ಶನಿವಾರ, ಅಕ್ಟೋಬರ್ 15, 2016

ತಹ ತಹ .....46 'ಕನಕ ನಡಿಗೆ' ಪುರೋಹಿತಶಾಹಿ ಶಡ್ಯಂತ್ರ; ಶೂದ್ರರನ್ನು ದಲಿತರ ಮೇಲೆ ಎತ್ತಿಕಟ್ಟುವ ಕುತಂತ್ರ:










"ಬನ್ನಿ ಮನುಷ್ಯರಾಗಿ! ಪ್ರಗತಿಗೆ ಯಾವಾಗಲೂ ವಿರುದ್ಧವಾಗಿರುವ ಪುರೋಹಿತರನ್ನು ಒದ್ದೋಡಿಸಿ. ಅವರೆಂದಿಗೂ ತಿದ್ದಿಕೊಳ್ಳುವುದಿಲ್ಲ. ಅವರ ಹೃದಯ ಎಂದಿಗೂ ವಿಶಾಲವಾಗುವುದಿಲ್ಲ. ಶತ ಶತಮಾನಗಳಿಂದ ಬಂದ ಮೂಢನಂಬಿಕೆ ಮತ್ತು ದಬ್ಬಾಳಿಕೆಯ ಸಂತಾನ ಅವರು! ಮೊದಲು ಪುರೋಹಿತಶಾಹಿಯನ್ನು ಬೇರು ಸಹಿತ ಕಿತ್ತೊಗೆಯಿರಿ. ಬನ್ನಿ, ಮನುಷ್ಯರಾಗಿ, ಮುಂದೆ ಬನ್ನಿ, ಸಂಕುಚಿತ ಬಿಲಗಳಿಂದ ಹೊರಗೆ ಬನ್ನಿ, ಕಣ್ಣು ಬಿಟ್ಟು ಹೊರಗೆ ನೋಡಿ. ನೀವು ಮನುಷ್ಯರನ್ನು ಪ್ರೀತಿಸುವಿರಾ? ನಿಮ್ಮ ದೇಶವನ್ನು ಪ್ರೀತಿಸುವಿರಾ? ಹಾಗಾದರೆ ಬನ್ನಿ, ಉನ್ನತವಾದ ಕೆಲಸಗಳಿಗೆ ನಾವು ಹೋರಾಡುವ."
ಇದು ನಾನು ನೀವು ಅವರು ಇವರು ಹೇಳಿದ ಮಾತುಗಳಲ್ಲ. ಸ್ವಾಮಿ ವಿವೇಕಾನಂದರು ಪುರೋಹಿತಶಾಹಿ ದಬ್ಬಾಳಿಕೆಗೆ ಬೇಸತ್ತು ಹೇಳಿದ ನುಡಿಗಳಿವು.

ದಲಿತ ದಮನಿತರು ಸಂಘಟಿತರಾಗಿ ಅಕ್ಟೋಬರ್ 9 ರಂದು "ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು" ಎಂದು ಒತ್ತಾಯಿಸಿ ಉಡುಪಿಯಲ್ಲಿ ಸಮಾವೇಶ ಮಾಡಿದರು. ದಲಿತರು ಬಂದು ಉಡುಪಿಯ ಅಗ್ರಹಾರದ ರಥಬೀದಿಗಳನ್ನು ಅಪವಿತ್ರಗೊಳಿಸಿದರು ಎಂದು ಆರೋಪಿಸಿದ ಮನುವಾದಿ ಮಲಿನ ಮನಸುಗಳು ಅಕ್ಟೋಬರ್ 23 ರಂದು ಉಡುಪಿಯ ಬೀದಿಗಳಿಗೆ ಗೋಮೂತ್ರ ಸಿಂಚನ ಮಾಡಿ ಶುದ್ದಿಗೊಳಿಸುವ ಸಂಕಲ್ಪ ಮಾಡಿವೆವಿವೇಕಾನಂದರು ಹೇಳಿದ ಮೇಲಿನ ಮಾತುಗಳನ್ನು ಮತಾಂಧರು ಹತ್ತು ಸಲ ಓದಿ ತಮ್ಮ ಮಂಡೆಯ ಮೇಲೆ ಗಂಜಲ ಸುರುವಿಕೊಂಡು ಮೊದಲು ತಲೆಯಲ್ಲಿ ತುಂಬಿದ ಮಾಲಿನ್ಯವನ್ನು ಶುದ್ದೀಕರಿಸಿಕೊಳ್ಳಬೇಕಿದೆ.

ಯುವ ಬ್ರಿಗೇಡ್ ಹೆಸರಲ್ಲಿ ಮತಿಭ್ರಮನೆಗೊಂಡ ಯುವಕರು "ಕನಕ ನಡಿಗೆ" ಹೆಸರಲ್ಲಿ ಶುದ್ದಿಕರಣ ಮಾಡುತ್ತಿರುವುದಂತೂ ಹಾಸ್ಯಾಸ್ಪದವಾಗಿದೆ. ಯಾಕೆಂದರೆ 16 ನೇ ಶತಮಾನದಲ್ಲಿ ಕನಕದಾಸರಂತಾ ಅನನ್ಯ ಕೃಷ್ಣ ಭಕ್ತ ಬಂದು ದೇವರ ದರ್ಶನಾಕಾಂಕ್ಷಿಯಾಗಿ "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ, ಕೂಗಿದರು ದ್ವನಿ ಕೇಳದೆ ನರಹರಿಯೆ..." ಎಂದು ದೇವಸ್ಥಾನದ ಬಾಗಿಲಲ್ಲಿ ನಿಂತು ನರಹರಿಯುವಂತೆ ಕೂಗಿದರೂ ಬಾಗಿಲು ತೆರೆಯದೇ ಕನಕರ ಕತ್ತು ಹಿಡಿದು ಹೊರದಬ್ಬಿದ ಸನಾತನವಾದಿ ಕುಲದವರ ಈಗಿನ ಸಂತಾನಗಳು "ಕನಕ ನಡಿಗೆ" ಹೆಸರಲ್ಲಿ ಶುದ್ದೀಕರಣ ಮಾಡುತ್ತಿವೆ. ಇದೆಂತಾ ವಿಪರ್ಯಾಸ ನೋಡಿ. ಆಗ ಪುರೋಹಿತ ವರ್ಗಕ್ಕೆ ಬೇಕಿಲ್ಲದ ಶೂದ್ರ ಕನಕ ಈಗ ದಲಿತ ವಿರೋಧಿ ಅಸ್ತ್ರವಾಗಿ ಬಳಸಲ್ಪಡುತ್ತಿದ್ದಾನೆ. ಸವರ್ಣೀಯರು ಅಗತ್ಯ ಬಿದ್ದರೆ ಶೂದ್ರರನ್ನು ಬೇಕಾದರೂ ಸಹಿಸಿಕೊಳ್ಳಬಹುದು ಯಾಕೆಂದರೆ ಬ್ರಾಹ್ಮಣ ಕ್ಷತ್ರೀಯ ಹಾಗೂ ವೈಶ್ಯವರ್ಗದವರಿಗೆ ಸೇವೆ ಮಾಡಲು ಶುದ್ರವರ್ಗದ ಅಗತ್ಯವಿದೆ. ಆದರೆ ವರ್ಣ ವ್ಯವಸ್ಥೆಯ ಹೊರಗಿರುವ ಅಸ್ಪೃಷ್ಯ ದಲಿತ ವರ್ಗದವರನ್ನು ಮಾತ್ರ ಸವರ್ಣೀಯರು ಸಹಿಸಿಕೊಳ್ಳುವುದಷ್ಟೇ ಅಲ್ಲ ಅವರ ನೆರಳನ್ನೂ ಸಹ ಮುಟ್ಟಿಸಿಕೊಳ್ಳಲಾರರು. ಇಂತಹ ಪುರೋಹಿತಶಾಹಿಗಳಿಂದ ಖಾಯಂ ಭಹಿಷ್ಕಾರಕ್ಕೆ ಒಳಗಾದ ದಲಿತ ದಮನಿತರು ಸವರ್ಣೀಯರ ಆರಾಧನಾ ಕ್ಷೇತ್ರದಲ್ಲೆಲ್ಲಾ ಓಡಾಡಿ ಅವರ ಪರಮ ಪಾವನ ಪುಣ್ಯಾಚರಣೆಯಾದ ಪಂಕ್ತಿಬೇಧದ ವಿರುದ್ದ ಮಾತಾಡಿದರೆ ಸುಮ್ಮನಿರುತ್ತಾರೆಯೇ? ಕಾನೂನಿನ ಭಯದಿಂದ ದಲಿತರ ಉಡುಪಿ ಪ್ರವೇಶವನ್ನಂತೂ ತಡೆಯಲು ಸಾಧ್ಯವಿಲ್ಲ. ಕನಿಷ್ಟ ಶುದ್ದೀಕರಣವನ್ನಾದರೂ ಮಾಡಿಕೊಂಡು ತಮ್ಮ ದಲಿತ ವಿರೋಧಿ ಪ್ರತಿಭಟನೆಯನ್ನು ತೋರಲು ವಿಪ್ರಕುಲ ಪ್ರಯತ್ನಿಸುತ್ತಿದೆ.

ಅಗ್ರಹಾರದ ವಟುಗಳು ಯಾವಾಗಲೂ ಮಾಡುವಂತೆ ತಮ್ಮ ಪಾಡಿಗೆ ತಾವು ದನದ ಮೂತ್ರವನ್ನೋ ಸಗಣಿಯನ್ನೋ ಪ್ರೋಕ್ಷಣೆ ಮಾಡಿ ಸಮಾಧಾನಪಟ್ಟುಕೊಂಡಿದ್ದರೆ ವಿವೇಕಾನಂದರು ಹೇಳಿದ ಹಾಗೆ ಇವರೆಂದೂ ತಿದ್ದಿಕೊಳ್ಳಲಾರರು ಎಂದು ನಿರ್ಲಕ್ಷಿಸಬಹುದಾಗಿತ್ತು. ಆದರೆ ಯಾವಾಗ ದಲಿತರ ವಿರುದ್ಧ ಕನಕನ ಹೆಸರಲ್ಲಿ ಶೂದ್ರರನ್ನು ಎತ್ತಿಕಟ್ಟುವ ಕುತಂತ್ರ ಮಾಡಿದರೋ ಆಗ ವಿವೇಕಾನಂದರ "ಪ್ರಗತಿಗೆ ಯಾವಾಗಲೂ ವಿರುದ್ದವಾದ ಪುರೋಹಿತರನ್ನು ಒದ್ದೋಡಿಸಿ" ಎನ್ನುವ ಮಾತು ಸೂಕ್ತವೆನಿಸಿತು.

ಉಡುಪಿಯೇನು ಪುರೋಹಿತಶಾಹಿಗಳ ಆಸ್ತಿಯೇ? ಉಡುಪಿಯ ಬೀದಿಗಳೂ ಸಹ ಅಗ್ರಹಾರದ ಸ್ವತ್ತುಗಳೇ? ದಲಿತರು ಮನುಷ್ಯರಲ್ಲವೇ? ಅವರು ಯಾಕೆ ಉಡುಪಿಯ ಬೀದಿಗಳಲ್ಲಿ ಓಡಾಡಬಾರದು? ತಮ್ಮ ತಿನ್ನುವ ಆಹಾರದ ಆಯ್ಕೆಗಾಗಿ ಆಗ್ರಹಿಸಬಾರದು? ದುಡಿಯುವ ಜನ ಭೂಮಿಯ ಹಕ್ಕನ್ನು ಯಾಕೆ ಕೇಳಬಾರದು? ಜನರ ಧನಕನಕ ಕಾಣಿಕೆಗಳಿಂದ ನಡೆಯುತ್ತಿರುವ ಉಡುಪಿ ಮಠದ ಅಮಾನವೀಯ ಪಂಕ್ತಿ ಬೇಧವನ್ನು ವಿರೋಧಿಸಬಾರದು? ದಲಿತರು ದಮನಿತರು, ಹಿಂದುಳಿದ ವರ್ಗದ ಶೂದ್ರರಿಗೆಲ್ಲಾ ಅಧಿಕಾರವಿದೆ. ಜ್ಯಾತ್ಯಾತೀತ ಎಂದುಕೊಳ್ಳುವ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನ ಹಕ್ಕು ಬಾಧ್ಯತೆಗಳಿವೆ. ದೇಶದ ಪವಿತ್ರ ಗ್ರಂಥವಾದ ಸಂವಿದಾನದ ಮುಂದೆ ವರ್ಣೀಯರೂ ಒಂದೇ ಅವರ್ಣೀಯರೂ ಒಂದೇ. ಸಾಮಾಜಿಕ ತಾರತಮ್ಯಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೂ ಸಂವಿಧಾನದ ಆಶಯಗಳನ್ನು ಮೀರಿ ಧಾರ್ಮಿಕ ಭಾವನೆಗಳ ಹೆಸರಲ್ಲಿ ಜನರಲ್ಲಿ ಮೇಲುಕೀಳು ತಾರತಮ್ಯತೆಯನ್ನು ಆಚರಿಸುವುದು ಅಕ್ಷಮ್ಯ. ತಾರತಮ್ಯವನ್ನು ವಿರೋಧಿಸುವುದು ಮನುಷ್ಯತ್ವ ಇರುವ ಪ್ರತಿಯೊಬ್ಬನ ಕರ್ತವ್ಯವೂ ಆಗಿದೆ. ಸಂವಿಧಾನವನ್ನು ಗೌರವಿಸುವ ಎಲ್ಲರ ಹಕ್ಕೂ ಆಗಿದೆ.

ಪ್ರಸ್ತುತ ಉಡುಪಿಯ ಶ್ರೀಕೃಷ್ಣ ಮಠದ ಪೇಜಾವರ ವಿಶ್ವೇಶತೀರ್ಥರು ಬಾಲಕನಿದ್ದಾಗ ಕೆರೆಯಲ್ಲಿ ಮುಳುಗಿ ಕೃಷ್ಣಪಾದಸೇರುತ್ತಿರುವಾಗ ಅವರನ್ನು ಬದುಕಿಸಿದ್ದು ಒಬ್ಬ ಅನಾಮಿಕ ದಲಿತರ ಹುಡುಗ. ಅದೇ ದಲಿತ ಹುಡುಗನ ವಾರಸುದಾರರು ಈಗ ಉಡುಪಿಯ ಬೀದಿಯಲ್ಲಿ ನಡೆದಾಡಿದ್ದಕ್ಕೆ ಪೇಜಾವರರ ವಾರಸುದಾರರು ಅಸಹಿಷ್ಣುಗಳಾಗಿ ಶುದ್ದೀಕರಣ ಮಾಡುತ್ತಿದ್ದಾರೆ.

ಅಂಬೇಡ್ಕರರು ದಲಿತರ ಜೊತೆಗೆ ಹೋಗಿ ಚೌದಾರ ಕೆರೆಯ ನೀರನ್ನು ಮುಟ್ಟಿದ್ದಕ್ಕೆ ಸವರ್ಣೀಯರು ಅವರ್ಣೀಯರ ಮೇಲೆ ಹಲ್ಲೆ ಮಾಡಿ ಗಂಜಲ ಸುರಿದು ಕೆರೆಯನ್ನು ಶುದ್ದೀಕರಿಸಿದ್ದರು. ಇದು ಇಂದು ನಿನ್ನೆಯದಲ್ಲ. ಪ್ರಧಾನಿ ಇಂದಿರಾಗಾಂಧಿಯವರು ದೇವಸ್ಥಾನ ಪ್ರವೇಶಿಸಿದಾಗ ಸುಮ್ಮನಿದ್ದು ನಂತರ ದೇವಸ್ಥಾನ ಶುದ್ದೀಕರಿಸಿಕೊಂಡ ಪುರೋಹಿತರನ್ನು ವಿವೇಕಾನಂದರು ಹೇಳಿದ ಹಾಗೆಯೇ ಮಾಡುವುದುತ್ತಮ.\ಇನ್ನೊಂದು ವಿಪರ್ಯಾಸವೇನೆಂದರೆ ಗಾಂಧಿ ಹಂತಕರ ಸಂತಾನಿಗಳು ತಮ್ಮ ಶುದ್ದೀಕರಣದ ಪೋಸ್ಟರುಗಳಲ್ಲಿ ಗಾಂಧಿ ಚಿತ್ರದ ಕೈಗೆ ಪೊರಕೆ ಕೊಟ್ಟು ಬೀದಿ ಕಸ ಗೂಡಿಸಲು ಹಚ್ಚಿದ್ದಾರೆ. ಇದು ಗಾಂಧೀಜಿಗೆ ಮಾಡಿದ ಅಪಚಾರವೂ ಆಗಿದೆ.

ತಮ್ಮ ಅಸ್ತಿತ್ವಕ್ಕಾಗಿ ಪುರೋಹಿತಶಾಹಿ ವರ್ಗ ಹಿಂದೆ ನಿಂತು ಏನು ಬೇಕಾದರೂ ಮಾಡಬಲ್ಲರು ಎನ್ನುವುದಕ್ಕೆ ಉಡುಪಿ ಶುದ್ದೀಕರಣ ಪ್ರಕರಣವೇ ಸಾಕ್ಷಿಯಾಗಿದೆ. ಉಡುಪಿ ಮಠ ವಿರೋಧಿಸಿ ದೇವಸ್ಥಾನ ಪ್ರವೇಶವನ್ನು ನಿರಾಕರಿಸಿ ಅವಮಾನಿಸಿದ ಕನಕನ ಹೆಸರನ್ನು ಬಳಸಿ ಶೂದ್ರರನ್ನು ದಲಿತರ ಮೇಲೆ ಎತ್ತಿಕಟ್ಟುವ ಹುನ್ನಾರವನ್ನು ನಡೆಸಲಾಗಿದೆ. ಗಾಂಧಿ ಕೊಂದ ಉತ್ತರಾಧಿಕಾರಿಗಳು ಗಾಂಧೀಜಿ ಕಸಗೂಡಿಸುವ ಚಿತ್ರವನ್ನು ಬಳಸಿ ದಲಿತೇತರ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಹುಸಿ ಹಿಂದಿತ್ವದ ಉನ್ಮಾದವನ್ನು ಅಬ್ರಾಹ್ಮಣ ಯುವಕರ ತಲೆಯಲ್ಲಿ ತುಂಬಿ ಯುವಬ್ರಿಗೇಡ್ ಹೆಸರಲ್ಲಿ ಶೂದ್ರರನ್ನು ಸಂಘಟಿಸಿ ದಲಿತ ದಮನಿತರ ಮೇಲೆ ಚೂ ಬಿಡುತ್ತಿದ್ದಾರೆ. ಕನಕ ನಡಿಗೆಯ ಹಿಂದಿರುವ ವೈದಿಕಶಾಹಿಗಳಿಗೆ ಶುದ್ದೀಕರಣ ಎನ್ನುವುದು ಒಂದು ನೆಪವಷ್ಟೇ. ಶೂದ್ರರನ್ನು ದಲಿತರ ಮೇಲೆ ಎತ್ತಿ ಕಟ್ಟಿ ವೈದಿಕರು ಧರ್ಮದೇವರುಗಳ ಹೆಸರಲ್ಲಿ ತಮ್ಮ ದಬ್ಬಾಳಿಕೆಯನ್ನು ಮುಂದುವರೆಸಿಕೊಂಡು ಹೋಗುವ ಹುನ್ನಾರದ ಭಾಗವಾಗಿಯೇ ಶುದ್ದೀಕರಣ ಪ್ರಹಸನ ನಡೆಯುತ್ತಿದೆ.

ಯಾರೇನೇ ಹೇಳಲಿ ದೇಶಾದ್ಯಂತ ದಲಿತ ಪ್ರಜ್ಞೆ ಎಚ್ಚರಗೊಳ್ಳುತ್ತಿದೆ. ತಮ್ಮ ಹಕ್ಕುಗಳಿಗಾಗಿ ಸಂಘಟಿತವಾಗಿ ಹೋರಾಡುತ್ತಿದೆ. ಒಂದೊಮ್ಮೆ ಬಹುಸಂಖ್ಯಾತ ದಲಿತಶಕ್ತಿ ಎದ್ದು ನಿಂತರೆ ವಿವೇಕಾನಂದರ ಮಾತುಗಳು ಸತ್ಯವಾಗುವ ದಿನಗಳು ದೂರವಾಗೇನೂ ಇಲ್ಲ. ಅಲ್ಲಿವರೆಗೂ ದಲಿತರು ನಡೆದ ದಾರಿಯನ್ನು ವೈದಿಕಶಾಹಿ ಸಂತಾನ ಶುದ್ದಿಕರಿಸಿಕೊಳ್ಳಲಿ. ಸಾಧ್ಯವಾದರೆ ದಲಿತ ವರ್ಗ ಅದೇ ಸಗಣಿ ಗಂಜಲಗಳನ್ನು ಪುರೋಹಿತಶಾಹಿ ಶನಿಸಂತಾನಗಳ ತಲೆಯ ಮೇಲೆ ಸುರುವಿ ಮಲಿನಗೊಂಡ ಮನಸುಗಳನ್ನು ಶುದ್ದೀಕರಿಸಬೇಕಿದೆ. ಮನುಷ್ಯರನ್ನು ಮನುಷ್ಯರನ್ನಾಗಿ ಗೌರವಿಸಿ ಸಹಮತದಿಂದ ಬದುಕುವ ಮಾರ್ಗವನ್ನು ಹೇಳಿಕೊಡಬೇಕಿದೆ. ಎಲ್ಲರೂ ಸೌಹಾರ್ಧತೆಯಿಂದ ಬಾಳುವಂತಹ ನಾಡೊಂದನ್ನು ಕಟ್ಟಬೇಕಿದೆ
.
- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ