ತಹ ತಹ ....24
"ಈ ಸಲ ದೀಪಾವಳಿಗೆ ಪಟಾಕಿಯನ್ನು ಬಹಿಷ್ಕರಿಸಿ, ಶಬ್ದಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ತಡೆಯಿರಿ" ಎಂದಿದ್ದರೆ ಕನ್ನಡಿಗರ ಪರಿಸರ ಪ್ರೇಮಕ್ಕೆ ಉಘೇ ಎನ್ನಬಹುದಾಗಿತ್ತು. ಆದರೆ ತಮಿಳುನಾಡಿನಿಂದ ಪಟಾಕಿ ಕೊಳ್ಳದೇ ತಮಿಳರ ಮೇಲೆ ಸೇಡು ತೀರಿಸಿಕೊಳ್ಳೋಣ ಎನ್ನುವ ಸುದ್ದಿಯನ್ನು ಯಾರೋ ಕನ್ನಡ ಪ್ರೇಮಿಯೊಬ್ಬರು ಬರೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಮುಕುಂದರಾಜರವರಂತಹ ಕವಿ ವಿಮರ್ಶಕರು ತಮಿಳಿಗರ ವಿರುದ್ದ ಹೋರಾಡಲು ನಮಗೊಂದು ದಾರಿ ಸಿಕ್ಕಿತು ಎಂದು ತಮ್ಮ ಮುಖಪುಟದಲ್ಲಿ ಬರೆದು ಸಂಭ್ರಮಿಸಿದ್ದಾರೆ.
ಯಾಕೆ ತಮಿಳರ ಮೇಲೆ ಈ ಪರಿ ಕೋಪ. ಪಟಾಕಿ ಮಾಡುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಜನ ತಮಿಳು ಅಸಂಘಟಿತ ಕಾರ್ಮಿಕರು ದುಡಿಯುವ ವರ್ಗದವರು ಹಾಗೂ ಬಡವರು. ಪಾಪ ಅವರ ಹೊಟ್ಟೆ ಮೇಲೆ ಯಾಕೆ ಹೊಡಿಯಬೇಕು. ಕಾವೇರಿ ನೀರಿನ ಹಂಚಿಕೆ ವಿವಾದಕ್ಕೂ ಆ ರಾಜ್ಯದ ದುಡಿಯುವ ಜನರಿಗೂ ಅದೆಂತಹ ಸಂಬಂಧವಿದೆ. ನೀರಿನ ವಿವಾದಕ್ಕೂ ತಮಗೂ ಯಾವುದೇ ಸಂಬಂಧವೇ ಇಲ್ಲದಂತೆ ತಮ್ಮ ಪಾಡಿಗೆ ತಾವು ತುತ್ತಿನ ಚೀಲ ತುಂಬಿಸಿಕೊಂಡು ಬದುಕುವ ಕಾಯಕದಲ್ಲಿ ಕೊಟ್ಯಾಂತರ ಜನರು ಬದುಕು ಸವೆಸುತ್ತಿದ್ದಾರೆ. ಭಾಷಾಂಧತೆಗೆ ಒಳಗಾಗಿ ಕೂಲಿ ಕಾರ್ಮಿಕ ರೈತರ ಅನ್ನಕ್ಕೆ ಸಂಚಕಾರ ತರುವುದು ತರವಲ್ಲ.
ಬೆಂಗಳೂರಿಗೆ ಪ್ರತಿದಿನ ತಮಿಳುನಾಡಿನ ರೈತರು ಬೆಳೆದ ನೂರಾರು ಟನ್ ಹಣ್ಣು ತರಕಾರಿ ಬರುತ್ತದೆ. ಅದೆಲ್ಲಾ ತಮಿಳರು ಬೆಳೆದದ್ದು ಎಂದುಕೊಂಡು ಬಹಿಷ್ಕರಿಸಿ ನೊಡೋಣ. ಹಣ್ಣು ತರಕಾರಿಯ ಬೆಲೆ ಈಗಿರುವುದಕ್ಕಿಂತ ಮೂರು ಪಟ್ಟು ಹೆಚ್ಚಾಗಿ ಕನ್ನಡಿಗರಿಗೆ ಭಾರವಾಗುತ್ತದೆ. ತಮಿಳಿನ ಉದ್ಯಮಗಳ ಪಟ್ಟಿ ಕೊಟ್ಟು ಕನ್ನಡಿಗರು ಯಾರೂ ಈ ಉದ್ಯಮದ ತಯಾರಿಕೆಗಳನ್ನು ಬಳಸಕೂಡದು ಎಂದೂ ವಾಟ್ಸಾಪ್ ಮೆಸೇಜ್ ಹರಿದಾಡುತ್ತಿರುವುದನ್ನು ಅನೇಕರು ಓದಿರಬಹುದು. ಇಂತಹ ಸುದ್ದಿಯನ್ನು ಹರಡುವವರಿಗೆ ಹಾಗೂ ಗ್ರುಪ್ಪುಗಳಲ್ಲಿ ಹಂಚಿಕೊಂಡು ತಮ್ಮ ಕನ್ನಡಾಭಿಮಾನವನ್ನು ಮೆರೆಯುವವರಿಗೆ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಶತಮಾನಗಳ ಕೊಡುಕೊಳ್ಳುವ ವ್ಯವಹಾರವಿದೆ ಎಂಬುದರ ಅರಿವಿದ್ದಂತಿಲ್ಲ. ಭಾಷಾಂಧತೆಗೊಳಗಾಗಿ ತಮಿಳರು ಉತ್ಪಾದಿಸುವ ಅನ್ನ ಆಹಾರಾದಿ ವಸ್ತುಗಳನ್ನು ಕನ್ನಡಿಗರು ಬಹಿಷ್ಕರಿಸಿದರೆ, ಕನ್ನಡಿಗರ ಉತ್ಪಾದನೆಯನ್ನು ಬಳಸುವುದನ್ನು ತಮಿಳಿಗರು ನಿಲ್ಲಿಸುತ್ತಾರೆ. ಈ ಜಿದ್ದಾಜಿದ್ದಿಯಲ್ಲಿ ಅಪಾರ ತೊಂದರೆಗೆ ಸಿಕ್ಕು ನರಳುವವರು ಮತ್ತೆ ಎರಡೂ ಭಾಷಿಕ ಕೂಲಿ ಕಾರ್ಮಿಕ ರೈತಾಪಿ ಜನಗಳೇ ಹೊರತು ಸೇಪ್ ಜೋನಲ್ಲಿರುವವರಲ್ಲ. ಸರಕಿನ ಒಳಹರಿವಿನ ಕೊರತೆಯಿಂದಾಗಿ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರುವುದರಿಂದ ಈ ಸೇಪ್ ಜೋನಲ್ಲಿರುವ ಮದ್ಯಮ ವರ್ಗದ ಜನರೂ ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗುವುದರಲ್ಲಿ ಸಂದೇಹವಿಲ್ಲ.
ನಮ್ಮ ಆಕ್ರೋಶ ಇರಬೇಕಾದದ್ದು ಬಡ ರೈತ ಕೂಲಿ ಕಾರ್ಮಿಕರ ಮೇಲಲ್ಲ. ಅಥವಾ ಅವರು ಉತ್ಪಾದಿಸುವ ದವಸ ಧಾನ್ಯ ವಸ್ತುಗಳ ಮೇಲಲ್ಲ. ಆಳುವ ವರ್ಗಗಳ ಮೇಲೆ. ಕಾವೇರಿ ನದಿ ನೀರಿನ ಹಂಚಿಕೆಯ ವಿವಾದವನ್ನು ನ್ಯಾಯಯುತವಾಗಿ ಇತ್ಯರ್ಥಗೊಳಿಸದ ಶಾಸಕಾಂಗ ನ್ಯಾಯಾಂಗಗಳ ಮೇಲೆ. ಇನ್ನೂ ಹೆಚ್ಚಿನ ಕೋಪ ಪ್ರಕೋಪ ತೋರಿಸಬೇಕಾದದ್ದು ಕೇಂದ್ರ ಸರಕಾರದ ಮೇಲೆ. ಯಾಕೆಂದರೆ ಒಂದು ರಾಷ್ಟ್ರೀಯ ಜಲನೀತಿಯನ್ನು ರೂಪಿಸಿ ರಾಜ್ಯಗಳನ್ನು ಒಪ್ಪಿಸುವ ಹೊಣೆಗಾರಿಕೆ ಇರುವುದು ಕೇಂದ್ರ ಸರಕಾರಕ್ಕೆ. ಕನ್ನಡಿಗರು ಯಾರನ್ನು ವಿರೋಧಿಸಬೇಕೋ ಅವರನ್ನು ಬಿಟ್ಟು ಪಾಪ ಬಡಪಾಯಿ ಜನರ ಹೊಟ್ಟೆಯ ಮೇಲೆ ಹೊಡೆದು ಅವರ ಬದುಕನ್ನು ಕಿತ್ತುಕೊಳ್ಳುವುದರಿಂದ ಏನುಪಯೋಗ. ಕರ್ನಾಟಕ ಹಾಗೂ ತಮಿಳುನಾಡಿನ ಎಲ್ಲಾ ಮಧ್ಯಮ ಹಾಗೂ ಮೇಲ್ಮದ್ಯಮ ವರ್ಗದವರು ಕಂಪರ್ಟಬೆಲ್ ಆಗಿ ಬದುಕಿದ್ದರೆ ಅದಕ್ಕೆ ಕಾರಣ ಎಲ್ಲಾ ಭಾಷೆಯ ಬಡ ಕೂಲಿ ಕಾರ್ಮಿಕ ರೈತರ ಶ್ರಮದಿಂದ ಎನ್ನುವುದು ನೆನಪಿರಲಿ.
ತಮಿಳರ ಮೇಲಿನ ಪ್ರೀತಿ ಮೋಹದಿಂದ ಇದನ್ನೆಲ್ಲಾ ಹೇಳುತ್ತಿಲ್ಲ. ಹೀಗೆ ಹೇಳಿದ್ದಕ್ಕೆ ನನ್ನನ್ನು ಕನ್ನಡ ದ್ರೋಹಿ ಎಂದು ತಿಳಿಯಬೇಕಿಲ್ಲ. ದುಡಿಯುವ ವರ್ಗಗಳ ಮೇಲಿನ ಕಾಳಜಿ ಹಾಗೂ ಮಾನವೀಯತೆಯ ದೃಷ್ಟಿಯಿಂದ ಹೇಳುತ್ತಿರುವೆ. ಜಗತ್ತಿನ ಕಾರ್ಮಿಕರೇ ಒಂದಾಗಿ ಎಂದು ಮಾರ್ಕ್ಸ್ ಹೇಳಿದಂತೆ, ದೇಶ ಭಾಷೆ ಯಾವುದೇ ಆಗಿರಲಿ ಜಗತ್ತಿನ ಸಮಸ್ತ ದುಡಿಯುವ ವರ್ಗ ಒಂದೇನೇ. ಕಾಲಕಾಲಕ್ಕೆ ಆಳುವ ವ್ಯವಸ್ಥೆಗಳ ಶೋಷಣೆಗೆ ಒಳಗಾಗುತ್ತಾ, ಆಳುವ ವರ್ಗಗಳ ಪರ ಹಿತಾಸಕ್ತಿಯ ರಾಜಕೀಯ ನಿರ್ಧಾರಗಳಿಗೆ ಶತಮಾನಗಳಿಂದ ಬಲಿಪಶುವಾಗುತ್ತಾ ಇದ್ದಲ್ಲೇ ಇದ್ದ ಶ್ರಮಜೀವಿ ವರ್ಗಗಳು ದೇಶ ಭಾಷೆ ಗಡಿಗಳ ಹಂಗಿಲ್ಲದೇ ಬೆವರು ಹರಿಸಿ ಸಂಪತ್ತಿನ ಉತ್ಪತ್ತಿಗೆ ದುಡಿಯುತ್ತಲೇ ಬಂದವರು.
ಕಾವೇರಿ ನದಿ ವಿವಾದ ರಾಜಕೀಯ ಸಮಸ್ಯೆಯಾಗಿದೆ. ರಾಜಕೀಯ ಚಾಣಾಕ್ಷತನದಿಂದ ಗೆಲ್ಲುವ ಛಲ ಹಾಗೂ ಬದ್ದತೆಯನ್ನು ನಮ್ಮ ಕನ್ನಡದ ನೇತಾರರು ತೋರಿಸಬೇಕಿದೆ. ಅದಕ್ಕಾಗಿ ನಾವು ಓಟು ಕೊಟ್ಟು ಆರಿಸಿ ಕಳಿಸಿದ ರಾಜ್ಯ ಹಾಗೂ ಕೇಂದ್ರ ಸರಕಾರದಲ್ಲಿರುವ ಜನಪ್ರತಿನಿಧಿಗಳನ್ನು ಒತ್ತಾಯಿಸಬೇಕಿದೆ. ಭಾಷಾಭಿಮಾನದ ಆವೇಶಕ್ಕೆ ಒಳಗಾಗಿ ವಿವೇಚನೆಯನ್ನು ಕಳೆದುಕೊಂಡು ದುಡಿಯುವ ವರ್ಗದ ಹಿತಾಸಕ್ತಿಯನ್ನು ಬಲಿಕೊಡುವ ಮೂಲಕ ಸಮಸ್ಯೆಯನ್ನು ಮೈಮೇಲೆಳೆದುಕೊಂಡು ನಂತರ ಪಶ್ಚಾತ್ತಾಪ ಪಡುವ ಮುನ್ನ ಎಚ್ಚರಗೊಳ್ಳಬೇಕಿದೆ. ಕನ್ನಡಿಗರು ತಮಿಳರು ಸೇರಿದಂತೆ ಎಲ್ಲಾ ಭಾಷಿಕ ದುಡಿಯುವ ಜನತೆಯ ಬದುಕುವ ಹಕ್ಕನ್ನು ಎತ್ತಿಹಿಡಿಯಬೇಕಿದೆ. ನಮ್ಮ ಸಮಸ್ಯೆಗೆ ನಿಜವಾದ ಶತ್ರುಗಳು ಯಾರು ಎನ್ನುವುದನ್ನು ಗುರುತಿಸಿ ಅಂತವರ ವಿರುದ್ದ ಸಂಘಟಿತ ಹೋರಾಟ ರೂಪಿಸಬೇಕಿದೆ. ಪ್ರಜ್ಞಾವಂತ ಕನ್ನಡಿಗರು ಭಾಷಾಂಧತೆಯ ಕನ್ನಡಕ ತೆಗೆದಿಟ್ಟು ವೈಚಾರಿಕತೆಯನ್ನು ಮೈಗೂಡಿಸಿಕೊಂಡು ವಿವೇಕವನ್ನು ಬಳಸಬೇಕಿದೆ. ಎರಡೂ ಸಹೋದರ ಭಾಷಿಕರ ನಡುವೆ ದ್ವೇಷದ ಬದಲಾಗಿ ಸೌಹಾರ್ಧತೆಯನ್ನು ಬೆಳೆಸುವ ದಿಕ್ಕಿನಲ್ಲಿ ಶ್ರಮಿಸಬೇಕಿದೆ.
- ಶಶಿಕಾಂತ ಯಡಹಳ್ಳಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ