ತಹ ತಹ....5
"ಧರ್ಮ ಅಂದ್ರೆ ಗಂಡ... ರಾಜಕೀಯ ಅಂದ್ರೆ ಹೆಂಡ್ತಿ. ಪತ್ನಿಯನ್ನು ರಕ್ಷಿಸೋದು ಪ್ರತಿಯೊಬ್ಬ ಪತಿಯ ಕರ್ತವ್ಯ ಗಂಡನ ಮಾತನ್ನು ಕೇಳುವುದು ಪತ್ನಿಯ ಕರ್ತವ್ಯ" ಎಂದು ಹರಿಯಾಣದ ಅಸೆಂಬ್ಲಿಯ ಎತ್ತರದ ಪೀಠದಲ್ಲಿ ಆಸೀನರಾದ ಬೆತ್ತಲೆ ಸ್ವಾಮಿಗಳು ಪುಕ್ಸಟ್ಟೆ ಪ್ರವಚನ ನೀಡಿದರು. ಈ ಸರ್ವಸಂಗ ಪರಿತ್ಯಾಗಿ ಜೈನಮುನಿ ತರುಣ್ ಸಾಗರ್ ಎಂಬ ಬ್ರಹ್ಮಚಾರಿ ಹೀಗೆ ಗಂಡನಾಗಿ ಆದೇಶಿಸಿದಾಗ ಅಸೆಂಬ್ಲಿಯಲ್ಲಿ ಕುಳಿತು ಕೇಳಿದ ರಾಜಕಾರಣಿಗಳೆಲ್ಲಾ ಹೆಂಡತಿಯರಾಗಿ ಭಯ ಭಕ್ತಿಯಿಂದ ಪ್ರವಚನ ಕೇಳಿ ಪಾವನರಾದರು.
ಹಿಂದೂಪರ ಸ್ವಾಮಿಗಳು ಮನುವಾದಿ ಪ್ರೇರಿತರಾಗಿ ಈ ದೇಶ ಉದ್ದಾರಮಾಡಿದ್ದಾಯ್ತು... ಈಗ ಅಹಿಂಸೆಯನ್ನು ಬೋಧಿಸುವ ಈ ಜೈನ ಸ್ವಾಮಿಗಳೂ ಮನುವಾದಿಯಾಗಿದ್ದು ಸನಾತನ ಧರ್ಮಕ್ಕೆ ಅಪಾರ ಶೋಭೆ ತರುವಂತಹುದಾಗಿದೆ. ಯಾಕೆಂದರೆ ಗಂಡ ಹೇಳಿದಂತೆ ಕೇಳಿಕೊಂಡು ತೆಪ್ಪಗಿರಬೇಕು ಎಂಬುದನ್ನು ಮನು ಯಾವತ್ತೋ ತನ್ನ ಸ್ಮೃತಿಯಲ್ಲಿ ಹೇಳಿಯಾಗಿದೆ. ಅದನ್ನೇ ಈಗ ಈ ಜೈನ ಧರ್ಮೀಯ ಕುಲತಿಲಕ ಮಹಾಮುನಿಗಳು ತಮ್ಮ ಪರಮ ಪವಿತ್ರ ಬಾಯಿಂದ ಹೇಳಿದ್ದಾರೆಂದರೆ ಹೆಂಡರನ್ನಾಳಬಯಸುವ ಗಂಡಂದಿರೆಲ್ಲಾ ಕುಡಿದು ಕುಪ್ಪಳಿಸಬೇಕಾದ ಸುದ್ದಿಯಾಗಿದೆ. ಸಂಘ ಪರಿವಾರದವರಿಗಂತೂ ಹಾಲು ಕುಡಿದಷ್ಟು ಸಂತಸವಾಗಿದ್ದರೆ, ಬಜರಂಗಿಗಳು ಭಂಗಿ ಕುಡಿದು ಮರ ಹತ್ತಿ ಕುಣಿಯುವುದೊಂದೇ ಬಾಕಿ ಇದೆ.
ಜೊತೆಗೆ "ಹೆಣ್ಣುಮಕ್ಕಳಿಲ್ಲದವರಿಗೆ ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗೆ ನಿಲ್ಲಲು ಅವಕಾಶ ನೀಡಬಾರದು, ಹೆಣ್ಮಕ್ಕಳಿಲ್ಲದ ಕುಟುಂಬಕ್ಕೆ ಯಾರೂ ಹೆಣ್ಣು ಕೊಡಬಾರದು ಹಾಗೂ ಹೆಣ್ಣು ಮಕ್ಕಳಿರದ ಮನೆಯಿಂದ ಧಾರ್ಮಿಕ ಮುಖಂಡರು ಭಿಕ್ಷಾನ್ನ ಸ್ವೀಕರಿಸಬಾರದು" ಎನ್ನುವ ತ್ರೀಸೂತ್ರವನ್ನು ನಗ್ನ ಸ್ವಾಮಿಗಳು ಐಶಾರಾಮಿ ಖುರ್ಚಿಯಲ್ಲಿ ಆಸೀನರಾಗಿ ಆದೇಶಿಸಿದ್ದಾರೆ. ಎಂತಾ ಚಿನ್ನದಂತಾ ಮಾತು ನಮ್ಮ ಸ್ವಾಮಿಗಳದು... "ರಾಜ್ಯದಲ್ಲಿ ಹೆಣ್ಣು ಮಕ್ಕಳ ಕೊರತೆ ತೀವ್ರವಾಗಿ ಮದುವೆಗೆ ಹುಡುಗಿಯರೇ ಸಿಕ್ಕುತ್ತಿಲ್ಲ' ಎಂದೂ ಅವಲತ್ತುಕೊಂಡಿದ್ದಾರೆ. ಏನೇ ಹೇಳಿ ನಗ್ನ ಮುನಿಗಳಿಗೆ ಹೆಣ್ಮಕ್ಕಳ ಮೇಲಿನ ಕಾಳಜಿಗಿಂತಾ ಗಂಡ್ಮಕ್ಕಳ ಮೇಲೆ ಕಳಕಳಿಯಂತೂ ವರ್ಣಿಸಲಸಾಧ್ಯ. ಯಾಕಂದ್ರೆ ಹೀಗೆ ಹೆಣ್ಮಕ್ಕಳು ಕಡಿಮೆ ಆಗ್ತಾ ಹೋದ್ರೆ ಗಂಡಸರ ಸೇವೆ ಮಾಡೋದ್ಯಾರು... ಪತಿಗಳು ಹೇಳಿದಂತೆ ಕೇಳ್ಕೊಂಡಿರೋ ಹೆಂಡತಿಗಳು ಇಲ್ಲವಾದರೆ ಸಂಸಾರ ನಡೆಯೋದೇಗೆ... ಎಂಬ ಚಿಂತೆ ಈ ಸರ್ವಸಂಗ ಪರಿತ್ಯಾಗಿಯನ್ನೂ ಕಾಡಿದೆ ಎಂದ ಮೇಲೆ ಪುರುಷ ಪ್ರಧಾನ ವ್ಯವಸ್ಥೆಯ ಮೇಲೆ ಅವರಿಗೆಷ್ಟು ಮಮಕಾರ. ಈ ಬೆತ್ತಲೇ ಸ್ವಾಮಿಯ ಸರ್ವಾಂಗಕ್ಕೂ ಮನುವಾದಿ ಗಂಡಸರು ಹಾಕಲೇಬೇಕು ನಮಸ್ಕಾರ. ಹೆಣ್ಣು ಸಂತಾನ ಕೊರತೆಯಾದರೆ ಗಂಡುಸಂತಾನದ ಸೇವೆಗೆ ಸೇವಕಿಯರಿಲ್ಲದಂತಾಗುತ್ತದಲ್ಲಾ... ಹೆಣ್ಮಕ್ಕಳಿಲ್ಲದಿದ್ರೆ ಈ ಭವತಿ ಭಿಕ್ಷಾಂದೇಹಿ ಸ್ವಾಮಿಗಳಿಗೆ ಕೂಳು ಮಾಡಿ ನೀಡುವವರಿರುವುದಿಲ್ಲವಲ್ಲಾ ಎನ್ನುವ ಚಿಂತೆ ನಮ್ಮ ಜೈನಮುನಿಗಳನ್ನ ಕಾಡಿದಂತಿದೆ. ಆದ್ದರಿಂದ ಗಂಡಸರ ಸೇವೆಗಾಗಿ ಹೆಣ್ಣುಕುಲ ಇರಲೇಬೇಕು ಎನ್ನುವ ಆಕಾಂಕ್ಷೆಯನ್ನು ಸ್ವಾಮಿಗಳು ಒತ್ತಿ ಒತ್ತಿ ಹೇಳಿದ್ದಾರೆ.
ರಾಜಕೀಯವೆಂಬುದು ಆಜ್ಞಾಧಾರಕ ಹೆಂಡತಿಯ ಹಾಗಿರಬೇಕೆಂದು ಹೇಳಿಸಿಕೊಂಡ ರಾಜಕಾರಣಿಗಳು ಕುಂಡಿ ಬಡಿದುಕೊಂಡು ಕುಣಿಯುವುದೊಂದು ಬಾಕಿ ಇದೆ. ಮನುವಾದಿ ಭೂತವನ್ನು ಆಹ್ವಾನಿಸಿಕೊಂಡು ಆಶೀರ್ವಚನ ನೀಡಿದ ಈ ಮುನಿಗಳು ಭಕ್ತಜನ ಆರಾಧಕ ಮೋದಿ ಬುಡಕ್ಕೆ ಕೈಹಾಕಿದ್ದು ಇನ್ನೂ ಭಕ್ತರಿಗೆ ಗೊತ್ತಾಗಿಲ್ಲ. ಈ ಸ್ವಾಮಿಗಳು ಹೇಳಿದ ತ್ರಿಸೂತ್ರವೇನಾದರೂ ಅಧಿಕೃತವಾಗಿ ಜಾರಿಯಾದಲ್ಲಿ ನಮ್ಮ ಪ್ರಧಾನಿ ಮೋದಿ ಸಾಹೇಬರು ಮುಂದಿನ ಸಲ ಇಲೆಕ್ಷನ್ನಿಗೆ ನಿಲ್ಲುವಂತಿಲ್ಲ.. ಯಾಕಂದ್ರೆ ಅವರು ಹೆಂಡತಿಯನ್ನ ಯಾವಾಗ್ಲೋ ಬಿಟ್ಟಾಗಿದೆ. ಇನ್ನು ಮಕ್ಕಳೆಲ್ಲಿಂದ ಬರಬೇಕು. ಮೋದಿ ಭಕ್ತರಿಗೆ ಸ್ವಲ್ಪ ಜಾಣಕುರುಡು ಇನ್ನೊಂದು ಸ್ವಲ್ಪ ಜಾಣಕಿವುಡು.. ಅದಕ್ಕೆ ಸುಮ್ಮನಿದ್ದಾರೆ. ಬೆತ್ತಲೆ ಮುನಿ ಬದಲು ಇದೇ ತ್ರಿಸೂತ್ರಗಳನ್ನ ಯಾವುದಾದರೂ ಮುಲ್ಲಾ ಹೇಳಿದ್ರೆ ಇಷ್ಟೊತ್ತಿಗೆ ಅಲ್ಲೋಲ ಕಲ್ಲೋಲ ಮಾಡಿಬಿಡ್ತಿದ್ರು. ಮೋದಿ ಭಕ್ತರಂದ್ರೆನು ಸುಮ್ಮನೇನಾ..ಕಡ್ಡಿ ಹೋಗಿ ಗುಡ್ಡಾ ಮಾಡಿ ಬೆಂಕಿ ಹಚ್ಚೋ ಮಹಾತ್ಮರು. ಏನೇ ಆದ್ರೂ ಅದೇ ಅಸೆಂಬ್ಲಿಯಲ್ಲಿ ನಮ್ಮ ಹೆಮ್ಮೆಯ ಸಂಘಪರಿವಾರಿಗಳಿಗೆ ಭಾರೀ ಇಷ್ಟವಾಗೋ ಪಾಕಿಸ್ತಾನ ವಿರೋಧಿ ಮಾತುಗಳನ್ನ ಹೇಳಿದ ನಂಗಾಸ್ವಾಮಿಗಳು ಭಕ್ತರ ಮನಸ್ಸನ್ನು ತೃಪ್ತಿಪಡಿಸಿದರು.
'ಪಾಕಿಸ್ತಾನ ಭಯೋತ್ಪಾದಕರೆಂಬ ಭಸ್ಮಾಸುರರನ್ನು ಸೃಷ್ಟಿಸುತ್ತಿದೆ. ಒಂದು ಬಾರಿ ತಪ್ಪು ಮಾಡಿದರೆ ಅಜ್ಞಾನ್.. ಎರಡನೇ ಬಾರಿ ತಪ್ಪು ಮಾಡಿದರೆ ನಾದಾನ್ ( ಮುಗ್ದ), ಮೂರನೆಯ ಬಾರಿ ತಪ್ಪು ಮಾಡಿದರೆ ಸೈತಾನ್, ಪದೇ ಪದೇ ತಪ್ಪು ಮಾಡಿದರೆ ಪಾಕಿಸ್ತಾನ್, ಪಾಕಿಸ್ತಾನವನ್ನು ಪದೇ ಪದೇ ಕ್ಷಮಿಸುತ್ತಿರುವುದು ಹಿಂದೂಸ್ಥಾನ್" ಎಂದು ಗಾಳಿ ಗುದ್ದಿ ಹೇಳಿದ ಬೆತ್ತಲೆ ಸ್ವಾಮಿಯ ಮಾತಿಗೆ ಇಡೀ ಹರಿಯಾಣ ಅಸೆಂಬ್ಲಿ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದ್ದು ಕೇಳಿದ ನಮ್ಮ ದೇಶದ ಹೆಮ್ಮೆಯ ಚಡ್ಡಿ ಸಂತಾನಗಳಿಗೆ ಹಾಲುತುಪ್ಪ ಕುಡಿದಂತಾಗಿದ್ದಂತೂ ಸುಳ್ಳಲ್ಲ. ಬಿಳಿ ಬಾವುಟದ ಮುನಿಗಳ ಬಾಯಲ್ಲಿ ಕೇಸರಿ ಭಾವುಟದ ಸನಾತನಿ ಸ್ವಾಮಿಗಳ ಮಾತುಗಳು ಪ್ರತಿದ್ವನಿಸಿದ್ದು ಐತಿಹಾಸಿಕ ಅಚ್ಚರಿಯೇನಲ್ಲ. ಹಿಂದುತ್ವದ ಅಜಂಡಾದ ಮೇಲೆ ಜೈನ ಧರ್ಮದ ಜಂಡಾ ಹಾರಾಡುವುದು ಕಂಡುಂಡ ಭಕ್ತರು 'ಒಂದೇ ಮಾತರಂ' ಗೀತೆಯನ್ನು ಇನ್ನೂ ಜೋರಾಗಿ ಹಾಡುವಂತಾಯಿತು. ನಗ್ನ ಮುನಿಗೆ ಬೆತ್ತಲಾಗಲೂ ಏನೂ ಉಳಿದಿಲ್ಲ ಆದರೆ ಅಸೆಂಬ್ಲಿಗೆ ಸಂಬಂಧಿಸದ ಧರ್ಮಗುರುವನ್ನು ಕರೆಸಿ ಎಲ್ಲರಿಗಿಂತ ಎತ್ತರದ ಆಸನದಲ್ಲಿ ಕುಳ್ಳರಿಸಿ ಮಹಿಳಾ ವಿರೋಧಿ ಪ್ರವಚನವನ್ನು ಕೇಳಿ ಚಪ್ಪಾಳೆ ಹೊಡೆದ ರಾಜಕಾರಣಿಗಳು ಜನತೆಯ ಕಣ್ಣಲ್ಲಿ ಬೆತ್ತಲಾದರು ಎಂದು ಕಮ್ಯೂನಿಸ್ಟರೂ ಸಹ ಹೇಳಿಕೆ ಕೊಡದೆ ಸುಮ್ಮನಾದರು.
ಇದೆಲ್ಲವನ್ನು ನೋಡಿದರೆ ನಮ್ಮ ದೇಶವನ್ನು ಪ್ಯಾಸಿಸ್ಟ್ ಆಡಳಿತ ಆಪೋಷಣ ತೆಗೆದುಕೊಳ್ಳುವುದರಲ್ಲಿ ಸಂದೇಹವಿಲ್ಲ. ಮನುಸ್ಮೃತಿ ಈ ದೇಶದ ಸಂವಿದಾನವಾಗುವುದರಲ್ಲಿ ಅತಿಶಯವಿಲ್ಲ. ಜೈನಮನು ಕ್ಷಮಿಸಿ ಜೈನಮುನಿಯ ಸರ್ವಾಂಗಕ್ಕೂ ನಮಸ್ಕರಿಸಿ ನನ್ನ ಮಾತು ಮುಗಿಸುವೆ. ಇನ್ನೂ ಹೆಚ್ಚು ಮಾತಾಡಿದರೆ ಧರ್ಮದ್ರೋಹ ಹಾಗೂ ದೇಶದ್ರೋಹಗಳ ಆರೋಪದ ಮೇಲೆ ನಾನು ಶ್ರೀಕೃಷ್ಣಜನ್ಮಸ್ಥಳ ಸೇರುವುದು ನಿಸ್ಸಂದೇಹ.
ಈಗಾಗಲೇ ಮುನಿಗಳ ಮಹಾಪ್ರಸಾದದ ಮಾತುಗಳನು ಟೀಕಿಸಿ ಟ್ವೀಟಿಸಿದ ಬಾಲಿವುಡ್ ಸಂಗೀತ ನಿರ್ದೇಶಕ ಗಾಯಕ ವಿಶಾಲ್ ದದ್ಲಾನಿ ವಿರುದ್ದ ಜೈನ ಸಮುದಾಯ ಯುದ್ದಸಾರಿದೆ. ದದ್ಲಾನಿ ಮೂವತ್ಮೂರು ಸಲ ಕ್ಷಮೆಯಾಚಿಸಿ ಟ್ವೀಟ್ ಮಾಡಿದರೂ ಜೈನಮನುವಾದಿಗಳ ಆಕ್ರೊಶ ಇನ್ನೂ ಕಡಿಮೆಯಾಗುತ್ತಿಲ್ಲ. ಧರ್ಮ ಅಂದ್ರೆ ಸುಮ್ಮನೇನಾ? ಧರ್ಮವೊಂದರ ಮುನಿಯನ್ನು ಟೀಕಿಸು ದಕ್ಕಿಸಿಕೊಳ್ಳೋದು ಅಷ್ಟೊಂದು ಸುಲಬಾನಾ? ಧರ್ಮೋ ರಕ್ಷತಿ ರಕ್ಷಿತಃ. ಆದರೆ ಯಾರ ರಕ್ಷಣೆಗೆ ಧರ್ಮ ಅನ್ನೋದನ್ನ ಕೇಳಬಾರದು. ಕೇಳಿದರಿಗೆ ಭಕ್ತರಿಗೆ ಸಿಟ್ಟು ಉಕ್ಕಿ ಬರುತ್ತೆ.. ಕೇಳಿದವರ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿ ಸಿಕ್ಕಾಕಿಕೊಳ್ಳುತ್ತೆ. ಅದಕ್ಕೆ ಎಲ್ಲರೂ ಜೋರಾಗಿ ಹೇಳಿ...
ಜೈನ ಮನುವಿಗೆ ಜೈ... ಸಾರಿ.. ಜೈನಮುನಿಗೆ ಡಬಲ್ ಜೈ...
- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ