ಶನಿವಾರ, ಅಕ್ಟೋಬರ್ 15, 2016

ತಹ ತಹ.....22 ಜ್ಯೋತಿಷಿಗಳೆಂಬ ಶನಿಗಳು ಮತ್ತು ವಾಹಿನಿಗಳೆಂಬ ಕಾಗೆಗಳು

ತಹ ತಹ...22


ನಮ್ಮ ಸರಕಾರಗಳಿಗೆ ನಿಜಕ್ಕೂ ಬುದ್ದಿ ಅನ್ನೋದು ಇಲ್ವೇ ಇಲ್ಲ. ನಿಜ ಹೇಳಬೇಕಂದ್ರೆ ನ್ಯಾಯಾಲಯಗಳ ಅಗತ್ಯವಂತೂ ಮೊದಲೇ ಇಲ್ಲ. ಕಾವೇರಿ ದಳ್ಳುರಿಗೆ ಜಯಲಲಿತಾರವರ ಡಿಮಾಂಡ್ ಕಾರಣ ಅಲ್ಲವೇ ಅಲ್ಲ. ಎಲ್ಲರೂ ಮೂಲ ಕಾರಣ ಬಿಟ್ಟು ಅವರಿವರನ್ನು ದೂಷಿಸುವುದು ತರವಲ್ಲ. ಕಾವೇರಿ ನೀರಿನ ಸಮಸ್ಯೆಯ ಕೇಂದ್ರವಿರುವುದು ಬಿಳಿ ಕಾಗೆ ಎಂಬ ಪರಮ ಸತ್ಯ ಯಾರಿಗೂ ಅರಿವಾಗಲೇ ಇಲ್ಲ. ಎಂತಾ ಪ್ರಮಾದವಾಯ್ತು... 

ಎಲ್ಲಾ ಬಿಟ್ಟು ನಮ್ಮ ಜ್ಯೋತಿಷಿ ಮಹಾರಾಜರ ಮುಂದೆ ದಕ್ಷಿಣೆ ಇಟ್ಟು ಭಯ ಭಕ್ತಿಯಿಂದ ಅಡ್ಡಡ್ಡ ಬಿದ್ದು ಸರಕಾರ ಕೇಳಿದ್ದರೆ ಇಡೀ ಸಮಸ್ಯೆಗೆ ಕಾರಣ ಪರಿಹಾರ ತಕ್ಷಣ ಸಿಗುತ್ತಿತ್ತು. ಅದಕ್ಕೆ ಹೇಳೋದು ನಮ್ಮ ದೇವೇಗೌಡ್ರು, ಯಡಿಯೂರಪ್ಪನವರ ಹಾಗೆ ಎಲ್ಲದಕ್ಕೂ ಜ್ಯೋತಿಷ್ಯ ಭವಿಷ್ಯ ಕೇಳಿ  ಮುಂದೆ ಹೆಜ್ಜೆ ಇಡಬೇಕು ಅಂತಾ. ಆದರೆ ಮಢ್ಯಗಳನ್ನೆಲ್ಲಾ ನಿಷೇಧಿಸಬೇಕು ಅಂತಾ ಕಾನೂನು ತರಲು ಹೊರಟಿದ್ದ ಸಿಎಂ ಸಿದ್ದರಾಮಯ್ಯನವರಿಗೇನು ಗೊತ್ತು ನಮ್ಮ ಜ್ಯೋತಿಷಿಗಳ ಕರಾಮತ್ತು. ಸಿದ್ದಣ್ಣ ಕೇಳದಿದ್ದರೂ ನಮ್ಮ ಜ್ಯೋತಿಷಿಗಳು ಬಿಡಬೇಕಲ್ಲ. ರಾಜ್ಯದ ಮುಖ್ಯಮಂತ್ರಿಗೆ ಹಾಗೂ ರಾಜ್ಯಕ್ಕೆ ಬಂದ ಸಂಕಷ್ಟಗಳಿಗೆ ಕಾರಣ ಏನೂ ಅನ್ನೊದನ್ನ ತಮ್ಮ ಅತೀಂದ್ರಿಯ ಜ್ಞಾನದ ಮೂಲಕ ಸಂಶೋದನೆ ಮಾಡಿ ಕಂಡುಹಿಡಿದ ಜ್ಯೋತಿಷಿ ಮಹಾರಾಜರು ಕಾಗೆ ಕೂರಿಸಿ ಕಾಗೆ ಹಾರಿಸಿದರು. ರಾಜ್ಯಕ್ಕೆ ಕಾಕದೋಷವಿದೆ ಎಂದು ಪಂಚಾಂಗ ನೋಡಿ, ಕವಡೆ ಹಾಕಿ ಹೇಳಿದರು. ಮುಖ್ಯಮಂತ್ರಿ ಕಾರಿನ ಮೇಲೆ ಕರಿ ಕಾಗೆ ಕೂತಿದ್ದರ ಹಿಂದಿನ ಮರ್ಮವನ್ನು ಎಳೆಎಳೆಯಾಗಿ ಬಿಡಿಸಿಟ್ಟು ಸಿಎಂ ಖುರ್ಚಿಗೆ ಕಂಟಕವಿದೆ ಎಂದು ವಾಹಿನಿಗಳೆಂಬ ಕೂಗುಮಾರಿಗಳ ಮೂಲಕ ಗುಲ್ಲೆಬ್ಬಿಸಿದರು. 

ಇಂತಾ ಸುಳ್ಳು ಮೌಡ್ಯಗಳನ್ನೆಲ್ಲಾ ನಂಬೋದಿಲ್ಲವೆಂದು ಸಾರ್ವಜನಿಕವಾಗಿ ಹೇಳುತ್ತಿದ್ದ ಸಿದ್ದರಾಮಯ್ಯನಂತಾ ಸಿದ್ದರಾಮಯ್ಯನವರೇ ಕಾಗೆ ಪ್ರಹಸನದಿಂದ ಅಲ್ಲಾಡಿ ಹೋದರುಅದೇ ಸಮಯಕ್ಕೆ ಮಂತ್ರಿಮಂಡಲದಲ್ಲಿ ಇದ್ದಕ್ಕಿದ್ದಂತೆ ಮೇಜರ್ ಬದಲಾವಣೆ ಮಾಡಿದ್ದರಿಂದ ಅಂಬರೀಶರಾದಿಯಾಗಿ ಮಂತ್ರಿ ಪದವಿ ವಂಚಿತರು ಬಂಡಾಯವೆದ್ದಿದ್ದರು. ಇನ್ನೇನು ಸಿದ್ದಣ್ಣ ಮಾಜಿ ಆಗೇ ಬಿಡುತ್ತಾರೆಂದು ಎಲ್ಲರೂ ಅಂದುಕೊಂಡಿದ್ದರು. ಇದಕ್ಕೆಲ್ಲಾ ಕಾಗೆ ದೋಷವೇ ಕಾರಣವೆಂದು ಮೀಡಿಯಾಂಗ ಹಗಲು ರಾತ್ರಿ ಬಾಯಿಬಡಿದುಕೊಂಡಿತು. ಕೊನೆಗೂ ಮೀಡಿಯಾಭಿಪ್ರಾಯಕ್ಕೆ ಮಣಿದು... ಜ್ಯೋತಿಷಿಗಳ ಪ್ರಕಾಂಡ ಪಾಂಡಿತ್ಯಕ್ಕೆ ಹೆದರಿದ ಸಿಎಂ ಸಾಹೇಬರು ಕಾಗೆ ಕೂತ ಕಾರನ್ನೇ ಬದಲಾಯಿಸಿ ಅಲ್ಲಾಡುತ್ತಿದ್ದ ತಮ್ಮ ಖುರ್ಚಿ ಭದ್ರಪಡಿಸಿಕೊಂಡರು. 

ಕಾಗೆ ದೋಷ ಅಂದ್ರೆ ಸುಮ್ಮನೇನಾ..? 
ಇನ್ಮೇಲೆ ಮುಖ್ಯ ಮಂತ್ರಿ ಇಲ್ಲವೇ ಪ್ರಧಾನ ಮಂತ್ರಿಗಳನ್ನು ಪದಚ್ಯುತ ಗೊಳಿಸಬೇಕೆಂದರೆ ವಿರೋಧ ಪಕ್ಷಗಳು ಹರಸಾಹಸ ಮಾಡೋದೇ ಬೇಕಿಲ್ಲ. ಗುಟ್ಟಾಗಿ ಹೋಗಿ ಯಾಂತ್ರಿಕರಿಂದ ಶತ್ರುನಾಶ ಯಜ್ಞ ಯಾಗಾದಿ ಹೋಮ ಮಾಡಿಸ ಬೇಕಿಲ್ಲ. ಸುಮ್ಮನೇ ಒಂದಿಷ್ಟು ಕಾಗೆಗಳನ್ನು ಶತ್ರುಗಳ ಕಾರಿನ ಮೇಲೆ ರೆಕ್ಕೆ ಮುರಿದು ಕೂಡಿಸಿದರೆ ಸಾಕು. ಮುಂದಿನ ಶತ್ರು ನಾಶ ಕೆಲಸವನ್ನು ಕಾಗೆಗಳೇ ಮಾಡುತ್ತವೆ. ಅವು ಮಾಡದಿದ್ದರೂ ಪರಮ ಪಂಡಿತ ಜ್ಯೋತಿಷಿಗಳು ಹಾಗೂ ಮೀಡಿಯಾಂಗದ ಬ್ರಹಸ್ಪತಿಗಳು ಮಾಡಿಸುತ್ತಾರೆ.

ಹೇಗೋ ಕಾಗೆ ಕೂತ ಕಾರು ಬದಲಾಯಿಸಿದ್ದರಿಂದ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನ ಉಳಿಯಿತು. ಸಧ್ಯ ಕಾಕರಾಯಣ ಕಾಕದೃಷ್ಟಿ ಪರಿಹಾರವಾಯಿತು ಅನ್ನುವದರೊಳಗೆ  ಮತ್ತೆ ಕಾಗೆ ತನ್ನ ಕರಾಮತ್ತು ತೋರಿಸಿಯೇ ಬಿಟ್ಟಿತು.

ಆಗ ಕರಿ ಕಾಗೆಯ ಸರದಿ ಮುಗಿದು ಈಗ ಬಿಳಿ ಕಾಗೇ ತನ್ನ  ಪವಾಡ ಆರಂಭಿಸಿತು. ನೇರವಾಗಿ ಹೋಗಿ ಶ್ರೀರಂಗಪಟ್ಟಣದ ಕಾವೇರಿ ದಂಡೆಯಲ್ಲೇ ಒಕ್ಕರಿಸಿತು. ತದನಂತರ ನೇರವಾಗಿ ತಮಿಳುನಾಡಿನ ಕೊಯಮುತ್ತೂರಿಗೆ ಹೋಗಿ ಹಾರಾಡತೊಡಗಿದರು. ಕಾಗೆಗಳ ಓಡಾಟದ ಕುರಿತೇ  ಅಧ್ಯಯನ ಮಾಡುತ್ತಿರುವ ನಮ್ಮ ಪರಮ ಪ್ರಖ್ಯಾತ ಅಂತರ್ರಾಷ್ಟ್ರೀಯ ಜ್ಯೋತಿಷಿ ಚಂದ್ರಶೇಖರ ಗುರೂಜಿಗಳು ಎಲ್ಲೆಲ್ಲಿ ಯಾವಾಗ ಎಂತಾ ಬಣ್ಣದ ಕಾಗೆ ಕುಳಿತುಕೊಂಡಿದೆ ಎಂಬುದನ್ನು ಪತ್ತೇ ಹಚ್ಚಿದರು. ಕಾವೇರಿ ತೀರದಲ್ಲೆ ಬಿಳಿ ಕಾಗೆಯ ಸುಳಿವು ಕಂಡುಬಂದಿದ್ದರಿಂದ ತಮ್ಮ ಕವಡೆಗಳನ್ನು ಉರುಳಿಸಿ.. ಪಂಚಾಂಗಗಳ ಲೆಕ್ಕಾಚಾರಗಳನ್ನು ಹಾಕಿ ಕೊನೆಗೂ ಒಂದು ನಿರ್ಣಯಕ್ಕೆ ಬಂದರು. ಜನರಿಗೆ ಅಪಾಯ ಕಾದಿದೆ. ಬರ ನೆರೆ ಹಾವಳಿ ಹೆಚ್ಚಾಗ್ತದೆ, ಜನರಲ್ಲಿ ವೈಷಮ್ಯ ಬೆಳೀತದೆ, ಪ್ರಾಕೃತಿಕ ವಿಕೋಪಗಳಾಗ್ತವೆ... ಎಂದೆಲ್ಲಾ ತಮ್ಮ ಆಳವಾದ ಅತೀಂದ್ರೀಯ ಜ್ಞಾನದಿಂದ ಕಂಡುಕೊಂಡರು. ಏನೇನು ಅನಾಹುತಗಳಾಗಲು ಸಾಧ್ಯವೋ ಅವುಗಳ ಲಿಸ್ಟನ್ನು ಕೊಟ್ಟರು. ಎಲ್ಲೇ ಯಾವುದೇ ಅನಾಹುತ ಘಟಿಸಿದರೂ ಮುಂಚೇನೇ ಹೇಳಿದ್ದೆ ಎಂದು ಪುಂಗಲು ಬೇಕಾದಂತೆ ಗುರೂಜಿ ಭವಿಷ್ಯ ಬಾಯಿಂದಾಚೆಗೆ ಬಿತ್ತುಆದರೆ ಕಾಕತಾಳಿಯವೋ ಎಂಬಂತೆ ಸುಪ್ರಿಂ ಕೋರ್ಟ್ ಆರ್ಡರ್ ಕರ್ನಾಟಕದ ವಿರುದ್ದ ಬಂತು... ಇದ್ದಕ್ಕಿದ್ದಂತೆ ಬೆಂಗಳೂರಲ್ಲಿ ದಂಗೆ ದಳ್ಳುರಿ ಶುರುವಾಯಿತು. ಗುರೂಜಿಯ ರೊಟ್ಟಿ ಜಾರಿ ತುಪ್ಪದಲಿ ಬಿತ್ತು..

ಸೆಪ್ಟಂಬರ್ ನಾಲ್ಕರಂದೇ ಬಿಳಿ ಕಾಗೆ ಕೂತಿದ್ದನ್ನು ಕಂಡು ಹಿಡಿದ ಜ್ಯೋತಿಷಿಗೆ ಭವಿಷ್ಯ ಹೇಳಲು ಒಂದುವಾರ ಕಾಲ ಬೇಕಾಯ್ತು.... ಭವಿಷ್ಯ ಹೆಳೋದು ಅಂದ್ರೆ ಸುಮ್ಮನೇನಾ? ಭೂತ ಭವಿಷ್ಯಗಳನ್ನು ಜಾಲಾಡಿ ವರ್ತಮಾನದಲ್ಲಿ ನಿಂತು ಕಂಡದ್ದು ಕಾಣದ್ದನ್ನೆಲ್ಲಾ ಹೇಳೋದು ಅಂದ್ರೆ ಅಷ್ಟೊಂದು ಸರಳಾನಾ? ತಲೆಕೆಟ್ಟ ಬಿಟಿವಿ ಎನ್ನುವ ಹಾರವರ ವಾಹಿನಿಗೆ ಬಿಳಿ ಕಾಗೆ ಕಾ ಕಾ ಅಂದ ಸುದ್ದಿ ತಾನೇ ತಾನಾಗಿ ಗೊತ್ತಾಯಿತೋ, ಇಲ್ಲಾ ಪ್ರಕಾಂಡ ಪಂಡಿತ ಗುರೂಜಿ ಸುದ್ದಿ ಮುಟ್ಟಿಸಿದರೋ, ಇಲ್ಲಾ ಸ್ವಾಮೀಜಿ ಹಾಗೂ ವಾಹಿನಿ ಇಬ್ಬರೂ ಸೇರಿ ಕಥೆ ಕಟ್ಟಿದರೋ ಗೊತ್ತಿಲ್ಲ. ಚಾನೆಲ್ ಟಿಆರ್ಪಿ ಅಲ್ಲಾಡಿ ಚಂದ್ರಶೇಖರರ ಡಿಮ್ಯಾಂಡ್ ಹೆಚ್ಚಾಗಿದ್ದಂತೂ ಸುಳ್ಳಲ್ಲ. 

ನಂತರ ಶುರುವಾಯ್ತು "ಬಿಳಿ ಕಾಗೆ ಭವಿಷ್ಯ" ಹೆಸರಿನ ವಿಲಕ್ಷಣ ಎಪಿಸೋಡ್. ಶರ್ಮಾ ಅನ್ನೊ ಆಂಕರನ ಅಸಡ್ಡಾಳ ಪ್ರಶ್ನೆಗಳಿಗೆ ಸ್ವಘೋಷಿತ ಜ್ಯೋತಿಷಿಯ ಕಾಲ್ಪನಿಕ ಉತ್ತರಗಳು. ಚಾಂಡಾಲ ಶಿಷ್ಯನ ಪ್ರಶ್ನೆಗೆ ಚೋರಗುರುವಿನ ಸಮಜಾಯಿಸಿಗಳು. ಬಿಳಿ ಕಾಗೆ ವಿಷಯ ತಿಳಿದು ರಾಜ್ಯಕ್ಕೆ ರಾಜ್ಯವೇ ಬೆಚ್ಚಿಬಿದ್ದಿತಂತೆ. ಆಳುವ ಮಂತ್ರಿಗಳಿಗೆ ಅಪಾಯ ಗ್ಯಾರಂಟಿಯಂತೆ. ಅರ್ಜೆಂಟಾಗಿ ಮಂತ್ರಿ ಮಾನ್ಯರು ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿಬರಬೇಕಂತೆ... ಎಲ್ಲಾ ಬರೀ ಅಂತೆ ಕಂತೆಗಳ ಸಂತೆ .

ತಿರುಪತಿಗೆ ಯಾಕೆ ಹೋಗಬೇಕು? ಅನ್ನೋದಕ್ಕೂ ಸ್ವಾಮೀಜಿಗಳಲ್ಲಿ ಘನಘೋರ ಸಮಜಾಯಿಸಿ ಇದೆ. ಕಾಗೆ ಶನೀಶ್ವರನ ವಾಹನ. ಶನಿ ಯಾರ ಮಾತನ್ನೂ ಕೇಳುವುದಿಲ್ಲ ವಿಷ್ಣುವಿನ ಹೊರತು. ತಿರುಪತಿ ದೇವರು ವಿಷ್ಣುವಿನ ಅವತಾರ. ಅದಕ್ಕೆ ತಿರುಪತಿಗೆ ಹೋದರೆ ಶನಿ ವಾಹನ ಕಾಗೆದೋಷ ಪರಿಹಾರ ಸಾಧ್ಯ... ಅನ್ನೋದು ಗುರೂಜಿಯ  ವಿತಂಡವಾದ. 

ಕರ್ನಾಟಕದ ಕಾವೇರಿ ಬರ್ನಿಂಗ್ ಇಸ್ಯೂಗೆ ಅದು ಹೇಗೋ ಗುರೂಜಿ ದಯದಿಂದ ಕಾರಣ ತಿಳೀತು. ಈಗ ಕಾವೇರಿ ಸಮಸ್ಯೆಗೆ ಪರಿಹಾರವೂ ಅವರದೇ ಪರಮ ಪವಿತ್ರ ಬಾಯಿಂದ ವಾಂತಿಯಾಗಿದ್ದನ್ನು ಚಾನೆಲ್ಲಿನವರು ಹೆಕ್ಕಿ ಹೆಕ್ಕಿ ತೋರಿಸಿ ನೋಡುಗರನ್ನು ಪಾವನಗೊಳಿಸಿದರು. ಕಾವೇರಿ ತೀರ್ಪು ಕರ್ನಾಟಕದ ರೈತರ ಪರವಾಗಿ ಬರಬೇಕಾದರೆ " ತ್ರೈಲೋಕ್ಯ ವಶೀಕರಣ ವಿಷ್ಣು ಯಾಗ" ಮಾಡಬೇಕಂತೆ. ಹೋಮ ಹವನದಲ್ಲಿ ಸರಕಾರವೂ ಪಾಲ್ಗೊಳ್ಳಬೇಕಂತೆ. ಆಗ ನೋಡಿ ಎಲ್ಲವೂ ಸರಿಹೋಗಿ ನಾಡು ಸುಭಿಕ್ಷೆಯಾಗುತ್ತದಂತೆ. 

ಅದಕ್ಕೆ ಹೇಳಿದ್ದು ಇಂತಹ ಪರಮ ಜ್ಞಾನಿ, ಪ್ರಕಾಂಡ ಜ್ಯೋತಿಷಿಗಳು ಇರುವಾಗ  ನ್ಯಾಯಾಲಯಕ್ಕೆ ಹೊಗೋದ್ಯಾಕೆನ್ಯಾಯಾಧೀಶರ ಮರ್ಜಿ ಕಾಯೋದ್ಯಾಕೆ? ಸುಮ್ಮನೆ ವಕೀಲ ನಾರಿಮನ್ ಹಾಗೂ ತಂಡಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡೋದಾದರೂ ಯಾಕೆನಮ್ಮ ಸರಕಾರ ಗುರುಗಂಟಾಲ ಚಂಡಾಲ ಸಂತತಿಯವರಿಗೆ ಯಾಗದ ಗುತ್ತಿಗೆ ಕೊಟ್ಟಿದ್ದರೆ ಸಾಕಿತ್ತು. ಹೋಮ ಹವನ ಮಾಡಿ ನ್ಯಾಯ ನಿರ್ಣಯ ನಮ್ಮ ಪರವಾಗಿ ಬರುವಂತೆ ಮಾಡಿಕೊಳ್ಳಬಹುದಿತ್ತು. ಕೋಟಿಗಳ ಖರ್ಚು ಉಳಿದು ಲಕ್ಷಗಳಲ್ಲಿ ಪ್ರಾಬ್ಲೆಂ ಪರ್ಮನೆಂಟಾಗಿ ಸಾಲ್ವಾಗಿ ಬಿಡುತ್ತಿತ್ತು. 

ಥೂ... ಇವನ ಪಿಂಡಾ ನಾಯಿ ನರಿ ತಿನ್ನಾ. ಇವನು ಹಾಗೂ ಇವನಂತಾ ಕಳ್ಳ ಜೋತಿಷಿಗಳು ಇಂತಾ ಹಸಿ ಸುಳ್ಳು ಸುದ್ದಿ ಹಬ್ಬಿಸಿ ಅದೆಷ್ಟು ಮನೆ ಹಾಳು ಮಾಡಿದ್ದಾರೋ... ಜನರಲ್ಲಿರುವ ಅಭದ್ರತೆ.. ಅನಾರೋಗ್ಯ ಮುಂತಾದ ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಂಡು ಅದೆಷ್ಟು ಜನರಿಗೆ ಟೋಪಿ ಹಾಕಿ ದಕ್ಷಿಣೆ ಜೊತೆ ಅದು ಇದು ಲೂಟಿ ಮಾಡಿದ್ದಾರೋ? ಇಂತಾ ಹಲಾಲುಕೋರರನ್ನು ದಿನನಿತ್ಯ ಟಿವಿ ಯಲ್ಲಿ ತೋರಿಸಿ ಸುಳ್ಳು ಜ್ಯೋತಿಷ್ಯ ಭವಿಷ್ಯ ಹೇಳುವ ನೆಪದಲ್ಲಿ ಭಯ ಭಕ್ತಿ ಹುಟ್ಟಿಸುವ ಹಡಬೆ ವಾಹಿನಿಗಳು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲು ಅದೆಷ್ಟು ಜನರ ತಲೆಯಲ್ಲಿ ಮೌಡ್ಯವನ್ನು ಬಿತ್ತಿ ಬೆಳೆಯುತ್ತಿವೆಯೋ? ದಲ್ಲಾಳಿ ಗುರುಗಳು, ದಗಲ್ಬಾಜಿ ಸ್ವಾಮಿಗಳು ಹಾಗೂ ಲಾಭಕೋರ ಚಾನೆಲ್ಲಗಳು ಸೇರಿ ಜನರನ್ನ ವಂಚಿಸೋದನ್ನೆ ದಂದೆ ಮಾಡಿಕೊಂಡಿರುವಾಗ ಕರಿ ಬಿಳಿ ಕಾಗೆಗಳೂ ದುರಂತದ ಸಂಕೇತಗಳಾಗುತ್ತವೆ. ಹಲ್ಲಿ ಬೆಕ್ಕುಗಳಂತಾ ನಿರುಪದ್ರವಿ ಜೀವಿಗಳೂ ಮನುಷ್ಯಕಂಟಕಗಳಾಗುತ್ತವೆ

ನಿಜವಾಗಲೂ ಶನಿ ಅನ್ನುವವನು ಇದ್ದಾನೋ ಇಲ್ಲವೋ ಯಾರಿಗೂ ಪಕ್ಕಾ ಗೊತ್ತಿಲ್ಲ. ಕಾಗೆ ಮೇಲೆ ಶನೇಶ್ವರ ಕೂತು ಹಾರಿದ್ದನ್ನಂತೂ ಯಾರೂ ನೋಡಿಲ್ಲ. ಆದರೆ ಬಾಯ್ಬಿಟ್ಟರೆ ಸುಳ್ಳು ಹೇಳುವ ಶನಿ ಸಂತಾನಗಳಾದ ಜ್ಯೊತಿಷಿಗಳು, ಸ್ವಾಮಿಗಳು, ಬಾಬಾಗಳು ನಾಡಿಗೂ ಹಾಗೂ ಪ್ರಜೆಗಳಿಗೂ ಶನಿಯಂತೆ ಹಿಂದೆ ಬಿದ್ದು ಕಾಡುತ್ತಿರುವುದಂತೂ ಸತ್ಯ. ಶನಿದೇವರ ಹೊತ್ತೊಯ್ಯುವ ವಾಹನ ಕಾಗೆಯಾಗಿದ್ದರೆ... ವಾಹಿನಿಗಳೆಂಬ ಕಾಗೆಗಳು ಶನಿಸಂತಾನಿಗಳನ್ನು ತಮ್ಮ ಹೆಗಲಮೇಲೆ ಹೊತ್ತುಕೊಂಡು ಬೆಳ್ಳಂಬೆಳಿಗ್ಗೆ  ಟಿವಿ ಡಬ್ಬದಲ್ಲಿ ಕೂತು ಕಾ ಕಾ ಕಾವ್ ಎನ್ನತೊಡಗುತ್ತವೆ. ವಾಹಿನಿಯ ಕಾಗೆಗಳು ತೋರುವ ಶನಿಗಳನ್ನು.... ಶನಿಗಳು ಹೇಳುವ ಸುಳ್ಳುಗಳನ್ನು ಕೇಳಿ ನೋಡಿ ರಾಜ್ಯದ ಜನತೆ ಭಯಪಟ್ಟುಕೊಂಡು ಶನಿಸಂತಾನಗಳು ಸೂಚಿಸುವ ಯಜ್ಞ ಯಾಗ ಪೂಜೆ ವೃತಗಳ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಪುರೋಹಿತಶಾಹಿ ಶನಿ ಸಂತಾನಕ್ಕೂ ಲಾಭ... ಜೊತೆಗೆ ವಾಹಿನಿಗಳೆಂಬ ಬಾಯಿಬಡುಕ ಕಾಗೆಗಳಿಗೂ ಲಾಭ. ಹೇಗಿದೆ ನೋಡಿ ವಂಚಕರ ಸಂಚು... ಒಂಚೂರು ಯಾಮಾರಿದ್ರೆ ನಿಮ್ಮ ಮನೆಯ ಟಿವಿ ಡಬ್ಬಾದೊಳಗೆ ಬಂದು ಬರೀ ಕರಿ ಬಿಳಿ ಕಾಗೆಗಳಲ್ಲ, ಬಣ್ಣ ಬಣ್ಣದ ಕಾಗೆ ಹಾರಿಸ್ತಾರೆ ಹುಷಾರ್....

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ