ಶುಕ್ರವಾರ, ಅಕ್ಟೋಬರ್ 14, 2016

ತಹ ತಹ....3 ಇದೇನೇ ಸಭ್ಯತೆ... ಇದೇ ಸಂಸ್ಕೃತಿ :

ತಹ ತಹ....3



ಹೌದು... ಸಂಘ ಪರಿವಾರದವರ ಬಗ್ಗೆ ನಾವೆಲ್ಲಾ ಹೆಮ್ಮೆಪಡಬೇಕಿದೆ. ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪಾಪ ಅದೆಷ್ಟೊಂದು ರೀತಿ ಶ್ರಮ ಪಡ್ತಿದ್ದಾರೆ... ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಅನ್ನುವ ಮನು ಮಹಾತ್ಮನ ಶಾಸ್ತ್ರದ ನಿಯಮಕ್ಕೆ ಬದ್ದರಾಗಿ ಹೆಂಗಸರೆಲ್ಲಾ ಮನೆಯೊಳಗಿದ್ದರೆ ಇದೆಲ್ಲಾ ಆಗ್ತಿತ್ತಾಮನೆ ಹೊರಗೆ ಬಂದು ರಾಜಕೀಯ ಮಾಡಿದ್ರೆ ಗಂಡು ಕುಲ ಸಂಜಾತರು ಸುಮ್ಮನೇ ಇರಾಕಾಗ್ತದಾ...ಎಂತೆಂತೋರನ್ನೇ ಮಟ್ಟಹಾಕಿ ಮಣ್ಣುಪಾಲು ಮಾಡಿದ ಸನಾತನಿಗಳಿಗೆ ರಮ್ಯಾ ಅನ್ನುವ ಯಳಸು ಅದ್ಯಾವ ಗಿಡದ ತಪ್ಪಲು...

ಪಾಕಿಸ್ತಾನದಲ್ಲಿ ಒಳ್ಳೆಯವರು ಇದ್ದಾರೆ ಅಂತಾ ಹೇಳೋವಷ್ಟು ಸೊಕ್ಕಾ ಹೆಣ್ಣು ಹೈಕಳಿಗೆ. ಮಹಾ ಪೂಜ್ಯನೀಯ ಮನುವಾದಿ ಪಡೆ ಸುಮ್ಕಿರ್ತದಾ.. ರಮ್ಯಾಳನ್ನ ನಿಂದಿಸಿ ಸಿಟ್ಟನ್ನ ಸಿಡಿಸಿದ್ದಾಯ್ತು. ಅವಳ ಪೊಟೋಕೆ ಚಪ್ಪಲಿ ತಗೊಂಡು ಹೊಡೆದಿದ್ದಾಯ್ತು. ಬೈದಿದ್ದಾಯ್ತು... ಬಾಯಿಬಡ್ಕೊಂಡಿದ್ದಾಯ್ತು... ಆಡಿಕೊಂಡಿದ್ದಾಯ್ತು... ಇಷ್ಟಕ್ಕೆ ಸುಮ್ನೆ ಬಿಡ್ತಾವಾ ವಟುಗಳು.. ರಮ್ಯಾ ಹೋದೆಲ್ಲೆಲ್ಲಾ ಹಿಂದಿಂದೆ ಹೋಗಿ ಮೊಟ್ಟೆ ಚಪ್ಪಲಿ ಟೊಮೋಟೋ ಬಿಸಾಕುವ ಸ್ತುತ್ತಾರ್ಹ ಕೈಂಕರ್ಯವನ್ನು ಕಾಯಾ ವಾಚಾ ಮನಸಾ ಮಾಡ್ತಾ ಸನಾತನ ಧರ್ಮವನ್ನ ರಕ್ಷಣೆ ಮಾಡಿ ಜೀವನಾನ ಸಾರ್ಥಕ ಮಾಡ್ಕೋತಿದ್ದಾರೆ. ಇದೇನೆ ಹಿಂದೂ ಸಭ್ಯತೆ... ಇದೇ ಸನಾತನ ಸಂಸ್ಕೃತಿ ಅನ್ನೋದನ್ನ ಸಾಬೀತು ಪಡಿಸುತ್ತಿದ್ದಾರೆ.... ಇಂತಾ ಮನು ಸಂತತಿಯ ಮಹತ್ಕಾರ್ಯಕ್ಕೆ ಯಾರ್ಯಾರು ಎಲ್ಲೆಲ್ಲಿದ್ದೀರೋ ಅಲ್ಲಿಂದಲೇ ಕೈಮುಗಿಲೇ ಬೇಕು...

ಗಂಡಸರು ಬಿಡಿ ಹುಟ್ಟಿದ್ದೇ ತಪ್ಪು ಮಾಡೋಕೆ. ಅದನ್ನ ಹೆಂಗೋ ಹೊಟ್ಟೆಗೆ ಹಾಕ್ಕೋಬಹುದು. ಆದರೆ ಅದನ್ನ ಹೆಣ್ಣಹೆಂಗಸರು ಮಾಡಕೂಡದು. ಯಾಕೆಂದರೆ ಅವರು ದೇವತೆಗಳು. ದೇವರೆಂದಾದರೂ ಮಾತಾಡ್ತದಾ... ಹಂಗೆಯಾ ಹೆಣ್ಣಹೆಂಗಸರು ಪಂಚೇಂದ್ರಿಯಗಳನ್ನೆಲ್ಲಾ ಬಂದ್ ಮಾಡ್ಕೊಂಡು ಗಂಡಸರ ಹೇಳಿದಂಗೆ ಕೇಳಕೊಂಡಿರಬೇಕಪ್ಪಾ. ಇಲ್ಲಾಂದ್ರೆ ಸಂಘಪರಿವಾರದ ಸಂವಿಧಾನವಾದ ಮನುಶಾಸ್ತ್ರದ ಉಲ್ಲಂಘನೆ ಆಗ್ತದೆ. ಹಾಗೇನಾದ್ರೂ ಆದರೆ ಜಗತ್ತೆ ಅಲ್ಲೊಲ ಕಲ್ಲೋಲ ಆಗ್ತದೆ...  ಅದಕ್ಕೆ ಕಾಲಕಾಲಕ್ಕೆ ಮಹಿಳೆಯರ ದ್ವನಿಯನ್ನ ಅಡಗಿಸಲೇ ಬೇಕು. ಹೇಗಾದರೂ ಮಾಡಿ ಮನುಶಾಸ್ತ್ರವೇ ದೇಶದ ಸಂವಿಧಾನವಾಗಬೇಕು. ಅಲ್ಲಿವರೆಗೂ ವಿರಮಿಸುವುದಿಲ್ಲ ಎಂಬ ಅಭೂತಪೂರ್ಣ ನಿರ್ಣಯವನ್ನು ಪರಿವಾರದ ಹಿರೀಕರು ತೆಗೆದುಕೊಂಡಿರುವುದು ಗಂಡು ಕುಲದ ಸುದೈವ
 
ರಮ್ಯಾ ಗಂಡಸಾಗಿದ್ರೆ ಹೆಂಗೋ ಬೈದು ಮನಶಾಂತಿ ಮಾಡ್ಕೊಂಡು ಸುಮ್ಮನಾಗಿರಬೋದಾಗಿತ್ತು. ವಾಜಪೇಯಿ..ಅಡ್ವಾಣಿ..ಮೋದಿ... ರವಿಶಂಕರ ಗುರೂಜಿ ಎಲ್ಲಾ ನಿತ್ಯಸ್ಮರಣೀಯರು ಪಾಕಿಸ್ತಾನದ ಪರವಾಗಿ ಮಾತಾಡಿದ್ರು... ದೇಶಕ್ಕೆ ಹೋಗಿ ತಿಂದುಂಡು ಹೊಗಳಿ ಬಂದ್ರೂವೆ  ಸಂಘಿ ಸಂಸ್ಥಾನ ಸುಮ್ಮನಾಗಿಲ್ವೇ. ಯಾಕೆಂದ್ರೆ ಅವರು ಗಂಡಸರು. ಅದರಲ್ಲೂ ಸನಾತನ ಪರಿವಾರದ ಗಂಡಸರು. ಆದರೆ ಹೆಣ್ಣು ಹೆಂಗಸೊಬ್ಬಳು ಶತ್ರು ದೇಶಾನ ಹೊಗಳಬಾರದಿತ್ತು... ಅಕಸ್ಮಾತ್ ಹೊಗಳಿದ್ರೂ ಕೇಳಿದ ತಕ್ಷಣ ಕ್ಷಮೆಕೇಳಿ ತಪ್ಪಾಯ್ತು ಇನ್ನೊಮ್ಮೆ ಹಿಂಗೆಲ್ಲಾ ಮಾಡಾಕಿಲ್ಲಾ ಅಂತಾ ಗಲ್ಲಾ ಗಲ್ಲಾ ಬಡ್ಕೋಬೇಕಿತ್ತು. ಆದರೆ ಅದನ್ನೆಲ್ಲಾ ಮಾಡಾಕಿಲ್ಲಾ ಅಂತಾಳೆ. ಮನುಕುಲತಿಲಕ ವಂಶಸ್ತರು ಅದ್ಯಾಗೆ ಇದನ್ನೆಲ್ಲಾ ನೋಡಿ ಕೇಳಿ ಸುಮ್ಮನಿರ್ತಾರೆ. ಸಿಟ್ಟು ಬುಡದಿಂದ ಉಕ್ಕಿ ಬರಾಕಿಲ್ವಾ ಮತ್ತೆ. ಸನಾತನ ಸಭ್ಯತೆ ಸಂಸ್ಕೃತಿ ಏನು ಅನ್ನೋದನ್ನ ರಮ್ಯಾಳಿಗೆ ಹಾಗೂ ಎಲ್ಲಾ ಮಹಿಳೆಯರಿಗೆ ಸಾಮ ಬೇಧ ದಂಡಗಳ ಮೂಲಕ ಹೇಳದೇ ಸುಮ್ಕೆ ಬಿಡ್ತಾರಾಹೊಲಸು ನಾಲಿಗೆ, ಕಿತ್ತೋದ ಚಪ್ಪಲಿ, ಕೊಳೆತ ಮೊಟ್ಟೆಗಳ ಪ್ರಯೋಗದಿಂದ ಪಾಠ ಕಲಿಸ್ತಿದ್ದಾರೆ.

ಪಾಕಿಸ್ತಾನವೋ ಅಪಘಾನಿಸ್ತಾನವೋ ಅದೆಲ್ಲಾ ಮುಖ್ಯವಲ್ಲ. ಮೊದಲು ಹೆಂಗಸರು ಮನೇಲಿ ಗಂಡಸರು ಹೇಳಿದಂತೆ ಕೇಳ್ಕೊಂಡು ಬಿದ್ದಿರಬೇಕ್. ಅಂಬೇಡ್ಕರ್ ಅನ್ನೋ ಕಣ್ಣು ಕೋರೈಸೋ ಬೆಳಕು ಅಡ್ಡಿ ಬರದಿದ್ದರೆ ಮಹಿಳೆಯರಿಗೆ ಕತ್ತಲ ಲೋಕ ತೋರಿಸಬಹುದಾಗಿತ್ತು. ಏನಾದರಾಗಲಿ... ತಲೆ ಮೇಲೆ ತಲೆ ಬೀಳಲಿ ಸನಾತನ ಸಂಸ್ಕೃತಿ ಉಳಿಲಿಕ್ಕೇ ಬೇಕ್. ಮನು ಶಾಸ್ತ್ರ ಅನ್ನೋದು ದೇಶದ ಸಂವಿಧಾನ ಆಗಲಿಕ್ಕೇ ಬೇಕ್. ಅಲ್ಲಿವರೆಗೂ ಶೂದ್ರರಿಗೆ ಚಡ್ಡಿ ಹಾಕಿ, ಮೆದುಳೊಳಗೆ ಧರ್ಮದ ಅಫೀಮು ತುಂಬಿ ಧರ್ಮಯುದ್ಧಕ್ಕೆ ಸಿದ್ದಗೊಳಿಸುವುದೇ ಸನಾತನಿಗಳ ಗುರಿ.. ದಲಿತರು ದುಡೀತಾನೇ ಇರಬೇಕ್... ಮಹಿಳೆಯರು ಮನೇಲಿ ಬಿದ್ದಿರಬೇಕ್, ಮುಸಲ್ಮಾನರು ದೇಶ ಬಿಟ್ಟು ತೊಲಗಬೇಕ್ ಮತ್ತೆ ಮನುಧರ್ಮಕ್ಕೆ ಅನಿಷ್ಟರಾಗಿರೋ ಕಮ್ಯುನಿಸ್ಟರು ನಾಮಾವಶೇಷವಾಗಬೇಕ್... ಅಲ್ಲಿವರೆಗೂ ಸನಾತನಿಗಳಿಗೆ ಶಾಂತಿ ನೆಮ್ಮದಿ ವಿರಾಮವಿಲ್ಲ..
. 
ಜೈ ಮನು ಮಹಾತ್ಮ...  ಜೈ ಸಂಘಂ ಬಜರಂಗಂ ಉಘೇ ಉಘೇ....


ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ