ಯಾರು ಏನೇ ಹೇಳಲಿ ನಕಲಿ ಗೋರಕ್ಷಕರಿಗೆ ಹಾಗೂ ಈ ಗೋರಕ್ಷಕರ ಅಸಲಿ ರಕ್ಷಕರಿಗೆ ಅನಂತಾನಂತ ಅಭಿನಂದನೆಗಳನ್ನು ಹೇಳಲೇಬೇಕಿದೆ. ಸತ್ತ ಪ್ರಜೆಗಳಲ್ಲಿ ಜಾಗೃತಿ ಮೂಡಿಸಲು ಕಾರಣೀಕರ್ತರಾದ ಬ್ರೇನ್ ವಾಶ್ಡ್ ಹಿಂದುತ್ವವಾದಿಗಳಿಗೆ ಉಧೋ ಉದೋ.
ಯಾಕೆಂದರೆ ಇವರೇನಾದರೂ ಗೋರಕ್ಷಣೆಯ ಹೆಸರಲ್ಲಿ ದಲಿತರ ಮೇಲೆ ಹಲ್ಲೆ ಮಾಡದಿದ್ದರೆ, ಗೋಮಾಂಸ ಸೇವನೆಯನ್ನು ನಿರ್ಬಂಧಿಸದಿದ್ದಲ್ಲಿ ಶತಮಾನಗಳಿಂದ ಉಳ್ಳವರ ಊಳಿಗದಲ್ಲಿ ಇದ್ದಲ್ಲೇ ಇದ್ದು ಬಿದ್ದವರು ಮತ್ತೆ ಮೇಲೆದ್ದು ನಿಲ್ಲಲು ಪ್ರೇರಣೆ ಎಲ್ಲಿ ಸಿಕ್ಕುತ್ತಿತ್ತು. ಹೀಗೆ ದೇಶಾದ್ಯಂತ ದಲಿತ ದಮನಿತರಲ್ಲಿ ಸ್ವಾಭಿಮಾನದ ಕಿಚ್ಚು ಬೆಂಕಿಯಾಗುತ್ತಿತ್ತು. ಮೇಲ್ವರ್ಗದವರ ಸನಾತನ ಸಂಚಿನ ವಿರುದ್ದ ಗುಡುಗು ಮಿಂಚಾಗಿ ದಲಿತರು ಸದ್ದುಮಾಡುವ ಅವಕಾಶ ಎಲ್ಲಿ ಸಿಕ್ಕುತ್ತಿತ್ತು.
ಮೋದಿ ಮಹಾತ್ಮರ ಗುಜರಾತಿನಲ್ಲೇ, ಮೋದಿಭಕ್ತರ ದಬ್ಬಾಳಿಕೆ ವಿರುದ್ದ ಸ್ವಾಭಿಮಾನಿ ದಲಿತರು ಸಂಘಟಿತರಾಗಿ ಸನಾತನಿಗಳ ಬುಡ ಅಲ್ಲಾಡುವಂತೆ ಘರ್ಜಿಸಿದರು. "ನಿಮ್ಮ ಗೋವು ನೀವೇ ಇಟ್ಟುಕೊಳ್ಳಿ, ನೀವೇ ಸಗಣಿ ಬಾಚಿಕೊಳ್ಳಿ, ಸತ್ತ ಹಸುವಿನ ಹೆಣ ನೀವೇ ಮಣ್ಣುಮಾಡಿಕೊಳ್ಳಿ" ಎಂದು ಘೋಷಿಸಿದ ಗುಜರಾತಿನ ದಲಿತರು ಮೇಲ್ಜಾತಿಯವರೊಂದಿಗೆ ಅಸಹಕಾರ ಚಳುವಳಿಯನ್ನೇ ಘೋಷಿಸಿ ಮೇಲ್ವರ್ಗದವರ ಮುಖಕ್ಕೆ ಸ್ವಾಭಿಮಾನದ ಮಂಗಳಾರತಿ ಮಾಡಿದರು. ಗುಜರಾತಿನ "ಊನಾ"ದಲ್ಲಿ ಮೊಳಗಿದ ದಲಿತ ದಮನಿತರ ಸ್ವಾಭಿಮಾನದ ದ್ವನಿ ದೇಶಾದ್ಯಂತ ಪ್ರತಿದ್ವನಿಸತೊಡಗಿ ಪಟ್ಟಬದ್ರ ಹಿತಾಸಕ್ತಿಗಳ ಮನ ಮನೆಗಳಲ್ಲಿ ಅಭದ್ರತೆಯ ಕಂಪನಗಳನ್ನು ಹುಟ್ಟುಹಾಕಿತು.
ಊನಾ ದಲಿತ ಚಳುವಳಿಯ ಪ್ರೇರಣೆ ಕರ್ನಾಟಕದ ಶೋಷಿತ ವರ್ಗಗಳಲ್ಲಿಯೂ ಸ್ವಾಭಿಮಾನವನ್ನು ಕೆರಳಿಸಿತು. ಅದರ ಭಾಗವಾಗಿ ನೂರಾರು ಪ್ರಜ್ಞಾವಂತ ಮನಸುಗಳು ಹಾಗೂ ಹೋರಾಟಪರ ಸಂಘಟನೆಗಳು ಸೇರಿ 'ದಲಿತ ದಮನಿತ ಸ್ವಾಭಿಮಾನಿ ಹೋರಾಟ ಸಮಿತಿ'ಯನ್ನು ರಚಿಸಿ ಸ್ವಾಭಿಮಾನಿ ಸಂಘರ್ಷ ಜಾಥಾವನ್ನು ಹಮ್ಮಿಕೊಂಡು ಪುರೋಹಿತಶಾಹಿ ಪ್ರಣೀತ ಆರಾಧನಾ ಕೇಂದ್ರವಾಗಿರುವ ಉಡುಪಿಯಲ್ಲಿ ಬ್ರಹತ್ ಸ್ವಾಭಿಮಾನಿ ಸಮಾವೇಶವನ್ನು ಇಂದು ಅಕ್ಟೋಬರ್ 9 ರಂದು ಹಮ್ಮಿಕೊಂಡಿದೆ.
'ಚಲೋ ಉಡುಪಿ' ಎಂದು ಅಕ್ಟೋಬರ್ 4 ರಿಂದ ರಾಜ್ಯದ ಮೂಲೆ ಮೂಲೆಗಳಿಂದ ತೊರೆ ಹಳ್ಳ ನದಿಗಳಂತೆ ಹರಿದು ಬರುವ ದಮನಿತ ಜನತೆ ಅ.9 ರಂದು ಉಡುಪಿಯಲ್ಲಿ ಸೇರಿ ಬ್ರಹತ್ ಸ್ವಾಭಿಮಾನಿ ಸಂಘರ್ಷ ಸಮಾವೇಶ ಮಾಡಿ ಹಿಂದುತ್ವ ವಾದಿಗಳಿಗೆ ಹಾಗೂ ಅವರ ಪರವಾಗಿರುವ ಆಳುವ ವರ್ಗಗಳ ಬುಡಕ್ಕೆ ಬಿಸಿ ಮುಟ್ಟಿಸುತ್ತಿರುವುದು ಚಾರಿತ್ರಿಕ ಸಂಗತಿಯಾಗಿದೆ.
"ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು" ಎನ್ನುವ ಘೋಷವಾಕ್ಯದೊಂದಿಗೆ ಉಡುಪಿ ಚಲೋ ಸ್ವಾಭಿಮಾನಿ ಸಂಘರ್ಷ ಜಾಥಾ ಅ.4 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಮುಂಭಾಗದಲ್ಲಿ ಉದ್ಘಾಟನೆಯಾದಾಗ ಇಡೀ ಆವರಣದ ತುಂಬಾ ನೀಲಿ ಬಾವುಟಗಳು ಹಾರಾಡಿದವು, ಜೈ ಭೀಮ್ ಘೋಷಣೆಗಳು ಮೊಳಗಿದವು. ಉತ್ಸಾಹಿ ಯುವಕರಿಂದ ಬೆಂಗಳೂರಿನಿಂದ ಉಡುಪಿಯವರೆಗೂ ಐದು ದಿನಗಳ ಸ್ವಾಭಿಮಾನಿ ಸಂಘರ್ಷ ಜಾಥಾ ಆರಂಭವಾಗಿ ದಾರಿಯುದ್ದಕ್ಕೂ ಜನಜಾಗ್ರತಿ ಮೂಡಿಸುವಲ್ಲಿ ಬಹುತೇಕ ಯಶಸ್ವಿಯಾಯಿತು.
ದಲಿತರ ಈ ಸ್ವಾಭಿಮಾನಿ ಜಾಥಾ ಎನ್ನುವುದು ಇಡೀ ಬಂಡವಾಳಶಾಹಿ ವ್ಯವಸ್ಥೆಗೆ ಹಾಗೂ ಮನುವಾದಿ ಮನಸುಗಳಿಗೆ ಅದೆಷ್ಟು ಭಯ ಹುಟ್ಟಿಸಿದೆಯೆಂದರೆ ಈ ಜಾಥಾದ ಕುರಿತು ಸುದ್ದಿ ಮಾಡಿದರೆ ಎಲ್ಲಿ ರಾಜ್ಯಾದ್ಯಂತ ಇರುವ ಬಹುಸಂಖ್ಯಾತ ಜನತೆ ಜಾಗೃತರಾಗುತ್ತಾರೋ ಎನ್ನುವಷ್ಟು. ಎಲ್ಲಾ ನಮೂನಿ ಚಾನೆಲ್ಗಳೂ ಈ ಕಾರ್ಯಕ್ರಮಕ್ಕೆ ಅಘೋಷಿತ ನಿಷೇಧ ಹೇರಿದಂತಿತ್ತು. ಈಗಿರುವ ಬಹುತೇಕ ವಾಹಿನಿಗಳಲ್ಲಿ ಆಯಕಟ್ಟಿನ ಜಾಗದಲ್ಲಿ ಕುಳಿತಿರುವ ಮನುವಾದಿ ಮನಸ್ಥಿತಿಯವರಿಗೆ ದಲಿತರ ಸಂಘಟಿತ ಹೋರಾಟ ದಿಗಿಲುಂಟು ಮಾಡಿದ್ದರಿಂದ ವರದಿ ಮಾಡಲು ಅವರ ಪೂರ್ವಗ್ರಹಗಳು ಅನುಮತಿಸಲಿಲ್ಲ. ಆದರೂ ಕಾರ್ಯಕ್ರಮ ನಿಲ್ಲಲಿಲ್ಲ. ಅವರ ಜಂಘಾಬಲವೇ ಉಡುಗಿಸುವಂತೆ ಜೈಭೀಮ್ ಘೋಷಣೆಗಳು ಜಾಥಾದ್ದುದ್ದಕ್ಕೂ ಮೊಳಗಿದ್ದಂತೂ ಸುಳ್ಳಲ್ಲ. ಕೇಸರಿ ಬಣ್ಣದ ಉಡುಪಿಯಂತಾ ಉಡುಪಿ ನೀಲಿ ಬಾವುಟಗಳ ಹಾರಾಟಕ್ಕೆ ಸಾಕ್ಷಿಯಾಯಿತು. ದಲಿತ ದಮನಿತ ಹಾಗೂ ಪ್ರಗತಿಪರ ಸಂಘಟನೆಗಳ ಸಂಘಟನಾತ್ಮಕ ಹೋರಾಟಕ್ಕೆ ಮಾದರಿಯಾಯಿತು.
ಇತ್ತ ಉಡುಪಿ ಚಲೋ ಜಾಥಾದಲ್ಲಿ ದಮನಿತರ ಘೋಷಣೆಗಳು ಆಗಸದೆತ್ತರಕ್ಕೆ ಮೊಳಗುತ್ತಿದ್ದರೆ ಅತ್ತ ದಲಿತ ಬಂದುಗಳಿಗೆ ಮತ್ತೊಂದು ಆಘಾತಕಾರಿ ಸುದ್ದಿ ಬರಸಿಡಿಲಂತೆ ಅಪ್ಪಳಿಸಿತು. ಉತ್ತರಾಕಾಂಡದ ಬಾಗೇಶ್ವರ್ ಜಿಲ್ಲೆಯ ಕರಾದಿಯಾ ಗ್ರಾಮದಲ್ಲಿ ಅಕ್ಟೋಬರ್ 6 ರಂದು ಹಿಟ್ಟಿನ ಗಿರಣಿಗೆ ಪ್ರವೇಶಿಸಿ ಅಪವಿತ್ರಗೊಳಿಸಿದನೆಂದು ಆರೋಪಿಸಿ ದಲಿತ ಯುವಕನನ್ನು ಸವರ್ಣೀಯ ರಕ್ಕಸನೊಬ್ಬ ಕುಡುಗೋಲಿನಿಂದ ಕತ್ತು ಕೊಯ್ದು ಹಾಡುಹಗಲೇ ಕಗ್ಗೊಲೆ ಮಾಡಿದ್ದ. ನಾಗರೀಕರೆಂದು ಹೇಳಿಕೊಳ್ಳುವ ಮನುಜ ಕುಲವೇ ಅವಮಾನದಿಂದ ತಲೆ ತಗ್ಗಿಸಬೇಕಾದ ದುರಂತ ಸುದ್ದಿ ಇದು. ಕೊಂದವನು ಸರಕಾರಿ ಶಾಲೆಯ ಶಿಕ್ಷಕ. ನಾಳಿನ ನಾಗರೀಕರನ್ನು ಸೃಷ್ಟಿಸುವ ಇಂತಾ ಮನುವಾಗಿ ವಿಷಪ್ರೇರಿತ ಶಿಕ್ಷಕರು ಮತಾಂಧರನ್ನಲ್ಲದೇ ಇನ್ಯಾರನ್ನು ತಾನೆ ಸೃಷ್ಟಿಸಲು ಸಾಧ್ಯ?. ಈ ಹತ್ಯೆಯಿಂದ ಇಡೀ ಉತ್ತರಾಕಾಂಡದಾದ್ಯಂತ ದಲಿತ ಸಮುದಾಯ ಭಾರಿ ಪ್ರತಿಭಟನೆಗಿಳಿದಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರತಿಭಟನೆಯ ಕಾವು ಮೇಲ್ಜಾತಿಯವರಿಗೆ ದಿಗಿಲು ಹುಟ್ಟಿಸಿದೆ.
ಇಂತಹ ಹತ್ಯೆಗಳು ವ್ಯಯಕ್ತಿಕ ದ್ವೇಷಗಳಿಂದಾದದ್ದಲ್ಲ... ಗೋರಕ್ಷಣೆ ಹೆಸರಲ್ಲಿ ನಡೆಯುವ ಹತ್ಯೆ ಹಲ್ಲೆಗಳು ಕೇವಲ ಒಂದು ಗುಂಪಿನ ಆಕ್ರೊಶವಲ್ಲ.. ಈ ರೀತಿಯ ಹಿಂಸಾ ಮನೋಭಾವದ ಹಿಂದೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉದ್ದೀಪಿಸಲಾದ ಮತಾಂಧತೆಯ ಉನ್ಮಾದ ಕೆಲಸಮಾಡುತ್ತಿರುತ್ತದೆ. ಹುಸಿ ಹಿಂದುತ್ವದ ಮನೋವಿಕಾರ ದಮನಿತರ ಮೇಲೆ ದಮನ ಮಾಡುವಂತೆ ಪ್ರೇರೇಪಿಸುತ್ತದೆ. ಇಂತಹ ಮತಾಂಧರನ್ನು ಹಿಂಸೆಗೆ ಪ್ರೇರೇಪಿಸಲು ಹಾಗೂ ರಕ್ಷಿಸಲು ಸಂಘ ಪರಿವಾರ ಬೆನ್ನೆಲುಬಾಗಿ ನಿಂತಿದೆ. ದಲಿತ ವಿರೋಧಿ ಹಿಂಸಕರನ್ನು ಹಾಗೂ ದಲಿತರ ಹಂತಕರನ್ನು ಹೀರೊಗಳನ್ನಾಗಿ ಮಾಡುವ ಹುನ್ನಾರಗಳೂ ನಡೆಯುತ್ತಿವೆ. ದಾದ್ರಿಯ ಮುಸ್ಲಿಂ ವ್ಯಕ್ತಿಯನ್ನು ಕೊಂದ ಕ್ರಿಮಿ ಇತ್ತೀಚೆಗೆ ಸತ್ತಾಗ ಆತನ ಶವದ ಮೇಲೆ ರಾಷ್ಟ್ರದ್ವಜವನ್ನು ಹೊದಿಸಿ ದೇಶಭಕ್ತನನ್ನಾಗಿ ತೋರಿಸುವ ಅಸಹ್ಯಕರ ಘಟನೆಗೆ ದೇಶವೇ ಸಾಕ್ಷಿಯಾಗಿದೆ. ಕಂಬಾಲಪಲ್ಲಿಯಲ್ಲು ದಲಿತರ ಕೊಲೆಮಾಡಿದವರು ಖುಲಾಸೆಯಾಗಿದ್ದೂ ವ್ಯವಸ್ಥೆಯ ಮೇಲ್ವರ್ಗ ಪರ ನಿಲುವಿಗೆ ದ್ಯೋತಕವಾಗಿದೆ.
ಮನುವಾದಿಗಳು ಎಷ್ಟೆಷ್ಟು ದಲಿತ ಶೂದ್ರರನ್ನು ಹಿಂಸಿಸುತ್ತಾರೋ ಅಷ್ಟಷ್ಟು ದಮನಿತರು ಒಂದಾಗಿ ಪ್ರತಿಭಟಿಸಿ ಮತಾಂಧರ ವಿರುದ್ಧ ತಿರುಗಿ ಬೀಳುತ್ತಾರೆ ಎಂಬುದಕ್ಕೆ ಇತ್ತೀಚೆಗೆ ದೇಶಾದ್ಯಂತ ತೀವ್ರಗೊಂಡ ಶೋಷಿತರ ಪ್ರತಿಭಟನೆಗಳೇ ಪುರಾವೆಗಳಾಗಿವೆ. ಊನಾ ದಲಿತ ಸಮ್ಮೇಳನದ ನಂತರ ಉಡುಪಿ ಚಲೋ ಸಮಾವೇಶ ನಡೆಯುತ್ತಿದೆ. ಇಂತಹ ಹೋರಾಟಗಳು ದೇಶಾದ್ಯಂತ ತೀವ್ರಗೊಳ್ಳುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ. ಮನುವಾದಕ್ಕೆ ಹಾಗೂ ಮನುವಾದಿ ಏಕಸಾಮ್ಯಕ್ಕೆ ಈ ದೇಶದಲ್ಲಿ ಅವಕಾಶವಿಲ್ಲ ಎಂದು ಸಾಬೀತುಪಡಿಸುವ ನಿಟ್ಟಿನಲ್ಲಿ ಬಹುಜನರು ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಈಗ ಕಾನೂನಿನ ಚೌಕಟ್ಟಿನಲ್ಲೇ ನಡೆಯುತ್ತಿರುವ ದಲಿತ ದಮನಿತರ ಪ್ರತಿಭಟನೆ ಯಾವಾಗ ಸಂಯಮ ಕಳೆದುಕೊಂಡು ಕಾನೂನನ್ನು ದಿಕ್ಕರಿಸಿ ಹಿಂಸಾತ್ಮಕ ಪ್ರತಿಭಟನೆಗಿಳಿಯುತ್ತದೋ ಆಗ ಈ ಅಲ್ಪಸಂಖ್ಯಾತ ಮನುವಾದಿಗಳನ್ನು ಅವರು ಸೃಷ್ಟಿಸಿದ ದೇವರು ಕೂಡಾ ರಕ್ಷಿಸಲಾರ.
ದಮನ ಹೆಚ್ಚಿದಷ್ಟೂ ದಂಗೆ ತೀವ್ರಗೊಳ್ಳುತ್ತದೆ. ವ್ಯವಸ್ಥೆಯ ಹಿಂಸೆ ತೀವ್ರವಾದಷ್ಟೂ ಜನ ಹೋರಾಟಗಳು ಗಟ್ಟಿಗೊಳ್ಳುತ್ತವೆ. ಅನೇಕ ವರ್ಷಗಳಿಂದ ತೀವ್ರ ಸಂಚಲನವೇ ಇಲ್ಲದೆ ಜಿಡ್ಡುಗಟ್ಟಿದ ದಲಿತ ಶಕ್ತಿಯನ್ನು ಜಾಗ್ರತಗೊಳಿಸಿ ದಮನಿತರಲ್ಲಿ ಹೋರಾಟದ ಪ್ರಜ್ಞೆಯನ್ನು ಹುಟ್ಟುಹಾಕಲು ಪ್ರೇರೇಪಿಸಿದ ಸಂಘ ಪರಿವಾರದ ಅಂಗಗಳ ಅಂಗಾಂಗಗಳಿಗೆ ನಮೋ ನಮಃ.
-
ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ