ಕೂಗುಮಾರಿಗಳ ಕಾಟ : ಪ್ರಕಾಶ ರೈಗೆ ಪರದಾಟ;
ಆಗ ಹಳ್ಳಿಗಳಲ್ಲಿ ಆಗಾಗ ವದಂತಿಯೊಂದನ್ಜು ಹರಡಿಸಲಾಗುತ್ತಿತ್ತು. "ರಾತ್ರಿ ಹೊತ್ತಲ್ಲಿ ಕೂಗುಮಾರಿ ಬಂದು ಬಾಗಿಲು ಬಡೆಯುತ್ತಾಳೆ.. ಯಾರಾದರೂ ಬಾಗಿಲು ತೆಗೆದರೆ ರಕ್ತ ಹೀರುತ್ತಾಳೆ" ಎನ್ನುವ ಸುದ್ದಿಯೇ ಊರವರನ್ನೆಲ್ಲಾ ಭಯಭೀತರನ್ನಾಗಿಸುತ್ತಿತ್ತು. ಊರಿನ ಪ್ರತಿಯೊಂದು ಮನೆಯ ಮೇಲೆ ಬಾಗಿಲ ಮೇಲೆ "ನಾಳೆ ಬಾ" ಎಂದು ಬರೆಯಲಾಗುತ್ತಿತ್ತು. ಅದನ್ನು ಓದಿದ ಕೂಗುಮಾರಿ ಪ್ರತಿದಿನವೂ ಬಂದು ಯಾಮಾರುತ್ತಾಳೆಂಬ ಮೌಢ್ಯವೂ ನಮ್ಮ ಜಾಣ ಗ್ರಾಮಸ್ಥರಲ್ಲಿತ್ತು. ಪ್ರತಿ ವರ್ಷ ಬೇಸಿಗೆಯಲ್ಲಿ ನಮ್ಮೂರಲ್ಲಿ ಈ ವದಂತಿ ಹರಡಿದಾಗಲೆಲ್ಲಾ ನಾನು ಗಮನಿಸಿದಂತೆ ನಾಲ್ಕಾರು ಮನೆಗಳು ಕಳ್ಳತನಕ್ಕೀಡಾಗುತ್ತಿದ್ದವು. ಈಗ ಅರ್ಥವಾಗುತ್ತಿದೆ ಬಹುಷಃ ಕಳ್ಳರೇ ಈ ರೀತಿಯ ವದಂತಿ ಹಬ್ಬಿಸಿ ತಮ್ಮ ಕಾಯಕಕ್ಕೆ ಯಾರೂ ಅಡ್ಡಿ ಪಡಿಸಬಾರದೆಂಬ ತಂತ್ರಗಾರಿಕೆ ಮಾಡುತ್ತಿರಬಹುದೆಂದು.
ಈಗ ಕೂಗುಮಾರಿಗಳ ವದಂತಿ ಹಳ್ಳಿಗಳಲ್ಲಿ ಇಲ್ಲವಾಗಿದೆ. ಆದರೆ ಕೂಗುಮಾರಿಗಳು ವಾಹಿನಿಗಳಲ್ಲಿ ಆಂಕರಗಳಾಗಿ ರೂಪಾಂತರ ಹೊಂದಿ ಪ್ರತಿ ಮನೆ ಮನದಲ್ಲಿ ತಲ್ಲಣಗಳನ್ನು ಮೂಡಿಸುತ್ತಿವೆ. ನಕಾರಾತ್ಮಕತೆಗೆ ಪ್ರಚೋದಿಸುತ್ತಿವೆ. ಈ ಆಧುನಿಕ ಕೂಗುಮಾರಿಗಳಿಂದ ಬೇಸತ್ತ ಜನ 'ನಾಳೆ ಬಾ' ಎಂದು ಹೇಳಿ ಮೂರ್ಖರ ಡಬ್ಬಿಗೆ ಗುಡ್ಬೈ ಹೇಳುವ ಕಾಲವೂ ಹತ್ತಿರವಿದೆ.
ಈ ಚಾನಲ್ಗಳೇ ಹೀಗೆ. ವೀಕ್ಷಕರನ್ನು ತಮ್ಮ ವಾಹಿನಿಯತ್ತ ಸೆಳೆಯಲು ಪೈಪೋಟಿಗೆ ಬಿದ್ದಿವೆ. ಅದಕ್ಕಾಗಿ ಆಗಾಗ ವದಂತಿಗಳನ್ನು, ಅತಿರೇಕದ ಸುದ್ದಿಗಳನ್ನು, ಮನೆ ಮನ ಮುರಿಯುವಂತಾ ದಾರಾವಾಹಿಗಳನ್ನು ಪ್ರಸಾರಮಾಡುತ್ತಲೇ ಇರುತ್ತವೆ. ಈ ಚಾನೆಲ್ಗಳಿಗೆ ಅವುಗಳ ಮಾಲೀಕರಿಗೆ ಬೇಕಾದದ್ದು ಬರೀ ಟಿಆರ್ಪಿ. ಟಿಆರ್ಪಿ ರೇಟಿಂಗ್ ಹೆಚ್ಚಾದಷ್ಟು ಬಂಡವಾಳಶಾಹಿಗಳಿಂದ ಜಾಹಿರಾತು ಹರಿದು ಬರುತ್ತದೆ. ಜಾಹಿರಾತು ಬಂದಂತೆಲ್ಲಾ ಸೆಕೆಂಡುಗಳ ಲೆಕ್ಕದಲ್ಲಿ ಹಣವೂ ಇಳಿದು ಬರುತ್ತದೆ. ಹಣ ಬಾಚಿಕೊಳ್ಳುವ ಪೈಪೋಟಿಯಲ್ಲಿ ವಾಹಿನಿಗಳು ತಮ್ಮೆಲ್ಲಾ ನೈತಿಕತೆ, ವೃತ್ತಿಪರತೆಯನ್ನು ಗಾಳಿಗೆ ತೂರಿ ಇಲ್ಲಸಲ್ಲದ್ದನ್ನು ಸೃಷ್ಟಿಸಿ ದಿನದಿಪ್ಪತ್ನಾಲ್ಕು ಗಂಟೆ ರಿಪೀಟೆಡ್ ಆಗಿ ಕೂಗಿದ್ದನ್ನೇ ಮತ್ತೆ ಮತ್ತೆ ಹಾಡಿದ್ದೆ ಹಾಡೊ ಕಿಸಬಾಯಿ ದಾಸಾ ಅನ್ನುವ ಹಾಗೆ ಕೂಗತೊಡಗುತ್ತವೆ.
ಈ ವಾರ್ತಾ ವಾಹಿನಿಗಳೆಂಬ ಸುದ್ದಿಗಾಗಿ ಹಸಿದು ಕುಳಿತ ಬಕಾಸುರರಿಗೆ ಬ್ರೇಕಿಂಗ್ ನ್ಯೂಜ್ಗಳದೇ ಧ್ಯಾನ. ಸತ್ಯ ಸಂಗತಿಗಳನ್ನು ನೈಜವಾಗಿ, ಇದ್ದ ಮಾಹಿತಿಗಳನ್ನು ಇದ್ದಂತೆ ತೋರಿಸುವ ಬದಲು ಇದ್ದದ್ದನ್ನು ತಿರುಚಿ, ಇಲ್ಲದ್ದನ್ನು ಮರುಸೃಷ್ಟಿಸಿ, ಬೇಕಿಲ್ಲದ್ದನ್ನು ಹುಟ್ಟಿಸಿ ಸದಾ ಸೆನ್ಸೇಶನ್ ಕ್ರಿಯೇಟ್ ಮಾಡುತ್ತವೆ. ಟಿಆರ್ಪಿಗಾಗಿ ಚಿತ್ರವಿಚಿತ್ರವಾಗಿ ಬಲೆಬೀಸಿ ವೀಕ್ಷಕರ ಬೇಟೆಗೆ ಚಾನೆಲ್ಗಳು ಇಳಿದುಬಿಟ್ಟಿವೆ. ಅಕಸ್ಮಾತ್ ಬ್ರೇಕಿಂಗ್ ನಿವ್ಜಗಳು ಸಿಗದಿದ್ದರೆ ಇವರೇ ಇಲ್ಲದ ಕಾಂಟ್ರವರ್ಸಿಗಳನ್ನು ಹುಟ್ಟಿಸಿ ಮತ್ತೆ ಮತ್ತೆ ನೋಡುಗರ ಮೆದುಳಿಗೆ ಮೊಳೆ ಹೊಡೆಯಲು ಶುರುಮಾಡುತ್ತಾರೆ.
ಈಗ ಆಗಿದ್ದೂ ಹೀಗೆ. ಪ್ರಕಾಶ ರೈ ಎನ್ನುವ ಅಪ್ಪಟ ಕನ್ನಡದ ಪ್ರತಿಭಾನ್ವಿತ ಕಲಾವಿದ ಬೇರೆ ಭಾಷೆಗಳಲ್ಲಿ ನಟಿಸಿ ಗಳಿಸಿದ ಹಣವನ್ನು ಬಳಸಿ ಆಗಾಗ ಮಾತೃಭಾಷಾ ಪ್ರೇಮದಿಂದಾಗಿ ಕನ್ನಡ ಭಾಷೆಯಲ್ಲೂ ಸದಭಿರುಚಿಯ ಸಿನೆಮಾ ನಿರ್ಮಿಸುತ್ತಾರೆ. ಅವರು 'ಇದೊಳ್ಳೆ ರಾಮಾಯಣ' ಎನ್ನುವ ಸಿನೆಮಾವೊಂದನ್ನು ನಿರ್ದೇಶಿಸಿ ನಿರ್ಮಿಸಿದ್ದು ಅದರ ಬಿಡುಗಡೆ ಪೂರ್ವ ಪ್ರಚಾರದ ಭಾಗವಾಗಿ ಜನಶ್ರೀ ಚಾನೆಲ್ಲಿನ ಆಹ್ವಾನದ ಮೇರೆಗೆ ಅಕ್ಟೋಬರ್ 1 ರಂದು ವಾಹಿನಿಯ ಸ್ಟುಡಿಯೋಗೆ ಹೋಗಿದ್ದಾರೆ. ಸಿನೆಮಾ ಕುರಿತು ಚರ್ಚೆ ಮಾಡಬೇಕಾದ ಸಂದರ್ಭದಲ್ಲಿ ಅದಕ್ಕೆ ಸಂಬಂಧವೇ ಇಲ್ಲದ ಕಾವೇರಿ ವಿಷಯವನ್ನು ಕೆದಕಿದ ಜನಶ್ರೀ ವಾಹಿನಿಯ ನಿರೂಪಕಿ ತಮ್ಮ ಮಾಮೂಲಿ ಕಾಂಟ್ರವರ್ಸಿ ಪಾಲಿಟಿಕ್ಸ್ ವರಸೆ ಶುರು ಮಾಡಿದ್ದಾರೆ.
"ಇದೊಳ್ಳೆ ರಾಮಾಯಣ ಬಿಡಿ. ಒಂದು ತಿಂಗಳಿಂದ ರಾಮಾಯಣ ಕಾವೇರಿ ವಿಚಾರವಾಗಿ ನಮ್ಮಲ್ಲೆ ನಡೀತಿದೆ ಜಲಯುದ್ಧ. ಏನು ಹೇಳ್ತೀರಾ, ಕಾವೇರಿ ವಿಚಾರವಾಗಿ ಏನನ್ಸುತ್ತೆ? ಇದು ಸುಪ್ರಿಂ ಕೋರ್ಟ್ ತಪ್ಪಾ? ಹಠ ಹಿಡಿದೋರು ಯಾರು? ಕರ್ನಾಟಕಾನಾ ಇಲ್ಲಾ ತಮಿಳುನಾಡಾ? ಏನನ್ಸುತ್ತೆ ನಿಮಗೆ.." ಇದು ನಿರೂಪಕಿ ಕೇಳಿದ ಚರ್ಚೆಯ ಚೌಕಟ್ಟನ್ನು ಮೀರಿದ ಅಧಿಕಪ್ರಸಂಗಿತನದ ಪ್ರಶ್ನೆ.
ಈ ಚಾನೆಲ್ಲಿನವರಿಗೆ ಬೇಕಾದದ್ದು ಸಿನೆಮಾ ಚರ್ಚೆಯಲ್ಲಾ... ಅದು ಕೇವಲ ನೆಪ ಮಾತ್ರ. ಅವರಿಗೆ ಬೇಕಾದದ್ದು ಇದು. ಅಂದರೆ ಕಾಂಟ್ರವರ್ಸಿ ಸೃಷ್ಟಿಸಿ ಟಿಆರ್ಪಿ ಹೆಚ್ಚಿಸಿಕೊಂಡು ಲಾಭ ಮಾಡಿಕೊಳ್ಳುವ ಹುನ್ನಾರ. ಅದಕ್ಕೆ ಬಹುಭಾಷಾ ನಟನನ್ನು ಬಳಸಿಕೊಂಡು ಸೆನ್ಸೇಶನ್ ಕ್ರಿಯೇಟ್ ಮಾಡುವುದು. ಕೂಗುಮಾರಿಗಳ ಈ ಹಿಡನ್ ಕುತಂತ್ರಗಾರಿಕೆ ಗೊತ್ತಾಗದ ಪ್ರಕಾಶ ರೈ ಸಿನೆಮಾ ಕುರಿತು ಚರ್ಚೆ ಎಂದುಕೊಂಡು ಹೋದಾಗ ಅದು ಬೇರೆಯದೇ ಸ್ವರೂಪ ತೆಗೆದುಕೊಂಡಿದ್ದರಿಂದ ಆತಂಕಕ್ಕೊಳಗಾದರು.
ನಿರೂಪಕಿ ಕೇಳಿದ ಅಸಾಂಧರ್ಭಿಕ ಪ್ರಶ್ನೆಗೆ ರೈರವರು ಯಾವುದೇ ಉತ್ತರ ಕೊಟ್ಟಿದ್ದರೂ ಟ್ರ್ಯಾಪಿಗೆ ಒಳಗಾಗುತ್ತಿದ್ದರು. ಕನ್ನಡಿಗರದು ಹಠಮಾರಿತನ ಅಂದಿದ್ದರೆ "ಇಂದಿನ ರಾಮಾಯಣ" ಸಿನೆಮಾ ಪ್ರದರ್ಶನವನ್ನೇ ಪರ ಕನ್ನಡ ಸಂಘಟನೆಗಳು ಬ್ಯಾನ್ ಮಾಡುತ್ತಿದ್ದವು ಹಾಗೂ ಕನ್ನಡ ದ್ರೋಹಿ ಪಟ್ಟಕಟ್ಟಿ ನಾಡಿನಾದ್ಯಂತ ರೈ ವಿರೋಧಿ ಉನ್ಮಾದ ಸೃಷ್ಟಿಯಾಗಿ ಈ ಚಾನೆಲ್ಲಿಗೆ ಲಾಭ ತಂದುಕೊಡುತ್ತಿತ್ತು. ಅಕಸ್ಮಾತ್ ತಮಿಳರ ವಿರುದ್ದವಾಗಿ ಮಾತಾಡಿದ್ದರೆ ತಮಿಳುನಾಡಿನ ಜನ ರೈ ರವರ ಸಿನೆಮಾ ಬಹಿಷ್ಕರಿಸಿ ದಾಂದಲೆ ಮಾಡುತ್ತಿದ್ದರು. ಇದರಿಂದಲೂ ಈ ಚಾನೆಲ್ಲಿನ ಹಸಿವೆಗೆ ನಾಲ್ಕು ದಿನ ಆಹಾರ ಸಿಗುತ್ತಿತ್ತು. ಸುಪ್ರಿಂ ಕೋರ್ಟ್ ತಪ್ಪು ಎಂದಿದ್ದರೆ ನ್ಯಾಯಾಲಯ ನಿಂದನೆಯಾಗುತ್ತಿತ್ತು. ಇಂತಹುದೊಂದು ವಿಕ್ಷಿಪ್ತ ಪರಿಸ್ಥಿತಿಗೆ ಕಲಾವಿದನನ್ನು ತಳ್ಳಿದ ಈ ವಾಹಿನಿ ಕಾಂಟ್ರವರ್ಸಿ ಬಲೆಯನ್ನು ಹರಡಿ ಕಲಾವಿದನನ್ನು ಬಲಿಪಶುವನ್ನಾಗಿ ಮಾಡಲು ಕಾಯುತ್ತಿತ್ತು.
ನಿರೂಪಕಿ ಎನ್ನುವ ಕೂಗುಮಾರಮ್ಮ ಈ ರೀತಿಯ ಪ್ರಶ್ನೆ ಕೇಳಿದಾಗಲೇ ಅದರ ಹಿಂದಿರುವ ಶಡ್ಯಂತ್ರದ ವಾಸನೆ ರೈರವರ ಸೂಕ್ಷ್ಮ ಪ್ರಜ್ಞೆಗೆ ಬಡಿಯಿತು. ಇದ್ದಕ್ಕಿದ್ದಂತೆ ಅಲರ್ಟ್ ಆದ ನಟ ಸಮಚಿತ್ತತೆಯಿಂದಲೇ ವಾಹಿನಿಯ ಕೆನ್ನೆಗೆ ಬಾರಿಸುವಂತೆ ಉತ್ತರಿಸಿದ್ದಕ್ಕೆ ಆ ಕೂಗುಮಾರಿಯಮ್ಮ ತತ್ತರಿಸಿಹೋದರು.
"ನಿರ್ದೇಶನ ನಿರ್ಮಾಣ ಕುರಿತಾಗಿ ನಾವಿಲ್ಲಿ ಮಾತಾಡ್ತಿದ್ದೇವೆ. ರಾಜಕೀಯ ಬೇರೆ ವಿಷಯ. ತುಂಬಾ ಆಳವಾದ ಸಂಗತಿ. ಇದು ಕೇವಲ ನೀರಿನ ಸಮಸ್ಯೆ ಮಾತ್ರವಲ್ಲಾ, ಬೇರೆ ಸಮಸ್ಯೆಗಳೂ ಇವೆ. ಅದರ ಬಗ್ಗೆ ಗಂಭೀರವಾಗಿಯೇ ಮಾತಾಡ್ಬೇಕಾಗ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಸುಮ್ಮಸುಮ್ಮನೇ ಬಾಯಿಗೆ ಬಂದಂತೆ ಮಾತಾಡೋಕಾಗೋದಿಲ್ಲ. ರಿಲೇ ನಿಲ್ಲಿಸಿ. ಇದರಿಂದೆಲ್ಲಾ ನಿಮಗೇನು ಸಿಗುತ್ತೆ. ಜನ ಬೇಸರದಲ್ಲಿದ್ದಾರೆ, ಕೋಪದಲ್ಲಿದ್ದಾರೆ. ಸಿನೆಮಾ ನಟನಿಂದ ಇದನ್ನೆಲ್ಲಾ ಕೇಳೋ ಕೆಟ್ಟ ಬುದ್ದಿ ನಿಮಗ್ಯಾಕೆ? ನೀವು ಜವಾಬ್ದಾರಿಯಿಂದಿರಬೇಕು. ಬೇಜವಾಬ್ದಾರಿಯಿಂದ ಬಾಯಿಗೆ ಬಂದ ಹಾಗೆ ಯಾಕೆ ಕೇಳ್ತೀರಿ.ಯಾವ ಸಂದರ್ಭದಲ್ಲಿ ಯಾವ ಪ್ರಶ್ನೆ ಕೇಳಬೇಕು ಎನ್ನುವ ಬೇಸಿಕ್ ಜ್ಞಾನ ಇಲ್ಲದಿದ್ರೆ ತಪ್ಪಲ್ವಾ ಮೇಡಂ. ಇಲ್ಲಿರೋ ನಟರು, ಅಲ್ಲಿರೋ ನಟರು ಅನ್ನೋದ್ಯಾಕೆ? ಎಲ್ಲರೂ ನಟರೇ, ಸಮಸ್ಯೆ ಬೇರೆ ಇದೆ" ಹೀಗೆಂದು ಹೇಳಿ ಕಾಲರ್ ಮೈಕ್ ಕಿತ್ತಾಕಿದ ಪ್ರಕಾಶ ರೈರವರು ಅಧಿಕಪ್ರಸಂಗಿತನ ತೋರಿದ ವಾಹಿನಿಗೆ ತಮ್ಮ ಸಾತ್ವಿಕ ಪ್ರತಿಭಟನೆ ತೋರಿಸಿ ಎದ್ದು ಹೊರಟೇಬಿಟ್ಟರು. ಹೋಗುವ ಮುನ್ನ ಆಪ್ ದಿ ರಿಕಾರ್ಡ್ ಆಗಿ " ಕಾಂಟ್ರವರ್ಸಿ ಬೇಕಾ ನಿಮಗೆ, ಮಾಡ್ಕೊಳ್ಳಿ. ನನ್ನ ಜವಾಬ್ದಾರಿ ಬಗ್ಗೆ ಅಲ್ಲಾ ನಿಮ್ಮ ಜವಾಬ್ದಾರಿ ಬಗ್ಗೆ ಹೇಳಿದ್ದೇನೆ.." ಎಂದು ವಾಹಿನಿಗಳ ಜವಾಬ್ದಾರಿಯ ಬಗ್ಗೆ ಎಚ್ಚರಿಸಿಯೇ ರೈರವರು ಸ್ಟುಡಿಯೋದಿಂದ ಹೊರಗೆ ಹೋದರು.
ಪ್ರಕಾಶ್ ರೈರವರು ಈ ವಾಹಿನಿಗೆ ಪರೋಕ್ಷವಾಗಿ ಉಗಿದು ಹೇಳಿದ ಜವಾಬ್ದಾರಿಯ ಪಾಠ ಇದೇ ಮಾದರಿಯ ಎಲ್ಲಾ ವಾಹಿನಿಗಳಿಗೂ ಅನ್ವಯಿಸುವಂತಿದೆ. ಉಗಿದದ್ದನ್ನೇ ಒರೆಸಿಕೊಂಡು ಈ ಪುಟ್ಟ ಘಟನೆಯನ್ನು ಬೆಟ್ಟವನ್ನಾಗಿಸಿದ ಜನಶ್ರೀ ವಾಹಿನಿ ' ಇಡಿ ಕರ್ನಾಟಕ ರೈರವರನ್ನು ಬೈಯುತ್ತಿದೆ" ಎಂಬಂತೆ ಸುದ್ದಿ ಬಿತ್ತರಿಸತೊಡಗಿತು. ಚರ್ಚೆಗಳು ಶುರುವಾದವು. ವಾಹಿನಿಯ ಜವಾಬ್ದಾರಿಯನ್ನು ನೆನಪಿಸಿದ ಕಲಾವಿದನ ಮೇಲೆಯೇ ಬೇಜವಾಬ್ದಾರಿಯ ಆರೋಪ ಮಾಡಿದ ಈ ಕೂಗುಮಾರಿಗಳ ಮುಖವಾಡ ಕಳಚಿ ಬಿದ್ದು ಪರೋಕ್ಷವಾಗಿ ಪ್ರಕಾಶ ರೈರವರ ಸಿನೆಮಾಕ್ಕೆ ಪುಕ್ಕಟೆ ಪ್ರಚಾರವೂ ಸಿಕ್ಕಿತು.
ಇದು ಒಬ್ಬ ಕಲಾವಿದರಿಗಾದ ಸಮಸ್ಯೆಯಲ್ಲ. ಕಾಂಟ್ರವರ್ಸಿ ಮಾಡುವುದೇ ಬಹುತೇಕ ವಾಹಿನಿಗಳ ನಿತ್ಯ ಕಾಯಕವಾಗಿದೆ. ಇತ್ತೀಚೆಗೆ ಧಾರವಾಡದಲ್ಲಿ ಕಲಬುರ್ಗಿಯವರ ಹತ್ಯೆ ವಿರೋಧಿಸಿ ಬ್ರಹತ್ ಸಮ್ಮೇಳನ ನಡೆಯಿತು. ಈ ಚಾನೆಲ್ಲಿನವರಿಗೆ ಆ ಪ್ರತಿಭಟನೆಯಲ್ಲಿ ರೋಚಕತೆ ಕಾಣದಾಯಿತು. ಯಾರನ್ನು ಮಾತಾಡಿಸಿದರೆ ತಮಗೆ ಬೇಕಾದ ಕಾಂಟ್ರವರ್ಸಿ ಹೇಳಿಕೆ ಸಿಗಬಹುದು ಎಂದು ಯೋಚಿಸಿ ಕಾಂಟ್ರವರ್ಸಿ ಸಾಹಿತಿ ಭಗವಾನರವರ ಮುಂದೆ ಕ್ಯಾಮರಾ ಇಟ್ಟರು. ಸರಕಾರ ದಲಿತರ ಆತ್ಮರಕ್ಷಣೆಗೆ ಬಂದೂಕು ಕೊಡಬೇಕೆಂದು ಭಗವಾನ್ ಹೇಳಿದ್ದೇ ತಡ ಹುಡುಕಾಡುತ್ತಿದ್ದ ಬಳ್ಳಿ ಚಾನೆಲ್ಲಿನ ಸ್ಟುಡಿಯೋಗೆ ಹಬ್ಬಿದಂತಾಯಿತು. ಶುರುವಾಯಿತು ನೋಡಿ ಸ್ಟುಡಿಯೋಗಳಲ್ಲಿ ತೌಡು ಕುಟ್ಟುವ ಕೆಲಸ. ಮೂರು ದಿನಗಳ ಕಾಲ ಭಗವಾನರ ಬಂಧೂಕಿನ ಸದ್ದು, ಅದರ ಕುರಿತ ಮಾತು ಕತೆಯದೇ ಚರ್ಚೆ ಸುದ್ದಿ. ಕಲಬುರ್ಗಿಯವರ ಹತ್ಯೆ ಹಾಗೂ ಅದರ ವಿರುದ್ದ ನಡೆದ ಪ್ರತಿಭಟನೆ ಹಿನ್ನೆಲೆಗೆ ಸರಿದು ಬಂಧೂಕಿನ ಚರ್ಚೆ ನಿರಂತರವಾಯಿತು. ಮೂರು ದಿನ ಈ ವಾಹಿನಿ ಎನ್ನುವ ಬಕಾಸುರನ ಹೊಟ್ಟೆಗೆ ಬಿರಿಯಾನಿ ಸಿಕ್ಕಂತಾಯಿತು. ಕಲಬುರ್ಗಿಯವರ ಹತ್ಯೆಗೂ ಸಹ ಪರೋಕ್ಷವಾಗಿ ಹಂತಕರಿಗೆ ಪ್ರಚೋದನೆ ನೀಡಿದ್ದೂ ಈ ಮೀಡಿಯಾಂಗದ ಕೂಗುಮಾರಿಗಳೇ ಅನ್ನುವುದರಲ್ಲಿ ಅತಿಶಯವಿಲ್ಲ.
ಬಂಡವಾಳಶಾಹಿಗಳ ಮಾಲೀಕತ್ವದ ಈ ಎಲ್ಲಾ ಖಾಸಗಿ ವಾಹಿನಿಗಳು ಮಾಡುತ್ತಿರುವುದು ಕಿಡಿ ಹಚ್ಚುವ ಕಿಡಿಗೇಡಿತನದ ಕೆಲಸ. ಇವರು ಹಚ್ಚಿದ ಕಿಡಿ ಬೆಂಕಿಯಾಗಿ ಅದೆಷ್ಟೋ ಮನೆ ಮನಸ್ಸುಗಳು ಮಾತ್ರವಲ್ಲ ನಾಡಿಗೆ ನಾಡೇ ಉರಿದು ಹೋಗಿದೆ. ಸಮಾಜದಲ್ಲಿ ಯಾವುದೇ ವಿಷಯಕ್ಕೆ ಸಂಘರ್ಷ ಉಂಟಾಗಿ ಬೆಂಕಿ ಹತ್ತಿ ಉರಿಯುತ್ತಿದ್ದರೆ, ಸ್ಟುಡಿಯೋದಲ್ಲಿ ಕುಳಿತೆ ಬೆಂಕಿಗೆ ತುಪ್ಪ ಸುರಿದು ವದಂತಿ ತೀವ್ರವಾಗಿ ಹಬ್ಬಿಸಿ ಸಮಾಜದ ನೆಮ್ಮದಿ ಸರ್ವನಾಶ ಮಾಡಲು ಬೇಕಾದ ಪ್ರಯತ್ನಗಳನ್ನು ಚಾನೆಲ್ಗಳು ನಿರಂತರವಾಗಿ ಮಾಡುತ್ತಲೇ ಬಂದಿವೆ.
ಇಂತಾ ಬೇಜವಾಬ್ದಾರಿಯ ವಾಹಿನಿಗಳು ಜನರಿಗೆ ಹಾಗೂ ಸರಕಾರಗಳಿಗೆ ಬಿಸಿತುಪ್ಪವಾಗಿವೆ. ಬಾಯಿ ಮುಚ್ಚಿಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಈ ವಾಹಿನಿಗಳು ಬಾಯಿಬಡಿದುಕೊಳ್ಳುತ್ತವೆ. ಬಾಯಿ ತೆರೆದರೆ ಅದೇ ಬಾಯಿಂದಲೇ ಬೆಂಕಿ ಹಚ್ಚುವ ಕೆಲಸವನ್ನು ದಿನಂಪ್ರತಿ ಮುಂದುವರೆಸುತ್ತವೆ.
ಕಾವೇರಿ ನೀರನ್ನು ತಮಿಳಿಗೆ ಬಿಡಲು ಕೋರ್ಟ್ ಆದೇಶ ಹೊರಗೆ ಬಿದ್ದ ತಕ್ಷಣ ಈ ವಾಹಿನಿಗಳು ಜನರಲ್ಲಿ ಉನ್ಮಾದ ಸೃಷ್ಟಿಸಿದ್ದರಿಂದ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಬೆಂಕಿ ಬಿದ್ದು ಜನರ ಆಸ್ತಿ ನಷ್ಟವಾಯಿತು. ಕೋಮು ಸೌಹಾರ್ಧತೆಯ ಬದಲು ಕೋಮು ಸಂಘರ್ಷವನ್ನು ಹುಟ್ಟುಹಾಕುವ, ಭಾಷಾಂಧತೆ, ಧರ್ಮಾಂಧತೆ, ದೇಶಾಂಧತೆಗಳನ್ನು ಪ್ರಚೋದಿಸುವ ಈ ಮೀಡಿಯಾಂಗಗಳು ಜನದ್ರೋಹಿಯಾಗಿ ಬದಲಾಗುತ್ತಿದೆ. ಅಸಹನೆ ಅಸಹಿಷ್ಣುತೆಯಿಂದ ಹೊತ್ತಿ ಉರಿಯುತ್ತಿರುವ ನಾಡಿನಲ್ಲಿ ತಮ್ಮ ಟಿಆರ್ಪಿ ಬೇಳೆ ಬೇಯಿಸಿಕೊಳ್ಳುವ ಮೀಡಿಯಾದವರ ಹುನ್ನಾರ ಅಸಹನೀಯವಾಗಿದೆ. ಮೀಡಿಯಾಂಗದ ಬೇಜವಾಬ್ದಾರಿತನವನ್ನು ಕೇವಲ ಪ್ರಕಾಶ ರೈ ಅಷ್ಟೇ ಅಲ್ಲಾ, ಎಲ್ಲಾ ಜನರೂ ವಿರೋಧ ಮಾಡಬೇಕಿದೆ. ಈ ಬೇಜವಾಬ್ದಾರಿಯುತ ಸುದ್ದಿ ವಾಹಿನಿಗಳನ್ನು ಎಲ್ಲರೂ ಸಾಮೂಹಿಕವಾಗಿ ನಿಶೇಧಿಸಬೇಕಿದೆ. ಸೌಹಾರ್ಧತೆಯನ್ನು ಕದಡಲು ಸದಾ ಹವಣಿಸುತ್ತಿರುವ ಮೀಡಿಯಾಂಗದ ಅತಿರೇಕಗಳಿಂದ ನಾಡನ್ನು ಕಾಪಾಡಲು ಸರಕಾರದಿಂದ ಸಾಧ್ಯವಿಲ್ಲ.. ಜನರೇ ಸ್ವಯಂ ನಿರ್ಧಾರದಿಂದ ಇಂತಹ ಚಾನೆಲ್ಗಳನ್ನು ನೋಡುವುದನ್ನು ನಿಲ್ಲಿಸುವುದೊಂದೇ ಈಗಿರುವ ಮಾರ್ಗ.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಸ್ವಯಂ ಘೋಷಿಸಿಕೊಂಡ ಮೀಡಿಯಾಂಗವು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕಿದೆ. ಸಮಾಜದೊಳಗಿನ ಮನಸುಗಳನ್ನು ಕಟ್ಟುವ ಕೆಲಸ ಮಾಡಬೇಕೆ ಹೊರತು ಒಡೆಯುವ ಕೆಲಸವನ್ನಲ್ಲ ಎನ್ನುವ ಕನಿಷ್ಟ ತಿಳವಳಿಕೆ ಚಾನೆಲ್ಗಳಿಗೆ, ಅಲ್ಲಿ ಕೆಲಸ ಮಾಡುವವರಿಗೆ ಇರಬೇಕೆಂಬುದು ಜನರ ಅಪೇಕ್ಷೆಯಾಗಿದೆ. ಹೀಗೆಯೇ ಸಮಾಜದಲ್ಲಿ ಅಸಹಿಷ್ಣುತತೆಯನ್ನು ಹುಟ್ಟುಹಾಕುವ ಕೆಲಸವನ್ನು ಮೀಡಿಯಾಂಗದವರು ಪೈಪೋಟಿಗೆ ಬಿದ್ದಂತೆ ಮಾಡಿದರೆ ಜನರೇ ಇವರನ್ನು ನಿಷೇಧಿಸಿ ಪಾಠ ಕಲಿಸುವ ಸಮಯ ದೂರವೇನಿಲ್ಲ.
ವಾಹಿನಿ ಹುಟ್ಟುಹಾಕಿದ ಅನಗತ್ಯ ವಿವಾದದ ಸಂದರ್ಭದಲ್ಲಿ ಸಮಸ್ತ ಕಲಾವಿದರು, ಸಾಹಿತಿಗಳು, ಪ್ರಜ್ಞಾವಂತ ಜನರು ಪ್ರಕಾಶ ರೈ ರವರ ಬೆಂಬಲಕ್ಕೆ ನಿಲ್ಲಬೇಕಿದೆ. ಚಾನೆಲ್ಗಳ ಜನವಿರೋಧಿತನವನ್ನು ವಿರೋಧಿಸಲೆಬೇಕಿದೆ... ಕೂಗುಮಾರಿಗಳು ಮನೆಯೊಳಗೆ ನುಗ್ಗಿವೆ.. "ನಾಳೆ ಬಾ" ಎಂದು ಹೇಳಿ ಚಾನೆಲ್ ಬದಲಾಯಿಸಬೇಕಿದೆ. ಕೂಗುಮಾರಿಗಳ ಹಿಂದಿರುವ ಬಲುಗಳ್ಳ ಬಂಡವಾಳಿಗರ ಹುನ್ನಾರಗಳನ್ನು ಜನರು ಅರಿಯಬೇಕಿದೆ. ವಾಹಿನಿಗಳ ಜಾಹಿರಾತುಗಳಲ್ಲಿ ತೋರಿಸುವ ಪ್ರಾಡಕ್ಟಗಳನ್ನು ಕೊಳ್ಳುವುದನ್ನು ನಿರಾಕರಿಸುವ ಮೂಲಕ ಜನರು ಏಕಕಾಲಕ್ಕೆ ಸರಕು ಮಾರುವ ದೇಶಿ ಹಾಗೂ ವಿದೇಶಿ ಬಂಡವಾಳಶಾಹಿಗಳಿಗೆ ಹಾಗೂ ವಾಹಿನಿಗಳೆಂಬ ಸರಕು ಮಾರಾಟದ ಪ್ರಚಾರದ ಚಾನೆಲ್ಗಳ ಮಾಲೀಕರುಗಳಿಗೆ ಮತ್ತು ಈ ವಾಹಿನಿಗಳಲ್ಲಿ ಕೆಲಸ ಮಾಡುವ ಕೂಗುಮಾರಿಗಳಿಗೆ ತಕ್ಕಪಾಠ ಕಲಿಸಿದಂತಾಗುತ್ತದೆ. ಮೀಡಿಯಾಂಗ ಜನಪರವಾಗಿ ಬದಲಾಗಬೇಕು ಇಲ್ಲವೇ ಬಾಗಿಲೆಳೆದುಕೊಂಡು ಹೋಗಬೇಕು ಅಲ್ಲಿವರೆಗೂ ಜನರು ಈ ಚಾನೆಲ್ಗಳನ್ನು ನೋಡುವುದು ಬಿಡಬೇಕು ಹಾಗೂ ಈ ವಾಹಿನಿಯಲ್ಲಿ ತೋರಿಸುವ ಜಾಹಿರಾತಿನ ಪ್ರಾಡಕ್ಟ್ ಬಳಸುವುದನ್ನು ನಿಲ್ಲಿಸುವ ಮೂಲಕ ಪ್ರತಿಭಟನೆ ಸಲ್ಲಿಸಬೇಕಿದೆ. ನೆಮ್ಮದಿಯ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಅದು ಎಲ್ಲಾ ಜನರ ಕರ್ತವ್ಯವೂ ಆಗಿದೆ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ