ಶುಕ್ರವಾರ, ಅಕ್ಟೋಬರ್ 14, 2016

ತಹ ತಹ ....... 11 ಬಕೆಟ್ಗಳು ಸಾರ್ ಬಕೆಟ್ಗಳು :

ತಹ ತಹ – 11

ಯಾವತ್ತೂ ನಂಗೆ ಹಾಗಾಗಿರಲಿಲ್ಲ.

ಅವತ್ತು ಆಗಸ್ಟ್ 24 ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ  ಐವತ್ತು ಮೀರಿದ ರವೀಂದ್ರ ಕಲಾಕ್ಷೇತ್ರದ " ನೆನಪಿನೋಕಳಿ" ಉದ್ಘಾಟನಾ ಸಮಾರಂಭ. ಎರಡು ವರ್ಷಗಳಿಂದಾ ಸಮಾರಂಭ ಮಾಡಬೇಕಂತಾ ಇಡೀ ಸಂಸ್ಕೃತಿ ಇಲಾಖೆ ಹಾಗೂ ಸಾಂಸ್ಕೃತಿಕ ಕಮಿಟಿ ಹರಸಾಹಸ ಪಟ್ರೂ ಸಾಧ್ಯವಾಗಿರಲೇ ಇಲ್ಲ. ಮೂರು ಬಾರಿ ಡೇಟ್ ಫಿಕ್ಸಾಗಿ ರದ್ದಾಗಿತ್ತು. ಕಳೆದ ಸಲವಂತೂ ಡೇಟೂ ಫಿಕ್ಸಾಗಿ ಸಂಜೆ ಇನ್ನೇನು ಕಾರ್ಯಕ್ರಮ ನಡೀಬೇಕಿತ್ತು...ಐನೂರು ಜನ ಕಲಾವಿದರೂ ದೂರದೂರುಗಳಿಂದ ಬೆಂಗಳೂರಿಗೆ ಬಂದಾಗಿತ್ತು ಆದರೆ ದಿಡೀರನೆ ಬೆಳಿಗ್ಗೆ ಕಾರ್ಯಕ್ರಮ ರದ್ದು ಮಾಡಿಯಾಗಿತ್ತು. ಈಗಿನ ಕಾರ್ಯಕ್ರಮವಾದರೂ ಆಗುತ್ತೋ ಇಲ್ಲಾ ಇನ್ನೊಂದು ಗಂಟೆ ಇರುವಾಗಲೇ ರದ್ದಾಗುತ್ತೋ ಅನ್ನೋದನ್ನ ಕಣ್ಣಾರೆ ನೋಡಿ ಪಾವನವಾಗುವ ಆಸೆಯಿಂದ ನಾನೂ ಹೋಗಿದ್ದೆ. ನಸೀಬು ಗಟ್ಟಿಯಾಗಿತ್ತು. ಸಿಎಂ ಸಾಹೇಬರು ಬಂದಿದ್ರು. ಏನಾರಾ ರಾಜಕೀಯದ ಒತ್ತಡದಿಂದ ಬರಾಕಾಗೂದಿಲ್ಲಾ ಅಂತೇನಾದ್ರೂ ಅಂದಿದ್ರೆ ಸಂಸ್ಕೃತಿ ಸಚಿವೆ ಇಡೀ ಕಾರ್ಯಕ್ರಮ ರದ್ದು ಮಾಡ್ರೀ ಅಂತಾ ಆರ್ಡರ್ ಮಾಡೂದಂತೂ ಖಾತ್ರಿಯಾಗಿತ್ತು. ಯಾಕಂದ್ರ ಹೋದ ಸಲ ಹಂಗೆ ಆಗಿತ್ತು.

ಅಂತೂ ಇಂತೂ ಕಾರ್ಯಕ್ರಮ ಶುರುವಾಯ್ತು. ರದ್ದಾಗೋ ಆತಂಕ ದೂರಾಯ್ತು. ಸಭಾಂಗಣದೊಳಗ ಜನಾ ಇದ್ರು ಆದರ ಕಲಾವಿದರು ಕಮ್ಮಿ ಇದ್ರು. ಅರ್ಧ ಭಾಗ ರಾಜಕೀಯದ ಬಹುಪರಾಕು ಪಡೆ ಇದ್ದರೆ... ಕಾಲು ಭಾಗದಷ್ಟು ಪೊಲೀಸ್ ಪಡೆ. ಮಿಕ್ಕುಳಿದವರು ಇತರೇ ಆಡಿಯನ್ಸು. ರಂಗಭೂಮಿಯವರು ಬೆರಳೆಣಿಕೆಯಷ್ಟು. ಬಹುಷಃ ಹಿಂದಿನಂತೆ ಕಾರ್ಯಕ್ರಮವೂ ರದ್ದಾಗಬಹುದೇನೋ ಎನ್ನುವ ಗುಮಾನಿಯಿಂದ ನಾಟಕದವರು ಬಂದಿರಲಿಕ್ಕಿಲ್ಲ. ಅವರು ಬಂದರೆಷ್ಟು ಬರದಿದ್ದರೆಷ್ಟು ಕಾರ್ಯಕ್ರಮ ಶುರುವಾಗಲೇಬೇಕಿತ್ತು ಶುರುವಾಯ್ತು.

ವೇದಿಕೆ ಮೇಲೆ ಹೊಗಳುಭಟ್ಟರು ಹಾಗೂ ವಂದಿಮಾಗಧರ ದೊಡ್ಡ ಪಡೆಯೇ ಓಡಾಡುತ್ತಿತ್ತು. ಆದರೆ ನನ್ನ ಒಳಕಣ್ಣಿಗೆ ಏನೇನೋ ಕಾಣಲು ಆರಂಭ ಆಗಿದ್ದಂತೂ ಸುಳ್ಳಲ್ಲ. ವೇದಿಕೆಯ ಮೇಲಿರುವವರ ಕೈಯಲ್ಲಿ ಬೇರೆ ಬೇರೆ ಆಕಾರ ಬಣ್ಣಗಳ ಬಕೆಟ್ ಗಳಿದ್ದಂತೆ ಕಾಣಿಸತೊಡಗಿತು. ಮುಖ್ಯಮಂತ್ರಿಯ ಹಿಂದೆ ಮುಂದೆ ಮಂತ್ರಿಣಿ ಬಕೆಟ್ ಹಿಡಿದು ಓಡಾಡುತ್ತಿದ್ದರೆ.. ಮಂತ್ರಿಣಿಯ ಮುಂದೆ ಇಲಾಖೆಯ ಅಧಿಕಾರಿ ಬೆನ್ನು ಬಾಗಿಸಿ ಬಕೆಟ್ ಹಿಡಿದೇ ನಿಂತಂಗಿತ್ತು. ಅಧಿಕಾರಿಯ ಜೊತೆಗೆ ರಂಗ ಸಂಘಟಕರೆಂದುಕೊಂಡ ಸಾಂಸ್ಕೃತಿಕ ಗುತ್ತಿಗೆದಾರರಾದ ಇಲಾಖೆಯ ಫಲಾನುಭವಿಗಳ ಪಡೆ ಮೈಕೈ ತುಂಬಾ ಚಿಕ್ಕ ದೊಡ್ಡ ಬಕೆಟ್ಟುಗಳ ನೇತಾಕಿಕೊಂಡೇ ಓಡಾಡುತ್ತಿದ್ದರು. ಮೂರು ಜನ ಸಾಧಕ ಕಲಾವಿದರಿಗೆ ಸನ್ಮಾನ ಮಾಡಲು ಹಾರ ಪೇಟ ಶಾಲುಗಳನ್ನು ಸರದಿ ಪ್ರಕಾರ ಪೈಪೋಟಿಯ ಮೇಲೆ ತಂದು ಕೊಡುತ್ತಿದ್ದ ರಂಗಸಂಘಟಕರ ಕೈಯಲ್ಲಿ ಹಾರ ಶಾಲಿನ ಬದಲು ನನಗಂತೂ ಬಣ್ಣಬಣ್ಣದ ಬಕೆಟ್ಟುಗಳೇ ಕಾಣಿಸಿದ್ದು ಎಂಥಾ ವಿಪರ್ಯಾಸ. 

ಮುಖ್ಯಮಂತ್ರಿಯನ್ನು ಪ್ರಸನ್ನಗೊಳಿಸಲು ಸಚಿವೆ ತನ್ನೆಲ್ಲಾ ಕಲಾ ಪ್ರೌಢಿಮೆಯನ್ನು ತೋರುತ್ತಿದ್ದರೆ, ಮುಮಂ ಜೊತೆಗೆ ಇಲಾಖಾ ಮಂತ್ರಿಣಿಯ ಕೃಪೆಗೆ ಪಾತ್ರರಾಗಲು ಇಲಾಖಾಧಿಕಾರಿ ಪರದಾಡುತ್ತಿದ್ದರು. ಮಂತ್ರಿಗಳು ಹಾಗೂ ಅಧಿಕಾರಿಗಳ ಕೃಪಾಕಟಾಕ್ಷಕ್ಕಾಗಿ ಸಾಂಸ್ಕೃತಿಕ ಕಮಿಟಿಯ ಪದಾಧಿಕಾರಿಗಳು ವಿನಯಾಭಿನಯದಲ್ಲಿ ಪೈಪೋಟಿಗಿಳಿದು ಮಂತ್ರಿ ಮಾನ್ಯರ ಹಿಂದೆ ಮುಂದೆ ಅಕ್ಕ ಪಕ್ಕ ನಿಂತು ಕಂಕುಳಗಳಲ್ಲಿ ನೇತಾಡುತ್ತಿದ್ದ  ವರ್ಚುವಲ್ ಬಕೆಟ್ಗಳ ಸಮೇತ ಪೊಟೋ ತೆಗೆಸಿಕೊಂಡು ತಮ್ಮ ಜನುಮ ಪಾವನ ಮಾಡಿಕೊಂಡರು.

ಕಳೆದ ಸಲ ಇಡೀ ಕಾರ್ಯಕ್ರಮ ದಿಡೀರ್ ಅಂತಾ ರದ್ದಾದಾಗ ಗಾಬರಿಯಿಂದ ದಿಕ್ಕಾಪಾಲಾದ ಹಳ್ಳೀ ಕಲಾವಿದರ ಅನಾನುಕೂಲತೆ ಬಗ್ಗೆ ವಿಚಾರಿಸಿ ಸಮಾಧಾನ ಹೇಳಲು ಸಾಂಸ್ಕೃತಿಕ ಕಮಿಟಿಯ ಅಧ್ಯಕ್ಷರಾದಿಯಾಗಿ ಸದಸ್ಯರಲ್ಲಿ ಯಾರೆಂದರೆ ಯಾರೂ ಮುಂದೆ ಬರದೇ ಮನೆಯಲ್ಲಿ ತಲೆಮರೆಸಿಕೊಂಡಿದ್ದರು. ಅಧಿಕಾರಿಗಳು ಎಸಿ ಆಫೀಸಿನೊಳಗೇ ಸುಖಾಸೀನರಾಗಿದ್ದರು. ಕಲಾವಿದರು ಮಾತ್ರ  ಬೀದಿಪಾಲಾಗಿದ್ದರು. ಆದರೆ ಈಗ ಅದೇ ಪದಾಧಿಕಾರಿಗಳು, ಅಧಿಕಾರಿಗಳು ಕಲಾವಿದರ ಅನುಪಸ್ಥಿತಿಯಲ್ಲಿ ವೇದಿಕೆಯ ಮೇಲೆ ಸಡಗರದಿಂದ ಓಡಾಡುತ್ತಾ ಆಳರಸರ ಜೊತೆ ನಿಂತು ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್ ಕೊಡುತ್ತಿದ್ದರು. ಆದರೆ ಗ್ರಾಮೀಣ ಕಲಾವಿದರನ್ನು ಮಾತ್ರ ಸಲ ಕರೆಯಲೂ ಇಲ್ಲ... ಅವರ್ಯಾರೂ ಬರಲೂ ಇಲ್ಲನೊಂದುಕೊಂಡು ಊರಿಗೆ ಮರಳಿದ ಕಲಾವಿದರ ಅನುಪಸ್ಥಿತಿಯಲ್ಲಿ ಕಲಾವಿದರೇತರರು ಕಲಾದೇವಿಯ ತೇರನ್ನು ವೇದಿಕೆಯ ಮೇಲೆ  ಎಳೆಯುತ್ತಿರುವುದನ್ನು ನೋಡಲು ಕಣ್ಣೆರಡೂ ಸಾಲದಾಗಿ ಕಣ್ಮುಚ್ಚಿಕೊಂಡೆ.

 - ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ