ಸೋಮವಾರ, ಅಕ್ಟೋಬರ್ 31, 2016

ತಹ ತಹ.....55 ದೀಪಾವಳಿಯ ಹಿಂದಿನ ಅಸಲಿ ಕಥೆ ಮತ್ತು ದ್ರಾವಿಡ ಜನಾಂಗದ ವ್ಯಥೆ :

ಬಲಿಯ ಜನರಿಗೆ ಸೂತಕ; ವಾಮನ ಸಂತಾನಗಳಿಗೆ ಸಂಭ್ರಮ :



ದೀಪಗಳ ಹಬ್ಬ ದೀಪಾವಳಿಯ ಮರುದಿನ ಬಲಿಪಾಢ್ಯಮಿ. ದೇಶಾದ್ಯಂತ ಹಿಂದೂಗಳೆನ್ನುವವರು ಶ್ರದ್ದೆ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸುತ್ತಾ ಬಂದಿರುವ ಪ್ರಮುಖ ಹಬ್ಬವಿದು. ದಾನಶೂರ ಬಲಿಚಕ್ರವರ್ತಿಯನ್ನು ವಾಮನರೂಪಿಯಾಗಿ ವೇಷಮರೆಸಿಕೊಂಡು ಬಂದ ವಿಷ್ಣು ಮೂರು ಪಾದ ಭೂಮಿಯನ್ನು ದಾನ ಕೇಳಿ ಒಂದು ಪಾದ ಆಕಾಶದ  ಮೇಲೆ, ಇನ್ನೊಂದು ಪಾದ ಭೂಮಿಯ ಮೇಲಿಟ್ಟು ಮೂರನೇ ಪಾದ ಬಲಿಯ ತಲೆಯ ಮೇಲಿಟ್ಟು ಪಾತಾಳಕ್ಕೆ ತುಳಿದು ಬಲಿಯ ಬಲಿಪಡೆದ ಕಥೆಯನ್ನು ಶತಮಾನಗಳಿಂದ ಕೇಳುತ್ತಾ, ಹೇಳುತ್ತಾ ಬರಲಾಗಿದೆ ಹಾಗೂ ಜನರನ್ನು ನಂಬಿಸಲು ವಾಮನಾವತಾರದ ಕಥೆಯನ್ನು ಕಟ್ಟಲಾಗಿದೆ. ಎಲ್ಲಿ ಈ ಕಟ್ಟುಕಥೆ ಕಾಲನ ಪ್ರವಾಹದಲ್ಲಿ ಕೊಚ್ಚಿಹೋಗುವುದೋ ಎಂಬ ಆತಂಕದಿಂದಾಗಿ ಪ್ರತಿ ವರ್ಷ ದೀಪಾವಳಿ ಹಬ್ಬವನ್ನು ಆಚರಿಸುವಂತೆ ಮಾಡುವ ಮೂಲಕ ವಿಷ್ಣುವಿನ ಅವತಾರದ ಮಹತ್ತರ ಕಾರ್ಯವನ್ನು ಜನಮನದಲ್ಲಿ ಜೀವಂತವಿಡಲಾಗಿದೆ.

ಜನರಿಗೆ ಸತ್ಯಕ್ಕಿಂತಲೂ ಸಡಗರಕ್ಕೊಂದು ನೆಪಬೇಕಷ್ಟೇ. ಯಾವ ಹಬ್ಬದ ಹಿನ್ನೆಲೆಗಳನ್ನೂ ವಿಶ್ಲೇಷಿಸಿ ನೋಡುವ ಗೋಜಿಗೆ ಹೋಗದ ಜನಸಾಮಾನ್ಯರು ತಮ್ಮ ಬದುಕಿನ ಬವನೆಗಳನ್ನು ಒಂದೆರಡು ದಿನಗಳ ಮಟ್ಟಿಗಾದರೂ ಕಳೆದುಕೊಂಡು ಉಂಡುಟ್ಟು ಹಬ್ಬವಾಚರಿಸಿ ಖುಷಿಯಾಗಿರಲು ಬಯಸುತ್ತಾರೆ. ಆದರೆ.. ಈ ಸಾಂಪ್ರದಾಯಿಕ ಆಚರಣೆಗಳ ಹಿಂದಿರುವ ಮರಾಮೋಸದ ಕಥೆಯನ್ನು ತಿಳಿದುಕೊಂಡರೆ ದೀಪಾವಳಿ ಹಬ್ಬದ ಹಿಂದಿರುವ ಆರ್ಯರ ಶಡ್ಯಂತ್ರಗಳ ಅರಿವು ಜನರಲ್ಲಿ ಮೂಡಬಹುದಾಗಿದೆ. ಬಲಿಪಾಢ್ಯದ ಹಿಂದಿರುವ ಖಳನಾಯಕರು ಯಾರು ಹಾಗೂ ನಿಜನಾಯಕ ಯಾರು ಎನ್ನುವುದನ್ನು ಕೆಲವರಾದರೂ ಅರ್ಥಮಾಡಿಕೊಳ್ಳಲೇಬೇಕಿದೆ. ಸೂತಕದ ದಿನವನ್ನು ಸಂಭ್ರಮದ ದಿನವನ್ನಾಗಿ ಆಚರಿಸುತ್ತಿರುವುದರ ಹಿಂದಿರುವ ಹುನ್ನಾರಗಳನ್ನು ಜನರಿಗೆ ತಿಳಿಸುವ ಅಗತ್ಯತೆ ಪ್ರಜ್ಞಾವಂತ ಜನರ ಹೊಣೆಗಾರಿಕೆಯಾಗಿದೆ.


ಈಗೇನು ಭಾರತ ಎಂದು ನಾವು ಭೂಪಟದಲ್ಲಿ ನೋಡುತ್ತೇವಲ್ಲಾ. ಇದರ ಉತ್ತರಭಾಗವನ್ನು ಅಂದರೆ ಉತ್ತರ ಭಾರತದ ಭೂಪ್ರದೇಶವನ್ನು ಮಧ್ಯ ಏಷ್ಯಾದಿಂದ ಬಂದ ಆರ್ಯರು ಆಕ್ರಮಿಸಿಕೊಂಡು ಆಳುತ್ತಿದ್ದರು. ಕ್ರಿಪೂ ೧೮೫ ರ ಸುಮಾರಿಗೆ ಆಗಿನ ಭರತ ಖಂಡದ ಮೂಲನಿವಾಸಿಗಳನ್ನು ಪ್ರತಿನಿಧಿಸುತ್ತಿದ್ದ ಮೌರ್ಯ ಸಾಮ್ರಾಜ್ಯವನ್ನು ಸೋಲಿಸಿದ ಆರ್ಯರ ಶುಂಗ ಸಾಮ್ರಾಜ್ಯ ಅಧಿಪತ್ಯಕ್ಕೆ ಬಂದಿತ್ತು. ಭರತಖಂಡದ ದಕ್ಷಿಣಭಾಗದಲ್ಲಿ ಬೌದ್ದ ದರ್ಮಿಯನಾದ ಬಲಾಢ್ಯ ಬಲಿಚಕ್ರವರ್ತಿ ಜನಾನುರಾಗಿಯಾಗಿ ರಾಜ್ಯಭಾರ ಮಾಡುತ್ತಿದ್ದನು. ಈ ಬೌದ್ದದೊರೆ ದಾನಧರ್ಮಗಳಿಗೆ ಹೆಸರಾಗಿದ್ದು ಪ್ರಜೆಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದನು. ಇಡೀ  ರಾಜ್ಯ ಸುಭಿಕ್ಷೆಯಾಗಿತ್ತು. ಜನ ನೆಮ್ಮದಿಯಾಗಿದ್ದರು. ಆರ್ಯರ ವರ್ಣವ್ಯವಸ್ಥೆಯ ಶೋಷಣೆಯಿಂದ ಕಂಗಾಲಾದ ಉತ್ತರ ಭಾರತ ಪ್ರದೇಶದ ಜನತೆ ಬಲಿಚಕ್ರವರ್ತಿಯ ನಾಡಿಗೆ ವಲಸೆಬಂದು ಬದುಕಿಗೆ ಅಗತ್ಯವಾದಷ್ಟು ದಾನ ಪಡೆದು ನೆಮ್ಮದಿಯಿಂದಾ ಬದುಕು ಕಂಡುಕೊಂಡರು. ಆಗಲೇ ಬೌದ್ದ ಹಾಗೂ ವೈದಿಕ ಧರ್ಮಗಳ ನಡುವಿನ ಸೈಂದಾತಿಕ ಸಂಘರ್ಷ ಜೋರಾಗಿತ್ತು. ವರ್ಣೀಯ ವ್ಯವಸ್ಥೆಯ ಪ್ರತಿಪಾದಕರಾದ ವೈದಿಕಶಾಹಿ ಆರ್ಯರಿಗೆ ಬೌದ್ದಧರ್ಮದ ಸಮಾನತೆ ಮತ್ತು ಮಾನವೀಯತೆಯು ತೀವ್ರ ಅಡತಡೆಯನ್ನುಂಟು ಮಾಡಿತ್ತು. ಹೇಗಾದರೂ ಮಾಡಿ ದ್ರಾವಿಡ ದೊರೆ ಬಲಿಚಕ್ರವರ್ತಿಯನ್ನು ಮಟ್ಟಹಾಕುವ ಮೂಲಕ ತಮ್ಮ ಆರ್ಯಧರ್ಮವನ್ನು ಇಡೀ ಭರತಖಂಡದಾದ್ಯಂತ ಪಸರಿಸಿ ಜನರನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ಆಲೋಚಿಸಿದರು.

ಈಗೇನು ದೇವತೆಗಳು ಎಂದು ಕಥೆ ಕಟ್ಟಲಾಗಿದೆಯೋ ಅವರು ಅಸಲಿಗೆ ಯಾವ ದೇವತೆಗಳಾಗಿರದೇ ಉತ್ತರ ಭರತಖಂಡದ ಮೇಲೆ ಹಿಡಿತ ಸಾಧಿಸಿದ ವೈದಿಕಶಾಹಿ ಆರ್ಯರೇ ಆಗಿದ್ದರು. ಬಲಿರಾಜನ ಮೇಲೆ ಯುದ್ದಹೂಡಿ ಗೆಲ್ಲುವುದಂತೂ ಅವರಿಗೆ ಸಾಧ್ಯವಿರಲಿಲ್ಲ. ಈ ದೇವಸಂಕುಲದವರೆಂದೂ ಯಾವುದೇ ದ್ರಾವಿಡ ಅರಸರ (ಅಂದರೆ ಅವರ ಕಣ್ಣಲ್ಲಿ ರಾಕ್ಷಸರು) ಮೇಲೆ ಎಂದೂ ನೇರವಾಗಿ  ಯುದ್ದಸಾರಿ ಜಯಸಿದ್ದೇ ಇಲ್ಲಾ. ಬರೀ ಕುತಂತ್ರಗಳಿಂದಲೇ ಗೆಲುವು ಸಾಧಿಸಿದ್ದನ್ನು ಪುರಾಣೇತಿಹಾಸಗಳು ಸಾರುತ್ತವೆ. ಅದೇ ರೀತಿ ಬಲಿಚಕ್ರವರ್ತಿಯನ್ನು ಬಲಿ ಹಾಕಲು ಒಂದು ಶಡ್ಯಂತ್ರವನ್ನು ಈ ದೇವತೆಗಳೆಂದುಕೊಂಡ ಆರ್ಯರು ಹೆಣೆದರು. ಬೌದ್ಧ ಧರ್ಮವನ್ನು ಸರ್ವನಾಶಮಾಡಿ ಇಡೀ ಭರತಖಂಡದಲ್ಲಿ ಮನುಸ್ಮೃತಿ ಪ್ರಣೀತ ವರ್ಣವ್ಯವಸ್ಥೆಯನ್ನು ಸ್ಥಾಪಿಸಲು ಹುನ್ನಾರವನ್ನು ರಚಿಸಿದರು. ಕೇಳಿದ್ದನ್ನು ಇಲ್ಲ ಎನ್ನದೇ ಕೊಡುತ್ತಿದ್ದ ಬಲಿಚಕ್ರವರ್ತಿಯ ಆದರ್ಶವನ್ನೇ ಬಳಸಿಕೊಂಡು ರಾಜನನ್ನು ಮೋಸದಿಂದ ಕೊಲ್ಲುವ ಯೋಜನೆ ರೂಪಿಸಿದರು. ಈಗೇನು ವಿಷ್ಣುವೇ ವಾಮನ ಅವತಾರದಲ್ಲಿ ಬಂದು ಬಲಿಯನ್ನು ಕೊಂದನೆಂದು ಕಥೆ ಕಟ್ಟಿದ್ದಾರೋ.. ಹಾಗೆಯೇ ಬ್ರಾಹ್ಮಣರ ವೇಷಮರೆಸಿಕೊಂಡು ಬಂದ ಈ ವಿಷ್ಣು ಮತ್ತು ಇತರ ಕೆಲವು ಬ್ರಾಹ್ಮಣರು ಬಲಿರಾಜನ ರಾಜಧಾನಿಯ ವಿಶಾಲವಾದ ನೆಲಮಾಳಿಗೆ ಇರುವ ಮನೆಯಲ್ಲಿ ಬೀಡುಬಿಟ್ಟರು.

ನಾವು ಕೆವು ಬ್ರಾಹ್ಮಣರು ಉತ್ತರಭಾಗದ ಆರ್ಯದೊರೆಗಳ ಶೋಷಣೆಯಿಂದ ನೊಂದು ಆಶ್ರಯ ಬಯಸಿ ಬಂದಿದ್ದೇವೆ. ಬ್ರಾಹ್ಮಣರಾದ ನಮ್ಮ ಮೇಲೆ ಇಲ್ಲಿಯ ದ್ವಾವಿಡರು ಹಲ್ಲೆ ಮಾಡುವ ಭಯವಿದ್ದು ನೆಲಮಾಳಿಗೆಯಲ್ಲಿ ಅವಿತುಕೊಂಡಿದ್ದೇವೆ. ದಯವಿಟ್ಟು ಕೇಳಿದ್ದನ್ನು ಕೊಡುವ ರಾಜರು ನಾವಿದ್ದಲ್ಲಿಗೆ ಬಂದು ತಮಗೆ ಬೂಧಾನ ಮಾಡಬೇಕು ಎಂದು ರಾಜನಿಗೊಂದು ಸಂದೇಶ ಕಳುಹಿಸಿದರು. ಬ್ರಾಹ್ಮಣರು ದಾನ ಕೇಳಿ ಬಂದಿದ್ದಾರೆಂದು ನಂಬಿದ ಬಲಿಚಕ್ರವರ್ತಿಯು ದಾನ ಕೊಡುವ ಉಮೇದಿನಿಂದಾ ನಿರಾಯುಧನಾಗಿ ನೆಲಮಾಳಿಗೆಯಲ್ಲಿ ಹೋದಾಗ, ನೆಲಮಾಳಿಗೆಯ ಮೇಲೆ ಜನರು ದೀವಿಟಿಗೆಗಳನ್ನು ಹಿಡಿದು ರಾಜನ ಬರುವಿಕೆಗಾಗಿ ಕಾಯುತ್ತಿದ್ದರು.  ನೆಲಮಾಳಿಗೆಯಲ್ಲಿ ನಿಂತಿದ್ದ ಬ್ರಾಹ್ಮಣ ವೇಷದಾರಿಗಳು ರಾಜನನ್ನು ಭೂದಾನ ಕೊಡಲು ಕೇಳಿಕೊಳ್ಳುತ್ತಾರೆ. ದಾನಕೊಡಲು ಯಾವಾಗ ಬಲಿ ಕಣ್ಣುಮುಚ್ಚಿ ನಿಲ್ಲುತ್ತಾನೋ ಆಗ ಆ ಕುತಂತ್ರಿಗಳು ಬಲಿರಾಜನನ್ನು ಕೊಂದು ಅದೇ ನೆಲಮಾಳಿಗೆಯಲ್ಲಿ ಪೂರ್ವಯೋಜನೆಯಂತೆ ಹೂತು ಅಲ್ಲಿಂದ ಬೇರೆ ಮಾರ್ಗದಲ್ಲಿ ಪರಾರಿಯಾಗುತ್ತಾರೆ.


ಇತ್ತ ದ್ರಾವಿಡ ಮೂಲನಿವಾಸಿಗಳು ತಮ್ಮ ರಾಜ ಇಂದು ಬಂದಾನು ನಾಳೆ ಬಂದಾನು ಎಂದು ದೀವಟಿಕೆಗಳನ್ನು ಉರಿಸಿ ಕಾಯುತ್ತಿದ್ದರೆ ಅತ್ತ ಮೋಸದಿಂದ ಕೊಲೆಮಾಡಿ ಹೋದ ಆರ್ಯರು ಉತ್ತರದಲ್ಲಿ ಸಿಡಿಮದ್ದುಗಳನ್ನು ಸಿಡಿಸಿ, ಸಿಹಿಯನ್ನು ಪರಸ್ಪರ ಹಂಚಿ ಬಲಿಚಕ್ರವರ್ತಿಯ ಸಂಹಾರವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅಕ್ಷರಸ್ತರಾದ ಆರ್ಯರು ತಮ್ಮ ಕಂತೆ ಪುರಾಣಗಳಲ್ಲಿ ವಾಮನಾವತಾರವನ್ನು ಸೃಷ್ಟಿಸಿ ಬಲಿಚಕ್ರವರ್ತಿಯನ್ನು ಖಳನಾಯಕನನ್ನಾಗಿಸಿ ಪುರಾಣೇತಿಹಾಸವನ್ನು ವೈದಿಕಶಾಹಿಯ ವೈಭವಕ್ಕೆ ಅನುಕೂಲವಾಗುವಂತೆ ಬರೆದು ಜನರನ್ನು ನಂಬಿಸುವ ಕೆಲಸವನ್ನು ಬಹಳ ಶದ್ದೆಯಿಂದ ಮಾಡುತ್ತಾರೆ. ಅಂದಿನಿಂದಾ ದ್ರಾವಿಡರು ತಮ್ಮ ಮನೆಯಂಗಳದಲ್ಲಿ ದೀಪಗಳನ್ನು ಬೆಳಗಿಸಿ ಬಲಿರಾಜನ ಸಾವಿನ ಸೂತಕವನ್ನು ಆಚರಿಸಿದರೆ, ಆರ್ಯವಂಶಸ್ತರು ಪಟಾಕಿಗಳನ್ನು ಸುಟ್ಟು, ಸಿಹಿ ಹಂಚಿ ಬಲಿರಾಜನ ಸಾವನ್ನು ಸಂಭ್ರಮಿಸುತ್ತಲೇ ಬಂದಿದ್ದಾರೆ. ಬರುಬರುತ್ತಾ ದೀಪಗಳ ಹಬ್ಬ ದೀಪಾವಳಿಯಾಗಿ ಮರುದಿನದ ಬಲಿಪಾಡ್ಯಮಿಯು ಪಟಾಕಿಗಳನ್ನು ಸುಟ್ಟು ವಿಜ್ರಂಭಿಸುವ ದಿನವಾಗಿ ಆಚರಣೆಗೆ ಬಂದಿತು. ಯಾವಾಗ ಆರ್ಯರು ಬೌದ್ದ ಧರ್ಮವನ್ನು  ದೇಶಾಂತರಗೊಳಿಸಿ ಇಡೀ ದೇಶಾದ್ಯಂತ ತಮ್ಮ ಪ್ರಾಭಲ್ಯವನ್ನು ಹೆಚ್ಚಿಸಿಕೊಂಡರೋ, ಆಗ ತಮ್ಮ ಹುಸಿ ಪುರಾಣೇತಿಹಾಸವನ್ನು ಜನರ ಮನೆಮನದಲ್ಲಿ ತುಂಬಲು ಹಬ್ಬದಾಚರಣೆಗಳನ್ನು ಜಾರಿಗೆ ತಂದು ವಿಜ್ರಭಣೆಯಿಂದ ಆಚರಿಸಲು ಪ್ರೋತ್ಸಾಹಿಸಿದರು. ದುಷ್ಟರಕ್ಷಣೆ ಹಾಗೂ ಶಿಷ್ಟ ರಕ್ಷಣೆಯ ಹೆಸರಲ್ಲಿ ಅವತಾರಗಳನ್ನು ಸೃಷ್ಟಿಸಿ ಇಡೀ ದೇಶದ ಜನರ ಮೆದುಳನ್ನೇ ತೊಳೆದು ತಮಗೆ ಬೇಕಾದ ಆಚರಣೆಗಳನ್ನು ತುಂಬಿದರು. 

ಆದರೆ.. ಈ ದ್ರಾವಿಡ ಸಮುದಾಯ ತಮ್ಮ ಸಾಕ್ಷೀಪ್ರಜ್ಞೆಯ ಸಂಕೇತವಾಗಿದ್ದ ಬಲಿಚಕ್ರವರ್ತಿಯನ್ನು ಮರೆತು ವೈದಿಕಶಾಹಿಯ ಕಟ್ಟುಕತೆಗಳನ್ನೇ ನಂಬಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಹ ಈ ವೈದಿಕಶಾಹಿಗಳು ಆಗಿನಂತೆ ಈಗಲೂ ನಮ್ಮ ದೇಶವನ್ನು ತಮ್ಮ ಕಾಲ್ಪನಿಕ ಕಟ್ಟು ಕಥೆಗಳು, ಅವತಾರ, ಧರ್ಮಗಳೆಂಬ ಹುಸಿ ತತ್ವಸಿದ್ದಾಂತಗಳಲ್ಲಿ ಕಟ್ಟಿಹಾಕಿ, ಬಹುಸಂಖ್ಯಾತ ದುಡಿಯುವ ಜನರ ಮನಸ್ಸು ಹಾಗೂ ಮೆದುಳನ್ನು ಮಲಿನಗೊಳಿಸಿವೆ. ಖಳನನ್ನು ನಾಯಕನನ್ನಾಗಿಸಿ, ನಾಯಕನನ್ನು ಖಳನನ್ನಾಗಿಸಿ ಕಥೆ ಕಟ್ಟಿ ನಂಬಿಸುವ ಮಹತ್ತರ ಕಾರ್ಯಗಳಲ್ಲಿ ಶತಮಾನಗಳಿಂದ ನಿರತರಾದ ಪುರೋಹಿತಶಾಹಿ ಸಂತಾನಗಳು ದುಡಿಯುವ ಜನರ ಆಲೋಚನಾ ಕ್ರಮವನ್ನೇ ತಮ್ಮ ಕರ್ಮಸಿದ್ದಾಂತದ ಮೂಲಕ ನಿರ್ಬಂಧಿಸಿಬಿಟ್ಟಿವೆ. ಹೀಗಾಗಿಯೇ ಎಲ್ಲಾ ಬ್ರಾಹ್ಮಣೇತರರ ಆದರ್ಶ ಪುರುಷನಾಗಬೇಕಾಗಿದ್ದ ಬಲಿಚಕ್ರವರ್ತಿ ರಾಕ್ಷಸನಾಗಿದ್ದು. ದಕ್ಷಿಣ ಭಾರತದ ದ್ರಾವಿಡ ಜನಾಂಗದ ಸ್ವಾಭಿಮಾನದ ಸಂಕೇತವಾಗಬೇಕಾಗಿದ್ದ ಬಲಿರಾಜ ಖಳನಾಯಕನಾಗಿದ್ದು. ಕೇವಲ ಬಲಿಮಾತ್ರವಲ್ಲ.. ದ್ರಾವಿಡ ದೊರೆ ರಾವಣನನ್ನೂ ಸಹ ಕುತಂತ್ರಗಳಿಂದ ಕೊಂದು, ದುಷ್ಟ ರಕ್ಷಣೆ ಎಂದು ಕಥೆ ಕಟ್ಟಿ ರಾಮನನ್ನು ಅವತಾರ ಪುರುಷನನ್ನಾಗಿಸಿದವರು ಇದೇ ಪುರೋಹಿತಶಾಹಿಗಳು. ಪುರಾಣೇತಿಹಾಸದಲ್ಲಿ ಹಿರಣ್ಯಕಶುಪಾದಿಯಾಗಿ ಯಾವುದೇ ಬಲಾಢ್ಯ ದ್ರಾವಿಡ ರಾಜರುಗಳ ಕಥೆಗಳನ್ನು ವಿಶ್ಲೇಷಿಸಿ ನೋಡಿದರೆ ಈ ದೇವತೆಗಳು ಎಂದುಕೊಳ್ಳುವ ಆರ್ಯಜನಾಂಗದ ಕುತಂತ್ರ ಹಾಗೂ ರಕ್ಕಸ ರಾಜರು ಎಂದುಕೊಂಡವರ ಹುಂಬುತನ ಮತ್ತು ನಿಯತ್ತು ಅರ್ಥವಾಗದೇ ಇರದು.

ಇದು ಇಂದು ನಿನ್ನೆಯದಲ್ಲಾ. ಶತಮಾನಗಳ ಶಡ್ಯಂತ್ರ. ಬಲಿಯಂತಹ ಅದೆಷ್ಟೋ ಆರ್ಯವಿರೋಧಿ ರಾಜರುಗಳು ರಕ್ಕಸರಾಜರೆನಿಸಿಕೊಂಡು ಆರ್ಯರ ಶಡ್ಯಂತ್ರಗಳಿಗೆ ಬಲಿಯಾಗಿದ್ದಾರೆ. ಭರತಖಂಡದ ಮನುಕುಲದ ಚರಿತ್ರೆಯ ತುಂಬಾ ಆರ್ಯರ ವೈದಿಕಶಾಹಿ ಶಡ್ಯಂತ್ರಗಳೇ ತುಂಬಿಕೊಂಡಿವೆ. ಪುರೋಹಿತಶಾಹಿಗಳು ಸೃಷ್ಟಿಸಿದ ಪ್ರತಿಯೊಂದು ಅವತಾರಗಳ ಹಿಂದೆಯೂ ಸಹ ನೇರ ಯುದ್ದ ಹೋರಾಟ ವೀರತ್ವಗಳಿಗಿಂತಾ ಆರ್ಯರ ಕುತಂತ್ರಗಳು ಹಾಗೂ ತಿರುಚಲ್ಪಟ್ಟ ಪ್ರಚಾರಗಳೇ ತುಂಬಿವೆ. ಇದಕ್ಕೆ ಬಲಿಚಕ್ರವರ್ತಿ ಹೊರತಲ್ಲ. ಆದ್ದರಿಂದ ಅಕ್ಷರ ಕಲಿತು ವಿದ್ಯಾವಂತರಾಗಿರುವ ದುಡಿಯುವ ಬಹುಜನರು ಈಗಲಾದರೂ ಸಾಂಪ್ರದಾಯಿಕ ಆಚರಣೆಗಳ ಹಿಂದಿರುವ ಚಾರಿತ್ರಿಕ ದ್ರೋಹವನ್ನು ಅರಿತುಕೊಳ್ಳಬೇಕಿದೆ. ದೀಪಾವಳಿಯಂದು ದೀಪಗಳ ಬೆಳಗುವ ಮೂಲಕ ಬಲಿಚಕ್ರವರ್ತಿಯ ಸಾವಿನ ಸೂತಕವನ್ನು ಆಚರಿಸಿಬೇಕಿದೆ. ಕೊಲೆಪಾತಕ ಆರ್ಯರ ಸಂಭ್ರಮದ ಪ್ರತೀಕವಾದ ಸಿಡಿಮದ್ದುಗಳನ್ನು ಸುಟ್ಟು ಸುಖಿಸುವುದನ್ನು ನಿಲ್ಲಿಸಬೇಕಿದೆ. ಹಬ್ಬದ ಸಂಭ್ರಮದ ಉನ್ಮಾದದಲ್ಲಿರುವ  ಯುವಕರಿಗೆ, ಮಕ್ಕಳಿಗೆ ವಾಸ್ತವವನ್ನು ಮನದಟ್ಟುಮಾಡಿಕೊಡುತ್ತಾ ಮುಂದಿನ ತಲೆಮಾರಾದರೂ ಈ ವೈದಿಕಶಾಹಿಗಳ ಕಟ್ಟುಕಥೆಗಳ ಮಾಯಾಜಾಲದಿಂದ ಹೊರಬರುವಂತೆ ಮಾಡಬೇಕಿದೆ. ಭವಿಷ್ಯದ ಭಾರತದಲ್ಲಾದರೂ ಬಲಿಚಕ್ರವರ್ತಿಗೆ ನ್ಯಾಯಸಿಗಬೇಕಿದೆ. ಭಾರತೀಯರ ಮನೆಯಂಗಳದಿ ಬೆಳಗುವ ಪ್ರತಿಯೊಂದು ದೀಪವೂ ಬಲಿಯ ಬಲಿದಾನದ ಸಂಕೇತವಾಗಬೇಕಿದೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಆರ್ಯರ ಶಡ್ಯಂತ್ರದ ಕುರಿತು ಅರಿವು ಮೂಡಬೇಕಿದೆ. ಆಗ ದೀಪಗಳ ಹಬ್ಬ ದೀಪಾವಳಿಗೆ ನಿಜವಾದ ಅರ್ಥ ಪ್ರಾಪ್ತಿಯಾಗುತ್ತದೆ. ಸೂತಕದ ದಿನವನ್ನು ಸಂಭ್ರಮದ ದಿನವನ್ನಾಗಿ ತಪ್ಪಾಗಿ ಆಚರಿಸುವುದು ತಪ್ಪುತ್ತದೆ.

      -ಶಶಿಕಾಂತ ಯಡಹಳ್ಳಿ    



2 ಕಾಮೆಂಟ್‌ಗಳು:

  1. ನಿಮ್ಮ ಲೇಖನ ಹೊಸದೊಂದು ಯೋಚನೆಗೆ ದಾರಿ ಮಾಡಿಕೊಟ್ಟಿದೆ. ಆದರೆ ತಕ್ಕ ಸಾಕ್ಷ್ಯಾಧಾರಗಳನ್ನು ಕೊಡುವ ಜವಾಬ್ದಾರಿಯೂ ನಿಮ್ಮದೇ ಆಗಿದೆ. ಏಕೆಂದರೆ ಇಷ್ಟೂ ದಿನ ನಡೆದ ದಾರಿಯಲ್ಲೇ ಕ್ರಮಿಸುತ್ತಿರುವವರಿಗೆ ಹೊಸ ಹಾದಿಯ ಬಗ್ಗೆ ಗೊಂದಲಗಳಿರುವುದು ಸಹಜ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಲೇಖನ ಹೊಸದೊಂದು ಯೋಚನೆಗೆ ದಾರಿ ಮಾಡಿಕೊಟ್ಟಿದೆ. ಆದರೆ ತಕ್ಕ ಸಾಕ್ಷ್ಯಾಧಾರಗಳನ್ನು ಕೊಡುವ ಜವಾಬ್ದಾರಿಯೂ ನಿಮ್ಮದೇ ಆಗಿದೆ. ಏಕೆಂದರೆ ಇಷ್ಟೂ ದಿನ ನಡೆದ ದಾರಿಯಲ್ಲೇ ಕ್ರಮಿಸುತ್ತಿರುವವರಿಗೆ ಹೊಸ ಹಾದಿಯ ಬಗ್ಗೆ ಗೊಂದಲಗಳಿರುವುದು ಸಹಜ.

    ಪ್ರತ್ಯುತ್ತರಅಳಿಸಿ