ಶನಿವಾರ, ಅಕ್ಟೋಬರ್ 15, 2016

ತಹ ತಹ..... 26 ಯುದ್ದೋನ್ಮಾದ ಪರಿಹಾರವಲ್ಲ

ತಹ ತಹ..... 26

ಆಳುವ ಪಕ್ಷದ ನಿರ್ಣಯಗಳನ್ನೆಲ್ಲಾ ವಿರೋಧ ಪಕ್ಷಗಳು ಖಂಡಿಸುವುದು ಬಂಡವಾಳಶಾಹಿ ಪ್ರಜಾಪ್ರಭುತ್ವದ ಸಂಪ್ರದಾಯವೇ ಆದಂತಿದೆ. ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ, ಭಾರತದಲ್ಲಿ ಭಯೋತ್ಪಾದಕರ ದಾಳಿಯಾದಾಗಲೆಲ್ಲಾ ಬಿಜೆಪಿಗಳು  ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡು ತಮ್ಮ ಸರಕಾರ ಇದ್ದಿದ್ದರೆ ಪಾಕಿಸ್ಥಾನಕ್ಕೆ ಮರೆಯದ ಪಾಠ ಕಲಿಸುತ್ತಿದ್ದೆವೆಂದು ಹೇಳುತ್ತಲೇ ಜನರೆದೆಯಲ್ಲಿ ದೇಶಭಕ್ತಿಯ ಕಿಚ್ಚನ್ನು ಹೆಚ್ಚಿಸುತ್ತಿದ್ದರು. ಸಂಘಪರಿವಾರದ ದೇಶಭಕ್ತರಂತೂ ಯುದ್ದೋನ್ಮಾದದಿಂದ ಪಾಕಿಸ್ಥಾನದ ಮೇಲೆ ಬಾಂಬು ಹಾಕಿ ಭಸ್ಮ ಮಾಡಬೇಕೆಂದು ಕೂಗಾಡಿ ತಮ್ಮ ದೇಶಪ್ರೇಮವನ್ನು ಸಾಬೀತುಪಡಿಸುತ್ತಿದ್ದರು. ಮೋದಿ ಪ್ರಧಾನಿಯಾದರೆ ಪಾಕಿಸ್ತಾನ ಉಸಿರೆತ್ತದಂತಾಗುತ್ತದೆ.. ಮುಸ್ಲಿಂ ಭಯೋತ್ಪಾದಕರ ಅಟ್ಟಹಾಸ ಅಡಗಿಹೋಗುತ್ತದೆಂದು ದೇಶಭಕ್ತರು ಅತೀವ ಭರವಸೆ ಇಟ್ಟುಕೊಂಡಿದ್ದರು. ಭಕ್ತಗಣಗಳ ಅಬ್ಬರದ ಪ್ರಚಾರಕ್ಕೆ ಮರುಳಾದ ಹೆಚ್ಚು ಜನ ಬಿಜೆಪಿಗೆ ಓಟೊತ್ತಿದರು.

ಈಗ ದೇಶಭಕ್ತರ ಆಶೋತ್ತರಗಳಂತೆ ಅವರದೇ ಬಿಜೆಪಿ ಪಕ್ಷ ಸರಕಾರದ ಚುಕ್ಕಾಣಿ ಹಿಡಿದಿದೆಅಚ್ಚೆ ದಿನ್ ಆಮೇಲೆ ಬರಲಿ ಮೊದಲು ಪಾಕಿಸ್ಥಾನಕ್ಕೆ ಪಾಠ ಕಲಿಸಲಿ ಎಂದು ಮೋದಿಭಕ್ತರು ಕಾದು ಕಾದು ಹೀಟಾಗಿ ತಣ್ಣಗಾದರು. ಇವರ ಹೀಮ್ಯಾನ್ ಮೋದಿಜಿ ಪ್ರಧಾನಿಯಾಗಿ ಎರಡೂವರೆ ವರ್ಷ ಖಾಲಿಯಾಯ್ತು. ಗುರುದಾಸಪುರ, ಪಠಾಣಕೋಟ್, ಕಾಶ್ಮೀರಗಳಲ್ಲಿ ಪಾಕಿಸ್ತಾನದ ಬೆಂಬಲದಿಂದ ಉಗ್ರರ ದಾಳಿಗಳು ನಡೆದಿವೆ. ಕೆಲವಾರು ಜನರ ಜೊತೆ ಮಿಲಿಟರಿ ಯೋಧರೂ ಪ್ರಾಣಕಳೆದುಕೊಂಡಿದ್ದಾರೆ. ಸೆ.18 ರಂದು ಕಾಶ್ಮೀರದ ಉರಿ ಪ್ರದೇಶದ ಸೇನಾ ನೆಲೆಗೆ ದಾಳಿಯಿಟ್ಟ ನಾಲ್ವರು ಪಾಕ್ ಉಗ್ರರು 18 ಜನ ಯೋಧರನ್ನು ಹತ್ಯೆಮಾಡಿದ್ದಾರೆ. ಪಾಕಿಸ್ತಾನದ ಮೇಲೆ ಯುದ್ದ ಘೋಷಿಸಿ ಪಾಠಕಲಿಸಬೇಕೆಂದು ಜನಸಾಮಾನ್ಯ ಜನರು ಒತ್ತಾಯಿಸುತ್ತಿದ್ದಾರೆ. 'ಪಾಕಿಸ್ತಾನದ ಮೇಲೆ ಹಿಂದೂಸ್ತಾನಿಗಳೆಲ್ಲಾ ಸೇರಿ ಮೂತ್ರ ಮಾಡಿದರೆ ಸಾಕು ದೇಶ ಮೂತ್ರಪ್ರವಾಹದಿಂದಲೇ ಕೊಚ್ಚಿಹೋಗುತ್ತದೆ' ಎಂದು ವೀರಾವೇಶದ ಮಾತಾಡುವ ನಕಲಿ ದೇಶಭಕ್ತರು ಈಗ ಮೂರೂ ಮುಚ್ಚಿಕೊಂಡು ಮೋದಿಯತ್ತ ನೋಡುತ್ತಿದ್ದಾರೆವಿರೋಧ ಪಕ್ಷದಲ್ಲಿದ್ದಾಗ ಆವೇಶದಿಂದ ಯುದ್ದೊನ್ಮಾದ ತೋರುತ್ತಿದ್ದ ಬಿಜೆಪಿಯ ಹಿರಿ ಕಿರಿಯ ನಾಯಕರು ಈಗ ಮೌನಕ್ಕೆ ಶರಣಾಗಿದ್ದಾರೆ. "2001 ರಲ್ಲಿ ಭಾರತದ ಸಂಸತ್ತಿನ ಮೇಲೆ ಪಾಕ್ ಉಗ್ರರು ದಾಳಿ ಮಾಡಿದಾಗ  ದೇಶದ ಮೇಲೆ  ಯುದ್ದ ಘೋಷಣೆ ಮಾಡಲು ಆಗಿನ ಪ್ರಧಾನಿ  ವಾಜಪೇಯಿಯವರಿಗೆ ಸಾಧ್ಯವಾಗಲಿಲ್ಲ  ಯಾಕೆಂದರೆ ಅವರು ಮೃದುವಾಗಿದ್ದರು, ಆದರೆ ನಮ್ಮ 56 ಇಂಚಿನೆದೆಯ ಮೋದಿ ಹಾಗಲ್ಲ. ಸಲ ಪಾಕಿಸ್ಥಾನಕ್ಕೆ ಪಾಠ ಕಲಿಸದೇ ಬಿಡೋದಿಲ್ಲ" ಎಂದುಕೊಂಡಿದ್ದ ಭಕ್ತರಿಗೆ ಅಪಾರ ನಿರಾಸೆ ಆಗಿದ್ದಂತೂ ಸುಳ್ಳಲ್ಲ.

ಸೆ.19 ರಂದು ಮೋದಿಯವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಇನ್ನೇನು ಯುದ್ದ ಘೋಷಣೆ ಆಗಬಹುದು... 24 ಗಂಟೆಯೊಳಗೆ ಪಾಕಿಸ್ಥಾನ ದೂಳಿಪಟವಾಗುವುದರಲ್ಲಿ ಸಂದೇಹವೇ ಇಲ್ಲವೆಂದು ಆಸೆಯಿಂದ ಕಾಯ್ದ ಯುದ್ದೋನ್ಮತ್ತ ಭಕ್ತರಿಗೆ ಭಾರೀ ನಿರಾಸೆಯಾಗಿದ್ದಂತೂ ಸತ್ಯ. ನೇರ ದಾಳಿಯ ಬದಲು ಜಗತ್ತಿನ ಮುಂದೆ ಪಾಕಿಸ್ತಾನದ ಮುಖವಾಡ ಬಯಲು ಮಾಡುವ ನಿರ್ಣಯ ಪ್ರಧಾನಿ ಸಭೆಯಿಂದ ಬಂದಿದ್ದೇ ತಡ ಮೋದಿ ಬ್ರಿಗೇಡ್ ಬಾಯಿಂದ ಬುಡದವರೆಗೂ ಉರಿಯುತ್ತಿದ್ದ ಬೆಂಕಿ  ತಣ್ಣಗಾಗಿ ಹೋಯಿತು

ಪಾಕಿಸ್ತಾನದ ವಿದ್ರೋಹಕ್ಕೆ ಬದಲಾಗಿ ಹಿಂದಿನ ಯುಪಿಎ ಸರಕಾರ ಕೂಡಾ ಇದೇ ರೀತಿಯ ನಿರ್ಣಯ ತೆಗೆದುಕೊಂಡಾಗ ಭಕ್ತಗಣ 'ತಾಕತ್ತಿಲ್ಲದ ಹೇಡಿ ಸರಕಾರ, ನಾಮರ್ದ್ ಸರಕಾರ, ಅಸಮರ್ಥ ಪ್ರಧಾನಿ... ಎಂದೆಲ್ಲಾ ದೇಶಾದ್ಯಂತ ಬಾಯಿಬಡಿದುಕೊಂಡು ಜನರನ್ನು ನಂಬಿಸಲು ಪ್ರಯತ್ನಿಸಿತ್ತು. ಆದರೆ ಈಗ ಅವರದೇ ಸರಕಾರ, ಅವರದೇ ಸೂಪರಮ್ಯಾನ್ ಪ್ರಧಾನಿ ಇದ್ದಾರೆ. ಹಾಗಿದ್ದರೂ ಯಾಕೆ ಯುದ್ದ ಘೋಷಿಸಿ ಪಾಕಿಸ್ಥಾನದ ಪಕ್ಕೆಲುಬು ಮುರಿಯಲಾಗಲಿಲ್ಲ

ಯಾಕೆಂದರೆ ಯುದ್ಧವೆಂಬುದು ಯುದ್ದೋನ್ಮಾದ ಹುಟ್ಟಿಸಿದಷ್ಟು  ಸುಲಭದ್ದಲ್ಲ. ಎರಡು ಅಣುಶಸ್ತ್ರ ಸಜ್ಜಿತ ದೇಶಗಳು ಯುದ್ದಕ್ಕೆ ನಿಂತರೆ ಎರಡೂ ದೇಶಗಳೂ ಸರ್ವನಾಶವಾಗುತ್ತವೆ ಎಂಬುದು ಪ್ರಧಾನಿ ಸ್ಥಾನದಲ್ಲಿ ಇರುವವರಿಗೆ ಅರ್ಥವಾಗುತ್ತದೆ ಇಲ್ಲವೇ ಅರ್ಥಮಾಡಿಸಲಾಗುತ್ತದೆ. ದೇಶಭಕ್ತಿಯನ್ನು ಜನರಲ್ಲಿ ಹೆಚ್ಚಿಸಲು ಯುದ್ದದ ಉನ್ಮಾದವನ್ನು ಹುಟ್ಟಿಸುವುದು ಸುಲಭ... ಆದರೆ ಯುದ್ದವನ್ನು ಘೋಷಿಸಿ ಗೆಲ್ಲುತ್ತೇನೆನ್ನುವುದು ಅಸಾಧ್ಯ. ಯುದ್ದ ಗೆದ್ದರೂ ದೇಶಾದ್ಯಂತ ಸಾವು ನೋವುಗಳ ಜೊತೆಗೆ ಆರ್ಥಿಕ ಹೊರೆ ಅತಿಯಾಗಿ ದೇಶಕ್ಕೆ ದೇಶವೇ ದಿವಾಳಿಯಾಗುತ್ತವೆ. ಪರಸ್ಪರ ಅಣುಬಾಂಬ್ ದಾಳಿ ಪ್ರಯತ್ನಗಳೇನಾದರೂ ನಡೆದರೆ ಸರ್ವನಾಶ ಶತಸಿದ್ದ. ಇದು ವಾಸ್ತವ.   ಜನರಲ್ಲಿ ಭಾವತೀವ್ರತೆಯನ್ನು ಬಡಿದೆಬ್ಬಿಸುವ ಬದಲು ವಾಸ್ತವದ ನೆಲೆಗಟ್ಟಿನಲ್ಲಿ ಆಲೋಚಿಸುವುದೇ ಈಗಿರುವ ತಾತ್ಕಾಲಿಕ ಪರಿಹಾರ.

ಸಂಪುಟ ಸಭೆಯ ನಿರ್ಧಾರ ಸರಿಯಾಗಿಯೇ ಇದೆ. ಯುದ್ದ ಯಾವುದಕ್ಕೂ ಪರಿಹಾರವಲ್ಲ. ಮತಾಂಧರನ್ನು ಮಟ್ಟ ಹಾಕಲು ಅವರ ದುಷ್ಕೃತ್ಯಗಳ ಕುರಿತು ಜಾಗತಿಕ ಜಗೃತಿಯನ್ನುಂಟು ಮಾಡಬೇಕಿದೆ. ಜಾಗತಿಕ ಒತ್ತಡಕ್ಕೆ ಮಣಿದು ಪಾಕ್ ಸರಕಾರವೇ ಭಯೋತ್ಪಾದಕರ ವಿರುದ್ದ ಯುದ್ದ ಸಾರಿ ನಾಶಗೊಳಿಸುವಂತೆ ಅಂತರಾಷ್ಟ್ರೀಯ ತಂತ್ರಗಾರಿಕೆ ಹೂಡಬೇಕಿದೆ. ಭಾರತ ಹಾಗೂ ಪಾಕ್ ನಡುವಿನ ಸಾಂಪ್ರದಾಯಿಕ ಹಗೆತನ ಅದೆಷ್ಟೇ ಇದ್ದರೂ ಎರಡೂ ದೇಶಗಳೂ ಮತಾಂಧ ಭಯೋತ್ಪಾದಕರಿಂದ ದಾಳಿಗೊಳಗಾಗಿ ಅನೇಕ ಜೀವ ನಾಶಕ್ಕೊಳಗಾಗಿವೆ. ಹಾಗೂ ಇಸ್ಲಾಂ ಉಗ್ರರು ಜಗತ್ತಿಗೇ ಕಂಟಕವಾಗಿದ್ದಾರೆ. ಇವರ ಉಪಟಳದಿಂದ ಯಾವ ದೇಶವೂ  ನೆಮ್ಮದಿಯಾಗಿಲ್ಲ. ಹೀಗಾಗಿ ಉಗ್ರರ ವಿರುದ್ದ ಎಲ್ಲ ದೇಶಗಳೂ ಒಂದಾಗಿ ಸಮರ ಹೂಡಿ ಮತಾಂಧರ ಹಿಂಸೋನ್ಮಾದವನ್ನು ಬೇರು ಸಮೇತ ಕಿತ್ತೊಗೆಯಬೇಕಿದೆ. ಇದು ಒಂದೋ ಎರಡೋ ದೇಶಗಳಿಂದ ಆಗುವ ಕೆಲಸವಲ್ಲ. ಹೀಗಾಗಿ ಉಗ್ರರಿಂದ ಬಾದೆಗೊಳಗಾದ ಎಲ್ಲಾ ದೇಶಗಳೂ ಉಗ್ರನಿಗ್ರಹಕೆ ಜೊತೆಯಾಗಿ ಕದನವನ್ನು ತೀವ್ರವಾಗಿ ಜಾರಿಗೊಳಿಸಬೇಕಿದೆಆಗ ಅನಿವಾರ್ಯವಾಗಿ ಪಾಕಿಸ್ಥಾನವೂ ಸಹ ಜಾಗತಿಕ ನಿರ್ಣಯಕ್ಕೆ ಬದ್ದವಾಗಿ ತನ್ನ ದೇಶದ ಭಯೋತ್ಪಾದಕರನ್ನು ಸೆದೆಬಡಿಯಬೇಕಾಗುತ್ತದೆ. ಹಾಗೆ ಮಾಡದೇ ಆತಂಕವಾದಿಗಳನ್ನು ಪೋಷಿಸಿದರೆ ಜಾಗತಿಕವಾಗಿ ಒಂಟಿಯಾಗುತ್ತದೆ. ಆಗ ಭಾರತ ಯುದ್ದ ಘೋಷಿಸಿದರೆ ಜಾಗತಿಕ ದೇಶಗಳ ಬೆಂಬಲ ಪಡೆದು ಪಾಕಿಸ್ತಾನದ ಸೈನ್ಯವನ್ನು ಸೆದೆಬಡೆದು ದೇಶದೊಳಗಿನ ಉಗ್ರರ ಹುಟ್ಟಡಗಿಸಬಹುದಾಗಿದೆ

ಎಲ್ಲಾ ಹಿನ್ನೆಲೆಗಳ ಅರಿವಿಲ್ಲದೇ ಪ್ರತಿ ಸಲ ಪಾಕ್ ಉಗ್ರರು ಭಾರತದಲ್ಲಿ ನುಗ್ಗಿ  ಅಟ್ಟಹಾಸ ಮೆರೆದಾಗಲೆಲ್ಲಾ ಜನರ ಆಕ್ರೋಶವನ್ನು ಯುದ್ದೋನ್ಮಾದವನ್ನಾಗಿಸುವ ಕಲೆ ದೇಶಭಕ್ತರಿಗೆ ಸಿದ್ದಿಸಿದೆ. ಯುದ್ದವಾಗುತ್ತೋ ಇಲ್ಲವೋ ಎನ್ನುವುದಕ್ಕಿಂತ ದೇಶವಾಸಿಗಳಲ್ಲಿ ದೇಶಪ್ರೇಮದ ಉನ್ಮಾದವನ್ನು ಬಡಿದೆಬ್ಬಿಸಿ ಅದನ್ನು ಅಲ್ಪಸಂಖ್ಯಾತ ಮುಸ್ಲಿಂ ಜನರ ವಿರುದ್ದ ತಿರುಗಿಸಿ ಕೋಮುದ್ವೇಷವನ್ನು ಪ್ರಚೋದಿಸುವ ಸಂಘಪರಿವಾರಿಗಳು ತಮ್ಮ ಹಿಂದುತ್ವದ ಹೆಸರಿನ ಪ್ಯಾಸಿಸ್ಟ್ ಪ್ರಭುತ್ವ ಸ್ಥಾಪನೆಯ ಗುರಿಸಾಧನೆಗೆ ಪ್ರಯತ್ನಿಸುತ್ತಾರೆ. ಮನುಸ್ಮೃತಿಯನ್ನೇ ಸಂವಿಧಾನವೆಂದುಕೊಂಡ ಪ್ಯಾಸಿಸ್ಟ್ ವ್ಯವಸ್ಥೆ ಬಂದು ಮತ್ತೆ ವರ್ಣಾಬೇಧ ನೀತಿ ಅಧಿಕೃತವಾಗಿ ಜಾರಿಯಾದರೆ ಎಂತಾ ದುರಂತ ಆಗುತ್ತದೆ ಎನ್ನುವ ಕಲ್ಪನೆಯೂ ಇಲ್ಲದವರೂ ದೇಶಪ್ರೇಮದ ಮೋಹಕತೆಗೆ ಬಿದ್ದು ಕೋಮುವಾದಿಗಳ ಹುನ್ನಾರದ ಭಾಗವಾಗಿ ಬಳಕೆಯಾಗುತ್ತಿದ್ದಾರೆ. ದೇಶಪ್ರೇಮ ಇರಬಾರದು ಎಂದರ್ಥವಲ್ಲ. ದೇಶವಾಸಿಗಳಿಗೆಲ್ಲಾ ದೇಶಭಕ್ತಿ ಬೇಕು. ಆದರೆ ಅದು ಯಾವುದೇ ಧರ್ಮದ ಅನುಯಾಯಿಗಳ ವಿರೋಧವಾಗಿರಬಾರದು. ಧರ್ಮಾಂಧತೆಗೆ ದಾರಿಯಾಗಬಾರದು. ಮುಸ್ಲಿಂ ಧರ್ಮದ ಕೆಲವು ಮತಾಂಧರು ಭಯೋತ್ಪಾದಕರಾಗಿದ್ದಕ್ಕೆ ಭಯೋತ್ಪಾದನೆಗೆ ಸಂಬಂಧವೇ ಇಲ್ಲದ ಧರ್ಮೀಯರನ್ನೆಲ್ಲಾ ಆತಂಕವಾದಿಗಳು ಎಂದು ಭಾವಿಸಿ ದ್ವೇಷಿಸುವುದು ಅಮಾನವೀಯತೆಜಾತಿ ಧರ್ಮ ದೇಶ ಭಾಷೆ ಯಾವುದೇ ಆಗಿರಲಿ ಉಗ್ರವಾದಿಗಳನ್ನು ಹಾಗೂ ಅವರ ದುಷ್ಕೃತ್ಯವನ್ನು ವಿರೋಧಿಸೋಣ. ಜನಸಾಮಾನ್ಯರು ಯಾವುದೇ ಕೋಮಿನವರಾಗಿರಲಿ ಕೋಮುಸೌಹಾರ್ಧತೆಯನ್ನು ಮುಂದುವರೆಸೋಣ. ಅವರವರ ಜಾತಿ ಧರ್ಮಗಳನ್ನು ಅವರವರು ಮತ್ತೊಬ್ಬರಿಗೆ ಹಿಂಸೆಯಾಗದಂತೆ ಅಚರಿಸಲಿ. ಎಲ್ಲರೂ ಪರಸ್ಪರ ಸಹಬಾಳ್ವೆಯಿಂದ ಒಂದಾಗಿ ಮಾನವೀಯತೆಯನ್ನು ಗೆಲ್ಲಿಸಲೇಬೇಕಿದೆ. ಮನುಕುಲದ್ರೋಹಿ ಪ್ಯಾಸಿಸ್ಟ್ ದುಷ್ಟ ಶಕ್ತಿಗಳನು ಸೋಲಿಸಬೇಕಿದೆ.

- ಶಶಿಕಾಂತ ಯಡಹಳ್ಳಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ