ತಹ ತಹ..... 20
ಮೇನಿಯಾ ಅಂದ್ರೇನೇ ಹೀಗೆ? ದಾರಿ ಗುರಿ ಸಿದ್ದತೆ ಬದ್ದತೆ ಎಂತದೂ ಬೇಕಾಗಿಲ್ಲ. ಉನ್ಮಾದವೆಂಬುದು ಹೇಗೆ ಇದ್ದಕ್ಕಿದ್ದಂತೆ ಬುಗಿಲೆದ್ದು ಹಿಂಸೆಯತ್ತ ತಿರುಗಿ ಅನಾಹುತಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಸೆಪ್ಟಂಬರ್ 12 ರಂದು ಬೆಂಗಳೂರಲ್ಲಿ ನಡೆದ ಸರಣಿ ದುರಂತ ಘಟನೆಗಳೇ ಸಾಕ್ಷಿ. ಅಂತರಂಗದ ಸಾಕ್ಷೀಪ್ರಜ್ಞೆಯನ್ನು ಕಳೆದುಕೊಂಡ ಉನ್ಮಾದ ಪೀಡಿತ ಕೆಲವು ಯುವಕರ ಗುಂಪು ರಾಜಧಾನಿಯನ್ನು ರಣರಂಗವಾಗಿಸಿತು. ಅನಿರೀಕ್ಷಿತ ದೊಂಬಿಯ ಕುರಿತು ಕನಿಷ್ಟ ಸುಳಿವೂ ಇಲ್ಲದ ಲಕ್ಷಾಂತರ ಜನರು ಹಾಗೂ ಶಾಲೆಗೆ ಹೋದ ಮಕ್ಕಳು ತೀವ್ರವಾದ ಸಂಕಷ್ಟಕ್ಕೀಡಾದರು.
ಅತ್ತ ಸುಪ್ರಿಂ ಕೋರ್ಟು ಸೆಪ್ಟಂಬರ್ 20 ರ ವರೆಗೆ ದಿನಕ್ಕೆ 12 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಬಿಡಲು ಆದೇಶಿಸಿದ್ದೇ ಇತ್ತ ಬೆಂಗಳೂರಿನ ಬೀದಿಗಳಲ್ಲಿ ಬೆಂಕಿ ಬೀಳಲು ಕಾರಣವಾಯ್ತು. ಪ್ರತಿ ಬಡಾವಣೆಯಲ್ಲಿನ ಕೆಲ ಯುವಕರ ಮೈಯಲ್ಲಿ ನೆಲ ಜಲದ ಬಗ್ಗೆ ದಿಡೀರ್ ಅಭಿಮಾನ ಉಕ್ಕೇರತೊಡಗಿತು. ಬೀದಿಗಿಳಿದ ಈ ಪಡೆ ಅಂಗಡಿ ಕಛೇರಿಗಳನ್ನು ಬಲವಂತವಾಗಿ ಮುಚ್ಚಿಸುವ ಮಹತ್ಕಾರ್ಯಕ್ಕೆ ಮುಂದಾಯಿತು. ಮುಖ್ಯ ರಸ್ತೆಗಳಲ್ಲಿ ಟೈಯರಗಳನ್ನು ಹಾಕಿ ಬೆಂಕಿ ಹಚ್ಚಿ ಭಯದ ವಾತಾವರಣ ಸೃಷ್ಟಿಸಲಾಯಿತು. ತಮಿಳು ನಾಡಿನ ಬಸ್ಸು ಲಾರಿ ಕಾರುಗಳನ್ನು ತಡೆದು ಚಾಲಕರ ಮೇಲೆ ಹಲ್ಲೆ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಲಾಯಿತು.
ಇಷ್ಟೆಲ್ಲಾ ವಿರೋಚಿತ ಸಾಹಸ ಮಾಡಿ ತಮ್ಮ ಪ್ರತಾಪವನ್ನು ಅಮಾಯಕ ಜನರ ಮೇಲೆ ತೋರಿಸಿದ್ದು ಕನ್ನಡಪರ ಸಂಘಟನೆಗಳೆಂಬುದು ಗಮನಾರ್ಹ. ನಿಜವಾಗಿಯೂ ಕನ್ನಡದ ಭಾಷೆ ನೆಲ ಜಲದ ಮೇಲೆ ಅಭಿಮಾನವಿದ್ದರೆ ಕನ್ನಡಿಗರಿಗೆ ಹೀಗೆಲ್ಲಾ ತೊಂದರೆ ಕೊಡುತ್ತಿರಲಿಲ್ಲ. ಕನ್ನಡಿಗರ ಮಕ್ಕಳು ಶಾಲೆ ಬಿಟ್ಟು ರಸ್ತೆಯಲ್ಲಿ ಹೆತ್ತವರೊಡನೆ ಭಯಭೀತರಾಗಿ ನಿಲ್ಲುತ್ತಿರಲಿಲ್ಲ. ಬಸ್ಸು ಆಟೋಗಳು ಸಿಗದೇ ಲಕ್ಷಾಂತರ ಕನ್ನಡಿಗರು ರಸ್ತೆಯಲ್ಲಿ ನಿಂತು ಮನೆ ತಲುಪಲು ಪರದಾಡುತ್ತಿರಲಿಲ್ಲ. ಅದೆಷ್ಟೋ ಜನ ಕೈಯಲ್ಲಿ ಜೀವ ಹಿಡಿದು ಸುರಕ್ಷಿತ ಜಾಗ ತಲುಪಲು ಹರಸಾಹಸ ಮಾಡುತ್ತಿರಲಿಲ್ಲ. ಪರ ರಾಜ್ಯದ ಮೇಲಿನ ಆಕ್ರೋಶಕ್ಕೆ ನಮ್ಮದೇ ಜನರಿಗೆ ತೊಂದರೆ ಕೊಡುವುದಂತೂ ಖಂಡಿತಾ ಕನ್ನಡ ಪ್ರೇಮವಲ್ಲ.
ಇಷ್ಟಕ್ಕೂ ಬೆಂಗಳೂರಿಗೆ ಬೆಂಕಿ ಹಾಕಿದವರು ಯಾರು? ಈ ಅಗ್ನಿಕಾಂಡಕ್ಕೆ ನಿರ್ದಿಷ್ಟ ನಾಯಕತ್ವವೆಂಬುದಿಲ್ಲ. ಬಿಡಿ ಬಿಡಿ ಗುಂಪುಗಳು, ಪುಡಿ ತಂಡಗಳು ತಮ್ಮ ವಿರಾಟರೂಪವನ್ನು ತೋರಿಸಲು ಕೋರ್ಟ್ ಆದೇಶವನ್ನು ನೆಪ ಮಾಡಿಕೊಂಡರು. ಇದರಲ್ಲಿ ರೋಲಕಾಲ್ ಕನ್ನಡಿಗರ ಪಾತ್ರವೇ ಹೆಚ್ಚಾಗಿತ್ತು. ನವೆಂಬರ್ ಕನ್ನಡಿಗರು ರಾಜಧಾನಿಯಲ್ಲಿ ಬೇಕಾದಷ್ಟಿದ್ದಾರೆ. ಆಯಾ ಬಡಾವಣೆಗಳಲ್ಲಿರುವ ಕೆಲವು ಯುವಕರು ಸೇರಿ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿ ತಮ್ಮ ಏರಿಯಾಗಳಲ್ಲಿ ಐಡೆಂಟಿಟಿ ಪಡೆಯಲು ಪ್ರಯತ್ನಿಸುತ್ತಾರೆ. ರಾಜ್ಯೋತ್ಸವದ ಆಚರಣೆಗೆ ಬೇಕಾದ ಹಣವನ್ನು ಆ ಏರಿಯಾದ ಜನರಿಂದ ಕೇಳಿ ಕೊಡದಿದ್ದರೆ ಬಲವಂತವಾಗಿ ವಸೂಲಿ ಮಾಡಲಾಗುತ್ತದೆ. ಕಲೆಕ್ಟಾದ ಮೊತ್ತದಲ್ಲಿ ಒಂದಿಷ್ಟನ್ನು ಖರ್ಚುಮಾಡಿ... ಇನ್ನೊಂದಿಷ್ಟನ್ನು ಹಂಚಿಕೊಂಡು ಕನ್ನಡಮ್ಮನ ಹೆಸರಲ್ಲಿ ಹೆಸರು ಹಾಗೂ ಹಣ ಮಾಡುವ ವಾರ್ಷಿಕ ದಂದೆಯಲ್ಲಿ ನಿರತರಾದವರನ್ನು ರೋಲ್ಕಾಲ್ ಕನ್ನಡಿಗರು ಎನ್ನಲಾಗುತ್ತಿದೆ. ಇದೇ ಲೋಕಲ್ ಗುಂಪುಗಳು ರಾಜ್ಯೋತ್ಸವದ ಜೊತೆಗೆ ಗಣೇಶೋತ್ಸವ, ಅಣ್ಣಮ್ಮ ದೇವಿ ಉತ್ಸವಗಳನ್ನೂ ಕಾಲಕಾಲಕ್ಕೆ ಆಚರಿಸುತ್ತವೆ. ಇದಕ್ಕೆಲ್ಲಾ ಬೇಕಾದ ಹಣ ಬರುವುದು ಮತ್ತೆ ವಂತಿಕೆ ಎನ್ನುವ ರೋಲ್ಕಾಲಿನಿಂದ. ಕೂಲಿಯವನಿಂದ ಹಿಡಿದು ಕಾರ್ಪೋರೇಟರ್ ರ ಬಳಿಗೆ ಗುಂಪು ಗುಂಪಾಗಿ ಹೋಗಿ ಅವರವರ ತಾಕತ್ತಿಗೆ ತಕ್ಕಂತೆ ರೋಲ್ಕಾಲ್ ವಸೂಲಿ ಮಾಡಿಕೊಂಡು ಬರುವುದು ಸಂಪ್ರದಾಯವಾಗಿದೆ.
ಇಂತಿಪ್ಪ ರೋಲ್ಕಾಲಿಗರಿಗೆ ಹಣ ಮತ್ತು ಹೆಸರಿನ ತೆವಲಿನ ಹೊರತು ಬೇರೆ ಯಾವುದೇ ತತ್ವ ಆದರ್ಶ ಸಿದ್ದಾಂತದ ಹಂಗಿರುವುದಿಲ್ಲ. ಚುಣಾವಣೆಗಳು ಬಂದಾಗ ಈ ರೋಲ್ಕಾಲಿಗರು ಬೇರೆ ಬೇರೆ ಪಕ್ಷಗಳಲ್ಲಿ ಹರಿದು ಹಂಚಿಹೋಗುತ್ತಾರೆ. ಇಂತಹ ಸಣ್ಣ ಪುಟ್ಟ ಲೋಕಲ್ ತಂಡಗಳನ್ನು ಕೇಳಿದಾಗ ಹಣ ಕೊಟ್ಟು ಸಾಕಿಕೊಂಡ ಲೋಕಲ್ ರಾಜಕಾರಣಿಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಯುವಕರನ್ನು ಬಳಸಿಕೊಳ್ಳುತ್ತಲೇ ಬಂದಿದ್ದಾರೆ. ಕೆಲವರು ಮಾಡಬಾರದ್ದನ್ನು ಮಾಡಿ ಪೋಲೀಸರ ಅತಿಥಿಯಾದಾಗ ಪೊಲೀಸರ ಮೇಲೆ ಒತ್ತಡ ತಂದು ಬಿಡಿಸಿಕೊಂಡು ಬರುವ ಪುಡಾರಿಗಳು ಅಂತಹ ಯುವಕರ ನಿಷ್ಟೆಯನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಇಂತಹ ಬಹುತೇಕ ಚಿಕ್ಕ ಪುಟ್ಟ ಸಂಘಟಿತ ಲೋಕಲ್ ರೋಲ್ಕಾಲ್ ಗ್ಯಾಂಗಗಳು ತಮಗನುಕೂಲವಾಗುವ ಪಕ್ಷದ ಜೊತೆ ಕೊಡುಕೊಳ್ಳುವ ಸಂಬಂಧ ಇಟ್ಟುಕೊಂಡಿರುತ್ತವೆ. ಅಂತಹ ಗುಂಪಿಗೊಬ್ಬರೋ ಇಬ್ಬರೋ ನಾಯಕರಿರುತ್ತಾರೆ ಮತ್ತು ಅವರ ಜೊತೆಗೊಂದಿಷ್ಟು ಹಿಂಬಾಲಕರೂ ಬಾಲದಂತಿರುತ್ತಾರೆ. ಹೋಗಲಿ ಯಾವುದಾದರೂ ಪಕ್ಷಕ್ಕೆ ಇಲ್ಲವೆ ಪಕ್ಷದ ಸಿದ್ದಾಂತಕ್ಕೆ ಇವರು ಬದ್ದರಾಗಿದ್ದಾರಾ ಎಂದರೆ ಅದೂ ಇಲ್ಲ. ಮೂರು ಕೊಟ್ಟರೆ ಅತ್ತೆ ಕಡೆ... ಆರು ಕೊಟ್ಟರೆ ಸೊಸೆ ಕಡೆ ಎನ್ನುವ ಚಂಚಲ ಮನೋಭಾವದ ಈ ಯುವಕರು ತಮ್ಮ ಗುಂಪಿನ ನಾಯಕನ ಅವಕಾಶವಾದಿ ವರ್ತನೆಗೆ ಪೂರಕವಾಗಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಹಲವಾರು ಯುವಕರಲ್ಲಿ ಬಿಜೆಪಿ ಹಾಗೂ ಸಂಘಪರಿವಾರಿಗಳು ದೇಶಭಕ್ತಿಯ ಹುಸಿ ಉನ್ಮಾದ ಹುಟ್ಟಿಸಿ, ಹಿಂದುತ್ವದ ಭ್ರಮೆ ಸೃಷ್ಟಿಸಿ ರೋಲ್ಕಾಲಿಗರನ್ನು ತಮ್ಮ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯದ ಬೆಂಬಲದಿಂದ ಸಶಕ್ತವಾಗುವ ಈ ತಂಡಗಳು ಸಾವಕಾಶವಾಗಿ ತಮ್ಮ ತಮ್ಮ ಏರಿಯಾಗಳಲ್ಲಿ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಆರಂಭಿಸುತ್ತವೆ. ರಾಜ್ಯೋತ್ಸವ ಗಣೇಶ ಅಣ್ಣಮ್ಮ ಅಂತೆಲ್ಲಾ ಆಚರಣೆಗಳನ್ನು ಆಯೋಜಿಸಿ ಸಂಘಟನಾತ್ಮಕವಾಗಿ ವಸೂಲಿಗಿಳಿಯುತ್ತವೆ. ಬಲವಂತದ ವಸೂಲಿಯನ್ನು ಯಾರಾದರೂ ವಿರೋಧಿಸಿದರೆ..ಇಲ್ಲವೇ ಕೇಳಿದಷ್ಟು ಹಣ ಕೊಡದಿದ್ದರೆ ಅಂತವರ ವಿರುದ್ದ ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ರೋಲ್ಕಾಲಿಗರು ಕಾಯುತ್ತಿರುತ್ತಾರೆ. ಅಂತವರಿಗೆ ಕಾವೇರಿ ನದಿ ನೀರಿನಂತಹ ವಿವಾದಗಳು ಉತ್ತಮ ಅವಕಾಶವನ್ನೊದಗಿಸುತ್ತದೆ.
ಎಂದೂ ನಾಡು ನುಡಿಯ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸದ ಬಹುತೇಕ ರೋಲ್ಕಾಲ್ ತಂಡಗಳು ನಾಡಿಗಾದ ಅನ್ಯಾಯವನ್ನೇ ನೆಪವಾಗಿಟ್ಟುಕೊಂಡು ತಮ್ಮ ಏರಿಯಾದಲ್ಲಿ ಪ್ರಕ್ಷುಬ್ದ ವಾತಾವರಣವನ್ನು ಸೃಷ್ಟಿಸುವತ್ತ ಸಕ್ರೀಯವಾಗುತ್ತವೆ. ತಮ್ಮನ್ನು ವಿರೋಧಿಸಿದವರ ಮೇಲೆ ಹಲ್ಲೆ ಮಾಡುವುದು ಇಲ್ಲವೇ ಅವರ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವ ಮೂಲಕ ಸೇಡು ತೀರಿಸಿಕೊಳ್ಳಲಾಗುತ್ತದೆ. ಹಿಂಸೆಯ ಮೂಲಕ ಬೆದರಿಕೆ ಹಾಕಿ ತಮ್ಮ ರೋಲ್ಕಾಲ್ ದಂದೆಗೆ ಇರುವ ಕಂಟಕಗಳನ್ನು ದೂರಮಾಡಿಕೊಳ್ಳುವ ರೋಲ್ಕಾಲಿಗರ ಈ ಬ್ಲಾಕ್ಮೇಲ್ ಕುತಂತ್ರ ಇಂದು ನಿನ್ನೆಯದಲ್ಲ. ಇಂತಹ ಸಮಾಜವಿರೋಧಿಗಳಿಗೆ ಲೋಕಲ್ ರಾಜಕಾರಣಿಗಳ ಬೆಂಬಲವೂ ಇರುವುದರಿಂದ ಎಷ್ಟೋ ಸಲ ಪೊಲೀಸರೂ ಸಹ ಅಸಹಾಯಕರಾಗುತ್ತಾರೆ.
ಸೆಪ್ಟಂಬರ್ ಹನ್ನೆರಡರಂದು ಆಗಿದ್ದೂ ಇದೇನೇ. ಬೆಂಗಳೂರಿನ ಬಹುತೇಕ ಚಿಕ್ಕ ದೊಡ್ಡ ರೋಲ್ಕಾಲ್ ಸಂಘಗಳು ತಮ್ಮ ಗುಂಪು ಕಟ್ಟಿಕೊಂಡು ಇದ್ದಕ್ಕಿದ್ದಂತೆ ಕನ್ನಡಾಭಿಮಾನದ ಹೆಸರಲ್ಲಿ ದೊಂಬಿಗಿಳಿದವು. ಅಂಗಡಿಗಳ ಶೆಟರ್ ಗಳನ್ನು ಬಲವಂತವಾಗಿ ಮುಚ್ಚಿಸಿದರು. ತಮಗಾಗದವರ ಮೇಲೆ ಹಲ್ಲೆ ಮಾಡಿದರು. ರಸ್ತೆಗಳಲ್ಲಿ ಬೆಂಕಿ ಹಾಕಿದರು. ತಮಿಳು ಭಾಷಿಕರನ್ನು ಬೆದರಿಸಿದರು. ವಾಹನಗಳನ್ನು ಸುಟ್ಟರು. ಈ ಎಲ್ಲಾ ಸಮಾಜದ್ರೋಹಿಗಳನ್ನು ಹಿಡಿದು ಜೈಲಿಗಟ್ಟಬೇಕಾದ ಪೊಲೀಸರು ಅಸಾಹಯಕರಾಗಿದ್ದು ಅವರಿಗೆ ಏನೂ ಮಾಡದೇ ಇರುವಂತೆ ಮೇಲಿನಿಂದ ಮೌಖಿಕ ಆದೇಶ ಇತ್ತು. ಕೆಲವು ಏರಿಯಾದಲ್ಲಿ ವಿರೋಧ ಪಕ್ಷಗಳ ಲೋಕಲ್ ನಾಯಕರುಗಳೇ ನಿಂತು ಈ ಯುವಕರನ್ನು ಪ್ರಚೋದಿಸಿ ಹಿಂಸೆಗಿಳಿಸಿದರು. ಇದೇ ಸಂದರ್ಭವನ್ನು ಬಳಸಿಕೊಂಡು ಸರಕಾರವನ್ನು ಅಸ್ತಿರಗೊಳಿಸುವ ರಾಜಕೀಯ ಶಡ್ಯಂತ್ರಕ್ಕೆ ಈ ನಮ್ಮ ರೋಲ್ಕಾಲ್ ಕನ್ನಡಿಗರು ದಾಳವಾದರು. ಬೆಂಗಳೂರಿನ ಜನತೆ ತತ್ತರಿಸಿ ಹೋದರು.
ಕನ್ನಡಪರವಾದ ಎಲ್ಲಾ ಸಂಘಟನೆಗಳೂ ಹೀಗೆ ಎಂದು ಹೇಳುವುದು ತಪ್ಪಾಗುತ್ತದೆ. ನಾಡು ನುಡಿಯ ಹೋರಾಟದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡ ಕೆಲವಾರು ತಾತ್ವಿಕ ಬದ್ದತೆಯ ಸಂಘ ಸಂಘಟನೆಗಳೂ ಅಸ್ತಿತ್ವದಲ್ಲಿವೆ. ಆದರೆ ಈ ರೋಲ್ಕಾಲ್ ತಂಡಗಳ ಹಿಂಸಾಪಾತದ ಕೆಸರು ಎಲ್ಲಾ ಕನ್ನಡಪರ ಸಂಘಟನೆಗಳಿಗೂ ಮೆತ್ತಿಕೊಳ್ಳುತ್ತದೆ. ನಿಜವಾದ ನಾಡು ನುಡಿಯ ಮೇಲೆ ಅಭಿಮಾನ ಕಾಳಜಿ ಕಳಕಳಿ ಇರುವ ಯಾವ ಕನ್ನಡ ಪರ ಸಂಘಟನೆಯೂ ಹಿಂಸೆಗೆ, ಹಲ್ಲೆ ಹತ್ಯೆಗೆ, ಸಾರ್ವತ್ರಿಕ ಹಾನಿಗೆ ಪ್ರಯತ್ನಿಸುವುದಿಲ್ಲ. ಸರಕಾರಗಳ ಮೇಲೆ ಒತ್ತಡ ಹೇರಲು ಬೇರೆ ಹಲವು ಅಹಿಂಸಾತ್ಮಕ ದಾರಿಗಳಿವೆ. ಆದರೆ ಹೀಗೆಲ್ಲಾ ಬೆಂಕಿಹಾಕಿ ಬಂದ್ ಮಾಡಿ ಹಿಂಸೆಗಿಳಿಯುವುದೂ ಕೂಡಾ ಭಯೋತ್ಪಾದನೆ ಜೊತೆಗೆ ಹಿಂಸೋತ್ಪಾದನೆಯೂ ಆಗಿದೆ. ಇಂತಹುದನ್ನು ಯಾರೇ ಯಾವುದೇ ಕಾರಣಕ್ಕೆ ಮಾಡಿರಲಿ ಇಲ್ಲವೇ ಮಾಡಿಸಿರಲಿ ಅದು ಕನ್ನಡದ್ರೋಹದ ಕೆಲಸವಾಗಿದೆ. ಕನ್ನಡಿಗರ ಹಿತದ ನೆಪದಲ್ಲಿ ಕನ್ನಡಿಗರಿಗೆ ಕೊಡುವ ತೊಂದರೆಯಾಗಿದೆ. ಈ ರೀತಿಯ ಹಿಂಸೆ ಹಾಗೂ ಅದರ ಹಿಂದಿರುವ ಶಡ್ಯಂತ್ರಗಳನ್ನು ನಿಜವಾದ ಕನ್ನಡಿಗರು ವಿರೋಧಿಸಬೇಕಿದೆ. ತತ್ವನಿಷ್ಟ ಕನ್ನಡ ಸಂಘಟನೆಗಳು ಅವಕಾಶವಾದಿ ರೋಲ್ಕಾಲ್ ತಂಡಗಳನ್ನು ಬಹಿಷ್ಕರಿಸಲು ಸರಕಾರಕ್ಕೆ ಮನವಿ ಮಾಡಿಕೊಳ್ಳಬೇಕಿದೆ. ಸಾರ್ವಜನಿಕವಾಗಿ ಹಿಂಸೆಗಿಳಿದವರನ್ನು ಗುರುತಿಸಿ ಅಂತವರನ್ನು ಶಿಕ್ಷಿಸುವ ಜೊತೆಗೆ ರೋಲ್ಕಾಲ್ ತಂಡಗಳನ್ನೆಲ್ಲಾ ಸರಕಾರ ನಿಷೇಧಿಸಬೇಕಿದೆ. ಆಗಲೇ ಈ ಅವಕಾಶವಾದಿಗಳ ಹಾವಳಿ ತಡೆಗಟ್ಟಬಹುದು... ಜನಸಾಮಾನ್ಯರು ನೆಮ್ಮದಿಯಾಗಿ ಬದುಕುವಂತಹ ವಾತಾವರಣ ಸೃಷ್ಟಿಸಬಹುದು...
ಈ ಮಾಧ್ಯಮಗಳು ಹಿಂಸಾಪಾತವನ್ನು ವಿಜ್ರಂಭಿಸಿ ಇನ್ನಷ್ಟು ದ್ವಂಸಗಳಿಗೆ ಯುವಕರನ್ನು ಪ್ರಚೋದಿಸುವ ಬದಲು ಈ ಎಲ್ಲಾ ದೊಂಬಿ ಗಲಾಟೆ ಹಲ್ಲೆಗಳ ಹಿಂದಿರುವ ವ್ಯಕ್ತಿಗಳು ಹಾಗೂ ಶಕ್ತಿಗಳನ್ನು ಬಯಲಿಗೆಳೆಯಬೇಕಿತ್ತು. ತಮ್ಮ ರಾಜಕೀಯದ ಶಡ್ಯಂತ್ರಕ್ಕೆ ಈ ಯುವಕರ ದಾರಿತಪ್ಪಿಸಿ ಸಮಾಜವಿರೋಧಿ ಕೆಲಸಗಳಿಗೆ ಪ್ರಚೋದಿಸಿ ಅವರನ್ನು ಪರಿಕರವಾಗಿ ಬಳಸಿಕೊಳ್ಳುವವರ ಮುಖವಾಡಗಳನ್ನು ಬೆತ್ತಲುಗೊಳಿಸಬೇಕಿತ್ತು. ಆದರೆ ಚಾನೆಲ್ ಗಳಿಗೆ ಸೆನ್ಸೇಶನ್ ಘಟನೆಗಳು ಮುಖ್ಯ. ಜಾಹಿರಾತು ಲಾಭಕ್ಕಾಗಿ ಟಿಆರ್ಪಿ ಹೆಚ್ಚಿಸಿಕೊಳ್ಳೊದು ಮುಖ್ಯ. ಯಾರ ಮನೆ ಹಾಳಾದರೇನಂತೆ, ಯಾವ ಬಸ್ಸು ಲಾರಿ ಬೆಂಕಿಗಾಹುತಿಯಾದರೇನಂತೆ, ಯಾರೋ ಹೆತ್ತ ಮಕ್ಕಳು ಹಲ್ಲೆಗೊಳಗಾಗಿ ಸತ್ತರೇನಂತೆ... ಇವೆಲ್ಲವನ್ನೂ ವೈಭವೀಕರಿಸಿ ತೋರಿಸಿದಷ್ಟೂ ವಾಹಿನಿಗಳಿಗೆ ಲಾಭ. ಆ ಅವಕಾಶವಾದಿಗಳು ಈ ಲಾಭಬಡುಕರು ಸೇರಿಕೊಂಡು ಸಾಮಾಜಿಕ ಸ್ವಾಸ್ತ್ಯವನ್ನು ಹಾಳುಮಾಡಿ ಜನತೆಯ ನೆಮ್ಮದಿಯನ್ನು ಕೆಡಿಸಲು ಪ್ರಯತ್ನಿಸುತ್ತಲೇ ಇವೆ. ಬೆಂಕಿಯಿಂದ ಬೆಂಕಿಯನ್ನು ನಂದಿಸುವ ಅಪಾಯಕಾರಿ ಪ್ರವೃತ್ತಿಯನ್ನು ಮುಂದುವರೆಸಿವೆ. ದ್ವೇಷ, ವೈಷಮ್ಯ, ದುಷ್ಟರಾಜಕೀಯ, ಅವಕಾಶವಾದಿತನಗಳೆಲ್ಲಾ ಒಟ್ಟಾಗಿ ಸೇರಿ ಕಾವೇರಿ ನೀರಿನ ಹಂಚಿಕೆಯ ಸಮಸ್ಯೆಯನ್ನು ಇನ್ನೂ ಹೆಚ್ಚಾಗಿ ಬಿಗಡಾಯಿಸುತ್ತಿವೆ.
ಈ ಸಂದರ್ಭದಲ್ಲಿ ದಿ.ಪುಂಡಲೀಕ ಶೇಟ್ ಲಂಕೇಶ ಪತ್ರಿಕೆಯಲ್ಲಿ ಬರೆದಿದ್ದ ಚುಟುಕೊಂದು ಹೀಗಿದೆ...
"ಕನ್ನಡಕ್ಕಾಗಿ ಕೈ ಎತ್ತು
ನಿನ್ನ ಕೈ ಕಲ್ಪವೃಕ್ಷವಾಗುವುದು....
ಕನ್ನಡಕ್ಕಾಗಿ ಕಾಲೆತ್ತು
ನಿನ್ನ ಕಾಲು ರೋಲ್ಕಾಲಾಗುವುದು.."
ಕನ್ನಡಕ್ಕಾಗಿ ಕೈ ಎತ್ತುವವರಿಗಿಂತ ಕಾಲೆತ್ತುವವರೇ ಹೆಚ್ಚಾಗಿರುವುದರಿಂದ ಕನ್ನಡಿಗರ ಪರಿಸ್ಥಿತಿ ಇಷ್ಟೊಂದು ದುಸ್ಥಿತಿಯಲ್ಲಿದೆ. ಅವಕಾಶವಾದಿ ರೋಲ್ಕಾಲ್ ಕನ್ನಡಿಗರಿಂದ ಮೊದಲು ಕನ್ನಡಿಗರಿಗೆ ಮುಕ್ತಿ ಬೇಕಿದೆ. ಅಲ್ಲಿವರೆಗೂ ನಾವು..." ಜೋಗುಳದ ಹರಕೆ ಇದು ಕನ್ನಡದ ಕಂದಾ... ಕನ್ನಡಿಗರ ಕಾಪಾಡೋ ರೋಲ್ಕಾಲ್ ಕನ್ನಡಿಗರಿಂದ..." ಎಂದು ಹಾಡಬೇಕಿದೆ....
- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ