ಶುಕ್ರವಾರ, ಅಕ್ಟೋಬರ್ 14, 2016

ತಹ ತಹ..... 16 ಕಾವೇರಿ ಸಮಸ್ಯೆಯ ಮೂಲಕ್ಕೆ ಮದ್ದರೆಯಬೇಕಿದೆ :

ತಹ ತಹ..... 16

ಮತ್ತೆ ಕಾವೇರಿ ನೀರಿನ ಹಂಚಿಕೆ ಕುರಿತ ಕಿಡಿ ಬೆಂಕಿಯಾಗಿದೆ. ಅತ್ತ ಕಡೆಯವರು ನೀರು ಬೇಕೆ ಬೇಕೆಂದು ಹಠಮಾಡುತ್ತಿದ್ದಾರೆ. ಇತ್ತ ಕಡೆಯವರು ನಮಗೆ ನೀರಿಲ್ಲ ನಿಮಗೆ ಕೊಡೊಲ್ಲ ಎನ್ನುತ್ತಿದ್ದಾರೆ. ಅತ್ತ ಇತ್ತಗಳ ಪೈಪೋಟಿಯ ನಡುವೆ ರಾಜಕಾರಣಿಗಳು ಬೆಂಕಿ ಬಿದ್ದ ಮನೆಯಲ್ಲಿ ಮೈಕಾಯಿಸಿಕೊಳ್ಳಲು ಹವಣಿಸುತ್ತಾರೆ.

ಕಾವೇರೀದು ಇಂದು ನಿನ್ನೆಯ ಸಮಸ್ಯೆಯಲ್ಲ. ಸದ್ಯಕ್ಕೆ ಮುಗಿಯುವಂತೆಯೂ ಕಾಣುತ್ತಿಲ್ಲ. ಮಳೆ ಕಡಿಮೆಯಾದ ವರ್ಷ, ಡ್ಯಾಮಗಳಲ್ಲಿ ನೀರಿನ ಒಳಹರಿವಿನ ಕೊರತೆಯಾದ ವರ್ಷ  ರಾಜ್ಯಗಳೆರಡರ ಸಂಘರ್ಷ ತಾರಕಕ್ಕೇರುತ್ತಲೇ ಇರುತ್ತದೆ. ಎರಡೂ ರಾಜ್ಯದ ರೈತರ ನೆಮ್ಮದಿ ಕೆಡುತ್ತಲೇ ಇರುತ್ತದೆ. ಇದಕ್ಕೆಲ್ಲಾ ಶಾಶ್ವತ ಪರಿಹಾರ ಎಂದು?

ನೀರು ಬೇಕು ಬೇಡ ಎನ್ನುವುದನ್ನು ಹೋರಾಟ ನಿರತ ಜನ ನಿರ್ಧರಿಸಲು ಸಾಧ್ಯವಿಲ್ಲ. ಕೂಗಾಟ ಹಾರಾಟ ಹೋರಾಟ ಬಂದ್ಗಳಿಂದ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆಯೇ ಹೊರತು ಮಾಯೋದಿಲ್ಲ. ರೋಗ ಬಂದಾಗ ಕ್ಷಣದ ಶಮನಕ್ಕೆ ಚಿಕಿತ್ಸೆ ಕೊಡುವ ಅಲೋಪತಿ ವೈದ್ಯರಿಗಿಂತಾ ರೋಗಲಕ್ಷಣಗಳನ್ನು ಅರಿತು ರೋಗದ ಮೂಲಕ್ಕೆ ಚಿಕಿತ್ಸೆ ಕೊಡುವ ಅಯುರ್ವೇದ ವೈದ್ಯಚಿಕಿತ್ಸೆ ಬೇಕಿದೆ. ನಿಧಾನವಾದರೂ ರೋಗ ಖಾಯಂ ಆಗಿ ವಾಸಿಯಾಗಬೇಕಿದೆ. ಇಲ್ಲವಾದರೆ ಮೈಯಲ್ಲಿ ನೀರಿನ ಕೊರತೆ  ಹೆಚ್ಚಿದಾಗೆಲ್ಲಾ ಉಲ್ಬಣಿಸುವ ಮೂಲವ್ಯಾಧಿಯಂತಾಗಿದೆ ಕಾವೇರಿ ಸಮಸ್ಯೆ ಆಗಾಗ ಹೆಚ್ಚುತ್ತಲೇ ಇರುತ್ತದೆ. ರಾಜ್ಯಗಳ ಜನತೆಯಲ್ಲಿ ದ್ವೇಶ ಬೆಳೆಯುತ್ತಲೇ ಇರುತ್ತದೆ.

ವ್ಯಾಜ್ಯ ಶಮನಕ್ಕೆ ಬೇಕಾಗಿರೋದು ರಾಜಕೀಯ ಇಚ್ಚಾಶಕ್ತಿ. ಆದರೆ ಇಬ್ಬರ ಜಗಳ ಮೂರನೆಯವರಿಗೆ ಲಾಭ ತಂದು ಕೊಡುವುದಿದ್ದರೆ ಮೂರನೆಯವ ಜಗಳ ಕೊನೆಗೊಳಿಸಲು ಹೇಗೆ ಸಾಧ್ಯ. ಇಲ್ಲಿ ಆಗಿದ್ದೂ ಹಾಗೇನೇ.. ಕರ್ನಾಟಕ ಹಾಗೂ ತಮಿಳುನಾಡು ಎನ್ನುವ ನೆರೆಹೊರೆಯ ರಾಜ್ಯಗಳು ಒಂದೇ ನದಿ ನೀರಿನ ಹಂಚಿಕೆಗಾಗಿ ಕಾಲಕಾಲಕ್ಕೆ ಬಡಿದಾಡುತ್ತಿವೆ. ಆದರೆ ಇದನ್ನು ಬಗೆಹರಿಸಬಹುದಾದ ದೊಡ್ಡಣ್ಣ ಕೇಂದ್ರ ಸರಕಾರ ಇಬ್ಬರ ಜಗಳದಲ್ಲಿ ತನ್ನ  ರಾಜಕೀಯ ಲಾಭದ ಲೆಕ್ಕಚಾರದಲ್ಲಿ ಮಗ್ನವಾಗಿರುತ್ತದೆ. ಕೇಂದ್ರ ಸರಕಾರವನ್ನು ಪಕ್ಕಕ್ಕಿಟ್ಟು ಪರಸ್ಪರ ಮಾತುಕತೆಯಿಂದ ತಮ್ಮ ಸಮಸ್ಯೆಯನ್ನು ಎರಡೂ ರಾಜ್ಯ ಸರಕಾರಗಳು ಬಗೆಹರಿಸಿಕೊಳ್ಳುವ ಸಾಧ್ಯತೆಗಳು ಮುಕ್ತವಾಗಿದೆ. ಆದರೆ ಇದಕ್ಕೂ ಕೂಡಾ ಓಟಿನ ರಾಜಕೀಯ ಅಡ್ಡಗಾಲಾಗಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯಕ್ಕೆ ಎಲ್ಲಕ್ಕಿಂತ ಮುಖ್ಯವಾದದ್ದು ಓಟು. ಮತಗಳನ್ನು ಹಿಡಿದಿಡಲು ಜನರ ಭಾವನೆಗಳನ್ನು ಬಡಿದೆಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳು ಶತಾಯ ಗತಾಯ ಕಾಲಕಾಲಕ್ಕೆ ಪ್ರಯತ್ನಿಸುತ್ತಲೇ ಇರುತ್ತವೆ. ಎಲ್ಲಾ ನಮೂನಿ ಪಕ್ಷಗಳಿಗೂ ರಾಜ್ಯದ ಜನರ ಹಿತಾಸಕ್ತಿಗಿಂತ ಅಧಿಕಾರದ ಹಿತಾಸಕ್ತಿಯೇ ಪ್ರಮುಖ ಎನ್ನುವುದು ನಿರ್ವಿವಾದ. ಇಂತಹ ವಿಕ್ಷಿಪ್ತ ರಾಜಕೀಯ ಪರಿಸ್ಥಿತಿಯಲ್ಲಿ  ಜನಸಾಮಾನ್ಯರು ಬೀದಿಗಿಳಿದು ಹೋರಾಡುತ್ತಾರೆ. ರಾಜಕೀಯ ಇಚ್ಚಾಶಕ್ತಿಯ ಕೊರತೆ ಹಾಗೂ ಓಟಿನ ಹಿತಾಸಕ್ತಿಯ ರಾಜಕೀಯದಿಂದಾಗಿ ಸಮಸ್ಯೆ ಬಗೆಹರಿಯದೇ ಸಮಸ್ಯೆಯಾಗಿಯೇ ಉಳಿಯುತ್ತದೆ. ಹುಣ್ಣು ಕೆರೆಕೆರೆದು ಗಾಯಮಾಡಿಕೊಂಡು ಬಾಯಿಬಡಿದುಕೊಳ್ಳುವುದು ನಿರಂತರವಾಗಿದೆ.

ಪ್ರತಿ ಬಾರಿಯೂ ತಮಿಳುನಾಡು ಯಾಕೆ ತನ್ನ ಪಾಲನ್ನು ಪಡೆದುಕೊಳ್ಳುವಲ್ಲಿ ಯಸ್ವಿಯಾಗುತ್ತದೆ? ಎನ್ನುವುದನ್ನು ಅರಿತುಕೊಳ್ಳುವುದು ಅಯ್ಯಯ್ಯೋ ಅನ್ಯಾಯವೆಂದು ಹೊರಾಡುತ್ತಿರುವ ಕನ್ನಡ ಕಲಿಗಳಿಗೆ ಒಳಿತು. ಕಾವೇರಿ ಸಮಸ್ಯೆಯ ಬಗೆಹರಿಸುವ ಕೀಲಿಕೈ ಇರುವುದು ಸುಪ್ರಿಂ ಕೋರ್ಟಲ್ಲಿ. ಕೋರ್ಟುಗಳು ಸಾಕ್ಷಿ ಆಧಾರ ಹಾಗೂ ವಕೀಲರುಗಳ ಮಾತಿನ ಚಾಲಾಕಿತನದ ಮೇಲೆ ನಿರ್ಣಯ ಕೈಗೊಳ್ಳುತ್ತವೆ. ಪ್ರತಿ ಸಲ ತಮಿಳುನಾಡನ್ನು ಪ್ರತಿನಿಧಿಸುವ ತಮಿಳು ಭಾಷಿಕ ವಕೀಲರ ತಂಡ ಅಪಾರವಾದ ಪೂರ್ವತಯಾರಿಯೊಂದಿಗೆ ಕೋರ್ಟಲ್ಲಿ ತಮ್ಮ ವಾದ ಮಂಡಿಸುತ್ತಾ ಯಾವಾಗಲೂ ನ್ಯಾಯ ನಿರ್ಣಯ ತಮ್ಮದೇ ಕಡೆಯಾಗಿರಬೇಕೆಂದು ಶತಾಯ ಗತಾಯ ಶ್ರಮಿಸುತ್ತದೆ. ಆದರೆ ಅದಕ್ಕೆ ತದ್ವಿರುದ್ದವಾಗಿ ಕರ್ನಾಟಕವನ್ನು ಪ್ರತಿನಿಧಿಸುವ ಕನ್ನಡೇತರ ವಯೋವೃದ್ದ ವಕೀಲ ನಾರಿಮನ್ ಮತ್ತು ತಂಡ ಬೆಂಕಿ ಹತ್ತಿದಾಗ ಭಾವಿ ತೋಡುವ ಕೆಲಸವನ್ನು  ವೃತ್ತಿಗೆ ತಕ್ಕಷ್ಟು ಮಾಡುತ್ತಿದೆ.

ನಾರಿಮನ್ ಅಸಾಮಾನ್ಯ ವೃತ್ತಿಪರ ನ್ಯಾಯವಾದಿ ಎನ್ನುವುದರಲ್ಲಿ ಸಂದೇಹವಿಲ್ಲತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿ ಕಾವೇರಿ ಸಮಸ್ಯೆಯನ್ನು ಕರ್ನಾಟಕದ ಪರವಾಗಿ ಇತ್ಯರ್ಥವಾಗುವಂತೆ ಮಾಡಿದರೆಲ್ಲಿ ನಿಯಮಿತ ಆದಾಯ ತರುವ ಸರಕಾರಿ ಕ್ಲೈಂಟ್ ಕೈತಪ್ಪಿ ಹೋಗುತ್ತದೋ ಎನ್ನುವಷ್ಟು ವೃತ್ತಿಪರತೆ ನಾರಿಮನ್ ರವರದ್ದಾಗಿದೆ. ಲಾಭಕೋರ ವೃತ್ತಿಪರತೆಯುಳ್ಳ ಯಾವ ವಕೀಲರೂ ಯಾವುದೇ ಕೇಸನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ತಮ್ಮ ಲಾಭಕ್ಕೆ ಸಂಚುಕಾರ ತಂದುಕೊಳ್ಳಲು ಬಯಸುವುದಿಲ್ಲಇದಕ್ಕೆ ನಾರಿಮನ್ ಎನ್ನುವ ಅನುಭವಿ ಪಂಟರ್ ವಕೀಲರು ಕೂಡಾ ಹೊರತಾಗಿಲ್ಲ. ಹತ್ತು ನಿಮಿಷ ವಾದ ಮಂಡಿಸಲು ನಾರಿಮನ್ ಪಡೆಯುವ ಸಂಭಾವನೆ ಕೇವಲ ಇಪ್ಪತ್ತೈದು ಲಕ್ಷ ರೂಪಾಯಿಗಳು. ಇದೂ ನಿರಂತರ ಆದಾಯ. ಸಮಸ್ಯೆ ಬಗೆಹರಿಸಿ ಬರುವ ಆದಾಯ ನಿಲ್ಲಿಸಿಕೊಳ್ಳುವುದೂ ಅಸಾಧ್ಯ. ಅವರಿಗೆ  ವೃತ್ತಿಪರತೆಯ ಆಚೆ ಭಾಷಾಭಿಮಾನ ನಾಡಿನಾಭಿಮಾನ ಎನ್ನುವ ಹಂಗಿಲ್ಲ. ಯಾಕೆಂದರೆ ಕನ್ನಡ ನಾಡು ನುಡಿ ಸಂಸ್ಕೃತಿಗೂ ಅವರಿಗೂ ಸಂಬಂಧವೇ ಇಲ್ಲ. ನಾರಿಮನ್ ಕನ್ನಡಿಗರೇ ಅಲ್ಲ.

ಇದಕ್ಕೆ ವಿರುದ್ದವಾಗಿ ಭಾಷಾಭಿಮಾನದ ವೃತ್ತಿಪರತೆಯನ್ನು ತಮಿಳುನಾಡನ್ನು ಪ್ರತಿನಿಧಿಸುತ್ತಿರುವ ವಕೀಲರ ತಂಡ ತಮ್ಮದೇ ಮನೆಯ ಸಮಸ್ಯೇಯೇನೋ ಎನ್ನುವ ರೀತಿಯಲ್ಲಿ ಸೂಕ್ತ ತಯಾರಿಯೊಂದಿಗೆ ಸುಪ್ರೀಂ ಕೋರ್ಟಲ್ಲಿ ಸಮರ್ಥವಾಗಿ ವಾದಮಂಡಿಸಿ ಪ್ರತಿ ಸಲ ನ್ಯಾಯ ನಿರ್ಣಯ ತಮಿಳುನಾಡಿನ ಪರವಾಗಿರುವಂತೆ ನೋಡಿಕೊಳ್ಳುತ್ತಾರೆ . ಇದಕ್ಕೆ ವೃತ್ತಿಪರತೆಯ ಜೊತೆಗೆ ಭಾಷಾಭಿಮಾನ, ಜನಾಂಗಾಭಿಮಾನ ಹಾಗೂ ನಾಡಿನ ಮೇಲಿರುವ ಅಭಿಮಾನವೇ ಕಾರಣವಾಗಿದೆ.. ಅಂತಹ ಕನ್ನಡದ ಬಗ್ಗೆ ಅಭಿಮಾನವಿರುವ ಚಾಲಾಕಿ ಪ್ರತಿಭಾನ್ವಿತ ಕನ್ನಡಿಗ ವಕೀಲರ ತಂಡವನ್ನು ರಚಿಸಿ ಕರ್ನಾಟಕದ ಹಿತಾಸಕ್ತಿಗಾಗಿ ಅತ್ಯುನ್ನತ ನ್ಯಾಯಾಲಯದಲ್ಲಿ ವಾದ ಮಂಡಿಸಿ ಗೆಲ್ಲುವ ಹೊಣೆಗಾರಿಕೆಯನ್ನು ವಹಿಸಿಕೊಡುವುದು ಮೊಟ್ಟಮೊದಲಾಗಬೇಕಾದ ತುರ್ತು ಕೆಲಸವಾಗಿದೆ.

ಇದಕ್ಕೆ ಕರ್ನಾಟಕ ರಾಜ್ಯ ಸರಕಾರಗಳ ನಿಷ್ಕ್ರಿಯತೆಯೂ ಕಾರಣ ಎಂಬುದರಲ್ಲಿ ಸುಳ್ಳಿಲ್ಲ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷವೇ ಹೈಕಮಾಂಡ್ ಆದರೆ ರಾಷ್ಟ್ರೀಯ ಪಕ್ಷಗಳ ಆಡಳಿತದಲ್ಲಿ  ರಾಜ್ಯಸರಕಾರ ಹೈಕಮಾಂಡುಗಳಿಗೆ ಗುಲಾಮವಾಗಿರಬೇಕಾಗುತ್ತದೆ. ಕಾಂಗ್ರೆಸ್ ಇರಲಿ ಬಿಜೆಪಿ ಇರಲಿ... ಪಕ್ಷದ ಮಂತ್ರಿಗಳು ಸಂಸದರಿಗೆ ನಾಡಿನ ನೆಲ ಜಲ ಜನರ ಹಿತಾಸಕ್ತಿಗಿಂತ ತಮ್ಮ ಪಕ್ಷದ ಹಿತಾಸಕ್ತಿಯೇ ಮುಖ್ಯವಾಗುತ್ತದೆ. ಹೀಗಾಗಿ ಪಕ್ಷಾತೀತವಾಗಿ ಸಂಸದರು ಒಂದಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ತರಲು ಸಾಧ್ಯವಾಗುತ್ತಿಲ್ಲ.. ಆಗುವುದೂ ಇಲ್ಲ. ತಮಿಳುನಾಡಿನ ರಾಜಕಾರಣಿಗಳಿಗೆ ಅದು ಸಾಧ್ಯವಾಗುತ್ತದೆ. ಕೇಂದ್ರದಲ್ಲಿ ಒಂದಿಲ್ಲಾ ಇನ್ನೊಂದು ಸರಕಾರದೊಂದಿಗೆ ಮೈತ್ರಿ ಹೊಂದಿರುವ ತಮಿಳುನಾಡಿನ ರಾಜ್ಯ ಸರಕಾರಗಳು ಕೇಂದ್ರ ಸರಕಾರಕ್ಕೆ ಒತ್ತಡ ಹೇರಿ ಇಲ್ಲವೇ ಬ್ಲಾಕ್ಮೇಲ್ ಮಾಡಿ ತಮ್ಮ ನಾಡು ನುಡಿ ಜನ ಜಲದ ಹಿತಾಸಕ್ತಿಯನ್ನು ಕಾಪಾಡಿಕೊಂಡೇ ಬರುತ್ತಿದೆ. ಆದರೆ ಪ್ರಾದೇಶಿಕತೆಯ ಪಾವರ್ರಿನ ಅರಿವೇ ಇಲ್ಲದ... ಭಾಷಾಭಿಮಾನದ ಪ್ರಜ್ಞೆ ಗೊತ್ತಿಲ್ಲದ ಕನ್ನಡಿಗರು ರಾಷ್ಟ್ರೀಯ ಪಕ್ಷಗಳಿಗೆ ಮತ ಹಾಕಿ ರಾಜ್ಯಾಧಿಕಾರ ಕೊಡುತ್ತಲೇ ಬಂದಿದ್ದಾರೆ. ಸರಕಾರಗಳು ಕನ್ನಡಿಗರ ಹಿತಾಸಕ್ತಿ  ರಕ್ಷಿಸುವಲ್ಲಿ ವಿಫಲವಾದಾಗ ಅಯ್ಯಯ್ಯೋ ಅನ್ಯಾಯವೆಂದು ಬೀದಿಗಿಳಿದು ಘೋಷಣೆ ಕೂಗುತ್ತಾರೆ. ಅಸಲಿಗೆ ರಾಜ್ಯದ ಹಿತಾಸಕ್ತಿಗಿಂತ ಹೈಕಮಾಂಡಿನ ಊಳಿಗದಲ್ಲಿ ಜೀತಕ್ಕಿರುವ ರಾಷ್ಟ್ರೀಯ ಪಕ್ಷಗಳನ್ನು ಮೂಲೆಗುಂಪು ಮಾಡಿ ಕನ್ನಡಿಗರು ಇರುವುದರಲ್ಲೆ ಉತ್ತಮವೆನಿಸುವ  ಪ್ರದೇಶಿಕ ಪಕ್ಷವೊಂದಕ್ಕೆ ಪೂರ್ಣಪ್ರಮಾಣದಲ್ಲಿ ರಾಜ್ಯಾಧಿಕಾರ ಕೊಡಬೇಕಿದೆ. ರಾಷ್ಟ್ರೀಯ ಪಕ್ಷಗಳಿಗೆ ಹೊರತಾದ ಸಂಸದರನ್ನು ಕೇಂದ್ರಕ್ಕೆ ಆರಿಸಿ ಕಳುಹಿಸಬೇಕಿದೆ. ಹೈಕಮಾಂಡ್ ಮಾದರಿಗಳನ್ನು ನೋಡಿಯಾಯಿತು.. ತಮಿಳುಮಾದರಿಯ ಪ್ರಾದೇಶಿಕ ಪಕ್ಷ ರಾಜಕೀಯವನ್ನೂ ಕರ್ನಾಟಕ ನೋಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಎನ್ನುವುದೇ ಹೀಗೆ ಪ್ರಯೋಗಶಾಲೆ ಇದ್ದ ಹಾಗೆ. ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಸರಕಾರ ಬರುವವರೆಗೆ ಪ್ರಯೋಗ ನಿರಂತರ.

 ಹೀಗೆ ಬೀದಿಗಿಳಿದು ರಸ್ತೆ ಬಂದ್ ಮಾಡಿ, ಟಯರಿಗೆ ಬೆಂಕಿ ಹಚ್ಚಿ, ಸಾರ್ವಜನಿಕರ ಆಸ್ತಿಯನ್ನು ದ್ವಂಸಗೊಳಿಸಿ, ಬಂದ್ ಗಳನ್ನು ಆಚರಿಸಿದರೆ ಇದೇ ನಾಡಿನ ಜನತೆಗೆ ತೊಂದರೆ ಆಗುತ್ತದೆಯೇ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ... ಕಾವೇರಿ ಗಮ್ಯದತ್ತ ಹರಿಯುವುದು ನಿಲ್ಲುವುದಿಲ್ಲ. ಈಗ ಕಾವೇರಿ ಸಮಸ್ಯೆ ಎನ್ನುವುದು ಕೇವಲ ನದಿಯೊಂದರ ಸಮಸ್ಯೆಯಲ್ಲ. ಅದನ್ನು ರಾಜಕೀಯ ಪಕ್ಷಗಳ ಹಿತಾಸಕ್ತಿಯ ಭಾಗವಾಗಿಯೇ ನೋಡಬೇಕಾಗಿದೆ. ನಾವು ಸಾಮಾನ್ಯ ಜನತೆ ರಾಜಕೀಯದಿಂದ ದೂರವಿದ್ದೇವೆಂದರೂ ರಾಜಕೀಯ ಜನರನ್ನು ಬಿಡದೇ ಜನರ ದಿನನಿತ್ಯದ ಆಗುಹೋಗುಗಳನ್ನು ನಿಯಂತ್ರಿಸುತ್ತಲೇ ಇರುತ್ತದೆ ಎನ್ನುವ ಅರಿವು ಜನರಿಗೆ ಬೇಕಾಗಿದೆ. ಈಗ  ಕಾವೇರಿ ವಿಷಯದಲ್ಲೂ ಆಗಿರೋದು ಆಗ್ತಿರೋದು ಇದೇ ರಾಜಕೀಯ ಚದುರಂಗದಾಟ. ಇದೆಲ್ಲಾ ಗೊತ್ತಿದ್ದೋ ಗೊತ್ತಿಲ್ಲದೆಯೋ ಜನಸಾಮಾನ್ಯರು ಭಾವಾವೇಶಕ್ಕೊಳಗಾಗಿ ಬೀದಿಗಿಳಿಯುತ್ತಾರೆ. ಜನರ ಹೋರಾಟಗಳನ್ನು ಮಟ್ಟ ಹಾಕುವ ಪಟ್ಟುಗಳನ್ನು ಕರಗತಮಾಡಿಕೊಂಡ ಆಳುವ ವರ್ಗ ತಮ್ಮ ರಾಜಕೀಯ ದಾಳಗಳನ್ನು ಉರುಳಿಸುತ್ತಲೇ ಇರುತ್ತಾರೆ. ಇದ್ಯಾವುದೂ ಗೊತ್ತಿಲ್ಲದ ಕಾವೇರಿ ಬಿಟ್ಟಾಗೆಲ್ಲಾ ಹರಿಯುತ್ತಲೇ ಇರುತ್ತಾಳೆ...


 - ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ