ಶನಿವಾರ, ಅಕ್ಟೋಬರ್ 15, 2016

ತಹ ತಹ.... 25 ಸೈನಿಕರ ಸಾವಿಗೆ ಹೊಣೆಯಾರು?

ತಹ ತಹ.... 25


ಅದ್ಯಾರು ಹೆತ್ತ ಧೀರ ಮಕ್ಕಳೋ
ದೇಶ ಕಾಯುತಲೇ ಸತ್ತರು...
ದೇಶದ ಜನ ನಾಲ್ಕು ದಿನ
ಶೋಕಾಚರಿಸಿ ಅತ್ತರು..

ಇತ್ತ ಅಳುವವರು ಅಳುತಲಿದ್ದರೆ
ಅತ್ತ ಆಳುವವರ ಚದುರಂಗದಾಟ..
ಇತ್ತ ಗಾಯಗಳು ಮಾಯುತ್ತಿದ್ದರೆ
ಅತ್ತ ಮತ್ತೆ ಮತಾಂಧರ ಅಟ್ಟಹಾಸ...

ಸೈನಿಕರೆಂದರೆ ಸಾರ್ವಭೌಮರಲ್ಲ
ಆಳುವವರ ಪರಿಕರಗಳು..
ಮತಾಂಧರೆಂದೂ ಮನುಷ್ಯರಲ್ಲ
ಮತಿಗೆಟ್ಟ ಮನೋವ್ಯಾಧಿಗಳು....

           *  *  *  *

ಮತ್ತೆ ಹೆತ್ತವರ ಆಕ್ರಂದನ ಅನುರಣಿಸಿದೆ. ಹತ್ತಾರು  ಮಹಿಳೆಯರು ವಿಧವೆಯರಾಗಿ ಗೋಳಾಡುತ್ತಿದ್ದಾರೆ. ಪುಟ್ಟ ದೊಡ್ಡ ಮಕ್ಕಳು ತಂದೆಯನ್ನು ಕಳೆದುಕೊಂಡು ತಬ್ಬಲಿಯಾಗಿ ರೋಧಿಸುತ್ತಿವೆ. 'ಉರಿ'ಯಲ್ಲಿ ಬಾಂಬ್ ದಾಳಿಗೆ ಸಿಕ್ಕು ಉರಿದು ಹೋದ ಹದಿನೇಳು ಅಮೂಲ್ಯ ಸೈನಿಕರ ಸಾವು ಇಡೀ ದೇಶಾದ್ಯಂತ ತಲ್ಲಣ ಸೃಷ್ಟಿಸಿದೆ. ದೇಶ ಸೂತಕದ ಮನೆಯಾಗಿದೆ.

ಹಂತಕರ ಕುರಿತು ಎರಡೂ ದೇಶಗಳು ಆರೋಪ ಪ್ರತ್ಯಾರೋಪ ಮಾಡಿಕೊಂಡು ತಣ್ಣಗಾಗುತ್ತವೆ. ನಾಲ್ಕೇ ನಾಲ್ಕು ದಿನದಲ್ಲಿ ದೇಶಕ್ಕೆ ದೇಶ ಮಾಮೂಲಿನಂತೆ ದುರಂತವನ್ನು ಮರೆತು ಬಿಡುತ್ತದೆ. ಧರ್ಮಾಂಧ ಹಂತಕರು ಮುಂದಿನ ಬಲಿಗಾಗಿ ಸಂಚು ರೂಪಿಸತೊಡಗುತ್ತಾರೆ. 

ಇಂತಹ ಕ್ರೌರ್ಯ ಮೊದಲನೆಯದೂ ಅಲ್ಲಾ... ಕೊನೆಯದೂ ಅಲ್ಲಎಲ್ಲಿವರೆಗೂ ದ್ವೇಷ ಮತ್ಸರ ಮತಾಂಧತೆಗಳು ಜಗದಲಿ ಇರುತ್ತವೆಯೋ ಅಲ್ಲಿವರೆಗೂ ರಕ್ತಪಾತ ಎನ್ನುವುದು ನಿರಂತರ. ಎಲ್ಲಿವರೆಗೂ ದೇಶವಾಳುವ ಪ್ರಭುಗಳು ತಮ್ಮ ರಾಜಕೀಯ ಲಾಭಕ್ಕೋಸ್ಕರ ಚದುರಂಗದಾಟ ಆಡುತ್ತಿರುತ್ತಾರೋ ಅಲ್ಲಿವರೆಗೂ  ಸೈನಿಕರ ಸಾವಿಗೆ ಕೊನೆಯಂಬುದಿಲ್ಲ. ಸ್ವಾರ್ಥ ರಾಜಕೀಯದ ಆಟ ಹಾಗೂ ಮತಾಂಧರ ಕಾಟದಿಂದಾಗಿ ದಾಯಾದಿ ದೇಶವಾಸಿಗಳಿಗೆ ನೆಮ್ಮದಿ ಎಂಬುದಿಲ್ಲ.

ಇಷ್ಟಕ್ಕೂ ಸೆಪ್ಟಂಬರ್  18 ರಂದು ಕಾಶ್ಮೀರದ 'ಉರಿ' ಸೈನಿಕ ಶಿಬಿರದಲ್ಲಿ ಹುತಾತ್ಮರಾದ ಹದಿನೇಳು ಜನ ಸೈನಿಕರಿಗೂ ಹಾಗೂ ಅವರನ್ನು ಹತ್ಯೆಮಾಡಿ ಹತ್ಯೆಗೊಂಡ ಭಯೋತ್ಪಾದಕ ಹಂತಕರಿಗೂ ವಯಕ್ತಿಕವಾಗಿ ಯಾವುದೇ ರಾಗದ್ವೇಷಗಳಿಲ್ಲ. ಬಹುಷಃ ಅವರು ಹಿಂದೆ ಎಂದೂ ಪರಸ್ಪರ ಬೇಟಿಯಾದವರೂ ಅಲ್ಲ. ಆದರೂ ಯಾಕೆ ಸಾವಿನಾಟ? 

ಈಗಿರುವ ವಿನಾಶಕಾರಿ ಶಸ್ತ್ರಾಸ್ತ್ರಗಳ ಪೈಪೋಟಿಯಲ್ಲಿ ಹಿಂದೂಸ್ತಾನವೇ ಆಗಲಿ ಇಲ್ಲವೇ ಪಾಕಿಸ್ತಾನವೇ ಆಗಲಿ ಯುದ್ದ ಮಾಡಿ ಗೆಲ್ಲುವ ಸ್ಥಿತಿಯಲಿಲ್ಲ. ಆದರೂ ಮಗ್ಗುಲ ಮುಳ್ಳಂತೆ ಸದಾ ಹಿಂಸಾತ್ಮಕ ಕಿರುಕುಳ ಕೊಡುವುದನ್ನು ಪಾಕಿಸ್ತಾನ ಕೊನೆಗಾಣಿಸುವುದಿಲ್ಲ. ಇಡೀ ಮನುಕುಲದ ಶತ್ರುಗಳಾದ ಮತಾಂಧ ಭಯೋತ್ಪಾದಕರಿಗೆ ಕುಮ್ಮಕ್ಕು ಕೊಡುವುದನ್ನೂ ಪಾಕ್ ನಿಲ್ಲಿಸುವುದಿಲ್ಲ. 

ಕದನಕ್ಕೆ ಪ್ರೇರೇಪಿಸುವ ಗಡಿಗಳು, ಹಿಂಸೆಯನ್ನು ಪ್ರಚೋದಿಸುವ ಧರ್ಮಗಳು ಹಾಗೂ ಹಿಂಸೆ ಪ್ರತಿಹಿಂಸೆಯ ದಳ್ಳುರಿಯಲ್ಲಿ ತಮ್ಮ ರಾಜಕೀಯ ಸ್ವಾರ್ಥ ಕಂಡುಕೊಳ್ಳಲು ಸದಾ ಹವಣಿಸುತ್ತಿರುವ ರಾಜಕೀಯ ನೇತಾರರು ಇರುವವರೆಗೆ ಜಗತ್ತಿನಲ್ಲಿ ಶಾಂತಿ ನೆಮ್ಮದಿ ಎನ್ನುವುದು ಕನಸಿನ ಮಾತು. ಧರ್ಮ ಮತ್ತು ಪ್ರಭುತ್ವದ ಅಸ್ತಿತ್ವದಾಟದಲ್ಲಿ ಇನ್ನೂ ಎಷ್ಟು ಸೈನಿಕರು ಹುತಾತ್ಮರಾಗಬೇಕೋ, ಅದೆಷ್ಟು ಅಮಾಯಕ ಮಹಿಳೆಯರು ವಿಧವೆಯರಾಗಬೇಕೋ, ಇನ್ನೆಷ್ಟು ಮಕ್ಕಳು ಅನಾಥರಾಗಬೇಕೋ ಯಾರಿಗೂ ಗೊತ್ತಿಲ್ಲ. ರಾಜಕೀಯ ಪ್ರೇರಿತ ಮತಾಂಧರ ಅಟ್ಟಹಾಸಕ್ಕಂತೂ ಕೊನೆಮೊದಲಿಲ್ಲ. 

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ