ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶರವರನ್ನು ಇಂದು ಅ.1 ರಂದು ಹುಬ್ಬಳ್ಳಿ ಪೋಲೀಸರು ಬಂದಿಸಿದ್ದು ನ್ಯಾಯಾಂಗ ಬಂದನದಲ್ಲಿರಿಸಿದ್ದಾರೆ. 2007 ರಲ್ಲಿ ಗೌರಿ ಲಂಕೇಶ ಪತ್ರಿಕೆಯಲ್ಲಿ 'ದರೋಡೆಗಿಳಿದ ಬಿಜೆಪಿಗಳು' ಎನ್ನುವ ಲೇಖನ ಪ್ರಕಟಿಸಿದ್ದರ ವಿರುದ್ಧ ಬಿಜೆಪಿ ಸಂಸದ ಪ್ರಹ್ಲಾದ್ ಜ್ಯೋಶಿ ಹಾಗೂ ಇನ್ನಿತರ ಬಿಜೆಪಿ ಮುಖಂಡರುಗಳು ಹುಬ್ಬಳ್ಳಿಯ ಕೊರ್ಟಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ನಮ್ಮ ವಿಳಂಬಪರ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಕೇಸು ಕಳೆದ ಒಂಬತ್ತು ವರ್ಷಗಳಿಂದ ನಡೆಯುತ್ತಲೇ ಇದೆ. ಈ ರಾಜಕಾರಣಿಗಳು ಕೇಸು ಗೆಲ್ಲುವುದಂತೂ ಅಸಾಧ್ಯ. ಆದರೆ ಅದೆಲ್ಲೋ ದೂರದ ಕೋರ್ಟಿನಲ್ಲಿ ಕೇಸು ದಾಖಲಿಸಿ ಪತ್ರಕರ್ತರನ್ನು ದಶಕಗಳ ಕಾಲ ಕೋರ್ಟಿಗೆ ಅಲೆದಾಡಿಸಿ ಹೈರಾಣಾಗಿಸುವ ಕುತಂತ್ರವನ್ನು ಮಾಡುತ್ತಲೇ ಇರುತ್ತಾರೆ. ಇಷ್ಟು ವರ್ಷಗಳಿಂದ ಕೋರ್ಟಿಗೆ ಅಲೆದಾಡಿ ಬೇಸತ್ತ ಗೌರಿಯವರು ಇತ್ತೀಚೆಗೆ ಒಂದೆರಡು ಸಲ ಹಿಯರಿಂಗ್ ಇದ್ದಾಗ ಅಟೆಂಡ್ ಮಾಡಲು ಆಗಿಲ್ಲ ಎನ್ನುವುದನ್ನೇ ನೆಪವಾಗಿಸಿಕೊಂಡು ಇದ್ದಕ್ಕಿದ್ದಂತೆ ಚುರುಕಾದ ನ್ಯಾಯಾಲಯವು ಆರೆಸ್ಟ್ ವಾರೆಂಟ್ ಹೊರಡಿಸಿದೆ. ನ್ಯಾಯಾಲಯಕ್ಕೆ ಹಾಜರಾಗಲು ಹೋದ ಗೌರಿಯವರನ್ನು ಬಂಧಿಸಿ ಹುಬ್ಬಳ್ಳಿಯ ಎರಡನೇ ಜೆ.ಎಂ.ಎಫ್.ಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ.
ಈ ಬಂಧನವನ್ನು ಪತ್ರಕರ್ತರಾದವರು ವಿರೋಧಿಸಬೇಕಿತ್ತು ವಿರೋಧಿಸಲಿಲ್ಲ. ಹೋರಾಟಗಾರ್ತಿಯಾದ ಗೌರಿಯವರ ಸಂಕಷ್ಟದ ಸಮಯದಲ್ಲಿ ಪ್ರಗತಿಪರ ಸಂಘಟನೆಗಳು ಹಾಗೂ ಪ್ರಗತಿಪರರು ಅವರ ಪರವಾಗಿ ನಿಂತು ನೈತಿಕ ಬೆಂಬಲ ಕೊಡಬೇಕಿದೆ. "ಪತ್ರಕರ್ತರು ನ್ಯಾಯಾಲಯದ ಪ್ರಕ್ರಿಯೆಯನ್ನು ಗೌರವಿಸೋದನ್ನ ಕಲಿಯಬೇಕು. ಕಾಲಕಾಲಕ್ಕೆ ಹಾಜರಾಗಿ ತಮ್ಮ ವಾದ ಮಂಡಿಸಿ ಆರೋಪ ಮುಕ್ತರಾಗಬೇಕು. ಅದು ಬಿಟ್ಟು ವಾರೆಂಟ್ ಆಗುವವರೆಗೂ ಮೌನವಾಗಿದ್ದು ಪೊಲೀಸ್, ಜಡ್ಜ್, ಸರಕಾರಕ್ಕೆ ಬೈಕೋತಿದ್ರೆ ಪ್ರಯೋಜನ ಇಲ್ಲಾ" ಎಂದು ಎಡಪಂಥೀಯ ಸಂಘಟನೆಯ ನ್ಯಾಯವಾಧಿಗಳು ತಮ್ಮ ಸಲಹೆ ಕೊಟ್ಟರು. ಒಂದು ಕೇಸ್ ದಶಕಗಳ ಕಾಲ ಎಳೆದೆಳೆದರೂ ಪಂಚೇಂದ್ರಿಯಗಳನ್ನೆಲ್ಲಾ ಮುಚ್ಚಿಕೊಂಡು ನ್ಯಾಯಾಲಯಕ್ಕೆ ನಾಯಿಯ ಹಾಗೆ ಅಲೆದಾಡುವುದು ವ್ಯಕ್ತಿಯ ಹಕ್ಕಿನ ಉಲ್ಲಂಘನೆಯಾಗಿದೆ. ದೊಡ್ಡ ರಾಜಕಾರಣಿಗಳಿಗೆ ಇದೇ ರೀತಿ ವಾರೆಂಟ್ ಆದಾಗ ಅವರು ರಾಜಾರೋಷವಾಗಿ ಹಾಜರಾಗಲು ಕೋರ್ಟಿಗೆ ಬಂದಾಗ ಆರೆಸ್ಟು ಮಾಡದೇ ಬೇಲ್ ಮರ್ಯಾದೆಯಿಂದ ಬೇಲ್ ಕೊಟ್ಟ ಉದಾಹರಣೆಗಳೂ ಬೇಕಾದಷ್ಟಿವೆ. ಇದ್ದದ್ದನ್ನು ಇದ್ದಂತೆ ಬರೆದು ಜನರಿಗೆ ತಿಳಿಸಿದ ಪತ್ರಕರ್ತರಿಗೆ ಮಾತ್ರ ಕಾನೂನು ಉರುಳಾಗುವುದನ್ನು ಯಾರೂ ಪ್ರಶ್ನಿಸುವುದಿಲ್ಲ. ನ್ಯಾಯಾಂಗದ ವಿಳಂಬ ನೀತಿಯ ವಿರುದ್ದ ನ್ಯಾಯವಾದಿಗಳೇ ಚಕಾರ ಎತ್ತುವುದಿಲ್ಲ. ನ್ಯಾಯ ವಿಳಂಬವಾದಷ್ಟೂ ಈ ವಕೀಲರುಗಳಿಗೆ ಲಾಭ ಇರುವಾಗ ಹಾಗೂ ನ್ಯಾಯವಿಳಂಬಕ್ಕೆ ಅವರೂ ಕಾರಣೀಕರ್ತರಾಗಿರುವಾಗ, ಬಹುತೇಕ ನ್ಯಾಯವಾದಿಗಳು ತಮ್ಮ ವೃತ್ತಿಪರತೆಯನ್ನೇ ಗಾಳಿಗೆ ತೂರಿದಾಗ ನ್ಯಾಯ ಬೇಗ ಸಿಕ್ಕುತ್ತದೆ ಎನ್ನುವ ನಂಬಿಕೆಯೆ ಜನರಿಗೆ ಹೊರಟು ಹೋಗಿದೆ. ಇನ್ನು ಒಂಬತ್ತು ವರ್ಷ ಕೋರ್ಟಿಗೆ ಅಲೆದಾಡಿದ ಪತ್ರಕರ್ತೆಗೆ ಅದೆಷ್ಟು ಬೇಸರವಾಗಿರಬಾರದು.
ಯಾವುದೊ ಕಾರಣಗಳಿಂದ ಪತ್ರಕರ್ತರು ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಳಿಸದೇ ಬಂಧನಕ್ಕೊಳಗಾದಾಗ ಅವರ ಬೆಂಬಲಕ್ಕೆ ನಿಲ್ಲುವುದು ಪತ್ರಕರ್ತರಾದವರ ನೈತಿಕ ನಿಲುವಾಗಿರಬೇಕು. ತಮ್ಮ ಕುಲಬಾಂಧವರು ಅದೇನೇ ಮಾಡಿದರೂ ಅವರನ್ನು ಸಮರ್ಥಿಸಿಕೊಳ್ಳುವ ಸಂಘಪರಿವಾರದವರ ಒಗ್ಗಟ್ಟನ್ನು ನೋಡಿಯಾದರೂ ನಾವು ನಮ್ಮ ಹೋರಾಟದ ಸಂಗಾತಿಗಳ ಪರ ನಿಲ್ಲಬೇಕಾಗಿದೆ. ನ್ಯಾಯಾಲಯದ ಪ್ರಕ್ರಿಯೆ ಪ್ರತಿಭಟಿಸಿ ತಮಿಳುನಾಡಿಗೆ ನೀರು ಬಿಡದ ಸರಕಾರದ ನಿಲುವನ್ನು ನಾವೇಕೆ ಬೆಂಬಲಿಸುತ್ತಿದ್ದೇವೆ? ಯಾಕೆಂದರೆ ಕೋರ್ಟಿನ ತೀರ್ಪು ಜನರ ವಿರುದ್ದವಾಗಿದೆ ಅದಕ್ಕೆ. ಗೌರಿ ಲಂಕೇಶರವರ ಬಂಧನವಾದಾಗಲೂ ಅವರ ಪರವಾಗಿ ನಿಲ್ಲಬೇಕಿದೆ ಯಾಕೆಂದರೆ ಗೌರಿಯವರು ದಮನಿತ ಜನರ ಪರವಾದ ದ್ವನಿಯಾಗಿದ್ದಾರೆ ಅದಕ್ಕೆ. ತಪ್ಪೋ ಸರಿಯೋ ಎಲ್ಲಿವರೆಗೂ ನಾವು ನಮ್ಮ ಜನಹೋರಾಟದ ಸಂಗಾತಿಗಳ ಪರವಾಗಿ ನಿಲ್ಲದೇ ಕಾನೂನು ಮತ್ತೊಂದು ನೆಪಹೇಳುತ್ತಾ ಇರುತ್ತೇವೆಯೋ ಅಲ್ಲಿವರೆಗೂ ಪ್ರಗತಿಪರರಲ್ಲಿ ಒಗ್ಗಟ್ಟು ಸಾಧ್ಯವಾಗುವುದಿಲ್ಲ. ಈ ತಕ್ಷಣ ಪ್ರಗತಿಪರರೆಲ್ಲರೂ ಗೌರಿಯವರ ಪರವಾಗಿ ನಿಲ್ಲಬೇಕು, ನೈತಿಕವಾಗಿ ಬೆಂಬಲಿಸಬೇಕು ಹಾಗೂ ಅವರನ್ನು ಈ ಸಿಕ್ಕಿನಿಂದ ಬಿಡಿಸಲು ಸಾಧ್ಯವಾದ ಪ್ರಯತ್ನಗಳನ್ನು ಯಾವುದೇ ಅಪೇಕ್ಷೆಗಳಿಲ್ಲದೇ ಪ್ರಾಮಾಣಿಕವಾಗಿ ಮಾಡಬೇಕು. ಆಗ ಬೇರೆ ಪತ್ರಕರ್ತರಿಗೆ ಸತ್ಯವನ್ನು ಬರೆಯಲು ಪುಷ್ಟಿ ಬರುತ್ತದೆ. ಸಂಕಷ್ಟದ ಸಮಯದಲ್ಲಿ ಬೆಂಬಲಕ್ಕೆ ನಿಲ್ಲದೇ ಅವರ ಕರ್ಮ ಅವರು ಅನುಭವಿಸಲಿ ಎಂದುಕೊಂಡು ತೊಂದರೆಗೊಳಗಾದ ಸಂಗಾತಿಗಳನ್ನು ಏಕಾಂಗಿಯಾಗಿಸಿದರೆ ಅದು ಬೇರೆ ನಿಷ್ಟುರ ಬರಹಗಾರರ ನೈತಿಕ ಸ್ತೈರ್ಯವನ್ನು ಕುಗ್ಗಿಸುತ್ತದೆ.
ಶಾಸಕಾಂಗ ಇಲ್ಲವೇ ನ್ಯಾಯಾಂಗದಿಂದ ಯಾವುದೇ ಜನಪರ ನಿಲುವಿನ ಪತ್ರಕರ್ತ ಸಂಕಷ್ಟಕ್ಕೊಳಗಾದಾಗ ಎಲ್ಲಾ ಪತ್ರಕರ್ತರೂ ಹಾಗೂ ಪ್ರಗತಿಪರರು ಮೊದಲು ನಿಮ್ಮ ಜೊತೆ ನಾವಿದ್ದೇವೆ ಎಂದು ನೈತಿಕ ಬೆಂಬಲ ಕೊಡಬೇಕು. ಹಾಗೂ ಸಾಧ್ಯವಾದ ಕಾನೂನಾತ್ಮಕ ಬೆಂಬಲವನ್ನೂ ಕೊಡಬೇಕು. ಭ್ರಷ್ಟ ವ್ಯವಸ್ಥೆಯ ವಿರುದ್ದ ಹೋರಾಡುವ ಹಾಗೂ ದಿಟ್ಟ ನಿಲುವಿನ ಪತ್ರಕರ್ತರಿಗೆ ದೈರ್ಯ ತುಂಬುವ ಕೆಲಸವಾಗಿದೆ.
ಗೌರೀ ಮೇಡಂ ನಿಮ್ಮ ಜೊತೆಗೆ ನಾವಿದ್ದೀವಿ. ನಮ್ಮಂತೆ ಆಲೋಚಿಸುವ ಎಲ್ಲಾ ಮನಸುಗಳು ನಿಮ್ಮ ಜೊತೆಗಿವೆ. ಸತ್ಯಕ್ಕೆ ಜಯವಾಗಲಿ... ಸುಳ್ಳನ್ನು ಸಮರ್ಥಿಸಿಕೊಳ್ಳುವ ಭ್ರಷ್ಟರಿಗೆ ಸೋಲಾಗಲಿ....
- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ