ಮಂಗಳವಾರ, ಅಕ್ಟೋಬರ್ 25, 2016

ತಹ ತಹ.....51 ಶ್ರೀರಾಮನಿಗೆ ಸಗಣಿ ಬಳಿದು ಸಿಕ್ಕಾಕಿಕೊಂಡ ಶ್ರೀರಾಮಭಕ್ತರು



ಜನ ತಮ್ಮ ಪಾಡಿಗೆ ತಾವು ಸುಖವಾಗಿದ್ದರೆ ಅದೆಂಗಾಗುತ್ತೆ? ಸಮಾಜದಲ್ಲಿ ಸಂಘರ್ಷಗಳೇ ಇಲ್ಲಾ ಅಂದ್ರೆ ಅದೊಂದು ಸಮಾಜಾನಾ? ನೋಡಿ ನಮ್ಮ ದೇಶಭಕ್ತರು ಅದು ಹೇಗೆ ಆಗಾಗ ಅಲ್ಲಲ್ಲಿ ಕಿಡಿ ಹೊತ್ತಿಸಿ ಜನರಲ್ಲಿ ತಲ್ಲಣ ಸೃಷ್ಟಿ ಮಾಡಿ ಸಂಚಲನ ಹುಟ್ಟಿಸ್ತಾರೆ. ಅದರಿಂದಾಗಿ ಒಂದಿಷ್ಟು ಕೋಮುದ್ವೇಷ, ಇನ್ನೊಂದಿಷ್ಟು ಅಸಹಿಷ್ಣುತತೆ ಹುಟ್ಟುತ್ತದೆಂದರೆ ಹುಟ್ಟಲಿ ಬಿಡಿ. ಒಂದಿಷ್ಟು ಹೆಣಗಳು ಬೀಳುತ್ತವೆಂದರೆ ಬೀಳಲಿ ಬಿಡಿ. ಇನ್ನೊಂದಿಷ್ಟು ರಕ್ತಪಾತವಾಗುತ್ತದೆಂದರೆ ಆಗಲಿ ಬಿಡಿ. ಒಟ್ಟಿನ ಮೇಲೆ ಜನರು ನೆಮ್ಮದಿಯಾಗಿರಬಾರದು. ಸಮಾಜ ಸುಖ ಶಾಂತಿ ಸಹಬಾಳ್ವೆಯಿಂದಿದ್ದರೆ  ದೇಶಭಕ್ತರು ಪ್ರತಿನಿಧಿಸುವ ದೇವರಿಗೆ, ಧರ್ಮಕ್ಕೆ ಹಾಗೂ ಪಕ್ಷಕ್ಕೆ ಯಾರು ತಾನೇ ಪ್ರಾಮುಖ್ಯತೆ ಕೊಡ್ತಾರೆ?

ಅಪರೂಪಕ್ಕೆ ವರ್ಷ ಮಳೆ ಚೆನ್ನಾಗಿ ಆಗಿ, ಬೆಳೆ ಉತ್ತಮವಾಗಿರುವ ಸಮಯದಲ್ಲಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದ ಜನ ತಮ್ಮ ಪಾಡಿಗೆ ತಾವು ಹೇಗೊ ಇದ್ದರು. ಹಿಂಗೆಲ್ಲಾ ಇದ್ದರೆ ಹೆಂಗೆ ಅಂದುಕೊಂಡ ಶ್ರೀರಾಮ ಸೇನೆಯ ರಾಮಭಕ್ತರು ವಿಜಯದಶಮಿಯ ದಿನ ತಾವೇ ಹಾಕಿದ ಶ್ರೀರಾಮನ ಪ್ಲೆಕ್ಸ್ ಕಟೌಟಿಗೆ ನಸುಕಿನ ನಾಲ್ಕು ಗಂಟೆಗೆ ಸಗಣಿ  ಎರಚಿದರು. ಮರು ದಿನ ಮೂರು ದಾರಿ ಸೇರುವಲ್ಲಿ ನಿಂತ ಇದೇ ಶ್ರೀರಾಮ ಭಕ್ತರುಗಳು " ಅಯ್ಯೊ ನಮ್ಮ ಪರಮ ಪೂಜ್ಯನೀಯ ದೇವರಿಗೆ ದ್ರೋಹಿಗಳು ಅವಮಾನ ಮಾಡಿದ್ದಾರೆನಮ್ಮ ಧಾರ್ಮಿಕ ಭಾವನೆಗಳಿಗೆ ಬೆಂಕಿ ಹಾಕಿದ್ದಾರೆ. ವಿದ್ರೋಹಿಗಳನ್ನು ಕೂಡಲೇ ಬಂದಿಸದಿದ್ದರೆ ಉಗ್ರ ಹೋರಾಟ ಮಾಡ್ತೇವೆ" ಅಂತಾ ಧರಣಿ ಕೂತು ತಮ್ಮ ಶ್ರೀರಾಮ ಭಕ್ತಿಯನ್ನು ಇಡೀ ಕಲಬುರ್ಗಿ ಜಿಲ್ಲೆಗೆ ತೋರಿಸಿದರು.

ಭಕ್ತಾದಿಗಳ ಆಟಾಟೋಪ ಕ್ರೋಧಕ್ಕೆ ಹೆದರಿ ಗಡಗಡ ನಡುಗಿದ ಶಹಬಾದ್ ಠಾಣೆಯ ಪೊಲೀಸರುಗಳು ಹಗಲು ರಾತ್ರಿ ತಲೆ ಕೆಡಿಸಿಕೊಂಡು ಸಗಣಿ ಎರೆಚಿದ ಶ್ರೀರಾಮಸೇನೆಯ ವೀರ ಸೈನಿಕರಿಗೆ ಹೆಡಮುರಿಗೆ ಕಟ್ಟಿ ಠಾಣೆಗೆ ಎಳೆತಂದರುಶ್ರೀರಾಮಸೇನೆಯ ಸಗಣಿ ಶೂರರು ಈಗ ಜೈಲು ಸೇರಿದ್ದಾರೆ. ಶಹಬಾದ್ ಕೋಮುದ್ವೇಷದಲ್ಲಿ ಹೊತ್ತಿ ಉರಿಯುವುದನ್ನು ಪೊಲೀಸರು ತಪ್ಪಿಸಿದ್ದಾರೆ. ಶ್ರೀರಾಮ ಸೇನೆಯ ಅಧಿನಾಯಕ ಪ್ರಮೋದ್ ಮುತಾಲಿಕರು ಸಧ್ಯಕ್ಕೆ ತಲೆ ತಪ್ಪಿಸಿಕೊಂಡಿದ್ದಾರೆ

ಒಂಚೂರು ಹೆಚ್ಚು ಕಡಿಮೆ ಆಗಿದ್ದರೂ ಇದೇ ಭಕ್ತರುಗಳು ಅನ್ಯ ಕೋಮಿನ ಮನೆ ಅಂಗಡಿಗಳಿಗೆ ರಾತ್ರಿ ಬೆಂಕಿ ಇಟ್ಟು, ಹಗಲಲ್ಲಿ ಅಯ್ಯಯ್ಯೊ ಅನ್ಯಾಯ ಎಂದು ಬಾಯಿಬಡಿದುಕೊಂಡು ಇಡೀ ಶಹಾಪುರಕ್ಕೆ ಶಹಪುರವೇ ಕೋಮುದ್ವಾಷಾಗ್ನಿಯಲ್ಲಿ ಹೊತ್ತಿ ಉರಿಯುವುವಂತೆ ಮಾಡುತ್ತಿದ್ದರೆಂಬುದರಲ್ಲಿ ಸಂದೇಹವೇ ಇರಲಿಲ್ಲ

ಹೀಗೆ ಸಮಾಜದಲ್ಲಿ ಸಂಘರ್ಷವಿಲ್ಲದೇ ಸಾಮರಸ್ಯವೇ ಎಲ್ಲಾ ಕಡೆ ಇದ್ದರೆ ಕೋಮುವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಾದರೂ ಹೇಗೆ? ತಾವು ನಿಜವಾದ ದೈವಭಕ್ತರು ಎಂದು ಅಮಾಯಕ ಜನರನ್ನು ನಂಬಿಸುವುದು ಹೇಗೆ? ತಮ್ಮ ಕೋಮು ಹಾಗೂ ದೇಶಭಕ್ತಿಯನ್ನು ಸಾಬೀತು ಪಡಿಸುವುದಾದರೂ ಹೇಗೆ? ಅಂತಹ ಸಂದರ್ಭಗಳು ಒದಗಿ ಬರದಿದ್ದರೆ ಅಂತದನ್ನು ಸೃಷ್ಟಿಸಿದರಾಯ್ತು. ಅಂತಹುದೇ ಒಂದು ಪ್ರಹಸನದ ಪ್ರಯತ್ನ ಶಹಪುರದಲ್ಲಿ ವಿಫಲವಾಯಿತೇ ಹೊರತು ನಿಲ್ಲುವುದಿಲ್ಲಇಂತಹ ಇನ್ನೂ ಅನೇಕ ಸಮಾಜದ ಸೌಹಾರ್ಧತೆ ಒಡೆಯುವ ಪ್ರಯೋಗಗಳಂತೂ ನಿರಂತರವಾಗಿ ಅಲ್ಲಲ್ಲಿ ಜಾರಿಯಾಲ್ಲಿರುತ್ತವೆ. ಇದು ಮೊದಲನೆಯದೂ ಅಲ್ಲಾ.... ಕೊನೆಯದೂ ಅಲ್ಲಾ.... ಮನುಧರ್ಮ ಜಾರಿಯಾಗುವವರೆಗೂ ಪರಿವಾರದವರ ಪ್ರಹಸನಗಳಿಗೆ ಕೊನೆ ಎಲ್ಲಿ? ಜೈ ಶ್ರೀರಾಮ್...

                            - ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ