ಶುಕ್ರವಾರ, ಅಕ್ಟೋಬರ್ 14, 2016

ತಹ ತಹ .....9 ಅಸ್ತಂಗತವಾಗುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಲಗೊಳ್ಳುತ್ತಿದೆ ಪ್ಯಾಸಿಸ್ಟ್ ಶಡ್ಯಂತ್ರ :

ತಹ ತಹ – 9


ಆಗೊಂದು ಕಾಲವಿತ್ತು.. ಅಷ್ಟೊಂದು ಪುರಾತನ ಕಾಲವಲ್ಲ. ಎಪ್ಪತ್ತು ಎಂಬತ್ತರ ದಶಕವದು. ಪ್ರಗತಿಪರರು ದೈರ್ಯವಾಗಿ ಜನವಿರೋದಿತನದ ಬಗ್ಗೆ ಬಹಿರಂಗವಾಗಿಯೇ ಮಾತಾಡುತ್ತಿದ್ದರು. ಧರ್ಮ ಹಾಗೂ ಧರ್ಮಾಂಧತೆಯ ಜೀವವಿರೋಧಿತನದ ವಿರುದ್ಧ ಬರೆಯುತ್ತಿದ್ದರು. ಸತ್ಯ ಪ್ರತಿಪಾದನೆ ಬಹುತೇಕ ಪ್ರಜ್ಞಾವಂತ ಸಾಹಿತಿಗಳ ಹಾಗೂ ಸಾಮಾಜಿಕ ಕಾರ್ಯಕರ್ತರ  ಕಾಯಕವಾಗಿತ್ತು. ಯಾರೋ ಕೆಲವು ಮತಾಂಧರು ಗೊಣಗಿದರೂ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಪ್ರಶ್ನಿಸುವ... ನಿಂದಿಸುವ... ಇಲ್ಲವೇ ಕತ್ತುಹಿಚುಕುವ ಪ್ರಯತ್ನಗಳು ಬಹಿರಂಗವಾಗಿ ನಡೆಯುತ್ತಿರಲಿಲ್ಲ. ಯಾಕೆಂದರೆ ದೇಶದ್ಯಂತ ಬಲಪಂಥೀಯರ ಪ್ರಭಾವ ಈಗಿನಷ್ಟಿರಲಿಲ್ಲ. ದಲಿತ, ರೈತ, ಕಾರ್ಮಿಕ ಹಾಗೂ ಸಾಹಿತ್ಯಕ ಚಳುವಳಿಗಳು ಬಲವಾಗಿದ್ದವು. ಹೋರಾಟದ ನಾಯಕತ್ವ ವಹಿಸಿಕೊಂಡವರಿಗೆ ಸ್ವಾರ್ಥಕ್ಕಿಂತಲೂ ಜನತೆಯ ಹಿತವೇ ಮುಖ್ಯವಾಗಿತ್ತು. ಬಂಡಾಯದಂತಹ ಸಾಹಿತ್ಯ ಸಂಘಟನೆಯ ಬರಹಗಾರರು ದಿಟ್ಟ ಧೋರಣೆಯೊಂದಿಗೆ  ಪ್ರಭುತ್ವ ಹಾಗೂ ಧರ್ಮಗಳ ಜಂಟಿ ಶೋಷಣೆಯನ್ನು ವಿರೋಧಿಸಿ ಬರೆದರು. ಆಗಲೂ ಸಂಪ್ರದಾಯವಾದಿಗಳು ತೆಪ್ಪಗಿದ್ದರು. ನಾಡಿನಲ್ಲಿ ಯಾರಿಗೇ ಅನ್ಯಾಯವಾದರೂ ಅದನ್ನು ವಿರೋಧಿಸುವ ಗಟ್ಟಿ ದ್ವನಿಗಳು ಮೊಳಗುತ್ತಿದ್ದವು. ಹೋರಾಟಗಳು ಸರಕಾರಗಳನ್ನೇ ಅಲ್ಲಾಡಿಸುತ್ತಿದ್ದವು...

ಆದರೆ .. ಈಗ ಎಲ್ಲಾ ಉಲ್ಟಾಪಲ್ಟಾ. ಬಲಪಂಥೀಯ ಶಕ್ತಿಗಳು ತಮ್ಮ ರಾಜಕೀಯ ಬಲವನ್ನು ಹೆಚ್ಚಿಸಿಕೊಂಡಿವೆ. ಎಡಪಂಥೀಯ ವ್ಯಕ್ತಿ ಹಾಗೂ ಶಕ್ತಿಗಳು ಛಿದ್ರಗೊಂಡು ತಮ್ಮ ಹೋರಾಟದ ಬಲವನ್ನು ಕ್ಷೀಣಿಸಿಕೊಂಡಿವೆ. ದಲಿತ ಸಂಘಟನೆಗಳು ಹೋಳಾಗಿವೆ... ರೈತ ಸಂಘಟನೆಗಳು ಹಾಳಾಗುವೆ. ಬಂಡಾಯ ಸಂಘಟನೆ ನೇಪತ್ಯಕ್ಜೆ ಸೇರಿದರೆ ಕಾರ್ಮಿಕ ಸಂಘಟನೆಗಳು ಬಲಹೀನವಾಗಿವೆ.. ಇಂತಹ ಸಂದರ್ಭದಲ್ಲಿ ಮತಾಂಧ ಶಕ್ತಿಗಳು ವಿಜ್ರಂಭಿಸತೊಡಗಿವೆ.

ಈಗ ಯಾರೂ ಧರ್ಮಾಂಧರ ಶೋಷಣೆಯ ಬಗ್ಗೆ, ಸಂಘಪರಿವಾರದ ಶಡ್ಯಂತ್ರಗಳ ಬಗ್ಗೆಜನರ ವಿವೇಚನೆಯನ್ನು ಹಾಳು ಮಾಡುತ್ತಿರುವ ಮೌಢ್ಯಗಳ ಬಗ್ಗೆ, ಮೇಲ್ಜಾತಿ ವರ್ಗಗಳ ದಬ್ಬಾಳಿಕೆಯ ಬಗ್ಗೆ, ಬಲಪಂಥೀಯ ಪಕ್ಷಗಳ ಜೀವವಿರೋಧಿ ಧೋರಣೆಗಳ ಬಗ್ಗೆ ಚಕಾರ ಎತ್ತುವ ಹಾಗಿಲ್ಲ. ಅಪ್ಪಿ ತಪ್ಪಿ  ಸಾರ್ವತ್ರಿಕವಾಗಿ ಜನವಿರೋಧಿತನವನ್ನು ವಿರೋಧಿಸಿದವರನ್ನು ಹಿಂದುತ್ವದ ಉನ್ಮಾದ ಪೀಡಿತ ಸಂತಾನ ಸಹಿಸುವುದಿಲ್ಲ.

ತಾವು ನಂಬಿದ್ದೇ ಪರಮ ಸತ್ಯ... ಅದನ್ನೇ ಎಲ್ಲರೂ ಆರಾಧಿಸಿ ಆಚರಿಸಬೇಕು ಎನ್ನುವ ಸರ್ವಾಧಿಕಾರಿ ಮನೋಭಾವವನ್ನು ತಲೆಯೊಳಗೆ ತುಂಬಿಕೊಂಡ ಮನುವಾದಿ ಪಡೆಗಳು ಬೇರೆಯವರ ಭಿನ್ನಾಭಿಪ್ರಾಯವನ್ನು ದಮನಮಾಡಲು ಶತಾಯ ಗತಾಯ ಪ್ರಯತ್ನಿಸುತ್ತಿವೆ

.ಯಾವಾಗ ಬಲಪಂಥೀಯ ನಂಬಿಕೆಗಳಿಗೆ ವಿರೋಧ ವ್ಯಕ್ತವಾಗುತ್ತೋ ಆಗ ಶಕ್ತಿಗಳು ಅಸಹನೆಯಿಂದ ತಲ್ಲಣಿಸಿಬಿಡುತ್ತಿವೆ. ವಿರೋಧಿ ದ್ವನಿಯನ್ನು ಮೊದಲು ನಿಂದಿಸುವ ಮೂಲಕ ಬಗ್ಗು ಬಡಿಯಲು ಪ್ರಯತ್ನಿಸಲಾಗುತ್ತದೆ. ಸಮೂಹ ಮಾಧ್ಯಮಗಳಲ್ಲಿ ಒಂದು ಹೇಳಿಕೆಯನ್ನು ಇಲ್ಲವೇ ಕವಿತೆಯನ್ನು ಮತಾಂಧರ ವಿರುದ್ದ ಹಾಕಿದರೆ ಸಾಕು ಸಂಸ್ಕೃತಿ ರಕ್ಷಕರೆಂದುಕೊಳ್ಳುವವರಿಂದ ಅಸಹ್ಯಕರ ನಿಂದನೆಗಳು ಉದುರತೊಡಗುತ್ತವೆ. ನಿಂದನೆಗೂ ಬಗ್ಗದಿದ್ದರೆ ಹಲ್ಲೆ ಹಾಗೂ ಹತ್ಯೆಯ ಬೆದರಿಕೆಗಳು ಶುರುವಾಗುತ್ತವೆ. ಅದಕ್ಕೂ ಬಗ್ಗದಿದ್ದರೆ ಮೌಕಿಕ ಬೆದರಿಕೆಗಳನ್ನು ದೈಹಿಕವಾಗಿ ಪ್ರಯೋಗಿಸಲಾಗುತ್ತದೆ. 

ಸಾಮ ಬೇಧ ದಂಡಗಳಿಂದಾದರೂ ಸರಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಿ ವಿರೋಧಿಸುವ ದ್ವನಿಗಳೇ ಇಲ್ಲದಂತೆ ಮಾಡುವುದೇ ಪ್ಯಾಸಿಸ್ಟ್ ಮನಸ್ಥಿತಿಯವರ ಉದ್ದೇಶವಾಗಿದೆ. ಅಂಧಶ್ರದ್ದೆ ವಿರುದ್ದ ಜನಜಾಗ್ರತಿ ಮಾಡುತ್ತಿದ್ದ ಡಾ.ನರೇಂದ್ರ ದಾಭೋಲ್ಕರರನ್ನು ಹತ್ಯೆ ಮಾಡಲಾಯ್ತು, ಮತಾಂಧತೆಯ ವಿರುದ್ದ ಹೋರಾಡಿದ ವಿಚಾರವಾದಿ ಪೆನ್ಸಾರೆಯವರನ್ನೂ ಕೊಲ್ಲಲಾಯಿತು. ತಮ್ಮ ಸಂಶೋಧನೆಗಳ ಮೂಲಕ ಚರಿತ್ರೆಯಲ್ಲಿ ತಿರುಚಲಾದ ಸತ್ಯಗಳನ್ನು ಪ್ರತಿಪಾದಿಸುತ್ತಿದ್ದ ಡಾ.ಎಂ.ಎಂ.ಕಲಬುರ್ಗಿಯವರನ್ನೂ ಹಾಡ ಹಗಲೇ ಹತ್ಯೆ ಮಾಡಲಾಯ್ತು. ವಿಚಾರವಾದಿಗಳನ್ನು ಹುಡುಕಿ ಹತ್ಯೆ ಮಾಡುವ ಮೂಲಕ ಯಾರೂ ತಮ್ಮನ್ನು ಪ್ರಶ್ನಿಸಬಾರದು ಎನ್ನುವ ದುಷ್ಟ ಸಂದೇಶವನ್ನು ಮತೀಯವಾದಿಗಳು ಇಡೀ ದೇಶಕ್ಕೆ ಸಾರಿದರು.
ರಮ್ಯಾ ಎನ್ನುವ ಎಳಸು ರಾಜಕಾರಣಿ " ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ಸ ಕೊಡುಗೆ ಏನೂ ಇಲ್ಲ" ಎಂದು ಹೇಳಿದ ಕೂಡಲೇ ಸಂಘಿಗಳು ಸೆಟೆದೆದ್ದು ನಿಂತರು. ಅವರು ಮಹಿಳೆ ಎನ್ನುವುದನ್ನು ಮರೆತು ಅತೀ ಕೀಳ ಮಟ್ಟದ ನಿಂದನೆಗಿಳಿದರು. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಹೇಳಿಕೆ ಎಂದು ಆರೋಪಿಸಿ ಬೆಳ್ತಂಗಡಿ ಹಾಗೂ ಮಂಡ್ಯದಲ್ಲಿ ಹಿಂದೂ ಸಂಘಟನೆಗಳು ಪೋಲಿಸ್ ದೂರು ದಾಖಲಿಸಿ ಕೋರ್ಟಿಗೆ ಹೋಗುವ ಬೆದರಿಕೆ ಒಡ್ಡಿದ್ದಾರೆ. ರಮ್ಯಾಗೆ ತಮಗನ್ನಿಸಿದ್ದನ್ನು ಹೇಳುವ ಸ್ವಾತಂತ್ರ್ಯವೂ ಇಲ್ಲವೇ? ಅವರ ಹೇಳಿಕೆಯಿಂದ ಸಾಮಾಜಿಕ ಸ್ವಾಸ್ಥ್ಯ ಅದು ಹೇಗೆ ಹಾಳಾಗುತ್ತದೆ. ಹಾಳಾಗಿದ್ದರೆ ಅದು ಹುಸಿ ದೇಶಭಕ್ತಿಯ ಉನ್ಮಾದವನ್ನು ಮನ ಮೆದುಳಲ್ಲಿ ತುಂಬಿಕೊಂಡ ನಕಲಿ ದೇಶಭಕ್ತರಿಗಾಗುತ್ತದೆ. ಅಂತವರೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುತ್ತಿರುವುದು. ತಲೆಯಲ್ಲಿ ಮೆದುಳಿಲ್ಲದ ಬಿಜೆಪಿ ನಾಯಕ 'ರಮ್ಯಾರದ್ದು ತಲೆಬುಡವಿಲ್ಲದ ಹೇಳಿಕೆ' ಎಂದು ಕಾಗೆ ಹಾರಿಸಿದ.

ಅಕಸ್ಮಾತ್ ರಮ್ಯಾ ಹೇಳಿಕೆಯಲ್ಲಿ ಸತ್ಯವೇ ಇಲ್ಲವಾದರೆ ಅದು ಸುಳ್ಳು ಎಂದು ಸಾಬೀತು ಪಡಿಸಲಿ ಬೇಡವೆಂದವರಾರು. ವಿಚಾರವನ್ನು ದಮನಿಸುವ ಬದಲು ವಿಚಾರಗಳಿಂದಲೇ ಎದುರಿಸಲಿ ತಡೆದವರಾರು. ಯಾವಾಗ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲವೋ ಆಗ ಬಲಪ್ರಯೋಗದಿಂದ ಬಾಯಿ ಮುಚ್ಚಿಸುವುದು ಮನುವಾದಿಗಳ ಪುರಾತನ ತಂತ್ರಗಾರಿಕೆಯಾಗಿದೆ. ಅದನ್ನೇ ಮುಂದುವರೆಸಿರುವ ಸಂತಾನಗಳು ಹೆದರಿಸಿ ಬೆದರಿಸಿ ಪ್ರಶ್ನಿಸುವ ದ್ವನಿಗಳನ್ನು ಉಡುಗಿಸುವ ಸಂಚನ್ನು ಮಾಡುತ್ತವೆ. " ನಾಡಿನಲ್ಲಿ ಜನರ ಬವಣೆಗಳು, ಜ್ವಲಂತ ಸಮಸ್ಯೆಗಳು ಸಾಕಷ್ಟಿದ್ದರೂ ಅವುಗಳ ಬಗ್ಗೆ ಚರ್ಚಿಸುವುದು ಬಿಟ್ಟು ನಿಷ್ಪ್ರಯೋಜಕ ವಿಚಾರಗಳ ಪ್ರಸ್ತಾಪ ಅನಗತ್ಯ" ಎಂದು ರಮ್ಯಾರವರಿಗೆ ರೈತ ನಾಯಕ ಪುಟ್ಟಣ್ಣಯ್ಯ ಹಾಗೂ ನಿಡುಮಾಮಿಡಿ ಸ್ವಾಮಿಗಳು ಹೇಳಿದ ಬುದ್ದಿಮಾತು ಸರಿಯಾಗಿದೆ. ರಮ್ಯಾರಂತಹ ಉದಯೋನ್ಮುಖ ರಾಜಕಾರಣಿಗಳು ಹಾಗೂ ಭಗವಾನರಂತಹ ಸಾಹಿತಿಗಳು ನಿಟ್ಟಿನಲ್ಲಿ ಆಲೋಚಿಸುವುದುತ್ತಮ.

.ಮತಾಂಧರ ಮನಸ್ಸು ಧಗಧಗ ಉರಿಯುವ ಹೊಮಕುಂಡವಾಗಿದೆ. ಹಿಂದುತ್ವದ ಹೋಮ ಸಾಂಗವಾಗಿ ಸಾಗಬೇಕಾದರೆ ವಿಚಾರವಾದಿಗಳ, ಪ್ರಜ್ಞಾವಂತರ, ಪ್ರಗತಿಪರರ, ಹೋರಾಟಗಾರರ ಬಲಿಯನ್ನು ಅದು ಕೇಳುತ್ತದೆ. ಅದಕ್ಕಾಗಿಯೇ ಪ್ಯಾಸಿಸ್ಟ್ ಪ್ರಣೀತ ಶಕ್ತಿಗಳು ತಹತಹಿಸಿ ಕಾಯುತ್ತಿವೆ. ಅವರ ಲೋಕವಿರೋಧಿ ಯಜ್ಞಕ್ಕೆ ಇಲ್ಲಸಲ್ಲದ ಅನಗತ್ಯ ಹೇಳಿಕೆಗಳನ್ನು ಕೊಟ್ಟು ಹವಿಸ್ಸನ್ನು ಒದಗಿಸುವುದು ಅಪಾಯಕಾರಿಯಾಗಿದೆ. 

ಬಲಪಂಥೀಯರ ಜೀವವಿರೋಧಿತನವನ್ನು ಪ್ರಶ್ನಿಸಿದರೆ ಅದನ್ನು ತಾರ್ಕಿಕವಾಗಿ ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲದಷ್ಟು ಅವರ ಮೌಡ್ಯಗಳು ಅತಾರ್ಕಿಕವಾಗಿವೆ. ಆಗ ಅವರು ಜನರ ನಂಬಿಕೆ ಹಾಗೂ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎನ್ನುವ ಅನುಕೂಲಸಿಂದು ವಾದವನ್ನು ಪ್ರತಿಪಾದಿಸುತ್ತಾರೆ. ಜನರಲ್ಲಿ ಮೌಡ್ಯವನ್ನು ಹಾಗೂ ಅತಾರ್ಕಿಕ ನಂಬಿಕೆಗಳನ್ನು ಬಿತ್ತಿ ಬೆಳೆದಿದ್ದೆ ಮನುವಾದಿಗಳು. ಅವೆಲ್ಲಾ ಅವೈಜ್ಞಾನಿಕವೆಂದು ಹೇಳಿದರೆ ಭಾವನೆಗಳಿಗೆ ಬಾದೆ ಬರುತ್ತದೆಂದು ಹೇಳುವವರೂ ಅವರೆ. ಒಬ್ಬರ ನಂಬಿಕೆ ಇನ್ನೊಬ್ಬರಿಗೆ ಅಪತ್ಯ. ಇನ್ನೊಬ್ಬರ ನಂಬಿಕೆ ಮತ್ತೊಬ್ಬರಿಗೆ ಅಪ್ರಸ್ತುತ. ಹೀಗಾಗಿ ಎಲ್ಲಾ ಜಾತಿ ಧರ್ಮಗಳ ಪಾರಂಪರಿಕ ಅವೈಚಾರಿಕ ನಂಬಿಕೆಗಳನ್ನು ಸಕಾರಾತ್ಮಕ ಚರ್ಚೆ ಸಂವಾದಗಳ ಮೂಲಕ ಬದಲಾಯಿಸುವ ಪ್ರಯತ್ನ ಮಾಡಬೇಕಾದದ್ದು ಉತ್ತಮ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ. ಅಷ್ಟಕ್ಕೂ ಬೇರೆಯವರ ನಂಬಿಕೆ ಆಚರಣೆಗಳ ಮೇಲೆ ಗುಮಾನಿಗಳಿದ್ದರೆ ಅವರ ನಂಬಿಕೆ ಭಾವನೆಗಳನ್ನೂ ಗೌರವಿಸುವ ಕೆಲಸ ಆಗಬೇಕಿದೆ. ಅದು ಬಿಟ್ಟು ತಮ್ಮ ಜಾತಿ ಧರ್ಮ ಪರಂಪರೆಗಳಲ್ಲಿರುವ ನ್ಯೂನ್ಯತೆ ಹಾಗೂ ಜೀವವಿರೋಧಿತನವನ್ನು ಯಾರಾದರೂ ಎತ್ತಿ ತೋರಿಸಿದರೆ ಅದು ನಂಬಿಕೆ ಹಾಗೂ ಭಾವನೆಗೆ ಧಕ್ಕೆ ಎನ್ನುವ ಮನೋಭಾವವೇ ಅತ್ಯಂತ ಸಂಕುಚಿತ ಹಾಗೂ ಪೂರ್ವಗ್ರಹ ಪೀಡಿತ ನಡೆಯಾಗಿದೆ.

ಎಲ್ಲಾ ನಂಬಿಕೆ ಭಾವನೆಗಳಾಚೆ ಸಾರ್ವತ್ರಿಕ ಸಾರ್ವಕಾಲಿಕ ಸತ್ಯ ಎನ್ನುವುದು ಇರುತ್ತದೆ. ನಂಬಿಕೆಗಿಂತ ನ್ಯಾಯ ದೊಡ್ಡದು... ಭಾವನೆಗಳಿಗಿಂತ ಸತ್ಯ ದೊಡ್ಡದು... ಯಾರು ಸತ್ಯ ನ್ಯಾಯದ ದಾರಿಯಲ್ಲಿ ನಡೆಯದೇ ತಾವು ನಂಬಿದ್ದನ್ನೇ ಎಲ್ಲರೂ ನಂಬಿ ಆಚರಿಸಬೇಕು ಎಂದು ಬಲವಂತಗೊಳಿಸಿದಾಗ ಸಮಾಜದಲ್ಲಿ ಸಂಘರ್ಷ ಆರಂಭವಾಗುತ್ತದೆ. ಅಸಹನೆ ಹೆಚ್ಚಾಗಿ, ಸಹಬಾಳ್ವೆ ಹಾಳಾಗಿ ಸಾಮಾಜಿಕ ಸ್ವಾಸ್ಥ್ಯವೇ ಕೆಟ್ಟು ಜನತೆ ಕಂಗಾಲಾಗುತ್ತದೆ.

ಈಗ ಸಂಘ ಪರಿವಾರಿಗಳಿಗೆ ಬೇಕಾಗಿದ್ದೇ ಅದೇ. ದೇಶಾದ್ಯಂತ ಒಂದೇ ಧರ್ಮ ಅದು ಮನುವಾದಿ ಹಿಂದೂ ಧರ್ಮ, ಒಂದೇ ಸಂಸ್ಕೃತಿ ಅದು ವರ್ಣಾಶ್ರಮವಾಧಾರಿತ ವೈದಿಕ ಸಂಸ್ಕೃತಿಒಂದೇ ಪ್ರಭುತ್ವ ಅದು ಸಂಘ ಪರಿವಾರದ ಪ್ರಭುತ್ವ..ಇವುಗಳನ್ನು ಸ್ಥಾಪಿಸುವುದೇ ಅಂತಿಮ ಗುರಿಯಾಗಿದೆ. ಗುರಿ ಸಾಧನೆಗೆ  ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ, ವಿರೋಧಿ ದ್ವನಿಗಳನ್ನು ಅಡಗಿಸುವ, ಯುವಕರಲ್ಲಿ ಉನ್ಮಾದವನ್ನು ತುಂಬುವಂತಹ ಜನವಿರೋಧಿ ಕೃತ್ಯಗಳಲ್ಲಿ ಮತಾಂಧರು  ಅವ್ಯಾಹತವಾಗಿ ತೊಡಗಿಕೊಂಡಿದ್ದಾರೆ . ಇಂತಹ ಜೀವ ವಿರೋಧಿತನವನ್ನು  ಐಕ್ಯ ಹೋರಾಟಗಳು ಮಾತ್ರ ಎದುರಿಸಲು ಸಾಧ್ಯ. ವ್ಯಯಕ್ತಿಕ ಹೇಳಿಕೆಗಳು, ಬಿಡಿ ಬಿಡಿ ಹೋರಾಟಗಳು ಬಲಾಡ್ಯವಾಗಿರುವ ಬಲಪಂಥೀಯ ದುಷ್ಟಶಕ್ತಿಗಳನ್ನು ದಮನ ಮಾಡಲು ಸಾಕಾಗುವುದಿಲ್ಲ. ಎಲ್ಲಾ ಜಾತಿ ಧರ್ಮಗಳ ದುಡಿಯುವ ವರ್ಗಗಳನ್ನೆಲ್ಲಾ ಒಂದು ಗೂಡಿಸಿ ಬಲಾಡ್ಯವಾದ ಜನಹೋರಾಟವನ್ನು ಕಟ್ಟುವ ಮೂಲಕ ಮತಾಂಧ ಶಕ್ತಿಗಳನ್ನು ಹಿಮ್ಮೆಟ್ಟಿಸಬಹುದಾಗಿದೆ. ನಿಟ್ಟಿನಲ್ಲಿ ಎಲ್ಲಾ ಎಡಪಕ್ಷಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ಹೋರಾಟಪರ ಸಂಘಟನೆಯವರು ಹಾಗೂ ಪ್ರಜ್ಞಾವಂತ ಜನರು ಆಲೋಚಿಸಿ ಒಂದೇ ಐಕ್ಯ ಹೋರಾಟ ವೇದಿಕೆಯಲ್ಲಿ ಒಂದಾಗಿ ಜನಾಂದೊಲನ ಮಾಡುವುದು ವರ್ತಮಾನದ ಅಗತ್ಯವಾಗಿದೆ. ಹಾಗೆ ಮಾಡದೇ ಹೋದಲ್ಲಿ ದೇಶದ ಜನರ ಭವಿಷ್ಯ ಇನ್ನು ಎರಡು ಮೂರು ಶತಮಾನಗಳ ಕಾಲ ಪ್ಯಾಸಿಸ್ಟ್ ನರಕದಲ್ಲಿ  ಕೊಳೆಯುವುದರಲ್ಲಿ ಸಂದೇಹವೇ ಇಲ್ಲ..

ಮತಾಂಧತೆಯ ಕತ್ತಲೆ ಅಳಿಯಲಿ..
ದುಡಿಯುವ ಜನರ ಐಕ್ಯತೆ ಬೆಳಗಲಿ..
ಸಮಾನತೆಯೊಂದೇ ಬಹುಜನರ ಬೇಡಿಕೆಯಾಗಲಿ...



- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ