ಶನಿವಾರ, ಅಕ್ಟೋಬರ್ 15, 2016

ತಹ ತಹ ..... 48 ಪೇಜಾವರರ ಪ್ರಲಾಪ ಮತ್ತು ಅವರಿವರ ಮೇಲೆ ಆರೋಪ :

ತಹ ತಹ ..... 48
ಮನುವಾದಿಗಳ ಆಟದಲಿ  ದಿಕ್ಕುತಪ್ಪದಿರಲಿ ಸ್ವಾಭಿಮಾನಿ ಹೋರಾಟ:



ಇದನ್ನು ಮನುಷ್ಯರ ಸ್ವಾಭಾವ ಎನ್ನುವುದೊ ಇಲ್ಲವೇ ಮನೋವಿಕೃತಿ ಎನ್ನುವುದೋ ಗೊತ್ತಿಲ್ಲ. ಆದರೆ ತಮ್ಮ ನ್ಯೂನ್ಯತೆ ಮುಚ್ಚಿಕೊಳ್ಳಲು ಅವರಿವರತ್ತ  ಬೆರಳು ತೋರಿಸಿ ದಿಕ್ಕುತಪ್ಪಿಸುವ ಪ್ರಯತ್ನವನ್ನಂತೂ ಮಾಡಲಾಗುತ್ತದೆ. ಹಿಂದೂ ಧರ್ಮದೊಳಗಿನ ಜೀವವಿರೋಧಿತನವನ್ನು ಅಥವಾ ಮಹಿಳಾ ಶೋಷಣೆಯನ್ನು ವಿರೋಧಿಸಿ ಮಾತಾಡಿದರೆ ಇಲ್ಲವೇ ಲೇಖನ ಬರೆದರೆ ತಕ್ಕಣ ಹಿಂದುತ್ವವಾದಿ ಮನಸ್ಸುಗಳಿಂದ ಬರುವ ಪ್ರತಿಕ್ತಿಯೆ ಏನೆಂದರೆ ಇದು ಮುಸಲ್ಮಾನ ಧರ್ಮದಲ್ಲಿ ಇಲ್ಲವಾ? ಎನ್ನುವುದಾಗಿದೆ. “ನಿಮಗೆ ಹಿಂದೂಗಳ ಹುಳುಕು ಮಾತ್ರ ಕಾಣಿಸುತ್ತದೆಯೇ ಹೊರತು ಬೇರೆ ಧರ್ಮೀಯರದ್ದಲ್ಲ, ನಿಮ್ಮಂತಾ ಧರ್ಮದ್ರೋಹಿಗಳಿಂದಲೇ ನಮ್ಮ ಹಿಂದೂತ್ವ ಹಾಳಾಗಿದ್ದು” ಎನ್ನುವ ರೆಡಿಮೇಡ್ ಉತ್ತರ ಹಾಗೂ ಆರೋಪ ಮತೀಯವಾದಿಗಳಿಂದ  ಕೇಳಲ್ಪಡುತ್ತದೆ.


ಈಗ ನೋಡಿ ಸರಕಾರ ಯಾವುದೇ ಮಠವನ್ನು ವಶಕ್ಕೆ ಪಡೆಯಲು ಪ್ರಯತ್ನಿಸದಿದ್ದರೂ ಅ.14ರಂದು ಸುಖಾಸುಮ್ಮನೆ ಸುದ್ದಿ ಗೋಷ್ಠಿ ಕರೆದ ರಾಸಲೀಲಾ ಪ್ರವೀಣ ಗೋಕರ್ಣದ ಗೋಸ್ವಾಮಿಗಳಾದ ರಾಘವೇಶ್ವರ ಮಾಸ್ವಾಮಿಗಳು “ಒಂದೇ ಧರ್ಮವನ್ನು  ಗುರಿಯಾಗಿ ಇಟ್ಟುಕೊಂಡಿರುವ ರಾಜ್ಯ ಸರಕಾರ ಮಸೀದಿ, ಚರ್ಚಗಳಲ್ಲಿ ಯಾಕೆ ಹಸ್ತಕ್ಷೇಪ ಮಾಡುವುದಿಲ್ಲ?” ಎಂದು ತಮ್ಮ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತಪಡಿಸಿದರು. ಅರೆ… ಚರ್ಚ ಹಾಗೂ ಮಸೀದಿಗಳಲ್ಲೂ ಮಾಡಬಾರದ ಕೆಲಸ ಮಾಡಿದರೆ ಅವುಗಳನ್ನೂ ಸಹ ವಶಪಡಿಸಿಕೊಂಡು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದದ್ದು ಸರಕಾರದ ಕರ್ತವ್ಯ. ನನ್ನ ರಾಸಲೀಲೆಯನ್ನು ಮಾತ್ರ ಸುದ್ದಿ ಮಾಡಿದ ಸುದ್ದಿ ಮಾದ್ಯಮ ಬೇರೆ ಧರ್ಮೀಯರದ್ದನ್ನು ಯಾಕೆ ಹುಡುಕಿ ಮಾಡಲಿಲ್ಲ  ಎಂದು ಕೇಳಿದಂತಿದೆ ಈ ಸ್ವಾಮಿಯ ಮಾತುಗಳು.  ತಾನೇ ಖಾವಿಯೊಳಗೆ ಕಾವೇರಿಸಿಕೊಂಡು ರಾಮನ ಹೆಸರಲ್ಲಿ ಮಹಿಳೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ಕಾವುಇಳಿಸಿಕೊಂಡು ತಣ್ಣಗಾದ ಈ ಗೋಮುಖ ಸ್ವಾಮೀಜಿಗೆ ಬೇರೆಯವರ ಬಗ್ಗೆ ಹೇಳಲು ಯಾವುದೇ ನೈತಿಕ ಹಕ್ಕುಗಳಿಲ್ಲ. ಆದರೆ ತನಗೆ ಮೆತ್ತಿಕೊಂಡ ಕೊಳಕನ್ನು ಮುಚ್ಚಿಟ್ಟುಕೊಂಡು ಬೇರೆ ಧರ್ಮೀಯರ ಮೇಲೆ ಆರೋಪ ಮಾಡುವುದು ಅಕ್ಷಮ್ಯ. ಸರಕಾರ ಮಸೀದಿ ಇಲ್ಲವೇ ಚರ್ಚ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತೋ ಇಲ್ಲವೋ ಅದು ಸರಕಾರಕ್ಕೆ ಬಿಟ್ಟ ವಿಚಾರ. ಆದರೆ ನಂಬಿದ ಭಕ್ತರ ಭಾವನೆಗಳಿಗೆ ವಂಚಿಸಿದ, ಮಠದ ಭಕ್ತೆಯನ್ನು ತನ್ನ ಮನೋಕಾಮನೆಗೆ ಬಳಸಿಕೊಂಡ ಈ ಗೋಸ್ವಾಮಿಯನ್ನು ಭಕ್ತರೇ ಮಠದಿಂದ ಬಹಿಷ್ಕರಿಸಬೇಕಿತ್ತು. ಪವಿತ್ರ ಮಠವನ್ನು ಅಪವಿತ್ರಗೊಳಿಸಿದ ಆರೋಪದಲ್ಲಿ ಸರಕಾರವೇ ಕಾನೂನಿನ ಮೂಲಕ ಸೂಕ್ತ ಕ್ರಮ ಕೈಗೊಳ್ಳಬಹುದಾಗಿತ್ತು. ಆದರೆ.. ಯಾಕೆ ಈ ಹವ್ಯಕ್ಯರನ್ನು ಎದುರು ಹಾಕಿಕೊಳ್ಳುವುದು ಎಂದು ಸರಕಾರವೂ ನಿರ್ಲಕ್ಷಿಸಿತು. ಪ್ರತಿಭಟಿಸಿದ ಭಕ್ತರನ್ನು ಈ ಸ್ವಾಮಿಯ ನಿಷ್ಟ ಪಟಾಲಂ ಬಾಯಿಮುಚ್ಚಿಸಿತು.  ಈಗ  ಹೋದ ಮರ್ಯಾದೆಯ ಮಾನ ಮುಚ್ಚಲು ಅನ್ಯ ಧರ್ಮೀಯರ ಮೇಲೆ ಆರೋಪ ಮಾಡುತ್ತಾ ಸುದ್ದಿಯಲ್ಲಿ ಇರಲು ಈ ಸ್ವಾಮಿ ಪ್ರಯತ್ನಿಸುತ್ತಿದೆ.


ಇಂತಹುದೇ ಪರನಿಂದೆ ಕೆಲಸವನ್ನು ನಮ್ಮ ಉಡುಪಿಯ ಪೇಜಾವರಮಠದ ಪರಮ ಪೂಜ್ಯ  ಶ್ರೀಪಾದ ಸ್ವಾಮೀಜಿಗಳೂ ಮಾಡಿ ಶರಣಸಮುದಾಯದಿಂದ ಮಂಗಳಾರತಿ ಮಾಡಿಸಿಕೊಳ್ಳುತ್ತಿದ್ದಾರೆ. ತಮ್ಮ ಮಠದ ಜಾತಿಬೇಧವನ್ನು ಸಮರ್ಥಿಸಿಕೊಳ್ಳಲು ಬಸವಣ್ಣನವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುವ ಮಹತ್ಕಾರ್ಯವನ್ನು ಪೇಜಾವರರು ಮಾಡಿ ಸುಮ್ಮನಿರದೇ ಇರುವೆ ಬಿಟ್ಟುಕೊಂಡಿದ್ದಾರೆ. “ಬಸವಣ್ಣನವರು ಲಿಂಗಸಂಸ್ಕಾರವಿಲ್ಲದವರೊಡನೆ ಸಹಪಂಕ್ತಿ ಭೋಜನ ಕೂಡದು” ಎಂದು ವಚನಗಳಲ್ಲಿ ಹೇಳಿಲ್ಲವೇ.? ಎಂದು ಪ್ರಶ್ನಿಸುವ ಮೂಲಕ ತಮ್ಮ ಜನವಿರೋಧಿ ಮೌಲ್ಯಗಳನ್ನು ಮುಚ್ಚಿಕೊಳ್ಳಲು ಹವಣಿಸಿದ್ದಾರೆ. ಜೀವವಿರೋಧಿ ವೈದಿಕಶಾಹಿ ಧರ್ಮವನ್ನು ಧಿಕ್ಕರಿಸಿ ಎಲ್ಲಾ ಜಾತಿವರ್ಗಗಳ ಜನರನ್ನು ಒಂದುಗೂಡಿಸಿ ದುಡಿಯುವ ವರ್ಗಕ್ಕೆ ಒಂದು ಘನತೆಯನ್ನು ತಂದುಕೊಟ್ಟ ಬಸವಣ್ಣನ ಹೆಸರನ್ನು ಹೇಳಲೂ ಈ ಪೇಜಾವರ ಮಠದ ವಯೋವೃದ್ದ ಸ್ವಾಮಿಗಳಿಗೆ ಯೋಗ್ಯತೆ ಇಲ್ಲ. ದಲಿತರ ಕೇರಿಗೆ ಹೋಗಿ ಪಾದಪೂಜೆ ಮಾಡಿಸಿಕೊಂಡು ಬಂದು ನಾನೂ ಜ್ಯಾತ್ಯಾತೀತ ಸ್ವಾಮಿ ಎಂದು ಸಾರುತ್ತಿರುವ ಈ ಪೇಜಾವರರಿಗೆ ಬಸವಣ್ಣ ಮಾದರ ಚೆನ್ನಯ್ಯನ ಮನೆಯಲ್ಲಿ ಕೂತು ಅಂಬಲಿ ಕುಡಿಯುತ್ತಿದ್ದ. ಸಮಗಾರ ಹರಳಯ್ಯನವರ ಮನೆಯಲ್ಲಿ ಊಟ ಮಾಡುತ್ತಿದ್ದ, ಹೊಲೆಯರ ಮನೆಯ ಹೊಸ್ತಿಲು ದಾಟಿ ನಮ್ಮವರು ಎನ್ನುತ್ತಿದ್ದ. ಜಾತಿಬೇಧ ತೊಲಗಲು ಅಂತರ್ಜಾತಿ ವಿವಾಹ ಮಾಡಿಸಿದ,  ಜಾತಿಬೇಧ ಮಾಡುವುವರನ್ನು ಒಲೆಯೊಳಗಿಕ್ಕು ಎನ್ನುತ್ತಿದ್ದ ಎನ್ನುವುದನ್ನೆಲ್ಲಾ ಈ ಪೇಜಾವರರ ಪಂಚೇಂದ್ರಿಯಗಳಿಗೆ ಯಾರಾದರೂ ಅರಿವು ಮೂಡಿಸಬೇಕಿದೆ.  ಜಾತಿಸೂತಕ ಎನ್ನುವುದು ಪುರೋಹಿತರ ಮನಸ್ಸಿಗೆ ಬಡಿದಿತ್ತೇ ಹೊರತು ಜಾತಿಯನ್ನು ಮೀರಿದ ಬಸವಣ್ಣನವರಿಗೆ ಅಲ್ಲಾ ಎನ್ನುವುದು ಅವರ ಎಲ್ಲಾ ವಚನಗಳಲ್ಲೂ ಕಾಣಬಹುದಾಗಿದೆ.

“ಲಿಂಗದೀಕ್ಷೆ ಪಡೆಯದವರ ಜೊತೆ ಭೋಜನ ಮಾಡುವುದು ಏಳು ಜನ್ಮಗಳ ನರಕಕ್ಕೆ ಕಾರಣವಾಗುತ್ತದೆ” ಎಂದು ಬಸವಣ್ಣನವರು ಹೇಳಿದ್ದಾರಾದ್ದರಿಂದ ಅವರ ಮೆದುಳನ್ನು ಸ್ವಚ್ಚಗೊಳಿಸುವರೇ?” ಎಂದು ಹೇಳುವ ಮೂಲಕ ತಮ್ಮ ಮಲಿನ ಮೆದುಳನ್ನು ಸಮರ್ಥಿಸಿಕೊಳ್ಳುತ್ತಿರುವ ಈ ಪೇಜಾವರ ಸ್ವಾಮಿಗಳಿಗೆ “ಬಸವಣ್ಣ ಕರ್ಮಸಿದ್ದಾಂತದಲ್ಲಿ ನಂಬಿಕೆ ಇಟ್ಟವರಲ್ಲಾ, ಸ್ವರ್ಗ ನರಕಗಳನ್ನು ಮಾನ್ಯ ಮಾಡಿದವರಲ್ಲ” ಎಂದು ತಿಳಿಸಿ ಹೇಳುವವರಾದರೂ ಯಾರು?. ಆಚಾರವೇ ಸ್ವರ್ಗವೆಂದು ಶೋಷಿತ ಜಾತಿಯವರಿಗೆ ಸ್ವಾಭಿಮಾನದ ಸ್ವರ್ಗವನ್ನು ಕಟ್ಟಿಕೊಟ್ಟ ಬಸವಣ್ಣನವರೆಲ್ಲಿ, ಅನಾಚಾರವೆಂಬ ನರಕದಲ್ಲಿ ಬಿದ್ದು ಜನರನ್ನು ಜಾತಿಯಾಧಾರದಲ್ಲಿ ಬೇರ್ಪಡಿಸುತ್ತಿರುವ ಈ ಸನಾತನವಾದಿ ಸ್ವಾಮಿಗಳೆಲ್ಲಿ. ಇವರಿಬ್ಬರಿಗೂ ಸ್ವರ್ಗ ನರಕದಷ್ಟೇ ಅಂತರವಿದೆ. “ಅಂಗದ ಮೇಲೆ ಲಿಂಗ ಸ್ವಾಯತವಾದ ಹೊಲೆ ಮಾದಿಗರ ಮನೆಯ ನಾಯಿಯನ್ನು ತಂದು ಪಂಚವಾದ್ಯವನ್ನಿಕ್ಕಿ ಸನ್ಮಾನಿಸುವೆ ಕೂಡಲಸಂಗಮ ದೇವ”  ಎಂದ ಬಸವಣ್ಣ ವರ್ಣೀಯರಿಂದ ಬಹಿಷ್ಕರಿತರಾದ ಅವರ್ಣೀಯರಿಗೆ ಆತ್ಮಗೌರವವನ್ನು ತಂದುಕೊಟ್ಟ ಮಹಾನುಭಾವ. ಮೊದಲು ಪೇಜಾವರರು ತಮ್ಮ ಮಠದಲ್ಲಿ ಆಗುತ್ತಿರುವ ಅಸಮಾನತೆಯನ್ನು ಸರಿಪಡಿಸಲಿ. ಅದು ಬಿಟ್ಟು ತಮ್ಮ ಮುಖದ ಮೇಲಿನ ಕಲೆಯನ್ನು ಮುಚ್ಚಿಕೊಳ್ಳುವ ನೆಪದಲ್ಲಿ ಸೂರ್ಯನತ್ತ ಮುಖ ಮಾಡಿ ಉಗಿದರೆ ಅದು ಅವರ ಮುಖಕ್ಕೆ ಬಂದು ಅಪ್ಪಳಿಸುತ್ತದೆ ಎನ್ನುವ ಅರಿವಿರಲಿ.


“ದಾಸಿ ಪುತ್ರನಾಗಲಿ ವೇಶ್ಯೆ ಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ನಂಬಿ ಪ್ರಸಾದ ಪಾದೋದಕ ಕೊಂಬುವುದೇ ಲೇಸು, ಉದಾಸೀನ ಮಾಡಿದರೆ ಪಂಚ ಮಹಾ ಪಾತಕ ನರಕ ಕಾಣಾ ಕೂಡಲಸಂಗಮ ದೇವಾ” ಎಂದು ಬಸವಣ್ಣನವರು ಹೇಳುತ್ತಾ ಲಿಂಗಧಾರಣೆ ಮಾಡಿಸಿಕೊಂಡವರೆಲ್ಲಾ ಸಮಾನರು ಎಂದು ಸಾರಿದರು. ಬಸವಣ್ಣನವರ ಹೆಸರನ್ನು ಹೇಳುವುದಕ್ಕೆ ಕನಿಷ್ಟ ಯೋಗ್ಯತೆಯನ್ನು  ಸಂಪಾದಿಸಿಕೊಳ್ಳಬೇಕೆಂದರೆ ಮೊದಲು ಪೇಜಾವರರು ಎಲ್ಲಾ ದಲಿತ ದಮನಿತರಿಗೂ ದೀಕ್ಷೆಕೊಟ್ಟು ಉತ್ತಮರನ್ನಾಗಿಸಲಿ, ದೀಕ್ಷೆಪಡೆದ ಮಾದಿಗ ಮೋಚಿ ಹೊಲೆಯ ಮುಂತಾದ ಸಮುದಾಯದ ಯುವಕರಿಗೆ ಬ್ರಾಹ್ಮಣ ಜಾತಿಯ ಯುವತಿಯರನ್ನು ಕೊಟ್ಟು ಮದುವೆ ಮಾಡಲಿ. ತಾವು ಮೊದಲು ಹೊಲೆಮಾದಿಗರ ಮನೆಯ ಮಗನಾಗಿ  ಸಮಾನತೆಯನ್ನು ಸಾರಲಿ. ಹೀಗೆ ಮಾಡುವ ಮುನ್ನ ಬ್ರಹ್ಮಜ್ಞಾನ ಪಡೆದ ಕನಕದಾಸರು ಇನ್ನೂ ಬೀದಿಯಲ್ಲೇ ನಿಂತಿದ್ದಾರಲ್ಲಾ ಅವರ ಮೂರ್ತಿಯನ್ನು ಮೊದಲು ಕೃಷ್ಣನ ವಿಗ್ರಹದ ಪಕ್ಕ ಪ್ರತಿಷ್ಟಾಪಿಸಲಿ ಆಗ ಪೇಜಾವರರನ್ನು ಜ್ಯಾತ್ಯಾತೀತ ಸ್ವಾಮಿಗಳು ಎಂದು ಎಲ್ಲಾ ಜಾತಿವರ್ಗದವರೂ ಹೆಗಲ ಮೇಲೆ ಹೊತ್ತುಕೊಂಡು ಮೆರೆಸೋಣ. (ಹೇಗೂ ಅವರ ತೂಕ ಕಡಿಮೆ ಇದೆ).  “ವರ್ಣವ್ಯವಸ್ಥೆ ಸರ್ವನಾಶವಾಗಬೇಕು, ಮನುಷ್ಯರೆಲ್ಲಾ ಒಂದಾಗಿ ಬದುಕಬೇಕು” ಎಂದು ಶ್ರೀಪಾದರು  ಘೋಷಿಸಿ ಆಚರಣೆಯಲ್ಲಿ ತರಲಿ. ಆಹಾರದ ಆಯ್ಕೆಯ ಹಕ್ಕಿಗಾಗಿ ದಲಿತ ಸಮುದಾಯದವರು ಉಡುಪಿಗೆ ಲಗ್ಗೆಹಾಕಿದ್ದರಲ್ಲಾ ಅವರನ್ನೆಲ್ಲಾ ಗೌರವಾದರಗಳಿಂದ ಸ್ವಾಗತಿಸಿ ಬ್ರಾಹ್ಮಣರೊಂದಿಗೆ ಸಹಪಂಕ್ತಿ ಭೋಜನ ಏರ್ಪಡಿಸಲಿ.  ಇದೆಲ್ಲಾ ಸಾಧ್ಯವಾಗದೇ ಹೋದರೆ  ಜ್ಯಾತ್ಯಾತೀತನೆಂಬ ಡೋಂಗೀತನ ಬಿಟ್ಟು ಪುರೋಹಿತಶಾಹಿ ಲಾಂಚನ ತಾವೆಂದು ಎಂದು ಒಪ್ಪಿಕೊಂಡು  ಪೂಜೆ ಪುನಸ್ಕಾರ ಮಾಡಿಕೊಂಡು ಮೆತ್ತಗಿರಲಿ. ಪೇಜಾವರರಂತವರು ಕೊಡಲಿ ಬಿಡಲಿ ಇಂದಿಲ್ಲಾ ನಾಳೆ ದಲಿತ ಸಮುದಾಯ ತಮ್ಮ ಹಕ್ಕುಗಳನ್ನು ಪಡೆದೇ ಪಡೆಯುತ್ತಾರೆಂಬುದು ನೆನಪಿರಲಿ.

ಪೇಜಾವರರ ಅನುಯಾಯಿಗಳೂ ಸಹ ತಮ್ಮ ಪರಮಗುರುವಿನ ಒರಸೆಯಲ್ಲೇ “ಉಡುಪಿಯ ಮಠದ ಕುರಿತು ಮಾತ್ರ ಏಕೆ ಮಾತಾಡುತ್ತೀರಿ? ವೀರಶೈವ, ಒಕ್ಕಲಿಗ ಮಠಗಳಲ್ಲಿರುವ ತಾರತಮ್ಯಗಳತ್ತ ನೋಡಿ” ಎಂದು ಜನರ ಗಮನವನ್ನು ಬೇರೆಡೆ ತಿರುಗಿಸುವ ಕುಕೃತ್ಯವನ್ನು ಮಾಡುತ್ತಿದ್ದಾರೆ. ಕೆಲವು ಕೂಗುಮಾರಿ ವಾಹಿನಿಗಳು ಇಂತಹ ಪ್ರಶ್ನೆಗಳನ್ನು ಕೆದಕಿ ವೈದಿಕ ಮಠಗಳನ್ನು ಸಮರ್ಥಿಸಿಕೊಳ್ಳಲು ನೋಡುತ್ತಿವೆ. ಬೇರೆ ಯಾವುದೇ ಜಾತಿ ಧರ್ಮದ ಮಠಗಳಲ್ಲಿ, ಮಸೀದಿಗಳಲ್ಲಿ ಇಲ್ಲವೇ ಚರ್ಚಗಳಲ್ಲಿ ಜನವಿರೋಧಿ ಹಾಗೂ ಜೀವವಿರೋಧಿ ಘಟನೆಗಳು ನಡೆದರೆ ಅದೂ ಕೂಡಾ ಖಂಡನಾರ್ಹವೇ. ವೃತ್ತಿಪರ ಧರೋಡೆಕೋರ ಗುಂಪೊಂದು   ಜೇಬುಗಳ್ಳರನ್ನು ತೋರಿಸಿ “ನೋಡಿ ಅವರೂ ಹೊಟ್ಟೆಪಾಡಿಗೆ ಕಳ್ಳತನ ಮಾಡುತ್ತಿದ್ದಾರಲ್ಲಾ, ಅವರನ್ನು ಹಿಡಿದು ಮೊದಲು ಶಿಕ್ಷಿಸಿ ಆಮೇಲೆ ನಮ್ಮ ಬಗ್ಗೆ ವಿಚಾರಿಸಿ” ಎಂದು ಹೇಳಿದರೆ ಯಾವ ಭಾಗದಿಂದಾ ನಗಬೇಕು?

ದಲಿತರು ನಡೆದಾಡಿದ ಉಡುಪಿಯ ಬೀದಿಗಳನ್ನು ಶುದ್ದೀಕರಿಸಲು ಪೇಜಾವರರ ಬಾಲಗಳು ಪ್ರಯತ್ನಿಸುತ್ತಿರುವುದೇ ಈ ಮನುವಾದಿ ಮನಸ್ಥಿತಿಯವರ ದಲಿತ ವಿರೋಧಿತನಕ್ಕೆ ಪರಮ ಸಾಕ್ಷಿಯಾಗಿದೆ.  ‘ಶುದ್ದೀಕರಣ ಏನಾದರೂ ನಡೆದರೆ ಉಡುಪಿ ಮಠದೊಳಗೆ ದಲಿತರು ಪ್ರವೇಶಿಸುತ್ತೇವೆ’ ಎಂದು ಯಾವಾಗ ದಲಿತ ಹೋರಾಟಗಾರರು ಪ್ರತಿಕ್ರಿಯಿಸಿದರೋ ಆಗ ದಿಕ್ಕೆಟ್ಟ ಪೇಜಾವರರು “ದಲಿತರು ಮಠಕ್ಕೆ ಮುತ್ತಿಗೆ ಹಾಕಿದರೆ ಉಪವಾಸ ಕುಳಿತುಕೊಳ್ಳುತ್ತೇನೆ” ಎಂದು ಸರಕಾರವನ್ನೇ ಬ್ಲಾಕ್ಮೇಲ್ ಮಾಡಿದರು. ಜ್ಯಾತ್ಯಾತೀತ ಎಂದು ಹೇಳಿಕೊಳ್ಳುವ ಪೇಜಾವರರಿಗೆ ದಲಿತರು ಉಡುಪಿಯ ಬೀದಿಗಳಲ್ಲಿ ನೀಲಿಬಾವುಟದಡಿಯಲ್ಲಿ ನಡೆದಾಡಿದರೆ ಯಾಕಿಂತಾ ದಿಗಿಲಾಗಬೇಕು. ದಲಿತಪರವೆಂದು ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುವ ಈ ಶ್ರೀಪಾದರು ದಲಿತ ಸಮುದಾಯ ಮಠಕ್ಕೆ ಪ್ರವೇಶಿಸುತ್ತದೆ ಎಂದಾಗ ಯಾಕೆ ಭಯಗೊಂಡು ಉಪವಾಸದ ಬೆದರಿಕೆಯನ್ನು ಹಾಕಬೇಕು. ಅಂದರೆ  ಪೇಜಾವರರಿಗೆ ಬೇಕಾಗಿರುವುದು ಸಮಾನತೆ ಅಲ್ಲಾ.. ಸನಾತನತೆ ಎನ್ನುವುದು ಸಾಬೀತಾಗುತ್ತದೆ. ತಮ್ಮ ಪಂಕ್ತಿಬೇಧವನ್ನು ಮರೆಮಾಚಲು ಬಸವಣ್ಣನವರ ಮೇಲೆ ಆರೋಪ ಮಾಡುವುದು, ತಮ್ಮ ವೈದಿಕಶಾಹಿಯ ಜನವಿರೋಧಿತನವನ್ನು ಮುಚ್ಚಿಕೊಳ್ಳಲು ಬೇರೆ ಜಾತಿಯ ಮಠಗಳತ್ತ ಬೆರಳು ತೋರಿಸಿ ತಾವು ಬಚಾವಾಗಲು ಪ್ರಯತ್ನಿಸುವುದು ಪೇಜಾವರರ ಹಾಗೂ ಅವರ ಸಮರ್ಥಕರ ವಿತಂಡವಾದವಾಗಿದೆ.

ಕನಕ ನಡೆ ಎನ್ನುವ ಹೆಸರಲ್ಲಿ ಉಡುಪಿಯ ಬೀದಿಗಳನ್ನು ಶುದ್ದೀಕರಿಸುವ ನೆಪದಲ್ಲಿ ಶೂದ್ರರನ್ನು ದಲಿತರ ಮೇಲೆ ಎತ್ತಿ ಕಟ್ಟುವ ಕುತಂತ್ರ ಮಾಡುತ್ತಿರುವ ಈ ಮನುವಾದಿ ಮನಸ್ಸುಗಳು ತಮ್ಮ ಮಠದ ಜಾತಿ ತಾರತಮ್ಯವನ್ನು ಬಚ್ಚಿಟ್ಟುಕೊಳ್ಳಲು ಬೇರೆ ಜಾತಿಯ ಮಠಗಳತ್ತ ಆರೋಪಸಿ ದಲಿತರ ಕೋಪವನ್ನು ವೀರಶೈವ ಹಾಗೂ ಒಕ್ಕಲಿಗರ ಮೇಲೆ ತಿರುಗಿಸುವ ಹುನ್ನಾರವನ್ನು ಉದ್ದೇಶಪೂರ್ವಕವಾಗಿಯೇ ಮಾಡುತ್ತಿವೆ. ಇವರು ಉಡುಪಿ ಶುದ್ದೀಕರಣಕ್ಕೆ ಇಟ್ಟ ಹೆಸರನ್ನು ಗಮನಿಸಿದರೆ ಅದರಲ್ಲೂ ಈ ಬ್ರಾಹ್ಮಣ್ಯದ ಕುತಂತ್ರ ಎದ್ದುಕಾಣುತ್ತದೆ. ಕನಕ ಆದ ಮೇಲೆ ಗ್ಯಾಪ್ ಕೊಟ್ಟು ನಡೆ ಎನ್ನುವುದನ್ನು ಬರೆಯಲಾಗಿದೆ. ಅಂದರೆ ಕನಕ ನೀ ಉಡುಪಿ ಬಿಟ್ಟು ನಡೆ ಎಂಬರ್ಥ. ಕನಕನನ್ನು ಬಹಿಷ್ಕರಿಸುವ ಸೂಚನೆ ಇವರ ಕನಕ ನಡೆ ಯಲ್ಲಿ ಕಂಡುಬರುತ್ತದೆ. ಕನಕನಡೆ ಎಂದಾಗಿದ್ದರೆ ಕನಕನ ಕಡೆ ಹೋಗುವುದು ಎಂದಾಗುತ್ತಿತ್ತು. ಆದರೆ ಈ ವಿಕ್ಷಿಪ್ತ ಮನಸ್ಸುಗಳಿಗೆ ಕನಕ ಬೇಕಾಗಿಲ್ಲವಲ್ಲ. ಕನಕನ ಜನಸಮುದಾಯದ ಶ್ರಮ, ಶಕ್ತಿ ಹಾಗೂ ಸಂಪನ್ಮೂಲಗಳು ಬೇಕೆ ಹೊರತು ಕನಕನ ಜಾತಿಯಲ್ಲ. ಹೀಗಾಗಿ ಕನಕನನ್ನು ಈಗ ದೇವಸ್ತಾನದ ಹಿಂದೆ ಅಂದಿನಿಂದ ಇಂದಿನವರೆಗೂ ಬೀದಿಯಲ್ಲಿ ನಿಲ್ಲಿಸಿದ್ದಾರೆ. ಈ ನಡುವೆ ಅಲ್ಲಿಂದಲೂ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯಿತಾದರೂ ಜನವಿರೋಧದಿಂದ ಸಾಧ್ಯವಾಗಲಿಲ್ಲ. ಈಗ ಕನಕ ನೀ ನಡೆ ಎಂದು ಹೇಳುತ್ತಾ ದಲಿತರು ನಡೆದ ದಾರಿಯನ್ನು ಶುದ್ದೀಕರಿಸಿ ತಮ್ಮ ಮನಸ್ಸುಗಳ ಮಾಲಿನ್ಯವನ್ನು ಸಾರ್ವಜನಿಕವಾಗಿ ಮತಾಂಧ ಪಡೆ ಪ್ರದರ್ಶಿಸುತ್ತಿದೆ.  ಪೇಜಾವರರು ದಲಿತರ ಪ್ರವೇಶದ ವಿರುದ್ದ ಉಪವಾಸ ಕೂರಲು ಪೂರ್ವತಯಾರಿಯಲ್ಲಿ  ನಿರತರಾಗಿದ್ದಾರೆ. ಸೂಲಿಬೆಲೆಯಂತಾ  ಮನುವಾದಿ ಮನೋರೋಗಿ ಗಾಂಧಿ ಕೈಯಲ್ಲಿ ಪೊರಕೆ ಕೊಟ್ಟು ಬೀದಿ ಗೂಡಿಸುವ ಪೋಸ್ಟರಗಳನ್ನು ಉಡುಪಿಯಲ್ಲಿ ಅಂಟಿಸಿ ತನ್ನನ್ನು ತಾನೇ ಬೆತ್ತಲೆಮಾಡಿಕೊಳ್ಳುತ್ತಿದ್ದಾನೆ. ಇದರ ಮಧ್ಯೆ ಎಚ್ಚೆತ್ತ ದಲಿತ ವರ್ಗ ತಮಗಾದ ಅವಮಾನಕ್ಕಾಗಿ ಉಡುಪಿ ಚಲೋದ ಮುಂದುವರೆದ ಭಾಗವಾಗಿ ‘ಉಡುಪಿ ಮಠ ಘೆರಾವೋ’ ಕಾರ್ಯಕ್ರಮಕ್ಕೆ ಸಿದ್ದವಾಗುತ್ತಿದೆ. ಇದನ್ನೆಲ್ಲಾ ಗೊಲ್ಲರ ಕೃಷ್ಣ ಹಾಗೂ ಶೂದ್ರರ ಕನಕ ಅಸಹಾಯಕರಾಗಿ ನೋಡುತ್ತಾ ಎದುರಾಬದರಾ ನಿಂತು ಮೌನದಲ್ಲೇ ಮಾತಾಡುತ್ತಿದ್ದಾರೆ. ಉಡುಪಿ ಬೂದಿ ಮುಚ್ಚಿದ ಕೆಂಡವಾಗಿದೆ. ಕೇಸರಿ ದಿಗಿಲುಗೊಂಡಿದೆ. ನೀಲಿ ಕೆಂಪಿನ ಜೊತೆಗೆ ಸೇರಿಕೊಂಡು  ಜನತೆಯ ಸ್ವಾಭಿಮಾನದ ಹಕ್ಕಿಗಾಗಿ ಪ್ರತಿಭಟಿಸುತ್ತಿದೆ.  

ಆದರೆ.. ಈ ಸೂಲಿಬೆಲೆಯ ಕನಕ ನಡೆ, ಉಡುಪಿ ಮಠದ ಪಂಕ್ತಿಬೇಧ, ಪೇಜಾವರರ ಉಪವಾಸ ದಮಕಿ ಪ್ರಹಸನಗಳಲ್ಲಿ ದಲಿತ ಸಮುದಾಯದ ಹೋರಾಟದ ಮೂಲ ಆಶಯ ಎಲ್ಲಿ ಡೈಲ್ಯೂಟ್ ಆಗುತ್ತಿದೆಯೋ ಎಂಬ ಆತಂಕ ಕೆಲವರಿಗಾದರೂ ಕಾಡದೇ ಇರದು. ದಲಿತ ದಮನಿತರು ಈಗ ಮಾಡುತ್ತಿರುವುದು ಸ್ವಾಭಿಮಾನಿ ಸಂಘರ್ಷ. ಪ್ರಮುಖವಾಗಿ ಬೇಕಾಗಿರುವುದು ದಲಿತರಿಗೆ ಆಹಾರದ ಆಯ್ಕೆ ಸ್ವಾತಂತ್ರ್ಯ ಮತ್ತು ಭೂಮಿಯ ಹಕ್ಕು. ಆದರೆ ಇವುಗಳತ್ತ ಕೇಂದ್ರೀಕೃತವಾಗಿದ್ದ ಹೋರಾಟದ ದಿಕ್ಕನ್ನು ದಿಕ್ಕೆಡೆಸಲು ಸೂಲೆಬೆಲೆಯಂತವರು ಉದ್ದೇಶಪೂರ್ವಕವಾಗಿ  ಶುದ್ದೀಕರಣ ಪ್ರಸಂಗವನ್ನು ಸೃಷ್ಟಿಸಿದರಾ? ಮಠಕ್ಕೆ ಮುತ್ತಿಗೆ ಇನ್ನೆಲ್ಲಿ ಹಾಕೇ ಬಿಡುತ್ತಾರೆನ್ನುವ ಭ್ರಮೆಯನ್ನು ಬಿತ್ತಲು ಪೇಜಾವರರೇ ಉಪವಾಸದಾಟದ ಚದುರಂಗದ ದಾಳವನ್ನು ಬೀಸಿ ಹೋರಾಟದ ದಿಕ್ಕನ್ನು ಡೈವರ್ಟ್ ಮಾಡಲು ನೋಡಿದರಾ? ಬಹುಷಃ ಇದು ಕೂಡಾ ಮನುವಾದಿಗಳ ಗೇಮ್ ಪ್ಲಾನಿಂಗ್ ಇರಬಹುದಾದ ಎಲ್ಲಾ ಸಾಧ್ಯತೆಗಳೂ ಇವೆ. ಇಂತಹ ಮನುವಾದಿಗಳ ಚದುರಂಗದಾಟಕ್ಕೆ ಓವರ್ ರಿಯಾಕ್ಟ್ ಮಾಡುತ್ತಾ ಕೂಡುವ ಬದಲು ದಲಿತರು ಮತ್ತು ಪ್ರಗತಿಪರರು ತಮ್ಮ ಮುಂದಿನ ಹೋರಾಟದ ರೂಪರೇಷೆಗಳತ್ತ ಗಮನಕೊಡುವುದು ಹಾಗೂ ಬಹುಜನರ ಸಮೂಹ ಸಂಘಟನೆ ಬಲಪಡಿಸು ಈಗಿನ ತುರ್ತು ಅಗತ್ಯವಾಗಿದೆ. “ನಿಮ್ಮ ಆತ್ಮಗೌರವಕ್ಕೆ ಧಕ್ಕೆ ತರುವ ಜಾಗದಲ್ಲಿ ನಿಮ್ಮ ಚಪ್ಪಲಿಯನ್ನೂ ಸಹ ಬಿಡಬಾರದು” ಎಂದು ಅಂಬೇಡ್ಕರರೇ ಹೇಳಿದ್ದಾರೆ. ಉಡುಪಿ ಮಠ ಹೇಳಿ ಕೇಳಿ ಬ್ರಾಹ್ಮಣ್ಯದ ಅಗ್ರಹಾರ. ಏನೇ ಮಾಡಿದರೂ ಈ ಪೇಜಾವರರನ್ನು ಹಾಗೂ ಅವರ ಸಮರ್ಥಕರನ್ನೂ ಬದಲಾಯಿಸಲಂತೂ ಸಾಧ್ಯವಿಲ್ಲ. ಹಾಗೂ ದಲಿತರ ಅಗತ್ಯ ಬೇಡಿಕೆಗಳನ್ನು ಈಡೇರಿಸುವ ಯಾವುದೇ ಅಧಿಕಾರ ಪೇಜಾವರರಿಗಾಗಲೀ ಇಲ್ಲವೇ ಉಡುಪಿ ಮಠಕ್ಕಾಗಿಯಾಗಿಲೀ  ಇಲ್ಲವೇ ಇಲ್ಲ. ಸಾಂಕೇತಿಕವಾಗಿ ಸಂಘಪರಿವಾರದ ಪ್ರಾಭಲ್ಯದ ಪ್ರದೇಶದಲ್ಲಿ ಹೋಗಿ ದಲಿತ ಸ್ವಾಭಿಮಾನದ ಸಂಘಟನಾ ಶಕ್ತಿಯನ್ನು ತೋರಿಸಬೇಕಾಗಿತ್ತು ತೋರಿಸಿಯಾಯಿತು. ಇನ್ನೂ ಯಾಕೆ ಆ ವೃದ್ದ ಸ್ವಾಮಿಗಳನ್ನು ಕೆಣಕಿ ಸಮಯ ವ್ಯರ್ಥಗೊಳಿಸುತ್ತಾ ಪೇಜಾವರರಿಗೆ ಹೆಚ್ಚು ಪ್ರಚಾರರವನ್ನು ಕೊಡುವುದು?  ಈಗ ದುಡಿಯುವ ವರ್ಗಗಳ ಹಕ್ಕುಗಳಿಗಾಗಿ ಸರಕಾರವನ್ನು ಒತ್ತಾಯಿಸಬೇಕಿದೆ. ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಗೋಹತ್ಯಾ ನಿಷೇಧ ಕಾಯಿದೆಯನ್ನು ದೇಶಾದ್ಯಂತ ತೆರುವುಗೊಳಿಸಬೇಕೆಂದು ಹಾಗೂ ರಾಜ್ಯ ಸರಕಾರದ ಮೇಲೆ ಒತ್ತಡ ತಂದು ಕರ್ನಾಟಕದ ದಲಿತ ಕುಟುಂಬಗಳಿಗೆ ಸರಿಕಾರಿ ಭೂಮಿಯನ್ನು ಹಂಚಬೇಕೆಂದು ಸಂಘಟನಾತ್ಮಕವಾಗಿ ಆಗ್ರಹಿಸಬೇಕಿದೆ. ವರ್ಗ ಶತ್ರುಗಳು ಸಂಘಟನೆಯ ಒಗ್ಗಟ್ಟನ್ನು ಒಡೆಯಲು ಹಾಗೂ ಹೋರಾಟದ ದಿಕ್ಕನ್ನು ತಪ್ಪಿಸಲು ತರಾವರಿ ಶಡ್ಯಂತ್ರಗಳನ್ನು ಮಾಡುತ್ತಿದ್ದಾರೆ. ಅವರ ತಂತ್ರಗಳಿಗೆ ಪ್ರತಿತಂತ್ರವನ್ನು ಹೂಡುವ ಮೂಲಕ ಹೋರಾಟದ ಮೂಲ ಆಶಯದ ಅನುಷ್ಟಾನಕ್ಕೆ ಸಂಘಟನೆಯ ಶಕ್ತಿ ಸಾಮರ್ಥ್ಯ ಹಾಗೂ ಯುಕ್ತಿಯನ್ನು ಬಳಸಬೇಕಿದೆ. ಮನುವಾದಿ ವಿದ್ವಂಸಕ ಶಕ್ತಿಗಳು ಈ ನಾಡಿನಲ್ಲಿ ತಲೆ ಎತ್ತದಂತೆ ಸಂಘರ್ಷವನ್ನು ಜಾರಿಯಲ್ಲಿಡಬೇಕಾಗಿದೆ. ಬುದ್ದ, ಬಸವ, ಅಂಬೇಡ್ಕರವರು ಕಂಡ ಜಾತಿರಹಿತ ಸಮಸಮಾಜದ ಕನಸು ನನಸಾಗಬೇಕಿದೆ.  

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ