ತಹ ತಹ... 18ಎ
ಹೋರಾಟದ ಸಾಗರಕೆ ಸಾವಿರಾರು ನದಿಗಳು ಎನ್ನುವಂತೆ ಸೆಪ್ಟಂಬರ್ 9 ರಂದು ಕಾವೇರಿ ನೀರು ಹಂಚಿಕೆಯಲ್ಲಾದ ಅನ್ಯಾಯವನ್ನು ಪ್ರತಿಭಟಿಸಿ ‘ಕರ್ನಾಟಕ ಬಂದ್’ನ್ನು ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ನಡೆಸಿ ಯಶಸ್ವಿಗೊಳಿಸಲಾಯ್ತು.
ಅಂದು ಬೆಂಗಳೂರಿನ ಪುರಭವನದ ಮುಂದೆ ಜನರ ಜಾತ್ರೆ, ಜೊತೆಗೆ ಶವಯಾತ್ರೆ. ಅಚ್ಚರಿಯೆಂದರೆ ಯಾವಾಗಲೂ ಜನ ಹೋರಾಟಗಳಿಂದ ದೂರವಿರುವ ಅರ್ಚಕರ ಹಾಗೂ ಪುರೋಹಿತರ ಸಂಘದ ಗುಂಪೊಂದು ಗುಂಪಾಗಿ ಬಂದು ಹೋರಾಟಕ್ಕೆ ಬೆಂಬಲಿಸಿತ್ತು. ಯಾಕಪಾ ಅಂತಂದ್ರೆ ಅವರು ಬಂದಿದ್ದು ಹೋರಾಟಕ್ಕಲ್ಲ ಶವಯಾತ್ರೆಯ ನಂತರ ಮಾಡುವ ತಿಥಿಗಾಗಿ ಎಂದು ತಿಳಿದು ಹೋರಾಟದ ಅಖಾಡದಲ್ಲೂ ಅವರ ವೃತ್ತಿಪರತೆ ನೋಡಿ ಆನಂದವಾಯಿತು. ಯಥಾ ಪ್ರಕಾರ ತಿಥಿ ಪೂಜೆಗೆ ಬೇಕಾದ ಎಲ್ಲಾ ಸಾಮಾನು ಸರಂಜಾಮುಗಳನ್ನು ಟೌನ್ ಹಾಲ್ ಬಲಗಡೆ ಹೊಂದಿಸಿಟ್ಟುಕೊಂಡು ಶವಕ್ಕೆ ಬೆಂಕಿ ಇಡುವುದನ್ನೇ ಕಾಯುತ್ತಿದ್ದರು. ಯಾವಾಗ ಹೆಣ ಪಂಚಭೂತದಲ್ಲಿ ಲೀನವಾಗಿ ಅದರಿಂದೆದ್ದ ಬೂದಿ ಮತ್ತು ಹೊಗೆ ಜನರ ಕಣ್ಣಲ್ಲಿ ನೀರು ತರಿಸಿತೋ ಆಗ ನಮ್ಮ ಪರಮ ಪೂಜ್ಯ ಅರ್ಚಕರ ತಂಡ ತಿಥಿ ಪೂಜೆ ಶುರುಹಚ್ಚಿಕೊಂಡಿತು. ಮಿಕ್ಕುಳಿದ ಸಾಮಾನುಗಳ ಜೊತೆಗೆ ದಕ್ಷಿಣೆ ಪಡೆದು ತದನಂತರ ತಿಥಿ ಊಟವನ್ನೂ ಮಾಡಿ ಪುರೋಹಿತ ಕುಲ ತೃಪ್ತವಾದಂತೆಲ್ಲಾ ನೆರೆದ ಜನರ ಘೋಷಣೆ ತೀವ್ರವಾಯಿತು.
ಇಷ್ಟಕ್ಕು ಅದು ಯಾರ ಶವ... ಯಾರ ತಿಥಿ ಎಂಬುದು ನಿಮಗರ್ಥವಾಗಿರಬಹುದು. ಕುಮಾರಿ ಜಯಲಲಿತಾರ ಪ್ರತಿಕೃತಿಗೆ ಬೆಂಕಿ ಹಾಕಿ ಶಾಸ್ತ್ರೋಕ್ತವಾಗಿ ಅಸಲಿ ಪುರೋಹಿತರಿಂದಲೇ ತಿಥಿ ಮಾಡಿಸಿ ಬಂದವರಿಗೆ ಊಟವನ್ನೂ ಹಾಕಿದ್ದು ಕನ್ನಡಪರ ಹೋರಾಟಗಾರರ ಆಕ್ರೋಶಕ್ಕೆ ಸಾಕ್ಷಿಯಾಗಿತ್ತು. ನಕಲಿ ತಿಥಿಗೆ ಅಸಲಿ ಅರ್ಚಕರ ಆಗಮನ ಕಳೆತಂದು ಸೂತಕದ ಬದಲು ಸಂಭ್ರಮವನ್ನು ಉಕ್ಕಿಸಿತು..
ಸುಮ್ಮನೇ ಸುತ್ತಲೊಮ್ಮೆ ತಿರುಗಿದರೆ ಎಲ್ಲಿ ನೋಡಿದರಲ್ಲಿ ಕನ್ನಡದ ಬಾವುಟಗಳು. ಬಾವುಟಗಳ ಕೆಳಗೆ ಕನ್ನಡದ ತಲೆಗಳು. ತಲೆಯೊಳಗೆ ದ್ವೇಷದ ಕಿಡಿಗಳು. ನಿಜವಾದ ಕನ್ನಡದ ಕಟ್ಟಾಳುಗಳು, ಅರೆಕಾಲಿಕ ಕನ್ನಡಿಗರು, ರೋಲ್ ಕಾಲ್ ಕನ್ನಡಿಗರು, ನವೆಂಬರ್ ಕನ್ನಡಿಗರು, ಕುತೂಹಲಕ್ಕೆ ಬಂದ ಕನ್ನಡಿಗರು... ಹೀಗೆ ಎಲ್ಲಾ ನಮೂನಿ ಕನ್ನಡಿಗರ ಸವಾರಿ ಪುರಭವನದ ಮುಂದೆ ಸೇರಿತ್ತು. ಪುಡಿ ನಾಯಕರು, ಪುಡಾರಿ ನಾಯಕರು, ಹುಟ್ಟು ಹೋರಾಟಗಾರರು, ಹೊಟ್ಟೆ ಪಾಡಿನ ಹೋರಾಟಗಾರರು ಹೋಲ್ ಸೇಲಾಗಿ ಸೇರಿದ್ದು ಕಾವೇರಮ್ಮನ ಸೌಭಾಗ್ಯ.
ಮೈಕು ಹಿಡಿದವರ ಮೈಯಲ್ಲೆಲ್ಲಾ ಅದೆಂತದೋ ಅತೀಂದ್ರೀಯ ಶಕ್ತಿ ಹೊಕ್ಕಿರುವುದಕ್ಕೆ ಅವರ ಆವೇಶದ ಮಾತುಗಳೇ ಸಾಕ್ಷಿಯಾಗಿದ್ದವು. ಏನು ಆಕ್ರೋಶ, ಎಂತಾ ಆವೇಶ... ಪೈಪೋಟಿಯ ಮೇಲೆ ಜಯಲಲಿತಾರ ಜನ್ಮ ಜಾಲಾಡಿಸಿದ್ದೇ ಜಾಲಾಡಿಸಿದ್ದು. ತರಲೆ ಮಾಡಿದರೆ ತಮಿಳುನಾಡಿನ ಒಳಹೊಕ್ಕು ಅಲ್ಲಿಯ ಮುಖ್ಯಮಂತ್ರಿಣಿಗೆ ಹೊಡೆದು ಬರುತ್ತೇವೆ ಎನ್ನುವ ಉತ್ತರ ಕುಮಾರರೂ ತಮ್ಮ ವೀರಾವೇಶ ತೋರಿದರು. ಇಡೀ ವಾತಾವರಣ ಅಬ್ಬರದ ಮಾತಿನ ರಣರಂಗವಾಗಿತ್ತು. ಎದುರಿಗೆ ಎದುರಾಳಿಯೇ ಇಲ್ಲದಿರುವಾಗ ದೂರದಲ್ಲೆಲ್ಲೋ ಇರುವ ಶತ್ರುಗಳ ವಿರುದ್ದ ವಾಗ್ಯುದ್ದ ಸಾರಿದ ಉತ್ತರಭೂಪನಂತವರ ಕೈಯಲ್ಲಿರುವ ಮೈಕಾಸುರ ಬೆಂಕಿ ಉಗುಳುತ್ತಿತ್ತು.
ಅಲ್ಲಿ ವೀರಾವೇಶದಿಂದ ಮಾತಾಡಿದ ನಾಯಕರೆನಿಸಿಕೊಂಡವರಿಗೆ, ಮುಂದೆ ನಾಯಕರಾಗಬೇಕು ಎಂದುಕೊಂಡವರಿಗೆ ಕಾವೇರಿ ನದಿ ನೀರಿನ ಹಂಚಿಕೆಯ ಸಮಸ್ಯೆಯ ಆಳ ಅಗಲಗಳೇ ಗೊತ್ತಿದ್ದಂತಿಲ್ಲ. ಕೆಲವರು ಕರ್ನಾಟಕದ ಸಿಎಂ ಸಿದ್ದರಾಮಯ್ಯನವರಿಗೆ ಬೈದು ತಮ್ಮ ಸಾಂಧರ್ಬಿಕ ಆಕ್ರೋಶ ತೋರಿಸಿದರೆ... ಇನ್ನು ಕೆಲವರು ತಮಿಳುನಾಡಿನ ಸಿಎಂ ಜಯಲಲಿತಾರನ್ನು ವಾಚಾಮಗೋಚರ ನಿಂದಿಸಿ ತಮ್ಮ ಶತಮಾನದ ಸಿಟ್ಟು ತೀರಿಸಿಕೊಂಡರು. ಬೆರಳೆಣಿಕೆಯಷ್ಟು ಜನ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಸುಪ್ರೀಂ ಕೋರ್ಟ್ ವಿರುದ್ದವೂ ಘೋಷಣೆ ಕೂಗಿದರು. ಅವರವರ ಭಾವ ಭಕುತಿ ತಿಳುವಳಿಕೆಗೆ ತಕ್ಕಂತೆ ಮಾತಾಡಿ ಸೇರಿದ್ದ ಜನರಲ್ಲಿ ಆವೇಶವನ್ನು ಆವಾಹನೆ ಮಾಡುವ ಕಾಯಕವನ್ನು ಪ್ರಾಮಾಣಿಕವಾಗಿ ಮಾಡಿ ಕಾವೇರಮ್ಮನ ಕೃಪೆಗೆ ಪಾತ್ರರಾದರು.
ಆದರೆ ಜಯಲಲಿತಾ ಮಾಡಿದ್ದು ಸರಿ ಎಂದು ಯಾರೆಂದರೆ ಯಾರಿಗೂ ಅನ್ನಿಸಲೇ ಇಲ್ಲ. ನನ್ನನ್ನೂ ಸೇರಿದಂತೆ ಯಾರಾದರೂ ಹಾಗೆ ಅಲ್ಲಿ ಹೇಳಿದ್ದರೆ ಧರ್ಮದೇಟು ಬೀಳೋದಂತೂ ಗ್ಯಾರಂಟಿಯಾಗಿತ್ತು. ಒಂದು ರಾಜ್ಯದ ಸಿಎಂ ಆಗಿ ಆ ರಾಜ್ಯದ ರೈತಾಪಿ ಜನರ ಹಿತರಕ್ಷಣೆ ಮಾಡಬೇಕಾದದ್ದು ಜಯಲಲಿತಾರ ಕರ್ತವ್ಯವಾಗಿತ್ತು, ಮಾಡಿದರು. ಅದಕ್ಕಾಗಿ ಜಯಾರವರನ್ನು ತಮಿಳರಂತೆಯೇ ಕನ್ನಡಿಗರೂ ನಿಂದಿಸದೇ ಅಭಿನಂದಿಸಬೇಕು. ಜಯಲಲಿತಾರ ರೀತಿಯಲ್ಲೇ ಸಿದ್ದು ಸಾಹೇಬರನ್ನೂ ಸೇರಿಸಿದಂತೆ ಕರ್ನಾಟಕವನ್ನು ಆಳಿದ ಆಳುತ್ತಿರುವ ಎಲ್ಲಾ ಪಕ್ಷದ ಮುಖ್ಯಮಂತ್ರಿಗಳು ಮಾಡಿದ್ದೇನು...? ಅವರೆಲ್ಲಾ ಕಾವೇರಿ ನೀರು ಉಳಿಸಿಕೊಳ್ಳಲು ಹಾಕಿದ ಪರಿಶ್ರಮವೆಷ್ಟು? ಎನ್ನುವುದನ್ನು ಈ ಹೋರಾಟಗಾರರು ಪ್ರಶ್ನಿಸಿಕೊಳ್ಳಬೇಕಿತ್ತು. ತಮ್ಮ ಮನೆಯ ಯಜಮಾನರುಗಳ ಬೇಜವಾಬ್ದಾರಿತನವನ್ನು ನಿಂದಿಸುವುದು ಬಿಟ್ಟು ಬೇರೆ ಮನೆಯವರ ಬದ್ದತೆಯನ್ನು ಪ್ರಶ್ನಿಸುವುದು ಅದೆಷ್ಟು ಸಮಂಜಸ? ಇದು ಕೈಲಾಗದವರು ಮೈ ಮತ್ತೊಂದು ಪರಚಿಕೊಂಡು ಬೀದಿಯಲ್ಲಿ ಅರಚಿದಂತೆ. ಇಲ್ಲಿ ಜಯಲಲಿತಾರವರನ್ನು ಸಮರ್ಥಿಸಿಕೊಳ್ಳುತ್ತಿಲ್ಲ... ಆದರೆ ಅವರ ಬದ್ದತೆಯನ್ನು ಅಭಿನಂದಿಸುತ್ತಿರುವೆ. ಅದೇ ರೀತಿಯ ಬದ್ದತೆ ಕರ್ನಾಟಕದ ಆಳುವವರಿಗೆ ಇದ್ದಿದ್ದರೆ ಕಾವೇರಿ ನೀರಿನ ಕರ್ನಾಟಕದ ಹಕ್ಕಿಗಾಗಿ ಕೋರ್ಟಲ್ಲಿ ವಾದಿಸಲು ಒಬ್ಬ ತಮಿಳು ಭಾಷಿಕ ವಕೀಲರಿಗೆ ಯಾಕೆ ಜವಾಬ್ದಾರಿ ಕೊಡಬೇಕಿತ್ತು. ಕೇಸು ನಡೆಸಲು ಕೊಟ್ಟವರು ಕೊಟ್ಟರು... ಈ ನಿರ್ಧಾರವನ್ನು ಕನ್ನಡ ಹೋರಾಟಗಾರರು ಯಾಕೆ ಆಗಲೇ ಉಗ್ರ ಹೋರಾಟ ಮಾಡಿ ತಡೆಯಲಿಲ್ಲಾ? ತಮಿಳರು ಎಲ್ಲಿಯೇ ಇರಲಿ, ಯಾರೇ ಇರಲಿ ಅವರು ತಮ್ಮ ನಾಡು ನುಡಿಯ ಮೇಲೆ ಅತಿಯಾದ ಅಭಿಮಾನ ಹೊಂದಿರುವವರು ಎಂದು ಈ ಉಟ್ಟು ಓರಾಟಗಾರರಿಗೆ ಗೊತ್ತಾಗಲಿಲ್ಲವೆ. ತಮಿಳರ ಅಭಿಮಾನಕ್ಕೆ ಅದಕ್ಕೊಂದು ಸಣ್ಣ ಉದಾಹರಣೆ ಎಂದರೆ, ಮೊನ್ನೆ ಸಿಎಂ ಸಿದ್ದರಾಮಯ್ಯನವರಿಗೂ ತಿಳಿಸದೇ ನಾರಿಮನ್ ಸಾಹೇಬರು ಸುಪ್ರೀಂ ಕೋರ್ಟಲ್ಲಿ ದಿನಕ್ಕೆ ಹದಿನೈದು ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತೇವೆಂದು ಒಪ್ಪಿಕೊಂಡಿದ್ದು. ನ್ಯಾಯವ್ಯಾಧಿ ನಾರಮನ್ ರವರನ್ನೂ ಸಹ ಅವರ ರಾಜ್ಯ ಹಾಗೂ ಭಾಷಾಭಿಮಾನಕ್ಕೆ ಅಭಿನಂದಿಸಲೇ ಬೇಕು. ಶತ್ರುಪಕ್ಷದವರಿಗೆ ಕೇಸು ನಡೆಸಲು ಕೊಟ್ಟು ಕೈಕೈ ಹಿಚುಕಿಕೊಳ್ಳುತ್ತಿರುವ ಕರ್ನಾಟಕದ ಸಿಎಂಗಳನ್ನು ಮೊದಲು ದೂಷಿಸಬೇಕು. ಈಗ ಈ ತಮಿಳಿಗ ವಕೀಲ ಭಯಂಕರ ನಾರಿಮನ್ ರವರು ಕನ್ನಡಿಗರಿಗೆ ಬಿಸಿ ತುಪ್ಪ. ಇಟ್ಟುಕೊಳ್ಳುವ ಹಾಗೂ ಇಲ್ಲ... ಬಿಟ್ಟು ಕೊಡುವ ಹಾಗೂ ಇಲ್ಲ. ಪ್ರತಿ ಸಲ ಕೋರ್ಟಲ್ಲಿ ಕರ್ನಾಟಕ ಸೋಲುವುದರಲ್ಲಿ ಸಂದೇಹವೇ ಇಲ್ಲ.
ಈ ಸೂಕ್ಷ್ಮತೆಗಳು ಗೊತ್ತಿಲ್ಲದೇ ಆವೇಶಕ್ಕೊಳಗಾಗಿ ಜನರನ್ನು ಪ್ರಚೋದಿಸುವವರು ಸಮಸ್ಯೆಯನ್ನು ಇನ್ನೂ ಹೆಚ್ಚಿಸುತ್ತಾರೆ. ನಮ್ಮದೇ ರಾಜ್ಯವನ್ನು ಬಂದ್ ಮಾಡಿ ನಮ್ಮದೇ ಜನರ ಬದುಕನ್ನು ಅಸ್ತವ್ಯಸ್ತ ಗೊಳಿಸುವುದರಿಂದ, ಕನ್ನಡಿಗರ ಸಾರ್ವಜನಿಕ ಆಸ್ತಿಯನ್ನು ನಾಶಮಾಡುವುದರಿಂದ, ಭಾವಾತಿರೇಕವನ್ನು ಪ್ರಚೋದಿಸಿ ಜನರ ದಿಕ್ಕು ತಪ್ಪಿಸುವುದರಿಂದ ಕಾವೇರಿಯ ಸಮಸ್ಯೆ ಪರಿಹಾರವಾಗಲು ಸಾಧ್ಯವಿಲ್ಲ. ಸುಪ್ರಿಂ ಕೋರ್ಟ ಎನ್ನುವುದು ಜನರ ಆಕ್ರೋಶ ಹೋರಾಟ ಹಾರಾಟಗಳಿಗೆ ಮಣಿಯುವುದಿಲ್ಲ. ಇವರೀಗ ವೀರಾವೇಶದಿಂದ ನಿಂದಿಸುವ ಸಿದ್ದರಾಮಯ್ಯನವರ ಕೈಯಲ್ಲೂ ಏನೂ ಇಲ್ಲ. ಅದೆಷ್ಟೇ ಸೊಂಟದ ಕೆಳಗಿನ ಭಾಷೆ ಬಳಿಸಿ ಜಯಲಲಿತಾರನ್ನು ಬೈದು, ಶವಸಂಸ್ಕಾರ ಮಾಡಿ, ತಿಥಿ ಊಟ ಮಾಡಿದರೂ ಜಯಲಲಿತಾರ ತಮಿಳು ಬದ್ದತೆ ಕಡಿಮೆಯಾಗೋದಿಲ್ಲ. ನಮ್ಮ ಮನೆಗೆ ನಾವೇ ಬೆಂಕಿ ಹಚ್ಚಿಕೊಂಡು ಬೇರೆಯವರ ಮನೆಯತ್ತ ಬಾಯಿ ಬಡಿದುಕೊಂಡರೆ ಸಮಸ್ಯೆ ಇತ್ಯರ್ಥ ಆಗುತ್ತಾ? ಕಾವೇರಿ ಹರಿಯದೇ ನಿಲ್ಲುತ್ತಾ.?
ಹಾಗಾದರೆ ಈ ಕಾವೇರಿ ನೀರಿನ ಹಂಚಿಕೆಯ ಬಿಕ್ಕಟ್ಟಿಗೆ ಏನು ಪರಿಹಾರವಿದೆ? ಪುರಭವನದ ಮುಂದೆ ಎಲ್ಲರೂ ಅವರಿವರ ಮೇಲೆ ಗೂಬೆ ಕೂಡಿಸಿ ಪೈಪೋಟಿಗೆ ಬಿದ್ದು ವೀರಾವೇಶದಿಂದ ಬೈದಾಡುತ್ತಿರುವಾಗ, ಅವರ ಗದ್ದಲ ಗಲಾಟೆಯ ನಡುವೆಯೇ ಪ್ರದರ್ಶನಗೊಂಡ ಬೀದಿ ನಾಟಕವೊಂದರಲ್ಲಿ ಕಾವೇರಿ ನೀರಿನ ಹಂಚಿಕೆಯ ಸಮಸ್ಯೆ, ಪರಿಣಾಮ ಹಾಗೂ ಪರಿಹಾರದ ಕುರಿತು ತಾತ್ವಿಕ ಅಂಶಗಳು ಅನಾವರಣಗೊಂಡವು.
‘ಹಶ್ಮಿ ಥಿಯೇಟರ್ ಫೋರಂ’ ತಂಡದ ಕಲಾವಿದರು ಲವಕುಮಾರ್ ನಿರ್ದೇಶನದಲ್ಲಿ ಪ್ರದರ್ಶನಗೊಂಡ ‘ನೀರು ಮತ್ತು ನೆಲದ ಹಕ್ಕು’ ಬೀದಿ ನಾಟಕವನ್ನೊಮ್ಮೆ ಈ ಹೋರಾಟಗಾರರು ನೋಡಬೇಕಿತ್ತು.
‘ಕಾವೇರಿ ನೀರಿನ ಹಂಚಿಕೆ ಎನ್ನುವುದರಲ್ಲಿ ಭಾಷೆ ಗಡಿ ರಾಜಕೀಯಗಳ ಅಗತ್ಯವಿಲ್ಲ. ಹರಿಯುವ ನದಿ ಯಾವುದೇ ರಾಜ್ಯದ ಸೊತ್ತಲ್ಲ. ಕಾವೇರಿ ಎನ್ನುವುದು ಅದು ಹರಿಯುವ ದಾರಿಗುಂಟಾ ಇರುವ ರೈತರದ್ದಾಗಿದೆ. ಈ ರಾಜ್ಯ-ಕೇಂದ್ರ ಸರಕಾರಗಳು ಕಾವೇರಿಗೆ ಬೆಂಕಿ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಕಾವೇರಿ ನದಿ ಪ್ರಾಂತ್ಯದ ರೈತರೆಲ್ಲಾ ಸೇರಿ ಮಾತುಕತೆಯ ಮೂಲಕ ನೀರಿನ ಹಂಚಿಕೆಯನ್ನು ಪರಸ್ಪರ ಸೌಹಾರ್ಧಯುತವಾಗಿ ಬಗೆಹರಿಸಿಕೊಂಡು ಸಮಸ್ಯೆಯನ್ನು ಪರಿಹರಿಸಬೇಕಾಗಿದೆ’ ಎಂಬುದನ್ನು ಹೇಳುವಲ್ಲಿ ಈ ಬೀದಿ ನಾಟಕ ಸಫಲವಾಗಿದೆ. ಕೇಂದ್ರ ಸರಕಾರದ ತಾರತಮ್ಯಪೀಡಿತ ಜಲ ನೀತಿಯ ವಿರುದ್ಧ ತನ್ನ ಆಕ್ರೋಶವನ್ನು ವ್ಯಕ್ತಪಡಿಸುವ ಈ ನಾಟಕವು ಆಳುವ ವರ್ಗಗಳ ಜನವಿರೋಧಿ ಮುಖವಾಡಗಳನ್ನು ನೋಡುಗರ ಮುಂದೆ ಅನಾವರಣಗೊಳಿಸಲು ಪ್ರಯತ್ನಿಸುತ್ತದೆ.
ಈ ಆಕ್ರೋಶಭರಿತ ಘೋಷಣೆಗಳು, ಭಾವಪ್ರಚೋದಕ ಭಾಷಣಗಳು ಮಾಡಲಾಗದ ಕೆಲಸವನ್ನು ಈ ಬೀದಿನಾಟಕ ಮಾಡುತ್ತದೆ. ರೈತರ ಪ್ರಸ್ತುತ ಸಮಸ್ಯೆಯನ್ನು ಚಿಕ್ಕಪುಟ್ಟ ದೃಶ್ಯಗಳ ಮೂಲಕ ಕಾಲಮಿತಿಯೊಳಗೆ ಬಿಡಿಸಿ ಹೇಳುತ್ತಾ, ಆ ಸಮಸ್ಯೆಗೆ ಕಾರಣಗಳೇನು ಹಾಗೂ ಪರಿಹಾರ ಹೇಗಿರಬೇಕು ಎನ್ನುವುದನ್ನು ಮನದಟ್ಟು ಮಾಡುವಂತೆ ಈ ನಾಟಕ ಮೂಡಿಬಂದಿದೆ. ಕನ್ನಡದ ಭೂತ ಮೆಟ್ಟಿಕೊಂಡವರಂತೆ ತಮಿಳರು, ತಮಿಳುನಾಡು ಹಾಗೂ ಜಯಲಲಿತಾ ವಿರುದ್ದ ಭಾವೇತಿರೇಕದಿಂದ ಭಾಷಣ ಘೋಷಣೆಗಳನ್ನು ಕೂಗುತ್ತಾ ಟೌನ್ಹಾಲ್ ಮುಂದೆ ನೆರೆದಿದ್ದ ಅನೇಕಾನೇಕ ಸಂಘಟನೆಗಳ ನಿಲುವುಗಳಿಗಿಂತ ಭಿನ್ನವಾದ ಹಾಗೂ ತಾರ್ಕಿಕವಾದ ನಿಲುವನ್ನು ಈ ಬೀದಿ ನಾಟಕ ಹೊಂದಿದೆ. “ಭಾಷಾಭಿಮಾನ, ಜನಾಂಗಾಭಿಮಾನ, ರಾಜ್ಯಾಭಿಮಾನಕ್ಕಿಂತಲೂ ರೈತರ ಬದುಕು ಮುಖ್ಯ. ರೈತರು ಯಾವುದೇ ಭಾಷಿಕರಾದರೂ ಅವರು ಮೂಲಭೂತವಾಗಿ ಬೆವರನು ಹರಿಸಿ ದುಡಿಯುವ ಜನ. ಹೀಗಾಗಿ ರೈತರ ಸಮಸ್ಯೆಯನ್ನು ಎರಡೂ ರಾಜ್ಯದ ರೈತ ನಾಯಕರುಗಳೇ ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕು” ಎನ್ನುವ ತರ್ಕಬದ್ದ ಪರಿಹಾರವನ್ನು ಈ ನಾಟಕ ಕೊಡುತ್ತದೆ. ಆದರೆ ಭಾಷೆಯ ಮೇನಿಯಾ ಅನ್ನುವುದು ತಲೆಗೆ ಹೊಕ್ಕ ಜನಸಂದನಿಗೆ ಈ ನಾಟಕದ ಆಶಯವನ್ನು ತಿಳಿಸಿ ಹೇಳುವುದಾದರೂ ಹೇಗೆ. ಆದರೂ ತನ್ನದೇ ಆದ ರೀತಿಯಲ್ಲಿ ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಸೂಕ್ತ ಪರಿಹಾರ ಸಾಧ್ಯತೆಯನ್ನು ಹೇಳುವ ಮೂಲಕ ಈ ಬೀದಿ ನಾಟಕವು ಈ ನಾಡಿನ ನೆಲ ಜಲ ಕುರಿತ ಚಳುವಳಿಗೆ ಬಲು ದೊಡ್ಡ ಆಶಯವನ್ನು ಕಟ್ಟಿಕೊಟ್ಟಿದ್ದಂತೂ ಸತ್ಯ. ಮತ್ತೇರಿದವರ ಸಂತೆಯಲ್ಲಿ ಸಂತರ ಮಾತು ಕೇಳುವವರ್ಯಾರು? ಭಾಷಾಂಧತೆ ಭಾವಾತಿರೇಕವಾದಂತಹ ಸಂದರ್ಭದಲ್ಲಿ ಬೀದಿ ನಾಟಕದ ಆಶಯವನ್ನು ಅರ್ಥ ಮಾಡಿಕೊಳ್ಳುವವರಾದರೂ ಯಾರು?
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ