ಶನಿವಾರ, ಅಕ್ಟೋಬರ್ 15, 2016

ತಹ ತಹ .....39 ಮನುವಾದಿಗಳ ಗೋರಾಜಕೀಯ ಮತ್ತು ಎಚ್ಚೆತ್ತ ದಲಿತ ಸಮುದಾಯ:




ಏನು ತಿನ್ನಬೇಕು ಏನನ್ನು ತಿನ್ನಬಾರದು ಎನ್ನುವುದನ್ನು ತಿನ್ನುವವರು ನಿರ್ಧರಿಸಬೇಕೆ ಹೊರತು ಹೊರಗಿನ ಶಕ್ತಿಗಳಲ್ಲ. ಹಸುವೊಂದು ವಯಸ್ಸಾಗಿ ನಿರುಪಯುಕ್ತವಾದಾಗ ಅದನ್ನು ಮಾರಬೇಕೋ ಇಲ್ಲವೇ ಸಾಕಬೇಕೋ ಎಂದು ನಿರ್ಣಯಿಸುವ ಅಧಿಕಾರ ಇರೋದು ಅದರ ಮಾಲೀಕನಿಗೆ ಹೊರತು ಸಂಬಂಧವೇ ಇಲ್ಲದ ನಕಲಿ ಗೋರಕ್ಷಕರಿಗಲ್ಲಸತ್ತ ಹಸುವಿನ ಚರ್ಮ ಮತ್ತು ಮಾಂಸವನ್ನು ಏನು ಮಾಡಬೇಕು ಎಂದು ಅಲೋಚಿಸುವುದು ಅದನ್ನು ಪಡೆದ ವ್ಯಕ್ತಿಯೇ ಹೊರತು ಮನುವಾದಿಗಳಲ್ಲ. ಕೊಂಡು ತಂದ ಬರಡು ಹಸುವನ್ನು ಮಾರಬೇಕೋ ಇಲ್ಲಾ ತಿನ್ನಬೇಕೋ ಎನ್ನುವ ಹಕ್ಕಿರುವುದು ಅದನ್ನು ಕ್ರಯ ಕೊಟ್ಟು ತಂದವನಿಗೆ ಹೊರತು ಪುರೋಹಿತಶಾಹಿಗಲ್ಲ

ಹಸು ಕೊಂದು ತಿಂದರೆ ಅಲ್ಪಸಂಖ್ಯಾತ ಹಿಂದುತ್ವವಾದಿಗಳ ಪರಮ ಪವಿತ್ರ ಭಾವನೆಗಳಿಗೆ ಅಪಾರ ಧಕ್ಕೆಯಾಗುತ್ತದಂತೆ...  ಇದರಿಂದಾಗಿ ಶತಮಾನಗಳಿಂದ ದನದ ಮಾಂಸ ತಿಂದೇ ಬದುಕುವ ಬಹುಜನರ ಬದುಕು ತಳಮಳಿಸುತ್ತದೆಂಬ ಕನಿಷ್ಟ ಅರಿವೂ ಮೆದುಳು ತೊಳೆಸಿಕೊಂಡ ಮತಿಹೀನ ಮತಾಂಧರಿಗೆ  ಇಲ್ಲವೆಂಬುದೆ ಈಗ  ವರ್ಗ ಸಂಘರ್ಷಕ್ಕೆ ಪ್ರೇರಣೆಯಾಗಿದೆ

ಗೋರಕ್ಷಣೆ ನಮ್ಮ ಹಕ್ಕು ಎಂದು ಮೇಲ್ಜಾತಿಯವರು ಹಾಗೂ ಅವರ ಬಾಲಗಳು ಹಿಂಸೆಗೆ ಮುಂದಾದಾಗ... ಆಹಾರ ನಮ್ಮ ಆಯ್ಕೆ ಎಂದು ದಲಿತರು ಸಿಡಿದೆದ್ದಿದ್ದಾರೆ. ಕಾಲ ಯಾವುದೇ ಆಗಿರಲಿ  ಹೇರಿಕೆ ದಮನಗಳಿಂದ ಆಹಾರ ಪದ್ದತಿಯನ್ನು ಬದಲಿಸಲಂತೂ ಸಾಧ್ಯವಿಲ್ಲ. ಆರ್ಥಿಕವಾಗಿ ಹಿಂದುಳಿದ ಬಡವರು ಹಾಗೂ ಅಲ್ಪಸಂಖ್ಯಾತರು ಕಡಿಮೆ ಬೆಲೆಯಲ್ಲಿ ಸಿಗುವ ಗೊಮಾಂಸವನ್ನು ತಿನ್ನುತ್ತಾ ಬದುಕು ಸಾಗಿಸುತ್ತಿದ್ದಾರೆ. ಮೇಲ್ವರ್ಗದವರು ಆರ್ಥಿಕವಾಗಿ ಸಬಲರಾಗಿದ್ದರಿಂದ ತಮಗೆ ಬೇಕಾದಾಗ  ಹೆಚ್ಚು ಬೆಲೆಯ ಕುರಿ ಕೊಳಿಗಳನ್ನು ಕದ್ದುಮುಚ್ಚಿಯಾದರೂ ತಿಂದು ತೆವಲು ತೀರಿಸಿಕೊಳ್ಳುತ್ತಾರೆ. ಇನ್ಮೇಲೆ  ಮನುವಾದಿಗಳ ನೇತೃತ್ವದಲ್ಲಿರುವ ಕೇಂದ್ರ ಸರಕಾರ ರಿಯಾಯಿತಿ ದರದಲ್ಲಿ  ಗೋಮಾಂಸದ ಬೆಲೆಗೆ ಕೋಳಿ ಕುರಿ ಮಾಂಸವನ್ನು ಬಡ ದಲಿತರಿಗೆ ವದಗಿಸಿ ನಂತರ ಗೋಮಾಂಸವನ್ನು ಭಕ್ಷಣೆ ಬಹಿಷ್ಕರಿಸಲಿ. ಗೋವು ಯಾರಿಗೆ ಪರಮ ಪವಿತ್ರ ಎಂದೆಣಿಸುತ್ತದೆಯೋ ಅಂತವರು ವಯಸ್ಸಾದ ಮುದಿ ಹಸುಗಳನ್ನು ತಮ್ಮ ಮನೆಯಲ್ಲಿ ಸಾಯುವವರೆಗೂ ಸಾಕಿ ತಮ್ಮ ಜಮೀನಿನಲ್ಲೆ ಅಂತ್ಯ ಸಂಸ್ಕಾರವನ್ನು ತಮ್ಮ ಪವಿತ್ರ ಹಸ್ತಗಳಿಂದಲೇ ಮಾಡಲಿ ಬೇಡ ಎಂದವರಾರು



ಹಸು ಸಾಕೋದಿಲ್ಲ, ಸಗಣಿ ಬಾಚೋದಿಲ್ಲ ಆದರೂ ಹಸುವಿನ ಹಾಲು ಬೆಣ್ಣೆ ತುಪ್ಪ ತಿನ್ನೋದನ್ನ ಮೇಲ್ಜಾತಿಯವರು ತಪ್ಪಿಸೋದಿಲ್ಲ. ಪ್ರಕೃತಿ ನಿಯಮದ ಪ್ರಕಾರ ಹಸು ಹಾಲು ಕೊಡುವುದು ಅದರ ಕರುವಿಗಾಗಿಯೇ ಹೊರತು ಮನುಷ್ಯರಿಗಾಗಿ ಅಲ್ಲ. ಗೋವಿನ ಕರುವಿಗೆ ಮೀಸಲಾದ ಹಾಲನ್ನು ಗೋರಕ್ಷಕರು ಕುಡಿತಾರಲ್ಲಾ ಇವರ ಗೋದೇವತೆಗೆ ಅದೆಷ್ಟು ನೋವಾಗಿರಬೇಡ. ಗೋಮಾತೆಯೊಳಗಿನ ಮೂವತ್ತುಮೂರು ಕೋಟಿ ದೇವತೆಗಳು ಅದೆಷ್ಟು ನೊಂದುಕೊಂಡಿರಬಹುದು. ಬ್ರಾಹ್ಮಣ್ಯವಾದಿಗಳದು ಅನುಕೂಲಸಿಂದು ಆಚರಣೆ. ಇವರಿಗೆ ಕೆಲವರ ಹುಸಿ ಭಾವನೆಗಿಂತಾ ಹಲವರ ಹಸಿದ ಬದುಕು ಮುಖ್ಯ ಅಂತಾ ಹೇಗೆ ತಿಳಿಸಿ ಹೇಳುವುದು? ದನಕ್ಕಿಂತಾ ಜನ ಮುಖ್ಯ ಎಂದು ಹೇಗೆ ಮನದಟ್ಟು ಮಾಡುವುದು? ಹುಸಿ ಹಿಂದುತ್ವದ ಉನ್ಮಾದವನ್ನು ತಲೆಯಲ್ಲಿ ತುಂಬಿಕೊಂಡಿರುವ ಇಲ್ಲವೇ ತುಂಬಿಸಲಾಗಿರುವ ಮನುವಾದಿ ಮಂದಿಗೆ ಭಕ್ತಿ ಭಾವ ಪೂಜೆ ದೇವರು ಧರ್ಮಗಳಿಗಿಂತಾ ಜೀವ ಮುಖ್ಯ... ಜೀವ ಇರುವ ಜನ ಮುಖ್ಯ ಅಂತಾ ಹೇಗೆಲ್ಲಾ ತಿಳಿಹೇಳುವುದು?. 

ಗೋವು ಪವಿತ್ರ ಎನ್ನುವವರು ಪೂಜಿಸಲಿ ಯಾರೂ ಇಲ್ಲಿ ಬೇಡವೆಂದು ಹೇಳುತ್ತಿಲ್ಲ. ಸತ್ತ ಇಲ್ಲವೇ ನಿರುಪಯುಕ್ತ ಹಸುವನ್ನು ಆಹಾರ ಎಂದು ತಿನ್ನುವವರು ತಿನ್ನಲಿ ಅದಕ್ಕೂ ಯಾರೂ ಬೇಡವೆನ್ನಬಾರದು. ಯಾವಾಗ ಒಬ್ಬರ ನಂಬಿಕೆ ಮತ್ತೊಬ್ಬರ ತಿನ್ನುವನ್ನಕ್ಕೆ ಕಲ್ಲು ಹಾಕುತ್ತದೋ, ಯಾವಾಗ ಒಂದು ಕಲ್ಪಿತ ಧರ್ಮ ಬಹುಜನರ ತಿನ್ನುವ ಹಕ್ಕನ್ನು ಕಿತ್ತುಕೊಳ್ಳುತ್ತದೋ ಆಗ ಸಂಘರ್ಷ ಆರಂಭವಾಗುತ್ತದೆ. ಈಗ ಶುರುವಾಗಿದ್ದೂ ಅದೇ.


ಒಂದು ವಿಷಯವನ್ನಿಲ್ಲಿ ಗಮನಿಸಬೇಕಿದೆ. ಮೇಲ್ವರ್ಗದ ಜನ ಕೆಳವರ್ಗದವರನ್ನು ಶತಮಾನಗಳ ಕಾಲ ಜೀತಕ್ಕಿಟ್ಟು ದುಡಿಸಿಕೊಂಡು ಶೋಷಿಸಿದರು ಆದರೂ ಶೂದ್ರರೂ ಹಾಗೂ ದಲಿತರು ಸಹಿಸಿಕೊಂಡರು. ದಲಿತರ ಮನೆಯ ಹೆಣ್ಣುಮಕ್ಕಳನ್ನು ದೇವರ ಹೆಸರಲ್ಲಿ ಲೈಂಗಿಕವಾಗಿ ಮೇಲ್ಜಾತಿಯವರು ಬಳಸಿಕೊಂಡರು. ಆಗಲೂ ದಲಿತರು ಸುಮ್ಮನಿದ್ದರು. ಅವರ್ಣೀಯರನ್ನು ಮನುಷ್ಯರೇ ಅಲ್ಲವೆನ್ನುವ ಹಾಗೆ ಅವಮಾನಿಸಿ ಅಸ್ಪೃಷ್ಯರನ್ನಾಗಿಸಿ ದಮನಿಸಿದರು ಆಗಲೂ ನಮ್ಮ ಕರ್ಮ ಎಂದುಕೊಂಡು ಅವಮಾನಿತ ಸಮುದಾಯ ಮೌನವಾಗಿತ್ತು. ಆದರೆ ಯಾವಾಗ ದಲಿತ ದಮನಿತರ  ಹಸಿದ ಒಡಲಿಗೇ ಕನ್ನ ಹಾಕಿ ಇನ್ಮೇಲೆ ಗೋಮಾಂಸ ತಿನ್ನಬಾರದು ಎಂದು ನಿರ್ಬಂದಿಸಲಾಯ್ತೋ ಆಗ ದಲಿತರು ತಿರುಗಿ ಬಿದ್ದರು. ಯಾವಾಗ ಗೋರಕ್ಷಣೆಯ ಹೆಸರಲ್ಲಿ ದೇಶಾದ್ಯಂತ ದಲಿತರ ಮೇಲೆ ಅಮಾನುಷ ಹಲ್ಲೆ ಮತ್ತು ಕೊಲೆಗಳು ನಡೆದವೋ ಆಗ ದಲಿತ ಸಮುದಾಯ ಕುದಿಯತೊಡಗಿತುಮನುವಾದಿಗಳ ಆಹಾರದ ರಾಜಕೀಯ ಶಡ್ಯಂತ್ರಗಳು ಗೊತ್ತಾಗುತ್ತಿದ್ದಂತೆ ಶಿಕ್ಷಿತ ದಲಿತ ಯುವಕರು ಸಿಡಿದೆದ್ದರು. ಸಂಘಟಿತರಾಗತೊಡಗಿದರು.


ಗುಜರಾತಿನ "ಊನಾ" ದಲ್ಲಿ ಬ್ರಹತ್ ದಲಿತ ಸ್ವಾಭಿಮಾನಿ ಸಮಾವೇಶ ನಡೆಸಿ ಮೇಲ್ಜಾತಿಗಳ ಶೋಷಣೆಯ ವಿರುದ್ದ ಪ್ರತಿಭಟಿಸಿದರು. "ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು" ಎಂದು ಘೋಷಿಸಿದರು. ಭೂಮಿಯ ಒಡೆತನ ಇರುವುದರಿಂದ ಭೂಮಾಲಿಕರು ಹಾಗೂ ಬಂಡವಾಳಿಗರು ದಲಿತರ ಮೇಲೆ ಸವಾರಿ ಮಾಡಿ ಶೋಷಿಸುತಿದ್ದಾರೆ. ಪ್ರತಿಯೊಬ್ಬ ದಲಿತನಿಗೂ ಕನಿಷ್ಟ ಐದು ಎಕರೆ ಭೂಮಿಯನ್ನು ಸರಕಾರ ಕೊಟ್ಟು  ಅವರನ್ನು ಸ್ವಾವಲಂಭಿಯಾಗಿ ಬದುಕಲು ಬಿಡಬೇಕೆಂದು ಒತ್ತಾಯಿಸಿದರು. ಊನಾ ದಲಿತರ ಹೋರಾಟದಿಂದ ಮನುವಾದಿಗಳು ಅದೆಷ್ಟು ಬೆಚ್ಚಿ ಬಿದ್ದರೆಂದರೆ ಪ್ರಧಾನಿ ಮೋದಿಯವರು ಮೌನಮುರಿದು "ದಲಿತರ ಬದಲು ನನ್ನನ್ನು ಕೊಲ್ಲಿ" ಎಂದು ಹೇಳಬೇಕಾಯಿತು. 'ಸತ್ತ ಪ್ರಾಣಿಗಳ ಹೆಣ ಎತ್ತುವುದಿಲ್ಲ' ಎಂದು ಯಾವಾಗ ದಲಿತರು ಪಟ್ಟುಹಿಡಿದರೋ ಆಗ ಮೇಲ್ಜಾತಿಯ ಜನ ನಡುಗಿ ಹೋದರು. ಹೀಗೇ ಆದರೆ ಜನ ತಿರುಗಿ ಬಿದ್ದಾರೆಂದುಕೊಂಡ ಸಂಘಪರಿವಾರವು ದೇಶದ ಜನರಲ್ಲಿ ದೇಶಭಕ್ತಿಯ ಉನ್ಮಾದವನ್ನು ತುಂಬಲು ನೋಡಿತು. ಜೊತೆಗೆ ಯುದ್ದೊನ್ಮಾದದ  ಬ್ರಹ್ಮಾಸ್ತ್ರವನ್ನೂ ಬಳಸಿ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಕೇಂದ್ರ ಸರಕಾರ ಪ್ರಯತ್ನಿಸಿತು. ಆದರೆ   ಅಸ್ತ್ರಗಳ ಮೋಹಕ್ಕೆ ಒಳಗಾಗುವುದು ಮದ್ಯಮ ವರ್ಗದವರೇ ಹೊರತು ದಲಿತ ಸಮೂಹವಲ್ಲ. ದಿನನಿತ್ಯದ ಸಂಕಷ್ಟಗಳಲ್ಲಿ ಬದುಕೇ ಹೋರಾಟವಾದವರಿಗೆ ಉನ್ಮಾದಗಳೆಲ್ಲಾ ಯಾವ ಪರಿಣಾಮಗಳನ್ನೂ ಬೀರಲು ಸಾಧ್ಯವಾಗುವುದಿಲ್ಲ. ಹೀಗಾಗಿ ದೇಶಾದ್ಯಂತ ದಲಿತರ ಸ್ವಾಭಿಮಾನಿ ಸಮಾವೇಶಗಳು ನಡೆಯುತ್ತಿವೆ. ಅದರ ಭಾಗವಾಗಿ ಕರ್ನಾಟಕದಲ್ಲೂ  ಅಕ್ಟೋಬರ್ 4 ರಿಂದ .9 ವರೆಗೆ  ಚಲೋ ಉಡುಪಿ ಹೆಸರಲ್ಲಿ ದಲಿತ ದಮನಿತರ ಸ್ವಾಭಿಮಾನಿ ಜಾಥಾ ಶುರುವಾಗಿದೆ. .9 ರಂದು ಉಡುಪಿಯಲ್ಲಿ ದಲಿತರ ಬ್ರಹತ್ ಸಮಾವೇಶ ಆಯೋಜಿಸಲಾಗಿದೆ. ಅದರಲ್ಲಿ ಭಾಗವಹಿಸಲು ನಾಡಿನ ಮೂಲೆ ಮೂಲೆಗಳಿಂದ ದಲಿತ ದಮನಿತ ಜನರು ಕಡಲು ಸೇರಬಯಸುವ ತೊರೆ ಹಳ್ಳ ನದಿಗಳಂತೆ ಹರಿದು ಕಡಲೂರಿಗೆ ಬರುತ್ತಿದ್ದಾರೆ. ಮನುವಾದಿಗಳ ಮನದಲ್ಲಿ ಕಂಪನ ಹುಟ್ಟಿಸುತ್ತಿದ್ದಾರೆ. ಶೋಷಕರ ದಮನ ಮಟ್ಟ ಹಾಕಲು ತಮ್ಮ ಸಂಘಟಿತ ಸಾಮರ್ಥ್ಯ ತೋರಿಸುತ್ತಿದ್ದಾರೆ. ಜಾಥಾ ಸಾಗುವ ದಾರಿಯಲ್ಲೆಲ್ಲಾ "ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು" ಘೋಷಣೆ ಮೊಳಗುತ್ತಿವೆ. ಹೊಸ ಮನ್ವಂತರಕೆ ದಲಿತ ಸಮುದಾಯ ಸಿದ್ದಗೊಳ್ಳುತ್ತಿದೆ. ಸಮಾನತೆಯ ಆಶಯದತ್ತ ಪ್ರಜ್ಞಾವಂತ ಯುವ ಪಡೆ ತುಡಿಯುತ್ತಿದೆ

ಉಡುಪಿ ಚಲೋ ಯಶಸ್ವಿಯಾಗಲಿ. ಬನ್ನಿ ಎಲ್ಲರೂ ಅಕ್ಟೋಬರ್ 9 ರಂದು ಉಡುಪಿಗೆ ಹೋಗೋಣಶೋಷಿತ ಜನಸಮುದಾಯದ ಹಕ್ಕಿನ ಹೋರಾಟವನ್ನು ಬೆಂಬಲಿಸೋಣಎಲ್ಲರ ನಡಿಗೆ ಈಗ ಉಡುಪಿ ಕಡೆಗೆ..

- ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ