ಹಿರಿಯರಿಗಿರಲಿ ನೆಮ್ಮದಿಯ ಜೀವನ:
"ಹೆತ್ತವರನ್ನು ದೂರ ಮಾಡುವ ಪತ್ನಿಗೆ ಪತಿ ವಿಚ್ಚೇದನೆ ಕೊಡಬಹುದು" ಎಂಬ ಮಹತ್ತರವಾದ ತೀರ್ಪನ್ನು ಸುಪ್ರಿಂ ಕೋರ್ಟ ಅಕ್ಟೋಬರ್ 7 ರಂದು ಆದೇಶಿಸಿದೆ. ಇದು ಮಹಿಳಾ ಪರವೋ ವಿರೋಧವೋ ಎನ್ನುವುದಕ್ಕಿಂತಾ ಹಿರಿಯರ ಹಿತದೃಷ್ಟಿಯಿಂದಾ ಉತ್ತಮ ತೀರ್ಮಾನವಾಗಿದೆ.
ಹೆತ್ತು ಹೊತ್ತು ಸಾಕಿ ಬೆಳೆಸಿದ ಹೆತ್ತವರನ್ನು ಇಳಿವಯಸ್ಸಿನಲ್ಲಿ ಜೊತೆಗಿದ್ದು ಕಾಳಜಿಯಿಂದ ನೋಡಿಕೊಳ್ಳಬೇಕಾದದ್ದು ಮಗನಾದವನ ಕರ್ತವ್ಯವೂ ಆಗಿದೆ. ಆ ಕೆಲಸಕ್ಕೆ ಜೊತೆಯಾಗಬೇಕಾದದ್ದು ಪತ್ನಿಯಾದವಳ ಹೊಣೆಗಾರಿಕೆಯೂ ಆಗಿದೆ. ಆದರೆ ಜಾಗತೀಕರಣ ಸೃಷ್ಟಿಸಿದ ಆರ್ಥಿಕ ಒತ್ತಡದಲ್ಲಿ ಸಿಲುಕಿದ ಮನುಷ್ಯರ ಪ್ರಸ್ತುತ ಪರಿಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳು ನೇಪತ್ಯಕ್ಕೆ ಸೇರಿ ಮನೆಯ ಹಿರಿಯರು ನಿರ್ಲಕ್ಷಿಸಲ್ಪಟ್ಟಿದ್ದಾರೆ. ಈ ಆರೋಪಕ್ಕೆ ಕೇವಲ ಪತ್ನಿಯಾದವಳಷ್ಟೇ ಕಾರಣವಾಗಿರದೇ ಪತಿಯೂ ಸಹ ಭಾಗಿದಾರನಾಗಿದ್ದಾನೆ. ಹೀಗಾಗಿ ಅವಿಭಕ್ತ ಕುಟುಂಬಗಳು ಒಡೆದು ವಿಭಕ್ತವಾಗಿದ್ದು ಬರುಬರುತ್ತಾ ನಾನು ನನ್ನ ಹೆಂಡತಿ ಹಾಗೂ ಮಗು ಅಷ್ಟೇ ಎನ್ನುವ ನ್ಯಾನೊ ಕುಟುಂಬಗಳು ಅಸ್ತಿತ್ವಕ್ಕೆ ಬಂದಿವೆ. ಈ ರೀತಿಯ ಕೌಟುಂಬಿಕ ಸ್ವಾರ್ಥ ರಾಜಕೀಯಕ್ಕೆ ವೃದ್ದರು ತೊಂದರೆಗೊಳಗಾಗಿ ಅಸಹಾಯಕರಾಗುತ್ತಿರುವುದು ವಿಪರ್ಯಾಸ.
'ಮದುವೆಯಾದ ತಕ್ಷಣ ಪತ್ನಿ ತನ್ನ ಪತಿಯನ್ನು ಕೂಡು ಕುಟುಂಬದಿಂದ ದೂರ ಮಾಡಿ ಪ್ರತ್ಯೇಕತೆಗೆ ಪ್ರಯತ್ನಿಸುತ್ತಾಳೆ' ಎನ್ನುವ ಆರೋಪ ಮಹಿಳೆಯರ ಮೇಲೆ ಪುರುಷ ಪ್ರಧಾನ ವ್ಯವಸ್ಥೆ ಹೊರೆಸುತ್ತಾ ಬಂದಿದೆ. ಕೆಲವಾರು ಸಂದರ್ಭಗಳಲ್ಲಿ ಇದು ಸತ್ಯವೂ ಆಗಿದೆ. ಕೆಲವಾರು ಮಹಿಳೆಯರು ಮನೆಯ ಹಿರಿಯ ಸದಸ್ಯರೊಂದಿಗೆ ಹೊಂದಾಣಿಕೆಯಾಗದೇ ಪ್ರತ್ಯೇಕಗೊಳ್ಳಲು ಪತಿಯ ಮೇಲೆ ಒತ್ತಡ ಹಾಕಿದ್ದೂ ಇದೆ. ಆದರೆ ಕೇವಲ ಪತ್ನಿಯ ಒತ್ತಾಯದ ಜೊತೆಗೆ ಪತಿಯ ಸ್ವಾರ್ಥವೂ ಇಲ್ಲಿ ಪೂರಕವಾಗಿದ್ದರಿಂದ ಮನಸ್ಥಾಪಗಳು ಹೆಚ್ಚಾಗಿ ಮನೆಗಳು ಎರಡಾಗುತ್ತವೆ. 'ತಾನು ಸಂಪಾದಿಸಿದ ಹಣದಲ್ಲಿ ಹಿರಿಯರನ್ನು ಯಾಕೆ ಸಾಕುವುದು' ಎನ್ನುವ ಆರ್ಥಿಕ ಸ್ವಾರ್ಥ ಹಿತಾಸಕ್ತಿಯೂ ಇಂತಹ ಪ್ರತ್ಯೇಕತೆಗೆ ಪ್ರೇರೇಪಿಸುತ್ತದೆ. 'ನಾನೊಬ್ಬನೇ ಯಾಕೆ ಹಿರಿಯರ ಭಾರ ಹೊರುವುದು ಬೇರೆ ಮಕ್ಕಳು ಹೊರಲಿ' ಎನ್ನುವ ಸ್ವಾರ್ಥವೂ ಇಲ್ಲಿ ಕೆಲಸ ಮಾಡುತ್ತದೆ. ಅದಕ್ಕೆ ಪತ್ನಿಯಾದವಳು ಸಾತ್ ಕೊಡುತ್ತಾಳೆ.
ಕೆಲವು ಸಂದರ್ಭಗಳಲ್ಲಿ ಮಹಿಳೆಯರು ಗಂಡನ ಮೇಲೆ ಬೇರೆ ಮನೆ ಮಾಡಲು ಒತ್ತಡ ತರುತ್ತಾರೆ. ಅಂತಹ ಸಂದರ್ಭದಲ್ಲಿ ಮಾನವೀಯತೆ ಇರುವ ಹಿರಿಯರು 'ತಮ್ಮ ಮಗ ಸೊಸೆ ಚೆನ್ನಾಗಿದ್ದರಷ್ಟೇ ಸಾಕು, ನಮ್ಮಿಂದಾಗಿ ಯಾಕೆ ಅವರಿಬ್ಬರಲ್ಲಿ ಬಿರುಕು' ಎಂದು ದಂಪತಿಗಳನ್ನು ಪ್ರತ್ಯೇಕವಾಗಿರಲು ಸಮ್ಮತಿಸುತ್ತಾರೆ. ಕೆಲವೊಮ್ಮೆ ಅತ್ತೆ ಸೊಸೆಯ ನಡುವಿನ ಮನಸ್ಥಾಪಗಳೂ ಸಹ ಕುಟುಂಬ ವಿಭಜನೆಗೆ ದಾರಿಯಾಗುತ್ತವೆ.
ಮನೆಯ ಹಿರಿಯರನ್ನು ಅವರ ವಯೋಸಹಜ ರಾಗದ್ವೇಷಗಳ ಸಮೇತ ಗೌರವಿಸಿ ಕಾಳಜಿವಹಿಸುವುದು ಮಗ ಹಾಗೂ ಸೊಸೆಯ ಕರ್ತವ್ಯವೆಂಬುದು ನಿರ್ವಿವಾದ. ಆದರೆ ಹಲವಾರು ಸಂದರ್ಭಗಳು ಅದಕ್ಕೆ ವ್ಯತಿರಿಕ್ತವಾಗಿರುತ್ತವೆ. ಆಗ ಒಂದಿಷ್ಟು ಹೊಂದಾಣಿಕೆ ಅಗತ್ಯವಾಗುತ್ತದೆ. ಹೊಂದಾಣಿಕೆ ಸಾಧ್ಯವೇ ಇಲ್ಲದಂತಾ ಪರಿಸ್ಥಿತಿಯಲ್ಲಿ ಪತ್ನಿಗೆ ಗಂಡನ ಮನೆ ತೊರೆದು ಹೋಗುವ ಸ್ವಾತಂತ್ರ್ಯವೂ ಇದೆ. ಆದರೆ ಮಹಿಳಾ ಪರ ಕಾನೂನೂಗಳನ್ನು ದುರುಪಯೋಗ ಪಡಿಸಿಕೊಳ್ಳುವ ಕೆಲವು ದ್ವೇಷಪೂರಿತ ಮಹಿಳೆಯರು ತನ್ನ ಮಾತು ಕೇಳದ ಪತಿಯ ವಿರುದ್ದ ಮಹಿಳಾ ದೌರ್ಜನ್ಯ ಹಾಗೂ ಕೌಟುಂಬಿಕ ಹಿಂಸೆಯ ಕಾನೂನಿನಡಿ ದೂರನ್ನು ದಾಖಲಿಸಿ ಪತಿಗೆ ಹಾಗೂ ಅವನ ಕುಟುಂಬದವರಿಗೆ ತೊಂದರೆ ಕೊಡುವ ಮತ್ತು ಮಾನಹಾನಿ ಮಾಡುವ ಪ್ರಸಂಗಗಳೂ ಬೇಕಾದಷ್ಟಿವೆ. ಇಂತಹ ಸಂದರ್ಭದಲ್ಲಿ ಸುಪ್ರಿಂ ಕೋರ್ಟಿನ ಈ ಆದೇಶವು ಪತಿ ಹಾಗೂ ಅವನ ಹೆತ್ತವರ ಪರವಾಗಿ ಭಾರೀ ಪ್ರಯೋಜನಕ್ಕೆ ಬರುತ್ತದೆ. ವಿಶೇಷ ಸಂದರ್ಭಗಳಲ್ಲಿ ಮನೆ ಒಡೆಯಲು ಬಯಸುವ ಹೆಂಗಸರಿಂದ ಕೂಡು ಕುಟುಂಬಕ್ಕೆ ಕಾನೂನು ರಕ್ಷಣೆಯನ್ನು ಒದಗಿಸುತ್ತದೆ.
ಆದರೆ... ಮನುಷ್ಯ ಸಂಬಂಧಗಳ ಪರವಾಗಿಯೇ ಕಾನೂನುಗಳಿದ್ದರು ಅವುಗಳ ದುರುಪಯೋಗವೇ ಹೆಚ್ಚಾಗುವುದು ಬಂಡವಾಳಶಾಹಿ ಅಸಮಾನ ವ್ಯವಸ್ಥೆಯಲ್ಲಿ ಮಾಮೂಲಾಗಿದೆ. ಮಹಿಳೆಯರ ಪರವಾಗಿರುವ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ಪತಿ ಹಾಗೂ ಅವನ ಕುಟುಂಬದವರ ಮೇಲೇ ಸೇಡು ತೀರಿಸಿಕೊಂಡ ಪ್ರಕರಣಗಳು ಅಸಲಿ ಪ್ರಕರಣಗಳಿಗಿಂತಾ ಹೆಚ್ಚಿವೆ. ಅದೇ ರೀತಿ ಈಗ ಪತ್ನಿಗೆ ವಿಚ್ಚೇದನೆ ಕೊಡಬೇಕು ಎಂದು ಬಯಸುವವರಿಗೆ ಸುಪ್ರಿಂ ಕೋರ್ಟ್ ಹೊಸ ಅಸ್ತ್ರವನ್ನು ಒದಗಿಸಿದೆ. ಹೆಂಡತಿ ದೌರ್ಜನ್ಯದ ಕೇಸ್ ಹಾಕಿದರೆ ಗಂಡ ತನ್ನ ಹೆತ್ತವರಿಂದ ದೂರಾಗಲು ಹೆಂಡತಿ ಹಿಂಸಿಸುತ್ತಾಳೆಂಬ ಕಾರಣಕ್ಕೆ ಡೈವೋರ್ಸ ಕೇಳುತ್ತಾನೆ. ಇನ್ನು ಹಲವಾರು ಸಂದರ್ಭದಲ್ಲಿ ಪತ್ನಿ ಬೇಡವಾದರೆ ಇಲ್ಲವೇ ಇನ್ನೊಂದು ಮದುವೆಯಾಗಬಯಸಿದರೆ ಗಂಡ ಈ ಹೊಸ ಕಾನೂನಿನ ದುರ್ಬಳಿಕೆ ಮಾಡಿಕೊಂಡು ಹೆಂಡತಿಗೆ ವಿಚ್ಚೇದನೆ ಕೋರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಗಂಡು ಹೆಣ್ಣಿನ ಸಂಬಂಧಗಳು ಬಲು ಸೂಕ್ಷ್ಮವಾದಂತಹವು. ಸರಿಯಾಗಿರುವವರೆಗೂ ಎಲ್ಲವೂ ನೆಟ್ಟಗೆ ಇರುತ್ತವೆ. ಅಹಮಿಕೆ ಎನ್ನುವುದು ಯಾವಾಗ ಪತಿ ಪತ್ನಿಯರಲಿ ಅತಿಯಾಗುತ್ತದೋ ಆಗ ನಾನು ಹೆಚ್ಚು ನೀನು ಹೆಚ್ಚು ಎನ್ನುವ ಮೇಲಾಟ ಶುರುವಾಗುತ್ತದೆ. ಈ ವಿರಸದಾಟದಲಿ ಮೊದಲು ಬಲಿಪಶುವಾಗುವವರು ಮಕ್ಕಳು ಹಾಗೂ ನಂತರ ಮನೆಯ ಹಿರಿಯರು. ಮನುಷ್ಯ ಸಂಬಂಧಗಳೇ ಮೂಲೆಗುಂಪಾಗಿ ಸಂಪಾದನೆ, ಸರ್ವ ಸ್ವಾತಂತ್ರ್ಯ ಹಾಗೂ ಸ್ವೇಚ್ಚಾಚಾರಗಳೇ ಹೆಚ್ಚಾಗುತ್ತಿರುವ ಇಂದಿನ ಜಾಗತೀಕರಣದ ವ್ಯವಸ್ಥೆಯಲ್ಲಿ ಕೌಟುಂಬಿಕ ಸಂಬಂಧಗಳ ಬೇರುಗಳು ಸಡಿಲಗೊಳ್ಳುತ್ತಿವೆ. ವಿವಾಹಿತರ ಮನಸುಗಳೂ ಮಲಿನ ಹೊಂದುತ್ತಿವೆ. ಬರುಬರುತ್ತಾ ಮದುವೆ ಎನ್ನುವ ಪ್ರೇಮದರಮನೆ ಹೊಂದಾಣಿಕೆಯ ಕೊರತೆಯಿಂದಾಗಿ ಸೆರೆಮನೆ ಎಂದೆನಿಸುತ್ತವೆ. ವಿವಾಹ ಎನ್ನುವ ಸಂಬಂಧಗಳೇ ರೀಡಿಪೈನ್ ಗೊಳಗಾಗುವ ಸ್ಥಿತ್ಯಂತರದ ಕಾಲದಲ್ಲಿ ನಾವಿದ್ದೇವೆ.
ದಾಂಪತ್ಯವನ್ನು ಹೊಂದಾಣಿಕೆಗಳ ಮೂಲಕ ಉಳಿಸಿಕೊಳ್ಳುವುದು ಹಾಗೂ ಅಳಿಸಿಹಾಕುವುದು ದಂಪತಿಗಳ ಮಾನಸಿಕ ಸಮತೋಲನವನ್ನವಲಂಬಿಸಿದೆ. ಆದರೆ ದಾಂಪತ್ಯದ ವಿರಸದ ಸಿಕ್ಕುಗಳು ಹಿರಿಯ ಜೀವಗಳನ್ನು ಬಾಳಸಂಜೆಯಲ್ಲಿ ನೋಯಿಸದಿರಲಿ ಎನ್ನುವುದೇ ಕೋರ್ಟಿನ ಆದೇಶದೊಳಗಿನ ಅಂತಃಕರಣವಾಗಿದೆ. ಪತಿ ಹಾಗೂ ಪತ್ನಿ ಇಬ್ಬರೂ ಅದೆಷ್ಟೇ ಕಷ್ಟವಾದರೂ ಹಿರಿಯರನ್ನು ನೋಡಿಕೊಳ್ಳುವ ತಮ್ಮ ಕರ್ತವ್ಯದಿಂದ ವಿಮುಖರಾಗದಿರಲಿ ಎನ್ನುವುದೇ ಈ ಕಾನೂನಿನ ಆಶಯವಾಗಿದೆ. ಆದರೆ ಬಹುತೇಕ ಎಲ್ಲಾ ಕಾನೂನುಗಳಂತೆ ಈ ಆದೇಶವೂ ದುರುಪಯೋಗಗೊಂಡು ಮಹಿಳೆಯರ ಕತ್ತಿಗೆ ನೇಣಾಗದಿರಲಿ ಎಂದು ಆಶಿಸೋಣ. ಈ ಆದೇಶದ ಆಶ್ರಯದಲ್ಲಾದರೂ ಹಿರಿಯ ಜೀವಗಳು ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ಬದುಕಿನ ಕೊನೆಯ ಕಾಲದಲ್ಲಾದರೂ ನೆಮ್ಮದಿಯಾಗಿರಲಿ ಎಂದು ಹಾರೈಸೋಣ...
-
ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ