ಶನಿವಾರ, ಅಕ್ಟೋಬರ್ 15, 2016

ತಹ ತಹ .... 21ಎ ಅಕ್ಕಮಹಾದೇವಿ ಕುರಿತ ಸಂವಾದ

ತಹ ತಹ .... 21ನೇ ತಹ ತಹ ಕುರಿತು    ಅಕ್ಕಮಹಾದೇವಿ ಬಗ್ಗೆ ಹೀಗೊಂದು ಸಂವಾದ


ಅಕ್ಕಮಹಾದೇವಿ ಕುರಿತ "ತಹ ತಹ ... 21"  ಲೇಖನಕ್ಕೆ ಪ್ರತಿಯಾಗಿ ಹಲವಾರು ಪ್ರಶ್ನೆಗಳು ವಾಟ್ಸಾಪಲ್ಲಿ ಹರಿದು ಬಂದವು. ಅದರಲ್ಲಿ ಆಯ್ದ ಕೆಲವು ಹೀಗಿವೆ...

"ಒಬ್ಬ ವ್ಯಕ್ತಿಅದರಲ್ಲೂ  ಒಂದು  ಹೆಣ್ಣು  ತನ್ನ  ಜೀವನವನ್ನು  ತನನಗಿಷ್ಟ ಬಂದಂತೆ  ರೂಪಿಸಿಕೊಳ್ಳುವ  ಸ್ವತಂತ್ರವನ್ನು ಆಕೆ ಪ್ರತಿಪಾದಿಸುತ್ತಾಳೆ. ರಾಜನಾಗಿದ್ದ  ಕೌಶಿಕ ಆಕೆ ಮದುವೆಗೆ  ಕಂಡೀಷನ್ ಹಾಕಿದಾಗಲಾದರೂ  ಅರ್ಥ ಮಾಡಿಕೊಳ್ಳ ಬೇಕಿತ್ತುದೇಹದ ಬಗ್ಗೆ  ಎಲ್ಲಾ   ಹೆಣ್ಣಿನ  ಭಾವನೆ  ಒಂದೇ  ಆಗಿರಬೇಕಿಲ್ಲ. ಇಷ್ಟು  ಹೇಳಿ  ಮುಂದೆ    ನಿಟ್ಟಿನಲ್ಲಿ ಯೋಚಿಸಲು ನಿಮಗೆ  ಸಲಹೆ ನೀಡಲಿಚ್ಚಿಸುತ್ತೇನೆ." ಎಂದು ಒಬ್ಬರು ಸಲಹೆ ನೀಡಿದರು...

"ಲೌಕಿಕದ ಗಂಡನನ್ನು ನಿರಾಕರಿಸಿ ಅಲೌಕಿಕದ ಗಂಡನಿಗೆ ತನ್ನನ್ನು ಸಮರ್ಪಿಸಿಕೊಳ್ಳುವ ಭಕ್ತಿಯ ಭಾವತೀವ್ರತೆ ಆಕೆ ರೂಪಕ., ಪ್ರತಿಮೆಗಳ ಮೂಲಕ ಕಟ್ಟಿಕೊಡುವ ಶತಮಾನಗಳ ಆಚೆಗಿನ ಹುಲುಮಾನವರಿಗೆ ಅರ್ಥವಾಗುವುದು ಅಸಾಧ್ಯ. ಆಳವಾದ ಅಧ್ತಯನವಿರದೇ ಅಕ್ಕನ ಕುರಿತು ಮಾತಾಡುವುದೇ ತಪ್ಪು ..ಎಂಬುದು ನನ್ನ ಮತ" ಎಂದು ಇನ್ನೊಬ್ಬರು ತಮ್ಮ ಮತ ಚಲಾಯಿಸಿದರು.

"ಲೌಕಿಕ  ಗಂಡ ಬರುವುದಕ್ಕೂ ಮೊದಲೇ ಆಕೆ   ಚನ್ನಮಲ್ಲಿಕಾರ್ಜುನನ (ತನಗರಿವಿದ್ದ) ವ್ಯಕ್ತಿತ್ವ   ವನ್ನು  ಇಷ್ಟಪಟ್ಟಿದ್ದಳು. ಲೌಕಿಕ  ಮದುವೆ  ಆಕೆಗೆ ಇಷ್ಟವಿಲ್ಲದಾಗ ತೀರ್ಮಾನ  ಆಕೆಯದುಅದು  ಭಾವತೀವ್ರತೆ ಎನ್ನುವುದು  ನಿಮ್ಮ  ಅಭಿಪ್ರಾಯ ? " ಎಂದು ಪ್ರಶ್ನಿಸಿದರು.

"ಅಕ್ಕಮಹಾದೇವಿ ಮದುವೆಗೆ ನಿಭಂಧನೆ ಹಾಕುವ ಮೊದಲೇ ಮದುವೆ ಒಲ್ಲೆ ಎಂದಿದ್ದಳಲ್ಲವೇ? ಆದರೂ ಆಕೆಯ 'ಸೌಂದರ್ಯ'ಕ್ಕೆ ಮರುಳಾಗಿದ್ದ ರಾಜನ ಒತ್ತಾಯ ಹೆಚ್ಚಾದಾಗ ನಿಭಂಧನೆ ಹಾಕಿ ಮದುವೆಯಾದದ್ದಲ್ಲವೆ? ಒಂದು ವೇಳೆ ಮದುವೆಯ ನಂತರವೇ ದಂಪತಿಗಳಲ್ಲಿ ಒಬ್ಬರಿಗೆ ಮಾಮೂಲಿಯ ಸಾಂಸಾರಿಕ ಸಂಬಂಧ ಸಾಧ್ಯವಿಲ್ಲ ಅನಿಸಿದರೆ ಇನ್ನೊಬ್ಬರು ಅದನ್ನು ಗೌರವಿಸಿ ಬೇರ್ಪಡುವುದು ಸರಿಯಾದ ಮಾರ್ಗ ಎಂದು ಭಾವಿಸಬಾರದೆ? ಇಂತಹ ಸಂಬಂಧದ ಪರಿಣಾಮವಾದ ಮಕ್ಕಳು ನಮ್ಮ ಸಮಾಜದಲ್ಲಿ  ಅಂದಿಗೂ ಇಂದಿಗೂ ಹೆಣ್ಣಿನ ಜವಾಬ್ದಾರಿಯ ಕಕ್ಷೆಯಲ್ಲೇ ಬಹಳಷ್ಟು ಬಾರಿ ಉಳಿಯುವ ವಾಸ್ತವಕ್ಕೆ ಎದುರಾಗಬೇಕಲ್ಲವೇಆಕೆ ಬದುಕನ್ನು ತಿರಸ್ಕರಿಸಿದ್ದಾಳೆ ಎನ್ನುವ ಅಭಿಪ್ರಾಯಕ್ಕೆ ಬರಲು ಏನು ಕಾರಣ? ಏಕತಾನತೆಯ ಸಂಸಾರದ ಭಾರ ಹೊರಲು ನಿರಾಕರಿಸಿದ್ದೆ? 

ಆಕೆಯ ಉಳಿದ ತಾತ್ವಿಕ ಅಭಿಪ್ರಾತಗಳ ಬಗ್ಗೆ ಒಪ್ಪಿಗೆ ಇರಲೇಬೇಕೆಂದೇನಿಲ್ಪ. ಆದರೆ 'ಅದರಿಂದ ಆಕೆ ಸಾಧಿಸಿದ್ದೇನು' ಎನ್ನುವಾಗ ಅಕ್ಕಮಹಾದೇವಿಯ ಬದುಕಿನ ಸಾರ್ಥಕತೆಯ ವ್ಯಾಖ್ಯಾನದ ಹಕ್ಕು ಆಕೆಯದ್ದೇ ಅಲ್ಲವೆ? ಚರ್ಚೆ ಮೇಲಿನ ಪ್ರಶ್ನೆಗಳಿಗೆ ಉತ್ತರ ಬೇಡುತ್ತದೆ.

ಕೊನೆಯದಾಗಿ ಶ್ರೀಶೈಲದಲ್ಲಿ ಅಕ್ಕ ಆತ್ಮಹತ್ಯೆ ಮಾಡಿಕೊಂಡಳೇ?! ತಿಳಿದವರು ಸ್ವಲ್ಪ ವಿವರವಾಗಿ ಇದರ ಬಗ್ಗೆ ಬೆಳಕು ಚೆಲ್ಲುತ್ತೀರಾ?" ಎಂಬ ವಾದವನ್ನೂ ಮಂಡಿಸಿದರು...

ಹೀಗೆ ಸಂವಾದಿಸಿದವರೆಲ್ಲಾ ಮಹಿಳೆಯರಾಗಿದ್ದು ಮೊದಲು ಅವರ ವಾದವನ್ನು ಗೌರವಿಸುತ್ತಲೇ ನನ್ನ ಅಭಿಪ್ರಾಯಗಳನ್ನು ಕೆಳಗಿನಂತೆ ಮಂಡಿಸಿದ್ದೇನೆ. 

"ತನಗಿಷ್ಟಬಂದಂತೆ ಬದುಕು ರೂಪಿಸಿಕೊಳ್ಳಬಯಸುವವರು ಮದುವೆಯಾಗಲೇಬಾರದಿತ್ತು ಎನ್ನುವುದು ನನ್ನ ಅನಿಸಿಕೆ. ಈಗಲೂ ಕೆಲವು ಫೆಮಿನಿಸ್ಟಗಳು ತಮ್ಮಿಚ್ಚೆಯಂತೆ ಒಂಟಿಯಾಗಿ ಬದುಕುತ್ತಿದ್ದಾರೆ. ಅದು ಅವರ ಸ್ವಾತಂತ್ರ್ಯ. ಮದುವೆ ಅಂತಾ ಆದ ಮೇಲೆ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ಹೊರಡ ಬಯಸುವವರು ಸಂಬಂಧಗಳ ಸುಳಿಯೊಳಗೆ ಸಿಗಲೇಬಾರದು. ಗಂಡು ಹೆಣ್ಣಿನ ಸಂಬಂಧ ಹಾಗೂ ಅದರೊಟ್ಟಿಗಿನ ಭಾವನೆ ಬಯಕೆಗಳು ಪ್ರಕೃತಿದತ್ತವಾದದ್ದು. ಪ್ರಕೃತಿಗೆ ನಾನು ವಿರೋಧವಾಗಿ ಬದುಕುತ್ತೇನೆ ಎನ್ನುವುದು ಜೀವವಿರೋಧಿ ಧೋರಣೆಯಾಗಿದೆ.   ಕಾಮ ಪ್ರೇಮಗಳಿಲ್ಲದೇ ಹೋದರೆ ಮನುಕುಲ ಮುಂದೆ ಬೆಳೆಯದು. ಲೋಕದೊಳಗೆ ಸ್ತುತಿ ನಿಂದೆಗಳು ಬಂದೊಡೆ ಸಮಾದಾನಿಯಾಗಿರಬೇಕೆ ಹೊರತು ಲೋಕವನ್ನೇ ನಿರಾಕರಿಸುವುದಲ್ಲ. ಇಷ್ಟಕ್ಕೂ ಕಾಯವನ್ನು ಕಾಯಕವನ್ನು ಕರ್ತವ್ಯವನ್ನು ನಿರಾಕರಿಸಿ ಸಾಧಿಸಿದ್ದೇನು? ಚನ್ನಮಲ್ಲಿಕಾರ್ಜುನನೆಂಬ  ಭ್ರಮೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೇ ಜೀವ ವಿರೋಧಿ ಧೋರಣೆಯಾಗಿದೆಪುರೋಹಿತಶಾಹಿ ಅಲೌಕಿಕ ಪರಿಕಲ್ಪನೆಯನ್ನು ನಂಬುವವರು, ಇಲ್ಲದ ದೇವರ ಅಸ್ತಿತ್ವವನ್ನು ಭ್ರಮಿಸುವವರು, ಬೌತಿಕ ಲೋಕದ ಅಸ್ತಿತ್ವವನ್ನು ನಿರಾಕರಿಸುವವರು ಅಕ್ಕ ಮಹಾದೇವಿಯ ಪರದ್ಯಾನದ ತೀರ್ಮಾನವನ್ನು ಒಪ್ಪಬಹುದಾಗಿದೆ. ಬದುಕನ್ನು ತೀವ್ರವಾಗಿ ಪ್ರೀತಿಸುವವರು, ಇರುವುದೊಂದೇ ಜನ್ಮ ಇದನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದುಕೊಳ್ಳುವವರು, ಸನಾತನ ಮಿತ್ ಗಳನ್ನು ಪ್ರಶ್ನಿಸುತ್ತಾ ಬದುಕಿನ ಸತ್ಯಗಳನ್ನು ಹುಡುಕುವವರು ಮಹಾದೇವಿಯ ನಿರ್ಣಯಗಳನ್ನು ಒಪ್ಪಲು ಸಾಧ್ಯವಿಲ್ಲ. ಕಾಯವನ್ನು ತುಚ್ಚೀಕರಿಸಿ, ಕಾಯಕವನ್ನು ನಿರಾಕರಿಸಿ, ಕರ್ತವ್ಯಗಳಿಗೆ ಬೆನ್ನು ತೋರುವುದು ಪಲಾಯಣವಾದವಾಗುತ್ತದೆ. ಬಸವಣ್ಣನವರ ಕಾಯಕ ದಾಸೊಹ ತತ್ವಗಳಿಗೆ ತದ್ವಿರುದ್ದವೆನಿಸುತ್ತದೆ.."

"ಬದುಕನ್ನು ಪ್ರೀತಿಸುವವರು ಹುಲುಮಾನವರಲ್ಲ. ಬದುಕನ್ನು ನಿರಾಕರಿಸುವವರು ದೇವಮಾನವರೂ ಅಲ್ಲ... ಭಕ್ತಿ ಅನ್ನುವುದೇ ಮಾನಸಿಕ ಅಸಮತೋಲನದ ಸಂಕೇತ. ಇದೇ ಭಕ್ತಿ ಎಂಬ ಭಯ ಹುಟ್ಟಿಸಿ ಪುರೋಹಿತಶಾಹಿಗಳು ಮನುಕುಲವನ್ನು ಒಡೆದು ಆಳಿದರು... ಈಗಲೂ ಆಳುತ್ತಿದ್ದಾರೆ..."

"ರಾಜನ ದಬ್ಬಾಳಿಕೆ ಇರೋದೆ ನಿಜವಾದರೆ ರಾಜ ಮಹಾದೇವಿಯ ಮೇಲೆ ಬಲವಂತದಿಂದ ತನ್ನ ಬಯಕೆ ತೀರಿಸಿಕೊಳ್ಳಬಹುದಾಗಿತ್ತು.. ಆದರೆ ಹಾಗೆ ಮಾಡಲಿಲ್ಲ. ಆಕೆ ಆತನನ್ನು ನಿರಾಕರಿಸಿ ಅರಮನೆ ಬಿಟ್ಟು ಹೋಗುವಾಗಲಾದರೂ ತಡೆದು ಗ್ರಹಬಂಧನದಲ್ಲಿಡಬಹುದಾಗಿತ್ತು. ಅದನ್ನು ಕೌಶಿಕ ರಾಜ ಮಾಡಲಿಲ್ಲ. ಆಕೆಗಾಗಿ ಎಲ್ಲಾ ರೀತಿಯ ಹೊಂದಾಣಿಕೆ ಮಾಡಿಕೊಂಡರೂ... ಬೇಕಾದಷ್ಟು ಸ್ವಾತಂತ್ರ್ಯ ಕೊಟ್ಟರೂ ಮಹಾದೇವಿ ಹಿಡಿದ ಹಠ ಬಿಡಲಿಲ್ಲ. ಪತಿಯ ಮೇಲೆ ಕಾಮುಕ ಎಂದು ಆರೋಪಿಸಿ ಇಲ್ಲದ ದೇವರ ಹುಡುಕಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾರಿಗೂ ಮಾದರಿಯಲ್ಲ..."

"ಅಕ್ಕ ಮಹಾದೇವಿಯ ಬದುಕಿನ ಕುರಿತು ಹರಿಹರನ ಮಹಾದೇವಿಯಕ್ಕಗಳ ರಗಳೆಯಲ್ಲಿ  ಮಾಹಿತಿಗಳಿವೆ. ಅದರಲ್ಲಿ ಸ್ಪಷ್ಟವಾಗಿ  ' ಕಲ್ಯಾಣದಿಂದ ನೇರವಾಗಿ ಶ್ರೀಶೈಲಕ್ಕೆ ಹೊರಟ ಅಕ್ಕ ಕದಳಿಯಲ್ಲಿ ಐಕ್ಯಳಾದಳು' ಎಂದು ದಾಖಲಾಗಿದೆ. ಕಲ್ಪನೆಯ ದೇವರನ್ನು ಉಸಿರಿರುವಾಗಂತೂ ಕೂಡಲು ಸಾಧ್ಯವಿಲ್ಲ. ಆದ್ದರಿಂದ ಚೆನ್ನಮಲ್ಲಿಕಾರ್ಜುನನನ್ನು ಸೇರಲು ಅಕ್ಕನು ಬದುಕನ್ನು ಕೊನೆಗೊಳಿಸಿಕೊಂಡಳು ಎನ್ನುವ ಮಾಹಿತಿಗಳು ಅಕ್ಕನ ಕುರಿತ ಕಥನಪರಂಪರೆಯಲ್ಲಿ ದಾಖಲಾಗಿವೆ. 

" ಅಮೇದ್ಯದ ಮಡಿಕೆ, ಮೂತ್ರದ ಕುಡಿಕೆ
ಎಲುವಿನ ತಡಿಕೆ, ಕೀವಿನ ಹಡಿಕೆ
ಸುಡಲೀ ದೇಹವ , ಒಡಲುವಿಡಿದು ಕೆಡದಿರು
ಚೆನ್ನಮಲ್ಲಿಕಾರ್ಜುನನರಿಯದ ಮರುಳೆ..."

ಇದು ಅಕ್ಕನ ವಚನ. ಬಸವಣ್ಣ ದೇಹವನ್ನು ದೇವಾಲಯಕ್ಕೆ ಹೋಲಿಸಿ ಮನುಷ್ಯ ಜನ್ಮವನ್ನು ಉನ್ನತೀಕರಿಸಿದರೆ ಮಹಾದೇವಿಯಕ್ಕ ದೇಹವನ್ನು ತುಚ್ಚೀಕರಿಸುತ್ತಾಳೆ. ಬಸವಣ್ಣನ ಸಕಾರಾತ್ಮಕ ನಿಲುವಿನ ಮುಂದೆ ಅಕ್ಕನ ನಕಾರಾತ್ಮಕತೆ ಪ್ರಶ್ನಾರ್ಹವಾಗಿದೆ...

"ಪುರುಷನ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ ಕಾಡುವುದು
ಸ್ರ್ತೀಯ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವುದು
ಲೋಕವೆಂಬ ಮಾಯೆ ಶರಣಚಾರಿತ್ರ್ಯ ಮರುಳಾಗಿ ತೋರುವುದು
ಚನ್ನಮಲ್ಲಿಕಾರ್ಜುನನೊಲಿದ ಶರಣಂಗೆ ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ"

ವಚನದಲ್ಲಿ ದೇವರ ಅನುಗ್ರಹಿತನ ಹೊರತುಪಡಿಸಿ ಎಲ್ಲವೂ ಮಾಯೆ ಎಂದು ಹೇಳಲಾಗಿದೆ. ಮಾಯೆ ಎನ್ನುವ ಕಾನ್ಸೆಪ್ಟ್ ಬಂದಿದ್ದೇ ವೈದಿಕಶಾಹಿಯಿಂದ. ವಾಸ್ತವ ಜಗತ್ತೇ ಮಾಯೆ... ಮೋಕ್ಷಸಾಧನೆಯೊಂದೆ ಮಾಯೆ ಮೀರಲು ಇರುವ ದಾರಿ ಎಂದು ಸನಾತನಿಗಳು ಹೇಳುತ್ತಾ ಮೋಕ್ಷದ ಬ್ರಮೆಯನ್ನು ತುಂಬಿದರು. 

ಸತಿ ಎಂಬುದು ಮಾಟ
ಪತಿಯೆಂಬುದು ಮಾಟ
ತನುವೆಂಬುದು ಮಾಯೆ
ಮನವೆಂಬುದು ಮಾಯೆ
ಸುಖವೆಂಬುದು ಮಾಯೆ"

ಎನ್ನುವ ವಚನದಲ್ಲಿ ಅಕ್ಕ ಎಲ್ಲವನ್ನೂ ನಕಾರಾತ್ಮಕ ನಿರಾಕರಣೆಯ ದೃಷ್ಟಿಯಲ್ಲೆ ಪರಿಭಾವಿಸುತ್ತಾಳೆಂಬುದು ಗೊತ್ತಾಗುತ್ತದೆ. ಮಾಯೆಯ ಆಯಾಮಗಳ ಕುರಿತೆ ಹದಿಮೂರು ವಚನಗಳು ಮೂಡಿಬಂದಿವೆ. 
ಅಕ್ಕನ ಪ್ರಕಾರ ಎಲ್ಲವೂ ಮಾಯೆಯಂದಾದರೆ ನಾವೆಲ್ಲಾ ಜೀವನೋತ್ಸಾಹವನ್ನು ಕಳೆದುಕೊಂಡು ಅಕ್ಕನ ದಾರಿಯಲ್ಲಿ ನಡೆದು ಐಕ್ಯತೆಯ ಮಾರ್ಗವನ್ನು ಅನುಸರಿಸಬೇಕಾಗುತ್ತದೆ.
ಜಗತ್ತೇ ಮಾಯೆಯಾಗಿರುವಾಗ ಸಮಾನತೆಯ ಕುರಿತು ಹೋರಾಟಗಳೇಕೆ? ಹಕ್ಕುಗಳ ಕುರಿತು ಮಾತುಗಳೇಕೆ,? ಲಿಂಗಬೇಧದ ಕುರಿತು ಅಸಹನೆಗಳೇಕೆ? ಅವರವರು ನಂಬುವ ದೇವರನ್ನು ಆರಾಧಿಸುತ್ತಾ ಭಜಿಸುತ್ತಾ ಜೀವತ್ಯಾಗ ಮಾಡಿ ಮಾಯೆಯಿಂದ ಮುಕ್ತರಾಗಬೇಕಾಗುತ್ತದೆ. 

ಬುದ್ದನಿಗೂ ಮಹಾದೇವಿಗೂ ಕೆಲವು ಸಾಮ್ಯತೆ ಹಾಗೂ ಹಲವು ವೈರುದ್ಯಗಳಿವೆ. ಮಹಾದೇವಿಯ ಹಾಗೆ ಸಿದ್ದಾರ್ಥನೂ ಸಹ ಸುಖಬೋಗದ ಅರಮನೆ ತ್ಯಜಿಸಿದ. ಬುದ್ದ ದೇವರ ಇರುವನ್ನು ಅರಿಸಿ ಹೋಗಿ ಅದು ಸಿಗದಾದಾಗ ಬದುಕಿನ ಅರಿವನ್ನು ಗಳಿಸಿದ. ತಾನು ಗಳಿಸಿದ ಅನುಭವವನ್ನು ಜಗದಲಿ ಶಾಂತಿ ಸೌಹಾರ್ದತೆಗಳನ್ನು ಸ್ಥಾಪಿಸಲು ವ್ಯಾಪಕವಾಗಿ ಬಳಸಿದ. ಆದರೆ ಅರಮನೆ ತೊರೆದ ಅಕ್ಕಮಹಾದೇವಿ ಮಲ್ಲಿಕಾರ್ಜುನನ ಬ್ರಮೆಯನ್ನು ಬೆಳೆಸಿಕೊಂಡು ಬದುಕಿಗೆ ವಿಮುಖಿಯಾಗಿ  ಸಾಗುತ್ತಾ ತನುವನ್ನು ಮನವನ್ನು ಜಗತ್ತನ್ನು ಮಾಯೆಯೆಂದು ದೂರುತ್ತಾ ಐಕ್ಯತೆಯ ಗಮ್ಯವನ್ನು ತಲುಪಿದಳು. ಬುದ್ದ ತನ್ನ ಅನುಭವದ ಅರಿವನ್ನು ಜಗದಗಲ ವಿಸ್ತರಿಸಿದರೆ... ಅಕ್ಕ ತನ್ನ ಅರಿವನ್ನು ಚೆನ್ನಮಲ್ಲಿಕಾರ್ಜುನನೆಂಬ ಅಮೂರ್ತ ಕಲ್ಪನೆಗೆ ಮೀಸಲಿರಿಸಿ ನೀಗಿಕೊಂಡಳು. ಹೀಗಾಗಿ ಬುದ್ದ ಲೌಕಿಕವಾಗಿ ಜಗಕೆಲ್ಲಾ ಆದರ್ಶನಾದ... ಅಕ್ಕ ಅಲೌಕಿಕ ಆರಾಧನೆಗೆ ಮಾದರಿಯಾದಳು..."

ಇದು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರಿಗೆ ನನ್ನ ಸಮರ್ಥನೆಗಳು. ಮಹಿಳಾ ದೃಷ್ಟಿಕೋನದಲ್ಲಿ  ನೋಡಿದಾಗ ಭಿನ್ನವಾಗಿ ತೋರುವ ಅಕ್ಕ... ಅಲೌಕಿಕ ದೃಷ್ಟಿಕೋನದಲ್ಲಿ ಸರಿಯಾದ ನಿಲುವಿನವಳು ಎನ್ನಿಸಿಕೊಳ್ಳುತ್ತಾಳೆ. ಆದರೆ ಬೌತಿಕವಾದದ ವಾಸ್ತವ ದೃಷ್ಟಿಕೋನದಲ್ಲಿ ಅಕ್ಕನ ಬದುಕು ಹಾಗೂ ಕೃತಿಗಳನ್ನು ಗಮನಿಸಿದಾಗ ಪಲಾಯನವಾದಿ, ನಕಾರಾತ್ಮಕ ಮನಸ್ಥಿತಿಯವಳು, ಭ್ರಮಾದೀನ ಪೀಡಿತೆ ಎಂದೆನಿಸುತ್ತಾಳೆ. ಅವರವರ ಭಾವಕ್ಕೆ ಅವರವರ ಬಕುತಿಗೆ ತಕ್ಕಂತೆ ಮಹಾದೇವಿಯಕ್ಕ ಕಾಣಿಸುತ್ತಾಳೆ. 

ಇಲ್ಲಿ ನಾನು ಹೇಳಿದ್ದೆ ಪರಮ ಸತ್ಯ ಇರಬೇಕೆಂದೇನಿಲ್ಲ. ಅಕ್ಕಮಹಾದೇವಿ ಕುರಿತ ಸಾಣೇಹಳ್ಳಿಯ "ಶರಣ ಸತಿ, ಲಿಂಗ ಪತಿ" ನಾಟಕ ನೋಡಿದ ನಂತರ ನನ್ನ ಅನುಭವಕ್ಕೆ ದಕ್ಕಿದ್ದನ್ನು ತಹ ತಹ ಲೇಖನದಲ್ಲಿ ಬರೆದಿದ್ದೇನೆ. ನನ್ನ ಅಭಿಪ್ರಾಯಕ್ಕೆ ಭಿನ್ನವಾದ ಅಭಿಪ್ರಾಯಗಳಿದ್ದರೆ ಸ್ವಾಗತಿಸುವೆ. 

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ