ತಹ ತಹ.....19
ಕರುನಾಡಲ್ಲಿ ನೀರಿಗಾಗಿ ಬೆಂಕಿ ಹತ್ತಿ ಉರಿಯುತ್ತಿದೆ. ನೀರೋ ದೊರೆ ದೇಶ ವಿದೇಶಗಳ ಸುತ್ತಿ ಬಂದು ಸುಸ್ತಾಗಿ ಮಲಗಿದ್ದಾನೆ. ದೇಶಭಕ್ತರಂತೂ ಈ ಕಾವೇರಿ ದಳ್ಳುರಿ ಎಂಬುದು ತಮ್ಮ ದೇಶದ್ರೋಹದ ವ್ಯಾಪ್ತಿಯೊಳಗೆ ಬರುವುದಿಲ್ಲ ಎಂದುಕೊಂಡು ಯಾರು ಗೋಮಾಂಸ ತಿನ್ನುತ್ತಾರೆ... ಯಾರು ವೀರ ಸೈನಿಕರ ಹಿಂಸೆ ವಿರೋಧಿಸಿ ದಿಕ್ಕಾರ ಕೂಗುತ್ತಾರೆ... ಇನ್ಯಾರು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುತ್ತಾರೆ ಎನ್ನುವುದನ್ನು ಪತ್ತೆ ಮಾಡಿ ತಮ್ಮ ದೇಶಪ್ರೇಮವನ್ನು ಸಾಬೀತು ಪಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ...
ಈ ಎಬಿವಿಪಿ ಯ ವಟುಗಳು ಅದೆಲ್ಲಿ ಹೋಗಿ ಪಾಚಿಕೊಂಡಿವೆಯೋ ಗೊತ್ತಿಲ್ಲ. ಬೆಂಗಳೂರಿನ ಬೀದಿಗಳಲ್ಲಿ ಉರಿಯುತ್ತಿರುವ ಬೆಂಕಿಗೂ ಅವರನ್ನು ಎಚ್ಚರಿಸಲು ಸಾಧ್ಯವಾಗುತ್ತಿಲ್ಲ. ಈ ದೇಶಭಕ್ತ ವಟುಗಳನ್ನು ಎಚ್ಚರಿಸಲು ಯಾರಾದರೂ ಪಾಕಿಸ್ತಾನ್ ಜಿಂದಾಬಾದ್ ಎಂದು ಅರಚಿಕೊಳ್ಳಬೇಕಿದೆ... ಇಲ್ಲವೇ ರಮ್ಯಾರಂತಹ ನಟಿ- ನಾಯಕಿ ಪಾಕಿಸ್ತಾನ ನರಕವಲ್ಲ ಎಂದು ಹೇಳಬೇಕಿದೆ. ಆಗ ನೋಡಿ ಈ ವಾನರ ಸೇನೆ ಲಂಕೆಗೆ ಬೆಂಕಿ ಇಟ್ಟ ತಮ್ಮ ಪೂರ್ವಜ ಹನುಮನ ಅವತಾರದಲ್ಲಿ ಕೊಳ್ಳಿ ಹಿಡಿದು ಕೋಮು ಸೌಹಾರ್ಧತೆಗೆ ಬೆಂಕಿ ಹಚ್ಚುವುದು. ದೇಶಪ್ರೇಮಿಗಳಿಗೆ ಕಾವೇರಿ ನೀರಿನ ಸಾವು ಬದುಕಿನ ಕದನವೆಂಬುದು ನಲ್ಲಿ ನೀರಿನ ಗಲಾಟೆಯಷ್ಟು ಕ್ಷುಲ್ಲಕ ಜುಜಬಿ ಸಂಗತಿ. ದೇಶಭಕ್ತಿಯ ಗುತ್ತಿಗೆ ಪಡೆದವರಿಗೆ ಇವೆಲ್ಲಾ ಸಮಸ್ಯೆಗಳೇ ಅಲ್ಲಾ. ಈ ಬಿಜೆಪಿಯ ಕೂಗುಮಾರಿಗಳೆಲ್ಲಿ ಹೋಗಿ ಲಿಂಗೈಕ್ಯವಾಗಿವೆ. ಕೇಂದ್ರ ಸರಕಾರದ ಉದ್ದೇಶಪೂರ್ವಕ ಉದಾಸೀನತೆಯಿಂದಾಗಿ ಎರಡು ರಾಜ್ಯಗಳು ಹತ್ತಿ ಉರಿಯುತ್ತಿವೆ. ಅರ್ಜೆಂಟಾಗಿ ಹೋಗಿ ತಮ್ಮ ನೀರೋ ದೊರೆಯನ್ನು ಜಾಣನಿದ್ದೆಯಿಂದ ಎಬ್ಬಿಸಿ ಅಡ್ಡಡ್ಡ ಉದ್ದುದ್ದ ಬಿದ್ದು ಮನ್ ಕೀ ಬಾತ್ ಹೇಳಲು ಒತ್ತಾಯಿಸಬಾರದೆ...
ಆಗಲಾದರೂ ಮೋದಿ ದೊರೆ ಕಳ್ಳ ನಿದ್ದೆಯಿಂದ ಎಚ್ಚರಗೊಂಡು ಜಡ್ ಪ್ಲಸ್ ಸೆಕ್ಯೂರಿಟಿಯ ಭದ್ರ ಕೋಟೆಯಲಿ ದುರಂತ ನಾಯಕನಂತೆ ನಿಂತು "ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಬೆಂಕಿ ಹಚ್ಚುವ ಮೊದಲು ನನಗೆ ಬೆಂಕಿ ಹಚ್ಚಿ. ಅಮಾಯಕರ ಮೇಲೆ ಹಲ್ಲೆ ಮಾಡುವ ಬದಲು ನನ್ನನ್ನು ಹೊಡೆಯಿರಿ" ಎಂದು ಹೇಳಿಕೆ ಕೊಟ್ಟು ಅಂಬಾನಿಯ ಜಾಹೀರಾತು ಶೂಟಿಂಗಿಗೆ ಹೋಗಬಹುದಾಗಿದೆ. ದೇಶಭಕ್ತರು ತಮ್ಮ ಅಧಿನಾಯಕನ ಮಾತುಗಳನ್ನು ಕುಂಡಿ ಬಡಿದುಕೊಂಡು ಸ್ವಾಗತಿಸಬಹುದಾಗಿದೆ...
ಸಿದ್ದರಾಮಯ್ಯ ಹಾಗೂ ಜಯಲಲಿತಾ ಈ ಇಬ್ಬರೂ ಪರಸ್ಪರ ಪತ್ರಬರೆದುಕೊಂಡು ತಮ್ಮ ಭಾಷಿಕರನ್ನು ಕಾಪಾಡಿ ಎಂದು ಅವಲತ್ತುಕೊಂಡು ತಮ್ಮ ರಾಜ್ಯದ ಜನರಿಗೆ ಮಂಕು ಬೂದಿ ಎರಚಲು ಬದ್ದರಾಗಿದ್ದಾರೆ. ಕೂತು ಮಾತಾಡಿ ಆದ್ಯತೆಯ ಮೇಲೆ ಇರುವ ನೀರು ಹಂಚಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರೆ ಬೆಂಕಿ ಹಚ್ಚಿಸಿಕೊಂಡು ಬಾಲ ಸುಟ್ಟುಕೊಳ್ಳುವ ದುಸ್ತಿತಿ ಎರಡೂ ರಾಜ್ಯಗಳಿಗೆಲ್ಲಿ ಬರುತ್ತಿತ್ತು.
ಬೆಣ್ಣೆ ಹಂಚಿಕೊಳ್ಳುವುದಕ್ಕೆ ಕಿತ್ತಾಡಿದ ಬೆಕ್ಕುಗಳು ಕೋತಿಯ ಕೈಗೆ ನ್ಯಾಯ ನಿರ್ಣಯದ ಅಧಿಕಾರ ಕೊಟ್ಟು ಮೋಸಹೋದಂತಾಗಿದೆ. ಇಬ್ಬರ ಜಗಳದಲ್ಲಿ ಕೇಂದ್ರ ಸರಕಾರ ಲಾಭ ಮಾಡಿಕೊಳ್ಳುವ ತಂತ್ರಗಾರಿಕೆ ರೂಪಿಸಿದ್ದರ ಅರಿವಿದ್ದೂ ಈ ಬೆಕ್ಕುಗಳು ತಮ್ಮ ಪಾಲಿನ ಬೆಣ್ಣೆಗಾಗಿ ಕಿತ್ತಾಡುತ್ತಲೇ ಇವೆ. ಕೋತಿ ತನ್ನ ರಾಜಕೀಯದಾಟವನ್ನು ಆಡುತ್ತಲೇ ಇದೆ... ಎರಡೂ ರಾಜ್ಯಗಳು ಹೊತ್ತಿ ಉರಿದು ಹಿಂಸಾಪಾತ ಉಲ್ಬಣಗೊಳ್ಳುತ್ತಿದೆ. ಸಮಾಜ ವಿರೋಧಿ ಗೂಂಡಾ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆದು ದೊಂಬಿ ಹುಟ್ಟಿಸಿ ಭಯದ ವಾತಾವರಣ ಸೃಷ್ಟಿಸುತ್ತಿವೆ. ಎಲ್ಲಾ ನಮೂನಿಯ ರಾಜಕೀಯ ಪಕ್ಷಗಳು ಬೆಂಕಿ ಹತ್ತಿದ ಮನೆಯಲ್ಲಿ ಗಳ ಹಿರಿದು ತಮ್ಮ ಬೇಳೆ ಬೇಯಿಸಿಕೊಳ್ಳಲು ತೆರೆ ಮರೆಯಲ್ಲಿ ತಂತ್ರ ಪ್ರತಿತಂತ್ರ ಹೂಡುತ್ತಿವೆ. ಇದೆಲ್ಲಾ ಏನೂ ಗೊತ್ತಿಲ್ಲದ ಅಮಾಯಕ ಜನತೆ ಭಯದಿಂದ ಅಂಗಡಿ ಮನೆಗಳ ಬಾಗಿಲೆಳೆದುಕೊಂಡು ಟಿವಿ ಹಾಕಿಕೊಂಡು ಮಾಧ್ಯಮಗಳು ಹುಟ್ಟಿಸುತ್ತಿರುವ ಪ್ರಚೋದನಾತ್ಮಕ ದುರಂತ ದೃಶ್ಯಗಳನ್ನು ದಾವಂತಗಳಿಂದ ವೀಕ್ಷಿಸಿ ಆತಂಕಪಟ್ಟುಕೊಳ್ಳುತ್ತಿದ್ದಾರೆ.
ಯಾರಿಗೂ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು ಎನ್ನುವ ವ್ಯವಧಾನ ಹಾಗೂ ಪ್ರಾಮಾಣಿಕ ಬದ್ದತೆಗಳಿಲ್ಲ. ಜಯಲಲಿತಾರ ಹಠಮಾರಿತನ, ಸಿದ್ದರಾಮಯ್ಯನವರ ಉದಾಸೀನತನ, ಪ್ರಧಾನಿಯ ಜಾಣ ಮೌನ ಹಾಗೂ ನ್ಯಾಯಾಲಯದ ಪಕ್ಷಪಾತ ಧೋರಣೆಗಳು ಕಾವೇರಿಗೆ ಬೆಂಕಿ ಬೀಳಲು ಕಾರಣವಾಗಿವೆ. ಜನ ಸಾಮಾನ್ಯರ ಬದುಕಿಗೆ ಬೆಂಕಿ ಹಾಕಿದವರ ವಿರುದ್ದ ಹೋರಾಟ ಆವೇಶ ಆಕ್ರೋಶಗಳಿರಬೇಕೆ ಹೊರತು ಅಮಾಯಕ ವಾಹನಗಳ ಮೇಲಾಗಲೀ, ಅಸಹಾಯಕ ವಾಹನ ಚಾಲಕರ ಮೇಲಾಗಲೀ ಅಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶಮಾಡುವುದರಿಂದಾಗಲೀ, ಅನ್ಯಭಾಷಿಕರ ಮೇಲೆ ಹಲ್ಲೆ ಹತ್ಯೆಯಿಂದಾಗಲೀ ಹಿಂಸೆ ಉಲ್ಬಣಗೊಳ್ಳುತ್ತದೆಯೇ ಹೊರತು ಮೂಲ ಸಮಸ್ಯೆ ಪರಿಹಾರವಾಗುವುದಿಲ್ಲ. ಆಳುವ ವರ್ಗಗಳು ತಮ್ಮ ಸ್ವಾರ್ಥಸಾಧನೆಗಾಗಿ ಹಾಗೂ ತಮ್ಮ ವಿಫಲತೆಯನ್ನು ಮರೆಮಾಚಲು ಭಾಷಾಂಧತೆಯನ್ನು ಪ್ರಚೋದಿಸುತ್ತವೆ. ಸಹೋದರ ರಾಜ್ಯದ ಜನರನ್ನು ದಾಯಾದಿಗಳನ್ನಾಗಿಸಿ ಜಗಳ ತಂದಿಕ್ಕಿ ತಾವು ಸೇಫಾಗಿರಲು ಪ್ರಯತ್ನಿಸುತ್ತಾರೆ. ಎರಡೂ ರಾಜ್ಯದ ಜನತೆ ತಮ್ಮನ್ನು ಆಳುವವರ ಕುತಂತ್ರವನ್ನು ಅರಿಯಬೇಕಿದೆ. ತಮ್ಮ ನಿಜವಾದ ಶತ್ರುಗಳು ಅನ್ಯ ಭಾಷಿಕರಲ್ಲ... ಆಳುವವರು ಎನ್ನುವ ಸತ್ಯವನ್ನು ಮನಗಾಣಬೇಕಿದೆ. ನಮ್ಮ ಮನೆಗಳಿಗೆ ಹಚ್ಚಲಾದ ಬೆಂಕಿಯನ್ನು ಪರಸ್ಪರ ಸೌಹಾರ್ಧತೆಯಿಂದ ನಂದಿಸಿ ಅದೇ ಬೆಂಕಿಯನ್ನು ಆಳುವವರ ಬುಡಕ್ಕೆ ಹಚ್ಚಬೇಕಿದೆ. ಕಾವೇರಿ ಬದುಕು ಸುಡುವ ಬೆಂಕಿಯಾಗದೆ.. ಎಲ್ಲ ಜೀವಿಗಳ ಜೀವನದಿಯಾಗಬೇಕಿದೆ..
-ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ