ಸೋಮವಾರ, ಅಕ್ಟೋಬರ್ 31, 2016

ತಹ ತಹ.....54 'ಅಕ್ಕ' ಅವಕಾಶ ವಂಚಿತ ದಲಿತ ಕಲಾವಿದರು ಸಿಂಗಾಪುರಕ್ಕೆ :


ನಿಜಕ್ಕೂ ಇದೊಂದು ಸಂತಸದ ಸಂಗತಿಯಾಗಿದೆ. ಅಮೇರಿಕದ ಅಕ್ಕ ಸಮ್ಮೇಳನದಲ್ಲಿ ಸೆಪ್ಟಂಬರ್ 2 ರಂದು ಕಲಾ ಪ್ರದರ್ಶನ ನೀಡಲು ಆಯ್ಕೆಯಾಗಿದ್ದ ನೂರು ಜನ ದಲಿತ ಸಮುದಾಯದ ಕಲಾವಿದರುಗಳು ರಾಜಕಾರಣದ ವಿಳಂಬ ನೀತಿಗೆ ಬಲಿಯಾಗಿ ವೀಸಾ ಸಿಗದೇ ಅಮೇರಿಕದ ಆಸೆಗೆ ಎಳ್ಳುನೀರು ಬಿಟ್ಟು ನಿರಾಶೆ ಹೊಂದಿದ್ದರು. ಅದರಲ್ಲಿ ಆಯ್ದ ಅರವತ್ತು ಜನರು ಈಗ ಸಿಂಗಾಪುರಕ್ಕೆ ಹೋಗುತ್ತಿದ್ದಾರೆ. ಅಕ್ಟೋಬರ್ 29 ಮತ್ತು 30 ರಂದು ಸಿಂಗಾಪೂರದಲ್ಲಿ ನಡೆಯುತ್ತಿರುವ 20 ನೇ ವರ್ಷದ ಕನ್ನಡ ಸಮ್ಮೇಳನದಲ್ಲಿ ದಲಿತ ಸಮುದಾಯದ ಕಲಾವಿದರು ಕಲಾ ಪ್ರದರ್ಶನ ನೀಡಲು ಈಗಾಗಲೇ ಸಿಂಗಾಪುರ ತಲುಪಿದ್ದಾರೆ. ಇದನ್ನೊಂದು ಐತಿಹಾಸಿಕ ಸಾಧನೆ ಎಂದು ಕಲಾವಿದರ ಉಸ್ತುವಾರಿ ಹೊತ್ತ ಕಲಾರತ್ನ ಕಪ್ಪಣ್ಣರವರು ಹೇಳಿಕೊಂಡಿದ್ದಾರೆ.

ಆದರೆ... ಕಲಾವಿದರಿಗೆ ಸಿಂಗಾಪುರದ ದರ್ಶನ ಭಾಗ್ಯಕ್ಕೆ ಪರೋಕ್ಷವಾಗಿ ಚಾಲನೆ ಕೊಟ್ಟಿದ್ದು ಡಾ.ವಿಜಯಮ್ಮನವರು. ಅಕ್ಕ ಸಮ್ಮೇಳನದಲ್ಲಿ ಅವಕಾಶವಂಚಿತರಾದ ದಲಿತ ಕಲಾವಿದರ ಬಗ್ಗೆ ವಿಸ್ತೃತವಾದ ಲೇಖನವನ್ನು ನಾನು ಬರೆದಿದ್ದೆ. ಅದರ ಹಿಂದೆ ಯಾರ್ಯಾರ ಕೈವಾಡ ಇತ್ತು ಎಂಬುದನ್ನೆಲ್ಲಾ ವಿವರಿಸಿದ್ದೆ. ಲೇಖನ ಓದಿ ಮೊಟ್ಟ ಮೊದಲು ಕಲಾವಿದರಿಗಾದ ಅನ್ಯಾಯದ ಕುರಿತು ಬೇಸರ ವ್ಯಕ್ತಪಡಿಸಿದವರು ಹಿರಿಯ ಜೀವ ವಿಜಯಮ್ಮನವರು. ಎಲ್ಲರಂತೆ ಲೇಖನ ಓದಿ ಸುಮ್ಮನಿರಲು ಸಾಧ್ಯವಾಗದೇ ತಳಮಳಿಸಿದ ರಂಗಜೀವ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ದಯಾನಂದರವರು ಹಾಗೂ ಸಚಿವೆ ಉಮಾಶ್ರೀರವರೊಂದಿಗೆ ಪೋನಲ್ಲಿ ಮಾತಾಡಿದರು. ದಲಿತ ಕಲಾವಿದರಿಗಾದ ಅನ್ಯಾಯವನ್ನು ಹೇಗಾದರೂ ಮಾಡಿ ಸರಿಪಡಿಸಲು ಕೇಳಿಕೊಂಡರು. ಅಮೇರಿಕಕ್ಕೆ ಕಳಿಸಲು ಸಾಧ್ಯವಾಗದಿದ್ದರೂ ಇನ್ಯಾವುದಾದರೂ ದೇಶಕ್ಕೆ ಕಲಾವಿದರನ್ನು ಕಳಿಸುವ ವ್ಯವಸ್ಥೆ ಮಾಡಲು ಮನವಿ ಮಾಡಿಕೊಂಡರು. ವಿಜಯಮ್ಮನವರ ಸಲಹೆಯನ್ನು ಮೊದಲ ಆದ್ಯತೆಯ ಮೇಲೆ ಜಾರಿಗೊಳಿಸಲು  ದಯಾನಂದರವರು ಕಾರ್ಯಪ್ರವೃತ್ತರಾದರು. ಸಿಂಗಾಪುರದ ಕನ್ನಡ ಸಮ್ಮೇಳನಕ್ಕೆ ಕಲಾವಿದರನ್ನು ಕಳುಹಿಸುವ ಪ್ರಪೋಸಲ್ ಸಿದ್ದಮಾಡಿದರು. ಹೇಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಆಂಜನೇಯರವರು ಕಲಾವಿದರ ಖರ್ಚುಗಳನ್ನು ಕೊಡುವುದಾಗಿ ಮೊದಲೇ ಘೋಷಿಸಿದ್ದರು. ವಿಜಯಮ್ಮನವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳುವ ಸಲುವಾಗಿಯಾದರೂ ಪ್ರಪೋಸಲ್ಲಿಗೆ ಒಪ್ಪಿಕೊಂಡರು. ಮತ್ತೆ ಯಥಾವತ್ತಾಗಿ ವಿದೇಶದ ಕನ್ನಡ ಸಂಘಕ್ಕೂ ಹಾಗೂ ಕಲಾವಿದರಿಗೂ ಮಧ್ಯವರ್ತಿಯಾಗಿರುವ ಕಪ್ಪಣ್ಣನವರಿಗೆ ಪ್ರಾಜೆಕ್ಟಿನ ಉಸ್ತುವಾರಿಯನ್ನು ವಹಿಸಿಕೊಡಲಾಯಿತು. ಸಿಂಗಾಪುರಕ್ಕೆ ವೀಸಾ ಸಿಗೋದು ಅಂತಹ ಕಷ್ಟವೇನಲ್ಲ. ಸುಲಭವಾಗಿ ಎಲ್ಲಾ ವ್ಯವಸ್ಥೆಗಳಾದವು. ದೂರದ ಅಮೇರಿಕಕ್ಕೆ ಹೋಗಲಾಗದಿದ್ದರೂ ನೆರೆಯಲ್ಲಿರುವ ಸಿಂಗಾಪುರಕ್ಕಾದರೂ ಹೋಗಿ ಕಲಾ ಪ್ರದರ್ಶನ ಕೊಟ್ಟ ಸಣ್ಣ ಸಮಾಧಾನ ನಮ್ಮ ದಲಿತ ಕಲಾವಿದರಿಗೆ ದಕ್ಕಿದಂತಾಯಿತು.

ಆದರೆ ನೂರು ಜನರಲ್ಲಿ ಕೇವಲ ಅರವತ್ತು ಜನರಿಗೆ ಸಿಂಗಾಪೂರದ ಅವಕಾಶ ದೊರೆಯಿತು. ಬಾಕಿ ನಲವತ್ತು ಕಲಾವಿದರಿಗೆ ನಿಟ್ಟುಸಿರೇ ಗತಿಯಾಯಿತು. ಅಕ್ಕ ಸಮ್ಮೇಳನಕ್ಕೆ ಅವಕಾಶ ವಂಚಿತರನ್ನಾಗಿ ಮಾಡಿದ ಇಲಾಖೆ ಹಾಗೂ ವ್ಯವಸ್ಥಾಪಕರಾದ ಕಪ್ಪಣ್ಣನವರ ಬಗ್ಗೆ ಕೆಲವು ಕಲಾವಿದರು ಆಗ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಂತವರಿಗೆ ಸಿಂಗಾಪುರಕ್ಕೆ ಹೋಗುವ ಅವಕಾಶವನ್ನು ತಪ್ಪಿಸಿ ಸೇಡು ತೀರಿಸಿಕೊಳ್ಳಲಾಯಿತೆಂದು ಅವಕಾಶವಂಚಿತ ಕಲಾವಿದರು ಮಾತಾಡಿಕೊಳ್ಳುತ್ತಿದ್ದಾರೆ. ಇನ್ನು ಸಾಣೇಹಳ್ಳಿ ಸ್ವಾಮಿಗಳು ಕಪ್ಪಣ್ಣನವರ ಆಹ್ವಾನವನ್ನು ನಂಬಿ ದಲಿತ ಕಲಾವಿದರುಗಳನ್ನ ಸೇರಿಸಿ ಐದು ಲಕ್ಷ ಖರ್ಚು ಮಾಡಿ ಎರಡು ನಾಟಕ ನಿರ್ಮಿಸಿದ್ದರು. ಯಾವಾಗ ವೀಸಾ ನೆಪದಲ್ಲಿ ಅಮೇರಿಕಕ್ಕೆ ಹೋಗುವುದು ಕ್ಯಾನ್ಸಲ್ ಆಯಿತೋ ಆಗ ಸ್ವಾಮಿಗಳು ಗರಂ ಆದರು. ಕಲಾವಿದರ ವೀಸಾಗೆ ಕೊಟ್ಟ ಎರಡು ಲಕ್ಷ ರೂಪಾಯಿಗಳನ್ನು ವಾಪಸ್ ಕೊಡಿಸದಿದ್ದರೆ ಕೇಸ್ ಹಾಕಲಾಗುವುದೆಂದು ಶ್ರೀಮಠ ಒತ್ತಡ ತಂದಿತು. ಮಠದವರ ಸಹವಾಸವೇ ಬೇಡವೆಂದುಕೊಂಡ ಇಲಾಖೆ ಸಿಂಗಾಪುರಕ್ಕೆ ಹೋಗುವುದನ್ನು ಸಾನೇಹಳ್ಳಿಯವರಿಗೆ ತಿಳಿಸಲೇ ಇಲ್ಲ. ಯಾರು ಉಸಿರೆತ್ತದೇ ಆದ ಅವಮಾನವನ್ನು ಸಹಿಸಿಕೊಂಡಿದ್ದರೋ ಅವರಿಗೆ ಸಿಂಗಾಪುರ ಭಾಗ್ಯ ದೊರಕಿಸಿಕೊಟ್ಟು ಪ್ರತಿಭಟಿಸಿದವರನ್ನು ನಿರ್ಲಕ್ಷಿಸಿದ್ದೇ ಅಕ್ಷಮ್ಯ. ಇಷ್ಟಕ್ಕೂ ರಂಗಭೂಮಿಯ ಕಲಾರತ್ನ ಬಿರುದಾಂಕಿತ ಶ್ರೀಮಾನ್ ಕಪ್ಪಣ್ಣನವರು ರಂಗಭೂಮಿಯ ಕಲಾವಿದರನ್ನು ನಿರ್ಲಕ್ಷಿಸಿ ಕೇವಲ ಜಾನಪದ ಕಲಾವಿದರನ್ನು ಸಿಂಗಾಪುರಕ್ಕೆ ಕಳಿಸಿದ್ದು ಅವರ ಅನುಕೂಲಸಿಂಧು ರಾಜಕಾರಣಕ್ಕೆ ಸಾಕ್ಷಿಯಾಗಿದೆ.


 
ಶೀರ್ಷಿಕೆ ಸೇರಿಸಿ
ಕನಿಷ್ಟ ಅರವತ್ತು ದಲಿತ ಕಲಾವಿದರಿಗಾದರೂ ವಿದೇಶ ಪ್ರವಾಸ ಯೋಗ ದೊರೆಯಿತಲ್ಲ ಎನ್ನುವ ಸಮಾಧಾನ ಮಾಡಿಕೊಳ್ಳಬೇಕಿದೆ. ಆದರೆ ಕಲಾವಿದರಿಗೆ ದೊರೆತ ಅವಕಾಶಕ್ಕೆ ಮೂಲ ಕಾರಣೀಬೂತರಾದ ಡಾ.ವಿಜಯಮ್ಮನವರಿಗೆ ಹಾಗೂ ಅವರ ಸಲಹೆಯನ್ನು ಕಾರ್ಯರೂಪಕ್ಕೆ ತಂದ ಇಲಾಖೆಯ ನಿರ್ದೇಶಕರಾದ ದಯಾನಂದರವರಿಗೆ ಅಭಿನಂದನೆ ಹೇಳಲೇಬೇಕಿದೆ. ಇನ್ನು ಬಾಕಿ ಉಳಿದ ನಲವತ್ತು ಕಲಾವಿದರನ್ನೂ ಸಹ ಇನ್ಯಾವುದಾದರೂ ದೇಶದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಳುಹಿಸಿ ಅವಕಾಶ ಕೊಡಿಸುವ ಕೆಲಸವನ್ನು ಸಂಸ್ಕೃತಿ ಇಲಾಖೆ ಮಾಡಲೇಬೇಕಿದೆ. ಅವಕಾಶ ವಂಚಿತ ಸಮುದಾಯ ಸರಕಾರದ ಯೋಜನೆಗಳ ಫಲವನ್ನು ಪಡೆಯಬೇಕಿದೆ. ಸಾಧ್ಯವಾದಷ್ಟೂ ಕನ್ನಡ ರಂಗಭೂಮಿಯ ಕಲಾವಿದರಿಗೆ ಹೆಚ್ಚು ಅವಕಾಶಗಳು ದೊರೆಯಬೇಕಿದೆ. 


                                      - ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ