ಶುಕ್ರವಾರ, ಅಕ್ಟೋಬರ್ 14, 2016

ತಹ ತಹ..... 15 ಸಿಜಿಕೆ ಗುಂಪಿಂದ ಗುಡಿಹಳ್ಳಿ ನಿರ್ಗಮನ :

ತಹ ತಹ.... 15


"ಸಿಜಿಕೆ ಗುಂಪಲ್ಲಿ ನಾಟಕಕ್ಕಿಂತಾ ಇತರೆ ವಿಷ್ಯಾ ಜಾಸ್ತಿ ಇರೋದ್ರಿಂದ ಗ್ರುಪ್ ಬಿಟ್ಟು ಹೋಗ್ತಿದ್ದೀನಿ" ಎಂದು ಡೆತ್ ನೋಟ ಮಾದರಿಯ ಕಮೆಂಟ್ ಬರೆದ ಗುಡಿಹಳ್ಳಿ ನಾಗರಾಜರು 'ಸಿಜಿಕೆ ಥೀಯಟರ್ ನಿವ್ಸ್' ಎನ್ನುವ ವಾಟ್ಸಾಪ್ ಗ್ರುಪ್ಪಿನಿಂದ ಇಂದು ನಿರ್ಗಮಿಸಿದರೆಂದು ತಿಳಿಸಲು ವಿಷಾದವೆನಿಸುತ್ತಿದೆ. ಎಂಥಾ ಮಾತು ಸಾಹೇಬರದು. ಸಿಜಿಕೆ ಅಂದ್ರೆ ಕೇವಲ ರಂಗಭೂಮಿ ಎಂದುಕೊಳ್ಳುವ ಪ್ರಕಾಂಡ ಪಂಡಿತ ಮಹನೀಯರಿಗೆ ಸಿಜಿಕೆ ಅಂದರೆ ನಾಟಕದ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ, ರಾಜಕೀಯದ ಬತ್ತದ ಸೆಲೆ ಎಂದು ಯಾರು ತಿಳಿಸಿ ಹೇಳಬೇಕು. ತಲೆಯಲ್ಲಿ ಏನಾದರೂ ಖಾಲಿ ಇದ್ದರೆ ಇನ್ನೊಂಚೂರು ತುಂಬಿಸಬಹುದು. ಈಗಾಗಲೇ ಬರೀ ಪೂರ್ವಾಗ್ರಹಗಳೇ ತುಂಬಿಕೊಂಡಿದ್ದರೆ ಇನ್ನೂ ಏನೇ ತುಂಬಲು ಪ್ರಯತ್ನಿಸಿದರೂ ಬೋರ್ಗಲ್ಲ ಮೇಲೆ ವೈನೆರದಂತೆ. 

ಹೋಗಲಿ  ವಯೋವೃದ್ದರಾದ ಶ್ರೀಮಾನ್ ಗುಡಿಹಳ್ಳಿಯವರೇ ಸಿಜಿಕೆ ಗುಂಪಿನಿಂದ ನಿರ್ಗಮಿಸುವ ಹಿಂದಿನ ದಿನವೇ ಕಾವೇರಿ ನೀರಿನ ವಿವಾದ ಹಾಗೂ ಬಂಗಾರಪ್ಪನವರ ತೀರ್ಮಾನದ ಕುರಿತ ಸುದೀರ್ಘ ಸುದ್ದಿಯನ್ನು ಇದೇ ಸಿಜಿಕೆ ಗುಂಪಲ್ಲಿ ಕಾಪಿ ಪೇಸ್ಟ್ ಮಾಡಿದ್ದರಲ್ಲಾ ಅದೇನು ರಂಗಭೂಮಿಯ ವಿಷಯವೇ?

ರಂಗಮಭೂಮಿಗೆ ಸಂಬಂಧಿಸದ ಯಾರ್ಯಾರೋ ಬರೆದ ಅದೆಷ್ಟೋ ಬೇನಾಮಿ ಪೋಸ್ಟ್ ಗಳನ್ನು ಇದೇ ಗುಡಿಹಳ್ಳಿ ಸಾಹೇಬರು ಬರೆದವರ ಹೆಸರಿಲ್ಲದೆ ಕನಿಷ್ಟ ಪಾರ್ವರ್ಡೆಡ್ ಎಂದೂ ನಮೂದಿಸದೇ ಇದೇ ಸಿಜಿಕೆ ಗುಂಪಲ್ಲಿ ಪೋಸ್ಟ ಮಾಡಿದಾಗ ಗುಂಪಲ್ಲಿರುವ ಯಾರೂ ತಗಾದೆ ತಗಿಯಲಿಲ್ಲ. ಇಲ್ಲ ಸಲ್ಲದ್ದನ್ನು ಆರೋಪಿಸಿ ಗುಂಪು ಬಿಟ್ಟು ಹೋಗಲಿಲ್ಲ. ಬೇಕಾದವರು ಓದಿಕೊಂಡರು ಬೇಡವಾದವರು ಸುಮ್ಮನಾದರು. ಆದರೆ ರಾತ್ರಿ ಕಳೆದು ಬೆಳಕಾಗುವುದರೊಳಗೆ ನಾಗರಾಜರಿಗೆ ಅದೆಂತಾ ಜ್ಞಾನೋದಯವಾಯ್ತೋ ಗೊತ್ತಿಲ್ಲ...  ಸಿಜಿಕೆ ಗುಂಪಿಗೆ ರಾಜಿನಾಮೆ ರೀತಿಯ ಪತ್ರ ಬರೆದು ಪಲಾಯನ ಮಾಡಿದರು. ವಿಚಾರಗಳನ್ನು ವಿಚಾರಗಳಿಂದ ಎದುರಿಸಲಾಗದೇ, ಅಭಿಪ್ರಾಯಬೇಧಗಳನ್ನು ಚರ್ಚೆ ಸಂವಾದಗಳಿಂದ ಬಗೆಹರಿಸಿಕೊಳ್ಳಲು ಪ್ರಯತ್ನಿಸದೇ ಹೀಗೆ ಪಲಾಯನಮಾಡುವುದು ರಣಹೇಡಿಗಳ ಲಕ್ಷಣವೆಂದು ತಿಳಿದವರು ಹೇಳುತ್ತಾರೆ. ಗುಡಿಹಳ್ಳಿಯವರು ಹಾಗಲ್ಲ ಎಂದುಕೊಂಡಿದ್ದೆ. ಹಲವು ಬಾರಿಯಂತೆ ಸಲವೂ ನನ್ನ ನಿರೀಕ್ಷೆಗಳನ್ನು ಹುಸಿಗೊಳಿಸಿದರು. 

ರಂಗಭೂಮಿಯೇತರ ವಿಷಯಗಳಿವೆ ಎಂಬ ಆರೋಪ ಕೇವಲ ನೆಪವೆಂಬುದು ಗೊತ್ತಾಗಿದ್ದೇ ರಂಗಸಂಪದದ ಜೆ.ಲೊಕೇಶರವರಿಗೆ ಗುಡಿಹಳ್ಳಿಯವರು ಕಳುಹಿಸಿದ ಖಾಸಗಿ ವಾಟ್ಸಾಪ್ ಸಂದೇಶದಿಂದ. ಗುಡಿಹಳ್ಳಿಯವರನ್ನು ಬಾದಿಸಿದ್ದು ಇತರೇ ಯಾವ ವಿಚಾರಗಳೂ ಅಲ್ಲ. ಅವರನ್ನು ಇನ್ನಿಲ್ಲದಂತೆ ಕಾಡಿದ್ದು ಅವರ ಅಂತರಾತ್ಮ ಚುಚ್ಚುವಂತಾ ಕವಿತೆಗಳು. ಅವರ ಅಸಾಧ್ಯ ಅಸಹನೆಗೆ ಕಾರಣವಾಗಿದ್ದು ಕವಿತೆ ಬರೆದ ಕವಿ..

" ಕಾವ್ಯ ಎಲ್ಲಾ ದೊಡ್ಡವರಿಗೆ. ನಮಗೇನು ಅರ್ಥ ಆಗುತ್ತೆ ಸರ್, ಸುಮ್ನೆ ಟೈಂ ವೇಸ್ಟ್. ನಮ್ಮಂತವರಿಂದ ಏನು ಸಾರ್ ಪ್ರಯೋಜನ? ನಾನೆ ಗ್ರುಪ್ ಬಿಟ್ಟು ಹೋಗ್ತೀನಿ ಬಿಡಿಎಂದು ಗುಡಿಹಳ್ಳಿ  ಲೋಕೇಶರವರಿಗೆ ಸಂದೇಶ ಕಳಿಸಿದ್ದಾರೆ. ಇಷ್ಟಕ್ಕೂ ಲೊಕೇಶರವರು ತಮಗಿಷ್ಟವೆನಿಸುವ ನಾನು ಬರೆದ ಕವಿತೆಗಳನ್ನು ಸಿಜಿಕೆ ಗುಂಪಲ್ಲಿ ಪಾರ್ವರ್ಡ್ ಮಾಡುತ್ತಲೇ ಬಂದಿದ್ದಾರೆ. ಗುಡಿಹಳ್ಳಿಯವರಂತವರ ಬಲು ಸೂಕ್ಷ್ಮಾತಿ ಸೂಕ್ಷ್ಮ ಮನಸಿಗೆ ಅದ್ಯಾವ ಕವಿತೆ ಗಾಯಮಾಡಿತೋ ಗೊತ್ತಿಲ್ಲ. ಕವಿತೆ ಅರ್ಥಮಾಡಿಕೊಳ್ಳುವ ಜಾಣ್ಮೆ, ತಾಳ್ಮೆ, ಪ್ರತಿಭೆ, ಆಸಕ್ತಿಗಳಿಲ್ಲದಿದ್ದರೆ ಬಿಟ್ಟರಾಯ್ತು. ಓದಲೇ ಬೇಕೆಂದು ಯಾರೂ ಬಲವಂತ ಮಾಡಿಲ್ಲವಲ್ಲ. ಕವಿತೆ ಓದುವುದೂ ಟೈಂ ವೇಸ್ಟ್ ಎನ್ನುವ ಗುಡಿಹಳ್ಳಿಯವರ ಮಾತಿಗೆ ನನ್ನ ಸಹಮತವಿದೆ. ಯಾಕೆಂದರೆ ಕವಿತೆ ಓದುವುದರಿಂದ ಯಾವುದೇ ಪದವಿ, ಪುರಸ್ಕಾರ, ಸನ್ಮಾನ, ಹಣ ಸಿಕ್ಕೋದಿಲ್ಲವಲ್ಲಾ. ಲಾಭವಿಲ್ಲದೇ ಗುಡಿಹಳ್ಳಿಯವರು ಏನನ್ನೂ ಮಾಡರು ಪ್ರೀತಿಯನ್ನೂ ಸಹ. ಇಂತಾದ್ದರಲ್ಲಿ ಆರ್ಥಿಕವಾಗಿ ನಯಾಪೈಸೆ ಪ್ರಯೋಜನಕ್ಕಿಲ್ಲದ ಕವಿತೆಗಳು ಗುಡಿಹಳ್ಳಿಯಂತ ಮಹಾನುಭಾವರಿಗೆ ಪಕ್ಕಾ ಟೈಂ ವೇಸ್ಟ್ ಅಲ್ಲದೇ ಮತ್ತೇನು. ಪತ್ರಕರ್ತರಾಗಿ ಬದುಕನ್ನೇ ಸವೆಸಿದ ಇವರು ಸಾಹಿತ್ಯದ ಪ್ರಮುಖ ಪ್ರಕಾರವಾದ ಕವಿತೆಯನ್ನು ಹೀಗೆ ವ್ಯರ್ಥಸಮಯವೆಂದು ಕೀಳಾಗಿ ಪರಿಗಣಿಸುತ್ತಾರೆಂಬುದೆ ಅಚ್ಚರಿ. ಅಥವಾ ಕವಿತೆ ದೊಡ್ಡವರಿಗೆ ಮಾತ್ರ ನಮ್ಮಂತವರಿಗಲ್ಲ ಎನ್ನುವ ಕೀಳರಮೆಯಿಂದ ಶ್ರೀಯುತರು ನರಳುತ್ತಿದ್ದಾರಾ? ಗೊತ್ತಿಲ್ಲ. 'ನಮ್ಮಂತವರಿಂದ ಏನು ಸರ್ ಪ್ರಯೋಜನ' ಎಂದು ತಮ್ಮನ್ನು ತಾವೇ ನಿಷ್ಪ್ರಯೋಜಕ ಎಂದು ಹೇಳಿಕೊಂಡಿರುವುದು ಅವರಲ್ಲಿರುವ ಕೀಳರಮೆಗೆ ಸಾಕ್ಷಿಯಾಗಿದೆ. ಸರಳ ಕನ್ನಡ ಕವಿತೆಯನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿ ದಶಕಗಳ ಕಾಲ ವೃತ್ತಿಯಲ್ಲಿ ಪತ್ರಕರ್ತರಾಗಿ ನಿವೃತ್ತರಾಗಿದ್ದು ವಿಪರ್ಯಾಸ. 

ಕವಿತೆ ಇಷ್ಟ ಇಲ್ಲದಿದ್ದರೆ ಓದುವುದನ್ನು ಬಿಟ್ಟಾಕಬೇಕು. ನಮಗೂ ವಿಮರ್ಶೆಯ ಹೆಸರಲ್ಲಿ ದಶಕಗಳಿಂದ ಗುಡಿಹಳ್ಳಿ ಸಾಹೇಬರು ಬರೆಯುವ ನಾಟಕಗಳ ಕಥಾನಕದ ವರದಿ ಇಷ್ಟವಿಲ್ಲ. ಹಾಗಂತ ಅವುಗಳನ್ನು ಓದುವುದೇ ಟೈಂವೇಸ್ಟ್ ಎನ್ನುವುದು ಸೂಕ್ತವಾಅಥವಾ ಈಗಲೂ ಆಗೊಮ್ಮೆ ಈಗೊಮ್ಮೆ ಇವರು ಪ್ರಜಾವಾಣಿಯಲ್ಲಿ ಬರೆಯುವ ವಿಮರ್ಶಾ ವರದಿಗಳನ್ನು ಇಷ್ಟಪಡದವರು ಪ್ರಜಾವಾಣಿ ಓದುಗ ಬಳಗದಿಂದಲೇ ಹೊರಗೆ ಬರಬೇಕಾ? ಬೇಕಾದವರು ಓದುತ್ತಾರೆ... ಬೇಡವಾದವರು ಬೇರೆ ತಮಗಿಷ್ಟವಾದದ್ದನ್ನು ನೋಡುತ್ತಾರೆ. ಅದಕ್ಕೆ ಪ್ರಜಾವಾಣಿ ಪತ್ರಿಕೆ ಏನು ಮಾಡೀತು. 

ವಯಸ್ಸಾದಂತೆ ವ್ಯಕ್ತಿ ಮಾಗುತ್ತಾ ಹೋಗಬೇಕು. ಮಾಯದ ಗಾಯಗಳನ್ನು ಮನಸಲ್ಲಿಟ್ಟು ದಿನವೂ ನೆಕ್ಕುತ್ತಾ ಕುಳಿತರೆ ನೋವು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗೋದಿಲ್ಲ. ಕವಿತೆ ಮೇಲಿನ ತಾತ್ಸಾರವೋ ಇಲ್ಲಾ ಕವಿಯ ಮೇಲಿನ ಮತ್ಸರವೋ, ಅಂತೂ ತಮ್ಮ ಹಲವು ಮುಖವಾಡಗಳಲ್ಲಿ ಒಂದನ್ನು ಕಳಚಿಕೊಂಡು ಬಟಾಬಯಲಾಗಿಸಿಕೊಂಡರು. ವಯೋವೃದ್ದರೂ ಜ್ಞಾನವೃದ್ದರೂ ಆದಂತಾ  ಗುಡಿಹಳ್ಳಿಯವರಿಗೆ ಇದನ್ನೆಲ್ಲಾ ತಿಳಿಸಿ ಹೇಳುವವರಾರು? ಹೇಳಿದರೂ ಕೇಳದವರಿಗೆ ಮಾಡೋದಾದರೂ ಏನು?



- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ