ಶುಕ್ರವಾರ, ಅಕ್ಟೋಬರ್ 14, 2016

ತಹ ತಹ .... 8 ಭಗವಾನರ ಬಂದೂಕು ಮತ್ತು ಮಿಡಿಯಾಂಗದ ಕೆಡುಕು :

ತಹ ತಹ – 8


ಸಾಹಿತಿ ಭಗವಾನರ ಬಾಯಲ್ಲಿ 'ಬಂದೂಕು' ಎಂಬ ಶಬ್ದ ಬಂದ ಕೂಡಲೇ ನಮ್ಮ ಬ್ರೇಮೀನ್ ಬ್ರೇನ್ ಮಾಧ್ಯಮಗಳಿಗೆ  ಒಂದೆರಡು ದಿನ ತಿಂದುಗುಳಲು ಚೂಯಿಂಗಮ್ ಸಿಕ್ಕಂತಾಯ್ತು. ಎಲ್ಲಾ ಬಿಟ್ಟು ಉದೋ ಉದೋ ಎನ್ನುತ್ತಾ ಎಲ್ಲವ್ವಗ ಹೋದಂತೆ ದಿನವೆಲ್ಲಾ ತೌಡು ಕುಟ್ಟುವ ಪಿಕನಾಸಿ ಚಾನೆಲ್ಲುಗಳು  ಭಗವಾನರ ಬಂದೂಕಿನ ಹಿಂದೆ ವಿಶ್ವಾಮಿತ್ರನ ಹಿಂದೆ ಬಿದ್ದ ನಕ್ಷತ್ರಿಕನಂತೆ ಬಿದ್ದು ಎದ್ದು ಒದ್ದಾಡಿ ಗುದ್ದಾಡತೊಡಗಿದವು.

ಆಗಸ್ಟ್ 30 ರಂದು ಧಾರವಾಡದಲ್ಲಿ ವಿಚಾರವಾದಿಗಳ ಹತ್ಯೆಯನ್ನು ವಿರೋಧಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ವೈಚಾರಿಕವಾಗಿ ಮಾತಾಡಿದ ಅನೇಕ ಸಾಹಿತಿಗಳ, ವಿಚಾರವಂತರ ಮಾತುಗಳ್ಯಾವವೂ ಮಾಧ್ಯಮದವರ ಕ್ಯಾಮರಾ ಎನ್ನುವ ಪೀತ ಕಣ್ಣಿಗೆ ಬೀಳಲೇ ಇಲ್ಲ.    ಯಾಕೆಂದರೆ  ಎಲ್ಲರ ಮಾತುಗಳಲ್ಲಿ  ತರ್ಕಬದ್ದ ವಿಚಾರಗಳಿದ್ದವೇ ಹೊರತು ವಿವಾದಗಳಿರಲಿಲ್ಲ. ಜನರನ್ನು ದಾರಿ ತಪ್ಪಿಸಿ ಜನಸಮುದಾಯದ ಆಲೋಚನೆಗಳ ದಿಕ್ಕು ತಪ್ಪಿಸುವ ಅಂಶಗಳಿರಲಿಲ್ಲ.

ಇಲ್ಲದಿದ್ದರೇನಾಯ್ತು ವಿವಾದಗಳನ್ನು ಹುಟ್ಟುಹಾಕುವಲ್ಲಿ ಪಂಟರ್ ಗಳಾದ ಚಾನಲ್ಲಿಗರು ನೇರವಾಗಿ ಹೋಗಿ ತಮ್ಮ ಕ್ಯಾಮರಾ ಕಣ್ಣು ಕೀಲಿಸಿದ್ದು ಭಗವಾನ್ ಎನ್ನುವ ವಿವಾದೋತ್ಪಾದಕ ಸಾಹಿತಿಯ ಮುಂದೆ. ಕ್ಯಾಮರಾಗೇ ಜನಿವಾರ ಹಾಕಿದ ವಾಹಿನಿಗಳವರ ನಿರೀಕ್ಷೆಯನ್ನು  ಭಗವಾನರು ಹುಸಿಗೊಳಿಸಲಿಲ್ಲ.

 'ದಲಿತರ ರಕ್ಷಣೆಗೆ ಸರಕಾರ ಬಂದೂಕು ಕೊಡಬೇಕು' ಎಂದು ಹೇಳುವ ಮೂಲಕ ಸಮ್ಮೇಳನದ ಉದ್ದೇಶಕ್ಕೆ ಸಂಬಂಧವೇ ಇಲ್ಲದ ವಿವಾದದ ಬಾಂಬೊಂದನ್ನು ಸಿಡಿಸಿದರು. ಅಷ್ಟೇ ಬೇಕಿತ್ತು ಮಿಡಿಯಾಂಗಿಗಳಿಗೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕೋತ್ತಾಯಗಳನ್ನೆಲ್ಲಾ ನೇಪತ್ಯಕ್ಕೆ ತಳ್ಳಿ ಅನಗತ್ಯವಾದ ಬಂದೂಕು ಪ್ರಕರಣವನ್ನೇ ಚಾನೆಲ್ ಗಳು ಮೂರೂ ಹೊತ್ತು  ಮೆಲುಕುಹಾಕುತ್ತಾ ಇಡೀ ಸಮ್ಮೇಳನದ ಆಶಯವನ್ನು ಹಳ್ಳಹಿಡಿಸಲು ಶತಾಯ ಗತಾಯ ಪ್ರಯತ್ನಿಸಿದವು.

 ಅದೇ ಸಮಯಕ್ಕೆ ಸರಿಯಾಗಿ ಪ್ರಜಾ ಟಿವಿಯಲ್ಲಿ ಲೈವ್ ಚರ್ಚೆಯಲ್ಲಿ ಕುಳಿತಿದ್ದ ನನಗೆ "ವಿಚಾರವಾದಿಗಳು ಬಂದೂಕನ್ನು ಕೊಡಲು ಹೇಳಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ. ಹಿಂಸಾವಾದಿಗಳು ಯಾರು ಹೇಳಿ" ಎಂದು ಪ್ರಮೋದ್ ಮುತಾಲಿಕ್ ಎನ್ನುವ ಕೂಗುಮಾರಿ ಪ್ರಶ್ನೆ ಕೇಳಿತು.   ನನಗೆ ವಿಚಿತ್ರ ಸಂಕಟ. ಭಗವಾನರ ಬಂದೂಕಿನ ಮಾತನ್ನು ಒಪ್ಪಿಕೊಂಡರೆ ನಾನು ಹಿಂಸೆಯನ್ನೂ ಸಮರ್ಥಿಸಿಕೊಂಡಂತಾಗುತ್ತದೆ. ವಿರೋಧಿಸಿದರೆ  ಮುತಾಲಿಕರಂತಹ ಮತಾಂಧರು ವಿಚಾರವಾದಿಗಳ ಮೇಲೆ ಸಾರಾಸಗಟಾಗಿ ಹಿಂಸಾವಾದಿಗಳೆಂದು ಆರೋಪಿಸಿ ಮೈಮೇಲೆ ಬೀಳುತ್ತಾರೆ. ಈಗ ನನಗಿದ್ದುದು ಭಗವಾನರ ಹೇಳಿಕೆಯನ್ನು ಅನಿವಾರ್ಯವಾಗಿ ಸಮರ್ಥಿಸಿಕೊಳ್ಳಲೇ ಬೇಕಾದ ಮಾರ್ಗ. " ಹೌದು ಮುತಾಲಿಕರೇ... ಒಂದು ಕಡೆ ನಿಮ್ಮಂತಾ ಹಿಂದುತ್ವದ ಉನ್ಮಾದಪೀಡಿತ ಮತಾಂಧರು ದಲಿತರ ಹತ್ಯೆ ಮಾಡುತ್ತಿದ್ದೀರಿ, ಇನ್ನೊಂದು ಕಡೆಯಿಂದ ಮೇಲ್ವರ್ಗದವರು ದಲಿತರನ್ನು ಶೊಷಿಸಿ ಹಲ್ಲೆ ಮಾಡುತ್ತಿದ್ದಾರೆ, ಸರಕಾರಕ್ಕಂತೂ ಎಲ್ಲಾ ದಲಿತರಿಗೂ ರಕ್ಷಣೆ ಕೊಡಲು ಸಾಧ್ಯವಿಲ್ಲ. ಇಂತಾ ದುಸ್ಥಿತಿಯಲ್ಲಿ ದಲಿತರು ಏನು ಮಾಡಬೇಕು? ಕೊನೆಗೆ ಕೊಲ್ಲಲು ಅಲ್ಲಾ, ಆತ್ಮರಕ್ಷಣೆಗಾಗಿಯಾದರೂ ಅಸ್ತ್ರಕೊಡಿ ಎಂದು ಕೇಳಿದರೆ ತಪ್ಪೇನು? ಪ್ರಾಣ ರಕ್ಷಣೆಗಾಗಿ ಬಂದೂಕು ಕೇಳುವಂತಹ ಅಸಹಾಯಕ ಪರಿಸ್ಥಿತಿಗೆ ದಲಿತರನ್ನು ದೂಡಿದವರು ಯಾರು?, ಇದಕ್ಕೆ ನೀವು ನಿಮ್ಮಂತವರೇ ಕಾರಣ" ಎಂದು ಜೋರಾಗಿಯೇ ಉತ್ತರಿಸಿದೆ. ಮುತಾಲಿಕ ಸಾಹೇಬರು ಉತ್ತರಿಸಲಾರದೇ ತತ್ತರಿಸಿ ಟಾಪಿಕ್ ಬದಲಾಯಿಸಿದರು.

ಆದರೆ ಭಗವಾನರ ಬಂದೂಕಿನ ಮಾತು ಹಾಗೂ ಮುತಾಲಿಕರ ಪ್ರಶ್ನೆ ಎರಡೂ ನನ್ನನ್ನು  ಕಾಡಿದ್ದಂತೂ ಸತ್ಯ. ಮತಾಂಧರ ಹಾಗೂ ಮೇಲ್ಜಾತಿಗಳ ದಬ್ಬಾಳಿಕೆಗಳು ದುಡಿಯುವ ವರ್ಗದ ದಲಿತರ ಮೇಲೆ ಹೀಗೇನೇ ನಿರಂತರವಾಗಿ ನಡೆಯುತ್ತಾ ಹೋದರೆ ಮುಂದೆ ದಲಿತರು ಮಿಲಿಟೆಂಟ್ ಆಗದೇ ಇರುವರೇ? ಎಷ್ಟೂಂತ ಅವಮಾನಗಳನ್ನು ಸಹಿಸಿಕೊಂಡಾರುದಮನ ಹೆಚ್ಚಾದಷ್ಟೂ ದಂಗೆ ತೀವ್ರಗೊಳ್ಳದೇ ಇರಲಾರದು. ಇಂದಿಲ್ಲ ನಾಳೆ ದಮನಿತರೆಲ್ಲಾ ಒಂದಾಗಿ ಶೋಷಕ ಆಳುವ ವರ್ಗಗಳ ಮೇಲೆ ತಿರುಗಿ ಬೀಳುವುದಂತೂ ಗ್ಯಾರಂಟಿ. ಇಂತಹ ಮಾತು ಹಿಂಸೆಗೆ ಪ್ರಚೋದನೆ ಎಂದು ಮೇಲ್ವರ್ಗದವರು, ಮಧ್ಯಮ ವರ್ಗದವರು ಹೌಹಾರಿ ಆರೋಪಿಸಬಹುದು. ಅಲ್ಪಸಂಖ್ಯಾತ ಶೋಷಕ ವರ್ಗ ಬಹುಸಂಖ್ಯಾತ ದುಡಿಯುವ ದಲಿತ ವರ್ಗದವರನ್ನು ಅದಿನ್ನೆಷ್ಟು ದಿನ ದಬ್ಬಾಳಿಕೆಯಿಂದ ದಮನಿಸಲು ಸಾಧ್ಯ? ಕಂಪರ್ಟ್ ಜೋನಲ್ಲಿರುವ ಎಲ್ಲರಿಗೂ ಹಿಂಸೆ ದಂಗೆ ಬಂದೂಕು ಎಂದರೆ ಅಲರ್ಜಿಯ ಸಂಗತಿಗಳೇ. ಆದರೆ ಮಾನ ಪ್ರಾಣಗಳ ರಕ್ಷಣೆಯ ಭರವಸೆಯಿಲ್ಲದೇ ಸದಾ ಅತಂತ್ರವಾಗಿಯೇ ಬದುಕುತ್ತಿರುವವರಿಗೆ ಕಳೆದು ಕೊಳ್ಳಲು ಪ್ರಾಣದ ಹೊರತು ಬೇರೇನೂ ಇಲ್ಲ. ಅಂತವರು ಸಮಾನತೆಗಾಗಿ ಸಿಡಿದೆದ್ದು ನಿಂತರೆ, ತಮ್ಮ ಮೇಲಾಗುತ್ತಿರುವ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಪ್ರತಿಯಾಗಿ ಪ್ರತಿಹಿಂಸೆಗಿಳಿದರೆ ವರ್ಗ ಸಂಘರ್ಷ ಬುಗಿಲೆದ್ದು ಅಸಮಾನ ವ್ಯವಸ್ಥೆಯೇ ಬುಡಮೇಲಾಗುವುದರಲ್ಲಿ ಸಂದೇಹವಿಲ್ಲ.

.ಆದರೆ ಈಗ ಬಂದೂಕು ಹಾಗೂ ಅದರಿಂದಾಗುವ ಹಿಂಸಾಪಾತದ ಅಗತ್ಯವಿಲ್ಲ. ಇನ್ನೂ ಸರ್ವಾಧಿಕಾರಿ ಪ್ಯಾಸಿಸ್ಟ್ ಪ್ರಭುತ್ವ ದೇಶವನ್ನು ಸಂಪೂರ್ಣ ಆಪೋಷಣ ಮಾಡಿಲ್ಲ. ಜನಹೋರಾಟದ ದಾರಿ ಮುಕ್ತವಾಗಿದೆ. ಸಮೂಹ ಹೋರಾಟಗಳನ್ನು ಸಂಘಟಿಸುತ್ತಾ.. ದಲಿತರಲ್ಲಿ  ದಮನಿತರಲ್ಲಿ ಅಸಮಾನತೆಯ ಕುರಿತು ಅರಿವು ಮೂಡಿಸುತ್ತಾ ಎಲ್ಲಾ ಜಾತಿ ಧರ್ಮ ವರ್ಗಗಳ ದುಡಿಯುವ ಜನರನ್ನು ಒಳಗೊಂಡಂತೆ ಐಕ್ಯ ಹೋರಾಟವನ್ನು ಕಟ್ಟಬೇಕಾಗಿದೆ. ಒಬ್ಬ ದಲಿತನ ಮೈಮೇಲೆ ಒಂದು ಬಾಸುಂಡೆ ಬಿದ್ದರೆ , ಒಬ್ಬ ರೈತ, ಕಾರ್ಮಿಕ, ಕೂಲಿಯ ಮೇಲೆ ಹಲ್ಲೆಯಾದರೆ ಇಡೀ ದೇಶದ ಜನತೆ ಬೀದಿಗೆ ಬಂದು ವಿರೋಧಿಸುವಂತಹ ದಿಟ್ಟ ಹೋರಾಟ ಕಟ್ಟಬೇಕಿದೆ. ಮತಾಂಧತೆಯನ್ನು, ಸಂಘಪರಿವಾರದ ಮನುವಾದಿ ಹಿಂದುತ್ವವನ್ನು, ಆಳುವ ವರ್ಗಗಳ ಶೋಷಣೆಯನ್ನು ಮಟ್ಟ ಹಾಕಲು ಈಗಿರುವುದು ಇದೊಂದೇ ಮಾರ್ಗ. ಬಂದೂಕು ಎನ್ನುವುದು ಕೊಟ್ಟಕೊನೆಯ ಆತ್ಮರಕ್ಷಣೆಯ ಅನಿವಾರ್ಯತೆ. ಭಗವಾನ್ ರಂತಹ ಭಯಂಕರ ವಿಚಾರವಾದಿಗಳು ಇದನ್ನು ಅರ್ಥಮಾಡಿಕೊಳ್ಳಬೇಕಿದೆ. ಯಾವುದೋ ಒಂದು ಸದುದ್ದೇಶದ ಸಮಾವೇಶದಲ್ಲಿ ಅಪ್ರಸ್ತುತ ವಿಚಾರವನ್ನು ಹರಿಬಿಟ್ಟು ಸಮ್ಮೇಳನದ ಆಶಯವನ್ನು ದಾರಿತಪ್ಪಿಸಬಾರದು ಎನ್ನುವ ಪ್ರಜ್ಞೆ ಭಗವಾನರಂತವರಿಗೆ..  ಚಂಪಾರಂತವರಿಗೆ ಇರಲೇಬೇಕಿದೆ. ಇವರಂತಾ ಅತಿರೇಕದ ವಿವಾದೋತ್ಪಾದಕರ ಮಾತುಗಳು ಚಾನೆಲ್ ಎನ್ನುವ ಕೂಗುಮಾರಿಗೆ ಆಹಾರವಾದಾಗ ಜನಹೋರಾಟದ ದಿಕ್ಕು ತಪ್ಪುವ ಸಾಧ್ಯತೆಗಳತ್ತಲೂ ಗಮನ ಹರಿಸಬೇಕಿದೆ.

ಐಕ್ಯ ಹೋರಾಟವೊಂದೇ ಈಗ ಸಮಾನತೆಯ ಸಮಾಜ ನಿರ್ಮಾಣಕ್ಕಿರುವ ದಾರಿ. ಪ್ಯಾಸಿಸ್ಟ್ ಶಕ್ತಿಗಳು ಮನುಸ್ಮೃತಿ ಆಧಾರಿತ ಹಿಂದೂರಾಷ್ಟ್ರ ಕಟ್ಟುವ ಗುರಿಯತ್ತ ಸಂಘಟಿತರಾಗಿ ಆಕ್ರಮಣಕಾರಿಯಾಗಿ ಮುನ್ನಡೆಯುತ್ತಿದ್ದಾರೆ. ಇಂತಹ ಅಪಾಯಕಾರಿ ಆಪತ್ಕಾಲದಲ್ಲಿ ಪ್ರಗತಿಪರವೆನ್ನುವ ಎಲ್ಲಾ ಪ್ರಜ್ಞಾವಂತರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದನ್ನು ಬಿಟ್ಟು ಐಕ್ಯ ಹೋರಾಟವನ್ನು ಕಟ್ಟಬೇಕಿದೆ. ಮತಾಂಧ ದುಷ್ಟ ಶಕ್ತಿಗಳ ಸನಾತನ ಶಡ್ಯಂತ್ರವನ್ನು ಹಿಮ್ಮೆಟ್ಟಿಸಬೇಕಿದೆ.

ಸುಮ್ಮನಿದ್ದರೆ ಸುಲಿಗೆ ತಪ್ಪದು... ಒಂದಾಗಿ ಎದ್ದು ನಿಂತರೆ ಜಯ ನಮ್ಮದು...


- ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ