ಶನಿವಾರ, ಅಕ್ಟೋಬರ್ 15, 2016

ತಹ ತಹ .....37 ಗಾಂಧಿಗೆ ಧಿಕ್ಕಾರ, ಗೋಡ್ಸೆಗೆ ಜೈಕಾರ; ಸಂಭ್ರಮಿಸಿತು ಸಂಘಪರಿವಾರ:


ಗಾಂಧಿ ಹಂತಕನ ಪುತ್ತಳಿ ಅನಾವರಣ; ಗೋಡ್ಸೆ ಆರಾಧನೆಗೆ ಆಹ್ವಾನ:



ಇಂತಹ ಅವಿವೇಕದ ಘಟನೆ ಎರಡು ದಶಕದ ಹಿಂದೆ ನಡೆದಿದ್ದರೆ ದೇಶಾದ್ಯಂತ ಪ್ರತಿರೋಧ ವ್ಯಕ್ತವಾಗುತ್ತಿತ್ತು. ಆದರೆ ಈಗ ಸಣ್ಣ ಸಂಚಲನವನ್ನೂ ಹುಟ್ಟಿಸದಿರುವುದು ಆತಂಕದ ಸಂಗತಿಯಾಗಿದೆ. 

ಅಕ್ಟೋಬರ್ 2 ಗಾಂಧಿ ಜಯಂತಿ ದಿನದಂದು ದೇಶಾದ್ಯಂತ ಜನ ರಾಷ್ಟ್ರಪಿತನ ಜನ್ಮದಿನಾಚರಣೆಯನ್ನು ಗೌರವಪೂರ್ಣವಾಗಿ ಆಚರಿಸುತ್ತಿದ್ದರೆ ಅತ್ತ ಮೀರತ್ ನಲ್ಲಿ ಗಾಂಧೀಜಿಯ ಕೊಲೆಪಾತಕ ನಾಥೂರಾಂ ಗೋಡ್ಸೆಯ ಮೂರ್ತಿಯನ್ನು ಅನಾವರಣಗೊಳಿಸಿ  ಸಂಭ್ರಮಿಸಲಾಯಿತು. ಮಹಾತ್ಮರನ್ನು ಕೊಂದ ಪಾಪಾತ್ಮನಿಗೆ ಯಾರಪ್ಪಾ ಅದು ಹೀಗೆ ವೈಭವೀಕರಿಸಿದ್ದು ಎಂದು ಆತಂಕದಿಂದ ವಿಚಾರಿಸಿದರೆ ಸಂಘ ಪರಿವಾರದ ಮಹಾಮಹಿಮರೆಂಬುದು ಗೊತ್ತಾಯಿತು. ಅಖಿಲ ಭಾರತೀಯ ಹಿಂದೂ ಮಹಾಸಭಾದ ನಕಲಿ ದೇಶಭಕ್ತರು ತಮ್ಮ ಅಸಲಿ ಖಳನಾಯಕನ ಪುತ್ತಳಿ ಸ್ಥಾಪಿಸಿ ಗೋಡ್ಸೆಗಿರಿ ತೋರಿಸಿಯೇ ಬಿಟ್ಟರು. 

ಗೋಡ್ಸೆ ರೀತಿಯಲ್ಲಿಯೇ ಕೊಲೆಪಾತಕತನದ ಆರೋಪ ಹೊತ್ತು ಮರಣದಂಡನೆಗೆ ಗುರಿಯಾದ ಅಪ್ಜಲ್ ಗುರುವಿನ ಸಂಸ್ಮರಣಾ ಕಾರ್ಯಕ್ರಮವನ್ನು ದೆಹಲಿಯ ಜೆಎನ್ ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮಾಡಿದ್ದು ದೇಶದ್ರೋಹವೆಂದು ಬಾಯಿಬಡಿದುಕೊಂಡು ದೇಶಾದ್ಯಂತ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಸಂಘಪರಿವಾರದ ದೇಶಭಕ್ತರ ಒಂದು ವಿಭಾಗದವರೇ ಕೊಲೆಪಾತಕ ಗೋಡ್ಸೆಯ ಪ್ರತಿಮೆ ಪ್ರತಿಷ್ಟಾಪಿಸಿ ಸ್ಮರಣೆ ಕಾರ್ಯಕ್ರಮ ಮಾಡಿದ್ದಾರೆ. ನಕಲಿ ದೇಶಭಕ್ತರ ದುಷ್ಕೃತ್ಯಕ್ಕೆ ಅಸಲಿ ದೇಶಭಕ್ತರು ಪ್ರತಿಭಟಿಸದೇ ಸುಮ್ಮನಿರುವುದು ಗಾಂಧೀಗಿರಿ ಅಂತ್ಯವಾಗಿ ಗೋಡ್ಸೆಗಿರಿ ಆರಂಭವಾಗುವ ಮುನ್ಸೂಚನೆಯಾಗಿದೆ. 


ಸಂಘಪರಿವಾರದ ಅಧಿನಾಯಕ ಆರೆಸ್ಸೆಸ್ಸ ಎಂದೂ ರಾಷ್ಟ್ರದ ಸಂವಿಧಾನ, ರಾಷ್ಟ್ರದ್ವಜ ಹಾಗೂ ರಾಷ್ಟ್ರಪಿತನನ್ನು ಒಪ್ಪಿಕೊಂಡಿಲ್ಲ. ಒಪ್ಪಿಕೊಳ್ಳುವುದೂ ಇಲ್ಲ. ಇವರ ದೇಶಭಕ್ತಿ ಅನ್ನುವುದು ಮನುವಾದಿ ಪ್ಯಾಸಿಸ್ಟ್ ವ್ಯವಸ್ಥೆ ತರುವ ಹುನ್ನಾರದ ಭಾಗವಾಗಿ ಉನ್ಮಾದ ಸೃಷ್ಟಿಸುವ ಶಡ್ಯಂತ್ರವಾಗಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ದೇಶಾದ್ಯಂತ ಬಲಪಂಥೀಯ ಚಟುವಟಿಕೆಗಳು ತೀವ್ರವಾಗಿವೆ. ಇದರ ಭಾಗವಾಗಿ  ಸಂಘಪರಿವಾರದ ಆದರ್ಶ ಪುರುಷ ಗೋಡ್ಸೆ ಪ್ರತಿಮೆಯನ್ನು ಗಾಂಧಿ ಜಯಂತಿ ದಿನವೇ ದುರುದ್ದೇಶಪೂರ್ವಕವಾಗಿ ಅನಾವರಣಗೊಳಿಸಲಾಗಿದೆ.

ಎರಡು ವರ್ಷಗಳ ಹಿಂದೆ  2014 ರಲ್ಲಿ ಇದೇ ಹಿಂದೂ ಮಹಾಸಭಾದವರು ಗಾಂಧಿ ಜಯಂತಿಯನ್ನು 'ದಿಕ್ಕಾರ್ ದಿವಸ' ಹೆಸರಲ್ಲಿ ಆಚರಿಸಿ ಸಾರ್ವತ್ರಿಕವಾಗಿ ಟೀಕೆಗೊಳಗಾಗಿದ್ದರು. ಆಗಲೂ ಗೋಡ್ಸೆ ಪ್ರತಿಮೆ ಸ್ಥಾಪಿಸಲು ಪ್ರಯತ್ನಿಸಿದರೂ ಕೋರ್ಟ್ ಆದೇಶ ಹಾಗೂ ಗಾಂಧೀವಾದಿಗಳ ವಿರೋಧದ ಹಿನ್ನೆಲೆಯಲ್ಲಿ ಪ್ರಯತ್ನ ವಿಫಲವಾಗಿತ್ತು. ಆದರೆ ಸಲ ಮತ್ತೆ  ಗಾಂಧಿ ಜಯಂತಿಯ ದಿನವನ್ನು ಧಿಕ್ಕಾರ್ ದಿವಸವನ್ನಾಗಿ ಘೋಷಿಸಿ ಮೀರತ್ ಪಟ್ಟಣದ ಶಾರದಾ ರಸ್ತೆಯಲ್ಲಿರುವ  ತಮ್ಮ ಕಛೇರಿಯಲ್ಲಿ ಹಿಂದೂ ಸಭಾದವರು ಗೋಡ್ಸೆ ಮೂರ್ತಿಯನ್ನು ಪ್ರತಿಷ್ಟಾಪಿಸಿಯೇ ಬಿಟ್ಟಿದ್ದಾರೆ. ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ  ಅಶೋಕ್ ಶರ್ಮಾ "ಭಾರತೀಯರು ಗಾಂಧಿಯನ್ನು ಅನುಸರಿಸುವುದನ್ನು ಬಿಟ್ಟು ಗೋಡ್ಸೆಯನ್ನು ಆರಾಧಿಸಬೇಕು" ಎಂದು ಆದೇಶಿಸಿದ್ದಾರೆ. 


ದೇಶಕ್ಕೆ ಇದಕ್ಕಿಂತಾ ದೌರ್ಬಾಗ್ಯ ಬೇಕಾ?. ಹೋಗಲಿ ಸಂಘಿಗಳ ಕೃತ್ಯಗಳೇ ಇಂತವುಗಳೆಂದುಕೊಂಡರೂ ಗಾಂಧಿಯನ್ನ ತಮ್ಮ ಪಕ್ಷದ ಆಸ್ತಿಯನ್ನಾಗಿಸಿಕೊಂಡ್ ಕಾಂಗ್ರೆಸ್ ಪಕ್ಷ ಮೌನತಾಳಿದೆ. ಗಾಂಧಿ ಬಗ್ಗೆ ಗಾಂಧಿ ಜಯಂತಿಯಂದು ಭಾಷಣ ಮಾಡುವ ರಾಜಕಾರಣಿಗಳು, ಸಾಹಿತಿ ಬುದ್ದಿಜೀವಿಗಳೂ ಸಹ ತಮಗ್ಯಾಕೆ ಇಲ್ಲದ ಉಸಾಬರಿ ಎಂದು ಮೌನವಾಗಿದ್ದಾರೆ. ರಾಷ್ಟ್ರದ ಆಡಳಿತ ಬಿಜೆಪಿ ಕೈಗೆ ಬರುತ್ತಿದ್ದಂತೆ ದೇಶದ್ರೋಹಿಗಳಿಗೆ ಬಲಬಂದಂತಾಗಿದೆ. ಹುತಾತ್ಮನನ್ನು ದಿಕ್ಕರಿಸುವುದು ಹಾಗೂ ಹಂತಕನನ್ನು ವೈಭವೀಕರಿಸುವುದು ಸಾರ್ವತ್ರಿಕವಾಗಿಯೇ ನಡೆಯುತ್ತಿದೆ. ಮಹಾತ್ಮಾ ಗಾಂಧೀಜಿಯವರ ರಾಜಕೀಯ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿರುವ ಲಾಲ್ ಸಲಾಂ ಕಮ್ಯೂನಿಸ್ಟರು, ಎಡವಾದಿಗಳು, ಅಂಬೇಡ್ಕರ್ ವಾದಿಗಳೂ ಸಹ ಗೋಡ್ಸೇ ವಾದಿಗಳ ದುಷ್ಕೃತ್ಯವನ್ನು ಒಂದಾಗಿ ವಿರೋಧಿಸಲೇಬೇಕಿದೆ. ಇಲ್ಲವಾದರೆ ಊರು ಕೇರಿಗಳಲ್ಲಿ ಗೋಡ್ಸೆ ಗುಡಿಗಳನ್ನು ಕಟ್ಟಿ ಜನರ ದಿಕ್ಕುತಪ್ಪಿಸಿ ಮನುವಾದಿ ರಾಷ್ಟವನ್ನು ಸಂಘಪರಿವಾರಿಗಳು ಕಟ್ಟುವುದರಲ್ಲಿ ಸಂದೇಹವೇ ಇಲ್ಲ. ಗಾಂಧಿಯವರ ವಿಚಾರದಲ್ಲಿ ಕೆಲವರಿಗೆ ಭಿನ್ನಾಭಿಪ್ರಾಯವಿರಬಹುದು ಆದರೆ ಜನವಿರೋಧಿ ಪ್ಯಾಸಿಸ್ಟ್ ವ್ಯವಸ್ಥೆ ಬರಬಾರದು ಎಂದುಕೊಳ್ಳುವ ಪ್ರತಿಯೊಬ್ಬರೂ ಹಿಂದೂ ಮಹಾಸಭಾದ ಹುನ್ನಾರವನ್ನು ತೀವ್ರ ಪ್ರತಿಭಟನೆಯ ಮೂಲಕ ವಿರೋಧಿಸಿ ವಿಫಲಗೊಳಿಸಲೇ ಬೇಕಿದೆ. ಇಲ್ಲವಾದರೆ ಗೋಡ್ಸೆವಾದಿಗಳೇ ಜ್ಯಾತ್ಯಾತೀತ ದೇಶವನ್ನು ಆಪೋಷಣ ತೆಗೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ನಮಗೆ ಗಾಂಧಿ ಮಾದರಿಯಾಗದಿದ್ದರೂ ಚಿಂತೆಯಿಲ್ಲ ಜೀವವಿರೋಧಿಯಾದ ಗೋಡ್ಸೆಗಿರಿ ಬೇಕಾಗಿಲ್ಲ. ಹಿಂಸಾವಾದಿ ಹಂತಕ ಗೋಡ್ಸೆ ಎಂದೂ ಯಾರಿಗೂ ಆದರ್ಶವಾಗುವುದು ಅಗತ್ಯವಲ್ಲ. 

ಇತ್ತ ಕರ್ನಾಟಕ ತಮಿಳುನಾಡಿನ ಜನತೆ ಕಾವೇರಿ ನದಿ ನೀರಿನ ಹಂಚಿಕೆಯ ಸಮಸ್ಯೆಯತ್ತ ಚಿಂತಾಕ್ರಾಂತರಾಗಿರುವಾಗ, ಅತ್ತ ಇಡೀ ದೇಶಾದ್ಯಂತ ಯುದ್ಧದ ಉನ್ಮಾದ ಪಸರಿಸಿ ಗಡಿಯತ್ತಲೇ ಜನರ ಗಮನವಿರುವಾಗ, ಇತ್ತ ಹಿಂದೂ ಮಹಾಸಭಾದವರು ಗೋಡ್ಸೆ ಪ್ರತಿಮೆ ಸ್ಥಾಪಿಸಿದ್ದು ಅವರ ಕುತಂತ್ರದ ಭಾಗವೇ ಆಗಿದೆ. ದೇಶದ ಜನರ ದಿಕ್ಕನ್ನು ಬೇರೆಕಡೆ ತಿರುಗಿಸಿ ತಮ್ಮ ಹಿಡನ್ ಅಜೆಂಡಾಗಳನ್ನು ಕಂತು ಕಂತಾಗಿ ಜಾರಿಮಾಡುವ ಕೆಲಸವನ್ನು  ಹಿಂದುತ್ವವಾದಿಗಳು ಮಾಡುತ್ತಲೇ ಇದ್ದಾರೆ. ತೀವ್ರವಾಗಿ ಪ್ರತಿಭಟಿಸಬೇಕಾದ ಪ್ರಗತಿಪರರು ಹಾಗೂ ಹೋರಾಟಗಾರರು ತಮ್ಮದೇ ಆದ ಚಿಂತನ ಮಂಥನಗಳಲ್ಲಿ ಮಗ್ನರಾಗಿದ್ದಾರೆ. ಕೂಡಲೇ ಎಚ್ಚೆತ್ತು  ಗೋಡ್ಸೆವಾದಿಗಳ ವಿರುದ್ದ ಜನಾಂದೋಲನ ಮಾಡುವ ಅಗತ್ಯವಿದೆ. ಹೀಗೆಯೇ ನಿರ್ಲಕ್ಷವಹಿಸಿದರೆ ಸರ್ವಾಧಿಕಾರಿ ಪ್ಯಾಸಿಸ್ಟ್ ಪ್ರಭುತ್ವದ ಆಡಳಿತವನ್ನು ಒಪ್ಪಿಕೊಳ್ಳಲು ಮಾನಸಿಕವಾಗಿ ಸಿದ್ದರಾಗಬೇಕಿದೆ 

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ