"ತಾಳಕ್ಕೆ ಶಬ್ದಗಳ
ಹೊಂದಿಸೋದು ಹೇಗೆ,
ಅಂಗಿಗೆ ಅಂಗಾಂಗ
ಬೆಳಿಸುವ ಬೇಗೆ"...? .........
"ಸಾರ್ ಮೀಟರಿಗೆ ಹಾಡು ಬರೀತೀರಾ? " ಎಂದು ಸಿನೆಮಾ ನಿರ್ದೇಶಕರೊಬ್ಬರು ಇಂದು ಪೋನ್ ಮಾಡಿ ಕೇಳಿದರು.
ಇಲ್ಲಾ ಲೀಟರಿಗೆ ಬರೀತೇನೆ ಎಂದುತ್ತರಿಸಿದೆ ಕಿಚಾಯಿಸಲು.
"ಹಾಗಲ್ಲ ಸರ್ ಹೊಸ ಸಿನೆಮಾ ಮಾಡ್ತಿದ್ದೇನೆ. ಒಳ್ಳೆಯ ಹಾಡುಗಳು ಬೇಕಾಗಿತ್ತು. ನಿಮ್ಮ ಕವಿತೆ ಹಾಡುಗಳು ನನಗೆ ತುಂಬಾನೇ ಇಷ್ಟಾ ಸರ್... ನಿಮ್ಮಿಂದ ಹಾಡು ಬರೆಸೋದು ಅಂತಾ ನಿರ್ದಾರ ಮಾಡಿದ್ದೇನೆ.... ದಯವಿಟ್ಟು ನೀವೇ ಬರೆದುಕೊಡಬೇಕು" ಎಂದು ಆಗ್ರಹಿಸಿದ.
ಭಟ್ಟರು, ಕಾಯ್ಕಿನಿ, ಕವಿರಾಜರಂತವರನ್ನೇಲ್ಲಾ ಬಿಟ್ಟು ನನ್ನಿಂದ ಯಾಕೆ ಹಾಡು ಬರೆಸ್ತೀದ್ದೀರಿ? ಎಂದು ಪ್ರಶ್ನಿಸಿದೆ.
"ಅಷ್ಟೊಂದು ಬಜೆಟ್ಟಿಲ್ಲಾ ಸಾರ್. ಹಾಡೊಂದಕ್ಕೆ ಅರ್ಧ ಲಕ್ಷ ಕೊಡಬೇಕು. ಅದಕ್ಕೆ ನೀವೇ ಸರಿ" ಎಂದು ಅವಲತ್ತುಕೊಂಡ.
"ಅಂದರೆ ಹಾಡೂ ಚೆನ್ನಾಗಿರಬೇಕು ಹಾಗೂ ಪುಕ್ಸಟ್ಟೆ ಬರೀಬೇಕು ಅನ್ನೋದು ನಿಮ್ಮ ಆಸೇನಾ?" ಪ್ರಶ್ನಿಸಿದೆ.
"ಹಂಗೇನಿಲ್ಲಾ ಸಾರ್... ನಾಲ್ಕೈದು ಸಾವಿರ ನಿರ್ಮಾಪಕರಿಗೆ ಹೇಳಿ ಕೊಡ್ಸೋವಾ ಸಾರ್... ಮೊದಲು ನೀವು ಹಾಡು ಬರೆಯೋಕೆ ಒಪ್ಕೊಳ್ಳಿ ಸಾ..." ರಾಗ ಎಳೆದ.
" ಸರಿ ಆಯ್ತು... ಸಿಚುವೇಶನ್ ಏನು ಅನ್ನೋದಾದ್ರೂ ಹೇಳಿ... ಬರೆಯೋದು ಆಮೇಲೆ"... ಕುತೂಹಲದಿಂದಾ ಕೇಳಿದೆ.
"ಸಿಚುಯೇಶನ್ ಗಿಚುಯೇಶನ್ ಎಲ್ಲ ಯಾಕೆ ಸರ್. ನೀವೆನೂ ಜಾಸ್ತಿ ತೊಂದರೆ ತಗೋಬೇಡಿ ರಿಕಾರ್ಡೆಡ್ ಸಂಗೀತ ಕಳಿಸಿಕೊಡ್ತೇನೆ. ಅದಕ್ಕೆ ಸರಿ ಹೋಗುವಂತೆ ಸಾಹಿತ್ಯ ಬರೆದು ಕಳಿಸ್ಬಿಡಿ ಸಾಕು..." ಎಂದು ಸಲಹೆ ಕೊಟ್ಟ.
"ಅಂದರೆ ಈಗಾಗಲೇ ಮ್ಯೂಜಿಕ್ ರೆಡಿಯಾಗಿದೆ... ಅದಕ್ಕೆ ತಕ್ಕಂಗೆ ನಿಮ್ಗೆ ಹಾಡು ಬೇಕಾಗಿದೆ. ಕರೋಕೆ ನಿಮ್ಮದು ಶಬ್ದಾ ನನ್ನದು ಹೌದು ತಾನೆ" ಎಂದು ಸಂದೇಹದಿಂದಲೇ ಕೇಳಿದೆ.
" ಎಕ್ಸಾಟ್ಲಿ ರೈಟ್ ಸರ್. ಮೀಟರಿಗೆ ಹಾಡು ಬರ್ದು ಕೊಟ್ರೆ ಸಾಕು ಹೆಚ್ಚಿಗೇನೂ ತಲೆಗೆ ಕೆಲ್ಸಾ ಇಲ್ಲಾ" ಎಂದು ಬೆಂಕಿ ಹಚ್ಚಿ ನೀರೂ ಸುರಿದ.
"ಇದ್ರಲ್ಲಿ ಹಾಡೆಲ್ಲ ಬರಿಯೋದುರೀ. ನಿಮಗೆ ಬೇಕಾದದ್ದು ಬರೀ ಪದಗಳು ಅಷ್ಟೇ. ಅವು ಬೇಕಾದಷ್ಟು ಡಿಕ್ಷನರಿಯಲ್ಲಿ ಸಿಗ್ತಾವಲ್ಲಾ ಹುಡುಕಿ ಹಾಕಿ ಸಾಕು" ಎಂದು ಕಾಲೆಳೆದೆ.
"ಹಂಗಂದ್ರೆ ಹೆಂಗೆ ಸಾರ್. ನೀವು ಸಾಯಿತಿಗಳು. ಯಾವ ಮೂಡಿಗೆ ಯಾವ ಪದ ಹಾಕ್ಬೇಕು. ಯಾವ ತಾಳಕ್ಕೆ ಯಾವ ಶಬ್ದಾ ಸೇರಿಸ್ಬೇಕು ಅಂತಾ ಚೆನ್ನಾಗಿ ಗೊತ್ತಿರುತ್ತೆ. ಹಂಗೇ ಮಾಡಿ ಕೊಡಿ ಸರ್... " ಒತ್ತಾಯಿಸಿದ.
" ಕ್ಷಮಿಸಿ. ನಮಗೆ ಕವಿತೆ ಹಾಡು ಬರೆಯೋದು ಗೊತ್ತೇ ಹೊರತು ಮೀಟರಿಗೆ ಪದ ಸೇರ್ಸೋದು ಗೊತ್ತಿಲ್ಲ. ಹಾಡಿಗೆ ತಾಳ ಹಾಕ್ಬೋದೆ ಹೊರತು.. ತಾಳಕ್ಕೆ ಹಾಡು ಹುಟ್ಟಿಸೋಕೆ ಬರಾಕಿಲ್ಲಾ... ಹಂಗೇನಾದ್ರೂ ಮಾಡಿದ್ರೆ ಹಾಡು ಸತ್ತು ಬರೀ ಶಬ್ದಸೂತಕ ಮಾತ್ರ ಉಳಿಯುತ್ತೆ. ಬೇರೆ ಯಾರನ್ನಾದ್ರೂ ನೋಡಿಕೊಳ್ಳಿ.." ಎಂದು ಪೋನಿಟ್ಟೆ.
ಮೀಟರ್ ಹಾಡು ಎನ್ನುವುದು ಕನ್ನಡ ಚಲನಚಿತ್ರ ಸಾಹಿತ್ಯವನ್ನ ದಶಕಗಳಿಂದ ಕಾಡುತ್ತಿರುವ ಸಮಸ್ಯೆ. ನಿಜವಾದ ಸಾಹಿತಿಗಳಿಗೆ ಸವಾಲೊಡ್ಡುತ್ತಿರುವ ಅಂಶವೂ ಇದೇ ಆಗಿದೆ. ಸಂಗೀತಕ್ಕೆ ತಕ್ಕಂತೆ ಪದ ಜೋಡಣೆ ಮಾಡಿದರೆ ಸಾಹಿತ್ಯದ ಅಂತಸತ್ವವೇ ಲಯವಾಗಿ ಅಲ್ಲಿ ಕೇವಲ ಶಬ್ದಾಡಂಬರ ವಿಜ್ರಂಭಿಸುತ್ತದೆ. ಆಗಲೇ "ಕಾಲಿ ರೋಡಿಗೆ ಕಲ್ಲು ಹಿಡೀತೇನೆ...., ಹಳೆ ಪೇಪರ್, ಹಳೇ ಪಾತ್ರೆ... , ಅಮ್ಮಾ ಲೂಜಾ... ಅಪ್ಪಾ ಲೂಜಾ.." ಎನ್ನುವಂತಾ ಮೀಟರ್ ಸಂಜಾತ ಹಾಡ್ಗಳು ಹುಟ್ಟಿ ಬರ್ತಾವೆ. ಇಂತಹ ಮೀಟರ್ ಸಾಹಿತ್ಯದ ಆಯಸ್ಸು ಬಹಳಾ ಕಡಿಮೆ. ಮೊದಮೊದಲು ಸದ್ದು ಮಾಡುವ ಇಂತಾ ಮೀಟರ್ ಹಾಡುಗಳು ಇತಿಹಾಸದಲ್ಲಿ ಉಳಿಯೋದಿಲ್ಲ.
ಆದರೂ ಯಾಕೆ ಈ ಸಿನೆಮಾದವರು ಈ ಮೀಟರ್ ಹಾಡುಗಳ ಹಿಂದೆ ಬಿದ್ದಿದ್ದಾರೆ. ಯಾಕೆಂದರೆ ಇವರಿಗೆ ಸಾಹಿತ್ಯಕ್ಕಿಂತಾ ಟ್ಯೂನ್ ಮೇಲೆ ಭಾರೀ ಮಮಕಾರ. ಕೇಳುಗರನ್ನು ಕಾವ್ಯದ ಮೂಲಕ ಹಿಡಿದಿಡೋದು ಕಷ್ಟದ ಕೆಲಸವಾದ್ದರಿಂದ ಜನಪ್ರೀಯ ಟ್ಯೂನ್ ಗಳ ಮೂಲಕ ಕ್ಷಣಿಕ ಕರ್ಣಸುಖ ಕೊಟ್ಟು ಆಕರ್ಷಿಸೋಣ ಎನ್ನುವುದು ಈಗಿನ ಸಿನೆಮಾದವರ ಅಗತ್ಯತೆಯಾದಂತಿದೆ. ಅದಕ್ಕೆ ಹಿಂದಿನ ಸಿನೆಮಾ ಹಾಡುಗಳು ಕೇಳುಗರ ಎದೆಯೊಳಗಿಳಿದರೆ ಇಂದಿನ ಹಾಡುಗಳು ಮೆದುಳಲ್ಲಿ ಮಾತ್ರ ಸೌಂಡ್ ಮಾಡುತ್ತವೆಯೇ ಹೊರತು ಮನಸಿಗೆ ಇಳಿಯುವುದಿಲ್ಲ.
ಅದಕ್ಕೆ ಇರಬಹುದೇನೋ.. ಸಾಹಿತ್ಯ ಕ್ಷೇತ್ರ ಸಿನೆಮಾ ಹಾಡುಗಳನ್ನು ಕಾವ್ಯವೆಂದು ಎಂದೂ ಒಪ್ಪಿಕೊಳ್ಳಲೇ ಇಲ್ಲ. ಈಗೀಗಂತೂ ಸಿನೆಮಾ ಹಾಡುಗಳಲ್ಲಿ ಕಾವ್ಯಾತ್ಮಕ ಅಂಶಗಳೇ ಕಡಿಮೆಯಾಗುತ್ತಿವೆ. ರೂಪಕ ಪ್ರತಿಮೆಗಳ ಮೂಲಕ ಹಾಡು ಹೇಳಬೇಕೆಂದರೂ ರೆಡಿಮೇಡ್ ಸಂಗೀತ ಅದಕ್ಕೆ ಅವಕಾಶ ಕೊಡುವುದಿಲ್ಲ. ಹೀಗಾಗಿ ಈ ಮೀಟರ್ ಹಾಡು ಅಂದರೆ ಮೊದಲೇ ಅಂಗಿ ಹೊಲೆಸಿಕೊಂಡು ನಂತರ ಮನುಷ್ಯನ ಅಂಗಾಂಗ ಬೆಳೆಸಿಕೊಳ್ಳುವಂತಾಗುತ್ತದೆ.
ಮೀಟರ್ ಹಾಡಿನ ಭರಾಟೆಯ ನಡುವೆಯೂ ಜಯಂತ ಕಾಯ್ಕಿಣಿಯಂತವರು ಅಪ್ಪಟ ಕಾವ್ಯಾತ್ಮಕ ಗೀತೆಗಳನ್ನು ಬರೆಯುತ್ತಿರುವುದು ಒಂದಿಷ್ಟು ಸಮಾಧಾನಕರ. ಕನ್ನಡ ಚಲನಚಿತ್ರರಂಗದ ಮೇಲೆ ಬೇರೆ ಭಾಷಾ ಚಿತ್ರಗಳ ದಬ್ಬಾಳಿಕೆ ಹೆಚ್ಚಾಗಿದೆ, ಸಿನೆಮಾ ನಟರು ರಿಯಾಲಿಟಿ ಶೋಗಳಿಗೆ ಹೋಗಿ ಕನ್ನಡ ಸಿನೆಮಾ ನೋಡುವವರೇ ಇಲ್ಲವಾಗಿದೆ.... ಎಂದೆಲ್ಲಾ ಅನ್ಯರ ಮೇಲೆ ಆರೋಪಿಸುವ ಕನ್ನಡ ಚಿತ್ರಬ್ರಹ್ಮರು ಮೊದಲು ಕನ್ನಡ ಪ್ರೇಕ್ಷಕರಿಗೆ ತಾವು ಎಂತಾ ಸಿನೆಮಾ ಕೊಡ್ತಿದ್ದೇವೆ ಹಾಗೂ ಎಂತಾ ಹಾಡುಗಳನ್ನ ಕೇಳಿಸ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ಟ್ಯೂನ್ ಮೋಹಕ್ಕೊಳಗಾಗಿ ಮೀಟರಿಗೆ ಹಾಡು ಬರೆಸಿ ಕಾವ್ಯಾತ್ಮಕತೆಯ ಅಂತಸತ್ವವನ್ನು ಕೊಲ್ಲದೇ ಅಪ್ಪಟ ಸಾಹಿತ್ಯಕ ಹಾಡುಗಳನ್ನು ಬರೆಯಲು ಕವಿಸಾಹಿತಿಗಳಿಗೆ ಪ್ರೋತ್ಸಾಗಿಸಿ ಜನರ ಮನಸ್ಸಿನಲ್ಲಿ ಬಹುಕಾಲ ಉಳಿಯುವಂತಾ ಗೀತೆ ಬರೆಯಿಸಿ ನಂತರ ಅದಕ್ಕೆ ಪೂರಕವಾಗಿ ಸಂಗೀತ ಹೊಂದಾಯಿಸಿ ಹಾಡು ಹುಟ್ಟಲಿ. ಜನರ ಮೆದುಳಲ್ಲಿ ಸದ್ದು ಮಾಡುವ ಕರೋಕೆ ಮಾದರಿ ಹಾಡುಗಳನ್ನು ಬದಿಗಿಟ್ಟು ಕೇಳುಗರ ಅಂತರಾಳಕ್ಕಿಳಿಯುವಂತಾ ಹಾಡುಗಳು ಹುಟ್ಟಿಬರಲಿ. ಅಲ್ಲಿವರೆಗೂ ಜಯಂತ ಕಾಯ್ಕಿಣಿಯವರು ಬರೆದ ಮನಸಿಗೆ ತಟ್ಟುವ ಈ ಹಾಡಿನ ಪಲ್ಲವಿ ಓದಿ ಬಿಡಿ...
"ನೀರಲ್ಲಿ ಸಣ್ಣ ಅಲೆಯೊಂದು ಮೂಡಿ
ಚೂರಾದ ಚಂದ್ರನೀಗ...
ಅಲ್ಲೊಂದು ಚೂರು, ಇಲ್ಲೊಂದು ಚೂರು
ಒಂದಾಗ ಬೇಕು ಬೇಗ....."
- ಶಶಿಕಾಂತ ಯಡಹಳ್ಳಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ