ಶುಕ್ರವಾರ, ಅಕ್ಟೋಬರ್ 14, 2016

ತಹ ತಹ ..... 18 ಕಲಾಕ್ಷೇತ್ರದ ಸುವರ್ಣೋತ್ಸವದ ನಸೀಬೇ ಸರಿಯಿಲ್ಲ. :

ತಹ ತಹ ..... 18




ಅದ್ಯಾಕೋ  ರವೀಂದ್ರ ಕಲಾಕ್ಷೇತ್ರದ ಸುವರ್ಣೋತ್ಸವದ ನಸೀಬೇ ಸರಿಯಿಲ್ಲ. ಅದರ ಸುತ್ತ ಮುತ್ತ ಬರೀ ಪಾಪಿಗಳೇ ತುಂಬಿದರೆ ಇನ್ನೇನಾಗುತ್ತೆ ಎಂದು ಗೊಣಗಿಕೊಂಡವರ ಸಂಖ್ಯೆಯೂ ಕಡಿಮೆಯಿಲ್ಲಬೆಂಗಳೂರಿನ ಕಲಾವಿದರ ಹೆಮ್ಮೆಯ ಕಲಾಸೌಧ ರವೀಂದ್ರ ಕಲಾಕ್ಷೇತ್ರವನ್ನು ಕಟ್ಟಿ 2013 ಕ್ಕೆ ಸರಿಯಾಗಿ ಐವತ್ತು ವರ್ಷಗಳಾಯ್ತು. 50 ನೇ ವರ್ಷದ ಸುವರ್ಣ ಸಂಬ್ರಮವನ್ನು ಅದ್ದೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿತು. ಅದಕ್ಕಾಗಿ ದೊಡ್ಡ ಯೋಜನೆಯನ್ನೂ ರೂಪಿಸಿತು. ಅದಕ್ಕಾಗಿ ಶ್ರೀಮಾನ್ ಕಪ್ಪಣ್ಣನವರ ಅಧ್ಯಕ್ಷತೆಯಲ್ಲಿ  ಸಾಂಸ್ಕೃತಿಕ ಕಮಿಟಿಯನ್ನೂ ನೇಮಿಸಲಾಯ್ತು. ವರ್ಷವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾಕ್ಷೇತ್ರದಲ್ಲಿ ನಡೆಸಲು ಯೋಜನೆ ರೂಪಿಸಲಾಯ್ತು ಕಾರ್ಯಕ್ರಮಕ್ಕೆ ಐದು ಕೋಟಿ ಹಣವನ್ನು ಸರಕಾರ ಮೀಸಲಿಟ್ಟಿದೆಯೆಂದು ಇತ್ತೀಚೆಗೆ ನಡೆದ 'ನೆನಪಿನೋಕಳಿ' ಉದ್ಗಾಟನಾ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದರು. ಆದರೆ ಆರಂಭದಿಂದಲೂ ಯಾವುದೂ ಕಾಲಮಿತಿಯಲ್ಲಿ ನೆಟ್ಟಗೆ ಅನುಷ್ಠಾನಗೊಳ್ಳಲೇ ಇಲ್ಲ. ಕಲಾಕ್ಷೇತ್ರಕ್ಕೆ 51 ತುಂಬಿದಾಗ ಪ್ರತಿ ವರ್ಷ ನಡೆಯುತ್ತಿದ್ದ 'ನಾಟಕ ಬೆಂಗಳೂರು' ನಾಟಕೋತ್ಸವವನ್ನೇ ಬಳಸಿಕೊಂಡು ಐದು ತಿಂಗಳಲ್ಲಿ ಕಂತು ಕಂತಾಗಿ ಐವತ್ತು ನಾಟಕಗಳನ್ನು ಮಾಡಲಾಯ್ತು. ತದನಂತರ ಎರಡು ವರ್ಷ ಏನೂ ಮಾಡದೇ  ಸುಮ್ಮನಿದ್ದು ಈಗ ಯೋಜನೆಗೆ ಮೀಸಲಿಟ್ಟ ಹಣ ಸರಕಾರಿ ಖಜಾನೆಗೆ ವಾಪಸ್ಸಾಗುತ್ತದೆ ಎಂದು ಗೊತ್ತಾಗಿದ್ದೆ ತಡ ಇಲಾಖೆ ಅಧಿಕಾರಿಗಳು ಹಾಗೂ ಸಾಂಸ್ಕೃತಿಕ ಕಮಿಟಿಯವರು 2016 ಮಾರ್ಚ ತಿಂಗಳಿಂದ ಚುರುಕಾದರು ವರ್ಷವಾದರೂ ಮಾರ್ಚನಿಂದ 2017 ಮಾರ್ಚ್ ವರೆಗೂ ಪ್ರತಿ ತಿಂಗಳು ನಿರಂತರವಾಗಿ ಕಂತುಗಳಲ್ಲಿ ಎಲ್ಲಾ ಕಲಾಪ್ರಕಾರಗಳ ಪ್ರದರ್ಶನವನ್ನು ಕಲಾಕ್ಷೇತ್ರದಲ್ಲಿ ಮಾಡಿಸುವ ಯೋಜನೆ ಸಿದ್ದವಾಯ್ತು. ಸಚಿವೆ ಉಮಾಶ್ರೀಯವರೂ ಖುದ್ದಾಗಿ ಆಸಕ್ತಿ ವಹಿಸಿದರು. ಇಲಾಖೆ ನಿರ್ದೇಶಕರು ಹೊಣೆ ಹೊತ್ತರು. ಕಮಿಟಿಯವರು ಸಿದ್ದರಾದರು. ಹಲವಾರು ಪೂರ್ವಭಾವಿ ಮೀಟಿಂಗಳಾದವು. ಹಣ ಇದೆ... ಇಲಾಖೆ ಇದೆ.... ಕಮಿಟಿ ಇದೆ..  ಕಲಾವಿದರಿದ್ದಾರೆ... ಕಲಾಕ್ಷೇತ್ರವೂ ಇದೆ... ಆದರೆ ಕಾರ್ಯಕ್ರಮಗಳು ಶುರುವಾಗಲೇ ಇಲ್ಲ. ಕಲಾಕ್ಷೇತ್ರ 50 ಸಂಭ್ರಮದ ಹೆಸರು ಬದಲಾಯಿಸಿ   "ಐವತ್ತು ಮೀರಿದ ರವೀಂದ್ರ ಕಲಾಕ್ಷೇತ್ರ ಸುವರ್ಣ ಸಂಭ್ರಮ" ಎಂದು ಮರುನಾಮಕರಣ ಮಾಡಿದರೂ ಸಾಂಸ್ಕೃತಿಕ ಉತ್ಸವದ ಉದ್ಘಾಟನೆಗೆ ಇಲಾಖೆ ಮೀನಾಮೇಷ ಎಣಿಸತೊಡಗಿತು. ಎರಡು ಸಲ ಉದ್ಘಾಟನೆಯ ದಿನಾಂಕ ಪಿಕ್ಸಾಗಿ ಕ್ಯಾನ್ಸಲ್ಕಾಯಿತು. ಮೂರನೇ ಸಲವೂ ನಾಳೆ ಸಂಜೆ ಕಾರ್ಯಕ್ರಮ ಶುರುವಾಗುವುದರೊಳಗೇ ಬೆಳಿಗ್ಗೆನೇ ಉಮಾಶ್ರೀ ಮೇಡಂ ಕ್ಯಾನ್ಸಲ್ ಮಾಡಲು ಆದೇಶಿಸಿ ಕಾರ್ಯಕ್ರಮ ಕೊಡಲು ನಾಡಿನ ಮೂಲೆಮೂಲೆಯಿಂದ ಬಂದ ಐನೂರಕ್ಕೂ ಹೆಚ್ಚು ಕಲಾವಿದರಿಗೆ ನಿರಾಸೆಯನ್ನುಂಟು ಮಾಡಲಾಯ್ತು. ಕೊನೆಗೆ ಅಂತೂ ಇಂತೂ ಆಗಸ್ಟ್ 24 ರಂದು ಬಹುತೇಕ  ಕಲಾವಿದರ ಅನುಪಸ್ಥಿತಿಯಲ್ಲಿ....ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸಾಂಸ್ಕೃತಿಕ ದಲ್ಲಾಳಿಗಳ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಗಳಿಂದ  ಅಧೀಕೃತವಾಗಿ ಉದ್ಘಾಟಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಾಯಿತು. 

ಕೊನೆಗೂ ಅದು ಹೇಗೋ ಮೂರು ವರ್ಷಗಳ ನಂತರವಾದರೂ    "ನೆನಪಿನೋಕಳಿ" ಹೆಸರಲ್ಲಿ ಅವಧಿ ಮೀರಿದ ಕಲಾಕ್ಷೇತ್ರ ಸುವರ್ಣ ಸಂಭ್ರಮ ಶುರುವಾಯ್ತಲ್ಲ ಎಂದು ಎಲ್ಲರೂ ನಿಟ್ಟುಸಿರು ಬಿಡುವಷ್ಟರಲ್ಲಿ ಇನ್ನೊಂದು ಸಮಸ್ಯೆ ಶುರುವಾಯಿತು. 

'ಆಯಾ ಕಲಾಪ್ರಕಾರಕ್ಕೆ ಸಂಬಂಧಿಸಿದ ಅಕಾಡೆಮಿಗಳನ್ನು ನಿರ್ಲಕ್ಷಿಸಿ ಸಾಂಸ್ಕೃತಿಕ ಕಮಿಟಿ ಎನ್ನುವ ರಂಗ ಗುತ್ತಿಗೆದಾರರಿಗೆ ಇಡೀ 5 ಕೋಟಿ ಪ್ರಾಜೆಕ್ಟನ್ನು ಸಂಸ್ಕೃತಿ ಇಲಾಖೆ  ಹೊರಗುತ್ತಿಗೆ ಕೊಟ್ಟಿದೆ' ಎಂದು ಆರೋಪಿಸಿದ ಜಾನಪದ ಅಕಾಡೆಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸರವರು ತಗಾದೆ ತೆಗೆದರು. ಪಿಚ್ಚಳ್ಳಿಯವರ ಆರೋಪದಲ್ಲಿ ಸತ್ಯಾಂಶವೂ ಇತ್ತು. 
ಪ್ರತಿ ತಿಂಗಳೂ ಒಂದೊಂದು ಬಗೆಯ ಕಲಾಪ್ರಕಾರಗಳ ಕುರಿತು ಐದು ದಿನಗಳ ಸಾಂಸ್ಕೃತಿಕ ಉತ್ಸವವನ್ನು ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದಂತೆ ಮೊದಲ ಕಂತಿನ ಕಾರ್ಯಕ್ರಮ ಯಕ್ಷಗಾನ ಹಾಗೂ ಜಾನಪದ ಕಲೆಗಳ ಕುರಿತಾಗಿದ್ದು ಸೆಪ್ಟಂಬರ್ 7 ರಿಂದ 11 ವರೆಗೆ ಕಲಾ ಪ್ರದರ್ಶನಗಳು ಆರಂಭವಾಗುತ್ತಿವೆ. ಆದರೆ ಆಯಾ ಕಲಾಪ್ರಕಾರಗಳಿಗೆ ಸಂಬಂದಿಸಿದ ಅಕಾಡೆಮಿಗಳ ಅಧ್ಯಕ್ಷರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದದ್ದು ಸಾಂಸ್ಕೃತಿಕ ಸಮಿತಿಯ ಮೊದಲ ಆದ್ಯತೆಯಾಗಬೇಕಿತ್ತು. ಹಾಗೆ ನೋಡಿದರೆ ಆಯಾ ಅಕಾಡೆಮಿಗಳಿಗೆ  ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸಿ ಪ್ರದರ್ಶಿಸುವ ಹೊಣೆಗಾರಿಕೆಯನ್ನು ಕೊಟ್ಟಿದ್ದರೆ ಹೆಚ್ಚು ಸಾಂವಿಧಾನಕವಾಗುತ್ತಿತ್ತು. ಆದರೆ ಹಾಗೆ ಮಾಡದೇ ಸಾಂಸ್ಕೃತಿಕ ಸಮಿತಿಯೇ ಅಕಾಡೆಮಿಗಳನ್ನು ಅಲಕ್ಷಿಸಿ.. ಅಕಾಡೆಮಿಗಳ ಅಧ್ಯಕ್ಷರನ್ನೂ ನಿರ್ಲಕ್ಷಿಸಿ ತಾವೇ  ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅಕ್ಷಮ್ಯ.

ಹಾಗಾದರೆ ಅಕಾಡೆಮಿಗಳಾದರೂ ಯಾಕಿರಬೇಕು? ಅವುಗಳ ಕೆಲಸದ ಹೊಣೆಯನ್ನು ಹೊರಗಿನ ಗುತ್ತಿಗೆದಾರರಿಗೆ ಹೊರಗುತ್ತಿಗೆ ಕೊಟ್ಟು ಇಲಾಖೆ ತಮ್ಮ ವಂತಿಗೆ ಪಡೆದು ನಿರಾಳವಾಗಿರಬಹುದಲ್ಲಾ. ಸರಕಾರದಿಂದ ನೇಮಕವಾದ ಅಕಾಡೆಮಿಗಳಿಗೆ ಅಧೀಕೃತ ಅಧ್ಯಕ್ಷರು ಹಾಗೂ ಸದಸ್ಯರುಗಳು ಇರುತ್ತಾರೆ . ಅವರ ಕಲಾಪ್ರಕಾರಗಳ ಕುರಿತು ಮಾಹಿತಿ ಹಾಗೂ ಅನುಭವ ಅವರಿಗೆ ಇರುತ್ತದೆ. ಸರಕಾರಿ ಅಕಾಡೆಮಿಗಳನ್ನು ದೂರವಿಟ್ಟು ಇಲಾಖೆಯು ತಮಗೆ ಬೇಕಾದ ಸಾಂಸ್ಕೃತಿಕ ಗುತ್ತಿಗೆದಾರರನ್ನು ಆಯ್ಕೆ ಮಾಡಿ ಸಾಂಸ್ಕೃತಿಕ ಕಮಿಟಿಯೊಂದನ್ನು ರಚಿಸಿ ಅದಕ್ಕೆ ಇಡಿಯಾಗಿ ಐದು ಕೋಟಿಯ ಪ್ರಾಜೆಕ್ಟಿನ ಹೊಣೆಗಾರಿಕೆಯನ್ನು ವಹಿಸಿಕೊಟ್ಟಿದ್ದರ ಹಿಂದಿನ ಮರ್ಮ ಎಲ್ಲರಿಗೂ ಗೊತ್ತಿರುವಂತಹುದೇ. 

ಪಿಚ್ಚಳ್ಳಿ ಸಿಡಿದೆದ್ದಿರುವುದೂ ಇದೇ ಕಾರಣಕ್ಕಾಗಿ. ಕೆಲಸವನ್ನು ಅವರು ಮುಂಚೆನೇ ಮಾಡಬೇಕಿತ್ತು. ಅಕಾಡೆಮಿಗಳನ್ನು ನಿರ್ಲಕ್ಷಿಸಿ ಇಲಾಖೆ ಸರಕಾರೇತರ ಸಾಂಸ್ಕೃತಿಕ ಕಮಿಟಿಗೆ ಪ್ರಾಜೆಕ್ಟ್ ಜವಾಬ್ದಾರಿ ವಹಿಸಿದಾಗಲೇ ವಿರೋಧಿಸಬೇಕಿತ್ತು. ಆಗ ಇದೆಲ್ಲಾ ತಂತ್ರಗಾರಿಕೆ ಅವರ ಅರಿವಿಗೆ ಬರಲೇ ಇಲ್ಲ. ಯಾವಾಗ ಪೂರ್ವಭಾವಿ ಸಭೆಗಳಿಗೂ ಪಿಚ್ಚಳ್ಳಿಯವರನ್ನು ಕರೆಯುವುದನ್ನೇ ಕಪ್ಪಣ್ಣ ನಿಲ್ಲಿಸಿ ಸಂಪೂರ್ಣವಾಗಿ ನಿರ್ಲಕ್ಷಿಸಿದರೊ ಆಗ ಜಾನಪದ ಅಕಾಡೆಮಿಯ ಅಧ್ಯಕ್ಷರು ಎಚ್ಚೆತ್ತುಕೊಂಡು ಹೊರಗುತ್ತಿಗೆ ವಿರುದ್ದ ತಿರುಗಿಬಿದ್ದರು....

 - ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ