಂಗಾಪುರ ತಲುಪಿದ್ದಾರೆ. ಇದನ್ನೊಂದು ಐತಿಹಾಸಿಕ ಸಾಧನೆ ಎಂದು ಕಲಾವಿದರ ಉಸ್ತುವಾರಿ ಹೊತ್ತ ಕಲಾರತ್ನ ಕಪ್ಪಣ್ಣರವರು ಹೇಳಿಕೊಂಡಿದ್ದಾರೆ.

ಆದರೆ... ಕಲಾವಿದರಿಗೆ ಸಿಂಗಾಪುರದ ದರ್ಶನ ಭಾಗ್ಯಕ್ಕೆ ಪರೋಕ್ಷವಾಗಿ ಚಾಲನೆ ಕೊಟ್ಟಿದ್ದು ಡಾ.ವಿಜಯಮ್ಮನವರು. ಅಕ್ಕ ಸಮ್ಮೇಳನದಲ್ಲಿ ಅವಕಾಶವಂಚಿತರಾದ ದಲಿತ ಕಲಾವಿದರ ಬಗ್ಗೆ ವಿಸ್ತೃತವಾದ ಲೇಖನವನ್ನು ನಾನು ಬರೆದಿದ್ದೆ. ಅದರ ಹಿಂದೆ ಯಾರ್ಯಾರ ಕೈವಾಡ ಇತ್ತು ಎಂಬುದನ್ನೆಲ್ಲಾ ವಿವರಿಸಿದ್ದೆ. ಲೇಖನ ಓದಿ ಮೊಟ್ಟ ಮೊದಲು ಕಲಾವಿದರಿಗಾದ ಅನ್ಯಾಯದ ಕುರಿತು ಬೇಸರ ವ್ಯಕ್ತಪಡಿಸಿದವರು ಹಿರಿಯ ಜೀವ ವಿಜಯಮ್ಮನವರು. ಎಲ್ಲರಂತೆ ಲೇಖನ ಓದಿ ಸುಮ್ಮನಿರಲು ಸಾಧ್ಯವಾಗದೇ ತಳಮಳಿಸಿದ ರಂಗಜೀವ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ದಯಾನಂದರವರು ಹಾಗೂ ಸಚಿವೆ ಉಮಾಶ್ರೀರವರೊಂದಿಗೆ ಪೋನಲ್ಲಿ ಮಾತಾಡಿದರು. ದಲಿತ ಕಲಾವಿದರಿಗಾದ ಅನ್ಯಾಯವನ್ನು ಹೇಗಾದರೂ ಮಾಡಿ ಸರಿಪಡಿಸಲು ಕೇಳಿಕೊಂಡರು. ಅಮೇರಿಕಕ್ಕೆ ಕಳಿಸಲು ಸಾಧ್ಯವಾಗದಿದ್ದರೂ ಇನ್ಯಾವುದಾದರೂ ದೇಶಕ್ಕೆ ಕಲಾವಿದರನ್ನು ಕಳಿಸುವ ವ್ಯವಸ್ಥೆ ಮಾಡಲು ಮನವಿ ಮಾಡಿಕೊಂಡರು. ವಿಜಯಮ್ಮನವರ ಸಲಹೆಯನ್ನು ಮೊದಲ ಆದ್ಯತೆಯ ಮೇಲೆ ಜಾರಿಗೊಳಿಸಲು  ದಯಾನಂದರವರು ಕಾರ್ಯಪ್ರವೃತ್ತರಾದರು. ಸಿಂಗಾಪುರದ ಕನ್ನಡ ಸಮ್ಮೇಳನಕ್ಕೆ ಕಲಾವಿದರನ್ನು ಕಳುಹಿಸುವ ಪ್ರಪೋಸಲ್ ಸಿದ್ದಮಾಡಿದರು. ಹೇಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಆಂಜನೇಯರವರು ಕಲಾವಿದರ ಖರ್ಚುಗಳನ್ನು ಕೊಡುವುದಾಗಿ ಮೊದಲೇ ಘೋಷಿಸಿದ್ದರು. ವಿಜಯಮ್ಮನವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳುವ ಸಲುವಾಗಿಯಾದರೂ ಪ್ರಪೋಸಲ್ಲಿಗೆ ಒಪ್ಪಿಕೊಂಡರು. ಮತ್ತೆ ಯಥಾವತ್ತಾಗಿ ವಿದೇಶದ ಕನ್ನಡ ಸಂಘಕ್ಕೂ ಹಾಗೂ ಕಲಾವಿದರಿಗೂ ಮಧ್ಯವರ್ತಿಯಾಗಿರುವ ಕಪ್ಪಣ್ಣನವರಿಗೆ ಪ್ರಾಜೆಕ್ಟಿನ ಉಸ್ತುವಾರಿಯನ್ನು ವಹಿಸಿಕೊಡಲಾಯಿತು. ಸಿಂಗಾಪುರಕ್ಕೆ ವೀಸಾ ಸಿಗೋದು ಅಂತಹ ಕಷ್ಟವೇನಲ್ಲ. ಸುಲಭವಾಗಿ ಎಲ್ಲಾ ವ್ಯವಸ್ಥೆಗಳಾದವು. ದೂರದ ಅಮೇರಿಕಕ್ಕೆ ಹೋಗಲಾಗದಿದ್ದರೂ ನೆರೆಯಲ್ಲಿರುವ ಸಿಂಗಾಪುರಕ್ಕಾದರೂ ಹೋಗಿ ಕಲಾ ಪ್ರದರ್ಶನ ಕೊಟ್ಟ ಸಣ್ಣ ಸಮಾಧಾನ ನಮ್ಮ ದಲಿತ ಕಲಾವಿದರಿಗೆ ದಕ್ಕಿದಂತಾಯಿತು.

ಆದರೆ ನೂರು ಜನರಲ್ಲಿ ಕೇವಲ ಅರವತ್ತು ಜನರಿಗೆ ಸಿಂಗಾಪೂರದ ಅವಕಾಶ ದೊರೆಯಿತು. ಬಾಕಿ ನಲವತ್ತು ಕಲಾವಿದರಿಗೆ ನಿಟ್ಟುಸಿರೇ ಗತಿಯಾಯಿತು. ಅಕ್ಕ ಸಮ್ಮೇಳನಕ್ಕೆ ಅವಕಾಶ ವಂಚಿತರನ್ನಾಗಿ ಮಾಡಿದ ಇಲಾಖೆ ಹಾಗೂ ವ್ಯವಸ್ಥಾಪಕರಾದ ಕಪ್ಪಣ್ಣನವರ ಬಗ್ಗೆ ಕೆಲವು ಕಲಾವಿದರು ಆಗ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಂತವರಿಗೆ ಸಿಂಗಾಪುರಕ್ಕೆ ಹೋಗುವ ಅವಕಾಶವನ್ನು ತಪ್ಪಿಸಿ ಸೇಡು ತೀರಿಸಿಕೊಳ್ಳಲಾಯಿತೆಂದು ಅವಕಾಶವಂಚಿತ ಕಲಾವಿದರು ಮಾತಾಡಿಕೊಳ್ಳುತ್ತಿದ್ದಾರೆ. ಇನ್ನು ಸಾಣೇಹಳ್ಳಿ ಸ್ವಾಮಿಗಳು ಕಪ್ಪಣ್ಣನವರ ಆಹ್ವಾನವನ್ನು ನಂಬಿ ದಲಿತ ಕಲಾವಿದರುಗಳನ್ನ ಸೇರಿಸಿ ಐದು ಲಕ್ಷ ಖರ್ಚು ಮಾಡಿ ಎರಡು ನಾಟಕ ನಿರ್ಮಿಸಿದ್ದರು. ಯಾವಾಗ ವೀಸಾ ನೆಪದಲ್ಲಿ ಅಮೇರಿಕಕ್ಕೆ ಹೋಗುವುದು ಕ್ಯಾನ್ಸಲ್ ಆಯಿತೋ ಆಗ ಸ್ವಾಮಿಗಳು ಗರಂ ಆದರು. ಕಲಾವಿದರ ವೀಸಾಗೆ ಕೊಟ್ಟ ಎರಡು ಲಕ್ಷ ರೂಪಾಯಿಗಳನ್ನು ವಾಪಸ್ ಕೊಡಿಸದಿದ್ದರೆ ಕೇಸ್ ಹಾಕಲಾಗುವುದೆಂದು ಶ್ರೀಮಠ ಒತ್ತಡ ತಂದಿತು. ಮಠದವರ ಸಹವಾಸವೇ ಬೇಡವೆಂದುಕೊಂಡ ಇಲಾಖೆ ಸಿಂಗಾಪುರಕ್ಕೆ ಹೋಗುವುದನ್ನು ಸಾನೇಹಳ್ಳಿಯವರಿಗೆ ತಿಳಿಸಲೇ ಇಲ್ಲ. ಯಾರು ಉಸಿರೆತ್ತದೇ ಆದ ಅವಮಾನವನ್ನು ಸಹಿಸಿಕೊಂಡಿದ್ದರೋ ಅವರಿಗೆ ಸಿಂಗಾಪುರ ಭಾಗ್ಯ ದೊರಕಿಸಿಕೊಟ್ಟು ಪ್ರತಿಭಟಿಸಿದವರನ್ನು ನಿರ್ಲಕ್ಷಿಸಿದ್ದೇ ಅಕ್ಷಮ್ಯ. ಇಷ್ಟಕ್ಕೂ ರಂಗಭೂಮಿಯ ಕಲಾರತ್ನ ಬಿರುದಾಂಕಿತ ಶ್ರೀಮಾನ್ ಕಪ್ಪಣ್ಣನವರು ರಂಗಭೂಮಿಯ ಕಲಾವಿದರನ್ನು ನಿರ್ಲಕ್ಷಿಸಿ ಕೇವಲ ಜಾನಪದ ಕಲಾವಿದರನ್ನು ಸಿಂಗಾಪುರಕ್ಕೆ ಕಳಿಸಿದ್ದು ಅವರ ಅನುಕೂಲಸಿಂಧು ರಾಜಕಾರಣಕ್ಕೆ ಸಾಕ್ಷಿಯಾಗಿದೆ.


 
ಶೀರ್ಷಿಕೆ ಸೇರಿಸಿ
ಕನಿಷ್ಟ ಅರವತ್ತು ದಲಿತ ಕಲಾವಿದರಿಗಾದರೂ ವಿದೇಶ ಪ್ರವಾಸ ಯೋಗ ದೊರೆಯಿತಲ್ಲ ಎನ್ನುವ ಸಮಾಧಾನ ಮಾಡಿಕೊಳ್ಳಬೇಕಿದೆ. ಆದರೆ ಕಲಾವಿದರಿಗೆ ದೊರೆತ ಅವಕಾಶಕ್ಕೆ ಮೂಲ ಕಾರಣೀಬೂತರಾದ ಡಾ.ವಿಜಯಮ್ಮನವರಿಗೆ ಹಾಗೂ ಅವರ ಸಲಹೆಯನ್ನು ಕಾರ್ಯರೂಪಕ್ಕೆ ತಂದ ಇಲಾಖೆಯ ನಿರ್ದೇಶಕರಾದ ದಯಾನಂದರವರಿಗೆ ಅಭಿನಂದನೆ ಹೇಳಲೇಬೇಕಿದೆ. ಇನ್ನು ಬಾಕಿ ಉಳಿದ ನಲವತ್ತು ಕಲಾವಿದರನ್ನೂ ಸಹ ಇನ್ಯಾವುದಾದರೂ ದೇಶದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಳುಹಿಸಿ ಅವಕಾಶ ಕೊಡಿಸುವ ಕೆಲಸವನ್ನು ಸಂಸ್ಕೃತಿ ಇಲಾಖೆ ಮಾಡಲೇಬೇಕಿದೆ. ಅವಕಾಶ ವಂಚಿತ ಸಮುದಾಯ ಸರಕಾರದ ಯೋಜನೆಗಳ ಫಲವನ್ನು ಪಡೆಯಬೇಕಿದೆ. ಸಾಧ್ಯವಾದಷ್ಟೂ ಕನ್ನಡ ರಂಗಭೂಮಿಯ ಕಲಾವಿದರಿಗೆ ಹೆಚ್ಚು ಅವಕಾಶಗಳು ದೊರೆಯಬೇಕಿದೆ. 


                                      - ಶಶಿಕಾಂತ ಯಡಹಳ್ಳಿ