ಶನಿವಾರ, ಅಕ್ಟೋಬರ್ 15, 2016

ತಹ ತಹ .....40 ವ್ಯವಸ್ಥಿತವಾಗಿ ಸಮಾಧಿಯಾಯ್ತು ಉಚ್ಚಂಗಿ ದಮನ ಪ್ರಕರಣ.:



ಅಯ್ಯಯ್ಯೋ ಅನ್ಯಾಯ, ದಲಿತರಿಗೆಲ್ಲಿದೆ ನ್ಯಾಯ..?




ಅತ್ತ ದಲಿತ ಹಾಗೂ ದಮನಿತ ಸಮುದಾಯ ಅಕ್ಟೋಬರ್ 4 ರಿಂದ ಉಡುಪಿ ಚಲೋ ಎಂದು ದಲಿತ ಸ್ವಾಭಿಮಾನಿ ಜಾಥಾ ಮಾಡುತ್ತಿದ್ದರೆ.... ಇತ್ತ ಪೋಲೀಸರು ದಲಿತ ವಿದ್ಯಾರ್ಥಿಯ ಮೇಲೆ ಮತಾಂಧರು ಮಾಡಿದ ಮಾರಣಾಂತಿಕ ಹಲ್ಲೆ ಕೇಸನ್ನೆ ಮುಚ್ಚಿಹಾಕಿ ಹಿಂದುತ್ವವಾದಿ ಹಲ್ಲೆಕೋರರಿಗೆ ಕ್ಲೀನ್ ಚಿಟ್ ಕೊಟ್ಟು ತಮ್ಮ ದಲಿತ ವಿರೋಧಿತನವನ್ನು ಸಾಬೀತುಪಡಿಸಿದ್ದಾರೆ.

ದಾವಣಗೆರೆ ವಿಶ್ವವಿದ್ಯಾಲಯದ ಎಂ. ಎರಡನೇ ವರ್ಷದ ಪತ್ರಿಕೊದ್ಯಮದ ವಿದ್ಯಾರ್ಥಿ, ದಲಿತ ಯುವ ಕವಿ ಉಚ್ಚಂಗಿ ಪ್ರಸಾದರಿಗೆ ನ್ಯಾಯ ಸಿಗದೇ ಅನ್ಯಾಯವಾಗಿದೆ. ಮತಾಂಧರು ವರ್ಷದ ಹಿಂದೆ ಅವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದರು. ಮನುವಾದಿಗಳ ವಿರುದ್ದ ಕವಿತೆ ಗಿವಿತೆ ಬರೆದು ಹೋರಾಟ ಗೀರಾಟ ಮಾಡಿ ಅವರ ಜನವಿರೋಧಿ ಮುಖವಾಡಗಳನ್ನೆಲ್ಲಾ ಬಯಲುಗೊಳಿಸಿದ ಚಾರಿತ್ರಿಕ ಅಪರಾಧಕ್ಕಾಗಿ ಹಿಂದುತ್ವವಾದಿಗಳು ಒಂದು ವರ್ಷದ ಹಿಂದೆ ( ಅಕ್ಟೋಬರ್ 30) ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. "ಹಿಂದೂ ಧರ್ಮವನ್ನು ಟೀಕಿಸಿ ಬರೆಯುತ್ತೀಯಾ, ನಿನಗೆ ಬೆರಳುಗಳಿದ್ದರೆ ತಾನೇ ಬರೆಯೋದು? ಎಂದು ಉಚ್ಚಂಗಿಯ ಬೆರಳುಗಳನ್ನೇ ಕತ್ತರಿಸಲು ಪ್ರಯತ್ನಿಸಿದ ಮತಾಂಧರ ಗುಂಪು "ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದೀಯಾ ಅದಕ್ಕೆ ಜನ್ಮದಲ್ಲಿ ಮಾದಿಗನಾಗಿ ಹುಟ್ಟಿದ್ದೀಯಾ" ಎಂದು ನಿಂದಿಸಿ ಪ್ರಸಾದ್ ಮೇಲೆ ಹಲ್ಲೆ ಮಾಡಿದ್ದರು. ಅದು ಆಗ ರಾಜ್ಯಾದ್ಯಂತ ಒಂದು ಸಣ್ಣ ಸಂಚಲನವನ್ನೂ ಮೂಡಿಸಿತ್ತು. ದಾವಣಗೆರೆಯಲ್ಲಿ ಪ್ರಗತಿಪರರು ಪ್ರತಿಭಟನೆ ಸಹ ಹಮ್ಮಿಕೊಂಡಿದ್ದರು. ಒತ್ತಡ ಸೃಷ್ಟಿಯಾಗಿ ಪೋಲೀಸ್ ವಿಚಾರಣೆಯ ನಾಟಕವೂ ನಡೆದಿತ್ತು. ಹಲ್ಲೆಕೋರರಿಗೆ ಇಂದಿಲ್ಲ ನಾಳೆ ಶಿಕ್ಷೆಯಾಗುತ್ತದೆ ಎಂದು ಉಚ್ಚಂಗಿ ಹಾಗೂ ಅವರ ಬೆಂಬಲಕ್ಕೆ ನಿಂತ ಎಲ್ಲರೂ ನಂಬಿದ್ದರು.

ಆದರೆ.. ಇಡೀ ವ್ಯವಸ್ಥೆಯೇ ದಲಿತರ ಹಾಗೂ ದಮನಿತರ ವಿರೋಧಿಯಾಗಿರುವಾಗ ನ್ಯಾಯ ಸಿಗುತ್ತದೆ ಎಂದು ನಂಬುವುದೇ ಹುಚ್ಚುತನದ ಮಾತಾಗಿದೆ. ಸರಕಾರ ಯಾವುದೇ ಇರಲಿ ಮೇಲ್ಜಾತಿಯವರೇ ಪೊಲೀಸ್ ವ್ಯವಸ್ಥೆಯ ಆಯಕಟ್ಟಿನಲ್ಲಿರುವುದರಿಂದ ದಲಿತರಿಗೆ ರಕ್ಷೆ ಹಲ್ಲೆಕೋರರಿಗೆ ಶಿಕ್ಷೆ ಸಿಗುತ್ತದೆಂಬುದೇ ಮೂಢನಂಬಿಕೆಯಾಗಿದೆ.

ಉಚ್ಚಂಗಿ ಪ್ರಸಾದ್ ಮೇಲಿನ ಹಲ್ಲೆ ಕೇಸನ್ನು ಸಹ ಪೋಲೀಸರೇ ಹಳ್ಳಹಿಡಿಸಿದ್ದಾರೆ. "ಹಲ್ಲೆ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾದ ಬಗ್ಗೆ ಯಾವುದೇ ಸಾಕ್ಷಾಧಾರಗಳಿಲ್ಲ, ಇಂತಾ ಹಲ್ಲೆಯ ಪ್ರಕರಣವೇ ನಡೆದಿಲ್ಕ. ಇಡೀ ಪ್ರಕರಣವೇ ಕಟ್ಟುಕಥೆ" ಎಂದು ದಾವಣಗೆರೆಯ ಎಸ್ಪಿಯವರು ಅಕ್ಟೋಬರ್ 5 ರಂದು ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸಾರಿದ್ದಾರೆ. ಬಿ ರಿಪೋರ್ಟ ಹಾಕಿ ಇಡೀ ಪ್ರಕರಣವನ್ನು ಮುಚ್ಚಿಬಿಡುವುದು ಹಾಗೂ ಮೇಲ್ವರ್ಗದ ಆರೋಪಿಗಳನ್ನು ಕೇಸಿನಿಂದ ಸುಲಭವಾಗಿ ಪಾರುಮಾಡುವುದು ಆರಕ್ಷಕರ ಹುನ್ನಾರವಾಗಿದೆ.


ದಲಿತ ಕವಿಗೆ ಮಾಡಲು ಬೇರೆ ಕೆಲಸವಿರಲಿಲ್ಲ. ತಾನೇ ಖುದ್ದಾಗಿ ಹಲ್ಲೆ ಮಾಡಿಕೊಂಡು, ಮೈಕೈಗೆಲ್ಲಾ ತೀವ್ರ ಗಾಯಮಾಡಿಕೊಂಡು ತನಗಾಗದವರ ಮೇಲೆ ಕಂಪ್ಲಿಂಟ್ ಕೊಟ್ಟಿದ್ದಾನೆ ಎನ್ನುವಂತಿದೆ ಎಸ್ಪಿ ಸಾಹೇಬರ ವಿಚಾರಣೆ ಮತ್ತು ತೀರ್ಪು. ಹಲ್ಲೆ ಮಾಡಿದ್ದಕ್ಕೆ ಉಚ್ಚಂಗಿ ದೇಹಕ್ಕಾದ ಗಾಯಗಳೇ ಸಾಕ್ಷಿ ಹೇಳಿವೆ. ಯಾರು ಹಲ್ಲೆ ಮಾಡಿದ್ದಾರೆಂಬುದನ್ನು ಗುರುತಿಸಿ ಸ್ವತಃ ಹಲ್ಲೆಗೊಳಗಾದ ಉಚ್ಚಂಗಿಯೇ ದೂರು ದಾಖಲಿಸಿದ್ದಾರೆ. ಆದರೆ ಸಾಹೇಬರು ಖುದ್ದಾಗಿ ಸ್ಥಳ ಪರಿಶೀಲನೆಗೆ ಹೋದಾಗ ಅಲ್ಲಿ ಹಲ್ಲೆಯ ಕುರಿತು ಸಣ್ಣ ಸುಳಿವೂ ಸಿಕ್ಕಿಲ್ಲವಂತೆ. ಇದಪ್ಪಾ ಕಿವಿಯಲ್ಲಿ ಹೂವಿಡೋದು ಅಂದರೆ... ಇದಪ್ಪಾ ನ್ಯಾಯ ಕೇಳಿ ಬಂದ ದಲಿತರಿಗೆ ಯಾಮಾರಿಸೋದು ಎಂದರೆ. ಸುಳ್ಳನ್ನು ಹೇಳಲು ಒಂದು ವರ್ಷ ಬೇಕಾಗಿತ್ತಾ? ದಲಿತ ಕವಿ ಸುಳ್ಳು ಕೇಸ್ ಕೊಟ್ಟಿದ್ದರೆ ಬಂಧಿಸಬಹುದಿತ್ತಲ್ಲ. ಯಾಕೆ ಪೊಲೀಸರು ಸುಮ್ಮನಿದ್ದಾರೆ. ಯಾಕೆಂದರೆ ಪೊಲೀಸಪ್ಪನ ಮೇಲೆ ಮನುವಾದಿ ಪರಿವಾರಿಗಳ ಒತ್ತಡವಿದೆ. ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರು ಕೊಟ್ಟವನನ್ನೇ ಆರೋಪಿಯನ್ನಾಗಿಸುವ ಅಧಿಕಾರಸ್ಥರ ತಂತ್ರಗಾರಿಕೆ ಇಂದು ನಿನ್ನೆಯದಲ್ಲ.

ತಾನು ಅಹಿಂದ್ ಪರ ಎಂದುಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರ ಸರಕಾರ ಇದ್ದಾಗಲೇ ಹೀಗೆ ದಲಿತರಿಗೆ ನ್ಯಾಯ ದೊರಕದೇ ಇರುವುದು ಅಕ್ಷಮ್ಯ. ಬಿಜೆಪಿ ಸರಕಾರ ಇದ್ದಲ್ಲಿ ರೀತಿ ಆಗಿದ್ದರೆ ಒಪ್ಪಬಹುದಾಗಿತ್ತು. ಮನುವಾದಿಗಳ ಶಡ್ಯಂತ್ರವೆಂದು ತಿಳಿದು ಪ್ರತಿಭಟಿಸಬಹುದಿತ್ತು. ಆದರೆ ದಲಿತರ ಮತದಿಂದ ಆರಿಸಿ ಬಂದ ಕಾಂಗ್ರೆಸ್ ಸರಕಾರದಲ್ಲಿ ಪೊಲೀಸ್ ಅಧಿಕಾರಿಗಳು ಹಿಂದುತ್ವವಾದಿ ಹಲ್ಲೆಕೋರರ ಪರವಾಗಿ ಅಧಿಕಾರ ದುರುಪಯೋಗ ಮಾಡಿಕೊಂಡು ಸಾಕ್ಷಿಗಳನ್ನು ನಾಶಗೊಳಿಸಿ ಸತ್ಯವನ್ನು ಸಾಯಿಸುತ್ತಾರೆಂದರೆ ಅದು ಅಕ್ಷಮ್ಯ. ಸರಕಾರ ಯಾವುದೇ ಇರಲಿ ದಲಿತರಿಗೆ ನ್ಯಾಯ ಸಿಗಲಾರದೆಂಬುದು ಸಾಬೀತಾದಂತಾಯ್ತು. ಎಲ್ಲಾ ಬಣ್ಣ ಬಾವುಟದ ಪಕ್ಷಗಳೂ ಸಹ ಜಿಗಣಿಗಳೆ ದಮನಿತರ ನೆತ್ತರಿಗೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ದಲಿತಪರ ಮುಖವಾಡದ ಕಾಂಗ್ರೆಸ್ ಕೂಡಾ ಇದಕ್ಕೆ ಹೊರತಾಗಿಲ್ಲ. ಮೇಲ್ಜಾತಿ ಸಮುದಾಯದವರು ಆಳುವ ವ್ಯವಸ್ಥೆಯ ಆಯಕಟ್ಟಿನಲ್ಲಿರುವವರೆಗೂ ದಲಿತರಿಗೆ ನ್ಯಾಯ ಸಿಕ್ಕುವುದಿಲ್ಲ. ಒಡೆದು ಹಲವು ಹೋಳಾದ ದಲಿತ ಸಂಘಗಳಲ್ಲಿ ಹರಿದು ಹಂಚಿಹೋದ ದಲಿತ ಸಮುದಾಯದವರು ಒಂದಾಗಿ ವ್ಯವಸ್ಥೆಯ ಅನ್ಯಾಯದ ವಿರುದ್ದ ದ್ವನಿ ಎತ್ತುವವರೆಗೂ ದಮನಕ್ಕೆ ಕೊನೆಮೊದಲೆಂಬುದಿಲ್ಲ.

- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ